ಹೊಸಹಳ್ಳಿ ಜಿ ಅನಂತ ಅವಧಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಸಹಳ್ಳಿ ಜಿ ಅನಂತ ಅವಧಾನಿ
ಹಿನ್ನೆಲೆ ಮಾಹಿತಿ
ಜನನ೨೫ ಜನವರಿ, ೧೯೪೮
ಮೂಲಸ್ಥಳಹೊಸಹಳ್ಳಿ , ಶಿವಮೊಗ್ಗ, ಕರ್ನಾಟಕ
ಸಂಗೀತ ಶೈಲಿಕರ್ನಾಟಕ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕ
ಸಕ್ರಿಯ ವರ್ಷಗಳು೧೯೭೬ ರಿಂದ

ಹೊಸಹಳ್ಳಿ ಜಿ ಅನಂತ ಅವಧಾನಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಓರ್ವ ವಿದ್ವಾನ್ ಆಗಿರುವರು.

ಹಿನ್ನೆಲೆ ಹಾಗು ಆರಂಭಿಕ ಜೀವನ[ಬದಲಾಯಿಸಿ]

ಹೊಸಹಳ್ಳಿ ಜಿ ಅನಂತ ಅವಧಾನಿ ಅವರು ದಿನಾಂಕ ೨೫, ಜನವರಿ ೧೯೪೮ರಲ್ಲಿ ಶ್ರೀ ಗೋಪಾಲ ಅವಧಾನಿ ಹಾಗೂ ಶ್ರೀಮತಿ ಲಕ್ಷ್ಮೀದೇವಮ್ಮ ಇವರ ಪ್ರಥಮ ಪುತ್ರನಾಗಿ ಜನಿಸಿದರು. ಇವರು ತಮ್ಮ ಒಂಭತ್ತನೆಯ ವಯಸ್ಸಿನಲ್ಲೇ ಪೂಜ್ಯ ಗುರುಗಳಾದ ವಿದ್ವಾನ್ ಶ್ರೀ ಹೆಚ್.ಆರ್. ನಾರಾಯಣರಾಯರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಾರಂಭಿಸಿದರು. ಗುರುಗಳ ಪರಮ ಅನುಗ್ರಹದಿಂದ ೧೯೭೬ರಲ್ಲಿ ಕರ್ನಾಟಕ ಘನ ಸರ್ಕಾರ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಅಂದಿನಿಂದಲೂ ಶಿವಮೊಗ್ಗೆಯಲ್ಲಿ “ಅನಂತ ಸಂಗೀತ ಸಭಾ" ಎಂಬ ಶಾಲೆಯನ್ನು ಆರಂಭಿಸಿ ಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಇವರಲ್ಲಿ ಶಿಕ್ಷಣವನ್ನು ಪಡೆದ ಹಲವಾರು ವಿದ್ಯಾರ್ಥಿಗಳು ದೇಶದ ನಾನಾ ಕಡೆಗಳಲ್ಲಿ ಸಂಗೀತ ಶಿಕ್ಷಣವನ್ನು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಜೊತೆಯಲ್ಲಿ ವಿ| ಶ್ರೀ ಹೆಚ್.ಜಿ. ಅನಂತರವರು ಶ್ರೀ ಪುರಂದರ ದಾಸರ ದೇವರನಾಮಗಳ ಹಾಗೂ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ, ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಕಾರ್ಯಾಗಾರಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

ಸಂಗೀತಕೃಷಿ[ಬದಲಾಯಿಸಿ]

೪೦ ವರ್ಷಗಳಿಂದ ರಾಜ್ಯದ ನಾನಾ ಕಡೆಗಳಲ್ಲಿ ಅನೇಕ ಹಿರಿಯ-ಕಿರಿಯ ಕಲಾವಿದರ ಪಕ್ಕವಾದ್ಯದೊಂದಿಗೆ ಶಾಸೀಯ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ವಿದ್ವಾನ್ ಶ್ರೀ ಹೆಚ್.ಜಿ. ಅನಂತರವರು ಶೃಂಗೇರಿ ಶಾರದಾ ಪೀಠಮ್, ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಶಿವಮೊಗ್ಗದ ಶ್ರೀ ರಾಮಸೇವಾ ಸಮಿತಿ, ಶ್ರೀ ವಿದ್ಯಾಗಣಪತಿ ಸೇವಾ ಸಂಘ, ನಾದಸುಧಾ, ಚಿಕ್ಕಮಗಳೂರಿನ ಎಂ.ಈ.ಎಸ್. ಕಾಲೇಜು, ಬೆಂಗಳೂರಿನ ಎನ್.ಇ.ಎಸ್. ಕಾಲೇಜು, ಕರ್ನಾಟಕ ಗಾನಕಲಾ ಪರಿಷತ್, ಮೈಸೂರಿನ ರಾಮ ಸೇವಾ ಸಮಿತಿ ಹೀಗೆ ಇನ್ನೂ ಅನೇಕ ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನರ ಮೆಚ್ಚುಗೆಯನ್ನು ಪಡೆದಿರುತ್ತಾರೆ ಹಾಗೂ ಆಕಾಶವಾಣಿಯಲ್ಲಿ “ಬಿ ಹೈ ಗ್ರೇಡ್" ಕಲಾವಿದರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸಂಕೇತಿ ಸಂಗೀತ ಸಭಾ, ಹೊಸಹಳ್ಳಿ-ಮತ್ತೂರು, ಸಂಸ್ಥೆಯು ವಿದ್ವಾನ್ ಶ್ರೀ ಹೆಚ್.ಜಿ. ಅನಂತ ಅವಧಾನಿಗಳ ಕಂಠಸಿರಿಯ “ಗಾನ ಮಾಧುರ್ಯಂ" ಎಂಬ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿದೆ.

ಪ್ರಶಸ್ತಿ/ಪುರಸ್ಕಾರಗಳು[ಬದಲಾಯಿಸಿ]

ಇವರ ಸಾಧನೆಗಳನ್ನು ಗುರುತಿಸಿದ ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಬಿರುದುಗಳನ್ನಿತ್ತು ಗೌರವಿಸಿದೆ.

  • ಘನ ಕರ್ನಾಟಕ ಸರ್ಕಾರವು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ೨೦೧೪-೧೫ನೇ ಸಾಲಿನ “ಕರ್ನಾಟಕ ಕಲಾಶ್ರೀ ಪ್ರಶಸ್ತಿ"ಯನ್ನಿತ್ತು ಗೌರವಿಸಿದೆ[೧].

ಇವರನ್ನರಸಿ ಬಂದ ಕೆಲವು ಪ್ರಮುಖ ಬಿರುದುಗಳೆಂದರೆ

  • ನಾದಸಿರಿ
  • ಕಲಾತಪಸ್ವೀ
  • ಶಿವಮುಖ ಸಂಗೀತ ಪ್ರವಾಣ
  • ಸಂಗೀತ ವಿದ್ವನ್ಮಣಿ
  • ಗಾನ ತಪಸ್ವೀ
  • ತ್ಯಾಗರಾಜ ಗಾನ ಗಂಧರ್ವ
  • ಸಂಗೀತ ವಾರಿಧಿ
  • ಸಂಗೀತ ತಪೋನಿಧಿ

ಈ ಕೆಳಗಿನ ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ವಿದ್ವಾನ್ ಶ್ರೀ ಹೆಚ್.ಜಿ. ಅನಂತರವರನ್ನು ಸನ್ಮಾನಿಸಿ ಗೌರವಿಸಿರುತ್ತಾರೆ

  • ಭಕ್ತಿ ಭಾರತೀ ಪ್ರತಿಷ್ಠಾನ-ಬೆಂಗಳೂರು
  • ಸಂಸ್ಕಾರ ಭಾರತೀ – ಮೈಸೂರು
  • ಶ್ರೀ ರಾಮ ಸೇವಾ ಸಮಿತಿ – ಮೈಸೂರು
  • ಎಂ.ಇ.ಎಸ್. ಶಿಕ್ಷಣ ಸಂಸ್ಥೆ – ಚಿಕ್ಕಮಗಳೂರು
  • ಎನ್.ಇ.ಎಸ್. ಶಿಕ್ಷಣ ಸಂಸ್ಥೆ-ಬೆಂಗಳೂರು
  • ಶಿವಮುಖ ಸಂಗೀತ ಅಕಾಡೆಮಿ-ಶಿವಮೊಗ್ಗ
  • ನಾದಸುಧಾ-ಶಿವಮೊಗ್ಗ
  • ಕೋಟೆ ಆಂಜನೇಯ ದೇವಸ್ಥಾನ-ಶಿವಮೊಗ್ಗ
  • ಹಿಂದೂ ಮಹಾಸಭಾ-ರಿಪ್ಪನ್ ಪೇಟೆ
  • ಶ್ರೀ ತ್ಯಾಗರಾಜ ಸಂಗೀತ ಸಭಾ – ಸೂರಳಿ
  • ಮುರಳೀ ಗಾನ ಸಭಾ-ಭದ್ರಾವತಿ
  • ಅರುಣೋದಯ ಸಂಗೀತ ಶಾಲೆ-ಬೆಂಗಳೂರು
  • ಸ್ವರಮೇಧಾ ಇಂಟಾರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ-ಬೆಂಗಳೂರು[೨]

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ-ಕಲಾಶ್ರೀ’-ಪ್ರಶಸ್ತಿ-ಪ್ರಕಟ prajavani.net
  2. https://kannadatimes.com/swaramedha-international-music-academy-annual-day-2016-17-report-and-photos/