ಸದಸ್ಯ:Dr. Manjula Bhandari/ಫಾಸೆ ಪಾರ್ಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ಧಿ ಸಮುದಾಯವು ಭಾರತದ ಹಿಂದೂ ಬುಡಕಟ್ಟಾಗಿದೆ. ಈ ಬುಡಕಟ್ಟು ಜನರು ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತಾರೆ. ಹಾಗೇಯೆ ಇವರು ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಪಾರ್ಧಿ ಎಂಬ ಪದವು ಮರಾಠಿ ಪದ ' ಪರದ್ ' ದಿಂದ ಬಂದಿದೆ, ಇದರರ್ಥ ಬೇಟೆ ಎಂದಾಗಿದೆ. ಇದು ಸಂಸ್ಕೃತ ಪದ ' ಪಾಪರ್ಧಿ ' ಅಂದರೆ ಬೇಟೆ ಅಥವಾ ಬೇಟೆಯಾಡುವ ಆಟ ಎಂದರ್ಥವಾಗುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಪಾರ್ಧಿಗಳನ್ನು ಮೇವಾರೀಸ್ ಎಂದು ಕರೆಯಲಾಗುತ್ತದೆ. ಇವರು ಅಡ್ವಿಚಿಂಚೆರ್, ಫಾನ್ಸ್ ಪಾರ್ಧಿ, ಫಾನ್ಸೆ ಪಾರ್ಧಿ, ಲಾಂಗೋಲಿ ಪಾರ್ಧಿ, ಬಹೇಲಿಯಾ, ಬಹೇಲ್ಲಿಯಾ, ಚಿತಾ ಪಾರ್ಧಿ, ಶಿಕಾರಿ, ಟಾಕಂಕರ್, ಟಾಕಿಯಾ ಪಾರ್ಧಿ ಮುಂತಾದ ಹೆಸರುಗಳನ್ನು ಹೊಂದಿದ್ದಾರೆ. ಪಾರ್ಧಿ ಬುಡಕಟ್ಟಿನವರನ್ನು ವಾಘ್ರಿ ಪಾರ್ಧಿ ಮತ್ತು ಫಾಸೆ ಪಾರ್ಧಿಗಳೆಂಬ ಗುಂಪುಗಳಾಗಿ ವಿಂಗಡಿಸಲಾಗಿದೆ . ಇವುಗಳನ್ನು ಪಾಲ್ ಪಾರ್ಧಿ, ಗವ್ ಪಾರ್ಧಿ, ಟಾಕಂಕರ್, ಟಕಾರಿ ಮುಂತಾದ ಉಪಗುಂಪುಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ವ್ಯಾಪಕವಾಗಿ ಕಂಡುಬರುವ ಉಪನಾಮಗಳಲ್ಲಿ ಚೌಹಾಣ್ (ಚವಾನ್), ರಾಥೋಡ್ ಮತ್ತು ಸೋಲಂಕಿ ಸೇರಿವೆ. [೧]

ಇತಿಹಾಸ[ಬದಲಾಯಿಸಿ]

ಪಾರ್ಧಿಗಳು ರಜಪೂತರ ವಂಶಸ್ಥರು. ಇವರು ರಜಪೂತ ಕುಲದ ಹೆಸರುಗಳನ್ನು ಹೊಂದಿರುವುದರಿಂದ ಮತ್ತು ಇವರಲ್ಲಿ ಇನ್ನೂ ರಾಜಸ್ಥಾನಿ ಉಪಭಾಷೆಯನ್ನು ಮಾತನಾಡುತ್ತಾರೆ ಎಂಬ ಅಂಶದಿಂದ ಇವರ ಮೂಲವು ರಜಪೂತ ಎಂದು ದೃಢೀಕರಿಸಲ್ಪಟ್ಟಿದೆ. ಅವರ ಹೆಸರುಗಳು ಸಾಮಾನ್ಯವಾಗಿ "-ಸಿಂಗ್" ಪ್ರತ್ಯಯದೊಂದಿಗೆ ಕೊನೆಗೊಳ್ಳುತ್ತವೆ. ಪಾರ್ಧಿಗಳು ಸಾಳುಂಕಿ, ರಾಥೋಡ್, ಸಿಂದಿಯಾ, ಚೌಹಾಣ್ (ಚವಾನ್) ನಂತಹ ಸಾಮಾನ್ಯ ಉಪನಾಮಗಳನ್ನು ಹೊಂದಿದ್ದಾರೆ. ಇವರು ಪವಾರ್, ಶಿಂಧೆ ಮತ್ತು ದಭಾಡೆಯಂತಹ ಮರಾಠಾ ಉಪನಾಮಗಳನ್ನು ಸಹ ತೆಗೆದುಕೊಂಡಿದ್ದಾರೆ.ಇವರು ರಾಜಸ್ಥಾನದಿಂದ ಬಂದವರು. ಅಲ್ಲಿಂದ ಇವರು ಗುಜರಾತ್ನ ಮೂಲಕ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಗೆ ವಲಸೆ ಬಂದರು.

ಗುಜರಾತಿನಲ್ಲಿದ್ದಾಗ ಇವರು ಗುಜರಾತಿ ಸಂಸ್ಕೃತಿಯನ್ನು ಅನುಸರಿಸಿಕೊಂಡರು. ಇವರು ಗುಜರಾತಿ ಸಮುದಾಯದೊಂದಿಗೆ ಬೆರೆತು ತಮ್ಮ ಭಾಷೆಯನ್ನು ಮಾತನಾಡಲು ಪ್ರಾರಂಭಿಸಿದರು. ಇವರು ಖೋಡಿಯಾರ್ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸಲು ಪ್ರಾರಂಭಿಸಿದರು.

ಪ್ರಸ್ತುತ ದಿನದಲ್ಲಿನ ಜನಸಂಖ್ಯಾ ಹಂಚಿಕೆ[ಬದಲಾಯಿಸಿ]

ಪಾರ್ಧಿ ಮಕ್ಕಳು

1901 ರ ಜನಗಣತಿಯ ಪ್ರಕಾರ ಪಾರ್ಧಿಗಳ ಒಟ್ಟು ಜನಸಂಖ್ಯೆ 12,214. ಇವರಲ್ಲಿ 6,320 ಪುರುಷರು ಮತ್ತು 5,894 ಮಹಿಳೆಯರು ಇದ್ದಾರೆ. ಅದೇ ಅವಧಿಯಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಭೋಪಾಲ್, ರೈಸೆನ್ ಮತ್ತು ಸೆಹೋರ್ ನಗರಗಳಲ್ಲಿ ಪಾರ್ಧಿಗಳ ಒಟ್ಟು ಜನಸಂಖ್ಯೆಯು 1831 ಆಗಿತ್ತು. ಅದೇ ರಾಜ್ಯದಲ್ಲಿ ಬಹೇಲಿಯಾಗಳು ಮತ್ತು ಚಿತಾಗಳು ಪಾರ್ಧಿಗಳೊಂದಿಗೆ ಕೂಡಿದ್ದಾರೆ. 1981 ರ ಜನಗಣತಿಯ ಪ್ರಕಾರ ಅವರ ಸಂಖ್ಯೆ 8,066. 1981 ರ ಜನಗಣತಿಯಲ್ಲಿ ಗುಜರಾತ್‌ನಲ್ಲಿ ಪಾರ್ಧಿ ಜನಸಂಖ್ಯೆಯು 814 ಆಗಿದೆ. ಮಹಾರಾಷ್ಟ್ರದಲ್ಲಿ ಪಾರ್ಧಿ ಜನಸಂಖ್ಯೆ 95,115 (ಜನಗಣತಿ ಮಾಹಿತಿ, 1981). 2001 ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಪಾರ್ಧಿಗಳ ಒಟ್ಟು ಜನಸಂಖ್ಯೆ 159,875 ಆಗಿದೆ. ಅವು ಮುಖ್ಯವಾಗಿ ಅಮರಾವತಿ (20,568) ಅಕೋಲಾ (17,578) ಬುಲ್ಧಾನ (16428) ಜಲಗಾಂವ್ (16,849) ಯವತ್ಮಾಲ್ (8,129) ಉಸ್ಮಾನಾಬಾದ್ (9,959) ಪುಣೆ (7,230) ಮತ್ತು ಇತರ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದಾರೆ. ಮುಂಬೈನ ಪಾರ್ಧಿಗಳ ಜನಸಂಖ್ಯೆಯ ಮಾಹಿತಿಯು ಜನಗಣತಿ ದಾಖಲೆಯಲ್ಲಿ ಲಭ್ಯವಿಲ್ಲ.

ಭಾಷೆ[ಬದಲಾಯಿಸಿ]

ಪಾರ್ಧಿಗಳು ರಾಜಸ್ಥಾನಿ ಮತ್ತು ಗುಜರಾತಿನ ಮಿಶ್ರ ಉಪಭಾಷೆಗಳನ್ನು ಮುಖ್ಯವಾಗಿ ವಾಗ್ರಿ ಭಾಷೆ ಮತ್ತು ಪಾರ್ಧಿ ಭಾಷೆಗಳನ್ನು ಮಾತನಾಡುತ್ತಾರೆ. ಈ ಭಾಷೆಗಳನ್ನು ಪಶ್ಚಿಮ ಇಂಡೋ-ಆರ್ಯನ್ ಭಾಷಾ ಗುಂಪಿನ ಭಿಲ್ ಭಾಷೆಯ ಗುಂಪಿನಲ್ಲಿಡಲಾಗಿದೆ. ಭಿಲ್ ಭಾಷೆಗಳು ಗುಜರಾತಿ ಭಾಷೆ ಮತ್ತು ರಾಜಸ್ಥಾನಿ-ಮಾರ್ವಾರಿ ಭಾಷೆಗಳ ನಡುವೆ ಸಂಪರ್ಕವನ್ನು ರೂಪಿಸುತ್ತವೆ. ಪಾರ್ಧಿ ಭಾಷೆಯು ಕೇವಲ ಮಾತನಾಡುವ ಭಾಷೆಯಾಗಿದ್ದು, ಇದು ಭಿಲ್ ಭಾಷೆಗಳ ಉತ್ತರ ಬರೇಲಿಯ ಉಪಭಾಷೆಯಾಗಿದೆ. ಇದು ಒಂದು ಸಮುದಾಯದ ಪ್ರಮುಖ ಭಾಷೆಯಾಗಿದೆ. ಪಾರ್ಧಿ ಭಾಷೆಯ ಹೊರತಾಗಿ ಇವರು ಗುಜರಾತಿ, ರಾಜಸ್ಥಾನಿ, ಕೆನರೀಸ್, ತೆಲುಗು, ಮರಾಠಿ, ಮಾರ್ವಾಡಿ, ಅಹಿರಾನಿ ಭಾಷೆಗಳನ್ನು ಆಯಾ ಪ್ರಾದೇಶಿಕತೆಗೆ ಹೊಂದಿಕೊಂಡು ಮಾತನಾಡುತ್ತಾರೆ.

ಸಂಸ್ಕೃತಿ[ಬದಲಾಯಿಸಿ]

ಇವರದ್ದು ರಜಪೂತ ವಂಶಾವಳಿಯಾದ ಕಾರಣದಿಂದ ಪಾರ್ಧಿ ಸಂಸ್ಕೃತಿಯು ರಜಪೂತ ಸಂಸ್ಕೃತಿಯನ್ನು ಹೋಲುತ್ತದೆ. ಆದಾಗ್ಯೂ, ಇವರ ಸಂಸ್ಕೃತಿಯು ಗುಜರಾತಿ ಮತ್ತು ರಾಜಸ್ಥಾನಿ ಸಂಸ್ಕೃತಿಯ ಸಮ್ಮಿಶ್ರಣವಾಗಿದೆ. ಇವರ ಮದುವೆಯ ಮೆರವಣಿಗೆಯು ರಜಪೂತ ಮತ್ತು ಗುಜರಾತಿ ಶೈಲಿಯಲ್ಲಿದೆ. ಪಾರ್ಧಿಗಳು ಹಿಂದೂ ಧರ್ಮದ ಶಕ್ತಿ ಪಂಥವನ್ನು ಅನುಸರಿಸುತ್ತಾರೆ ಮತ್ತು ರಜಪೂತರನ್ನು ಹೋಲುವ ಕೆಲವು ಕುಲದೇವಿಗಳನ್ನು ಹೊಂದಿದ್ದಾರೆ. ಇವರು ಮೌಲಿ ಮಾತಾ, ಕಾಳಿಕಾ ಮಾತಾ, ಸಪ್ತಶೃಂಗಿ ಮಾತಾ, ವದೇಖಾನ್ ಮಾತಾ ಮತ್ತು ಖೋಡಿಯಾರ್ ಮಾತೆಯನ್ನು ತಮ್ಮ ಕುಲದೇವಿಯೆಂದು ಪೂಜಿಸುತ್ತಾರೆ. ಇವರಿಗೆ ದಸರಾ ಹಬ್ಬವು ಒಂದು ಪ್ರಮುಖವಾದ ಹಬ್ಬವಾಗಿದೆ. ಕುಲದೇವಿಯನ್ನು ಸಂತೃಪ್ತಿಗೊಳಿಸಲು ಇವರು ಕುರಿ ಅಥವಾ ಮೇಕೆಯನ್ನು ಬಲಿ ನೀಡುತ್ತಾರೆ. ನಂತರ ಅದನ್ನು ಗ್ರಾಮಸ್ಥರಿಗೆ ಹಂಚಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಪ್ರಾಣಿ ಬಲಿ ರಜಪೂತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದಾಗ್ಯೂ, ಪ್ರಾಣಿ ಬಲಿಯ ವಿಧಾನವು ಪಾರ್ಧಿಗಳಲ್ಲಿ ರಜಪೂತರಿಗಿಂತ ಭಿನ್ನವಾಗಿದೆ. ರಜಪೂತರು ತ್ಯಾಗದ ಝಟ್ಕಾ ವಿಧಾನವನ್ನು ಬಳಸುತ್ತಾರೆ ಆದರೆ ಪಾರ್ಧಿಗಳು ಹಲಾಲ್ ವಿಧಾನವನ್ನು ಹೋಲುವ ಇತರ ವಿಧಾನವನ್ನು ಬಳಸುತ್ತಾರೆ. ಇದು ಸಾಮಾನ್ಯವಾಗಿ ಮುಸ್ಲಿಂರ ಬಲಿ ವಿಧಾನದೊಂದಿಗೆ ಸಂಬಂಧ ಹೊಂದಿದಂತೆ ಕಾಣುತ್ತದೆ.

2018 ರಲ್ಲಿ, ಪ್ರಸಿದ್ಧ ಬುಡಕಟ್ಟು ಜಾನಪದ ತಜ್ಞ ಡಾ. ಮಹೇಂದ್ರ ಕುಮಾರ್ ಮಿಶ್ರಾ ಅವರು ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಬೆಲ್ಸೊಂಡಾ ಗ್ರಾಮದ ಪ್ರಸಿದ್ಧ ಗಾಯಕಿ ಶ್ರೀಮತಿ ಕುಮಾರಿ ದೇವಿಯವರಿಂದ ಪಾರ್ಧಿ ರಾಮಕಥಾವನ್ನು ದಾಖಲಿಸಿದ್ದಾರೆ. ಜೊತೆಗೆ, ಇವರು ಅರಣ್ಯ ಪರಿಸರ ಸಂಸ್ಕೃತಿ ಮತ್ತು ತಮ್ಮ ಮೊದಲ ನಿರೂಪಣೆಗಳಲ್ಲಿ ಪ್ರತಿನಿಧಿಸುವ ಸ್ಥಳೀಯ ತಂತ್ರಜ್ಞಾನದ ಬಗ್ಗೆ ಹೇರಳವಾದ ಜ್ಞಾನವನ್ನು ಹೊಂದಿದ್ದಾರೆ. ಪಾರ್ಧಿ ಜನರು ಇನ್ನೂ ತಮ್ಮ ಭೂಮಿಯ ಹಕ್ಕುಗಳಿಗಾಗಿ ಕಾಯುತ್ತಿದ್ದಾರೆ ಮತ್ತು ಇನ್ನೂ ವೇಗವಾಗಿ ಕಣ್ಮರೆಯಾಗುತ್ತಿರುವ ಕಾಡುಗಳನ್ನೆ ಅವಲಂಬಿಸಿದ್ದಾರೆ.

ಕ್ರಿಮಿನಲ್ ಹಣೆಪಟ್ಟಿ[ಬದಲಾಯಿಸಿ]

ಪಾರ್ಧಿಗಳು ಚಾಣಾಕ್ಷತನದ ಬೇಟೆಗಾರರಾಗಿದ್ದರು. ಇವರು ಬಿಲ್ಲು ಮತ್ತು ಬಾಣಗಳು, ಕತ್ತಿಗಳು ಮತ್ತು ಬೇಟೆಯ ಬಲೆಗಳಂತಹ ಪ್ರಾಚೀನ ಆಯುಧಗಳ ತಯಾರಿಕೆಯಲ್ಲಿ ಮತ್ತು ಬಳಸುವುದರಲ್ಲಿ ಪರಿಣತರಾಗಿದ್ದರು. ಇದು ಇವರನ್ನು ಗೆರಿಲ್ಲಾ ಯುದ್ಧದಲ್ಲಿ ಹೆಚ್ಚು ದಕ್ಷರನ್ನಾಗಿ ಮಾಡಿತು. 1857 ರ ದಂಗೆಯಲ್ಲಿ ಭಾಗವಹಿಸಿದ ಭಾರತದ ಇತರ 150 ಬುಡಕಟ್ಟುಗಳ ಜೊತೆಗೆ ಇವರು ಬ್ರಿಟಿಷ್ ಸಾಮ್ರಾಜ್ಯಕ್ಕೆ ಉಪದ್ರವವಾಗಿದ್ದರು. ಈ ಬುಡಕಟ್ಟು ಸಮುದಾಯಗಳಿಂದ ಬ್ರಿಟಿಷರ ವಿರುದ್ಧ ಹಲವಾರು ದಂಗೆಗಳು ನಡೆದವು. ಈ ಬುಡಕಟ್ಟು ಸಮುದಾಯಗಳನ್ನು ಹಿಡಿತದಲ್ಲಿಡಲು, ಬ್ರಿಟಿಷರು ಅಪರಾದಿ ಬುಡಕಟ್ಟು ಕಾಯ್ದೆಯನ್ನು ತಂದರು. ಈ ಬುಡಕಟ್ಟುಗಳನ್ನು ಹುಟ್ಟಿನಿಂದಲೇ ಇವು ಅಪರಾಧಿಗಳು ಎಂದು ಹಣೆಪಟ್ಟಿಯನ್ನು ಕಟ್ಟಿದರು. ಬ್ರಿಟಿಷರು "ಅಪರಾಧಿ ಬುಡಕಟ್ಟು ಕಾಯ್ದೆ"ಯನ್ನು ಅಂಗೀಕರಿಸಿದ ನಂತರ ಬುಡಕಟ್ಟುಗಳ ಅಪರಾಧಿ ಹಣೆಪಟ್ಟಿ 1871 ಕ್ಕೆ ಹೋಗುತ್ತದೆ. ಸುಮಾರು ನೂರೈವತ್ತು ಬುಡಕಟ್ಟುಗಳನ್ನು ಅಪರಾಧಿಗಳೆಂದು ಗುರುತಿಸಲಾಯಿತು ಮತ್ತು ಅವರನ್ನು ಬಂಧಿಸಲು ಮತ್ತು ಅವರ ಚಲನವಲನಗಳ ಮೇಲೆ ನಿಗಾ ಇಡಲು ಪೊಲೀಸರಿಗೆ ವ್ಯಾಪಕ ಅಧಿಕಾರವನ್ನು ನೀಡಲಾಯಿತು.

ಆ ಸಮಯದಲ್ಲಿ ಇದ್ದ ಬ್ರಿಟಿಷ್ ಅಧಿಕಾರಿ ಟಿ.ವಿ ಸ್ಟೀಫನ್ಸ್ ಹೀಗೆ ಉಲ್ಲೇಖಿಸಿದ್ದಾರೆ:

"... ಅನಾದಿ ಕಾಲದಿಂದಲೂ ಜನರು ಜಾತಿ ವ್ಯವಸ್ಥೆಯು ವ್ಯಾಖ್ಯಾನಿಸಿದ ಉದ್ಯೋಗ-ಸ್ಥಾನಗಳನ್ನು ಅನುಸರಿಸುತ್ತಿದ್ದರು: ನೇಯ್ಗೆ, ಮರಗೆಲಸ ಅಂತಹವುಗಳು ವಂಶಪಾರಂಪರ್ಯ ಉದ್ಯೋಗಗಳಾಗಿವೆ. ಆದ್ದರಿಂದ ತಮ್ಮ ಪೂರ್ವಜರ ವೃತ್ತಿಯನ್ನು ಅನುಸರಿಸಿದ ವಂಶಪಾರಂಪರ್ಯ ಅಪರಾಧಿಗಳೂ ಸಹ ಇದ್ದಿರಬೇಕು."

1880ರ ಬಾಂಬೆ ಪ್ರೆಸಿಡೆನ್ಸಿ ಗೆಜೆಟ್‌ನ ಸಂಪುಟ XII ಈ ಗುಂಪಿನ ಬಗ್ಗೆ ಹೆಚ್ಚಿನ ಹೇಳಿಕೆಗಳನ್ನು ಹೊಂದಿದೆ:

"ಅವರು ಇನ್ನೂ ಬೇಟೆಯಾಡುವುದನ್ನು ಇಷ್ಟಪಡುತ್ತಾರೆ ಮತ್ತು ಕಳ್ಳತನದ ತಮ್ಮ ಸರದಿಯಿಂದ ಮುಕ್ತಿ ಪಡೆದಿಲ್ಲ.... ಫಾಸೆ ಪಾರ್ಧಿ [ಉಪ-ಪಂಗಡ] ಯಾವಾಗಲೂ ಚಿಂದಿಚಿಂದಿಯಾದ ಮತ್ತು ಹೊಲಸಾದ, ನುಸುಳುವ ನಡಿಗೆಯೊಂದಿಗೆ ನಡೆಯುತ್ತಾರೆ."

1952 ರಲ್ಲಿ, ಬುಡಕಟ್ಟು ಸಮುದಾಯವನ್ನು "ಅಪರಾಧಿ" ಎಂಬ ಪದವನ್ನು ಡಿನೋಟಿಫೈ ಮಾಡಲಾಗಿದೆ ಮತ್ತು ಇವರನ್ನು ಅಲೆಮಾರಿ ಬುಡಕಟ್ಟು ಎಂದು ಹೆಸರಿಸಲಾಯಿತು. ಆದಾಗ್ಯೂ ಇದು ಈ ಬುಡಕಟ್ಟಿನ ಕುರಿತ ಸಾರ್ವಜನಿಕ ಗ್ರಹಿಕೆಯನ್ನು ಬದಲಾಯಿಸಲಿಲ್ಲ. ಜನರ ದೃಷ್ಟಿಯಲ್ಲಿ ಅವರು ಕಳಂಕಿತರಾಗಿಯೆ ಮುಂದುವರಿದಿದ್ದಾರೆ ಮತ್ತು ಬಹಿಷ್ಕೃತರಾಗಿಯೇ ಬದುಕುತ್ತಿದ್ದಾರೆ. ಇದು ಇವರ ಆರ್ಥಿಕ ಸಂಕಷ್ಟಗಳನ್ನು ಇನ್ನಷ್ಟು ಉಲ್ಬಣಗೊಳಿದೆ.[೨] [೩]

ಗವ್-ಪಾರ್ಧಿ ಎಂದು ಕರೆಯಲ್ಪಡುವ ಮತ್ತೊಂದು ಪಾರ್ಧಿ ಬುಡಕಟ್ಟು ಪ್ರಧಾನವಾಗಿ ಮಹಾರಾಷ್ಟ್ರದ ಅಮರಾವತಿ ಜಿಲ್ಲೆ ನೆಲೆಸಿದ್ದಾರೆ. ಅವರು ಹೆಚ್ಚಾಗಿ ಕೃಷಿಕರಾಗಿದ್ದರಿಂದ 'ಅಪರಾಧಿ ಬುಡಕಟ್ಟು' ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಂಡಿದ್ದಾರೆ.

ತಾರತಮ್ಯ[ಬದಲಾಯಿಸಿ]

ಸಾರ್ವಜನಿಕ ಒತ್ತಡವು ಅಲೆಮಾರಿ ಸಮುದಾಯವನ್ನು ಹಳ್ಳಿಗಳಲ್ಲಿ ನೆಲೆಸದಂತೆ ತಡೆಯುತ್ತದೆ.

ಇತ್ತೀಚಿನ ದಿನಗಳಲ್ಲಿ ಬೇಟೆ ಮತ್ತು ಬೇಟೆಯಾಡುವಿಕೆಯ ಮೇಲೆ ಕಟ್ಟುನಿಟ್ಟಾದ ನಿಷೇಧವನ್ನು ಹೇರಿದ ಕಾರಣದಿಂದ ನೆಲೆನಿಂತ ಹೆಚ್ಚಿನ ಪಾರ್ಧಿಗಳು ಕೃಷಿಯನ್ನು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಅಲೆಮಾರಿಗಳು ಅಗ್ಗದ ವಸ್ತುಗಳು, ಕರಕುಶಲ ವಸ್ತುಗಳು ಅಥವಾ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಮನೆ ಮನೆಗೆ ಹೋಗುತ್ತಾರೆ. ಮುಂಬೈನ ಬಾಲಭಿಕ್ಷುಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾರ್ಧಿ ಸಮುದಾಯಕ್ಕೆ ಸೇರಿದವರಿದ್ದಾರೆ. ಶಿಕ್ಷಣದ ಕೊರತೆಯೊಂದಿಗೆ ಇವರಿಗೆ ಅಂಟಿದ ಕಳಂಕವು ಸೇರಿಕೊಂಡು ಮೂಲಭೂತವಾಗಿ ಸಮುದಾಯವನ್ನು ದುರ್ಬಲಗೊಳಿಸಿದೆ.

ಸಹ ನೋಡಿ[ಬದಲಾಯಿಸಿ]

  • ಭಾರತದಲ್ಲಿ ಹುಲಿ ಬೇಟೆ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]