ಪೆನುಕೊಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Penukonda
town
Chilla Pahad near Penukonda
Chilla Pahad near Penukonda
Country ಭಾರತ
Stateಆಂಧ್ರ ಪ್ರದೇಶ
DistrictAnantapur
Elevation
೭೬೯ m (೨,೫೨೩ ft)
Population
 • Total೨೦,೨೨೦
Languages
 • Officialತೆಲುಗು
 • OtherUrdu
Time zoneUTC+5:30 (IST)
Nearest cityHindupur
Vidhan Sabha constituencyPenukonda

ಪೆನುಕೊಂಡವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಒಂದು ತಾಲ್ಲೂಕು : ಆ ತಾಲ್ಲೂಕಿನ ಆಡಳಿತ ಕೇಂದ್ರ. ತೆಲುಗಿನಲ್ಲಿ ಪೆನುಕೊಂಡ ಎಂದರೆ ದೊಡ್ಡ ಬೆಟ್ಟ ಎಂದರ್ಥ.

ಪೆನುಕೊಂಡ ವ್ಯಾಪಾರ ಸ್ಥಳ.

ಭೌಗೋಲಿಕ ಮಾಹಿತಿ[ಬದಲಾಯಿಸಿ]

ಅದು ಅನಂತಪುರದಿಂದ ೭೦ ಕಿ.ಮೀ. ದೂರದಲ್ಲಿದೆ. ತಾಲ್ಲೂಕಿನ ಉತ್ತರದಲ್ಲಿ ಧರ್ಮಾವರಂ, ಪೂರ್ವಭಾಗದಲ್ಲಿ ಕದಿರಿ ಮತ್ತು ಕಡಪಾ, ಪಶ್ಚಿಮದಲ್ಲಿ ಕರ್ನಾಟಕಪಾವಗಡ, ದಕ್ಷಿಣದಲ್ಲಿ ಹಿಂದೂಪುರ ತಾಲ್ಲೂಕುಗಳಿವೆ. ತಾಲ್ಲೂಕಿನ ಬಹುಭಾಗ ಬಂಜರು. ಕೆಂಪು ಹಾಗೂ ಪುಡಿಗಲ್ಲಿನಿಂದ ಕೂಡಿದ ನೆಲವಿದೆ.

ಪೆನುಕೊಂಡ ಪಟ್ಟಣ ಅನಂತಪುರದಿಂದ 66 ಕಿ.ಮೀ. ಬಳ್ಳಾರಿಯಿಂದ 138 ಕಿ.ಮೀ. ಮತ್ತು ಮದರಾಸಿನಿಂದ 312 ಕಿ.ಮೀ. ದೂರದಲ್ಲಿ, ಉ.ಆ. 1405' ಮತ್ತು ಪೂ.ರೇ. 77036' ಮೇಲೆ ಇದೆ. ಇದು ಬೆಂಗಳೂರು-ಗುಂತಕಲ್ ಮೀಟರ್‍ಗೇಜ್ ರೈಲ್ವೇ ನಿಲ್ದಾಣ.

ವ್ಯವಸಾಯ ಮತ್ತು ನೀರಾವರಿ[ಬದಲಾಯಿಸಿ]

ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಪೆನ್ನಾರ್ ಮತ್ತು ಪೂರ್ವಭಾಗದಲ್ಲಿ ಚಿತ್ರಾವತಿ ನದಿಗಳು ಹರಿಯುತ್ತವೆ. ಇವುಗಳ ನೆರೆಯಲ್ಲಿ ಅಲ್ಲಲ್ಲಿ ಬತ್ತ ಮತ್ತು ಕಬ್ಬು ಬೆಳೆಯುತ್ತವೆ. ತಾಲ್ಲೂಕಿನ ಮುಖ್ಯ ಬೆಳೆಗಳು ಜೋಳ ಮತ್ತು ಹುರುಳಿ. ಬುರಾಪಟ್ಣಂ ಬಳಿ ಚಿತ್ರಾವತಿ ನದಿಗೆ ಅಣೆಕಟ್ಟಿದೆ. ತಾಲ್ಲೂಕಿನಲ್ಲಿ ಬೇಸಾಯಕ್ಕೆ ಏತದ ಬಾವಿಗಳು ಹಾಗೂ ಕೆರೆಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ.

ನೋಡತಕ್ಕ ಸ್ಥಳಗಳು[ಬದಲಾಯಿಸಿ]

ಇಲ್ಲಿ ಅನೇಕ ಜೈನ ದೇವಾಲಯಗಳಿವೆ.


ಹಜರತ್ ಬಾಬಾ ಫಕ್ರುದ್ದೀನ್ ಎಂಬ ಸೂಫಿ ಸಂತನು ಇಲ್ಲಿದ್ದನು . ಅವನನ್ನು ಬಾಬಯ್ಯ ಎಂದು ಸ್ಥಳೀಯರು ಕರೆದರು. ಸುಪ್ರಸಿದ್ಧ ಬಾಬಯ್ಯ ದರ್ಗಾ ಇಲ್ಲಿದ್ದು ಮುಸ್ಲಿಂ ಜನರಿಗೆ ಪವಿತ್ರವಾಗಿದೆ

ಬಾಬಯ್ಯನ ಉರುಸ್ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ.

ಪೆನುಕೊಂಡ ಪಟ್ಟಣದ ಸುತ್ತ ಬಲವಾದ ಕೋಟೆ ಇದೆ. ಈ ಕೋಟೆಯು ಪ್ರಸಿದ್ಧವಾಗಿದೆ.

ಬೆಟ್ಟದ ಮೇಲೆ ಒಂದು ಬಂಗಲೆ ಹಾಗೂ ಬೆಟ್ಟದ ಇಳುಕಲ್ಲುಗಳಲ್ಲಿ ಮಂಟಪಗಳಿವೆ. ಕರಿಯ ಶಿಲೆಯಿಂದ ರಚಿತವಾದ ಶೇರ್‍ಖಾನ್ ಮಸೀದಿ, ಫಕೀಜನಾದ ಅರಸನೊಬ್ಬನ ಸ್ಮಾರಕವಾಗಿ ಕಟ್ಟಿದ ಬಾಬಯ್ಯನ ದರ್ಗ, ಗಂಗಮಹಲ್ ಎಂಬ ಹಳೆಯ ಅರಮನೆ. ಎರಡು ಜೈನ ದೇವಾಲಯಗಳು-ಇವು ಇಲ್ಲಿರುವ ಪ್ರಮುಖ ಕಟ್ಟಡಗಳು. ಕೋಟೆಯ ಉತ್ತರ ಬಾಗಿಲ ಬಳಿ ಹನುಮಂತನ ದೊಡ್ಡ ವಿಗ್ರಹವಿದೆ.

ಇತಿಹಾಸ[ಬದಲಾಯಿಸಿ]

ಸಂಕ್ಷಿಪ್ತ ಇತಿಹಾಸ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ಕೊನೆಯ ರಾಜನು ಕ್ರಿ.ಶ. ೧೫೬೫ ರಲ್ಲಿ ತಾಳಿಕೋಟೆ ಕದನದಲ್ಲಿ ಸೋತ ನಂತರ ಪೆನುಕೊಂಡವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಪ್ರದೇಶವನ್ನು ಹೊಯ್ಸಳರು,ಚಾಲುಕ್ಯರು, ವಿಜಯನಗರದ ಅರಸರು , ನವಾಬರು, ಮರಾಠಾ ಸರದಾರರು, ಟಿಪ್ಪೂ ಸುಲ್ತಾನ, ನಿಝಾಮ ಇವರೆಲ್ಲರು ನಿಯಂತ್ರಿಸಿದರು. ಕೊನೆಗೆ ಹೈದರಾಬಾದ್ ನಿಜಾಮನು ಬ್ರಿಟಿಷರಿಗೆ ಬಿಟ್ಟುಕೊಟ್ಟ ನಂತರ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು.

ವಿವರವಾದ ಇತಿಹಾಸ[ಬದಲಾಯಿಸಿ]

ಪೆನುಕೊಂಡವನ್ನು ಸ್ಥಾಪಿಸಿದವನು ಕ್ರಿಯಾಶಕ್ತಿ ಒಡೆಯ. ವಿಜಯನಗರದ 1 ನೆಯ ಬುಕ್ಕ ಪೆನುಕೊಂಡ ರಾಜ್ಯವನ್ನು ತನ್ನ ಮಗ ವೀರ ವಿರೂಪಣ್ಣ ಒಡೆಯನಿಗೆ ವಹಿಸಿದನೆಂಬುದು ಊರಿನ ಕೋಟೆಯ ಉತ್ತರ ದ್ವಾರದ ಬಳಿಯ ಶಾಸನವೊಂದರಿಂದ ತಿಳಿದುಬರುತ್ತದೆ. ಈ ಕೋಟೆಯನ್ನು ಕಟ್ಟಿಸಿದವನು ವಿರೂಪಣ್ಣ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಪ್ರಾರಂಭದಲ್ಲೇ ಪೆನುಕೊಂಡ ಅದಕ್ಕೆ ಸೇರಿದ್ದು. ಸ್ವಲ್ಪಕಾಲ ಕೃಷ್ಣದೇವರಾಯ ಅಲ್ಲಿದ್ದನೆಂದು ಹೇಳಲಾಗಿದೆ. ತಾಳಿಕೋಟೆ ಯುದ್ಧದ ತರುವಾಯ (1565) ಪೆನುಕೊಂಡ ವಿಜಯನಗರದ ರಾಜಧಾನಿಯಾಗಿತ್ತು. 1577 ರಲ್ಲಿ ಬಿಜಾಪುರದ ಸುಲ್ತಾನ ಅದಕ್ಕೆ ಮುತ್ತಿಗೆ ಹಾಕಿದಾಗ ಅವನಿಗೆ ಕಪ್ಪ ಕಳುಹಿಸಲಾಯಿತು. ವಿಜಯನಗರದ ಅರಸರು ಈ ನೆಲೆಯನ್ನು ಬಿಟ್ಟು 1585 ರಲ್ಲಿ ಚಂದ್ರಗಿರಿಯನ್ನು ರಾಜಧಾನಿಯಾಗಿ ಮಾಡಿಕೊಂಡರು. 1589 ರಲ್ಲಿ ಗೋಲ್ಕೊಂಡದ ಸುಲ್ತಾನ ಪೆನುಕೊಂಡದ ಮೇಲೆ ದಾಳಿ ನಡೆಸಿದಾಗ ಜಗದೇವರಾಯ ಈ ಪಟ್ಟಣವನ್ನು ರಕ್ಷಿಸಿದ. 1652 ರಲ್ಲಿ ಇದು ಬಿಜಾಪುರ ಸುಲ್ತಾನನ ವಶವಾಯಿತು. ಒಂದು ಶತಮಾನದ ತರುವಾಯ ಮರಾಠರ ಮುರಾರಿರಾಯನ ಕೈಸೇರಿ, 1762 ರಲ್ಲಿ ಹೈದರನ ಪಾಲಾಯಿತು. ಟೀಪು ಸುಲ್ತಾನನ ಮರಣದ ವರೆಗೆ (1799) ಇದು ಮೈಸೂರು ರಾಜ್ಯದ ಅಧೀನದಲ್ಲಿದ್ದು, ಅನಂತರ ಬ್ರಿಟಿಷರಿಗೆ ಸೇರಿತ್ತು. ಪೆನುಕೊಂಡ, ಮದರಾಸು ಪ್ರಾಂತ್ಯದಲ್ಲಿ ಅನಂತಪುರ ಜಿಲ್ಲೆಯ ಒಂದು ತಾಲ್ಲೂಕಾಯಿತು. ರಾಜ್ಯ ಮರುವಿಂಗಡಣೆಯಾದಾಗ (1956) ಅನಂತಪುರ ಜಿಲ್ಲೆಯ ಭಾಗವಾದ ಪೆನುಕೊಂಡವೂ ಆಂಧ್ರ ಪ್ರದೇಶಕ್ಕೆ ಸೇರಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: