ಬಸವೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಗದ್ಗುರು ಬಸವೇಶ್ವರ
ಗುರು ಬಸವಣ್ಣ
ಜನನಮೇ ೩, ಕ್ರಿ.ಶ. ೧೧೩೪
ಬಸವನ ಬಾಗೇವಾಡಿ ವಿಜಯಪುರ ಜಿಲ್ಲೆ, ಕರ್ನಾಟಕ, ಭಾರತ
ಮರಣಕ್ರಿ.ಶ. ೧೧೯೬
ಕೂಡಲಸಂಗಮ, ಕರ್ನಾಟಕ, ಭಾರತ
ಗೌರವಗಳುಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ
ತತ್ವಶಾಸ್ತ್ರಶರಣ ಶರಣೆಯರ ಲಿಂಗಾಯತ ದರ್ಶನ",
ಪ್ರಮುಖ ಕೃತಿಗಳುವಚನ ಸಾಹಿತ್ಯ ವಚನಗಳು
ನುಡಿಅರಿತಡೆ ಶರಣ-ಮರೆತಡೆ ಮಾನವ , ಕಾಯಕ ದಾಸೋಹ , ಜಂಗಮ
ಅಧ್ಯಾತ್ಮಜ್ಞಾನೀ ಅರ್ಥಶಾಸ್ತ್ರಜ್ಞ
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ (ಅಥವಾ, "ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.[೧][೨]  

ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯತ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ.ಕನ್ನಡ ಕವಿ ಹರಿಹರರಿಂದ ರಚಿತ (c.1180) ಬಸವರಾಜದೇವರ ರಗಳೆ (ಸಿ.ಎಸ್ .8080 ರಲ್ಲಿ 25 ವಿಭಾಗಗಳು ಲಭ್ಯವಿದೆ) ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ.ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ.ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ (ಅಕ್ಷರಶಃ, ಭಕ್ತಿಯ ಖಜಾಂಚಿ),ಬಸವಣ್ಣ (ಹಿರಿಯ ಸಹೋದರ ಬಸವ) ಅಥವಾ ಬಸವೇಶ್ವರ.

ವಿಶೇಷ ಮಾಹಿತಿ:- ಬಸವಣ್ಣನವರನ್ನು "ಕರ್ನಾಟಕದ ಮಾರ್ಟಿನ್ ಲೂಥರ್" ಎಂದು ಕರೆಯುತ್ತಾರೆ. ಹೀಗೆ ಕರೆದವರು "ಸರ್ ಅರ್ಥರ್ ಮೈಲರ್".

ಬಾಲ್ಯ ಜೀವನ

ಬಸವಣ್ಣನವರು ಮೇ ೩ ರನ್ದು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾರೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಎಂದು ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.[೩][೪]

ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕುಂಡಲಸಂಗಮದಲ್ಲಿ ಅಧ್ಯಯನ ಮಾಡಿದರು . ನಂತರ ಲಕುಲಿಶಾ-ಪಶುಪಾಟ ಸಂಪ್ರದಾಯದ ಒಂದು ಶೈವ ಕಲಿಕೆಯ ಕಲಿಕೆಯಲ್ಲಿ ಸಂಗಮೇಶ್ವರದಲ್ಲಿ ಮುಗಿಸಿದರು. ಬಸವಣ್ಣ ತನ್ನ ತಾಯಿಯ ಕಡೆಯಿಂದ ಸೋದರ ಸಂಬಂಧಿಯನ್ನು ಮದುವೆಯಾದ. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಳು,

ಧಾರ್ಮಿಕ ಬೆಳವಣಿಗೆಗಳು

[ಸೂಕ್ತ ಉಲ್ಲೇಖನ ಬೇಕು]

  • ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವರಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ.
  • ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗ ಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು.
  • ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ ಎಂದೂ ಕರೆಯಲಾಗುತ್ತದೆ. ಮಾನವಿಯತೆ. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು.
  • ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ.
  • ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅನುಲೋಮ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು. ಇವರು ಷಟ್ ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.
  • ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.

ಸಾಮಾಜಿಕ ಸಮಾನತೆ

[ಸೂಕ್ತ ಉಲ್ಲೇಖನ ಬೇಕು]

ಅಣ್ಣ ಬಸವಣ್ಣ

ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.

  • ಶೂದ್ರರಾದ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು. ಇವರು ಮಾತ್ರ ಜನಿವಾರ ಧರಿಸುವ ಹಕ್ಕನ್ನು ಪಡೆದಿದ್ದರು.
  • ಜನಿವಾರ ಧರಿಸುವ ಬ್ರಾಹಣ ಓದಿರಬಹುದು, ಬರೆದಿರಬಹುದು ಆದರೆ ಕಾಯಕಜೀವಿಯಾಗಿ ಉತ್ಪಾದನೆಯಲ್ಲಿ ತೊಡಗಿಲ್ಲ. ಉತ್ಪಾದನೆಯ ಅನುಭವದಿಂದ ಬರುವ ಜ್ಞಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆಯಲಿಲ್ಲ. ಕ್ಷತ್ರಿಯ ನಾಗಿರಬಹುದು ಆದರೆ ಉತ್ಪಾದನೆಯಲ್ಲಿ ತೊಡಗಲಿಲ್ಲ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು, ಕೃಷಿಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತಃ ಉತ್ಪಾದನೆ ಮಾಡಲಿಲ್ಲ. ಈ ಮೂರೂ ವರ್ಣದವರಿಗೂ ಜನಿವಾರ ಇದೆ.
  • ಆದರೆ ಉತ್ಪಾದನೆಯಲ್ಲಿ ಕಾಯಕ ಜೀವಿಗಳಿಗೆ ಮತ್ತು ಪಂಚಮರಿಗೆ ಜನಿವಾರ ಇಲ್ಲ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೆ ಸುಖ ಜೀವನವನ್ನು ಅನುಭವಿಸಿದರು. ಯಾರಿಗೆ ಜನಿವಾರ ಇದ್ದಿದ್ದಿಲ್ಲವೂ ಅವರು ದುಡಿದೂ ಕಷ್ಟ ಜೀವನವನ್ನು ಅನುಭವಿಸಿದರು. ಅಂತೆಯೆ ಬಸವಣ್ಣನವರು ಕಟ್ಟ ಕಡೆಗೆ ಮನುಷ್ಯನ ಕಡೆಗೆ ಬಂದರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು.
  • "ಜಾತಿ ಸಂಕರವಾದ ಬಳಿಕ ಕುಲವನರಸುವರೆ ?" ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
  • ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಶರಣ ಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿ ವಿಷವನ್ನು ಹೊರ ಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು.

ಸಂಕ್ಷಿಪ್ತ ಪರಿಚಯ

  • ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು. ಇಂಗಳೇಶ್ವರ ಬಾಗೇ ವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ ೩೦ ೧೧೩೪) ರೋಹಿಣಿ ನಕ್ಷತ್ರದಲ್ಲಿ ಜನಿಸಿದರು.
  • ಇವರು ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು.
  • ಒಂದು ದಿನ (ದಿ. ೧೪ನೇ ಜನವರಿ ೧೧೫೫) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ.
  • ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನನ್ನಾಗಿ ಮಾಡುವ ಸಾಧನವಾಗಬೇಕೆಂದು ಅದನ್ನು ಗಣ ಲಾಂಛನವನ್ನಾಗಿ ಮಾಡಿದರು. ಪರಮಾತ್ಮನ ದಿವ್ಯಾನುಭವ ಪಡೆದು, ನವ ಸಮಾಜ ನಿರ್ಮಾಣದ ರೂಪುರೇಷೆಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು ಪ್ರವೇಶಿಸಿದರು.
  • ಸೋದರ ಮಾವನ ಮಗಳು ನೀಲಾ೦ಬಿಕೆಯನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ, ಪ್ರಧಾನಿ(ದಂಡನಾಯಕ)ಯಾಗಿ ಕಾಯಕ ನಿರ್ವಹಿಸಿದರು. ಅನುಭವ ಮಂಟಪ ಸ್ಥಾಪಿಸಿ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು.
  • ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ದ ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು.
  • ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದ ಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ, ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶ ಮಾಡಲು ಸನ್ನದ್ಧರಾದಾಗ, ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ.
  • ಇಂತಹ ಮಹಾನ್ ನೇತಾರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು; ಧರ್ಮಪಿತರು, ಮಂತ್ರಪುರುಷರು. ೬೨ ವರ್ಷ ೩ ತಿಂಗಳು ೨ ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ ೭ ೧೧೯೬) ಉರಿಯುಂಡ ಕರ್ಪುರದಂತೆ ಲಿಂಗೈಕ್ಯರಾದರು.
  • ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ " ಶಿವಶರಣ " ರೆಂದು ಕರೆದರು.
  • ದಂಪತಿಗಳನ್ನು ಮತ್ತು ನವ ವಧುವರಾರಾದ ಶೀಲವಂತ-ಲಾವಣ್ಯರನ್ನು ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ಕೊಲ್ಲುತ್ತಾನೆ. ಬಿಜ್ಜಳನ ಸೇನೆ ಶಿವಶರಣರನ್ನು ಕಂಡಲ್ಲಿ ಕೊಲ್ಲ ತೊಡಗಿ, ರಕ್ತದ ಹೊಳೆ ಹರಿಸುತ್ತದೆ. ಬಸವಣ್ಣನವರು ೧೧೯೬ ರಲ್ಲಿ ಕೂಡಲಸಂಗಮಕ್ಕೆ ಮರಳಿ ಅಲ್ಲೇ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಿಯೇ ಇದೆ. ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನಿರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ.

ಬಸವಣ್ಣನವರ ಕಾಯಕದ ಮಹತ್ವ ಮತ್ತು ಕಾಯಕ ಸಮಾನತೆ

"ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ."

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.
"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."
ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧ ರೂ ಸ್ವತಂತ್ರ ಧೀರರೂ ಆಗಿದ್ದಾರೆ.

"ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ"
ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ.

"ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು"
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನ ತುಂಬುಗುವಂತೆ ಹೇಳಿದ್ದಾರೆ.
"ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು."
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.
"ಆವ ಕಾಯಕವಾದರೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ."
ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಅಪಾರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು.
"ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ." ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.
ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವ ರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ.

ಬಸವಣ್ಣನವರ ಅಂಚೆ ಚೀಟಿ ಮತ್ತು ನಾಣ್ಯ

ಗುರು ಬಸವಣ್ಣನವರ ಚಿತ್ರವನ್ನೊಳಗೊಂಡ ಅಂಚೆಚೀಟಿಗಳು
  1. ೧೧ನೇ ಮೇ ೧೯೬೭ರಂದು, ಗುರು ಬಸವಣ್ಣವರ ೮೦೦ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ತ ಭಾರತ ಸರಕಾರದ ಅಂಚೆ ಇಲಾಖೆಯು, ೧೫ ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿ ಯನ್ನು ಮುದ್ರಿಸಿತು.ref>https://lingayatreligion.com/GuruBasava/Basava_On_Stamp</ref>
  2. ೧೯೯೭ರಲ್ಲಿ ೨ ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು, ಅಂಚೆ ಇಲಾಖೆಯು ಮತ್ತೆ ಮುದ್ರಿಸಿತು. [೫]
  3. ಗುರು ಬಸವಣ್ಣವರ ಭಾವಚಿತ್ರವುಳ್ಳ ೫ ರೂಪಾಯಿ ಮತ್ತು ೧೦೦ ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
  4. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗ ರಾಗಿದ್ದಾರೆ.
  5. ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು.
  6. [೬]

ವಚನಗಳು

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:




ಚಿತ್ರಗಳು

ಉಲ್ಲೇಖಗಳು

  1. Basava Encyclopædia Britannica (2012), Quote: "Basava, (flourished 12th century, South India), Hindu religious reformer, teacher, theologian, and administrator of the royal treasury of the Kalachuri-dynasty king Bijjala I (reigned 1156–67)."
  2. Fredrick Bunce (2010), Hindu deities, demi-gods, godlings, demons, and heroes, ISBN 9788124601457, page 983
  3. Jan Peter Schouten (1995), Revolution of the Mystics: On the Social Aspects of Vīraśaivism, Motilal Banarsidass, ISBN 978-8120812383, page 4
  4. SK Das (2005), A History of Indian Literature, 500–1399: From Courtly to the Popular, Sahitya Akademi, ISBN 978-8126021710, page 163
  5. https://www.mintageworld.com/media/detail/3215-commemorative-5-rupee-coin-of-mahatma-basaveshwar/
  6. https://timesofindia.indiatimes.com/india/PM-Modi-unveils-12th-century-social-reformer-Basavannas-statue-in-London/articleshow/49784040.cms

ಬಾಹ್ಯ ಸಂಪರ್ಕಗಳು