ಕೇದಾರನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇದಾರನಾಥ ದೇವಾಲಯ

ಹೆಸರು: ಕೇದಾರನಾಥ ದೇವಾಲಯ
ಪ್ರಮುಖ ದೇವತೆ: ಶಿವ
ಸ್ಥಳ: ಕೇದಾರನಾಥ
ರಾತ್ರಿಯ ಸೊಬಗಲ್ಲಿ ಕೇದಾರನಾಥ ದೇವಾಲಯ

ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಸುಮಾರು ೩೫೬೪ ಮೀಟರ್ ಎತ್ತರದಲ್ಲಿರುವ ಈ ಸ್ಥಳದ ವಿಪರೀತ ಚಳಿಯ ವಾತಾವರಣದಿಂದಾಗಿ ದೇವಾಲಯವು ಕೇವಲ ಏಪ್ರಿಲ್ ಕೊನೆಯ ಭಾಗದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರುತ್ತದೆ.

ಮಂದಿರದ ಹಿನ್ನೆಲೆ ಮತ್ತು ಪ್ರಾಮುಖ್ಯತೆ[ಬದಲಾಯಿಸಿ]

ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು. ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆಯು ‘ಭಾರತ-ಚೀನಾ’ ಗಡಿಗೆ ಅಂಟಿಕೊಂಡಂತಿರುವ ‘ಗೌರಿಕುಂಡ’ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಸಮತಟ್ಟಾದ ಪ್ರದೇಶವಾದ ಇಲ್ಲಿಂದ ಸುಮಾರು ೧೪ ಕಿ.ಮೀ. ಕಾಲ್ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬೇಕು. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಈ ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ. ಗೌರಿಕುಂಡವು ಸಮುದ್ರಮಟ್ಟದಿಂದ ೬೫೦೦ ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳಲ್ಲೊಂದಾದ ಏಕೋರಾಮಾರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ.

ಐತಿಹ್ಯ[ಬದಲಾಯಿಸಿ]

ಹಿಮಾಲಯ ಶ್ರೇಣಿಯಲ್ಲಿ ರುದ್ರನಾಥನ ಧಾರ್ಮಿಕ ತಾಣವಿದೆ. ಹರಿದ್ವಾರದಿಂದ ೨೫೦ ಕಿ.ಮೀ ದೂರದಲ್ಲಿ ಹಿಮಗಿರಿಗಳ ನಡುವೆ ಇರುವ ಪುಣ್ಯ ಕ್ಷೇತ್ರ. ಪೌರಾಣಿಕ ಹಿನ್ನಲೆಯಂತೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಕೊಂದು ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಈಶ್ವರನ ದರ್ಶನ ಪಡೆಯಲು ವಾರಣಾಸಿ ಕ್ಷೇತ್ರಕ್ಕೆ ಬರುತ್ತಾರೆ. ಅವರನ್ನು ಪರೀಕ್ಷಿಸಲು ಶಿವ ಗುಪ್ತ ಕಾಶಿಗೆ ನಂತರ ಕೇದಾರಕ್ಕೆ ಬರುತ್ತಾನೆ. ಇದನ್ನು ಅರಿತ ಪಾಂಡವರೂ ಕೇದಾರಕ್ಕೆ ಬರುತ್ತಾರೆ.ಶಿವನು ಅವರಿಗೆ ಕಾಣದಂತೆ ಎತ್ತಿನ ರೂಪ ತಾಳಿ ಮೇಯುತ್ತಿರುತ್ತಾನೆ. ಇದನ್ನು ಗ್ರಹಿಸಿದ ಭೀಮನು ಶಿವನ ದರ್ಶನ ಪಡೆದೇ ತೀರುವ ಛಲದಿಂದ ಎರಡು ಪರ್ವತಗಳ ನಡುವೆ ಒಂದೊಂದು ಕಾಲಿಟ್ಟು ಹಸುಗಳು ಹೋಗುವ ದಾರಿಯಲ್ಲಿ ನಿಂತು ಬಿಡುತ್ತಾನೆ. ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ. ಆದರೆ ಒಂದು ಎತ್ತು ಮಾತ್ರ ಹಾಗೇ ಹೋಗದೆ ನಿಂತು ಬಿಡುತ್ತದೆ. ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ. ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ.

ಪೂಜೆ[ಬದಲಾಯಿಸಿ]

ಇಲ್ಲಿ ಗುಹಾಂತರ ದೇವಾಲಯದಲ್ಲಿ ಲಿಂಗ ರೂಪದಲ್ಲಿ ಶಿವನಿಗೆ ನಿತ್ಯ ಗಂಧದ ಅಲಂಕಾರ. ಹಾಗೂ ಪೂಜೆಗೆ ಬ್ರಹ್ಮ ಕಮಲ ಹೂ ಬೇಕೇ ಬೇಕು.

ಕೇದಾರ ಮಳೆಗಾಲದ ಉತ್ಪಾತಕ್ಕೆ 5ವರ್ಷ ಮುಂಚೆ-ಸಾಗರದ ಗಿರಿಜಮ್ಮ,ಮತ್ತು ಚಿಪ್ಪಳಿ ಅಮೃತವಲ್ಲಿ ಪ್ರವಾಸದಲ್ಲಿ ಇದ್ದಾಗ.

ನೋಡಿ[ಬದಲಾಯಿಸಿ]

ಕೇದಾರನಾಥ ಮತ್ತು ಪ್ರಕೃತಿ ವಿಕೋಪ

ವಿಷಯಾಧಾರ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]