ಕರ್ನಾಟಕದ ಜಲಪಾತಗಳು
ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
ಪರಿವಿಡಿ |
ಪಶ್ಚಿಮ ಘಟ್ಟಗಳ ಸೆರಗಿನಲ್ಲಿ [ಬದಲಾಯಿಸಿ]
ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.
ಅಬ್ಬಿ ಜಲಪಾತ [ಬದಲಾಯಿಸಿ]
ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.
- ಸ್ಥಳ: ಮಡಿಕೇರಿ, ಕೊಡಗು ಜಿಲ್ಲೆ.
- ದೂರ: ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ. ಮಂಗಳೂರಿನಿಂದ ೧೨೦ ಕಿ.ಮೀ.
- ಸಮೀಪದ ಪಟ್ಟಣ: ಮಡಿಕೇರಿ. ಇಲ್ಲಿ ವಸತಿಗೃಹಗಳು, ಪೆಟ್ರೋಲ್ ಬಂಕುಗಳು ಮತ್ತಿತರ ಪ್ರಮುಖ ವ್ಯವಸ್ಥೆಗಳು ಲಭ್ಯ.
- ಸಮೀಪದ ಪ್ರಮುಖ ಆಕರ್ಷಣೆಗಳು: ಮಡಿಕೇರಿ,ತಲಕಾವೇರಿ, ಇರುಪ್ಪು ಜಲಪಾತ, ಭಾಗಮಂಡಲ, ಬೈಲುಕುಪ್ಪೆ
ಸಾತೊಡ್ಡಿ ಜಲಪಾತ [ಬದಲಾಯಿಸಿ]
ಉತ್ತರ ಕನ್ನಡ ಜಿಲ್ಲೆ, ಜಲಪಾತಗಳಿಗೆ ತವರು ಮನೆ. ಜಲಪಾತಗಳ ಜಿಲ್ಲೆಯೆಂದೇ ಕೆಲವೊಮ್ಮೆ ಕರೆಸಿಕೊಳ್ಳುವ ಈ ಪ್ರದೇಶ, ಮಳೆಗಾಲದ ದಿನಗಳಲ್ಲಿ ಜಿಲ್ಲೆಯ ಹಳ್ಳಿಗಳತ್ತ 'ಪಾದಯಾತ್ರೆ' ಮಾಡಿದರೆ ನಮಗೆ ಕಾಣಿಸುವುದು ಬಹುಪಾಲು ಜಲಪಾತಗಳೇ. 'ಸಾತೊಡ್ಡಿಯ ಜಲಪಾತ'ವನ್ನು ಕಂಡವರು ಅದನ್ನು ಅಮೆರಿಕದ ಚಿಕ್ಕ ನಯಾಗರ ಜಲಪಾತ ಕ್ಕೆ ಹೋಲಿಸುವುದುಂಟು. ನಿತ್ಯ ಹರಿದ್ವರ್ಣದ ಕಾಡುಗಳು, ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿ ಪ್ರಪಾತಕ್ಕೆ ಧುಮುಕುವ ನದಿಗಳ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.
ಜಲಪಾತದ ಅಕ್ಕ-ಪಕ್ಕ [ಬದಲಾಯಿಸಿ]
ತಂಪಾದ ವಾತಾವರಣ ಹಚ್ಚ ಹಸುರಿನ ವನಸಿರಿ, ಬಣ್ಣಬಣ್ಣದ ವಿದಿಧ ಪ್ರಕಾರದ ಹಕ್ಕಿಗಳ ಚಿಲಿಪಿಲಿ ಕಲರವ, ಬಂಡೆಗಳ ಮೇಲೆ ಮಧ್ಯೆ ಚಿಮ್ಮಿಕೊಂಡು ಕೆಳಗೆ ಹರಿದೋಡುವ ಜಲರಾಶಿ ಕಣ್ಣಿಗೆ ಮುದಕೊಡುತ್ತದೆ. ವರುಷವಿಡೀ ತನ್ನ ವೈಯಾರದಿಂದ ಶೋಭಿಸುವ ಸಾತೊಡ್ಡಿ ಜಲಪಾತ ಮಳೆಗಾಲದ ವೇಳೆ ತನ್ನ ಸೌಂದರ್ಯ ಮತ್ತು ಮೋಹಕತೆಯನ್ನು ಅರೆದು ಹೊಯ್ದಿರುವಂತೆ ಭಾಸವಾಗುತ್ತದೆ. ನಿಸರ್ಗದ ಮಧ್ಯೆ ಹಾಲುನೊರೆಯೋಪಾದಿಯಲ್ಲಿ ದುಮ್ಮಿಕ್ಕುವ ಜಲಪಾತದ ವೈಭವವನ್ನು ಕಾಣಲು ಪ್ರತಿದಿನ ಪ್ರವಾಸಿಕರ ದಂಡೇ ಸೇರಿರುತ್ತದೆ. ಈ ಜಲಧಾರೆಯ ಉಗಮ ಕಾಳಿಉಪನದಿಯಾದ 'ಸೂರಬ್ಬಿ ಹಳ್ಳ''ದಿಂದಾಗಿದೆಯೆಂಬುದು ತಿಳಿದುಬರುವ ಸಂಗತಿ. ಸುಮಾರು ೫೦ ಅಡಿ ಎತ್ತರದಿಂದ ವಿಶಾಲವಾಗಿ ಕೆಳಗೆ ಧುಮುಕುತ್ತಾ ಝೇಂಕಾರಮಾಡಿ ಹರಿಯುವ ನದಿ ಪರ್ಯಟಕರನ್ನು ಮರುಳುಮಾಡುತ್ತದೆ.
ಜಲಪಾತ ತಲುಪಲು [ಬದಲಾಯಿಸಿ]
ಯಲ್ಲಾಪುರದಿಂದ, ಸುಮಾರು ೨೦ ಕಿ.ಮೀ.ದೂರ ಸಾಗಲು,(ಆನಗೋಡ,ದೇಹಳ್ಳಿ,ಮಾರ್ಗದಲ್ಲಿ ಕ್ರಮಿಸಬೇಕು) ಸರಕಾರಿ ಬಸ್ಸುಗಳಿವೆ. ಆದರೆ ಅವುಗಳ ಸಂಖ್ಯೆ ಅತಿ ಕಡಿಮೆ.ಮಳೆಗಾಲದಲ್ಲಿ ಕೊನೆಯ ೮-೧೦ ಕಿ.ಮೀ.ದೂರದಾರಿಯನ್ನು ಪಾದಯಾತ್ರೆಮಾಡಿ ಮಾಡಿ ಮುಟ್ಟುವುದು ಅನಿವಾರ್ಯವಾಗುತ್ತದೆ. ಸ್ವಂತ ವಾಹನ ವ್ಯವಸ್ಥೆಯಲ್ಲಿ ದಾರಿಯಲ್ಲಿ ಹೋಗುವಾಗ ಬಲಿತ ಭಾರಿ ಗಾತ್ರದ ಮರಗಳನ್ನು ನೋಡಬಹುದು. ಪರ್ವತಗಳು ಹಚ್ಚಹಸುರಿನಿಂದ ಆವೃತವಾಗಿರುವ ದೃಷ್ಯ ಕಣ್ಣಿಗೆ ಮುದಕೊಡುತ್ತದೆ. ಅಂಕುಡೊಂಕಾದ ರಸ್ತೆಯಲ್ಲಿ ಹೋಗುವುದು ಒಂದು ಮುದಕೊಟ್ಟರೆ, ಅಲ್ಲಿನ ವನಸಂಪತ್ತನ್ನು ಫೋಟೋಕಣ್ಣುಗಳಿಂದ ಸೆರೆಹಿಡಿಯುವ ಪರಿ ಅನನ್ಯ.
ಜಲಪಾತದ ನೀರಿನಲ್ಲಿ ಜಳಕ [ಬದಲಾಯಿಸಿ]
ಜಲಪಾತದ ಹತ್ತಿರ ೪-೫ ಕಿ.ಮೀ.ದೂರ ಕಾಳಿನದಿಯ ಹಿನ್ನೀರಿನ ದಂಡೆಯಮೇಲೆ ಸಾಗಬೇಕು. ಕೊರೆಯುವ ಚಳಿಯಲ್ಲಿ ಹರಿವ ನೀರಿನಲ್ಲಿ ಜಳಕ ಮಾಡುವ ಅನುಭವ ಅದ್ಭುತ. ಭಾರಿಪ್ರಮಾಣದ ಹಾಸುಕಲ್ಲುಗಳಮೇಲೆ ಚಿತ್ತಾರ ಮಾಡಿದ್ದಾರೆನ್ನುವಂತಹ ಅನುಭವವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಶುಭ್ರ, ಮತ್ತು ಪರಿಸರ ಮಲಿನತೆಯಿಲ್ಲ ಸೊಗಸಾದ ವಾತಾವರಣ ಒಂದು ಹೊಸ ಅನುಭವವನ್ನು ನೀಡುತ್ತದೆ.
- ಸ್ಥಳ: ಯಲ್ಲಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ.
- ದೂರ: ಬೆಂಗಳೂರಿನಿಂದ ಸುಮಾರು ೪೫೦ ಕಿ.ಮೀ. ಹುಬ್ಬಳ್ಳಿಯಿಂದ ಸುಮಾರು ೬೦ ಕಿ.ಮೀ.
- ಸಮೀಪದ ಪಟ್ಟಣಗಳು: ಯಲ್ಲಾಪುರ ಮತ್ತು ಹುಬ್ಬಳ್ಳಿ
- ಸಮೀಪದ ಪ್ರಮುಖ ಆಕರ್ಷಣೆಗಳು: ಮಾಗೋಡು ಜಲಪಾತ, ಕಾರವಾರ, ದಾಂಡೇಲಿ ಅಭಯಾರಣ್ಯ, ಶಿರಸಿ ಮಾರಿಕಾಂಬೆ ದೇವಾಲಯ
ಜೋಗ ಜಲಪಾತ [ಬದಲಾಯಿಸಿ]
ಜೋಗ ಅಥವಾ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ಜೋಗ ಭಾರತದ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು ೨೯೨ ಮೀಟರ್ ಎತ್ತರದಿಂದ ಶರಾವತಿ ನದಿಯು ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಸೀಳುಗಲಾಗಿ ಇಲ್ಲಿ ಧುಮುಕುತ್ತದೆ.
- ಸ್ಥಳ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು.
- ದೂರ: ಬೆಂಗಳೂರಿನಿಂದ ಸುಮಾರು ೪೦೦ ಕಿ.ಮೀ. ಶಿವಮೊಗ್ಗದಿಂದ ಸುಮಾರು ೧೨೦ ಕಿ.ಮೀ.
- ಸಮೀಪದ ಪಟ್ಟಣಗಳು: ಸಾಗರ (೩೦ ಕಿ.ಮೀ), ಹೊನ್ನಾವರ (೬೦ ಕಿ.ಮೀ)
- ಸಮೀಪದ ಪ್ರಮುಖ ಆಕರ್ಷಣೆಗಳು: ಲಿಂಗನಮಕ್ಕಿ ಅಣೆಕಟ್ಟು, ಗೋಕರ್ಣ, ಗೇರುಸೊಪ್ಪೆ, ಮುರ್ಡೇಶ್ವರ, ಕೊಲ್ಲೂರು, ಕೆಳದಿ, ಇಕ್ಕೇರಿ
ಜೋಗ ಜಲಪಾತದ ಬಗ್ಗೆ ಸಂಪೂರ್ಣವಾದ ಲೇಖನವನ್ನು ಇಲ್ಲಿ ಓದಿರಿ.
ಬೈಂದೂರು ಕೋಸಳ್ಳಿ ಜಲಪಾತ [ಬದಲಾಯಿಸಿ]
ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು ೧೧ ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಸುಮಾರು ೭ ರಿಂದ ೮ ಕಿ.ಮೀ ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು ೩ ಕಿ.ಮೀ ಕಾಡುಮಾರ್ಗದಲ್ಲಿ ನಡೆದು ಹೋದರೆ ಸಿಗುವುದೇ ಕೋಸಳ್ಳಿ ಜಲಪಾತ. ಕೋಸಳ್ಳಿ ಜಲಪಾತವು ೩-೫ ಹಂತಗಳಾಗಿ ಧುಮುಕುತ್ತದೆ.
- ದೂರ: ಬೆಂಗಳೂರಿನಿಂದ ಸುಮಾರು ೪೮೦ ಕಿ.ಮೀ. ಮಂಗಳೂರಿನಿಂದ ೧೩೦ ಕಿ.ಮೀ
- ಮಾರ್ಗ: ಮಂಗಳೂರು - ಗೋವಾ ರಾಷ್ಟ್ರೀಯ ಹೆದ್ದಾರಿ ೧೭
- ಸಮೀಪದ ಪ್ರಮುಖ ಆಕರ್ಷಣೆಗಳು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ (೨೭ ಕಿ.ಮೀ*), ಮುರ್ಡೇಶ್ವರ (೩೦ ಕಿ.ಮೀ*), ಉಡುಪಿ ಶ್ರೀ ಕೃಷ್ಣ ದೇವಸ್ಥಾನ (೬೭ ಕಿ.ಮೀ*), ಮರವಂತೆ ಕಡಲ ತೀರ (೧೮ ಕಿ.ಮೀ*), (*ಬೈಂದೂರಿನಿಂದ ಇರುವ ದೂರ)
ಇತರ (ಅಪೂರ್ಣ ಪಟ್ಟಿ) [ಬದಲಾಯಿಸಿ]
- ಉಂಚಳ್ಳಿ ಜಲಪಾತ ಅಥವ ಲುಷಿಂಗ್ಟನ್ ಜಲಪಾತ ಅಥವ ಕೆಪ್ಪ ಜೋಗ
- ಅಬ್ಬೆ ಜಲಪಾತ
- ಇರುಪ್ಪು ಜಲಪಾತ
- ಸುತನಬ್ಬಿ / ಹನುಮನ ಗುಂಡಿ ಜಲಪಾತ
- ಹಿಡ್ಲುಮನೆ / ಹಿತ್ಲುಮನೆ ಜಲಪಾತ
- ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)
- ಭರಚುಕ್ಕಿ ಜಲಪಾತ (ಶಿವನ ಸಮುದ್ರ)
- ಹೆಬ್ಬೆ ಜಲಪಾತ
- ಅಬ್ಬೆ ಜಲಪಾತ
- ಮಾಗೋಡು ಜಲಪಾತ
- ಸಿರಿಮನೆ ಜಲಪಾತ
- ಬೆಣ್ಣೆ ಹೊಳೆ ಜಲಪಾತ
- ವಾಟೆ ಹಳ್ಳ ಜಲಪಾತ
- ಬುರುಡೆ ಜಲಪಾತ ಅಥವ ಬುರುಡೆ ಜೋಗ
- ಕಲ್ಹತ್ತಿಗಿರಿ ಜಲಪಾತ
- ವಿಭೂತಿ ಜಲಪಾತ
- ಕೂಡ್ಲು ತೀರ್ಥ ಜಲಪಾತ
- ಜೋಮ್ಲು ತೀರ್ಥ
- ದಬ್ಬೆ ಜಲಪಾತ
- ಶಿವಗಂಗೆ ಜಲಪಾತ
- ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)
- ಚುಂಚಿ ಜಲಪಾತ
- ಆಲೇಖಾನ್ ಜಲಪಾತ
- ಮಾಣಿಕ್ಯಧಾರ ಜಲಪಾತ
- ಶಾಂತಿ ಜಲಪಾತ
- ಮಘೇಬೈಲ್ ಜಲಪಾತ
- ಬರ್ಕಣ ಜಲಪಾತ
- ಲಾಲ್ಗುಳಿ ಜಲಪಾತ
- ಜೇನುಗಲ್ಲು ಜಲಪಾತ
- ಲೈನ್ಕಜೆ ಜಲಪಾತ
- ಮಲ್ಲಳ್ಳಿ ಜಲಪಾತ
- ಕಲ್ಹತ್ತಿಗಿರಿ ಜಲಪಾತ
- ಕೆಸವೆ ಜಲಪಾತ
- ಅಣಶಿ ಜಲಪಾತ
- ಅಚಕನ್ಯ ಜಲಪಾತ
- ಗೋಕಾಕ್ ಜಲಪಾತ
- ಗೊಡಚಿನಮಲ್ಕಿ ಜಲಪಾತ
- ಕಪಿಲ ಜಲಪಾತ