ರಂಗನಾಥ ದಿವಾಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಂಗನಾಥ ರಾಮಚಂದ್ರ ದಿವಾಕರ ಇವರು ೧೮೯೪ ಸಪ್ಟಂಬರ ೩೦ ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ, ತಾಯಿ ಸೀತಾಬಾಯಿ. ಇವರು ಬೆಳಗಾವಿ, ಪುಣೆ, ಮುಂಬಯಿಯಲ್ಲಿ ಶಿಕ್ಷಣ ಪಡೆದು ಎಮ್.ಏ.ಪದವಿಧರರಾದರು. ಸರ್ ಸಿದ್ದಪ್ಪ ಕಂಬಳಿ, ಕೆ ಸಿ ರೆಡ್ಡಿ, ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮೊದಲಾದ ಧೀಮಂತರೊಡಗೂಡಿ ಭಾರತದ ಸ್ವಾತಂತ್ರ್ಯ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದರು.

ಗಾಂಧೀಜಿ, ತಿಲಕ, ಅರವಿಂದ[೧] ರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅಪ್ಪಟ ಗಾಂಧಿವಾದಿಯಾಗಿ ಜೀವನದುದ್ದಕ್ಕು ಬದುಕಿದರು.

ಭಾಷಾವಾರು ಪ್ರಾಂತ್ಯದ ರಚನೆ ಸಂಬಂಧ, ಬ್ರಿಟಿಷರ ಬಳಿ ಮನವಿ ಸಲ್ಲಿಸಲು ಸರ್ ಸಿದ್ದಪ್ಪ ಕಂಬಳಿಯವರ ಸಲಹೆಯ ವಿರುದ್ಧ ನಡೆಯಲು, ಕೆ ಪಿ ಸಿ ಸಿ ಅಧ್ಯಕ್ಷ ದಿವಾಕರರು ಮುಂದಾದರು. ಭಾಷಾವಾರು ಪ್ರಾಂತ್ಯಗಳನ್ನು ಮಾಡಲು ಬ್ರಿಟಿಷರ ವರದಿಯನ್ನೇ ಬಳಸಿದಾಗ, ಕರ್ನಾಟಕಕ್ಕೆ ಜತ್ತಿ, ಅಕ್ಕಲಕೋಟೆ, ಕಾಸರಗೋಡು, ಸಾಂಗ್ಲಿ, ಮಿರಜ್, ಕೊಲ್ಹಾಪುರ, ಸೊಲ್ಲಾಪುರ ಮುಂತಾದ ಪ್ರಾಂತ್ಯಗಳು ಬರುವುದು ತಪ್ಪಿದವು. ದಿವಾಕರರಿಗೆ ಇದು ಜೀವನದುದ್ದಕ್ಕೂ ನೋವಿನ ವಿಷಯವಾಯಿತು.

ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ನಡೆಸುವ ಲೋಕಶಿಕ್ಷಣ ಟ್ರಸ್ಟನ ಅಧ್ಯಕ್ಷರಾಗಿ ೧೯೩೩ರಿಂದ ೧೯೭೪ರವರೆಗೆ ಸೇವೆ ಸಲ್ಲಿಸಿದ್ದರು. ೧೯೭೪ರಲ್ಲಿ ಆಡಳಿತ ನಿರ್ವಹಣೆಯಲ್ಲಿ ತಮ್ಮ ಪುತ್ರ ಅನಂತ ದಿವಾಕರರೊಂದಿಗೆ ವಿರಸವಾಗಿ, ಸಚಿವ ಎಂ.ವೈ.ಘೋರ್ಪಡೆ ಅವರ ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಮಾರಾಟ ಮಾಡಿದರು. ೧೯೮೧ರಿಂದ ೧೯೮೫ರವರೆಗೆ ಟ್ರಸ್ಟ ಮಾಲೀಕತ್ವದ ಬಗ್ಗೆ ಕೋರ್ಟ್ ಮೊಕದ್ದಮೆ ನಡೆದುಲೋಕಶಿಕ್ಷಣ ಟ್ರಸ್ಟ ಕರ್ನಾಟಕ ಸರ್ಕಾರದ ಅಧೀನದಲ್ಲಿ ನಡೆಯುತ್ತಿತ್ತು. ೧೯೯೦ರಲ್ಲಿ ದಿವಾಕರರು ನಿಧನರಾದರು.

ಸೇವೆ[ಬದಲಾಯಿಸಿ]

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆ.ಪಿ.ಸಿ.ಸಿ) ಅಧ್ಯಕ್ಷ (೧೯೩೦-೧೯೪೨)
ಶಾಸಕ, ಕರ್ನಾಟಕ ವಿಧಾನ ಸಭೆ
ವಾರ್ತೆ ಮತ್ತು ಪ್ರಸಾರ ಖಾತೆಯ ಸಂಪುಟ ಸಚಿವ, ಭಾರತ ಸರ್ಕಾರ (೧೯೪೯-೧೯೫೨)
ರಾಜ್ಯಪಾಲ, ಬಿಹಾರ ರಾಜ್ಯ (೧೫ ಜೂನ್ ೧೯೫೨ - ೫ ಜುಲೈ ೧೯೫೭)
ರಾಜ್ಯಸಭೆ ಸದಸ್ಯ (೧೯೫೨-೧೯೫೨, ೧೯೬೨-೧೯೬೮)

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಸೆರೆಮನೆಯಲ್ಲಿಯ ಇವರ ಅನುಭವಗಳು “ಸೆರೆಯ ಮರೆಯಲ್ಲಿ” ಕೃತಿಯಲ್ಲಿ ವ್ಯಕ್ತವಾಗಿವೆ. ಭಾರತ ಸ್ವತಂತ್ರವಾದ ಬಳಿಕ ಕೇಂದ್ರ ಸರಕಾರಸುದ್ದಿ ಶಾಖೆ ಮಂತ್ರಿಯಾಗಿ, ಬಿಹಾರರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ೧೯೩೮ರಲ್ಲಿ ಬಳ್ಳಾರಿಯಲ್ಲಿ ಜರುಗಿದ ೨೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ‘ ಸಂಯುಕ್ತ ಕರ್ನಾಟಕ’ , ‘ ಕರ್ಮವೀರ’ , ‘ ಕಸ್ತೂರಿ’ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ‘ ಲೋಕಶಿಕ್ಷಣ ಟ್ರಸ್ಟ’ ನ ಅಧ್ಯಕ್ಷರಾಗಿದ್ದರು.ಕೆಲ ಕಾಲ ’ಯುನೈಟೆಡ್ ಕರ್ನಾಟಕ’ ಎನ್ನುವ ಆಂಗ್ಲ ಪತ್ರಿಕೆಯನ್ನು ನಡೆಸಿದರು.

ರಂಗನಾಥ ದಿವಾಕರ ಅವರ ಕನ್ನಡ ಸಾಹಿತ್ಯರಚನೆ:

ಸೆರೆಯ ಮರೆಯಲ್ಲಿ, ಮಹಾತ್ಮರ ಮನೋರಂಗ, ವಚನಶಾಸ್ತ್ರ ರಹಸ್ಯ, ಹರಿಭಕ್ತಿಸುಧೆ, ಉಪನಿಷತ್ ಪ್ರಕಾಶ, ಉಪನಿಷತ್ ಕಥಾವಲಿ, ಗೀತೆಯ ಗುಟ್ಟು, ಕರ್ಮಯೋಗ, ೧೮೫೭ರ ಸ್ವಾತಂತ್ರ್ಯ ಸಂಗ್ರಾಮ, ಕಾಂಗ್ರೆಸ್ ರನ್ನ ಮಹೋತ್ಸವ, ಗಾಂಧೀಜಿ,ವಿಶ್ವಮೇಧ, ಕರನಿರಾಕರಣೆಯ ವೀರಕಥೆ, ಕರ್ನಾಟಕ ಏಕೀಕರಣ, ಜೈಹಿಂದ್ (ಕ್ಯಾಪ್ಟನ್ ಲಕ್ಷ್ಮೀ ಅವರು ಬರೆದ ಪುಸ್ತಕದ ಅನುವಾದ)

ರಂಗನಾಥ ದಿವಾಕರರ ಆಂಗ್ಲ ಗ್ರಂಥಗಳು:

ಸತ್ಯಾಗ್ರಹ, ಗ್ಲಿಂಪ್ಸಸ್ ಆಫ್ ಗಾಂಧೀಜಿ, ಉಪನಿಷತ್ ಇನ್ ಸ್ಟೊರೀಜ್ ಎಂಡ್ ಡೈಲಾಗ್, ಮಹಾಯೋಗಿ, ಭಗವಾನ್ ಬುದ್ಧ, ಕರ್ನಾಟಕ ಥ್ರೂ ಏಜಿಸ್(ಸಂಪಾದಿತ)

ದಿವಾಕರರು ರವರೆಗೆ ಬಿಹಾರ ರಾಜ್ಯದ ರಾಜ್ಯಪಾಲರಾಗಿದ್ದರು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಇವುಗಳನ್ನೂ ನೋಡಿ[ಬದಲಾಯಿಸಿ]