ಮಾರಿಕಾಂಬಾ ದೇವಸ್ಥಾನ (ಸಾಗರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರಿಕಾಂಬಾ ದೇವಸ್ಥಾನ(ಗಂಡನ ಮನೆ), ಸಾಗರ

ಶಕ್ತಿ ದೇವತೆ ಸಾಗರದ ಶ್ರೀ ಮಾರಿಕಾಂಬೆ.[ಬದಲಾಯಿಸಿ]

ಸಹ್ಯಾದ್ರಿಯ ತಪ್ಪಲಲ್ಲಿರುವ, ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ, ತೆಂಗುಗಳ ನಡುವೆ ಇತಿಹಾಸ ಪ್ರಸಿದ್ಧ ಕೆಳದಿ ಮತ್ತು ಇಕ್ಕೇರಿಗಳಿವೆ. ಇವುಗಳ ಮಧ್ಯೆ ಪ್ರಕೃತಿ ಸೌಂದರ್ಯದ ತಾಣವಾದ ಸಾಗರವಿದೆ. ಇಲ್ಲಿ ಮಾರಿಕಾಂಬೆಯು ನೆಲೆಗೊಂಡಿದ್ದಾಳೆ. ಮೊದಲು ಚಿಕ್ಕ ಗೂಡಿನಂತಿದ್ದ ಪೂಜಾ ಸ್ಥಳದಲ್ಲಿ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪನೆ ಆದಾಗಿನಿಂದ ಸದಾ ಪೂಜಿಸಲ್ಪಡುತ್ತಿದ್ದಾಳೆ.ಇಲ್ಲಿ ಮೂರು ವರ್ಷಕ್ಕೊಮ್ಮೆ ಅತೀ ವೈಭವದಿಂದ ಶ್ರೀ ಮಾರಿಕಾಂಬೆಯ ಜಾತ್ರೆ ನಡೆಯುತ್ತಿದೆ. ಕೆಳದಿ ಅರಸರು ಆಡಳಿತ ನಡೆಸುತ್ತಿದ್ದ ಕ್ರಿ.ಶ ೧೫೦೦ ರಿಂದ ೧೭೬೩3 ರ ಅವಧಿಯಲ್ಲಿ ಶ್ರೀ ಮಾರಿಕಾಂಬಾ ದೇವಾಲಯವನ್ನು ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ. ಜಾತ್ರೆಯ ಅವಧಿ ಒಂಭತ್ತು ದಿನಗಳು ಮಾತ್ರ. ಮಂಗಳವಾರ ಆರಂಭವಾಗಿ ಮುಂದಿನ ಬುಧವಾರದ ವರೆಗೆ ಭರದಿಂದ ಸಾಗುತ್ತದೆ. ಮೇಲು ಕೀಳುಗಳಿಂದ ಬೇಧಭಾವವಿಲ್ಲದೇ ಕೆಲಸ ಕಾರ್ಯಗಳು ಸಾಂಗವಾಗಿ ನಡೆಯುತ್ತವೆ. ತಳಿರು ತೋರಣಗಳಿಂದ, ದೀಪಾಲಂಕಾರಗಳಿಂದ ಈ ಸಾಗರ ನಗರ ಕಂಗೊಳಿಸುತ್ತದೆ. ಜಾತ್ರೆ ಆರಂಭಕ್ಕೆ 8 ದಿನಗಳ ಮೊದಲೇ “ಅಂಕೆ ಹಾಕುತ್ತಾರೆ.” ನಂತರ ಜಾತ್ರೆಯ ಕೆಲಸ ಸುಗಮ. ಜಾತ್ರೆ ಮುಗಿಯುವವರೆಗೆ ಈ ಊರಿನವರು ಪರ ಊರಿಗೆ ಹೋಗಬಾರದೆಂಬ ಪ್ರತೀತಿ ಇದೆ. ಈ ಜಾತ್ರೆಗೆ ಲಕ್ಷಗಟ್ಟಲೆ ಜನ ಬಂದು ಸೇರುತ್ತಾರೆ. ಹೊರಗಡೆಯಿಂದ ಬರುವ ಜನರಿಗೆ ಸ್ಥಳಿಯ ಸಂಘ ಸಂಸ್ಥೆಗಳಿಂದ ಉಚಿತವಾಗಿ ಪಾನೀಯಗಳ, ಭೋಜನದ ವ್ಯವಸ್ಥೆ ಇರುತ್ತದೆ. ಸಾಂಕ್ರಾಮಿಕ ರೋಗಗಳು ಬಾರದಂತೆ ಸಾಕಷ್ಟು ಮೊದಲೇ ಮುನ್ನೆಚ್ಚರಿಕ ತೆಗೆದುಕೊಂಡಿರುತ್ತಾರೆ. ಜಾತ್ರೆಯಲ್ಲಿ ಮಾಯಾಲೋಕ, ವಿಸ್ಮಯ ಲೋಕಗಳ ಸೃಷ್ಟಿಯಾಗಿರುತ್ತದೆ. ಜಾಯಿಂಟ್ ವೀಲ್, ಬಾವಿಯಲ್ಲಿ ಮೋಟಾರ್ ಸೈಕಲ್ ಹೊಡೆಯುವುದು, ಜಾದೂ ಷೋಗಳು, ವಿವಿಧ ಆಟದ ಸ್ಪರ್ಧೆಗಳು, ಸಿಹಿ ತಿಂಡಿಯ ವಿವಿಧ ಸಾಮಾಗ್ರಿಗಳ, ಅಂಗಡಿಗಳ ಸಾಲುಸಾಲೇ ಗಾಂಧೀ ಮೈದಾನದಲ್ಲಿ ನಿರ್ಮಾಣವಾಗುತ್ತದೆ. ಜೊತೆಗೆ ವಿವಿಧ ಇಲಾಖೆಗಳ ವಸ್ತುಪ್ರದರ್ಶನಗಳ ವ್ಯವಸ್ಥೆಗಳಿರುತ್ತವೆ. ಇದೇ ಸಂದರ್ಭದಲ್ಲಿ ನೆಗರೂ ಮೈದಾನದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗಳಿರುತ್ತವೆ. ರಾಜ್ಯದ ನಾನಾ ಭಾಗಗಳಿಂದ ಹೆಸರಾಂತ ಕುಸ್ತಿ ಮಲ್ಲರು ಬಂದಿರುತ್ತಾರೆ. ಎಲ್ಲವೂ ಆಕರ್ಷಣೀಯವಾಗಿರುತ್ತವೆ. ಸಾಗರ ನಗರದ ಸಾಗರ ವೃತ್ತದ ಬಳಿ ಶ್ರೀ ಮಾರಿಕಾಂಬಾ ದೇವಿಯ ಎರಡು ದೇವಾಲಯಗಳಿವೆ. ಅವುಗಳಲ್ಲೊಂದು ತವರುಮನೆ. ಬಹಳ ಕಾಲದಿಂದ ಇರುವ ಗುಡಿ. ಎರಡನೇಯದು ಗಂಡನ ಮನೆ. ಸುಂದರ ಹೊರನೋಟವನ್ನು ಹೊಂದಿದೆ. ಬಹಳ ಆಕರ್ಷಕ. ಜಾತ್ರೆಯ ವೇಳೆಯಲ್ಲಿ, ಹೆಸರಾಂತ ಕಲಾಕಾರರಿಂದ ನಯನ ಮನೋಹರವಾದ ಪೆಂಡಾಲ್‍ಗಳ ನಿರ್ಮಾಣವಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಸಜ್ಜಿತವಾದ ವೇದಿಕೆ ನಿರ್ಮಿಸಿರುತ್ತಾರೆ. ರಾಜ್ಯ ಹೆಸರಾಂತ ಕಲಾವಿದರನ್ನು ಮತ್ತು ಸ್ಥಳೀಯ ಕಲಾಪ್ರತಿಭೆಗಳನ್ನು ಕರೆಸಿ ಅದ್ಭುತವಾದ ಮನರಂಜನಾ ಕಾರ್ಯಕ್ರಮವನ್ನು ನಡೆಸುತ್ತಾರೆ. ಇವೆಲ್ಲವುಗಳಿಂದ ಜಾತ್ರೆಗೆ ಕಳೆ ಕಟ್ಟಿರುತ್ತದೆ. ಸುಮಾರು 13 ಅಡಿ ಎತ್ತರದ ಬೃಹತ್ ಪ್ರಮಾಣದ ಮರದ ಭವ್ಯವಾದ, ದಿವ್ಯವಾದ ಶ್ರೀ ದೇವಿಯ ವಿಗ್ರಹವಿದೆ. ಶ್ರೀ ದೇವಿಯ ಮುಖವು ನೋಡುಗರ ಕಣ್ಣು ಕೋರೈಸುತ್ತಿರುತ್ತದೆ. ಮೊದಲ ದಿನವಾದ ಮಂಗಳವಾರ ತವರುಮನೆಯಲ್ಲಿ ಶ್ರೀ ದೇವಿಯನ್ನು ಸ್ಥಾಪಿಸಿ ಸರ್ವರಿಂದ ಪೂಜೆ ಸಲ್ಲಿಸಲ್ಪಟ್ಟು ಅಂದಿನ ರಾತ್ರಿ 10 ಗಂಟೆಗೆ ಆರಂಭಿಸಿದ ರಾಜಬೀದಿ ಮೆರವಣಿಗೆಯಲ್ಲಿ ವೈಭವದಿಂದ ನೆರವೇರುತ್ತದೆ. ಒಂಭತ್ತನೆ ದಿನ ರಾತ್ರಿ ಪುನ: ರಾಜಬೀದಿ ಉತ್ಸವದೊಂದಿಗೆ ಭವ್ಯವಾದ ರಥದೊಂದಿಗೆ ಶ್ರೀ ದೇವಿಯನ್ನು ಸಾಗರದ ಹೊರ ವಲಯದಲ್ಲಿನ ವನದಲ್ಲಿ ಬಿಡಲಾಗುತ್ತದೆ. ಅಂದಿಗೆ ಜಾತ್ರೆ ಮುಕ್ತಾಯವಾದಂತೆ. ಆದರೆ ಆಕರ್ಷಕ ಆಂಗಡಿಗಳು ಮಾತ್ರ ಒಂದು ತಿಂಗಳವರೆಗೆ ಇರುತ್ತವೆ. ರಾಜಬೀದಿ ಉತ್ಸವದಲ್ಲಿ ಡೊಳ್ಳು, ಕೊಂಗು, ಕಹಳೆ, ಕೀಲು, ಕುದುರೆ, ನೃತ್ಯ, ಗೊಂಬೆಗಳ ನೃತ್ಯ, ಅನೇಕ ವೇಷಭೂಷಣಗಳಿಂದ ಕೂಡಿದ ಜಾನಪದ ಕಲಾವಿದರೆಲ್ಲರೂ ಪಾಲ್ಗೊಂಡಿರುತ್ತಾರೆ. ಎರಡೂ ಗುಡಿಗಳಲ್ಲಿ ಪೂಜಾ ಸಮಯದಲ್ಲಿ ಹರಕೆ ಹೊತ್ತವರು ತಮ್ಮ ಹರಕೆಯನ್ನು ಒಪ್ಪಿಸುತ್ತಾರೆ. ಮೆರವಣಿಗೆ ಸಂದರ್ಭದಲ್ಲಿ ರಥದ ಮೇಲಿನ ಶ್ರೀ ದೇವಿಯ ಮೇಲೆ ತಮ್ಮ ಹರಕೆಯ ಕೋಳಿಗಳನ್ನು ತೂರುತ್ತಾರೆ. ಹೀಗೆ ಭಕ್ತರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಹಾರಿಸಿದ ಕೋಳಿಯನ್ನು ಭಕ್ತರು ಹಿಡಿದು ಸಾಕುತ್ತಾರೆ. ಶ್ರೀದೇವಿಗೆ ಕೋಣನ ಬಲಿ ಕೊಡುವುದಿಲ್ಲ. ಅದಕ್ಕೆ ಬದಲಾಗಿ ಅಧಿಕಾರಿಗಳ ಮತ್ತು ವೈದ್ಯರ ಸಮ್ಮುಖದಲ್ಲಿ ಸಿರಿಂಜು ಮತ್ತು ಕೋಣನ ರಕ್ತ ತೆಗೆದು ಶ್ರೀ ದೇವಿಗೆ ಅರ್ಪಿಸುತ್ತಾರೆ. ಸಂಸ್ಕೃತಿಯ ಮಾನವೀಯತೆ, ಭಾವೈಕ್ಯತೆ ಮೆರೆಯುತ್ತದೆ. ಎಲ್ಲ ಧರ್ಮಿಯರಿಂದ ಶ್ರೀ ದೇವಿಯು ಪೂಜಿಸಲ್ಪಡುತ್ತಾಳೆ. ಇದೊಂದು ಸರ್ವಧರ್ಮದ ಸಮನ್ವಯ ಪ್ರತೀಕದ ಜಾತ್ರೆಯಾಗಿದೆ. ಇಂತಹಾ ವಿಶಿಷ್ಠಪೂರ್ಣ ಮನಮೋಹಕ ಸಮನ್ವಯ ಜಾತ್ರೆಯಲ್ಲಿ ಪ್ರಜ್ವಲಿಸುವ ಶ್ರೀ ದೇವಿಯನ್ನು ನೋಡಲು ಬನ್ನಿ.

ಶ್ರೀ ಮಾರಿಕಾಂಬ ಜಾತ್ರೆ[ಬದಲಾಯಿಸಿ]

ಸಾಗರ ನಗರದ ಮಧ್ಯದಲ್ಲಿ ನೆಲಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದೇಶದ ಕಲ್ಯಾಣಾರ್ಥವಾಗಿಯೂ, ಸುಭಿಕ್ಷಾರ್ಥವಾಗಿಯೂ ಸಾಗರದಲ್ಲಿ ಅತೀ ವಿಜೃಂಭಣೆಯಿಂದ, ವೈಭವದಿಂದ ನಡೆಯಲಿದೆ. ಜಾತಿ, ಮತ, ಬಡವಬಲ್ಲಿದರೆಂಬ ಭೇಧವಿಲ್ಲದೆ ಊರಿಗೆ ಊರೇ ಸಂಭ್ರಮಿಸುವ ಪ್ರತಿ ಮೂರು ವರ್ಷಗಳಿಗೊಮ್ಮೆ ಸಾಗರದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಜನಸಾಗರವೇ ಸೇರಲಿದೆ. ಮಂಗಳವಾರ ಬೆಳ್ಳಿಗ್ಗೆ 5 ಗಂಟೆಗೆ ಸುಮಾರು 16 ಅಡಿ ಎತ್ತರದ ಶ್ರೀ ಮಾರಿಕಾಂಬಾ ದೇವಿಯನ್ನು ತವರುಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆ ದಿನ ಪೂಜಾ ಕಾರ್ಯಕ್ರಮ ಮತ್ತು ಕುಂಕುಮಾರ್ಚನೆಗಳ ಆನಂತರ ರಾತ್ರಿ 10 ಗಂಟೆಗೆ ಶ್ರೀ ಮಾರಿಕಾಂಬಾ ದೇವಿಯ ವೈಭವದ ರಥೋತ್ಸವವು ಬೀದಿ-ಬೀದಿಗಳಲ್ಲಿ ರಂಜನೀಯ ವಾದ್ಯ, ಡೊಳ್ಳು ಕುಣಿತ, ನಾದಸ್ವರ ಹಾಗೂ ಇನ್ನಿತರ ಮಂಗಳ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಾಗಿ ದೇವಿಯನ್ನು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ಬುಧವಾರದಿಂದ ಬುಧವಾರದವರೆಗೆ ದೇವಿಯ ಕುಂಕುಮಾರ್ಚನೆ, ಉಡಿತುಂಬುವುದು, ಗಾವುಗುರಿ ಕಾರ್ಯಕ್ರಮ ಚಾಟಿ ಸೇವೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಬುಧವಾರ ರಾತ್ರಿ 10 ಗಂಟೆಗೆ ದೇವಿಯ ವಿಸರ್ಜನಾ ಕಾರ್ಯಕ್ರಮವನ್ನು ನಡೆಸುತ್ತಾರೆ. ಸಮಿತಿಯ ವತಿಯಿಂದ ನೆಹರು ಮೈದಾನದಲ್ಲಿ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿಗಳು ನಡೆಯುತ್ತವೆ. ಸಾಗರವು ಒಂದು ಐತಿಹಾಸಿಕ ಮಹತ್ವವಿರುವ ನಗರ . ಇಲ್ಲಿನ ಸ್ಥಳ ಪುರಾಣ, ಇತಿಹಾಸಗಳ ಪ್ರಕಾರ ಶಿವಪ್ಪನಾಯಕ ಮೂಲ ಪುರುಷನು ಈ ಊರಿನ ಎಡಬಲದಲ್ಲಿರುವ ಇಕ್ಕೆರಿ, ಕೆಳದಿಯಲ್ಲಿ ರಾಜ್ಯಾಡಳಿತ ಮಾಡಿದ್ದಾರೆ. ಸದಾಶಿವನಾಯಕನು ತನ್ನ ಆಡಳಿತ ಅವಧಿಯಲ್ಲಿ ಸಾಗರದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗಣಪತಿ ಕೆರೆಯನ್ನು ನಿಮರ್ಿಸಿದನು. ಅನಂತರ ಕೆಳದಿ, ಇಕ್ಕೆರಿ ಸಂಸ್ಥಾನದ ಅರಸರು ತಮ್ಮ ಯುದ್ಧ ಸಾಮಗ್ರಿಗಳನ್ನು ಈ ಊರಿನಲ್ಲಿ ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ಈ ದೇವತೆಯ ಪೂಜೆ ನಿರಂತರವಾಗಿ ನಡೆಯಲು ಜಾತ್ರೆ, ಉತ್ಸವಗಳನ್ನು ನಡೆಸಲು ಅವಕಾಶ ಮಾಡಿ ಕೊಟ್ಟರಂತೆ, ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯೇ ಈ ಮಾರಿಕಾಂಬಾ ದೇವಿಯೆಂದು ಊರಿನ ಹಿರಿಯರು ಅಭಿಪ್ರಾಯಪಡುತ್ತಾರೆ.

ಮಾರಿಕಾಂಬ ಜಾತ್ರೆಯ ಫೋಟೋಗಳು -೨೦೧೭[ಬದಲಾಯಿಸಿ]

ಮಾರಿಕಾಂಬ

ಜಾತ್ರೆಯ ಹಿನ್ನೆಲೆ[ಬದಲಾಯಿಸಿ]

ಬಹಳ ಕಾಲದ ಹಿಂದೆ ಸಾಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾರಕ ರೋಗಗಳಾದ ಪ್ಲೇಗ್ ಮತ್ತು ಕಾಲರಾ ಜ್ವರಗಳಂತಹ ಸಾಂಕ್ರಾಮಿಕ ರೋಗಗಳು ಹರಡಿ ನೂರಾರು ಜನರನ್ನು ಬಲಿತೆಗೆದುಕೊಂಡಿದ್ದುವು. ಆ ಸಮಯದಲ್ಲಿ ದೇವಿಗೆ ಹರಕೆ, ಪೂಜೆ ಉತ್ಸವ ಜಾತ್ರೆಯನ್ನು ಮಾಡುವದಾಗಿ ಊರಿನ ಹಿರಿಯರು ಹರಕೆ ಹೇಳಿಕೊಂಡರು. ಆಗ ರೋಗವು ಸಂಪೂರ್ಣವಾಗಿನಿಂತು ಹೋಗಿ ಇವತ್ತಿನ ವರೆಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಈ ತಾಲ್ಲೂಕಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಮೊದ ಮೊದಲು ಸಣ್ಣದಾಗಿ ಪ್ರಾರಂಭವಾದ ಈ ಜಾತ್ರೆಯು ನಿರಂತರ ನಿತ್ಯ ಪೂಜೆ, ಶುಕ್ರವಾರ ಮತ್ತು ಮಂಗಳವಾರ ಕುಂಕುಮಾರ್ಚನೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕಷರ್ಿಸಿದೆ ಮತ್ತು ನವರಾತ್ರಿ ಸಮಯದಲ್ಲಿ ಕೂಡ 9 ದಿನಗಳ ಕಾಲ ನವರಾತ್ರಿ ಉತ್ಸವವೂ ನಡೆಯುತ್ತದೆ. ಈಗಿನ ಮಾರಿಕಾಂಬಾ ಗಂಡನ ಮನೆ ದೇವಸ್ಥಾನವು 2 ಸಿಂಹಗಳು ಎಳೆಯುವ ರಥದ ಮಾದರಿಯಲ್ಲಿ ಭವ್ಯವಾಗಿ ನಿರ್ಮಾಣವಾಗಿದೆ. ಇನ್ನೇಲ್ಲಿಯೂ ಕಾಣಸಿಗದಂತಹ ಈ ಅಪರೂಪದ ರಥದ ಮಾದರಿಯ ಗುಡಿಯ ಗೋಪುರವು ದೇವಿಯ ನಾನಾ ರೂಪವನ್ನು, ದೇವಿಯ ಮಹಾತ್ಮೆಯನ್ನು, ದೇವಿಯ ಮೂರ್ತಿ ರಚನೆಯ ಮೂಲಕ ಕಂಗೊಳಿಸುತ್ತದೆ. ಈ ಗುಡಿಯು ನಗರದ ಮಧ್ಯದಲ್ಲಿ, ಅತಿ ಎತ್ತರದ ಗೋಪುರವನ್ನು ಹೊಂದಿರುವುದು ಒಂದು ವಿಶೇಷ ಆಕರ್ಷಣೆ.

ವಸ್ತು ಪ್ರದರ್ಶನ[ಬದಲಾಯಿಸಿ]

ಜಾತ್ರಾ ಸಂದರ್ಭದಲ್ಲಿ ಸುಮಾರು 300ಕ್ಕೂ ಮಿಕ್ಕಿ ವಸ್ತು ಪ್ರದರ್ಶನ ಮಳಿಗೆಗಳನ್ನು ರಚಿಸಲಾಗುತ್ತದೆ. ನಗರಸಭೆಯ ಗಾಂಧಿ ಮೈದಾನದಲ್ಲಿ, ಅಂತರಾಷ್ಟ್ರೀಯ ಖ್ಯಾತಿಯ ವಿವಿಧ ರೀತಿಯ ಅತ್ಯಾಧುನಿಕ ಮನೋರಂಜನಾ ಕ್ರೀಡೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು[ಬದಲಾಯಿಸಿ]

ಬುಧವಾರದಿಂದ ಬುಧವಾರದವರೆಗೆ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಂದರವಾದ ಶ್ರೀಮಾರಿಕಾಂಬಾ ಕಲಾ ಮಂಟಪದಲ್ಲಿ ನಡೆಯಲಿವೆ. ಅಲ್ಲದೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಹಾಗೂ ಅವರನ್ನು ಕರೆಸಿ ಇಲ್ಲಿ ಕಾರ್ಯಕ್ರಮವನ್ನು ನಡೆಸಲು ಅವಕಾಶ ಕೊಟ್ಟು ಅವರ ಪ್ರತಿಭೆಗಳನ್ನು ಹೊರಹೊಮ್ಮಲು ಉತ್ತಮ ಅವಕಾಶವನ್ನು ಕಲ್ಪಿಸಲಾಗಿದೆ.