ಧೀರೇಂದ್ರ ಬ್ರಹ್ಮಚಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್‌ ಹಿಲ್ಸ‌ ಅವರು ಧೀರೇಂದ್ರ ಬ್ರಹ್ಮಚಾರಿ ಹಾಗೂ ಅಮೃತ್‌ ದೇಸಾಯಿಯವರೊಂದಿಗೆ ವಿಶ್ವ ವೈಜ್ಞಾನಿಕ ಯೋಗ ಸಮ್ಮೇಳನದ ಆಯೋಜನೆ ಸಂದರ್ಭದಲ್ಲಿ ಚರ್ಚಿಸುತ್ತಿರುವುದು

ಧೀರೇಂದ್ರ ಬ್ರಹ್ಮಚಾರಿ, (೧೨ ಫೆಬ್ರವರಿ ೧೯೨೪ – ೯ ಜೂನ್ ೧೯೯೪) ಓರ್ವ ಭಾರತೀಯ ಯೋಗ ಗುರು.[೧] ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಯೋಗ ಗುರು ಹಾಗೂ ಆಪ್ತರೂ ಆಗಿದ್ದರು.ತುರ್ತು ಪರಿಸ್ಥಿತಿ ವೇಳೆ ಪ್ರಭಾವಿಯಾಗಿದ್ದ ಇವರ ಮಾತಿಗೆ ಇಂದಿರಾ ವಿಶೇಷ ಮನ್ನಣೆ ನೀಡುತ್ತಿದ್ದರು[೨]. ದೆಹಲಿ, ಜಮ್ಮು ಹಾಗೂ ಕಾತ್ರಾದಲ್ಲಿ ಇವರು ಆಶ್ರಮಗಳನ್ನು ಸ್ಥಾಪಿಸಿದ್ದರು.

ಜನನ ಮತ್ತು ಜೀವನ[ಬದಲಾಯಿಸಿ]

ಬಿಹಾರದ ಮಧುಬನಿ ಪ್ರಾಂತ್ಯದ ಬಸೈತ್ ಚಾನ್ಪುರ ಎಂಬ ಹಳ್ಳಿಯಲ್ಲಿ ೧೨ ಫೆಬ್ರವರಿ ೧೯೨೪ರಲ್ಲಿ ಜನಿಸಿದರು. ಧೀರೇಂದ್ರ ಚೌದರಿ, ಇವರ ಪೂರ್ವಾಶ್ರಮದ ಹೆಸರಾಗಿತ್ತು. ೧೩ನೇ ವಯಸ್ಸಿನಲ್ಲಿಯೇ ಮನೆಯನ್ನು ತೊರೆದು ವಾರಣಾಸಿಗೆ ಹೋದರು. ಬಳಿಕ ಲಕ್ನೋದಿಂದ ಸುಮಾರು ೧೨ ಮೈಲಿಗಳಷ್ಟು ದೂರವಿರುವ ಗೋಪಾಲ್ ಖೇರಾದಲ್ಲಿದ್ದ ಮಹರ್ಷಿ ಕಾರ್ತೀಕೇಯವರಲ್ಲಿ ಶಿಷ್ಯವೃತ್ತಿಯನ್ನು ಪ್ರಾರಂಭಿಸಿದರು.ಇಲ್ಲಿ ಯೋಗ ಮತ್ತು ಮತ್ತು ಯೋಗ ಸಂಬಂಧಿತ ವಿಷಯಗಳ ಶಿಕ್ಷಣ ಪಡೆದರು.[೩] ೧೯೬೦ಲ್ಲಿ ಅಂದಿನ ಸೋವಿಯಟ್‌ ರಷ್ಯಾಕ್ಕೆ ಬಾಹ್ಯಾಕಾಶ ಯಾನಿಗಳಿಗೆ ಹಠ ಯೋಗವನ್ನು ಕಲಿಸುವ ಉದ್ದೇಶದದಿಂದ ಆಹ್ವಾನಿಸಲ್ಪಟ್ಟಿದ್ದರು. ಆ ಬಳಿಕ ಅಂದು ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂರವರು ತಮ್ಮ ಮಗಳಾದ ಇಂದಿರಾ ಗಾಂಧಿಯವರಿಗೆ ಯೋಗ ಕಲಿಸಲು ಆಹ್ವಾನಿಸಿದರು. ಅಂದಿನಿಂದ ಅನೇಕ ವರ್ಷಗಳ ಕಾಲ ಇಂದಿರಾ ಗಾಂಧಿಯವರ ಯೋಗ ಶಿಕ್ಷಕರಾಗಿದ್ದರು. ಇಂದಿರಾ ಗಾಂಧಿಯವರಿಗೆ ತುಂಬಾ ಆತ್ಮೀಯರಾಗಿದ್ದ ಇವರಿ ೧೯೭೦ರ ದಶಕದಲ್ಲಿ ರಾಷ್ಟ್ರೀಯ ವಾಹಿನಿ ದೂರದರ್ಶನದಲ್ಲಿ ಯೋಗ ವಿಜ್ಞಾನವನ್ನು ಪ್ರಚುರಗೊಳಿಸಲು "ಯೋಗಾಭ್ಯಾಸ" ಎಂಬ ಸಾಪ್ತಾಹಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದರು[೪]. ದೆಹಲಿಯ ಆಡಳಿತವಿರುವ ಎಲ್ಲಾ ಶಾಲೆಗಳಲ್ಲಿ ಯೋಗವನ್ನು ಒಂದು ವಿಷಯವಾಗಿ ಪರಿಚಯಸಲು ಕಾರಣರಾದರು. ಈಗ "ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ" ಎಂದು ಹೆಸರಾಗಿರುವ "ವಿಶ್ವಾಯತನ ಯೋಗಾಶ್ರಮ"ವನ್ನು ದೆಹಲಿಯಲ್ಲಿ ಪ್ರಾರಂಭಿಸಿದರು.

ಇಂದಿರಾ ಗಾಂಧಿಯವರ ಆಡಳಿತ ಕಾಲದಲ್ಲಿ ಜಮ್ಮು, ಕಾತ್ರಾ ಮುಂತಾದೆಡೆ ಸರ್ಕಾರದಿಂದ ಭೂಮಿಗಳನ್ನು ಪಡೆದುಕೊಂಡು ಯೋಗ ಶಾಲೆಗಳನ್ನು ಪ್ರಾರಂಭಿಸಿದರು. " ಹಾರುವ ಸ್ವಾಮಿ" ಎಂದು ಹೆಸರಾಗಿದ್ದ ಇವರು ಇಂದಿರಾ ಗಾಂಧಿಯವರ ಹಲವು ಆಡಳಿತಾತ್ಮಕ ಹಾಗೂ ಖಾಸಗಿ ನಿರ್ಧಾರಗಳನ್ನು ಕೈಗೊಳ್ಳಲು ಕಾರಣರಾಗಿದ್ದರು. ಕೇಂದ್ರ ಸರ್ಕಾರದಲ್ಲಿ ಹುದ್ದೆಗಳ ನೇಮಕಗಳನ್ನು ಕೂಡ ಇಂದಿರಾ ಗಾಂಧಿಯವರು ಇವರೊಂದಿಗೆ ಚರ್ಚಿಸದೇ ಮಾಡುತ್ತಿರಲಿಲ್ಲ. ೧೯೭೫ರಿಂದ ೧೯೭೭ರವರೆಗೆ ಭಾರತ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅತ್ಯಂತ ಪ್ರಭಾವಿಯಾಗಿದ್ದರು, ಜೊತೆಗೆ ಯವುದೇ ಸಾಂವಿಧಾನಿಕ ಹುದ್ದೆಗಳನ್ನು ಹೊಂದದೇ ಸರ್ಕಾರದ ನೀತಿರೂಪಕ ನಿರ್ಧಾರಗಳಲ್ಲಿ ಪಾಲ್ಗೊಳ್ಳುತ್ತಿದ್ದರು.[೨]

ಯೋಗ ವಿದ್ಯೆಗೆ ಸಂಬಂಧಿಸಿದಂತೆ ಹಲವು ಲೇಖನ ಹಾಗೂ ಪುಸ್ತಕಗಳನ್ನು ಬರೆದಿರುವ ಇವರು,"ಯೋಗಿಕ್ ಸೂಕ್ಷ್ಮ ವ್ಯಾಯಾಮ" ಮತ್ತು "ಯೋಗಾಸನ ವಿಜ್ಞಾನ" ಎಂಬವು ಇದರಲ್ಲಿ ಪ್ರಮುಖವಾದವು.

ಜಮ್ಮುವಿನ ಗಾಂಧಿ ನಗರದಲ್ಲಿ ಇವರ ಒಡೆತನದಲ್ಲಿದ್ದ ಆಶ್ರಮ ಸುಮಾರು ೧೦೦೮ ಕನಾಲ್ ( ೧ ಕನಾಲ್, ಎಕ್ರೆಯ ಒಂದನೇ ಎಂಟರಷ್ಟು ಭಾಗ) ವಿಸ್ತಾರ ಹೊಂದಿದ್ದು, ಖಾಸಗಿ ವಿಮಾನ ನಿಲ್ದಾಣ, ಪ್ರಾಣಿ ಸಂಗ್ರಹಾಲಯ, ಏಳು ಅಂತಸ್ತಿನ ವಿಶಾಲವಾದ ಕಟ್ಟಡವನ್ನು ಹೊಂದಿತ್ತು.

ವಿವಾದಗಳು ಮತ್ತು ಕ್ರಿಮಿನಲ್ ಮೊಕದ್ದಮೆಗಳು[ಬದಲಾಯಿಸಿ]

ಸಾಂವಿಧಾನಿಕ ಹುದ್ದೆಯನ್ನು ಹೊಂದದೇ ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಪ್ರಭಾವವನ್ನು ಹೊಂದಿದ್ದು ಸಾಕಷ್ಟು ವಿವಾದಕ್ಕೆ ಈಡಾಗಿತ್ತು. ಜೊತೆಗೆ ಇಂದಿರಾ ಗಾಂಧಿಯವರೊಂದಿಗೆ ಯೋಗ ಗುರುವಿಗಿರಬಹುದಾದ ಸಂಬಂಧಕ್ಕಿಂತ ಹೆಚ್ಚಿನ ಸಂಬಂಧ ಹೊಂದಿದ್ದಾರೆ ಅನ್ನುವ ವಂದಂತಿಗಳನ್ನು ಇಂದಿರಾ ಗಾಂಧಿಯವರ ಆಪ್ತರೇ ಹರಡಿದ್ದರು. ಇಂದಿರಾ ಗಾಂಧಿಯವರ ಸಂಪುಟದಲ್ಲಿ ಸಚಿವರಾಗಿದ್ದ ಐ.ಕೆ ಗುಜ್ರಾಲ್ ಅವರು ಹುದ್ದೆ ತೊರೆಯಲು ಕೂಡ ಇವರೇ ಕಾರಣ ಎನ್ನಲಾಗಿತ್ತು.[೫]

ಇಂದಿರಾ ಗಾಂಧಿಯವರ ಮರಣಾ ನಂತರ ಸರ್ಕಾರದ ಮಟ್ಟದಲ್ಲಿ ಇವರ ಪ್ರಭಾವ ಕಳೆಗುಂದತೊಡಗಿತು. ಧೀರೇಂದ್ರ ಬ್ರಹ್ಮಚಾರಿಯವ ಮೇಲೆ ಹಲವಾರು ಮೊಕದ್ದಮೆಗಳು ಹೂಡಲ್ಟಟ್ಟವು. ಇವರ ಮರಣದವರಗೂ ಅವುಗಳ ವಿಚಾರಣೆ ನಡೆದವು ಅವುಗಳಲ್ಲಿ ಪ್ರಮುಖವಾದವು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮೇರಿಕಾದಿಂದ ಸುಂಕ ಪಾವತಿ ಮಾಡದೇ ವಿಮಾನಗಳನ್ನು ಆಮದು ಮಾಡಿಕೊಂಡದ್ದು ಮತ್ತು ತನ್ನ ಒಡೆತನದಲ್ಲಿ ಇದ್ದ ಶಸ್ತ್ರಾಸ್ತ್ರ ಕಾರ್ಖಾನೆಗೆ ಸ್ಪೈನ್ ದೇಶದಿಂದ ಅಕ್ರಮವಾಗಿ ಬಂದೂಕಿಗೆ ಸಂಬಂಧ ಪಟ್ಟ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡದ್ದು.

ಮರಣ[ಬದಲಾಯಿಸಿ]

ಜೂನ್ ೧೦, ೧೯೯೪ರಂದ ಘಟಿಸಿದ ವಿಮಾನಾಪಘಾತದಲ್ಲಿ ಮರಣ ಹೊಂದಿದರು. ತನ್ನ ಆಶ್ರಮದ ಖಾಸಗೀ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲುಗಡೆಗೊಳಿಸುವ ಪ್ರಕ್ರಿಯೆಯಲ್ಲಿ ವಿಮಾನವು ಮರಕ್ಕೆ ಗುದ್ದಿ ಈ ಘಟನೆ ಸಂಭವಿಸಿತು. ಇವರೊಂದಿಗೆ ಆ ವಿಮಾನದ ಪೈಲಟ್ ಕೂಡ ಮೃತಪಟ್ಟನು.[೬]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಧೀರೇಂದ್ರ ಬ್ರಹ್ಮಚಾರಿಯವರ ಸೂಕ್ಷ್ಮ ವ್ಯಾಯಾಮ, ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯದಿಂದ

ಉಲ್ಲೇಖಗಳು[ಬದಲಾಯಿಸಿ]

  1. https://escholarship.org/uc/item/6r63q6qn
  2. ೨.೦ ೨.೧ https://www.nytimes.com/1994/06/10/obituaries/dhirendra-brahmachari-yoga-master-70.html
  3. "ಆರ್ಕೈವ್ ನಕಲು". Archived from the original on 2016-03-04. Retrieved 2020-09-27.
  4. https://www.indiatoday.in/magazine/indiascope/story/19830815-speculation-rife-about-swami-dhirendra-brahmacharis-estrangement-from-gandhi-family-770911-2013-07-17
  5. https://magazine.outlookindia.com/story/the-truth-about-indira/211665
  6. thestatesman.com/india/from-fame-to-ruins-legacy-of-forgotten-guru-dhirendra-brahmachari-1502750141.html