ಸದಸ್ಯ:Ganya ganiga/sandbox 2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಾದ್ಯಂತ ಬೆಳೆಯುವ ಮಂಗರವಳ್ಳಿಯನ್ನು ಮುರಿದ ಮೂಳೆಗಳನ್ನು ಜೋಡಿಸುವ ಗುಣವಿರುವುದಕ್ಕಾಗಿ ಸಂಸ್ಕೃತದಲ್ಲಿ ಅಸ್ಥಿಶೃಂಖಲ ಎಂದು ಕರೆಯಲಾಗುತ್ತದೆ.ಇದೊಂದು ಬಳ್ಳಿ ಗಿಡ.ಇದನ್ನು ಸಂದು ಬಳ್ಳಿ,ಸಂದಕದ ಗಿಡ ಎಂದೂ ಕರೆಯುವುದುಂಟು.ಎಲ್ಲೆಡೆ ಆಲಂಕಾರಿಕ ಗಿಡವಾಗಿ ಬೆಳೆಯುತ್ತಾರಾದರೂ ಇದರ ಔಷಧಿ ಗುಣಗಳ ಪರಿಚಯ ಅನೇಕರಿಗಿಲ್ಲ.

ಸಸ್ಯವರ್ಣನೆ[ಬದಲಾಯಿಸಿ]

ನೆರಲೆಕುಡಿ ಅಂತಲೂ ಹೆಸರಿರುವ ಈ ಕ್ಯಾಕ್ಟಸ್ ಜಾತಿಯ ಬಳ್ಳಿ ಹಪ್ಪಳದ ಖಾರಕ್ಕೆ ಅತೀ ಅವಶ್ಯ. ಕಾಂಡವು ಮೃದುವಾಗಿದ್ದು, ಬೇರೆ ಗಿಡಗಳನ್ನು ಆಶ್ರಯಿಸಿ ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಬೆಳೆಯುವುದು, ಹಸಿರು ಬಣ್ಣದ ಕಾಂಡವು ರಸಭರಿತವಾಗಿದ್ದು, ಚಪ್ಪಟೆಯಾಗಿ, ಚೌಕೋನದಂತೆ ಇರುವುದು.ಕಾಂಡದ ಮೇಲೆ ಎರಡು ಅಂಗುಲ ಅಂತರದಲ್ಲಿ ಒಂದೊಂದು ಗಿಣ್ಣು ಇರುವುದು.ಪ್ರತಿ ಗಿಣ್ಣಿನಲ್ಲಿ ಒಂದು ಚಿಕ್ಕದಾದ ಹಸಿರೆಲೆ ಇರುವುದು.ಜುಲೈ ತಿಂಗಳಲ್ಲಿ ಹೂವು ಕಂಡುಬರುತ್ತದೆ.ಇದರಲ್ಲಿ ೩ ಮೂಲೆಯ ಮಂಗರವಳ್ಳಿ ಸಹ ಕಂಡುಬರುತ್ತದೆ.ಸಿಸ್ಸಸ್ ಕ್ವಾಡ್ರಾಂಗ್ಯುಲ್ಯಾರಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ವೈಟೇಸಿ ಎಂಬ ಕುಟುಂಬಕ್ಕೆ ಸೇರಿದೆ.

ಮಣ್ಣು[ಬದಲಾಯಿಸಿ]

ಇದು ಹೆಚ್ಚಿನ ಸಾವಯವ ಅಂಶವುಳ್ಳ ಮಣ್ಣು ಅಥವಾ ಕೆಂಪುಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಸಸ್ಯಾಭಿವೃದ್ಧಿ[ಬದಲಾಯಿಸಿ]

ಇದನ್ನು ಮೃದುಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು.೩ರಿಂದ ೪ ಗಿಣ್ಣುಗಳಿರುವ ಕಾಂಡವನ್ನು ಉಪಯೋಗಿಸಬಹುದು.ಕಾಂಡವು ಚಿಗುರಲು ೭ರಿಂದ ೧೦ ದಿನಗಳು ತೆಗೆದುಕೊಳ್ಳುತ್ತದೆ.ಹಿತ್ತಲಲ್ಲಿರುವ ಯಾವುದಾದರೂ ಮರಕ್ಕೆ ಹಬ್ಬಿಸಬಹುದು ಅಥವಾ ತೂಗು ಕುಂಡುಗಳಲ್ಲೂ ಬೆಳೆಯಬಹುದು.

ಬೇಸಾಯ ಕ್ರಮಗಳು[ಬದಲಾಯಿಸಿ]

ಒಂದು ಚ.ಮೀಟರ್ ನಷ್ಟು ಜಾಗವನ್ನು ಚೆನ್ನಾಗಿ ಹದಮಾಡಿ, ಬೇರುಬಿಟ್ಟ ಕಾಂಡದ ತುಂಡುಗಳನ್ನು ೬೦ಸೆಂ.ಮೀ ಅಂತರದಲ್ಲಿ ನೆಡಬೇಕು.ನಾಟಿ ಮಾಡಿದ ನಂತರ ಒಂದು ವಾರ ಪ್ರತಿದಿನವೂ ನೀರು ಕೊಡಬೇಕು.ನಂತರದ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು.ಪ್ರತಿಗಿಡಕ್ಕೆ ೨ ಕೆ.ಜಿ ಯಷ್ಟು ಕೊಟ್ಟಿಗೆ ಗೊಬ್ಬರವನ್ನು ಒದಗಿಸಬೇಕು.ಹಾಗೆಯೇ ಗಿಡವನ್ನು ಹಬ್ಬಿಸಲು ಆಧಾರವನ್ನು ಕೊಡಬೇಕು.

ಕೊಯ್ಲು ಮತ್ತು ಇಳುವರಿ[ಬದಲಾಯಿಸಿ]

ಒಂದು ಚ.ಮೀಟರ್ ಪ್ರದೇಶದಿಂದ ಸುಮಾರು ಒಂದು ಕೆ.ಜಿ ಯಷ್ಟು ಕಾಂಡದ ಇಳುವರಿಯನ್ನು ಪಡೆಯಬಹುದು.ಇದಕ್ಕೆ ಯಾವುದೇ ರೀತಿಯ ಕೀಟ ಅಥವಾ ರೋಗಬಾಧೆ ಕಂಡುಬರುವುದಿಲ್ಲ.

ಉಪಯುಕ್ತ ಭಾಗಗಳು[ಬದಲಾಯಿಸಿ]

ಕಾಂಡ, ಟ್ರೈಟರ್ಪಿನಾಯ್ಡ್ಸ್, ಟ್ರಾಕ್ಸೆರಾಲ್,ಸಿಟೊಸ್ಟೆರಾಲ್.

ಔಷಧೀಯ ಗುಣಗಳು[ಬದಲಾಯಿಸಿ]

  • ಮೂಳೆ ಮುರಿದಾಗ ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕಬೇಕು.ನಾಟಿವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಳೆ ಮುರಿದಾಗ ಈ ಬಳ್ಳಿಯನ್ನು ಚಿಕಿತ್ಸೆಗೆ ಉಪಯೋಗಿಸುತ್ತಾರೆ.
  • ಮೂಲವ್ಯಾಧಿಯಿಂದ ಬಳಲುವವರು ಮಂಗರವಳ್ಳಿಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಮೂಲವ್ಯಾಧಿಯ ಮೊಳಕೆಗೆ ಲೇಪಿಸಬೇಕು.
  • ಗಾಯಗಳಾಗಿರುವಾಗ ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ.
  • ಚರ್ಮರೋಗಗಳಿಂದ ಬಳಲುವವರು ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದಲ್ಲದೇ ಮೇಲೆ ಲೇಪಿಸಬೇಕು.
  • ಮೂತ್ರ ಕಟ್ಟಿದಲ್ಲಿ ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯಬೇಕು.[೧]

ಅಡುಗೆ[ಬದಲಾಯಿಸಿ]

ಚಟ್ನಿ[ಬದಲಾಯಿಸಿ]

ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು.ನಂತರ ಈರುಳ್ಳಿ, ಹಸಿಮೆಣಸಿನಕಾಯಿಯೊಂದಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ತೆಂಗಿನತುರಿಯೊಡನೆ ರುಬ್ಬಿಕೊಳ್ಳಬೇಕು.ಈ ಚಟ್ನಿ ಕೆಮ್ಮು, ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು.[೨]

ಇತರ ಭಾಷೆಗಳಲ್ಲಿ[ಬದಲಾಯಿಸಿ]

  • ಸಂಸ್ಕೃತ - ಅಸ್ಥಿಸಂಹಾರಕ, ಅಸ್ಥಿಶೃಂಖಲ, ವಜ್ರವಲ್ಲಿ
  • ಹಿಂದಿ - ಹಡ್ಜೋಡ್
  • ಮರಾಠಿ - ನಾದೇನ
  • ತಮಿಳು - ಪಿಂಡೈ
  • ತೆಲುಗು - ನಲ್ಲೇರು
  • ಇಂಗ್ಲೀಷ್ - edible stemmed vine; bone setter
  • ವೈಜ್ಞಾನಿಕ ಹೆಸರು - cissus quadrangularis L

ಉಲ್ಲೇಖಗಳು[ಬದಲಾಯಿಸಿ]

  1. ಮನೆಯಂಗಳದಲ್ಲಿ ಔಷಧಿವನ,ಡಾ.ಎಂ.ವಸುಂಧರ ೭ನೇ ಮುದ್ರಣ,ಪುಟ ಸಂಖ್ಯೆ ೧೬೭
  2. http://kannada.oneindia.com/column/gv/2007/210707kitchen-medicine-garden.html