ಸಿ. ಎನ್. ಅಣ್ಣಾದೊರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
C. N. Annadurai
Conjeevaram Natarajan Annadurai

ಅಧಿಕಾರ ಅವಧಿ
February 1967 – 3 February 1969
ಪ್ರಧಾನ ಮಂತ್ರಿ Indira Gandhi
ರಾಜ್ಯಪಾಲ Sardar Ujjal Singh
ಪೂರ್ವಾಧಿಕಾರಿ M. Bakthavatsalam
ಉತ್ತರಾಧಿಕಾರಿ V. R. Nedunchezhiyan (acting)

Member of Parliament (Rajya Sabha), India
ಅಧಿಕಾರ ಅವಧಿ
1962 – 1967
ರಾಷ್ಟ್ರಪತಿ Sarvepalli Radhakrishnan
ಪ್ರಧಾನ ಮಂತ್ರಿ Jawaharlal Nehru,
Lal Bahadur Shastri,
Indira Gandhi

ಅಧಿಕಾರ ಅವಧಿ
1967 – 1969
Premier C. N. Annadurai
ರಾಜ್ಯಪಾಲ Sardar Ujjal Singh

ಅಧಿಕಾರ ಅವಧಿ
1957 – 1962
Premier K. Kamaraj
ರಾಜ್ಯಪಾಲ A. J. John, Anaparambil
Bhishnuram Medhi
ಪೂರ್ವಾಧಿಕಾರಿ Deivasigamani
ಉತ್ತರಾಧಿಕಾರಿ S. V. Natesa Mudaliar
ಮತಕ್ಷೇತ್ರ Kanchipuram
ವೈಯಕ್ತಿಕ ಮಾಹಿತಿ
ಜನನ (೧೯೦೯-೦೯-೧೫)೧೫ ಸೆಪ್ಟೆಂಬರ್ ೧೯೦೯
Kancheepuram, Tamil Nadu, British India
ಮರಣ 3 February 1969(1969-02-03) (aged 59)
Madras, Tamil Nadu, India
ಸಂಗಾತಿ(ಗಳು) Rani Annadurai
ಮಕ್ಕಳು None, but adopted his sister's grandchildren
ವೃತ್ತಿ Politician
ಧರ್ಮ None(Atheism)

ಕಾಂಜೀವರಂ ನಟರಾಜನ್ ಅಣ್ಣಾದೊರೈ ತಮಿಳು:காஞ்சீபுரம் நடராஜன் அண்ணாதுரை (15 ಸೆಪ್ಟೆಂಬರ್ 1909 - 3 ಫೆಬ್ರವರಿ 1969), ಜನಪ್ರಿಯವಾಗಿ ಅಣ್ಣಾ ಎಂದೇ ಪ್ರಸಿದ್ಧರಾಗಿದ್ದಾರೆ (ಅಣ್ಣಾ ಎಂದರೆ ತಮಿಳಿನಲ್ಲಿ ಹಿರಿಯ ಸಹೋದರ ಎಂಬ ಅರ್ಥವನ್ನು ನೀಡುತ್ತದೆ) ಇವರು ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ. ದ್ರಾವಿಡ ಪಕ್ಷದಿಂದ ಆ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕ್ತಿ ಹಾಗು ಸ್ವತಂತ್ರ ಭಾರತದಲ್ಲಿ ಒಂದು ಬಹುಮತ ಸರ್ಕಾರವನ್ನು ರೂಪಿಸಿದ ಮೊದಲ ಕಾಂಗ್ರೆಸ್ಸೇತರ ರಾಜಕೀಯ ಮುಖಂಡ.

ಇವರು ತಮ್ಮ ವಾಕ್ಪಟುತ್ವಕ್ಕೆ ಹೆಸರುವಾಸಿಯಾಗಿರುವುದರ ಜೊತೆಗೆ ತಮಿಳು ಭಾಷೆಯ ಒಬ್ಬ ಪ್ರಸಿದ್ಧ ಲೇಖಕರೂ ಸಹ ಹೌದು. ಅವರು ಹಲವಾರು ನಾಟಕಗಳನ್ನು ಬರೆಯುವುದರ ಜೊತೆಗೆ ಅದರಲ್ಲಿ ನಟಿಸಿದ್ದಾರೆ. ಅವರ ಕೆಲವೊಂದು ನಾಟಕಗಳು ನಂತರದಲ್ಲಿ ಚಲನಚಿತ್ರಗಳಾದವು. ರಾಜಕೀಯ ಪ್ರಚಾರಕ್ಕಾಗಿ ವ್ಯಾಪಕವಾಗಿ ತಮಿಳು ಸಿನೆಮಾವನ್ನು ಬಳಸಿಕೊಂಡ ದ್ರಾವಿಡ ಪಕ್ಷಗಳ ಮೊದಲ ರಾಜಕಾರಣಿ. ಮಧ್ಯಮ ವರ್ಗದ ನೇಕಾರರ ಕುಟುಂಬದಲ್ಲಿ ಜನಿಸಿದ ಇವರು, ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ನಂತರ ಮದರಾಸು ಪ್ರಾಂತ್ಯದ ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಪತ್ರಕರ್ತನಾಗಿ ಪ್ರವೇಶಿಸಿದರು. ಇವರು ಹಲವಾರು ರಾಜಕೀಯ ಪತ್ರಿಕೆಗಳನ್ನು ಸಂಪಾದಿಸುವುದರ ಜೊತೆಗೆ ದ್ರಾವಿಡರ್ ಕಳಗಂನ ಒಬ್ಬ ಸದಸ್ಯನಾಗಿ ನೋಂದಣಿಯಾದರು.

ಪೆರಿಯರ್ E. V. ರಾಮಸಾಮಿಯ ಒಬ್ಬ ಕಟ್ಟಾ ಅಭಿಮಾನಿಯಾದ ಇವರು ಪಕ್ಷದ ಒಬ್ಬ ಪ್ರಮುಖ ಸದಸ್ಯನಾಗಿ ಉನ್ನತ ಮಟ್ಟಕ್ಕೆ ಏರಿದರು.

ದ್ರಾವಿಡ ನಾಡು ಎಂಬ ಪ್ರತ್ಯೇಕ ಸ್ವತಂತ್ರ ರಾಜ್ಯದ ನಿರ್ಮಾಣ ಹಾಗು ಭಾರತೀಯ ಒಕ್ಕೂಟದಲ್ಲಿ ಅದರ ಸೇರ್ಪಡೆಗೆ ಸಂಬಂಧಿಸಿದಂತೆ ಪೆರಿಯರ್ ರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ, ತಮ್ಮ ರಾಜಕೀಯ ಮಾರ್ಗದರ್ಶಿಯನ್ನು ವಿರೋಧಿಸಿದರು. ವಯಸ್ಸಿನಲ್ಲಿ ತಮಗಿಂತ ಬಹಳಷ್ಟು ಕಿರಿಯಳಾದ ಮಣಿಅಮ್ಮೈ ಎಂಬ ಯುವತಿಯನ್ನು ಪೆರಿಯರ್ ಮದುವೆಯಾದಾಗ ಈ ಇಬ್ಬರ ನಡುವಿನ ವೈಮನಸ್ಸು ಮತ್ತಷ್ಟು ಸ್ಫೋಟಿಸಿತು. ಪೆರಿಯರ್‌ರ ಈ ಕೆಲಸದಿಂದ ಕೋಪಗೊಂಡ ಅಣ್ಣಾದೊರೈ, ತಮ್ಮ ಬೆಂಬಲಿಗರೊಂದಿಗೆ ದ್ರಾವಿಡರ್ ಕಳಗಂನಿಂದ ಬೇರ್ಪಟ್ಟು ತಮ್ಮದೇ ಆದ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (DMK) ಸ್ಥಾಪಿಸಿದರು. DMK ಪಕ್ಷವು ಆರಂಭದಲ್ಲಿ ತಮ್ಮ ಮಾತೃ ಪಕ್ಷ, ದ್ರಾವಿಡರ್ ಕಳಗಂನ ಸಿದ್ಧಾಂತಗಳನ್ನು ಅನುಸರಿಸಿತು. ಆದರೆ ರಾಷ್ಟ್ರೀಯ ರಾಜಕಾರಣ ಹಾಗು 1963ರಲ್ಲಿ ಚೀನ-ಭಾರತ ಯುದ್ಧದ ನಂತರ ಸ್ಥಾಪನೆಯಾದ ಭಾರತೀಯ ಸಂವಿಧಾನದ ವಿಕಾಸದ ನಂತರ, ಅಣ್ಣಾದೊರೈ ಸ್ವತಂತ್ರ ದ್ರಾವಿಡ ನಾಡು ಎಂಬ ಬೇಡಿಕೆಯನ್ನು ಕೈಬಿಟ್ಟರು.

ಅಂದಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸಿದ ವಿವಿಧ ಪ್ರತಿಭಟನೆಗಳಿಂದಾಗಿ ಹಲವಾರು ಸಂದರ್ಭಗಳಲ್ಲಿ ಅವರು ಸೆರೆವಾಸವನ್ನು ಅನುಭವಿಸಬೇಕಾಯಿತು. 1965ರ ಮದ್ರಾಸ್ ಹಿಂದಿ ವಿರೋಧಿ ಚಳವಳಿಯು ಅವರ ಕಡೆಯ ಪ್ರತಿಭಟನೆಯಾಗಿತ್ತು. ಅಣ್ಣಾದೊರೈ ಅವರ ಈ ಪ್ರತಿಭಟನೆಯು ಸ್ವತಃ ಅವರ ಪಕ್ಷಕ್ಕೆ ಜನಪ್ರಿಯ ಬೆಂಬಲವನ್ನು ಗಳಿಸಿಕೊಡುವಲ್ಲಿ ಸಹಾಯಕವಾಯಿತು. 1967ರಲ್ಲಿ ರಾಜ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಅವರ ಪಕ್ಷವು ಪ್ರಚಂಡ ಬಹುಮತವನ್ನು ಗಳಿಸಿತು. ಭಾರತದಲ್ಲಿ ಅಂದಿಗೆ ಅವರ ಸಚಿವ ಸಂಪುಟವು ಬಹಳ ಚಿಕ್ಕದೆನಿಸಿತ್ತು. ಅವರು ಆತ್ಮಗೌರವದ ಮದುವೆಗಳನ್ನು ಕಾನೂನುಬದ್ಧಗೊಳಿಸಿದರು, ರಾಜ್ಯಕ್ಕೆ ಎರಡು ಭಾಷಾ ನೀತಿಯನ್ನು ಜಾರಿಗೆ ತಂದರು (ಇತರ ರಾಜ್ಯಗಳಲ್ಲಿರುವ ತ್ರಿ ಭಾಷಾ ಸೂತ್ರಕ್ಕೆ ಬದಲಾಗಿ), ಅಕ್ಕಿಗೆ ಅನುದಾನದ ದರವನ್ನು(ಸಬ್ಸಿಡಿ ದರ) ಅನುಷ್ಠಾನಕ್ಕೆ ತಂದರು ಹಾಗು ಮದ್ರಾಸ್ ರಾಜ್ಯವನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಿದರು.

ಆದಾಗ್ಯೂ, ಅವರು ಅಧಿಕಾರ ವಹಿಸಿಕೊಂಡ ಎರಡೇ ವರ್ಷಗಳಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದರು ಹಾಗು ಅವರ ಶವಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು, ಗಿನ್ನಿಸ್ ದಾಖಲೆ ಯನ್ನು ನಿರ್ಮಿಸಿತು. ಹಲವಾರು ವಿದ್ಯಾಸಂಸ್ಥೆಗಳು ಹಾಗು ಸಂಘ ಸಂಸ್ಥೆಗಳಿಗೆ ಇವರ ಹೆಸರನ್ನು ಇರಿಸಲಾಗಿದೆ. 1972ರಲ್ಲಿ ಅಣ್ಣಾದೊರೈ ಅವರ ನಿಧನದ ನಂತರ M. G. ರಾಮಚಂದ್ರನ್ ಆರಂಭಿಸಿದ ವಿಭಜಿತ ಪಕ್ಷಕ್ಕೆ ಅಣ್ಣಾದೊರೈ ಅವರ ಗೌರವಾರ್ಥವಾಗಿ ADMK ಎಂದು ಹೆಸರಿಸಲಾಯಿತು (ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ).

ಬಾಲ್ಯ ಜೀವನ[ಬದಲಾಯಿಸಿ]

ಅಣ್ಣಾದೊರೈ 15 ಸೆಪ್ಟೆಂಬರ್ 1909ರಲ್ಲಿ ತಮಿಳುನಾಡಿನ ಕಾಂಚಿಪುರಂನಲ್ಲಿ (ಅಂದಿನ ಕಾಂಜೀವರಂ) ನಟರಾಜನ್ ಹಾಗು ಬಂಗಾರು ಅಮ್ಮಾಳ್ ದಂಪತಿಯ ಮಗನಾಗಿ ಪ್ರಬಲವಾದ ಸೇನ್ಗುಂಟ ಮುದಲಿಯಾರ್ ಜಾತಿಯಲ್ಲಿ ಜನಿಸಿದರು.[೧] ಇವರನ್ನು ಇವರ ಅಕ್ಕ ರಾಜಮಣಿ ಅಮ್ಮಾಳ್ ಬೆಳೆಸಿದರು. ಅವರು ವಿದ್ಯಾರ್ಥಿದೆಸೆಯಲ್ಲೇ ತಮ್ಮ 21ನೇ ವಯಸ್ಸಿನಲ್ಲಿ ರಾಣಿ ಎಂಬ ಹುಡುಗಿಯನ್ನು ಮದುವೆಯಾದರು. ದಂಪತಿಗೆ ಮಕ್ಕಳಿರಲಿಲ್ಲವಾದ ಕಾರಣ ನಂತರದಲ್ಲಿ ರಾಜಮಣಿಯ ಮೊಮ್ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕಿದರು.[೨] ಅವರು ಪಚಿಯಪ್ಪ ಪ್ರೌಢಶಾಲೆಗೆ ದಾಖಲಾದರು,[೧] ಆದರೆ ಕುಟುಂಬ ನಿರ್ವಹಣೆಗೆ ಸಹಾಯ ಮಾಡುವ ಸಲುವಾಗಿ ಪಟ್ಟಣ ಮುನ್ಸಿಪಲ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರುವ ಮೂಲಕ ಶಾಲೆಯನ್ನು ತ್ಯಜಿಸಿದರು.[೨]

1934ರಲ್ಲಿ, ಚೆನ್ನೈನ ಪಚಿಯಪ್ಪ ಕಾಲೇಜಿನಲ್ಲಿ B.A. ಪದವಿ (ಆನರ್ಸ್)ಯನ್ನು ಪಡೆದರು.[೧] ನಂತರ ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗು ರಾಜಕೀಯದಲ್ಲಿ M.A ಪದವಿಯನ್ನು ಗಳಿಸಿದರು.[೨] ಇವರು ಪಚಿಯಪ್ಪ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ[೩] ಕೆಲಸ ಮಾಡಿದರು. ನಂತರದಲ್ಲಿ ಶಿಕ್ಷಕ ವೃತ್ತಿಯನ್ನು ತೊರೆದು ಪತ್ರಿಕೋದ್ಯಮ ಹಾಗು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.[೨]

ಧರ್ಮ[ಬದಲಾಯಿಸಿ]

ಧರ್ಮಕ್ಕೆ ಸಂಬಂಧಿಸಿದಂತೆ ಅಣ್ಣಾದೊರೈ ಒಬ್ಬ ಹಿಂದು. ತಿರುತ್ತಣಿ ಬೆಟ್ಟದ ದೇವಾಲಯದ ಮುರುಗನ್ ಕುಟುಂಬದ ದೈವವಾಗಿತ್ತು.[೪] ದೇವರು ಒಬ್ಬನೇ ಹಾಗು ಮಾನವಧರ್ಮವು ಒಂದೇ ಎಂಬ ತಮ್ಮ ನಂಬಿಕೆಯನ್ನು ಸಮರ್ಥಿಸಿಕೊಂಡರು.[೫] ಒಂನ್ರೆ ಕುಲಂ, ಒರುವನೆ ದೇವನ್ ಎಂದು ಅವರು ಹೇಳಿದರು.[೬] ಅವರ ಅನುಚರರು, "ಒಂದೇ ಕುಲ, ಒಬ್ಬನೇ ದೇವರು " ಎಂಬ ಅವರ ಘೋಷವಾಕ್ಯವನ್ನು ಬಳಸಿಕೊಂಡರು.

ಒಂದು ಸಂದರ್ಶನದಲ್ಲಿ ಅವರು, "ಇಲ್ಲ. ದೇವರಲ್ಲಿ ಒಂದು ನಿಜವಾದ ನಂಬಿಕೆ ಇಡಲು ನಾನು ಯಾವಾಗಲೂ ವಿನಂತಿಸುತ್ತೇನೆ."[೭]

ಅಣ್ಣಾದೊರೈ ಮೂಢನಂಬಿಕೆಗಳು ಹಾಗು ಧಾರ್ಮಿಕ ಶೋಷಣೆಯನ್ನು ಖಂಡಿಸುತ್ತಿದ್ದರು. ಆದರೆ ಸಮಾಜದಲ್ಲಿರುವ ಧಾರ್ಮಿಕ ಮೌಲ್ಯಗಳ ವಿರುದ್ಧ ಎಂದಿಗೂ ಹೋರಾಡಲಿಲ್ಲ.[೮]

ರಾಜಕೀಯ ಪ್ರವೇಶ[ಬದಲಾಯಿಸಿ]

ಅಣ್ಣಾದೊರೈ ಅವರ ರಾಜಕೀಯ ಆಸಕ್ತಿಯು ಅವರನ್ನು 1935ರಲ್ಲಿ ಜಸ್ಟಿಸ್ ಪಾರ್ಟಿಗೆ ಸೇರ್ಪಡೆಯಾಗುವಂತೆ ಮಾಡಿತು.[೯] ಜಸ್ಟಿಸ್ ಪಾರ್ಟಿಯನ್ನು 1917ರಲ್ಲಿ ಬ್ರಾಹ್ಮಣೇತರ ಗಣ್ಯರು ಸ್ಥಾಪಿಸಿದರು.[೧೦] ಜಸ್ಟಿಸ್ ಪಕ್ಷವು ಮದ್ರಾಸ್ ಯುನೈಟೆಡ್ ಲೀಗ್ ನಿಂದ ಹುಟ್ಟಿಕೊಂಡ ಪಕ್ಷವಾಗಿದೆ. ಇದು ಆರಂಭದಲ್ಲಿ ಮದ್ರಾಸ್ ನಲ್ಲಿರುವ ಬ್ರಾಹ್ಮಣೇತರ ವಿದ್ಯಾರ್ಥಿಗಳಿಗೆ ವಸತಿಯನ್ನು ಕಲ್ಪಿಸುವ ಒಂದು ಕಾರ್ಯತಂಡವಾಗಿ ತನ್ನ ಚಟುವಟಿಕೆಯನ್ನು ಆರಂಭಿಸಿತು ಹಾಗು ನಂತರದಲ್ಲಿ ಸರ್ ಪಿಟ್ಟಿ ತ್ಯಾಗರಾಯ ಚೆಟ್ಟಿ ಹಾಗು Dr. T. M. ನಾಯರ್ ರಂತಹ ಮುಖಂಡರ ಪ್ರಯತ್ನದ ಫಲವಾಗಿ ಒಂದು ರಾಜಕೀಯ ಪಕ್ಷವಾಗಿ ಬೆಳೆಯಿತು. ಪಕ್ಷವನ್ನು ಸೌತ್ ಇಂಡಿಯನ್ ಲಿಬಿರಲ್ ಫೆಡರೇಶನ್ (S. I. L. F.) ಎಂದು ನಾಮಕರಣ ಮಾಡಲಾಯಿತು - ಇದೇ ಮುಂದೆ ಜಸ್ಟಿಸ್ ಪಕ್ಷವೆಂದು ಪ್ರಸಿದ್ಧಿಯನ್ನು ಪಡೆಯಿತು.[೧೦] ಪಕ್ಷವು 1920ರಲ್ಲಿ ಪರಿಚಯಿಸಲಾದ ಸ್ವಯಮಾಡಳಿತದ ನಂತರದಲ್ಲಿ, 1937ರಲ್ಲಿ ಅಂತಿಮವಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಿಂದ ಪರಾಭವಗೊಳ್ಳುವವರೆಗೂ ಮದ್ರಾಸ್ ಪ್ರಾಂತ್ಯದಲ್ಲಿ ಅಧಿಕಾರದಲ್ಲಿತ್ತು.[೧೧] ಜಸ್ಟಿಸ್ ಪಕ್ಷಕ್ಕೆ ಅಣ್ಣಾದೊರೈ ಸೇರ್ಪಡೆಯಾಗುವ ಸಂದರ್ಭದಲ್ಲಿ ಪೆರಿಯರ್ E. V. ರಾಮಸಾಮಿ ಪಕ್ಷದ ಅಧ್ಯಕ್ಷರಾಗಿದ್ದರು.[೧೨] ಜಸ್ಟಿಸ್ ನಿಯತಕಾಲಿಕದಲ್ಲಿ ಅಣ್ಣಾದೊರೈ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು.[೨] ಅವರು ನಂತರ ವಿಡುದಲೈ (ಇಂಗ್ಲಿಷ್ ನಲ್ಲಿ ಫ್ರೀಡಂ (ಸ್ವಾತಂತ್ರ್ಯ) ಪತ್ರಿಕೆಯ ಸಂಪಾದಕರಾದರು ಹಾಗು ತಮಿಳು ವಾರ ಪತ್ರಿಕೆ ಕುಡಿ ಅರಸು ಪತ್ರಿಕೆಯಲ್ಲೂ ಭಾಗಿಯಾಗಿದ್ದರು. ಅವರು ದ್ರಾವಿಡ ನಾಡು ಎಂಬ ತಮ್ಮದೇ ಆದ ಪತ್ರಿಕೆಯನ್ನು ಆರಂಭಿಸಿದರು (ಈ ಹೆಸರನ್ನು ಪಕ್ಷದ ಧ್ಯೇಯೋದ್ದೇಶವಾಗಿದ್ದ ಸ್ವತಂತ್ರ ರಾಜ್ಯ ದ್ರಾವಿಡ ನಾಡುಹೆಸರಿನ ಮೇಲೆ ಇರಿಸಲಾಗಿದೆ).[೨] 1944ರಲ್ಲಿ, ಪೆರಿಯರ್ ಜಸ್ಟಿಸ್ ಪಕ್ಷಕ್ಕೆ ದ್ರಾವಿಡರ್ ಕಳಗಂ ಎಂದು ಮರುನಾಮಕರಣ ಮಾಡಿದರು ಹಾಗು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವನ್ನು ಕೈಬಿಟ್ಟರು.[೧೩]

ಪೆರಿಯರ್ ರೊಂದಿಗಿನ ಭಿನ್ನಾಭಿಪ್ರಾಯಗಳು ಹಾಗು DMKಯ ಹುಟ್ಟು[ಬದಲಾಯಿಸಿ]

ವಸಾಹತುಶಾಹಿ ಬ್ರಿಟಿಶ್ ಆಡಳಿತದಿಂದ ಭಾರತವನ್ನು ಸ್ವತಂತ್ರಗೊಳಿಸಬೇಕೆಂದು ಹೋರಾಡುತ್ತಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬ್ರಾಹ್ಮಣರ ಪ್ರಾಬಲ್ಯದಿಂದ ಕೂಡಿತ್ತು. ಈ ಕಾರಣದಿಂದಾಗಿ ಪೆರಿಯರ್ ಸ್ವತಂತ್ರ ಭಾರತವು ದಕ್ಷಿಣ ಭಾರತೀಯರು ಅದರಲ್ಲೂ ವಿಶೇಷವಾಗಿ ತಮಿಳರು ಬ್ರಾಹ್ಮಣರ ಹಾಗು ಉತ್ತರ ಭಾರತೀಯರ ಅಧೀನಕ್ಕೆ ಒಳಗಾಗುವರೆಂದು ಆಲೋಚಿಸಿದರು.[೧೪] ಈ ಕಾರಣಗಳಿಂದಾಗಿ 15 ಆಗಸ್ಟ್ 1947, ಭಾರತವು ಸ್ವಾತಂತ್ರ ಪಡೆದ ದಿನವನ್ನು, ಶೋಕಾಚರಣೆಯ ದಿನವನ್ನಾಗಿ ಆಚರಿಸಬೇಕೆಂದು ಕರೆ ನೀಡಿದರು.[೧೫] ಅಣ್ಣಾದೊರೈ ಈ ಪ್ರಯತ್ನಕ್ಕೆ ವಿರೋಧಿಸಿದರು ಜೊತೆಗೆ ಅವರ ಬೆಂಬಲಿಗರು ಹಾಗು ಪೆರಿಯರ್ ನಡುವಿನ ಒಡಕು ವ್ಯಾಪಕವಾಗಿ ಬೆಳೆಯಿತು.[೧೪] ಅವರು ಸ್ವಾತಂತ್ರದ ಗಳಿಕೆಯು ಕೇವಲ ಆರ್ಯನ್ನರನ್ನು ಉಳ್ಳ ಉತ್ತರ ಭಾಗಕ್ಕಿಂತ ಹೆಚ್ಚಾಗಿ ಭಾರತದ ಒಟ್ಟಾರೆ ಸಾಧನೆಯಾಗಿ ಕಂಡರು.[೯] ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಭಾಗವಹಿಸದಿರುವ ಪೆರಿಯರ್ ಅವರ ನಿರ್ಧಾರವನ್ನೂ ಸಹ ಅಣ್ಣಾದೊರೈ ವಿರೋಧಿಸಿದರು. ಇದಕ್ಕಾಗಿ 1948ರಲ್ಲಿ ನಡೆದ ಪಕ್ಷದ ಸಭೆಯಿಂದ ಹೊರನಡೆದಿದ್ದರು.[೯] ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಸೈದ್ಧಾಂತಿಕ ರಾಜಿಗಳಿಗೆ ಎಡೆ ಮಾಡಿ ಕೊಡುತ್ತದೆಂದು ಪೆರಿಯರ್ ಅಭಿಪ್ರಾಯಪಟ್ಟರು. ಇದಕ್ಕಿಂತ ಹೆಚ್ಚಾಗಿ, ಸಾಮಾಜಿಕ ಸುಧಾರಣೆಯನ್ನು ಸರ್ಕಾರಗಳಲ್ಲಿ ಭಾಗವಹಿಸುವ ಬದಲಿಗೆ, ರಾಜಕೀಯ ಚೌಕಟ್ಟಿನಿಂದ ಆಚೆಗೆ ಶಿಕ್ಷಣ ನೀಡುವ ಮೂಲಕ ಹಾಗು ಸಮುದಾಯಗಳಿಗೆ ಪ್ರಚಾರ ಮಾಡುವ ಮೂಲಕ ಸಾಧಿಸಬಹುದೆಂದು ಪೆರಿಯರ್ ಕಲ್ಪನೆಯನ್ನು ಹೊಂದಿದ್ದರು.[೧೬] ಅಂತಿಮವಾಗಿ, ಪೆರಿಯರ್, ಮಣಿಅಮ್ಮೈ ಎಂಬ ತಮಗಿಂತ ಸಾಕಷ್ಟು ಕಿರಿಯಳಾದ ಯುವತಿಯನ್ನು ಮದುವೆಯಾದಾಗ, ಇದು ಅಣ್ಣಾದೊರೈ ಹಾಗು ಅವರ ಬೆಂಬಲಿಗರಿಗೆ ಪೆರಿಯರ್ ಜತೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟವು (ಆಗ ಪೆರಿಯರ್ ಗೆ 70 ವರ್ಷ ಹಾಗು ಮಣಿಅಮ್ಮೈಗೆ 30 ವರ್ಷ ವಯಸ್ಸಾಗಿತ್ತು[೧೬]). ತಮ್ಮ ಪಕ್ಷದ ವಿಭಜನೆಯೊಂದಿಗೆ ಅಣ್ಣಾದೊರೈ ತಮ್ಮದೇ ಆದ ಪಕ್ಷವನ್ನು E. V. K. ಸಂಪತ್ ರೊಂದಿಗೆ ಸ್ಥಾಪಿಸಿದರು. (ಇವರು ಪೆರಿಯರ್ ಅವರ ಸೋದರಳಿಯ ಹಾಗು ಅಲ್ಲಿಯವರೆಗೂ ಅವರ ರಾಜಕೀಯ ಉತ್ತರಾಧಿಕಾರಿಯೆಂದು ಪರಿಗಣಿಸಲಾಗುತ್ತಿತ್ತು). ಹೊಸ ಪಕ್ಷವನ್ನು ದ್ರಾವಿಡ ಮುನ್ನೇತ್ರ ಕಳಗಂ ಎಂದು ನಾಮಕರಣ ಮಾಡಲಾಯಿತು.[೧೭] ಅಣ್ಣಾದೊರೈ ಮೇಲ್ವರ್ಗದ ಮುದಲಿಯಾರ್ ಜಾತಿಗೆ ಸೇರಿದವರಾದರೂ, ಕೆಳ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಲು ಸಾಕಷ್ಟು ಹೋರಾಡಿದರು ಜೊತೆಗೆ ಈ ರೀತಿಯಾಗಿ ಶೀಘ್ರವೇ ಜನಪ್ರಿಯ ಬೆಂಬಲವನ್ನು ಗಳಿಸಿಕೊಂಡರು.[೯]

ದ್ರಾವಿಡ ನಾಡು[ಬದಲಾಯಿಸಿ]

ದ್ರಾವಿಡ ಕಳಗಂ ಪಕ್ಷದಲ್ಲಿ ಇರುವಷ್ಟು ದಿವಸ, ಅಣ್ಣಾದೊರೈ, ಪೆರಿಯರ್ ಅವರ ಸ್ವತಂತ್ರ ದ್ರಾವಿಡ ನಾಡಿನ ಬೇಡಿಕೆಗೆ ಬೆಂಬಲವನ್ನು ಸೂಚಿಸಿದ್ದರು. ಇಂತಹ ಸ್ವತಂತ್ರ ರಾಜ್ಯದ ಬೇಡಿಕೆಯು ಡಿಎಂಕೆ ಪಕ್ಷದ ಆರಂಭಿಕ ದಿನಗಳಲ್ಲಿ ಜೀವಂತವಾಗಿತ್ತು. ಇದಕ್ಕೂ ಮುಂಚೆ DMKಗೆ ಸೇರ್ಪಡೆಗೊಳ್ಳುವ ಸಲುವಾಗಿ ಪೆರಿಯರ್ ಅವರ ರಾಜಕೀಯ ಉತ್ತಾರಾಧಿಕಾರತ್ವವವನ್ನು ಕಳೆದುಕೊಂಡ E. V. K. ಸಂಪತ್, ದ್ರಾವಿಡ ನಾಡಿನ ಬಗ್ಗೆ ಬೇಡಿಕೆಯು ಒಂದು ಅವಾಸ್ತವಿಕ ಗುರಿಯೆಂದು ಅಭಿಪ್ರಾಯಪಟ್ಟರು. ಸಂಪತ್ ಅವರ ಕಾಳಜಿಯ ಬಗ್ಗೆ ಅಣ್ಣಾದೊರೈ ಪ್ರತಿಕ್ರಯಿಸುತ್ತಾ ಹೀಗೆ ಹೇಳಿದರು

We must contest more elections, win more seats and that way, win the confidence of the people; and when it is hot, we can strike and strike hard[೧೮]

ರಾಜಕೀಯ ಪ್ರಚಾರಕ್ಕಾಗಿ ಚಲನಚಿತ್ರ ನಟರನ್ನು ಬಳಸಿಕೊಳ್ಳುವುದನ್ನು ಸಂಪತ್ ವಿರೋಧಿಸಿ ಪಕ್ಷದ ಇತರ ಸದಸ್ಯರ ಜತೆ ವಿರೋಧವನ್ನು ಕಟ್ಟಿಕೊಂಡರು. ಅಂತಿಮವಾಗಿ, ಅಣ್ಣಾದೊರೈ ಹಾಗು ದ್ರಾವಿಡ ನಾಡು ಪಕ್ಷದ ಇತರ ಸದಸ್ಯರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ, ಸಂಪತ್ DMKಯನ್ನು ತೊರೆದು ತಮಿಳ್ ನ್ಯಾಷನಲಿಸ್ಟ್ ಪಾರ್ಟಿ ಎಂಬ ತಮ್ಮದೇ ಆದ ಪಕ್ಷವನ್ನು 1961ರಲ್ಲಿ ಸ್ಥಾಪಿಸಿದರು.[೧೬] 1962ರಲ್ಲಿ, ಅಣ್ಣಾದೊರೈ ರಾಜ್ಯ ಸಭೆಯಲ್ಲಿ ದ್ರಾವಿಡರು ಸ್ವಯಂ ನಿರ್ಣಯದ ಹಕ್ಕನ್ನು ಬಯಸುತ್ತಾರೆಂದು ಹೇಳಿದರು ... ದಕ್ಷಿಣ ಭಾರತಕ್ಕೆ ಒಂದು ಸ್ವತಂತ್ರ ರಾಷ್ಟ್ರವನ್ನು ನಾವು ಬಯಸುತ್ತೇವೆ .[೧೯]

ಆದಾಗ್ಯೂ, ಭಾಷಾವಾರು ಆಧಾರದ ಮೇಲೆ ಭಾರತದಲ್ಲಿ ರಾಜ್ಯಗಳ ಪುನರ್‌ಸಂಘಟನೆಯು ನಡೆಯಿತು. ಇದು ಮದ್ರಾಸ್ ಪ್ರಾಂತ್ಯದಿಂದ ಕನ್ನಡ, ತೆಲುಗು ಹಾಗು ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಪ್ರತ್ಯೇಕಿಸುವುದರ ಜೊತೆಗೆ ತಮಿಳು ಪ್ರಾಬಲ್ಯದ ಮದ್ರಾಸ್ ರಾಜ್ಯವನ್ನು ಹಿಂದೆ ಉಳಿಸಿತು. ವಾಸ್ತವತೆಗಳಿಗೆ ಮಣಿದ ಅಣ್ಣಾದೊರೈ ಹಾಗು ಅವರ DMK ಪಕ್ಷವು ದ್ರಾವಿಡರಿಗೆ ಸ್ವತಂತ್ರ ದ್ರಾವಿಡ ನಾಡು ಎಂಬ ಕರೆಯನ್ನು ತಮಿಳರಿಗೆ ಸ್ವತಂತ್ರ ತಮಿಳು ನಾಡು ಎಂಬ ಕರೆಯೊಂದಿಗೆ ಬದಲಾಯಿಸಿಕೊಂಡಿತು. ಇಂಡಿಯನ್ ಯೂನಿಯನ್(ಭಾರತೀಯ ಒಕ್ಕೂಟ)ನಲ್ಲಿ ಉಳಿದುಬಿಟ್ಟರೆ ಅದು ಭಾಷಾ ಪ್ರಾಬಲ್ಯ ಹಾಗು ಆರ್ಥಿಕ ಹಿಂದುಳಿಯುವಿಕೆಯನ್ನು ಒಪ್ಪಿಕೊಂಡಂತೆ ಎಂದು ಅಣ್ಣಾದೊರೈ ಅಭಿಪ್ರಾಯಪಟ್ಟರು. ಆದಾಗ್ಯೂ, ಚೀನಾ-ಭಾರತ ಯುದ್ಧವು ಭಾರತೀಯ ಸಂವಿಧಾನದಲ್ಲಿ ಬದಲಾವಣೆಗಳನ್ನು ಉಂಟುಮಾಡಿತು. ಹದಿನಾರನೇ ತಿದ್ದುಪಡಿಯು (ಇದು ಜನಪ್ರಿಯವಾಗಿ ಪ್ರತ್ಯೇಕತಾವಾದಿ ವಿರೋಧಿ ತಿದ್ದುಪಡಿ ಎಂದು ಜನಪ್ರಿಯವಾಗಿದೆ) ಜನಾಂಗೀಯ ನೀತಿಯನ್ನು ಅನುಸರಿಸುವ ಯಾವುದೇ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧವನ್ನು ಹೇರಿತು. ಭಾರತೀಯ ಸಂಸತ್ತಿನಲ್ಲಿ ಈ ತಿದ್ದುಪಡಿಯನ್ನು ಪ್ರಕಟಿಸಿದಾಗ ಅಣ್ಣಾದೊರೈ ಇದರ ಒಬ್ಬ ಸದಸ್ಯನಾಗಿದ್ದರು. ಅವರು ಈ ತಿದ್ದುಪಡಿಯ ವಿರುದ್ಧ ಭಾವಾವೇಶದಿಂದ ವಾದಿಸುತ್ತಾರೆ, ಆದರೆ ಅಂತಿಮವಾಗಿ ಅದು ಅನುಮೋದನೆ ಪಡೆಯುವುದನ್ನು ತಪ್ಪಿಸುವಲ್ಲಿ ವಿಫಲರಾಗುತ್ತಾರೆ. ಹೊಸ ಸಾಂವಿಧಾನಿಕ ಬದಲಾವಣೆಗಳನ್ನು ಎದುರಿಸಿದ ಅಣ್ಣಾದೊರೈ ಹಾಗು ಅವರ DMK ಪಕ್ಷವು ಸ್ವತಂತ್ರ ತಮಿಳು ನಾಡನ್ನು ರೂಪಿಸುವ ಬೇಡಿಕೆಯನ್ನು ಬದಿಗಿರಿಸುತ್ತದೆ.[೨೦] ನಂತರ ಅಲ್ಲಿಂದ ಅಣ್ಣಾದೊರೈ ಹಾಗು ಅವರ DMK ಪಕ್ಷವು ದಕ್ಷಿಣ ರಾಜ್ಯಗಳ ನಡುವೆ ಉತ್ತಮವಾದ ಸಹಕಾರವನ್ನು ಸಾಧಿಸುವ ಗುರಿಯನ್ನು ಹೊಂದಿದರು ಹಾಗೂತಮಿಳುನಾಡಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಬೇಕೆಂದು ವಾದಿಸಿದರು.[೨೧] ಪಕ್ಷದ ಸ್ಥಿತಿಗತಿಯ ಬಗ್ಗೆ ಅಣ್ಣಾದೊರೈ ಈ ರೀತಿಯಾಗಿ ಹೇಳುತ್ತಾರೆ

To make the Dravidian state a separate state was our ideal. A situation has arisen where we can neither talk nor write about this ideal. Of course we can destroy the party by undertaking to violate the prohibition. But once the party itself is destroyed there will not be any scope for the ideal to exist or spread. That is why we had to give up the ideal.[೧೮]

1953ರಲ್ಲಿ ನಡೆದ ಪ್ರತಿಭಟನೆಗಳು[ಬದಲಾಯಿಸಿ]

1953ರಲ್ಲಿ, ಅಣ್ಣಾದೊರೈ DMKಗೆ ಮೂರು ಪ್ರತಿಭಟನೆಗಳನ್ನು ಕೈಗೊಳ್ಳಲು ನಿರ್ದೇಶಿಸುತ್ತಾರೆ:[೧೬]

ಅಂದಿನ ಭಾರತದ ಪ್ರಧಾನ ಮಂತ್ರಿಯಾಗಿದ್ದ ಜವಾಹರ್ ಲಾಲ್ ನೆಹರು ಮದ್ರಾಸ್ ರಾಜ್ಯದ ನಾಯಕರುಗಳಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಭಾಷೆಯನ್ನು ಬಳಸಿದ್ದರ ವಿರುದ್ಧ ಪ್ರತಿಭಟನೆ.

  • ಅಂದಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ C. ರಾಜಗೋಪಾಲಾಚಾರಿ(ಅಥವಾ ರಾಜಾಜಿ) ವಿರುದ್ಧವಾದ ಪ್ರತಿಭಟನೆ. ಅವರು ಪರಿಚಯಿಸಿದ ಹೊಸ ಶಿಕ್ಷಣ ವ್ಯವಸ್ಥೆಯು ಕುಲ ಕಲ್ವಿ ತಿತ್ತಂ ಎಂಬ ಸಾಂಪ್ರದಾಯಿಕ ಜಾತಿ ಆಧಾರಿತ ಕಸುಬುಗಳನ್ನು ಪರೋಕ್ಷವಾಗಿ ಉತ್ತೇಜಿಸುತ್ತಿತ್ತೆಂದು ಪ್ರತಿಭಟನೆಗೆ ಕರೆ ನೀಡಿದ್ದರು.
  • ದಾಲ್ಮಿಯಾಪುರಂ ಅನ್ನು ಕಲ್ಲಕ್ಕುಡಿ ಎಂಬ ಅದರ ಮೂಲ ಹೆಸರಿನಿಂದ ಮರುನಾಮಕರಣ ಮಾಡುವ ಬೇಡಿಕೆ, ಏಕೆಂದರೆ ದಾಲ್ಮಿಯಾಪುರಂ ಎಂಬ ಹೆಸರು ಉತ್ತರ ಭಾರತದ ಪ್ರಾಬಲ್ಯವನ್ನು ಸಂಕೇತಿಸುತ್ತಿತ್ತು. ಈ ಪ್ರತಿಭಟನೆಯ ಕಾರಣದಿಂದಾಗಿ ಅವರನ್ನು ಅಂತಿಮವಾಗಿ ಮೂರು ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.

ಹಿಂದಿ ವಿರೋಧಿ ಚಳವಳಿಗಳು[ಬದಲಾಯಿಸಿ]

1928ರಲ್ಲಿ ಮೋತಿಲಾಲ್ ನೆಹರು ನೇತೃತ್ವದ ಒಂದು ಸಮಿತಿಯು ಭಾರತದಲ್ಲಿ ಅಧಿಕೃತ ಉದ್ದೇಶಗಳಿಗಾಗಿ ಹಿಂದಿ ಭಾಷೆಯನ್ನು ಬಳಸುವುದು ಯುಕ್ತವೆಂದು ಮೊದಲು ಶಿಫಾರಸು ಮಾಡಿತ್ತು. ಅಂದಿನಿಂದ ಈ ಪ್ರಯತ್ನವನ್ನು ತಮಿಳುನಾಡಿನ ಜನರು ಹಾಗು ರಾಜಕಾರಣಿಗಳು ವಿರೋಧಿಸಿದರು, ಏಕೆಂದರೆ ಹಿಂದಿ ಭಾಷೆಯನ್ನು ಮಾತನಾಡುವ ಸ್ಥಳೀಯ ಉತ್ತರ ಭಾರತೀಯರಿಗೆ ಹೋಲಿಸಿದರೆ ಇದು ಇವರನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ಮಾಡಬಹುದೆಂದು ಪರಿಗಣಿಸಿದರು.[೨೨]

1938ರ ಚಳವಳಿಗಳು[ಬದಲಾಯಿಸಿ]

1938ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ C. ರಾಜಗೋಪಾಲಾಚಾರಿ (ರಾಜಾಜಿ ಎಂದೇ ಜನಪ್ರಿಯವಾಗಿ ಪರಿಚಿತ) ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಬಳಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿತು. ತಮಿಳು ಮುಖಂಡರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದರು. ಅಣ್ಣಾದೊರೈ, ಕವಿ ಭಾರತಿದಾಸನ್ ರನ್ನು ಒಳಗೊಂಡಂತೆ ಇತರ ತಮಿಳು ಅಭಿಮಾನಿಗಳೊಂದಿಗೆ ಮೆರವಣಿಗೆಗಳನ್ನು ಹಮ್ಮಿಕೊಂಡರು. ಅಣ್ಣಾದೊರೈ, 27 ಫೆಬ್ರವರಿ 1938ರಲ್ಲಿ ಕಾಂಚಿಪುರಂನಲ್ಲಿ ನಡೆದ ಮೊದಲ ಹಿಂದಿ ಭಾಷೆ ಹೇರಿಕೆ ವಿರೋಧಿ ಸಮ್ಮೇಳನದಲ್ಲಿ ಭಾಗವಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಇಬ್ಬರು ಸದಸ್ಯರಾದ ತಾಳಮುತ್ತು ಹಾಗು ನಟರಾಜನ್ ಎಂಬುವವರು ಅದೇ ವರ್ಷ ಪೋಲೀಸರ ಥಳಿತದ ಪರಿಣಾಮವಾಗಿ ಮೃತಪಟ್ಟರು. ಭಾರಿ ವಿರೋಧದ ಪರಿಣಾಮವಾಗಿ ಮದ್ರಾಸ್ ಪ್ರಾಂತ್ಯದ ಸರ್ಕಾರವು ಅಂತಿಮವಾಗಿ 1940ರಲ್ಲಿ ಆದೇಶವನ್ನು ಹಿಂತೆಗೆದುಕೊಂಡಿತು.[೨೩]

1965ರ ಮದ್ರಾಸ್ ಹಿಂದಿ ವಿರೋಧಿ ಚಳವಳಿ[ಬದಲಾಯಿಸಿ]

ಭಾರತವು 1950ರಲ್ಲಿ ತನ್ನದೇ ಆದ ಸಂವಿಧಾನದೊಂದಿಗೆ ಗಣತಂತ್ರದ ರಾಷ್ಟ್ರವಾದಾಗ, ಸಂವಿಧಾನವು ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ನೀಡಿತು, ಇದು 15 ವರ್ಷಗಳ ನಂತರ 1965ರಲ್ಲಿ ಅಧಿಕೃತ ಸ್ಥಾನಮಾನವನ್ನು ಪಡೆಯಿತು. ಈ ಕ್ರಮದ ಬಗ್ಗೆ ತಮಿಳುನಾಡಿನಲ್ಲಿ ವಿದ್ಯಾರ್ಥಿಗಳು ಬಹಳ ತಳಮಳ ಅನುಭವಿಸಿದರು.[೨೨] ಭಾರತದಲ್ಲಿ ಹಿಂದಿ ಭಾಷೆಯನ್ನು ಅಧಿಕೃತವಾಗಿ ಮಾತನಾಡುವ ಬಗ್ಗೆ ಅಣ್ಣಾದೊರೈ ಟೀಕಿಸಿದರು. ಹಿಂದಿ ಭಾಷೆಯನ್ನು ಬಹುಸಂಖ್ಯಾತ ಜನರು ಮಾತನಾಡುವುದರಿಂದ ಇದನ್ನು ಸಾಮಾನ್ಯ ಭಾಷೆಯಾಗಿ ಬಳಸಬೇಕೆಂದು ಪ್ರತಿಪಾದಿಸಲಾಗಿದೆ. ಹೀಗಾದರೆ ನಾವು ಹುಲಿಯನ್ನೇಕೆ ರಾಷ್ಟ್ರೀಯ ಪ್ರಾಣಿಯನ್ನಾಗಿ ಪರಿಗಣಿಸಬೇಕು ಬದಲಿಗೆ ಅಸಂಖ್ಯಾತ ಪ್ರಮಾಣದಲ್ಲಿರುವ ಇಲಿಗಳನ್ನು ನಾವು ರಾಷ್ಟ್ರೀಯ ಪ್ರಾಣಿ ಎಂದೇಕೆ ಕರೆಯುವುದಿಲ್ಲ? ಅಥವಾ ನವಿಲನ್ನು ನಮ್ಮ ರಾಷ್ಟ್ರೀಯ ಪಕ್ಷಿಯೆಂದು ಏಕೆ ಪರಿಗಣಿಸಬೇಕು? ಬದಲಿಗೆ ಸರ್ವತ್ರವಾಗಿರುವ ಕಾಗೆಯನ್ನೇಕೆ ರಾಷ್ಟ್ರೀಯ ಪಕ್ಷಿಯೆಂದು ಪರಿಗಣಿಸುವುದಿಲ್ಲ .[೨೪] ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮುಂದುವರಿದ ಬೆದರಿಕೆಯಿಂದಾಗಿ, DMK ಪಕ್ಷವು ಆಗಸ್ಟ್ 1960ರಲ್ಲಿ ಅಣ್ಣಾದೊರೈ ನೇತೃತ್ವದಲ್ಲಿ, ಚೆನ್ನೈನ ಕೋಡಂಬಾಕ್ಕಂನಲ್ಲಿ ಹಿಂದಿ ಭಾಷಾ ಹೇರಿಕೆ ವಿರುದ್ಧ ಒಂದು ಹೊರಾಂಗಣ ಸಮಾವೇಶವನ್ನು ಏರ್ಪಡಿಸಿತು. ಅವರು ಪ್ರಮುಖ ಸದಸ್ಯರಿಗೆ ಕಪ್ಪು ಧ್ವಜಗಳನ್ನು ನೀಡಿ ಭಾರತದ ರಾಷ್ಟ್ರಪತಿ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅದನ್ನು ಪ್ರದರ್ಶಿಸಬೇಕೆಂದು ಕರೆಯಿತ್ತರು. ಪ್ರತಿಭಟನೆಗಳು ಭುಗಿಲೇಳುವುದನ್ನು ಗಮನಿಸಿದ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು, ಹಿಂದಿಯೇತರ ಜನತೆ ಬಯಸುವ ತನಕ, ಇಂಗ್ಲಿಷ್ ಭಾಷೆಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮುಂದುವರೆಸಬಹುದೆಂದು ಸಂಸತ್ತಿನಲ್ಲಿ ಭರವಸೆ ನೀಡಿದರು. ಅಂತಿಮವಾಗಿ DMK ಪಕ್ಷವು ಕಪ್ಪು ಧ್ವಜಗಳನ್ನು ಪ್ರದರ್ಶಿಸುವ ಯೋಜನೆಯನ್ನು ಕೈಬಿಟ್ಟಿತು ಹಾಗು ಅಣ್ಣಾದೊರೈ ಈ ಭರವಸೆಯನ್ನು ಸಂಯೋಜಿಸುವ ಒಂದು ಸಾಂವಿಧಾನಿಕ ತಿದ್ದುಪಡಿಯನ್ನು ತರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.[೧೬]

ಯಾವುದೇ ಸಾಂವಿಧಾನಿಕ ತಿದ್ದುಪಡಿ ಮಾಡದೇ ಇರುವುದರಿಂದ, 26 ಜನವರಿ 1965, ಭಾರತದ 15ನೇ ಗಣತಂತ್ರದ ದಿವಸ ಹಾಗೂ ಸಂವಿಧಾನದ ದಿವಸವು ಮೂಲಭೂತವಾಗಿ ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಜಾರಿಗೆ ತಂದಿದ್ದರಿಂದ ಅದನ್ನು ಶೋಕಾಚರಣೆಯ ದಿನವೆಂದು ಘೋಷಿಸಿದರು. ಈ ಕಾರ್ಯವನ್ನು ಅಂದಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಭಕ್ತವತ್ಸಲಂ ಪಾಷಂಡಿತನವೆಂದು ವಿರೋಧಿಸಿದರು. ಆದ್ದರಿಂದ ಅಣ್ಣಾದೊರೈ, ತಮ್ಮ ಪಕ್ಷವನ್ನು ಪ್ರತ್ಯೇಕತಾವಾದಿ ಪಕ್ಷವೆಂಬ ಅಭಿಪ್ರಾಯವನ್ನು ತೊಡೆದುಹಾಕಲು 24 ಜನವರಿಯನ್ನು ಶೋಕಾಚರಣೆಯ ದಿನವನ್ನಾಗಿ ಘೋಷಿಸಿದರು. ಅವರು ಪ್ರತಿಭಟನೆಯ ಘೋಷಣಾವಾಕ್ಯವನ್ನೂ ಸಹ ಹಿಂದಿ ಭಾಷೆಗೆ ಧಿಕ್ಕಾರ; ಗಣತಂತ್ರ ದೀರ್ಘಕಾಲ ಉಳಿಯಲಿ ಎಂದು ಬದಲಾಯಿಸಿದರು. ಆದಾಗ್ಯೂ, ಜನವರಿ 26ರಂದು ಹಿಂಸಾಚಾರವು ಭುಗಿಲೆದ್ದಿತು, ಆರಂಭದಲ್ಲಿ ಇದು ಮಧುರೈನಲ್ಲಿ ಆರಂಭಗೊಂಡು ಕೆಲವೇ ದಿನಗಳಲ್ಲಿ ರಾಜ್ಯಾದಾದ್ಯಂತ ವ್ಯಾಪಿಸಿತು.[೨೨] ಮಾನವಶಾಸ್ತ್ರ, ಸರ್ಕಾರ ಹಾಗು ಏಶಿಯನ್ ಅಧ್ಯಯನಗಳ ಪ್ರಾಧ್ಯಾಪಕ ರಾಬರ್ಟ್ ಹಾರ್ಡ್ ಗ್ರೇವ್ ಜೂ, ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸೂಚಿಸಿರುವ ರೀತಿಯಲ್ಲಿ ಗಲಭೆಗಳಿಗೆ ಕಾರಣವಾದ ಅಂಶಗಳಿಗೆ, DMK ಅಥವಾ ಎಡಪಂಥೀಯರು ಅಥವಾ ಕೈಗಾರಿಕೋದ್ಯಮಿಗಳು ಪ್ರಮುಖವಾಗಿ ಪ್ರಚೋದನೆ ನೀಡಿಲ್ಲವೆಂದು ಹೇಳಿದರು. ಆದರೆ ರಾಜ್ಯದ ಜನತೆಯಲ್ಲಿ ಬೇರೂರಿದ ನಿಜವಾದ ಹತಾಶೆಗಳು ಹಾಗು ಅತೃಪ್ತಿಗಳು ಕಾರಣವೆಂದು ಹೇಳಿದರು.[೨೨]

ಹಿಂಸಾಚಾರವು ಅಧಿಕಗೊಳ್ಳುತ್ತಿದ್ದಂತೆ, ಅಣ್ಣಾದೊರೈ ಪ್ರತಿಭಟನೆಗಳನ್ನು ಕೈಬಿಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ, ಆದರೆ ಕರುಣಾನಿಧಿಯಂತಹ ಕೆಲವು DMK ನಾಯಕರುಗಳು ಪ್ರತಿಭಟನೆಗಳನ್ನು ಮುಂದುವರೆಸುತ್ತಾರೆ.[೨೨] ಆದಾಗ್ಯೂ, ಪ್ರತಿಭಟನೆಗೆ ಪ್ರಚೋದನೆ ನೀಡಿದ ಕಾರಣಕ್ಕೆ ಅಣ್ಣಾದೊರೈ ಅವರನ್ನು ಬಂಧಿಸಲಾಗುತ್ತದೆ.[೧೬] ಆದಾಗ್ಯೂ ಹಿಂಸಾಚಾರವು ನೇರವಾಗಿ DMK ಪಕ್ಷದಿಂದ ಪ್ರಚೋದನೆಯನ್ನು ಪಡೆದಿರುವುದಿಲ್ಲ,[೨೨] ಸ್ವತಃ ಪ್ರತಿಭಟನೆಯು 1967ರ ಚುನಾವಣೆಗಳನ್ನು ಗೆಲ್ಲಲು DMKಗೆ ನೆರವಾಗುತ್ತದೆ ಹಾಗು ಅಣ್ಣಾದೊರೈ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ.[೨೫]

ಸಾಹಿತ್ಯಕ ಕೊಡುಗೆಗಳು[ಬದಲಾಯಿಸಿ]

ಅಣ್ಣಾದೊರೈ ಅವರನ್ನು ಅವರ ಕಾಲದ ಅತ್ಯುತ್ತಮ ತಮಿಳು ಭಾಷಾ ವಾಗ್ಮಿ ಎಂದು ಹೇಳಲಾಗುತ್ತದೆ.[೩] ತಮಿಳು ಸಾರ್ವಜನಿಕ ಭಾಷಣಗಳಲ್ಲಿ ರೂಪಕಗಳು ಹಾಗು ಆದಿಪ್ರಾಸಗಳನ್ನು ಬಳಸುವ ವಿಶಿಷ್ಟ ಶೈಲಿಯನ್ನು ಮಾತನಾಡುವ ಹಾಗು ಬರವಣಿಗೆ ಭಾಷೆ ಎರಡರಲ್ಲೂ ಅಭಿವೃದ್ದಿಪಡಿಸಿದರು.

ಇವರು ಸಾಹಿತ್ಯದಲ್ಲಿ ರಾಜಕೀಯ ಕಥಾವಸ್ತುವನ್ನು ಒಳಗೊಂಡ ಹಲವಾರು ಕಾದಂಬರಿಗಳು, ಸಣ್ಣಕಥೆಗಳು ಹಾಗು ನಾಟಕಗಳನ್ನು ಪ್ರಕಟಿಸಿದರು.[೩] ದ್ರಾವಿಡರ್ ಕಳಗಂ ಪಕ್ಷದಲ್ಲಿರುವ ಸಂದರ್ಭದಲ್ಲಿ ಖುದ್ದು ಕೆಲವು ನಾಟಕಗಳಲ್ಲಿ ಅಭಿನಯಿಸಿದರು.[೨೬] ದ್ರಾವಿಡ ರಾಜಕಾರಣದ ಪ್ರಚಾರಕ್ಕೆ ಚಲನಚಿತ್ರ ಮಾಧ್ಯಮವನ್ನು ಒಂದು ಪ್ರಮುಖ ಸಾಧನವಾಗಿ ಪರಿಚಯಿಸಿದರು.[೨೭] ಒಟ್ಟಾರೆಯಾಗಿ ಅಣ್ಣಾದೊರೈ ಆರು ಚಲನಚಿತ್ರಗಳಿಗೆ ಚಿತ್ರಕಥೆಯನ್ನು ಬರೆದರು.[೨೬]

N. S. ಕೃಷ್ಣನ್ ಅಭಿನಯದ ಅವರ ಮೊದಲ ಚಲನಚಿತ್ರ ನಲ್ಲತಂಬಿ (ಒಳ್ಳೆಯ ಸಹೋದರ, 1948)ಸಹಕಾರ ಕೃಷಿ ಹಾಗು ಜಮೀನ್ದಾರಿ ಪದ್ಧತಿಯ ರದ್ದತಿಗೆ ಉತ್ತೇಜನ ನೀಡಿತು.[೨೬] ಅವರ ಕಾದಂಬರಿಗಳಾದ ವೆಲೈಕಾರಿ (ಕೆಲಸದವಳು, 1949) ಹಾಗು ಒರ್ ಇರುವು ಗಳು ನಂತರದಲ್ಲಿ ಚಲನಚಿತ್ರಗಳಾದವು, ಇದು ದ್ರಾವಿಡ ರಾಜಕಾರಣದ ಪ್ರಚಾರ ಕುರುಹುಗಳನ್ನು ಹೊಂದಿತ್ತು.[೨೮] ವೆಲೈಕಾರಿ ಯ ಬಗ್ಗೆ ಮಾತನಾಡುತ್ತಾ, ಅಣ್ಣಾದೊರೈ, ವೆಲೈಕಾರಿ ಚಲನಚಿತ್ರವು

made it clear that greed and avarice of the rich did not pay in the long run.[...] Some of the elementary principles of socialism and stressed that we should depend upon our own labor for our progress and well being and not some unknown factor.[೨೬]

ಜವಾಹರ್ ಲಾಲ್ ನೆಹರು ಹಾಗು ಗಾಂಧಿ ಜೊತೆ ಪರಂಪರಾನುಗತವಾಗಿ ಒಂದಾಗಿರುವ ದಮನಕಾರಿ ಭೂಮಾಲೀಕರ ವಿರುದ್ಧದ ನೇರ ಉಲ್ಲೇಖಗಳೆಂದು ಹೇಳುತ್ತಾರೆ.[೧೩] ಅವರ ಚಲನಚಿತ್ರಗಳು ಸಾಮಾನ್ಯವಾಗಿ ದ್ರಾವಿಡ ರಾಜಕಾರಣದ ಸಿದ್ಧಾಂತಗಳಾದಬ್ರಾಹ್ಮಣ ವಿರೋಧಿ ಹಾಗು ಕಾಂಗ್ರೆಸ್ ವಿರೋಧಿ ಸಂದೇಶಗಳ ಅಂಶಗಳನ್ನು ಒಳಗೊಂಡಿರುತ್ತಿದ್ದವು.[೨೮] ಆರಂಭಿಕ ವರ್ಷಗಳಲ್ಲಿ ಅಣ್ಣಾ ಅವರ ಜೊತೆ ಕೆಲಸ ಮಾಡಿದ ರಂಗಭೂಮಿ ಹಾಗು ಚಲನಚಿತ್ರದ ಜನಪ್ರಿಯ ನಟರುಗಳೆಂದರೆ, D. V. ನಾರಾಯಣಸಾಮಿ, K. R. ರಾಮಸಾಮಿ, N. S. ಕೃಷ್ಣನ್, S. S. ರಾಜೇಂದ್ರನ್, ಶಿವಾಜಿ ಗಣೇಶನ್ ಹಾಗು M. G. ರಾಮಚಂದ್ರನ್.[೧೬]

ಕೆಲವು ಪುಸ್ತಕಗಳು ವಿವಾದಾತ್ಮಕವಾಗಿಯೂ ಸಹ ಇದ್ದವು, ಉದಾಹರಣೆಗೆ "ಆರ್ಯ ಮಾಯೈ" (ಆರ್ಯನ್ ಮಾಯೆ), ಇದರಲ್ಲಿ ಅವರು ಬ್ರಾಹ್ಮಣ/ಆರ್ಯನ್ ಸಂಯೋಜನೆ ಬಗ್ಗೆ ಕಟುವಾಗಿ ವಿಮರ್ಶಿಸುವುದರ ಜೊತೆಗೆ ಅವರನ್ನು ನಿಕೃಷ್ಟವಾಗಿ ಚಿತ್ರಿಸುತ್ತಾರೆ. ಅವರ ಈ ನಿಯಮಭಂಗಕ್ಕೆ 700 ರೂಪಾಯಿ ದಂಡ ವಿಧಿಸುವುದರ[೨೯] ಜೊತೆಗೆ ಸೆರೆಮನೆಗೂ ಸಹ ಕಳುಹಿಸಲಾಯಿತು.[೧೬]

ಅವರ ಕೆಲವು ಜನಪ್ರಿಯ ಕೃತಿಗಳೆಂದರೆ ಅಣ್ಣಾವಿನ್ ಸತ್ತಸಬೈ ಸೋರ್ಪೊಲಿವುಕಳ್ (1960ರ ರಾಜ್ಯ ಶಾಸಕಾಂಗದಲ್ಲಿ ಅಣ್ಣಾ ಅವರ ಭಾಷಣಗಳು), ಇಲಾತ್ಚಿಯ ವರಲರು (ತತ್ವಗಳ ಇತಿಹಾಸ 1948), ವಾಲ್ಕಯಿಪ್ ಪುಯಲ್ (ಜೀವನದ ಬಿರುಗಾಳಿ, 1948) ಹಾಗು ರಂಕೊನ್ ರಾತ (ರಂಗೂನ್‌ನ ರಾಧ).[೩] ಅವರ ಕೃತಿ ಕಂಬರಸಂ, ಕಂಬನ್ ರಾಮಾಯಣವನ್ನು ಟೀಕಿಸುತ್ತದೆ.[೩೦] ಅವರ ಕಾದಂಬರಿಗಳಾದ ಕಪೋಥಿಪುರ ಕತ್ಹಲ್ (ಕತ್ತಲೆಯ ನಗರದಲ್ಲಿ ಪ್ರೀತಿ), ಪಾರ್ವತಿ B.A., ಕಳಿಂಗ ರಾಣಿ (ಕಳಿಂಗದ ರಾಣಿ) ಹಾಗು ಪವಯಿನ್ ಪಯಣಂ (ಯುವತಿಯ ಪ್ರವಾಸಗಳು) ರಾಜಕೀಯ ಪ್ರಚಾರದ ಅಂಶಗಳನ್ನು ಒಳಗೊಂಡಿದ್ದವು.[೩೦]

ದ್ರಾವಿಡ ಮುನ್ನೇತ್ರ ಕಳಗಂ ಚಲನಚಿತ್ರಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸೆನ್ಸರ್‌ಶಿಪ್ ಈ ಪ್ರಕ್ರಿಯೆಯನ್ನು ದುರ್ಬಲಗೊಳಿಸಿತು. ಸೆನ್ಸರ್‌ಶಿಪ್‌ಗಳಿಂದ ತಪ್ಪಿಸಿಕೊಳ್ಳಲು, ಡಿಎಂಕೆ ಪಕ್ಷದ ಚಲನಚಿತ್ರಗಳು ಅಣ್ಣಾದೊರೈ ಅವರ ಜನಪ್ರಿಯ ಹೆಸರು ಅಣ್ಣಾ ವನ್ನು ಬಳಸಿಕೊಳ್ಳುತ್ತಿದ್ದವು, ಇದು ತಮಿಳಿನಲ್ಲಿ ಶ್ಲೇಷೆಯಾಗಿ ಹಿರಿಯ ಸಹೋದರ ಎಂಬ ಅರ್ಥವನ್ನು ನೀಡುತ್ತದೆ. ಪರದೆಯ ಮೇಲೆ ಅಣ್ಣಾ ಅವರ ಬಗ್ಗೆ ಪ್ರಶಂಸಿಸಿದಾಗ, ಜನರು ಚಪ್ಪಾಳೆಯೊಂದಿಗೆ ಅದನ್ನು ಸ್ವಾಗತಿಸುತ್ತಿದ್ದರು.[೨೬]

ಅಲಂಕರಿಸಿದ ಹುದ್ದೆಗಳು[ಬದಲಾಯಿಸಿ]

DMKಯ ಪ್ರಾಂತೀಯ ಸಭೆಯನ್ನು ಮೇ 1956ರಲ್ಲಿ ತಿರುಚಿರಾಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಣ್ಣಾದೊರೈ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದರು ಹಾಗು ಅವರ ಬದಲಿಗೆ ಆ ಸ್ಥಾನಕ್ಕೆ ನೆಡುನ್ಚೆಳಿಯನ್ ಆಯ್ಕೆಯಾದರು. ತಿರುಚಿರಾಪಲ್ಲಿ ಸಭೆಯಲ್ಲಿ ಪಕ್ಷವು 1957ರಲ್ಲಿ ನಡೆದ ಸ್ವತಂತ್ರ ಭಾರತದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು. DMK ಪಕ್ಷವು 15 ವಿಧಾನಸಭೆ ಸ್ಥಾನಗಳಲ್ಲಿ ಹಾಗು ಎರಡು ಸಂಸತ್ ಸ್ಥಾನಗಳಲ್ಲಿ ಜಯಗಳಿಸಿತು.[೧೬] ಅಣ್ಣಾ ಮದ್ರಾಸ್ ವಿಧಾನಸಭೆಗೆ ಮೊದಲ ಬಾರಿಗೆ ತಮ್ಮ ತವರು ಕ್ಷೇತ್ರ ಕಾಂಚಿಪುರಂನಿಂದ[೧೬] ಆಯ್ಕೆಯಾದರು.[೩] ಆ ಚುನಾವಣೆಯಲ್ಲಿ, DMK 15 ಸೀಟುಗಳನ್ನು ಗೆದ್ದುಕೊಂಡಿತು ಹಾಗು ಅಣ್ಣಾದೊರೈ ರಾಜ್ಯದಲ್ಲಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದರು.[೧] 1962ರಲ್ಲಿ ಕಾಂಗ್ರೆಸ್ ಹೊರತುಪಡಿಸಿ DMK ಒಂದು ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದರ ಜೊತೆಗೆ ಅಸೆಂಬ್ಲಿಯಲ್ಲಿ 50 ಸೀಟುಗಳಲ್ಲಿ ಜಯಗಳಿಸಿತು.[೧] ಅಣ್ಣಾದೊರೈ ಖುದ್ದು ಚುನಾವಣೆಯಲ್ಲಿ ಸೋತರೂ ಸಹ, ಮೇಲ್ಮನೆಗೆ (ರಾಜ್ಯ ಸಭೆ) ಸಂಸತ್ ಸದಸ್ಯರಾಗಿ ಆಯ್ಕೆಯಾದರು.[೧][೩]

ಮುಖ್ಯಮಂತ್ರಿಯಾಗಿ[ಬದಲಾಯಿಸಿ]

1967ರಲ್ಲಿ, ಕಾಂಗ್ರೆಸ್ ಪ್ರತಿ ಪಕ್ಷಗಳ ವಿರುದ್ಧ ಒಂಬತ್ತು ರಾಜ್ಯಗಳಲ್ಲಿ ಸೋಲನ್ನು ಅನುಭವಿಸಿತು. ಆದರೆ ಕೇವಲ ಮದ್ರಾಸ್ ರಾಜ್ಯದಲ್ಲಿ ಏಕೈಕ ಕಾಂಗ್ರೆಸ್ಸೇತರ ಪಕ್ಷವು ಬಹುಮತವನ್ನು ಸಾಧಿಸಿತು.[೩೧] 1967ರ ಚುನಾವಣಾ ಜಯವು ಚುನಾವಣಾ ಐಕ್ಯವೆಂದು ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಖ್ಯಾತಿಯನ್ನು ಗಳಿಸಿತು. ಇದು ವಿರೋಧ ಪಕ್ಷಗಳ ಮತಗಳು ಹಂಚಿಹೋಗುವುದನ್ನು ತಪ್ಪಿಸುವುದಾಗಿತ್ತು. ರಾಜಗೋಪಾಲಚಾರಿ, ಕಾಂಗ್ರೆಸ್ ಪಕ್ಷದ ಮಾಜಿ ಹಿರಿಯ ನಾಯಕ ಆ ಹೊತ್ತಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮದೇ ಆದ ಬಲಪಂಥೀಯ ಪಕ್ಷ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ಇವರು ಕಾಂಗ್ರೆಸ್‌ ವಿರುದ್ಧ ಒಂದುಗೂಡಲು ಪ್ರತಿಪಕ್ಷಗಳಲ್ಲಿ ಐಕ್ಯತೆಯನ್ನು ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.[೩೨] ಆ ಸಂದರ್ಭದಲ್ಲಿ, ಅವರ ಸಚಿವ ಸಂಪುಟವು ರಾಷ್ಟ್ರದಲ್ಲಿ ಬಹಳ ಚಿಕ್ಕದಾಗಿತ್ತು.[೩೩]

ಅಣ್ಣಾದೊರೈ ರಾಷ್ಟ್ರದಲ್ಲಿ ಮೊದಲ ಬಾರಿಗೆ ಆತ್ಮ ಗೌರವದ ಮದುವೆಗಳನ್ನು ಕಾನೂನುಬದ್ಧಗೊಳಿಸಿದರು. ಇಂತಹ ಮದುವೆಗಳ ಆಚರಣೆಗಳಲ್ಲಿ ಪುರೋಹಿತರು ಇರುತ್ತಿರಲಿಲ್ಲ ಹಾಗು ಈ ರೀತಿಯಾಗಿ ಮದುವೆಯನ್ನು ನಡೆಸಲು ಬ್ರಾಹ್ಮಣರ ಅಗತ್ಯವಿರುತ್ತಿರಲಿಲ್ಲ.[೩೪] ಆತ್ಮ ಗೌರವದ ಮದುವೆಗಳು ಪೆರಿಯರ್ ಅವರ ಕಲ್ಪನೆಯ ಕೂಸಾಗಿತ್ತು, ಅವರು ಸಾಂಪ್ರದಾಯಿಕ ಮದುವೆಗಳು ಕೇವಲ ಹಣಕಾಸಿನ ಏರ್ಪಾಡುಗಳಾಗಿರುತ್ತಿದ್ದವು ಹಾಗು ಸಾಮಾನ್ಯವಾಗಿ ವರದಕ್ಷಿಣೆ ಮೂಲಕ ಹೆಚ್ಚಿನ ಸಾಲಕ್ಕೆ ಕಾರಣವಾಗುತ್ತಿದ್ದವು ಎಂದು ಪರಿಗಣಿಸಿದ್ದರು. ಆತ್ಮ ಗೌರವದ ಮದುವೆಗಳು, ಅವರ ಪ್ರಕಾರ ಅಂತರ್ಜಾತಿ ವಿವಾಹಗಳಿಗೆ ಉತ್ತೇಜನವನ್ನು ನೀಡುತ್ತಿದ್ದವು ಹಾಗೂ ಇದು ಗೊತ್ತುಮಾಡಿದ ವಿವಾಹ ವ್ಯವಸ್ಥೆಗೆ ಬದಲಾಗಿ ಪ್ರೇಮ ವಿವಾಹಕ್ಕೆ ಕಾರಣವಾಗುತ್ತಿದ್ದವು.[೩೫] ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆಯಲ್ಲಿ ಅನುದಾನದ(ಸಬ್ಸಿಡಿ)ದರದಲ್ಲಿ ಅಕ್ಕಿವಿತರಣೆಯನ್ನು ಕಾರ್ಯರೂಪಕ್ಕೆ ತಂದವರಲ್ಲಿ ಅಣ್ಣಾದೊರೈ ಮೊದಲಿಗರು. ಅವರು ಒಂದು ರೂಪಾಯಿಗೆ ಒಂದು ಅಳತೆ ಅಕ್ಕಿ ಕೊಡುವ ಭರವಸೆ ನೀಡಿದರು, ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಇದನ್ನು ಕಾರ್ಯರೂಪಕ್ಕೆ ತಂದರು, ಆದರೆ ಇದನ್ನು ನಂತರದಲ್ಲಿ ಹಿಂದಕ್ಕೆ ಪಡೆಯಬೇಕಾಯಿತು.

  ಅನುದಾನಿತ ದರದಲ್ಲಿ ಅಕ್ಕಿ ವಿತರಣೆಯನ್ನು ಇಂದಿಗೂ ತಮಿಳುನಾಡಿನಲ್ಲಿ ಚುನಾವಣಾ ಭರವಸೆಯಾಗಿ ಬಳಸಲಾಗುತ್ತದೆ.[೩೬]

ಅಣ್ಣಾದೊರೈ ಸರ್ಕಾರವು ಮದ್ರಾಸ್ ರಾಜ್ಯವನ್ನು ತಮಿಳುನಾಡೆಂದು ಮರುನಾಮಕರಣ ಮಾಡಿತು. ಸ್ವತಃ ಹೆಸರಿನ ಬದಲಾವಣೆಯನ್ನು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ (ರಾಜ್ಯ ಸಭೆ) ಮೊದಲ ಬಾರಿಗೆ ಭೂಪೇಶ್ ಗುಪ್ತ ಎಂಬುವವರು ಮಂಡಿಸಿದರು, ಇವರು ಪಶ್ಚಿಮ ಬಂಗಾಳದ ಒಬ್ಬ ಕಮ್ಯೂನಿಸ್ಟ್ MP, ಆದರೆ ನಂತರ ಸೋಲಾಯಿತು.[೧೪] ಮುಖ್ಯಮಂತ್ರಿ ಅಣ್ಣಾದೊರೈ ನೇತೃತ್ವದಲ್ಲಿ ರಾಜ್ಯದ ಶಾಸನ ಸಭೆಯು ರಾಜ್ಯಗಳ ಹೆಸರನ್ನು ಮರು ನಾಮಕರಣ ಮಾಡುವ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಿತು.[೧೨]

ಅಣ್ಣಾದೊರೈ ಸರ್ಕಾರದ ಮತ್ತೊಂದು ಪ್ರಮುಖ ಸಾಧನೆಯೆಂದರೆ ಅಂದಿಗೆ ಜನಪ್ರಿಯವಾಗಿದ್ದ ಮೂರು ಭಾಷಾ ಸೂತ್ರಗಳಿಗೆ ಬದಲಾಗಿ ಎರಡು ಭಾಷಾ ನೀತಿ ಯ ಪರಿಚಯ.[೧೨] ಮೂರು ಭಾಷಾ ಸೂತ್ರಗಳನ್ನು ನೆರೆಯ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗು ಕೇರಳದಲ್ಲಿ ಜಾರಿಗೊಳಿಸಲಾಗಿತ್ತು, ಇದರಂತೆ ವಿದ್ಯಾರ್ಥಿಗಳು ಮೂರು ಭಾಷೆಗಳ ಅಭ್ಯಾಸ ಮಾಡಬೇಕಿತ್ತು: ಪ್ರಾದೇಶಿಕ ಭಾಷೆ, ಆಂಗ್ಲ ಭಾಷೆ ಹಾಗು ಹಿಂದಿ ಭಾಷೆ.[೨೨] ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 3 ಜನವರಿ 1968ರಲ್ಲಿ ಎರಡನೇ ವಿಶ್ವ ತಮಿಳು ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿತ್ತು.[೧೬] ಆದಾಗ್ಯೂ, ತಮಿಳು ಸಮ್ಮೇಳನದ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದಾಗ, ಅಂಚೆ ಚೀಟಿಯು ತಮಿಳಿಗೆ ಬದಲಾಗಿ ಹಿಂದಿ ಭಾಷೆಯಲ್ಲಿ ಅಚ್ಚಾಗಿದ್ದ ಬಗ್ಗೆ ಅಣ್ಣಾದೊರೈ ಅತೃಪ್ತಿಯನ್ನು ವ್ಯಕ್ತಪಡಿಸಿದರು.[೩೭] ಸಾರ್ವಜನಿಕ ಕಛೇರಿಗಳು ಹಾಗು ಕಟ್ಟಡಗಳಲ್ಲಿರುವ ದೇವರ ಚಿತ್ರಗಳು ಹಾಗು ಧಾರ್ಮಿಕ ಸಂಕೇತಗಳನ್ನು ತೆಗೆದು ಹಾಕುವಂತೆ ಅಣ್ಣಾದೊರೈ ಆದೇಶವನ್ನು ಹೊರಡಿಸಿದರು.[೧೬] ಯೇಲ್ ವಿಶ್ವವಿದ್ಯಾಲಯದ ಚುಬ್ಬ್ ಫೆಲೋಶಿಪ್ ಕಾರ್ಯಕ್ರಮದ ಆಮಂತ್ರಿತರಾಗಿ ವಿಶ್ವ ಪ್ರವಾಸವನ್ನು ಕೈಗೊಂಡರು ಹಾಗು ಏಪ್ರಿಲ್-ಮೇ 1968ರಲ್ಲಿ U.S.A. ಸ್ಟೇಟ್ ಡಿಪಾರ್ಟ್ಮೆಂಟ್ (ವಿದೇಶಾಂಗ ಇಲಾಖೆ) ಅತಿಥಿಯೂ ಸಹ ಆಗಿದ್ದರು. ಯೇಲ್ ವಿಶ್ವವಿದ್ಯಾಲಯದಲ್ಲಿ ಅವರಿಗೆ ಚುಬ್ಬ್ ಫೆಲೋಶಿಪ್ ನೀಡಿ ಗೌರವಿಸಲಾಯಿತು. ಈ ಗೌರವವನ್ನು ಪಡೆದ ಅಮೆರಿಕದವರಲ್ಲದ ವ್ಯಕ್ತಿಗಳಲ್ಲಿ ಮೊದಲಿಗರು.[೧೬] ಅದೇ ವರ್ಷ ಅವರಿಗೆ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಯಿತು.[೧]

ಮರಣ[ಬದಲಾಯಿಸಿ]

ಅಣ್ಣಾದೊರೈ ಅಧಿಕಾರ ವಹಿಸಿಕೊಂಡ ಎರಡೇ ವರ್ಷಕ್ಕೆ ಸಾವನ್ನಪ್ಪಿದರು. ಕ್ಯಾನ್ಸರ್ ನಿಂದಾಗಿ ಅವರ ಆರೋಗ್ಯವು ಕ್ಷೀಣಿಸುತ್ತಿತ್ತು. ಉತ್ತಮ ವೈದ್ಯಕೀಯ ಉಪಚಾರವೂ ದೊರೆತರೂ ಸಹ 3 ಫೆಬ್ರವರಿ 1969ರಲ್ಲಿ ಅವರು ಕಾಯಿಲೆಯಿಂದ ನಿಧನರಾದರು.[೧೬] ಅವರ ಈ ಕಾಯಿಲೆಗೆ ತಂಬಾಕು ಜಗಿಯುವ ಅಭ್ಯಾಸ ಕಾರಣವೆಂದು ಹೇಳಲಾಗುತ್ತದೆ.[೩೩] ದಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವಂತೆ ಅವರ ಶವಸಂಸ್ಕಾರದಲ್ಲಿ ಅತ್ಯಧಿಕ ಸಂಖ್ಯೆಯ ಜನತೆ ಪಾಲ್ಗೊಂಡಿದ್ದರು.[೩೮] ಶವಸಂಸ್ಕಾರದಲ್ಲಿ ಸುಮಾರು 15 ದಶಲಕ್ಷ ಜನರು ಪಾಲ್ಗೊಂಡಿದ್ದರೆಂದು ಅಂದಾಜಿಸಲಾಗುತ್ತದೆ.[೩೯] ಅವರ ದೇಹವನ್ನು ಮರೀನ ಬೀಚ್ ನ ಉತ್ತರ ದಿಕ್ಕಿನಲ್ಲಿ ಸಮಾಧಿ ಮಾಡಲಾಯಿತು.ಈಗ ಇದನ್ನು ಈಗ ಅಣ್ಣಾ ಸ್ಕ್ವೇರ್ ಎಂದು ಕರೆಯಲಾಗುತ್ತದೆ.[೪೦]

ಪರಂಪರೆ[ಬದಲಾಯಿಸಿ]

ಅಣ್ಣಾ ವಿಶ್ವವಿದ್ಯಾಲಯದ ಗಿಂಡಿ ಕ್ಯಾಂಪಸ್‌ನ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿರುವ ಅಣ್ಣಾದೊರೈ ಪ್ರತಿಮೆ. ವಿಶ್ವವಿದ್ಯಾಲಯಕ್ಕೆ ಹೆಸರನ್ನು ಇವರ ಜ್ಞಾಪಕಾರ್ಥವಾಗಿ ಇರಿಸಲಾಗಿದೆ

ಅಣ್ಣಾದೊರೈಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದಿರುವ ಅವರ ಕಾಲದ ರಾಷ್ಟ್ರೀಯ ಸನ್ನಿವೇಶದ ಏಕೈಕ ರಾಜಕಾರಣಿ ಎನಿಸಿದ್ದಾರೆ.[೩೩] 1967ರಲ್ಲಿ DMK ಪಕ್ಷದ ಚುನಾವಣಾ ಯಶಸ್ಸಿನ ನಂತರ, ಇಂದಿನವರೆಗೂ ತಮಿಳು ನಾಡಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಅವರ ಸರ್ಕಾರವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿದೆ.[೩೧] ನಂತರದಲ್ಲಿ DMK ಪಕ್ಷದಲ್ಲಿ ಬಿರುಕು ಉಂಟಾದಾಗ M. G. ರಾಮಚಂದ್ರನ್ ತಮ್ಮದೇ ಆದ ದ್ರಾವಿಡ ಪಕ್ಷವನ್ನು ಸ್ಥಾಪಿಸಿದರು. ಬಂಡಾಯ ಬಣಕ್ಕೆ ಅಣ್ಣಾದೊರೈ ಸ್ಮರಣಾರ್ಥ ಅಣ್ಣಾ DMK ಎಂದು ಹೆಸರಿಸಲಾಯಿತು, ಚೆನ್ನೈನಲ್ಲಿರುವ ವಸತಿಪ್ರದೇಶಕ್ಕೆ ಅಣ್ಣಾ ನಗರ ಎಂಬ ಹೆಸರನ್ನು ಇವರ ಸ್ಮರಣಾರ್ಥ ಇರಿಸಲಾಗಿದೆ. ಶ್ರೀಲಂಕಾದ ತಮಿಳು ರಾಷ್ಟ್ರೀಯವಾದಿ ಮುಖಂಡರು ಹಾಗು ಬರಹಗಾರರು ಅಣ್ಣಾದೊರೈ ಅವರ ಪರಿಶುದ್ಧ ತಮಿಳು ಚಳವಳಿಯಿಂದ ಪ್ರಭಾವಿತರಾಗಿದ್ದಾರೆಂದು ಪರಿಗಣಿಸಲಾಗುತ್ತದೆ.[೪೧] ವಿಜ್ಞಾನ ಹಾಗು ತಂತ್ರಜ್ಞಾನದ ಮೊದಲ ಸಂಸ್ಥೆಯಾದ ಅಣ್ಣಾ ವಿಶ್ವವಿದ್ಯಾಲಯಕ್ಕೆ ಹೆಸರನ್ನು ಇವರ ಸ್ಮರಣಾರ್ಥವಾಗಿ ಇರಿಸಲಾಗಿದೆ. 1987ರಲ್ಲಿ ನಿರ್ಮಾಣಗೊಂಡ DMKಯ ಪ್ರಸಕ್ತ ಪ್ರಧಾನ ಕಚೇರಿಗೆ ಹೆಸರನ್ನು ಅವರ ಸ್ಮರಣಾರ್ಥವಾಗಿ ಅಣ್ಣಾ ಅರಿವಾಲಯಂ ಎಂದು ಇರಿಸಲಾಗಿದೆ.[೪೨] ಚೆನ್ನೈನ ಒಂದು ಪ್ರಮುಖ ರಸ್ತೆಯಾದ ಅಣ್ಣಾ ಸಾಲೈಗೆ ಹೆಸರನ್ನು ಇವರ ಜ್ಞಾಪಕಾರ್ಥವಾಗಿ ಇರಿಸಲಾಗಿದೆ, ಇದನ್ನು ಈ ಹಿಂದೆ ಮೌಂಟ್ ರೋಡ್ ಎಂದು ಕರೆಯಲಾಗುತ್ತಿತ್ತು. ಈ ರಸ್ತೆಯಲ್ಲಿ ಅಣ್ಣಾದೊರೈ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.[೪೩] ರಾಜ್ಯಸಭೆಯಲ್ಲಿ ಅವರ ಭಾಷಣಗಳಿಗಾಗಿ ಅತ್ಯುತ್ತಮ ಸಂಸದೀಯಪಟು ಎಂದುಜವಾಹರ್ ಲಾಲ್ ನೆಹರು ಶ್ಲಾಘಿಸಿದ್ದಾರೆ.[೪೪] ಸೆಲಿಗ್ ಹ್ಯಾರಿಸನ್, ಸೌತ್ ಏಶಿಯನ್ ಹಾಗು ಈಸ್ಟ್ ಏಶಿಯನ್ ಪಾಲಿಟಿಕ್ಸ್ ಅಂಡ್ ಜರ್ನಲಿಸಂ ನ [೪೫] ವಿಶ್ಲೇಷಕ ಈ ರೀತಿಯಾಗಿ ಅಭಿಪ್ರಾಯವನ್ನು ನೀಡುತ್ತಾರೆ

There is no doubt that this powerful orator is the single-most popular mass figure in the region[೩೩]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಮನ್ನಣೆಗಳು[೪೬]
1949 ನಲ್ಲತಂಬಿ ಕಥೆ, ಚಿತ್ರಕಥೆ ಹಾಗು ಸಂಭಾಷಣೆ
1949 ವೆಲೈಕಾರಿ ಕಥೆ, ಚಿತ್ರಕಥೆ ಹಾಗು ಸಂಭಾಷಣೆ
1951 ಓರ್ ಇರವು ಕಥೆ ಹಾಗು ಸಂಭಾಷಣೆ
1954 ಸೋರ್ಗವಾಸಲ್ ಕಥೆ ಹಾಗು ಸಂಭಾಷಣೆ
1956 ರಂಗೂನ್ ರಾಧಾ ಕಥೆ
1959 ತಾಯ್ ಮಗಳುಕ್ಕು ಕಟ್ಟಿಯ ತಾಳಿ ಕಥೆ
ಎದಯುಂ ತಂಗಂ ಇಧಯಂ ಕಥೆ
1961 ನಲ್ಲವನ್ ವಾಳ್ವನ್ ಕಥೆ
1970 ಕಾದಲ್ ಜ್ಯೋತಿ ಕಥೆ
1978 ವಂಡಿಕಾರನ್ ಮಗನ್ ಕಥೆ

ಅಣ್ಣಾ ಅವರ ಮೊದಲ ಚಲನಚಿತ್ರ ಕಥೆ, ವೆಲೈಕಾರಿಗೆ, 12000 ರೂಪಾಯಿ INR(ಸಂಭಾವನೆ) ದೊರೆಯಿತು, ಈ ಹಣವು ಅಂದಿನ ಕಾಲಕ್ಕೆ ಗಮನಾರ್ಹ ಮೊತ್ತವೆಂದು ಪರಿಗಣಿಸಲಾಗಿತ್ತು.[೪೭]

ಅವರ ಕಥೆಗಳಲ್ಲದೆ, ಅಣ್ಣಾದೊರೈ ಅವರ ಕೆಲವು ಕೃತಿಗಳ ಶೀರ್ಷಿಕೆಗಳನ್ನು ಚಲನಚಿತ್ರಗಳಿಗೆ ಇರಿಸಲಾಗಿದೆ, ಇದರಲ್ಲಿ ಪಣತೋಟಂ (1963), ವಾಲಿಬ ವಿರುಂಧು (1967), ಕುಮಾರಿಕೊಟ್ಟಂ (1971), ರಾಜಪರ್ತ್ ರಂಗದುರೈ (1973), ನೀಧಿ ದೇವನ್ ಮಯಕ್ಕಂ (1982) ಗಳು ಸೇರಿವೆ.[೪೬]

ಅಣ್ಣಾ ಅವರ ಕೃತಿಗಳ ಬಗ್ಗೆ ವಿಮರ್ಶಿಸುತ್ತಾ ಕಣ್ಣದಾಸನ್, ಶಿವಾಜಿ ಕಂಡ ಹಿಂದೂ ರಾಜ್ಯಂ ಹಾಗು ನೀಧಿ ದೇವನ್ ಮಯಕ್ಕಂ ಅನ್ನು ಹೊರತುಪಡಿಸಿ, ಮಿಕ್ಕ ಎಲ್ಲ ಕಥೆಗಳು ಕಥಾವಸ್ತುವಿನಲ್ಲಿ ನ್ಯೂನತೆಯನ್ನು ಹೊಂದಿದ್ದವು ಎಂದು ಹೇಳುತ್ತಾರೆ[೪೮]

ಗ್ರಂಥಸೂಚಿ[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

ವರ್ಷ ಮಾದರಿ ಕೃತಿ ಮೊದಲ ಬಾರಿಗೆ ಪ್ರಕಟಗೊಂಡಿದ್ದು[೪೬]
1939 ಸಣ್ಣ ಕಾದಂಬರಿ ಕೊಮಲತ್ತಿನ್ ಕೋಬಂ

ಕುಡಿ ಅರಸು
1939 ಸಣ್ಣ ಕಾದಂಬರಿ ಕಬೋಥಿಪುರ ಕಾದಲ್ ಕುಡಿ ಅರಸು
1942 ಸಣ್ಣ ಕಾದಂಬರಿ ಕುಮಸ್ಥವಿ ಪೆಣ್ ಅಥವಾ ಕೊಲೈಕರಿಯಿನ್ ಕುರಿಪ್ಪುಗಳ್ ದ್ರಾವಿಡ ನಾಡು
1942 ಸಣ್ಣ ಕಾದಂಬರಿ ಕಳಿಂಗರಾಣಿ ದ್ರಾವಿಡ ನಾಡು
1943 ಸಣ್ಣ ಕಾದಂಬರಿ ಪಾರ್ವತಿ B.A ದ್ರಾವಿಡ ನಾಡು
1943 ನಾಟಕ ಚಂದ್ರೋದಯಂ
1945 ಸಣ್ಣ ಕಾದಂಬರಿ ದಶಾವತಾರಂ ದ್ರಾವಿಡ ನಾಡು
1945 ನಾಟಕ ಶಿವಾಜಿ ಕಂಡ ಹಿಂದೂ ಸಾಮ್ರಾಜ್ಯಂ
1946 ನಾಟಕ ವೆಲೈಕಾರಿ
1946 ಸಣ್ಣ ಕಾದಂಬರಿ ಕುಮಾರಿ ಕೊಟ್ಟಂ ದ್ರಾವಿಡ ನಾಡು
1946 ಸಣ್ಣ ಕಾದಂಬರಿ ರಂಗೂನ್ ರಾಧಾ ದ್ರಾವಿಡ ನಾಡು
1947 ನಾಟಕ ನೀಧಿದೇವನ್ ಮಯಕ್ಕಂ
1947 ನೀತಿ ಕಥೆ ಕಧಿರವನ್ ಕನೀನ್ ದ್ರಾವಿಡ ನಾಡು
1948 ನಾಟಕ ನಲ್ಲತಂಬಿ
1948 ನಾಟಕ ಓರ್ ಇರವು
1948 ಸಣ್ಣ ಕಾದಂಬರಿ ಎನ್ ವಾಳ್ವು ದ್ರಾವಿಡ ನಾಡು
1953 ನಾಟಕ ಸೋರ್ಗವಾಸಲ್
1953 ನಾಟಕ ಕಾದಲ್ ಜ್ಯೋತಿ
1955 ನೀತಿ ಕಥೆ ಕುಮಾರಿ ಸೂರ್ಯ ದ್ರಾವಿಡ ನಾಡು
1955 ನೀತಿ ಕಥೆ ನಂಗೈ ನಗೈತಾಳ್ ದ್ರಾವಿಡ ನಾಡು
1955 ನೀತಿ ಕಥೆ ಒರು ಮುತ್ತಲಿನ್ ಕಡೈ ದ್ರಾವಿಡ ನಾಡು
1955 ನಾಟಕ ಪವಯಿನ್ ಪಯಣಂ
1956 ಸಣ್ಣ ಕಾದಂಬರಿ ಪುದಿಯ ಪೊಳಿವು ದ್ರಾವಿಡ ನಾಡು
1957 ಸಣ್ಣ ಕಾದಂಬರಿ ಕಡೈಸಿ ಕನವು ದ್ರಾವಿಡ ನಾಡು
1965 ಸಣ್ಣ ಕಾದಂಬರಿ ತಳುಂಬುಕಳ್ ಕಂಚಿ
1965 ಸಣ್ಣ ಕಾದಂಬರಿ ವಂಡಿಕಾರನ್ ಮಗನ್ ಕಂಚಿ
1968 ಸಣ್ಣ ಕಾದಂಬರಿ ಅಪ್ಪಡಿ ಸೋನ್ನೇನ್ ಕಂಚಿ
1970 ನಾಟಕ ಇನ್ಬ ಒಳಿ ಕಂಚಿ ಹಾಗು ದ್ರಾವಿಡ ನಾಡು

ವಸ್ತುಭೂತ ವಿಷಯಗಳ ಕೃತಿ(ನಾನ್ ಫಿಕ್ಷನ್)[ಬದಲಾಯಿಸಿ]

ವರ್ಷ ಶೀರ್ಷಿಕೆ[೧]
1947 ಕಂಬರಸಂ
1948 ಆರಿಯಮಾಯೈ

ಛಾಯಾಚಿತ್ರ ಸಂಪುಟ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ "Life History and Literary Works of C.N. Annadurai". Tamil Electronic Library. Retrieved 2008-12-20.
  2. ೨.೦ ೨.೧ ೨.೨ ೨.೩ ೨.೪ ೨.೫ Karunanidhi, Muthuvel. "Annadurai.C.N (1909-1969)". Vandemataram.com. Retrieved 2008-12-20.
  3. ೩.೦ ೩.೧ ೩.೨ ೩.೩ ೩.೪ ೩.೫ Satyendra, Kuśa (2000). Dictionary of Hindu Literature. Sarup & Sons. pp. 9–10. ISBN 8176251593.
  4. ಪುಟ.6 "ಅಣ್ಣಾ - ದಿ ಲೈಫ್ ಅಂಡ್ ಟೈಮ್ಸ್ ಆಫ್ C N ಅಣ್ಣಾದೊರೈ" R. ಕಣ್ಣನ್ ರಿಂದ
  5. ಪುಟ. 66 ಡಾಟರ್ ಆಫ್ ದಿ ಸೌತ್ ಪೀ ಅವರಿಂದ. ಸಿ ಕನೆಕಾನ್
  6. ಪುಟ. 41 ಎಥ್ನಿಕ್ ಮೂವ್ಮೆಂಟ್ ಇನ್ ಇಂಡಿಯಾ ಗಣಪತಿ ಪಳನಿತುರೈ, R. ತಾಂಡವನ್ ರಿಂದ
  7. ಪುಟ. 44 ಸೆಮಿನಾರ್
  8. ಪುಟ. 25 C.N. ಅಣ್ಣಾದೊರೈ ಪೀ ಅವರಿಂದ. ಸಿ ಕನೆಕಾನ್
  9. ೯.೦ ೯.೧ ೯.೨ ೯.೩ Rajwat, Mamta (2004). Encyclopaedia of Dalits in India. Anmol Publications PVT. LTD. pp. 246–247. ISBN 8126120843.[ಶಾಶ್ವತವಾಗಿ ಮಡಿದ ಕೊಂಡಿ]
  10. ೧೦.೦ ೧೦.೧ Ralhan, O.P. (2002). Encyclopaedia of Political Parties. Anmol Publications PVT. LTD.,. pp. 125–128. ISBN 8174888659.[ಶಾಶ್ವತವಾಗಿ ಮಡಿದ ಕೊಂಡಿ]
  11. Wilkinson, Steven I (2006). Caste mobilization in Pre-independence Madras. Cambridge University Press. pp. 189–192. ISBN 0521536057. Retrieved 2008-12-16. {{cite conference}}: Unknown parameter |booktitle= ignored (help)
  12. ೧೨.೦ ೧೨.೧ ೧೨.೨ Kandasamy, W.B. Vansantha (2005). Fuzzy and Neutrosopohc Analysis of Periyar's Views on Untouchability. HEXIS: Phoenix. p. 106. ISBN 9781931233002. {{cite book}}: Unknown parameter |coauthors= ignored (|author= suggested) (help)
  13. ೧೩.೦ ೧೩.೧ Sarah, Dickey (1993). "The Politics of Adulation: Cinema and the Production of Politicians in South India". The Journal of Asian Studies. Association for Asian Studies. 52 (2): 340–372. doi:10.2307/2059651..
  14. ೧೪.೦ ೧೪.೧ ೧೪.೨ Rajagopalan, Swarna (2001). State and Nation in South Asia. Lynne Rienner Publishers. pp. 152–154. ISBN 1555879675.
  15. Ramaswamy, Cho. "E.V. Ramaswami Naicker and C.N. Annadurai". India Today. Archived from the original on 2008-10-24. Retrieved 2008-12-19.
  16. ೧೬.೦೦ ೧೬.೦೧ ೧೬.೦೨ ೧೬.೦೩ ೧೬.೦೪ ೧೬.೦೫ ೧೬.೦೬ ೧೬.೦೭ ೧೬.೦೮ ೧೬.೦೯ ೧೬.೧೦ ೧೬.೧೧ ೧೬.೧೨ ೧೬.೧೩ Asaan, GVK (2008). "Anna the genius". The birth centenary of Arignar Anna (C.N.Annadurai- 15 September 1909 - 3 February 1969) is being celebrated between September 2008 and September 2009. The first part of his life sketch appeared in the September issue. In this issue we give the second and the concluding part. Modern Rationalist. Archived from the original on 26 ಜನವರಿ 2011. Retrieved 2008-12-20.
  17. Subramanian, RS (September 26 - October 09, 1998). "Celebrating a half century". Frontline, The Hindu Publishing. Archived from Celebrating a half century the original on 2008-01-08. Retrieved 2008-02-19. {{cite news}}: Check |url= value (help); Check date values in: |date= (help)
  18. ೧೮.೦ ೧೮.೧ Phadnis, Urmila (2001). Ethnicity and Nation-building in South Asia. SAGE. p. 227. ISBN 0761994394. {{cite book}}: Unknown parameter |coauthors= ignored (|author= suggested) (help)
  19. Ganguli, Amulya (2007-05-26). "The DMK's negative politics". The Tribune, India. Retrieved 2008-12-20.
  20. Bukowski, Jeanie J (2000). Re-distribution of Authority. Greenwood Publishing Group. pp. 19–21. ISBN 0275963772. {{cite book}}: Unknown parameter |coauthors= ignored (|author= suggested) (help)
  21. Jain, Sumitra Kumar (1994). Party Politics and Centre-state Relations in India. Abhinav Publications. p. 142. ISBN 8170173094.
  22. ೨೨.೦ ೨೨.೧ ೨೨.೨ ೨೨.೩ ೨೨.೪ ೨೨.೫ ೨೨.೬ Hardgrave, Robert (1965). "The Riots in Tamilnad: Problems and Prospects of India's Language Crisis". Asian Survey. 5 (8): 399–407. doi:10.1525/as.1965.5.8.01p0095g. Archived from the original on 2011-08-07. Retrieved 2008-12-20.
  23. Thirumavalavan (2004). Uprrot Hindutva. Popular Prakashan. pp. 125–126. ISBN 8185604797. {{cite book}}: Unknown parameter |coauthors= ignored (|author= suggested) (help)
  24. Nandivarman, N (2008-01-27). "Remembering the 1965 Anti Hindi Struggle". Tamil Nation. Retrieved 2008-12-20.
  25. Viswanathan, S (April 10 – 23, 2004). "A history of agitational politics". Frontline, The Hindu publishing. Retrieved 2008-12-19. {{cite news}}: Check date values in: |date= (help)
  26. ೨೬.೦ ೨೬.೧ ೨೬.೨ ೨೬.೩ ೨೬.೪ Hardgrave, Jr, Robert L (1973). "Politics and the Film in Tamilnadu: The Stars and the DMK". Asian Survey. JSTOR. 13 (3): 288–305. doi:10.1525/as.1973.13.3.01p0314o. {{cite journal}}: |access-date= requires |url= (help); Unknown parameter |month= ignored (help)
  27. Bhanskaran, Gautaman (2008-08-2008). "Pioneers who pushed cinema into politics". The Japan Times online. Archived from the original on 2009-01-09. Retrieved 2008-12-13. {{cite news}}: Check date values in: |date= (help)
  28. ೨೮.೦ ೨೮.೧ Guneratne, Anthony R. (2003). Rethinking Third Cinema. Routledge. p. 216. ISBN 0415213541. {{cite book}}: Unknown parameter |coauthors= ignored (|author= suggested) (help)
  29. Ramanujam, KS (1967). The big change. Higginbothams. p. 226.
  30. ೩೦.೦ ೩೦.೧ {{cite book Occasion tickets were sold for his speeches, perhaps a first in the history of speech-making in India. His speeches were almost the first to be published in booklet form. | last =Various authors | title =Encyclopaedia of Indian literature vol. 1 | publisher =Sahitya Akademi | year =1987 | location = | pages =181 | isbn =8126018038}}
  31. ೩೧.೦ ೩೧.೧ Chakrabarty, Bidyut (2008). Indian Politics and Society Since Independence. Routledge. pp. 110–111. ISBN 0415408687.
  32. Viswanathan, S (April 10–23, 2004). "Dravidian power". Frontline. Retrieved 2008-02-19.
  33. ೩೩.೦ ೩೩.೧ ೩೩.೨ ೩೩.೩ Venkatachalapathy, AR (2008-04-10). "C.N. ANNADURAI — POLITICIAN, 1909-1969". Retrieved 2008-12-20.
  34. Venkatesh, MR (2004-06-07). "Solidarity show at wedding - ADMK's brickbats on cauvery mixes with Pranab's bonhomie". The Telegraph, Calcutta. Archived from the original on 2009-08-16. Retrieved 2008-12-20.
  35. Hodges, Sara (2005). "Revolutionary family life and the Self Respect movement in Tamil south India". Contributions to Indian Sociology. 39 (2): 251–277. doi:10.1177/006996670503900203. Retrieved 2008-12-20.
  36. "Rice promises stir Tamil Nadu". Rediff.com. 2006-04-19. Retrieved 2008-12-20.
  37. Jayakanthan, Dandapani (2006). A Literary Man's Political Experiences. Read books. p. 212. ISBN 1406735698.
  38. Kannan, R (2004-09-15). "Remembering Anna". The Hindu. Archived from the original on 2009-01-10. Retrieved 2008-12-20.
  39. McFarlan, Donald (1990). Guinness Book of World Records, 1990. Bantam Books. p. 400. ISBN 9780553284522. {{cite book}}: Unknown parameter |coauthors= ignored (|author= suggested) (help)
  40. Kishore, BR. India - A Travel Guide. Diamond Pocket Books (P) Ltd. p. 702. ISBN 8128400673.
  41. Wilson, Jeyarathnam (2000). Sri Lankan Tamil Nationalism. C. Hurst & Co. Publishers. p. 37. ISBN 1850655197.
  42. "The Rising Sun". Dravida Munnetra Kazhagam. Archived from the original on 2009-04-10. Retrieved 2008-12-20.
  43. Muthiah, S (2003-07-02). "Round Tana and around". The Hindu. Archived from the original on 2009-01-10. Retrieved 2008-12-20.
  44. "Tamil Nadu celebrates Annadurai's birth centenary". IBN live. 2008-09-15. Archived from the original on 2014-04-29. Retrieved 2008-12-20.
  45. "Selig Harrison". CIP. Retrieved 2008-12-19.
  46. ೪೬.೦ ೪೬.೧ ೪೬.೨ "C.N. Annadurai - List of creative works" (in Tamil). Government of Tamil Nadu. Retrieved 2009-01-18.{{cite web}}: CS1 maint: unrecognized language (link)
  47. ಪುಟ.82,"ಅಣ್ಣಾ -ಲೈಫ್ ಅಂಡ್ ಟೈಮ್ಸ್ ಆಫ್ C N ಅಣ್ಣಾದೊರೈ R.ಕಣ್ಣನ್ ರಿಂದ
  48. ಪುಟ.79,"ಅಣ್ಣಾ - ಲೈಫ್ ಅಂಡ್ ಟೈಮ್ಸ್ ಆಫ್ C N ಅಣ್ಣಾದೊರೈ R ಕಣ್ಣನ್ ರಿಂದ
ಪೂರ್ವಾಧಿಕಾರಿ
None
General Secretary of the Dravida Munnetra Kazhagam
1949 - 1956
ಉತ್ತರಾಧಿಕಾರಿ
V. R. Nedunchezhiyan
ಪೂರ್ವಾಧಿಕಾರಿ
Deivasigamani
Member of Madras State Legislative Assembly
1957 - 1962
ಉತ್ತರಾಧಿಕಾರಿ
S. V. Natesa Mudaliar
ಪೂರ್ವಾಧಿಕಾರಿ
Leader of Opposition in Madras State Legislative Assembly
1957 - 1962
ಉತ್ತರಾಧಿಕಾರಿ
ಪೂರ್ವಾಧಿಕಾರಿ
Member of Madras Legislative Council
1967 - 1969
ಉತ್ತರಾಧಿಕಾರಿ
ಪೂರ್ವಾಧಿಕಾರಿ
M. Bakthavatsalam
Chief Minister of Madras State (Tamil Nadu from August 1968)
1967 - 1969
ಉತ್ತರಾಧಿಕಾರಿ
V. R. Nedunchezhiyan (acting)

ಬಾಹ್ಯ ಕೊಂಡಿಗಳು[ಬದಲಾಯಿಸಿ]