ಪುದೀನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುದೀನ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
M. arvensis
Binomial name
Mentha arvensis

ಪುದೀನ (ಮೆಂಥಾ ಆರ್ವೆನ್ಸಿಸ್) ಉತ್ತರ ದಿಕ್ಕಿನ ಸುತ್ತಲಿನ ಪ್ರದೇಶ|ಉತ್ತರ ದಿಕ್ಕಿನ ಸುತ್ತಲೂ ಹರಡನ್ನು ಹೊಂದಿರುವ ಮೆಂಥಾದ ಒಂದು ಪ್ರಜಾತಿ. ಇದು ಯೂರೋಪ್ ಮತ್ತು ಪಶ್ಚಿಮ ಹಾಗೂ ಮಧ್ಯ ಏಷ್ಯಾ, ಹಿಮಾಲಯದ ಪೂರ್ವಕ್ಕೆ ಮತ್ತು ಪೂರ್ವ ಸೈಬೀರಿಯಾ, ಮತ್ತು ಉತ್ತರ ಅಮೇರಿಕಾದ ಸಮಶೀತೋಷ್ಣ ಪ್ರದೇಶಗಳಿಗೆ ಸ್ಥಳೀಯವಾಗಿದೆ. ಪುದೀನ ಸಾಮಾನ್ಯವಾಗಿ ೧೦-೬೦ ಸೆ.ಮಿ. ಎತ್ತರ ಬೆಳೆಯುವ ಮತ್ತು ಅಪರೂಪಕ್ಕೆ ೧೦೦ ಸೆ.ಮಿ. ಎತ್ತರದವರೆಗೆ ಬೆಳೆಯುವ ಮೂಲಿಕೆಯಂಥ ಬಹುವಾರ್ಷಿಕ ಸಸ್ಯ. ಇದರ ಕುಟುಂಬ ಲ್ಯಾಮಿನೇಸಿಯಿ. ನೀರಿನ ಆಶ್ರಯವಿರುವ ಕಡೆ ಪುದೀನ ಸೊಂಪಾಗಿ ಬೆಳೆಯುತ್ತದೆ. ಆದುದರಿಂದ ಇದನ್ನು ಲ್ಯಾಟಿನ್ ಭಾಷೆಯಲ್ಲಿ 'ಮೆಂತ' ಅಂದರೆ 'ಜಲದೇವಿ' ಎಂದೇ ಕರೆಯುತ್ತಾರೆ. ಈ ಸೊಪ್ಪನ್ನು ಸೂಪ್, ಸಾಸ್, ಪಾನೀಯಗಳು ಮತ್ತು ಚಟ್ನಿಗಳಲ್ಲಿ ಯಥೇಚ್ಛವಾಗಿ ಉಪಯೋಗಿಸಲಾಗುತ್ತದೆ. ಇದರಿಂದ ಪಡೆದ ಪೆಪ್ಪರ್‍ಮಿಂಟ್ ಎಂಬ ಪದಾರ್ಥವನ್ನು ಅನೇಕ ಕೈಗಾರಿಕಾ ಮತ್ತು ವೈದ್ಯಕೀಯ ರಾಸಾಯನಿಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು[ಬದಲಾಯಿಸಿ]

  • ಆಹಾರವನ್ನು ಸುಲಭವಾಗಿ ಪಚನ ಮಾಡುತ್ತದೆ.
  • ತಿಂದ ಕೊಬ್ಬನ್ನು ಅರಗಿಸಲು ಸಹಾಯ ಮಾಡುತ್ತದೆ.
  • ಹೆಚ್ಚಿನ ಆಹಾರ ಸೇವನೆಯಿಂದ ಉಂಟಾದ ಹೊಟ್ಟೆ ಉಬ್ಬರವನ್ನು, ಹೊಟ್ಟೆಯಲ್ಲಿ ಸಂಚಿತವಾದ ಗಾಳಿಯನ್ನು ಹೊರಹಾಕಿ, ನಿವಾರಣೆ ಮಾಡುತ್ತದೆ.
  • ಗರ್ಭಿಣಿಯರ ವಾಂತಿ ನಿವಾರಣೆ ಮಾಡುತ್ತದೆ.
  • ಊಟವಾದ ನಂತರ ಈ ಎಲೆಗಳನ್ನು ಅಗಿದು ತಿನ್ನುವುದರಿಂದ ಹಲ್ಲುಗಳಲ್ಲಿ ಹುಳುಕು ಬಾರದಂತೆ ತಡೆಯುತ್ತದೆ.
  • ಹುಳುಕು ಹಲ್ಲಿನ ದುರ್ವಾಸನೆ ತಡೆಯುತ್ತದೆ.[೧]
  • ಹಲ್ಲುಗಳ ಒಸಡನ್ನು ಬಲಪಡಿಸಿ ದಂತರಕ್ಷಣ ನೀಡುತ್ತದೆ.
  • ಹೊಟ್ಟೆಯ ಜಂತು ಹುಳುಗಳನ್ನು ತಡೆದು, ಮೂತ್ರವನ್ನು ಹೆಚ್ಚಿಸುತ್ತದೆ ಮತ್ತು ವಿಷದ್ರವ್ಯಗಳನ್ನು ಹೊರಹಾಕಲು ಸಹಾಕರಿಸುತ್ತದೆ.
  • ಇದರ ಕಷಾಯವನ್ನು ದಿನಕ್ಕೆ ೩ ಬಾರಿ ಸೇವಿಸಿದರೆ ಕೆಮ್ಮು ಮತ್ತು ನೆಗಡಿ ಗುಣವಾಗುತ್ತದೆ.
  • ರಜಸ್ರಾವವಾಗುವ ಮೊದಲು ೪ ದಿನ ಇದರ ಕಷಾಯ ಬಳಸಿದರೆ ಮುಟ್ಟಾದಾಗ ಉಂಟಾಗುವ ನೋವುಗಳು ಕಡಿಮೆಯಾಗುತ್ತವೆ.
  • ಎಲೆಗಳ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಕುಡಿದರೆ ವಾಂತಿ ನಿಲ್ಲುತ್ತದೆ.
  • ನೋವು ನಿವಾರಕ ಔಷಧಿಗಳಲ್ಲಿ ಈ ತೈಲವನ್ನು ಬಳಸಲಾಗುತ್ತಿದೆ.
  • ಗಂಟಲು ತುರಿಕೆ ನಿವಾರಣೆಯ ಚಾಕಲೇಟುಗಳಲ್ಲೂ, ಹಲ್ಲುಜ್ಜುವ ಪೇಸ್ಟುಗಳಲ್ಲೂ ಇದು ಬಳಕೆಯಾಗುತ್ತದೆ.
  • ಇದನ್ನು ಅನೇಕ ತಿಂಡಿ ತಿನಿಸುಗಳಲ್ಲಿ ಬಳಸುತ್ತಾರೆ.[೨]
  • ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಬೆಳೆಸುವ ವಿಧಾನ[ಬದಲಾಯಿಸಿ]

ಇದು ಸಾಮಾನ್ಯವಾಗಿ ಅನೇಕ ವಿಧದ ಮಣ್ಣುಗಳಲ್ಲಿ ಬೆಳೆಯಬಲ್ಲದು. ಆದರೆ ಫಲವತ್ತಾದ ಮರಳು ಗೋಡು ಮಣ್ಣುಗಳು ಬಹುಸೂಕ್ತ ಮತ್ತು ನೀರು ಸುಲಭವಾಗಿ ಇಂಗಿ ಹೋಗಬೇಕು.ಈ ಸಸ್ಯವನ್ನು ೧-೨ ಗಿಣ್ಣುಗಳುಳ್ಳ ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಇದನ್ನು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ಮಾರ್ಚ್ ತಿಂಗಳಲ್ಲಿ ಪಾತಿಗಳಲ್ಲಿ ೨೨ ಸೆಂ.ಮೀ. ಅಂತರದ ಸಾಲುಗಳಲ್ಲಿ ೧೫ ಸೆಂ.ಮೀ. ಸಸಿ ಅಂತರದಲ್ಲಿ ೩ ಸೆಂ.ಮೀ.ಆಳಕ್ಕೆ ಬಾಗಿದಂತೆ ನಾಟಿ ಮಾಡಬಹುದು. ಸಸಿಗಳಿಗೆ ಚಳಿಗಾಲದಲ್ಲಿ ವಾರಕ್ಕೊಮ್ಮೆಯಂತೆ ಮತ್ತು ಬೇಸಿಗೆಯಲ್ಲಿ ವಾರಕ್ಕೆರಡು ಬಾರಿಯಂತೆ ನೀರು ಹಾಯಿಸಬೇಕು.

ಪ್ರತಿವರ್ಷ ಮಳೆಗಾಲಕ್ಕೆ ಮುಂಚೆ ಮಣ್ಣನ್ನು ಕೆದಕಿ ೧.೨ಮೀ*೧.೨ಮೀ.ಅಳತೆಯ ಪ್ರತಿ ಪಾತಿಗೆ ಒಂದು ಕಿ.ಗ್ರಾಂ. ಮೀನಿನ ಗೊಬ್ಬರ ಅಥವಾ ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಮತ್ತು ೧೦೦ಗ್ರಾಂ. ಮಿಶ್ರ ರಾಸಾಯನಿಕ ಗೊಬ್ಬರವನ್ನು ಒದಗಿಸಬೇಕು.

ಮಳೆಗಾಲದಲ್ಲಿ ಸಸಿಗಳು ಎಲೆಗಳನ್ನುದುರಿಸಿ, ಮಳೆಗಾಲ ತೀರಿದ ಕೂಡಲೇ ಹೊಸ ಚಿಗುರು ಹೊಮ್ಮಿಸುತ್ತವೆ. ಈ ಎಲೆಗಳನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೊಯ್ಲು ಮಾಡಬಹುದು. ಸಸ್ಯಗಳನ್ನು ಪ್ರತಿವರ್ಷ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಳೆಗಾಲದಲ್ಲಿ ವರ್ಗಾಯಿಸಬಹುದು. ಗುಡ್ಡಗಾಡು ಪ್ರದೇಶದಲ್ಲಿ ವಸಂತ ಋತುವಿನಲ್ಲಿ ನಾಟಿ ಮಾಡಬಹುದು. ಒಂದು ಸಾರಿ ನಾಟಿ ಮಾಡಿದ ಗಿಡಗಳಿಂದ ೨-೩ ವರ್ಷಗಳವರಿಗೆ ಎಲೆಗಳು ಸಿಗುತ್ತಾ ಇರುತ್ತವೆ.[೩]

ಉಲ್ಲೇಖ[ಬದಲಾಯಿಸಿ]

  1. http://kannada.boldsky.com/health/wellness/2015/healthy-reasons-drink-peppermint-tea-009403-009403.html
  2. http://mlife.mtsindia.in/m/news_details.jsp?pid=903037[ಶಾಶ್ವತವಾಗಿ ಮಡಿದ ಕೊಂಡಿ]
  3. ಸೊಪ್ಪು ತರಕಾರಿಗಳು, ಡಾ|| ಪಿ. ನಾರಯಣ ಸ್ವಾಮಿ, ಡಾ|| ಎಂ.ಎಂ.ಖಾನ್, ಡಾ|| ಕೆ.ಕೆಂಪೇಗೌಡ ಮತ್ತು ಡಾ|| ಎಲ್.ವಸಂತ, ನವಕರ್ನಾಟಕ ಪ್ರಕಾಶನ, ಮುದ್ರಣ ೨೦೦೬,ಪುಟ ಸಂಖ್ಯ ೫೩
"https://kn.wikipedia.org/w/index.php?title=ಪುದೀನ&oldid=1056427" ಇಂದ ಪಡೆಯಲ್ಪಟ್ಟಿದೆ