ಕಡವಲ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡವಲ ಮರ

ಈ ಸಸ್ಯವು ಆಂಥೊಸಿಫಾಲಸ್ ಇಂಡಿಕಸ್ (Anthocephalus indicus) ಎಂದು ಕರೆಯಲ್ಪಡುವ ಕಡವಲ ಮರವು ಒಂದು ಔಷದೀಯ ಸಸ್ಯಮೂಲಿಕೆ. ಕಡವಲ ಮರದ ಉಗಮ ಇಂದು ನೆನ್ನೆಯದಲ್ಲ.ಇದು ದ್ವಾಪರ ಯುಗದಿಂದ ಇತ್ತು ಎಂದು ಭಾಗವತದ ಕಥನಗಳಿಂದ ತಿಳಿದುಬರುತ್ತದೆ. ಒಮ್ಮೆ ಶ್ರೀ ಕೃಷ್ಣ ಕದಂಬವನದಲ್ಲಿ ಗೋಪಿಕಾಸ್ತ್ರೀಯರೊಡನೆ ವಿಹರಿಸುತ್ತಿದ್ದನಂತೆ, ಮಥುರಾ ಮತ್ತು ಭರತಪುರದ ಮಧ್ಯೆ ಅಂತಹ ಕದಂಬವನದ ಅವಶೇಷಗಳನ್ನು ಈಗಲೂ ಕಾಣಬಹುದಂತೆ. ಶಿವನಿಗೆ ಈ ಮರದ ಹೂ ಶ್ರೇಷ್ಠವೆಂಬುದು ನಂಬಿಕೆಯಿದೆ.

ಸಸ್ಯ ಕುಟುಂಬ[ಬದಲಾಯಿಸಿ]

ರುಬಿಯೇಸಿ(rubiaceae) ರುಬಿಯೇಸಿ ಎಂದರೆ ಹೂ ಬಿಡುವ ಗಿಡ

ಕನ್ನಡದಲ್ಲಿ ಇತರ ಹೆಸರುಗಳು[ಬದಲಾಯಿಸಿ]

  1. ಅರಿಸಿನತೇಗ
  2. ಕಡವ
  3. ಕಡವಾಳ
  4. ಕಡಹದಮರ
  5. ಕಾಡಬಲಿಗೆ
  6. ಕಡ್ವಾಲ
  7. ಕೊಡೆಯಾಲ
  8. ದಾರುಕದಂಬ
  9. ಹೆಲ್ತಿಗೆ
  10. ಹರಿಸಿನತೇಗ

ಇತರ ಭಾಷೆಯ ಹೆಸರುಗಳು[ಬದಲಾಯಿಸಿ]

  1. ಸಂಸ್ಕೃತ: ಕದಂಬ,ನಿಪ
  2. ಹಿಂದಿ: ಕದಂ,ಕದಂಬ
  3. ತಮಿಳು: ವೆಲ್ಯಾಕದಂಬ
  4. ತೆಲುಗು: ಕದಂಬಮು
  5. ಇಂಗ್ಲೀಷ್: ವೈಲ್ಡ್ ಸಿಂಕೋನ

ಸಸ್ಯ ವರ್ಣನೆ[ಬದಲಾಯಿಸಿ]

ಈ ಮರವು ೨೦-೩೦ ಅಡಿ ಎತ್ತರ ಬೆಳೆಯುತ್ತದೆ. ಇದು ನೋಡಲು ಆಕರ್ಷಕವಾಗಿರುತ್ತದೆ. ಸುತ್ತಲೂ ರೆಂಬೆಗಳು ಇಳಿಬಿದ್ದಿರುತ್ತವೆ. ತೊಗಟೆಯು ನೇರಳೆ ಬಣ್ಣ ಮತ್ತು ನಯವಾದ ತೊಗಟೆಗಳಿಂದ ಕೂಡಿರುತ್ತದೆ.ಹಾಗೂ ಇದು ಹೊಳಪಿನಿಂದ ಕೂಡಿದ ಅಂಡಾಕಾರದ ಎಲೆಗಳು ಅಭಿಮುಖವಾಗಿ ಕಿರುರೆಂಬೆಗಳ ಮೇಲೆ ಜೋಡಣೆಯಾಗಿರುತ್ತದೆ. ಜೂನ್-ಆಗಸ್ಟ್ ತಿಂಗಳುಗಳಲ್ಲಿ ಮರವು ಹೂಗಳನ್ನು ಬಿಡುತ್ತದೆ. ಚೆಂಡಿನಂತಹ ಸಣ್ಣ-ಸಣ್ಣ ಹೂಗಳು ಸೇರಿಕೊಂಡು ಪುಷ್ಪಮಂಜರಿಯಾಗಿರುತ್ತದೆ. ಸಾಮಾನ್ಯವಾಗಿ ಪುಷ್ಪಮಂಜರಿಯು ರೆಂಬೆಯ ತುದಿಯಲ್ಲಿರುತ್ತದೆ. ಹೂಗಳಿಗೆ ತೀಕ್ಷ್ಣವಾದ ಪರಿಮಳವಿರುತ್ತದೆ. ಹಣ್ಣಿನ ಗಾತ್ರ ಮತ್ತು ಆಕಾರವು ಕಿತ್ತಳೆಯನ್ನು ಹೋಲುತ್ತದೆ. ಹಣ್ಣು ಹುಳಿಯಾಗಿದ್ದರೂ ತಿನ್ನಲು ರುಚಿಕರವಾಗಿರುತ್ತದೆ.[೧]

ಉಪಯೋಗಗಳು[ಬದಲಾಯಿಸಿ]

  1. ಇದರ ತೊಗಟೆಯ ಕಷಾಯವನ್ನು ಕುಡಿಯುವುದರಿಂದ ಜ್ವರ ವಾಸಿಯಾಗುತ್ತದೆ.
  2. ತೊಗಟೆಯ ರಸ ಮತ್ತು ನಿಂಬೆರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ ಗಸಗಸೆ ಮತ್ತು ಪತಿಕವನ್ನು ಸೇರಿಸಿ ಅರೆದು ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ಉರಿ ವಾಸಿಯಾಗುತ್ತದೆ.
  3. ಹಣ್ಣುಗಳನ್ನು ತಿನ್ನುವುದರಿಂದ ಬಾಯಾರಿಕೆಯಿಂದ ಕೂಡಿದ ಜ್ವರ ವಾಸಿಯಾಗುತ್ತದೆ.
  4. ಹಣ್ಣಿನ ರಸಕ್ಕೆ ಜೀರಿಗೆ ಮತ್ತು ಸಕ್ಕರೆ ಸೇರಿಸಿ ಕುಡಿಸುವುದರಿಂದ ಉದರ ಶೋಲೆಗಳು ವಾಸಿಯಾಗುತ್ತದೆ.
  5. ಕಡವಲಮರದ ಪಂಚಾಂಗ ಚೂರ್ಣವನ್ನು ಗೋಧಿ ಗಂಜಿಯೊಡನೆ ಸೇವಿಸುವುದರಿಂದ ವಾತಾರೋಗಗಳು ಗುಣವಾಗುತ್ತದೆ.
  6. ಕಡವಲಮರದ ಸಮೂಲವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ತುಪ್ಪದೊಡನೆ ಸುಮಾರು ೬ ತಿಂಗಳು ಸೇವಿಸುವುದರಿಂದ ಸರ್ವವ್ಯಾದಿಗಳು ಗುಣವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಕಾಳಿಕಾಸೌಧ, ಪೂರ್ಣಯ್ಯ ಛತ್ರದ ರಸ್ತೆ, ಬೆಂಗಳೂರು, ೫೬೦ ೦೫೩, ಮೂರನೆಯ ಮುದ್ರಣ:೨೦೧೦, ಪುಟ-೬೩

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕಡವಲ_ಮರ&oldid=1015428" ಇಂದ ಪಡೆಯಲ್ಪಟ್ಟಿದೆ