ಬಸವೇಶ್ವರ
ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು.
ಬಸವಣ್ಣನವರು೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಾಗೇವಾಡಿ ಗ್ರಾಮದಲ್ಲಿ, ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು.ಬಸವಣ್ಣನವರ ಹುಟ್ಟು ಹಾಗೂ ಬಾಲ್ಯದ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದ ಅವರು ವಿದ್ಯಾಭ್ಯಾಸಕ್ಕಾಗಿ ಕೂಡಲ ಸಂಗಮಕ್ಕೆ ಬಂದರು.
ಪರಿವಿಡಿ |
[ಬದಲಾಯಿಸಿ] ಧಾರ್ಮಿಕ ಬೆಳವಣಿಗೆ
ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು.ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನೆಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು,ಪ್ರಾಣಿಬಲಿ ನೀಡುವುದು,ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ,ಭಕ್ತಿ ಭಂಡಾರಿ ಬಸವಣ್ಣ ಎಂದೂ ಕರೆಯಲಾಗುತ್ತದೆ.ಮಾನವಿಯತೆ. ಕಾಯಕ ನಿಷ್ಟೆ ದರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಷ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ.ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು.
ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ. "ನಮನ"
[ಬದಲಾಯಿಸಿ] ವಚನಗಳು
ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ " ಶಿವಶರಣ " ರೆಂದು ಕರೆದರು.
" ಇವನಾರವ, ಇವನಾರವ ಎಂದೆನ್ನದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ"
ಎಂದು, ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದರು.
"ಹೊಲೆಯನೆಂಬುವವನು ಊರ ಹೊರಗಿಹನೇ? ಊರ ಒಳಗಿಲ್ಲವೆ? ಎಂದು ಪ್ರಶ್ನಿಸಿ,
ಅಸ್ಪ್ರಶ್ಯತೆಯ ಹೆಸರಿನಲ್ಲಿ ಊರ ಹೊರಗೆ ಇರಿಸಲಾದ ದಲಿತರನ್ನು ಕರೆತಂದು ಸಮಾಜದ ಭಾಗವನ್ನಾಗಿ ಮಾಡಿದರು. ದೇವಾಲಯ, ಕುಡಿಯುವ ನೀರಿನ ಭಾವಿ-ಕೆರೆಗಳನ್ನು ಬಳಸಲು ಇವರಿಗೂ ಸಮಾನ ಹಕ್ಕಿದೆಯಂದು ತೋರಿಸಿದರು.
" ಉಳ್ಳವರು ಶಿವಾಲಯ ಮಾಡುವವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಲಶವಯ್ಯ
ಕೂಡಲ ಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ"
ಎಂದ ಬಸವಣ್ಭ, ಪುರೋಹಿತಶಾಹಿ ವ್ಯವಸ್ಥೆ ಮತ್ತು ಧರ್ಮದ ಹೆಸರಿನಲ್ಲಿ ಜನಸಾಮನ್ಯರ ಶೋಷಣೆಯನ್ನು ಖಂಡಿಸಿದ್ದಾರೆ.
ಬಸವ ಕಲ್ಯಾಣದಲ್ಲಿ ಬಸವಣ್ಣನವರು ಶರಣರ ಜೊತೆ ಸೇರಿ ಅನುಭವ ಮಂಟಪ ಸ್ಥಾಪಿಸಿದರು. ಅನುಭವ ಮಂಟಪವು ವಿಶ್ವ ಮಾನವ ಸಂದೇಶ ಮತ್ತು ವಿಚಾರಗಳ ಬಗೆಗೆ ಮುಕ್ತವಾಗಿ ಚರ್ಚಿಸಬಹುದಾದ ವೇದಿಕೆಯಾಗಿದ್ದು, ಭಾರತದಾದ್ಯಂತ ಅನೇಕೆ ಕಡೆಗಳಿಂದ ಜನರನ್ನು ಸೆಳೆಯಿತು. ಇದೇ ಸಮಯದಲ್ಲೇ ಕನ್ನಡ ಭಾಷೆಯಲ್ಲಿ ಜನಸಾಮನ್ಯರಿಗಾಗಿ ವಚನಗಳ ರಚನೆ ಆರಂಭವಾಯಿತು. ಸಾಮಾಜ ಸುಧಾರಣೆ ಮತ್ತು ಧಾರ್ಮಿಕ ವಿಷಯಗಳ ಬಗೆಗೆ ಸುಂದರ ಮತ್ತು ಸರಳ ಬೋಧನೆಗಳುಳ್ಳ ಸಣ್ಣ ಪದ್ಯಗಳಿಗೆ ವಚನಗಳೆಂದು ಹೆಸರು. ಉದಾಹರಣೆಗೆ:
"ದಯವಿಲ್ಲದ ಧರ್ಮ ಯಾವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯ.."
ಮಹಿಳಾ ಶಿಕ್ಷಣಕ್ಕೆ ನಾಂದಿಯಾದರು. ಹಲವಾರು ಶರಣೆಯರು, ಕನ್ನಡದಲ್ಲಿ ವಚನಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ.
ಆದರೆ ಬಿಜ್ಜಳನ ಆಸ್ಥಾನದ ಸಂಪ್ರದಾಯವಾದಿಗಳು ಬಸವಣ್ಣನವರ ಬಗ್ಗೆ ದೂರಿಟ್ಟಾಗ, ಮಂತ್ರಿ ಸ್ಥಾನವನ್ನು ಬಸವಣ್ಣನವರು ತ್ಯಜಿಸಿದರು. ಆನಂತರ ಶರಣರಾದ ಮಧುವರಸನ ಮಗಳು ಲಾವಣ್ಯ ಮತ್ತು ಹರಳಯ್ಯನ ಮಗ ಶೀಲವಂತನ ಮದುವೆಯನ್ನು ವಿರೋಧಿಸಿದ ಬಿಜ್ಜಳನು, " ಮಿತಾಕ್ಷರ" ವೆಂಬ ಪೊಳ್ಳು ಗ್ರಂಥದ ಆಧಾರದ ಮೇಲೆ, ವಿಲೋಮ ವಿವಾಹ ನೆಡೆದಿದೆಯಂದು ನಿರ್ಣಯಿಸಿ, ಮಧುವರಸ, ಹರಳಯ್ಯ ದಂಪತಿಗಳನ್ನು ಮತ್ತು ನವ ವಧುವರಾರಾದ ಶೀಲವಂತ-ಲಾವಣ್ಯರನ್ನು ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ಕೊಲ್ಲುತ್ತಾನೆ. ಬಿಜ್ಜಳನ ಸೇನೆ ಶಿವಶರಣರನ್ನು ಕಂಡಲ್ಲಿ ಕೊಲ್ಲ ತೊಡಗಿ, ರಕ್ತದ ಹೊಳೆ ಹರಿಸುತ್ತದೆ.
ಇದರಿಂದ ತೀವ್ರವಾಗಿ ಮನನೊಂದ ಬಸವಣ್ಣನವರು ೧೧೯೬ ರಲ್ಲಿ ಕೂಡಲಸಂಗಮಕ್ಕೆ ಮರಳಿ ಅಲ್ಲೇ ಲಿಂಗೈಕ್ಯರಾದರು.