ಕಣಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣಾದ
ಜನನest. 2nd century BCE or est. 6th Century BCE
Prabhas Kshetra (near Dwaraka) in Gujarat, India
ತತ್ವಶಾಸ್ತ್ರವೈಷೇಶಿಕ
ಹಿಂದೂ ಋಷಿ ಮತ್ತುತತ್ವ ಜ್ಞಾನಿ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ


ಕಣಾದ : ಷಡ್ದರ್ಶನಗಳಲ್ಲಿ ಒಂದಾದ ವೈಶೇಷಿಕ ದರ್ಶನವನ್ನು ಸಿದ್ಧಾಂತ ರೂಪದಲ್ಲಿ ರಚಿಸಿದ ಮಹರ್ಷಿ. ಕ್ರಿ.ಪೂ ಮೂರನೆ ಶತಮಾನದಲ್ಲಿದ್ದ ಇವನು ಕನ್ನಡಿಗನು . ಇವನು ಕಶ್ಯಪ ಗೋತ್ರದ ಉಲೂಕ ಮಹರ್ಷಿಯ ಮಗ. ಆದ್ದರಿಂದ ಇವನ ಗ್ರಂಥಕ್ಕೆ ಔಲೂಕ್ಯ ದರ್ಶನವೆಂದೂ ಹೆಸರು. ಇವನು ಅಣು, ಪರಮಾಣುಗಳ ರಚನೆಯ ಬಗ್ಗೆ ಅಭ್ಯಸಿಸಿ ಗ್ರಂಥಗಳನ್ನು ಲೇಖಿಸಿದನು ಈಗಿನ ಅಣು-ಸಿದ್ದಾಂತಗಳನ್ನು ಆಗಲೆ ಬೋಧಿಸಿ ವಿಷೇಷಿಕ ಸೂತ್ರ ಎಂಬ ಗ್ರಂಥವನ್ನು ಬರೆದನು. ತನ್ನ ಗ್ರಂಥದಲ್ಲಿ ಪರಮಾಣುವಿನ ಗಾತ್ರವು ಒಂದನೇ ಬಿಲಿಯನ್ ಮೀಟರ್ ಎಂದು ಉಲ್ಲೇಖಿಸಿದ್ದಾನೆ.


ಕಣ ಎಂದರೆ ಅಣು. ಅದ ಎಂದರೆ ಭಕ್ಷಿಸಿದವನು. ಆದ್ದರಿಂದ ಕಣಾದನೆಂದರೆ ಅಣುಭಕ್ಷಕ ಎಂದು ವಿಮರ್ಶಕರು ಅರ್ಥ ಕಲ್ಪಿಸುವುದುಂಟು. ಈತನಿಗೆ ಕಣಭುಕ್, ಕಣಭಕ್ಷ, ಅಕ್ಷಪಾದ, ಉಲೂಕ ಎಂದೂ ಹೆಸರುಗಳಿವೆ. ಇವೆಲ್ಲವೂ ಅನ್ವರ್ಥನಾಮಗಳು; ಈತನ ಸಾಧನೆ ಸಿದ್ಧಿಗಳ ದ್ಯೋತಕ. ಮೊದಲ ಬಾರಿಗೆ ನಿತ್ಯದ್ರವ್ಯಗಳ ವಿಶ್ಲೇಷಣೆ ಮತ್ತು ಸಂಶ್ಲೇಷಣೆಗಳನ್ನು ವಿವರಿಸಿ ಮಹದ್ರೂಪದಿಂದ ಅಣುರೂಪಕ್ಕೆ, ಮತ್ತೆ ಅಣುರೂಪದಿಂದ ಮಹದ್ರೂಪಕ್ಕೆ ದ್ರವ್ಯಗಳ ಸ್ಥಿತ್ಯಂತರವನ್ನು ಸಾಧಿಸಿ ತೋರಿದವನಿವನಾದ್ದರಿಂದ ಈತ ಅಣುಭಕ್ಷಕ.

ದಿನವೆಲ್ಲ ಧ್ಯಾನಮಗ್ನನಾಗಿ ರಾತ್ರಿ ಜಾಗ್ರತನಾಗಿರುತ್ತಿದ್ದುದರಿಂದ ಉಲೂಕ. ಕಾಪೋತವೃತ್ತಿಯನ್ನು ಆಚರಿಸುತ್ತ ಬೀದಿಯಲ್ಲಿ ಬಿದ್ದಿದ್ದ ಅಕ್ಕಿಯ ಕಾಳುಗಳನ್ನು ಆಯ್ದು ತಿನ್ನುತ್ತಿದ್ದುದರಿಂದ ಇವನಿಗೆ ಕಣಭುಕ್, ಕಣಭಕ್ಷ ಎಂಬ ಹೆಸರು ಬಂದಿರಬಹುದೆಂದು ಇನ್ನೊಂದು ಮತ. ಈತನ ನಿಜವಾದ ಹೆಸರು ಕಾಶ್ಯಪನೆಂದು ಕಂಡುಬರುತ್ತದೆ.

ಈತನ ಜೀವನ, ಕಾಲ, ದೇಶಗಳ ವಿಷಯವಾಗಿ ನಿಖರವಾಗಿ ಏನೂ ತಿಳಿದು ಬಂದಿಲ್ಲ. ಆದರೆ ವೈಶೇಷಿಕ ದರ್ಶನ ಸಂಸ್ಕೃತ ಸಾಹಿತ್ಯದ ಒಂದು ಪ್ರಸಿದ್ಧ ಪ್ರಕಾರವಾದ ಸೂತ್ರ ರೂಪದಲ್ಲಿರುವುದರಿಂದ ಈತ ಪ್ರ.ಶ.ಪು. 3-4ನೆಯ ಶತಮಾನದವನೆಂದು ಊಹಿಸಬಹುದು. ಕಣಾದನ ತತ್ತ್ವಶಾಸ್ತ್ರಕ್ಕೆ ಅಧ್ಯಾತ್ಮಶಾಸ್ತ್ರವೆಂದೂ ಹೆಸರಿದೆ.

ಸಪ್ತ ಪದಾರ್ಥಗಳ ಮತ್ತು ಅವುಗಳ ಒಳಭೇದಗಳ ಪರಸ್ಪರ ಸಾಮರ್ಥ್ಯ ವೈಧಮರ್ಯ್‌ಗಳ (ವಿಶೇಷ) ಸೂಕ್ಷ್ಮತೆಯನ್ನರಿಯುವುದೇ ತತ್ತ್ವಜ್ಞಾನದ ಉಪಲಬ್ಧಿಗೆ ಕಾರಣವಾಗುತ್ತದೆ ಎಂಬುದು ಕಣಾದನ ಮತ. ನಿತ್ಯವಸ್ತುಗಳ ಸಮ್ಯಕ್ಜ್ಞಾನದಿಂದ ಒಂದನ್ನು ಮತ್ತೊಂದನ್ನಾಗಿ ತಪ್ಪಾಗಿ ಕಲ್ಪಿಸಿಕೊಳ್ಳುವ ಭ್ರಮೆ ಹರಿದಾಗ ಪಮೆ (ಸಮ್ಯಕ್ಜ್ಞಾನ) ಸಿದ್ಧಿಸುತ್ತದೆ; ಅಖ್ಯಾತಿ, ಅನ್ಯಥಾ ಖ್ಯಾತಿ ಹರಿದು ಆ ಸ್ಥಾನದಲ್ಲಿ ಸಮ್ಯಕ್ ಖ್ಯಾತಿ ದೊರೆಕೊಳ್ಳುತ್ತದೆ. ತತ್ಫಲವಾಗಿ ಭ್ರಾಂತಿ ತೊಲಗಿ ತತ್ತ್ವಜ್ಞಾನ ಲಭಿಸಿ ತನ್ಮೂಲಕ ಮೋಕ್ಷ ಪ್ರಾಪ್ತಿಯಾಗುತ್ತದೆ-ಎಂಬುದೇ ಕಣಾದ ಮಹರ್ಷಿಯ ದರ್ಶನ.

ವೈಶೇಷಿಕ ಸೂತ್ರಗ್ರಂಥ ಈ ಮೊದಲು ಹೇಳಿದಂತೆ ಸೂತ್ರಾತ್ಮಕ ಗದ್ಯದಲ್ಲಿದೆ. ಹತ್ತು ಅಧ್ಯಾಯಗಳಿದ್ದು ಪ್ರತಿ ಅಧ್ಯಾಯದಲ್ಲೂ ಆಹ್ನಿಕಗಳೆಂಬ ಎರಡು ಭಾಗಗಳಿವೆ. ಅಥಾತೋ ಧರ್ಮಂ ವ್ಯಾಖ್ಯಾಸ್ಯಾಮಃ ಎಂಬುದು ಮೊದಲ ಸೂತ್ರ. ಈ ಗ್ರಂಥದ ಮೇಲೆ ಸು. 4ನೆಯ ಶತಮಾನದಲ್ಲಿ ಪ್ರಶಸ್ತ ಪಾದನೆಂಬಾತ ಭಾಷ್ಯ ಬರೆದಿದ್ದಾನೆ. ಇದರ ಆಧಾರದ ಮೇಲೆ ಚಂದ್ರನೆಂಬಾತ ಚೀನಿ ಭಾಷೆಯಲ್ಲಿ ದಶಪದಾರ್ಥಶಾಸ್ತ್ರ ವೆಂಬುದನ್ನು ರಚಿಸಿದ್ದಾನೆ (ಏಳನೆಯ ಶತಮಾನ). ಶ್ರೀಧರನ ನ್ಯಾಯಕಂದಲಿ ಉದಯನಾಚಾರ್ಯನ ಕಿರಣಾವಲಿ (ಎರಡೂ ಹತ್ತನೆಯ ಶತಮಾನದವು) ಇತರ ಭಾಷ್ಯಗಳಲ್ಲಿ ಪ್ರಸಿದ್ಧವಾದುದು. 10ನೆಯ ಶತಮಾನದಿಂದೀಚೆಗೆ ನ್ಯಾಯ ಮತ್ತು ವೈಶೇಷಿಕ ದರ್ಶನಗಳನ್ನು ಒಂದಾಗಿ ಅಭ್ಯಸಿಸಿದ್ದರ ಫಲವಾಗಿ ಅನೇಕ ಗ್ರಂಥಗಳು ಹುಟ್ಟಿಕೊಂಡುವು.

(ನೋಡಿ - ಭಾರತೀಯ ತತ್ತ್ವಶಾಸ್ತ್ರ; ವೈಶೇಷಿಕ ದರ್ಶನ)

ಕಣಾದ ಮಹರ್ಷಿಯ ಹೆಸರಲ್ಲಿ "ಭಾರತೀಯ ವ್ಯೆಮಾಂತರಿಕ್ಷ ಪ್ರಯೋಗಶಾಲೆ", ಬೆಂಗಳೂರು, ಕನ್ನಡ ಸಂಘವು ವಾರ್ಷಿಕವಾಗಿ ಒಂದು ಕಿರು ಪುಸ್ತಕವನ್ನು ಹೊರತರುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಣಾದ&oldid=1003641" ಇಂದ ಪಡೆಯಲ್ಪಟ್ಟಿದೆ