ಜೈಮಿನಿ ಮಹರ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜೈಮಿನಿಯು ಭಾರತೀಯ ಋಷಿಗಳಲ್ಲಿ ಪ್ರಸಿದ್ಧನಾದವ. ಈತ ವ್ಯಾಸ ಮಹರ್ಷಿಯ ನೇತೃತ್ವದಲ್ಲಿ ನಡೆಯಲಾದ್ದು ಎನ್ನಲಾದ ವೇದಗಳ ಸಂಪಾದನೆಯಲ್ಲಿ ಸಾಮವೇದವನ್ನು ಸಂಪಾದಿಸಿದನೆಂದು ಹೇಳಲಾಗಿದೆ.

ಮಹಾಭಾರತದ ಪ್ರಕಾರ ಈತ ಕುತ್ಸ ಮಹರ್ಷಿಯ ವಂಶದವನೆಂದೂ ಋಗ್ವೇದಾಧ್ಯಾಯಿ ಪೈಲಮುನಿ. ಯಜರ್ವೇದಾಧ್ಯಾಯಿ ವೈಶಂಪಾಯನ, ಅಥರ್ವವೇದಪಾರಂಗತ ಸುಮಂತು ಇವರುಗಳ ಸಹಪಾಠಿಯೆಂದೂ ಪಾಂಡವರ ಮರಿಮಗ ಜನಮೇಜಯ ಮಾಡಿದ ಸರ್ಪಯಾಗದಲ್ಲಿ ಸಾಮಮಂತ್ರ ಪಠಿಸುವ ಉದ್ಗಾತೃವಾಗಿದ್ದನೆಂದೂ ಸರ್ಪಯಾಗದಿಂದ ಪ್ರಾಪ್ತವಾದ ಕುಷ್ಠರೋಗವನ್ನು ಜನಮೇಜಯ ಭಾರತ ಶ್ರವಣದಿಂದ ಪರಿಹರಿಸಿಕೊಂಡನಾದರೂ ಉಳಿದ ಅತ್ಯಲ್ಪ ಕುಷ್ಠವನ್ನು ಜೈಮಿನಿಯಿಂದ ರಚಿತವಾದ ಅಶ್ವಮೇಧಿಕ ಪರ್ವಶ್ರವಣದಿಂದ ಪರಿಹರಿಸಿಕೊಂಡನೆಂದೂ ಹೇಳಲಾಗಿದೆ.

ಭಾಗವತದಲ್ಲಿ "ವ್ಯಾಸರು ವೇದಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಸಾಮವೇದವನ್ನು ಜೈಮಿನಿ ಮಹರ್ಷಿಗಳಿಗೆ ಉಪದೇಶಿಸಿದರು" ಎನ್ನಲಾಗಿದೆ.

ಕಾಲ[ಬದಲಾಯಿಸಿ]

ಜೈಮಿನಿ ಮಹರ್ಷಿಗಳ ಕಾಲವನ್ನು ಕುರಿತು ನಿರ್ದಿಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಜೈಮಿನಿ ಮಹರ್ಷಿಗಳು ಬಾದರಾಯಣರ ಅಭಿಪ್ರಾಯವನ್ನು ತಮ್ಮ ಸೂತ್ರಗಳಲ್ಲಿ ಉಲ್ಲೇಖಿಸುತ್ತಾರೆ. ಬಾದರಾಯಣರೂ ಕೂಡ ಜೈಮಿನಿ ಮಹರ್ಷಿಗಳ ಸೂತ್ರಗಳನ್ನು ಉದ್ಧರಿಸುತ್ತಾರೆ. ಆದ್ದರಿಂದ ಅವರಿಬ್ಬರೂ ಸಮಕಾಲೀನರು ಎಂಬುದು ಅನೇಕರ ಮತ. ಸುಮಾರು ಕ್ರಿ. ಶ. ೮೦೦ ಜೈಮಿನಿ ಮಹರ್ಷಿಗಳ ಕಾಲವಾಗಿರಬಹುದೆಂದು ಊಹೆ ಮಾಡುತ್ತಾರೆ. ಜೈಮಿನಿ ಮಹರ್ಷಿಗಳ ಜೀವನದ ಬಗ್ಗೆ ಹೆಚ್ಚಿನ ವಿಷಯಗಳು ತಿಳಿದು ಬರುತ್ತಿಲ್ಲ.

ವಿದ್ವಾಂಸರ ಅಭಿಪ್ರಾಯದಂತೆ ಈತನ ಕಾಲ ಸುಮಾರು ಕ್ರಿ. ಶ. ಎರಡನೆಯ ಶತಮಾನ.

ಮೀಮಾಂಸಾ ಸೂತ್ರಗಳು[ಬದಲಾಯಿಸಿ]

ಬುದ್ಧನ ತರುವಾಯ ಭಾರತೀಯ ತತ್ತ್ವ ಚಿಂತನೆಯಲ್ಲಿ ಆಂದೋಲನ ನಡೆದಾಗ ವೈದಿಕಧರ್ಮವನ್ನು ಸುಸ್ಥಿರಗೊಳಿಸುವ ಪ್ರಯತ್ನ ನಡೆಯಿತು. ಇದರ ಅಂಗಗಳೆಂಬಂತೆ ವೈದಿಕ ದರ್ಶನಗಳೆಲ್ಲ ಸೂತ್ರರೂಪದಲ್ಲಿ ಸಿದ್ಧವಾದವು. ಆಗ ಜೈಮಿನಿಯು ಮೀಮಾಂಸಾ ಸೂತ್ರಗಳನ್ನು ರಚಿಸಿದ. ಈ ಸೂತ್ರಗಳ ಕಾಲ ಖಚಿತವಾಗಿಲ್ಲ. ಆದರೆ. ಸೂತ್ರ-ಸಾಹಿತ್ಯದಲ್ಲೆಲ್ಲ ಮೀಮಾಂಸಗಳ ಸೂತ್ರಗಳೇ ಬಹು ಪ್ರಾಚೀನವಾದವು. ಸೂತ್ರ ಸಾಹಿತ್ಯದಲ್ಲೆಲ್ಲ ಜೈಮಿನಿಯಿಂದ ರಚಿತವಾದ ಮೀಮಾಂಸ ಸೂತ್ರಗಳೇ ಹೆಚ್ಚು ಸಂಖ್ಯೆಯಿಂದ (2500) ಕೂಡಿದವು. ಇವುಗಳ ಮೂಲಕ ಜೈಮಿನಿ ಸುಮಾರು ಸಾವಿರ ವಿಷಯಗಳನ್ನು ಮಂಡಿಸಿದ್ದಾನೆ. ಇವು ವೇದದ ಕರ್ಮವಿಭಾಗವನ್ನು ಹೆಚ್ಚು ಆಧರಿಸಿಕೊಂಡು ವೇದಧರ್ಮವನ್ನು ಪುಷ್ಟಿಗೊಳಿಸುತ್ತವೆ. ಮೀಮಾಂಸಾ ದರ್ಶನದ ಮೂಲಾಧಾರವೇ ಮೀಮಾಂಸಾ ಸೂತ್ರಗಳು. ಇವುಗಳನ್ನು ಜೈಮಿನಿ ಮಹರ್ಷಿಗಳು ರಚಿಸಿದರು. ಮೀಮಾಂಸಾ ಶಾಸ್ತ್ರವು ವೇದಾರ್ಥಗಳನ್ನು ಗುರಿಯಾಗಿಸಿಕೊಂಡು ತೊಡಗಿದ ಶಾಸ್ತ್ರವಾಗಿದೆ.ಇದನ್ನು ಪೂರ್ವಮೀಮಾಂಸಾ ಶಾಸ್ತ್ರವೆಂದೂ ಕರೆಯುತ್ತಾರೆ. ಜೈಮಿನಿ ಮಹರ್ಷಿಗಳಿಗಿಂತಲೂ ಮೊದಲೇ ಅನೇಕ ಸೂತ್ರಕಾರರು ಆಗಿದ್ದರು ಎಂಬುದಾಗಿ ಜೈಮಿನಿ ಮಹರ್ಷಿಗಳ ಗ್ರಂಥದಿಂದಲೇ ತಿಳಿಯುತ್ತದೆ. ಹನ್ನೆರಡು ಅಧ್ಯಾಯಗಳಾಗಿ ವೀಮಾಂಸಾ ಸೂತ್ರಗಳನ್ನು ವಿಭಾಗಿಸಲಾಗಿದೆ. ಇವುಗಳಲ್ಲಿ ವೇದಗಳ ಅರ್ಥವನ್ನು ಸ್ಪಷ್ಟವಾಗಿ ತಿಳಿಯಲು ಅವಶ್ಯಕವಾದ ಎಲ್ಲ ವಿಚಾರಗಳನ್ನು ವಿವರಿಸಲಾಗಿದೆ. ಈ ಮೀಮಾಂಸಾ ಸೂತ್ರಗಳಿಗೆ ಅನೇಕ ಭಾಷ್ಯಗಳು, ವಾರ್ತಿಕಗಳು, ವ್ಯಾಖ್ಯಾನಗಳು ರಚಿತವಾಗಿವೆ. ಮೀಮಾಂಸಾ ಭಾಷ್ಯಗಳಲ್ಲಿ ಶಬರಸ್ವಾಮಿಗಳ ಭಾಷ್ಯವು ತುಂಬಾ ಪ್ರಸಿದ್ಧವಾಗಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: