ಆದಿ ಶಂಕರ
Wikipedia ಇಂದ
![]() |
|
| ಜನನ ಕಾಲ: | ಕ್ರಿ.ಶ. ೭೮೮ - ೮೨೦ (ಅಂದಾಜು). |
| ಹುಟ್ಟಿದೂರು : | ಕಾಲಟಿ, ಕೇರಳ ರಾಜ್ಯ. |
| ತಂದೆ: | ಶಿವಗುರು |
| ತಾಯಿ: | ಆರ್ಯಾಂಬೆ |
| ಗುರುಗಳು: | ಗೋವಿಂದ ಭಗವತ್ಪಾದರು |
ಹಿಂದೂ ಸಿದ್ಧಾಂತ ಸರಣಿಯ ಲೇಖನ |
|
| ಪಂಥಗಳು | |
|---|---|
| ಸಾಂಖ್ಯ · ನ್ಯಾಯ | |
| ವೈಶೇಷಿಕ · ಯೋಗ | |
| ಪೂರ್ವ ಮೀಮಾಂಸಾ · ವೇದಾಂತ | |
| ವೇದಾಂತ ಪಂಥಗಳು | |
| ಅದ್ವೈತ · ವಿಶಿಷ್ಟಾದ್ವೈತ | |
| ದ್ವೈತ | |
| ಪ್ರಮುಖ ವ್ಯಕ್ತಿಗಳು | |
| ಕಪಿಲ · ಗೋತಮ | |
| ಕಣಾದ · ಪತಂಜಲಿ | |
| ಜೈಮಿನಿ · ವ್ಯಾಸ | |
| ಮಧ್ಯಕಾಲೀನ | |
| ಆದಿಶಂಕರ · ರಾಮಾನುಜ | |
| ಮಧ್ವ · ಮಧುಸೂದನ | |
| ವೇದಾಂತ ದೇಶಿಕಾ · ಜಯತೀರ್ಥ | |
| ಆಧುನಿಕ | |
| ರಾಮಕೃಷ್ಣ · ರಮಣ | |
| ವಿವೇಕಾನಂದ · ನಾರಾಯಣ ಗುರು | |
| ಅರವಿಂದ ·ಶಿವಾನಂದ | |
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು ಎಂದು ನಂಬಲಾಗಿರುವ ಶಂಕರಾಚಾರ್ಯರು ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ "ಅದ್ವೈತ" ಸಿದ್ಧಾಂತವನ್ನು ಜಗತ್ತಿಗೆ ಸಾರಿದರು.
ಪರಿವಿಡಿ |
[ಬದಲಾಯಿಸಿ] ಶ್ರೀ ಶಂಕರರ ಜನನ
ಶಂಕರಾಚಾರ್ಯರ ಕಾಲದ ಬಗ್ಗೆ ವಿದ್ವಾಂಸರಲ್ಲಿ ಇನ್ನೂ ಜಿಜ್ಞಾಸೆಯಿದೆ. ಒಂದು ವಾದದ ಪ್ರಕಾರ ಇವರು ೮ ನೇ ಶತಮಾನದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಇವರು ಹುಟ್ಟಿದ್ದು ಕೇರಳ ರಾಜ್ಯದ ಕಾಲಟಿ ಎಂಬ ಹಳ್ಳಿಯ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ. ಹುಟ್ಟಿದ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯಂದು.ತಂದೆ ಶಿವಗುರು ಹಾಗೂ ತಾಯಿ ಆರ್ಯಾಂಬೆ ಶಿವಭಕ್ತರಾಗಿದ್ದು ಶಿವನ ವರಪ್ರಸಾದದಿಂದಲೇ ಶಂಕರರ ಜನನವಾಯಿತು ಎಂಬ ನಂಬಿಕೆಯಿದೆ.
[ಬದಲಾಯಿಸಿ] ಶ್ರೀ ಶಂಕರರ ಬಾಲ್ಯದ ವಿವರಗಳು
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಆಧ್ಯಾತ್ಮಿಕತೆಯಲ್ಲಿ ಆಸಕ್ತಿತಳೆದ ಇವರು ಸನ್ಯಾಸತ್ವವನ್ನು ಸ್ವೀಕರಿಸುವತ್ತ ಒಲವು ತೋರಿದರು. ಆದರೆ ಒಬ್ಬನೇ ಮಗನಾಗಿದ್ದ ಶಂಕರರನ್ನು ಸಂನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಶಂಕರರು ಬಹಳ ಕಷ್ಟಪಡಬೇಕಾಯಿತು. ಆಕೆಯ ಅಂತಿಮ ಕ್ಷಣಗಳಲ್ಲಿ ತಾನು ಎಲ್ಲಿದ್ದರೂ ಆಕೆಯ ಎದುರು ಬಂದು ನಿಲ್ಲುವುದಾಗಿ ಮಾತು ಕೊಟ್ಟ ಶಂಕರರು ಸೂಕ್ತ ಗುರುವಿಗಾಗಿ ಹುಡುಕುತ್ತಾ ತಮ್ಮ ಪಯಣವನ್ನಾರಂಭಿಸಿದರು. ನರ್ಮದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಅವರಿಂದ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಅಭ್ಯಸಿಸಿದ ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೂ ವೇದಾಂತದ ಪಾಠ ಹೇಳಿಕೊಟ್ಟರು.
[ಬದಲಾಯಿಸಿ] ಶ್ರೀ ಶಂಕರರ ಜೀವನದ ಮೈಲಿಗಲ್ಲುಗಳು
ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು.ಇವುಗಳಲ್ಲಿ ಮಂಡನಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಬಹು ಪ್ರಮುಖವಾದುದು. ಮಂಡನ ಮಿಶ್ರರೇ ನಂತರ ಶ್ರೀ ಸುರೇಶ್ವರಾಚಾಯ೯ ಎಂಬ ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ಮಠ) ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು."ಅದ್ವೈತ" ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು.ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞಪೀಠವನ್ನೇರಿದರು. ಭಾರತದ ದಕ್ಷಿಣದಲ್ಲಿ ವಾದಮಾಡಿ ತಮ್ಮನ್ನು ಜಯಿಸುವವರೇ ಇಲ್ಲವೆಂದು ಹೀಗಳೆದು ಶಾರದೆಯ ದೇಗುಲದ ದಕ್ಷಿಣದ ಬಾಗಿಲನ್ನು ಮುಚ್ಚಿಸಿದ್ದ ಕಾಶ್ಮೀರದ ಪಂಡಿತರ ಬಾಯಿ ಮುಚ್ಚಿಸಿದರು; ಕಾಶ್ಮೀರಪುರವಾಸಿನಿ ಶಾರದೆಯ ದೇಗುಲದ ದಕ್ಷಿಣದ್ವಾರವನ್ನೂ, ಅದರೊಂದಿಗೆ ದುರಹಂಕಾರಿ ಔತ್ತರೇಯರ ಕಣ್ಣನ್ನೂ ತೆರೆಸಿದ ದ್ರವಿಡಶಿಶು ಇವರಾದರು.
[ಬದಲಾಯಿಸಿ] ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು
ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.ಶಂಕರರು ಬಾದರಾಯಣರ "ಬ್ರಹ್ಮಸೂತ್ರ" (ವೇದಾಂತಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿದರು; ಅಲ್ಲದೆ ಶ್ರೀಮದ್ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು. ಇವರು ರಚಿಸಿದ "ಭಜ ಗೋವಿಂದಮ್" ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು. ಹಲವಾರು ಇತರ ಸ್ತೋತ್ರಗಳನ್ನೂ ಶಂಕರರು ರಚಿಸಿದ್ದಾರೆ.
ತಾಯಿಗೆ ಕೊಟ್ಟ ಮಾತಿನ ಪ್ರಕಾರ ಆಕೆಯ ಕೊನೆಗಾಲದಲ್ಲಿ ಕಾಲಟಿಗೆ ಹಿಂದಿರುಗಿದ ಶಂಕರರು ಆಕೆಯ ಅಂತಿಮ ವಿಧಿಗಳನ್ನು ಪೂರೈಸಿದರು. ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಶಂಕರರು ಬ್ರಹ್ಮೈಕ್ಯರಾದರು.
[ಬದಲಾಯಿಸಿ] "ಅದ್ವೈತ" ಸಿದ್ಧಾಂತ
ಸಂಸ್ಕೃತದಲ್ಲಿ "ದ್ವಿ" ಎಂದರೆ ಎರಡು ಎಂದರ್ಥ. ಹಾಗಾಗಿ "ಅ" + "ದ್ವೈತ" ಅಂದರೆ "ಎರಡನೆಯದಿಲ್ಲದ್ದು" ಎಂದು ಅರ್ಥೈಸಬಹುದು. ಅದ್ವೈತಸಿಧ್ಧಾಂತದ ಮೂಲ ಸಾರವೇ ಇದು. "ಆತ್ಮ" ಮತ್ತು "ಪರಮಾತ್ಮ" ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ ಪರಮಾತ್ಮ (ದೇವರು). ಪರಮಾತ್ಮನೇ ಆತ್ಮ. "ಅಹಂ ಬ್ರಹ್ಮಾಸ್ಮಿ" (ನಾನೇ ಪರಮಾತ್ಮ), "ತತ್ ತ್ವಮ್ ಅಸಿ" ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಶಂಕರಾಚಾರ್ಯರು ಪರಮಾತ್ಮ, ಅಂದರೆ "ನಾನು", ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕವೆಲ್ಲವೂ ಮಿಥ್ಯ ಹಾಗೂ "ಸರ್ವಂ ಬ್ರಹ್ಮಮಯಂ ಜಗತ್" (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
[ಬದಲಾಯಿಸಿ] ಈ ಪುಟಗಳನ್ನೂ ನೋಡಿ


