ಉಳ್ಳಾಲ ಶ್ರೀನಿವಾಸ ಮಲ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಳ‍್ಳಾಲ ಶ್ರೀನಿವಾಸ ಮಲ್ಯ
ಚಿತ್ರ:Ullala Srinivas Mallya.jpg
ವೈಯಕ್ತಿಕ ಮಾಹಿತಿ
ಜನನ (೧೯೦೨-೧೧-೨೧)೨೧ ನವೆಂಬರ್ ೧೯೦೨
ಮಂಗಳೂರು, ಮದ್ರಾಸ್ ಪ್ರಾಂತ್ಯ
ಮರಣ 19 December 1965(1965-12-19) (aged 63)
ದೆಹಲಿ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಇಂದಿರಾ ಬಾಯಿ
ಧರ್ಮ ಹಿಂದೂ

ಉಳ್ಳಾಲ ಶ್ರೀನಿವಾಸ ಮಲ್ಯ (ಶೀನಪ್ಪ ಮಲ್ಯ) ಇವರು ಆಧುನಿಕ ಕೆನರಾ ಪ್ರಾ೦ತ್ಯದ ಹರಿಕಾರರು[೧]. ಇವರು ೧೮ ವರ್ಷಗಳ ಕಾಲ ಸ೦ಸತ್ ಸದಸ್ಯರಾಗಿದ್ದರು. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟವರು.[೨]

ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆ[ಬದಲಾಯಿಸಿ]

೧೯೦೨, ನವೆಂಬರ್ ೨೧ರಂದು ಮಂಗಳೂರು ರಥಬೀದಿ ಸಮೀಪದ ಬಜಲಕೇರಿ ಎಂಬಲ್ಲಿಯ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಇವರು ಜನಿಸಿದರು. ತಾಯಿ ಸರಸ್ವತಿ ಆಲಿಯಾಸ್ ರುಕ್ಮಾ ಬಾಯಿ, ತಂದೆ ಮಂಜುನಾಥ ಮಲ್ಯರು. ಉಳ್ಳಾಲದಿಂದ ಮಲ್ಯರ ಕುಟುಂಬವು ಮಂಗಳೂರಿಗೆ ಬಂದು ವ್ಯಾಪಾರದ ಬಂಡಸಾಲೆ ನಡೆಸುತ್ತಿತ್ತು. ಇವರು ಸಾಮಾಜಿಕ ಕಾರ್ಯಕರ್ತ ಡಾ.ಉಳ್ಳಾಲ ಪದ್ಮನಾಭ ಮಲ್ಯ ಸೇರಿದಂತೆ ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಹೊಂದಿದ್ದಾರೆ. ಸಂತ ಎಲೋಶಿಯಸ್ ಕಾಲೇಜಿನಲ್ಲಿ ಎಂಟನೇ ತರಗತಿಯವರೆಗೆ ಕಲಿತು ಮುಂದಿನ ವಿದ್ಯಾಭ್ಯಾಸವನ್ನು ಕೆನರಾ ಹೈಸ್ಕೂಲಿನಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಟರ್ ಮಿಡಿಯಟ್ ತರಗತಿಗೆ ಸೇರ್ಪಡೆ ಹೊಂದಿದರು. ಆ ದಿನಗಳಲ್ಲಿ ವ್ಯಾಪಕವಾಗಿ ಹರಡಿದ್ದ ಸ್ವಾತಂತ್ರ್ಯ ಹೊರಾಟದ ಪ್ರಭಾವಕ್ಕೆ ಒಳಗಾಗಿ ಕಾಲೇಜು ವಿದ್ಯಾಭ್ಯಾಸ ಮುಂದುವರೆಸದೇ ಸ್ವಾತಂತ್ರ್ಯ ಚಳುವಳಿಯ ಭಾಗವಾದರು.ಬಂಟ್ವಾಳದ ಸಾಹುಕಾರ್‌ ದಾಮೋದರ ಪ್ರಭುಗಳ ಮಗಳಾದ ಇಂದಿರಾ ಬಾಯಿಯವರನ್ನು ವಿವಾಹವಾದರು. [೩]

ಸ್ವಾತ೦ತ್ರ್ಯ ಹೋರಾಟ[ಬದಲಾಯಿಸಿ]

೧೯೨೦, ಆಗಸ್ಟ್ ೧೯ರಂದು ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದ ಗಾಂಧೀಜಿಯವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಂದಿನ ದಿನಗಳಲ್ಲಿ ಮಂಗಳೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಚಳುವಳಿಯು ಕಾರ್ನಾಡು ಸದಾಶಿವ ರಾಯರ ಮುಂದಾಳತ್ವದಲ್ಲಿ ನಡೆಯುತ್ತಿತ್ತು. ಇದರ ಪ್ರಭಾವಕ್ಕೆ ಒಳಗಾದ ಶ್ರೀನಿವಾಸ ಮಲ್ಯರು ೧೮ನೇ ವಯಸ್ಸಿನಲ್ಲಿ ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶ್ರೀನಿವಾಸ ಮಲ್ಯರು ಗಾಂಧೀಜಿಯವರ ಕರೆಯಂತೆ ಖಾದಿಧಾರಣೆಗೆ ತೊಡಗಿದ್ದರು. ಸ್ಥಳೀಯ ಮತ್ತು ಪ್ರಾಂತೀಯ ಸಂಘಟನೆಯಲ್ಲಿ ಸಕ್ರಿಯರಾದರು. ಕ್ವಿಟ್‌ ಇಂಡಿಯಾ ಚಳುವಳಿ, ವೈಯಕ್ತಿಕ ಸತ್ಯಾಗ್ರಹದಂಥಹ ರಾಷ್ಟ್ರೀಯ ಆಂದೋಲನಗಳಲ್ಲಿ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡರು.೧೯೪೨ರ ಕ್ವಿಟ್‌ಇಂಡಿಯಾ ಚಳುವಳಿಯಲ್ಲಿ ಬಂಧನಕ್ಕೊಳಗಾದರು. ಕಾಮರಾಜ ನಾಡಾರ್‌, ಪಿ.ಸುಬ್ರಹ್ಮಣ್ಯ, ಡಾ| ವೆಂಕಟರಾಮನ್‌ ಮತ್ತಿತರರು ಸೆರೆವಾಸದ ವೇಳೆ ಮಲ್ಯರ ಸಹವರ್ತಿಗಳಾಗಿದ್ದರು. [೪]

ರಾಜಕೀಯ ಜೀವನ[ಬದಲಾಯಿಸಿ]

ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾ೦ಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು[೫]. ೧೯೪೬ರಲ್ಲಿ ಭಾರತ ಸ್ವತಂತ್ರಗೊಳ್ಳುವ ಪೂರ್ವಭಾವಿಯಾಗಿ ಏರ್ಪಟ್ಟ ನಡುಗಾಲದ ಸರಕಾರ ಹಾಗೂ ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿ ಮಲ್ಯರು ಆಯ್ಕೆಗೊಂಡರು. 1947ರಲ್ಲಿ ರಾಷ್ಟ್ರ ಸ್ವಾತಂತ್ರ್ಯ ಗಳಿಸಿದಾಗ ದೇಶದ ಪ್ರಥಮ ಗೃಹಸಮಿತಿಯ ಸದಸ್ಯರಾದರು. ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯುಕ್ತರಾದರು. ಬಳಿಕ ಪಕ್ಷದ ಮುಖ್ಯ ಸಚೇತಕರಾದರು. ೧೯೫೨, ೧೯೫೭ ಹಾಗೂ ೧೯೬೨ರಲ್ಲಿ ಜರಗಿದ ಸಾರ್ವತ್ರಿಕ ಚುನಾವಣೆಗಳಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಮಲ್ಯರು ನಿರಂತರವಾಗಿ ಚುನಾಯಿತರಾಗಿದ್ದರು. ಕೇಂದ್ರ ಸರಕಾರದ ಮುಖ್ಯ ಸಚೇತಕರಾಗಿದ್ದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಲಮಿತಿಯ ಹಲವು ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕಾಗಿ ಪಣತೊಟ್ಟರು. ೧೯೫೧ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎ.ಐಸಿ.ಸಿ.ಯ ಅಧ್ಯಕ್ಷರಾಗಿದ್ದಾಗ ಮಲ್ಯರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.

ಇವರು ಆರಂಭಿಸಿದ ಕೆಲವು ಯೋಜನೆ[ಬದಲಾಯಿಸಿ]

ಕರ್ನಾಟಕ ರೀಜಿನಲ್ ಇ೦ಜಿನಿಯರಿ೦ಗ್ ಕಾಲೇಜ್, ಸುರತ್ಕಲು

ನೆನಪು[ಬದಲಾಯಿಸಿ]

ಶ್ರೀನಿವಾಸ ಮಲ್ಯರು ೧೯೬೫ರ ಡಿಸೆಂಬರ್‌ ೧೯ರಂದು ಬೆಳಿಗ್ಗೆ ದೆಹಲಿಯಿಂದ ಮಂಗಳೂರಿಗೆ ಹೋಗುವ ಉದ್ದೇಶದಿಂದ ಹೊರಟವರು ಕಾರಿನಲ್ಲಿಯೇ ಬೆಳಗಿನ ೭.೪೫ಕ್ಕೆ ಹೃದಯಾಘಾತದಿಂದ ಅಸುನೀಗಿದರು. ರಷ್ಯಾ ಸರಕಾರವು ಉಡುಗೊರೆಯಾಗಿ ನೀಡಿದ್ದ ಇಲ್ಯೂಶನ್‌ ಜೆಟ್‌ ಪವನ್‌ ಹಂಸ ಎನ್ನುವ ವಿಶೇಷ ವಿಮಾನದಲ್ಲಿ ಮಲ್ಯರ ಪಾರ್ಥಿವ ಶರೀರವನ್ನು ಮಂಗಳೂರಿಗೆ ತರಲಾಯಿತು. ಪಾರ್ಥಿವ ಶರೀರವನ್ನು ನೆಹರೂ ಮೈದಾನದ ಪೆವಿಲಿಯನ್‌ನಲ್ಲಿ ಸ್ವಲ್ಪಹೊತ್ತು ಸಾರ್ವಜನಿಕ ವೀಕ್ಷಣೆಗೆ ಇರಿಸಿ, ನಂತರ ಅಂತಿಮ ಕ್ರಿಯೆಗಳನ್ನು ನಡೆಸಲಾಯಿತು.ಯು. ಶ್ರೀನಿವಾಸ ಮಲ್ಯರ ಶಾಶ್ವತ ನೆನಪಿಗಾಗಿ ನವಮಂಗಳೂರು ಬಂದರು ಪ್ರವೇಶದ್ವಾರದಲ್ಲಿ, ಪದುವಾ ಹೈಸ್ಕೂಲು ಮುಂಭಾಗದಲ್ಲಿ ಮುಂತಾದೆಡೆ ಅವರ ಪ್ರತಿಮೆಗಳಿವೆ. ಸುರತ್ಕಲ್‌ ಎನ್‌.ಐ.ಟಿ.ಕೆ ಸ್ಮಾರಕ ಭವನ ಮುಂತಾದವು ನಿರ್ಮಾಣಗೊಂಡಿವೆ. 2002ರಲ್ಲಿ ಮಲ್ಯ ಶತಮಾನೋತ್ಸವವನ್ನು ದ.ಕ.ಜಿಲ್ಲಾಡಳಿತದ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪಡೀಲ್‌ ಪಂಪ್‌ವೆಲ್‌ ರಸ್ತೆಗೆ ಯು. ಶ್ರೀನಿವಾಸ ಮಲ್ಯ ರಸ್ತೆ ಎಂಬುದಾಗಿ ನಾಮಕರಣ ಮಾಡಿ ಶ್ರೀನಿವಾಸ ಮಲ್ಯ ಸ್ಮಾರಕ ರಚಿಸಲಾಗಿದೆ

ಉಲ್ಲೇಖ[ಬದಲಾಯಿಸಿ]

  1. http://news13.in/archives/14580
  2. ಉಳ್ಳಾಲ ಶ್ರೀನಿವಾಸ ಮಲ್ಯ[ಶಾಶ್ವತವಾಗಿ ಮಡಿದ ಕೊಂಡಿ]
  3. "ಆಧುನಿಕ ಮಂಗಳೂರು ನಿರ್ಮಾತೃ" ಶ್ರೀನಿವಾಸ ಮಲ್ಯ, ಸಂ: ಬಸ್ತಿ ವಾಮನ ಶೆಣೈ ಪ್ರ:ಕೊಂಕಣಿ ಭಾಸ ಅನಿ ಸಂಸ್ಕೃತಿ ಪ್ರತಿಷ್ಠಾನ, ಮಂಗಳೂರು[ಶಾಶ್ವತವಾಗಿ ಮಡಿದ ಕೊಂಡಿ]
  4. ಉದಯವಾಣಿ ವಿಶೇಷ ಲೇಖನ, ಲೇ: ಮುದ್ದು ಮೂಡುಬೆಳ್ಳೆ
  5. http://www.varthabharati.in/article/sahabalve-sagara/4319