ಕೂಡ್ಲು ತೀರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೂಡ್ಲು ತೀರ್ಥ ಜಲಪಾತ ಇಂದ ಪುನರ್ನಿರ್ದೇಶಿತ)

ಕೂಡ್ಲು ತೀರ್ಥ ಜಲಪಾತ[ಬದಲಾಯಿಸಿ]

[೧] ಹೆಬ್ರಿಯಿ೦ದ ೨೦ ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ಸೀತಾ ನದಿಯ ಉಗಮ ಸ್ಥಳವಾಗಿದ್ದು, ರಸ್ತೆ ಸ೦ಪರ್ಕದಿ೦ದ ೪ ಕಿ.ಮೀ. ದೂರದಲ್ಲಿದೆ. ೪ ಕಿ.ಮೀ. ಚಾರಣದ ನಂತರ ಜಲಪಾತವು ಎದುರುಗೊಳ್ಳುವುದು. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ಮುದ ನೀಡುವುದು.[೨]

ಕೂಡ್ಲು ತೀರ್ಥ

ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಪಡೆದಿರುವ ಆಗುಂಬೆಯ ದಟ್ಟ ಕಾನನದ ಕಾಲುದಾರಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಇರುವ ಕೂಡ್ಲು ತೀರ್ಥವು ಬಳವಳಿದು ಅರಸಿ ಬಂದ ಮೇನಕೆ ಚೆಲುವಿನಿಂದ ಮನಸೂರೆಗೊಳ್ಳುವಂತೆ ಮಾಡಿಬಿಡುತ್ತದೆ.

ದಟ್ಟ ಕಾನನದ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು ೧೨೦ ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ರಮಣೀಯತೆಯ ಅಪರಾವತಾರದಂತಹ ಕಂಪ ಸೂಸುತ್ತ ಭೋರ್ಗರೆಯುತ್ತ ಬೀಳುವ ದೃಶ್ಯ ನಿಜಕ್ಕೂ ನಡೆದು ಬಂದ ದಣಿವೆಲ್ಲವನ್ನೂ ಇಂಗಿಸಿಬಿಡುತ್ತದೆ. ನಿತ್ಯ ಹರಿದ್ವರ್ಣದ ಕಾನನವನ್ನು ನೆನಪಿಸುವ ದಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಗಂಟೆಯ ನಡಿಗೆಯ ಪಯಣ ಚೇತೋಹಾರಿಯಾದದ್ದು. ಎತ್ತ ನೋಡಿದರೂ ಮುಗಿಲೆತ್ತರಕ್ಕೆ ಬೆಳೆದು ನಿಂತ, ಮುಂದಿನ ಹಾದಿಯೇ ಕಾಣಿಸದಷ್ಟು ಒತ್ತಾಗಿ ಬೆಳೆದು ನಿಂತ ವೃಕ್ಷ ರಾಶಿ, ಅಲ್ಲಲ್ಲಿ ಕಂಡೂ ಕಾಣದೆ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳ ಸಪ್ಪಳ, ಕಾಡು ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ, ದೂರದ ಸೀತಾ ನದಿಯ ಜಲಪಾತದ ಝಳು ಝಳು ಸದ್ದು ಹೀಗೆ ಎಲ್ಲವೂ ಪ್ರವಾಸಿಗರ ಪಯಣವನ್ನು ಆವಿಸ್ಮರಣೀಯಗೊಳಿಸುತ್ತದೆ.

ಗಗನದಿಂದ ಭುವಿಯತ್ತ ಒಮ್ಮೆಲೆಯೇ ಹೆಬ್ಬಂಡೆಗಳನ್ನು ಸೀಳಿಕೊಂಡು ದೊಪ್ಪೆಂದು ಧುಮ್ಮಿಕ್ಕುವ ಸೀತಾ ನದಿಯ ಕೂಡ್ಲು ತೀರ್ಥದ ಪರಿಸರ ನೋಡುಗರನ್ನು ಯಾವುದೇ ಒಂದು ಕಿನ್ನರ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ. ಜಲಪಾತದ ಒಂದು ಪಾರ್ಶ್ವದಲ್ಲಿ ಎಚ್ಚರಿಕೆಯಿಂದ ಝಳಕ ಮಾಡಲು ಅಡ್ಡಿಯಿಲ್ಲ. ಮಳೆಗಾಲದಲ್ಲಿ ಜಿಗಣೆಗಳ ಕಾಟ. ದಟ್ಟ ಕಾಡಿನ ಮಧ್ಯದಲ್ಲಿರುವ ಕಾಲುದಾರಿಯಲ್ಲಿ ಸುಮಾರು ೧.೫ ಕಿ ಮೀ ದೂರ ಸಾಗಬೇಕಾಗುತ್ತದೆ.

ವಾಹನ ಸೌಕರ್ಯ[ಬದಲಾಯಿಸಿ]

ಈ ಜಲಪಾತವನ್ನು ನೋಡಬಯಸುವವರು ಉಡುಪಿ ಆಥವಾ ಶಿವಮೊಗ್ಗದಿ೦ದ ಮಿನಿಬಸ್ಸಿನಲ್ಲಿ ಪ್ರಯಾಣ ಬೆಳಸಬಹುದು. ಉಡುಪಿಯಿಂದ, ಶಿವಮೊಗ್ಗದಿಂದ ಹೆಬ್ರಿಯವರೆಗೂ ವಾಹನ ಸೌಕರ್ಯಗಳಿರುತ್ತವೆ. ಇಲ್ಲಿಂದ ಮಾತ್ರ ಹೆಬ್ರಿಯಲ್ಲಿರುವ ಸ್ಥಳೀಯ ಆಟೋಗಳಲ್ಲೇ ಹೋಗಿ ಬರಬೇಕು. ಸ್ಥಳ ಪರಿಚಯವಿರುವ ವಾಹನ ಚಾಲಕರ ಜತೆಗೇ ಹೋಗಿಬರುವುದು ಒಳಿತು. ಏಕೆಂದರೆ ಕೂಡ್ಲು ತೀರ್ಥ ಪರಿಸರದಲ್ಲಿ ಸುಂದರ ಜಲಧಾರೆ, ಸ್ವಚ್ಛಂದ ಪರಿಸರ ಬಿಟ್ಟರೆ ಮತ್ತೇನೂ ಸಿಗುವುದಿಲ್ಲ.

ಕೂಡ್ಲು ತೀರ್ಥದ ವಿಶೇಷತೆ[ಬದಲಾಯಿಸಿ]

ಸುಮಾರು ೩೦೦ ಅಡಿಗಳಷ್ಟು ಎತ್ತರದಿಂದ ಕೂಡ್ಲು ತೀರ್ಥ ಜಲಪಾತ ಧುಮುಕುತ್ತಿದೆ. ಈ ಹಿನ್ನೆಲೆಯಲ್ಲಿ ಜಲಪಾತದ ಕೆಳಗೆ ನೈಸರ್ಗಿಕವಾಗಿಯೇ ಕೊಳದ ರಚನೆಯಾಗಿದೆ. ಪುರಾಣಗಳ ಪ್ರಕಾರ ಸುಮಾರು ಸಾವಿರ ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸನ್ಯಾಸಿಗಳು ಧ್ಯಾನ ಮಾಡುತಿದ್ದರು ಎನ್ನುವ ಐತಿಹ್ಯವಿದೆ. ಹಾಗಾಗಿ ಈ ಜಲಪಾತಕ್ಕೆ ಕೂಡ್ಲು ತೀರ್ಥ ಎನ್ನುವ ಹೆಸರು ಬಂದಿದೆ.

ಚಾರಣ[ಬದಲಾಯಿಸಿ]


ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಚಾರಣಿಗರು ಅಥವಾ ಪ್ರವಾಸಿಗರು ಅನುಮತಿ ಮಾತ್ರ ಕಡ್ಡಾಯ[೩]. ಚಾರಣಿಗರು ಅರಣ್ಯ ಇಲಾಖೆಯ ಕಛೇರಿಯಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಮಧ್ಯ, ಸಿಗರೇಟು ಹೀಗೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಸ್ಪಷ್ಟ ಹೆಸರು, ದೂರವಾಣಿ ಮತ್ತು ತಮ್ಮಲ್ಲಿ ಇರುವ ವಸ್ತುಗಳ ಸಮಗ್ರ ಮಾಹಿತಿ ನೀಡಿ ಚಾರಣ ಮುಂದುವರಿಸ ಬೇಕು. ಜಲಪಾತವನ್ನು ತಲುಪಲು ಸೀತಾನದಿಯನ್ನು ಹಾದುಹೋಗಬೇಕು. ದಟ್ಟ ಕಾಡಿನ ಮಧ್ಯದಲ್ಲಿರುವ ಕಾಲುದಾರಿಯಲ್ಲಿ ಸುಮಾರು ೧.೫ ಕಿ ಮೀ ದೂರ ಸಾಗಬೇಕಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.trawell.in/karnataka/agumbe/kudlu-theertha-waterfalls
  2. https://www.kannadaprabha.com/travel-automobile/2015/dec/11/amazing-kudlu-theertha-fals-near-agumbe-264195.html
  3. https://themangaloremirror.in/visit-the-scenic-beauty-of-the-koodlu-theertha-falls/