ಸರೋಜಿನಿ ಮಹಿಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರೋಜಿನಿ ಮಹಿಷಿಯವರು (1927– 2015) ಲೇಖಕಿ, ರಾಜಕಾರಣಿ, ಕಾನೂನುತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಕೇಂದ್ರ ಸರ್ಕಾರದಲ್ಲಿ ಮಾಜಿ ಸಚಿವೆ. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮತ್ತು ಅನುವಾದಗಳನ್ನು ಮಾಡಿದ್ದಾರೆ. ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದರು ಮತ್ತು ೨ ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಸರೋಜಿನಿ ಮಹಿಷಿ ಅವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚನಲವನ್ನು ಮೂಡಿಸಿದ್ದರು. ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಅವರು ಸಲ್ಲಿಸಿದ ವರದಿ ಸರೋಜಿನಿ ಮಹಿಷಿ ವರದಿ ಎಂದೇ ಪ್ರಸಿದ್ಧವಾಗಿದೆ. ೧೯೮೩ರಲ್ಲಿ ಸಲ್ಲಿಸಿದ ಈ ವರದಿ ಅನುಷ್ಠಾನಕ್ಕಾಗಿ ಈಗಲೂ ಹೋರಾಟಗಳು ನಡೆಯುತ್ತಿವೆ.[೧]

ಹುಟ್ಟು, ಶಿಕ್ಷಣ[ಬದಲಾಯಿಸಿ]

ಸರೋಜಿನಿ ಮಹಿಷಿಯವರು ಧಾರವಾಡದ ಶಿರಹಟ್ಟಿ ತಾಲ್ಲೂಕಿನವರು. ೧೯೨೭ರ ಮಾರ್ಚ್ ೩ರಂದು ಬಿಂದುರಾವ್‌ ಮಹಿಷಿ ಹಾಗೂ ಕಮಲಾಬಾಯಿ ದಂಪತಿಗಳಿಗೆ ಜನಿಸಿದ್ದ ಸರೋಜಿನಿ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲೇ ಪೂರ್ಣಗೊಳಿಸಿ, ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿ.ಎ. ಪದವಿ ಪಡೆದರು. ಮುಂಬೈನಲ್ಲಿ ಎಂ.ಎ. ಪದವಿ, ಹೋಮಿಯೋಪತಿ, ನಿಸರ್ಗ ಚಿಕಿತ್ಸೆ, ಬೆಳಗಾವಿಯ ಆರ್‌.ಎಲ್.ಎಸ್. ಕಾಲೇಜಿನಲ್ಲಿ ಎಲ್‌.ಎಲ್‌.ಟಿ ಅಧ್ಯಯನ ಮಾಡಿ ೧೯೫೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೊದಲ ರ್ಯಾಂಕ್ ನಲ್ಲಿ ಕಾನೂನು ಪದವಿ ಪಡೆದರು. ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕನ್ವೀಕರ ವಕೀಲರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಾಹಿತ್ಯ ಸಂಸ್ಕೃತಿ ಕ್ಷೇತ್ರ[ಬದಲಾಯಿಸಿ]

  • ಹಲವಾರು ಕವನಗಳನ್ನು, ಮಕ್ಕಳ ಕವಿತೆಗಳನ್ನು, ಕತೆಗಳನ್ನು ಹಾಗೂ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ‘ರೂಪಾ’ (ಕಥಾ ಸಂಕಲನ), ‘ಸಾಹಿತ್ಯ ಮಂಥನ’, ‘ಕಸೂತಿ ಕಲೆ’, ‘ಶಕುಂತಲಾ’ (ಕಾದಂಬರಿ ಅನುವಾದ), ‘ಸ್ವಾತಂತ್ರ್ಯ ಕಹಳೆ’, ‘ಹಿಮಾಲಯದಿಂದ ರಾಮೇಶ್ವರ’ (ಕವನ ಸಂಕಲನ), ‘ಕಾಳಿದಾಸ’, ‘ಶ್ರೀಹರ್ಷ’, ‘ಭವಭೂತಿ’ ಸೇರಿದಂತೆ ಮೂವತ್ತೈದು ಕೃತಿಗಳನ್ನು ರಚಿಸಿದ್ದಾರೆ.
  • ಡಿ.ವಿ.ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ ಹಾಗೂ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗಳನ್ನು ಹಿಂದಿಗೆ ಭಾಷಾಂತರಿಸಿದ್ದಾರೆ.
  • ಸಂಸ್ಕೃತದ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಇವರು, ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ ಆರಂಭಿಸಲು ಕಾರಣವಾದವರಲ್ಲಿ ಪ್ರಮುಖರು.
  • ವೇದಕಾಲದಿಂದ ಇಪ್ಪತ್ತನೇ ಶತಮಾನದವರೆಗಿನ ಕರ್ನಾಟಕದ ಕವಯತ್ರಿಯರನ್ನು ಕುರಿತು ಸಂಶೋಧನೆ ಮಾಡಿ ಸಲ್ಲಿಸಿದ್ದ ‘ಕರ್ನಾಟಕ ಕವಯತ್ರಿಯರು’ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ ಲಭಿಸಿದೆ.
  • ಅವರು ಉತ್ತಮ ವಾಗ್ಮಿಯೂ ಹೌದು.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

  1. ಸ್ವಾತಂತ್ಯ್ರಕಹಳೆ
  2. ಹಿಮಾಚಲದಿಂದ ರಾಮೇಶ್ವರ
  3. ಮುಳ್ಳುಗುಲಾಬಿ
  4. ನವಿಲ ಇಂಚರ

ಅನುವಾದಿತ ಕೃತಿಗಳು[ಬದಲಾಯಿಸಿ]

  1. ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ಹಿಂದಿಗೆ.
  2. ಹಿಂದಿಯ ಶಾಕುಂತಲವನ್ನು ಮರಾಠಿಯಿಂದ ಕನ್ನಡಕ್ಕೆ.
  3. ಡಿ.ವಿ.ಗುಂಡಪ್ಪನವರ ಮಂಕು ತಿಮ್ಮನ ಕಗ್ಗವನ್ನು ಕನ್ನಡದಿಂದ ಹಿಂದಿಗೆ.
  4. ಶಿವರಾಮ ಕಾರಂತರ ಪ್ರವಾಸ ಕಥನ ‘ಅಪೂರ್ವ ಪಶ್ಚಿಮ’ ಕೃತಿಯನ್ನು ಹಿಂದಿ ಭಾಷೆಗೆ.

ಹಿಂದಿ ಭಾಷೆಯ ಕೃತಿಗಳು[ಬದಲಾಯಿಸಿ]

  1. ಯೇ ಹಮಾರೇ ಯೇ ಬಿ ಹಮಾರೇ
  2. ಅತಿಥಿ ಸತ್ಕಾರ್‌

ಸಮಾಜಸೇವೆ[ಬದಲಾಯಿಸಿ]

  • ಧಾರವಾಡದ ವನಿತಾ ಸೇವಾ ಸಮಾಜ ೧೯೫೦ರ ಸುಮಾರಿಗೆ ಹೊರತರುತ್ತಿದ್ದ ‘ವೀರಮಾತೆ’ ಮಾಸ ಪತ್ರಿಕೆಗೆ ಇವರು ಸಂಪಾದಕಿಯಾಗಿದ್ದರು.
  • ಸರೋಜಿನಿ ಮಹಿಷಿಯವರು ಅನೇಕ ಮಹಿಳಾ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಮಹಿಳೆಯರ ಏಳಿಗೆಗಾಗಿ ವನಿತಾ ಸೇವಾ ಸಮಾಜವನ್ನು ಸ್ಥಾಪಿಸಿದ್ದಾರೆ. ತಮ್ಮ ಸಹೋದರ, ಸಹೋದರಿಯರೊಡಗೂಡಿ ಶಿಕ್ಷಣ ಸಂಸ್ಥೆಗಳು ಹಾಗೂ ಚಾರಿಟಬಲ್‌ ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.
  • ಹೆಣ್ಣು ಮಕ್ಕಳಿಗಾಗಿ ಒಂದು ಪ್ರಾಥಮಿಕ ಶಾಲೆ, ಒಂದು ಪ್ರೌಢ ಶಾಲೆ ಮತ್ತು ಒಂದು ತರಬೇತಿ ಕಾಲೇಜನ್ನು ನಡೆಸುತ್ತಿದ್ದರು.
  • ಹೆಣ್ಣು ಮಕ್ಕಳ ಗೈಡ್ಸ್ ಆಂದೋಲನದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ೬೦ರ ದಶಕದಲ್ಲಿ ಸಚಿವೆಯಾಗಿದ್ದಾಗ ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದಿಂದ ಕರ್ನಾಟಕ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿದ್ದರು. (೧೯೭೭ರಲ್ಲಿ ಕಟ್ಟಡ ಉದ್ಘಾಟನೆಯಾಯಿತು)
  • ೧೯೬೬ರಿಂದ ೧೯೮೩ರವರೆಗೆ ದೆಹಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.

ರಾಜಕಾರಣ, ಸಾರ್ವಜನಿಕ ಕ್ಷೇತ್ರ[ಬದಲಾಯಿಸಿ]

೧೯೬೨ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಆಯ್ಕೆಯಾದರು. ಬಳಿಕ ೧೯೬೭, ೧೯೭೧, ೧೯೭೭ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾದರು. ೧೯೮೨ರಲ್ಲಿ ಕಾಂಗ್ರೆಸ್ ತೊರೆದು ಜನತಾ ಪಕ್ಷ ಸೇರಿದರು. ೧೯೮೨ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಡಿ.ಕೆ.ನಾಯ್ಕರ ಎದುರು ೯೬ಸಾವಿರ ಮತಗಳ ಅಂತರದಿಂದ ಸೋತರು. ೧೯೮೩-೮೪, ೧೯೮೪-೯೦ ಅವದಿಗೆ ರಾಜ್ಯಸಭಾ ಸದಸ್ಯರಾಗಿದ್ದರು.

ಅವರು ನಿರ್ವಹಿಸಿದ ಸ್ಥಾನಗಳು ಹೀಗಿವೆ.

  1. ಲೋಕಸಭಾ ಸದಸ್ಯೆ
  2. ರಾಜ್ಯಸಭಾ ಸದಸ್ಯೆ
  3. ಶ್ರೀ ಚಂದ್ರಶೇಖರರವರ ಮತ್ತು ಇಂದಿರಾ ಗಾಂಧಿಯವರ ಸಂಪುಟದಲ್ಲಿ ಭಾರತ ಕೇಂದ್ರ ಮಂತ್ರಿಮಂಡಲದಲ್ಲಿ ರಾಜ್ಯಮಂತ್ರಿ.
  4. ಇಂದಿರಾಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಆಪ್ತಸಚಿವೆ.
  5. ಅಣುಶಕ್ತಿ ಹಾಗೂ ಸಂಖ್ಯಾಶಾಸ್ತ್ರ ಸಂಸ್ಥೆಳ ಸಾರ್ವಜನಿಕ ಸಂಬಂಧಗಳ ಖಾತೆಯ ಉಪಮಂತ್ರಿ.
  6. ಪ್ರವಾಸೋದ್ಯಮ, ವಿಮಾನಖಾತೆ, ಕಾನೂನು ಮತ್ತು ಕಂಪನಿ ವ್ಯವಹಾರಗಳ ಖಾತೆ ಸಚಿವೆ.
  7. ಲೋಕಸಭೆ ಮತ್ತು ರಾಜ್ಯ ಸಭೆಗಳ ಜಂಟಿ ಆಯ್ಕೆ ಸಮಿತಿ ಅಧ್ಯಕ್ಷೆ.
  8. ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷೆ, ಗ್ರಾಮೀಣ ಸಚಿವಾಲಯದ ಉಪಾಧ್ಯಕ್ಷೆ, ಸಂಸ್ಕೃತ ಸಂಸ್ಥಾನ ಹಿಂದಿ ಸಂಸತ್ ಸಂಘದ ಉಪಾಧ್ಯಕ್ಷೆ.
  9. ಹಸ್ತಪ್ರತಿಗಳ ಸಂಗ್ರಹ ಮತ್ತು ಸಂರಕ್ಷಣೆಯ ಯೋಜನೆಯನ್ನು ರೂಪಿಸಿದ್ದಾರೆ.

ಸರೋಜಿನಿ ಮಹಿಷಿ ವರದಿ[ಬದಲಾಯಿಸಿ]

  • ೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ಸರಕಾರದ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಷಿಯವರಿಗೆ ಕೇಳಿಕೊಂಡಿತ್ತು.
  • ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದು ಖ್ಯಾತವಾಗಿದೆ. ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಪ್ರತಿಪಾದಿಸುವ ಆ ವರದಿ ಇಂದಿಗೂ ಕೂಡ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಆಧಾರವಾಗಿದೆ.

ಪ್ರಶಸ್ತಿ, ಗೌರವಗಳು[ಬದಲಾಯಿಸಿ]

  • ಸರೋಜಿನಿ ಮಹಿಶಿಯವರಿಗೆ ೨೦೦೬ನೆಯ ಸಾಲಿನ ನಾಡೋಜ ಪದವಿ.
  • ಕರ್ನಾಟಕ, ವಿಜಯಪುರ, ಹಂಪಿ ಹಾಗೂ ಉಜ್ಜಯನಿ ವಿಕ್ರಂ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌.
  • ನವಿಲು, ಇಂಚರಎನ್ನುವ ಮಕ್ಕಳ ಸಾಹಿತ್ಯಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಮುಳ್ಳು ಗುಲಾಬಿ ಕವನ ಸಂಕಲನಕ್ಕಾಗಿ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ.
  • ಅತಿಥಿ ಸತ್ಕಾರ ಮತ್ತು ಯೇ ಹಮಾರೆ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ.

ನಿಧನ[ಬದಲಾಯಿಸಿ]

೨೫ಜನವರಿ೨೦೧೫ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸದಲ್ಲಿ ಹೃದಯಾಘಾತದಿಂದ ವಿಧಿವಶರಾದರು.[೨] ಅವರಿಗೆ ೮೮ ವರ್ಷ ವಯಸ್ಸಾಗಿತ್ತು.[೩]

ಉಲ್ಲೇಖಗಳು[ಬದಲಾಯಿಸಿ]

  1. ಸರೋಜಿನಿ ಮಹಿಷಿ ಬದುಕಿದ್ದಾಗ ವರದಿ ಜಾರಿಯಾಗಲಿಲ್ಲ: ಚಂಪಾ ಬೇಸರ - ವಿಜಯಕರ್ನಾಟಕ, ೨೬ಜನವರಿ೨೦೧೫
  2. "ಡಾ.ಸರೋಜಿನಿ ಮಹಿಷಿ ಇನ್ನಿಲ್ಲ - ಉದಯವಾಣಿ, ೨೬ಜನವರಿ೨೦೧೫". Archived from the original on 2015-01-28. Retrieved 2015-01-26.
  3. Vijaya karnataka,Jan 26, 2015, 'ಕನ್ನಡ ಕಟ್ಟಾಳು ಡಾ.ಸರೋಜಿನಿ ಮಹಿಷಿ ನಿಧನ'

ಹೊರಕೊಂಡಿಗಳು[ಬದಲಾಯಿಸಿ]

ಇವುಗಳನ್ನೂ ನೋಡಿ[ಬದಲಾಯಿಸಿ]

ಸರೋಜಿನಿ ಮಹಿಷಿ ವರದಿ