ಮುಖ್ಯಮಂತ್ರಿ ಚಂದ್ರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು (L)
ಜನನ
ಚಂದ್ರಶೇಖರ್

ಆಗಸ್ಟ್ ೨೮, ೧೯೫೩
ನೆಲಮಂಗಲ ತಾಲ್ಲೂಕಿನ ಹೊಂನಸಂದ್ರ
ಉದ್ಯೋಗರಂಗಭೂಮಿ ನಟ, ಚಿತ್ರ ನಟ, ರಾಜಕಾರಣಿ

ಮುಖ್ಯಮಂತ್ರಿ ಚಂದ್ರು ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಇವರ ಮೂಲ ಹೆಸರು ಚಂದ್ರಶೇಖರ್. ರಾಜಕೀಯದಲ್ಲೂ ಗಣನೀಯ ಹೆಸರಾಗಿರುವ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದಾರೆ.

ಜೀವನ[ಬದಲಾಯಿಸಿ]

ಚಂದ್ರು ಅವರು ಹುಟ್ಟಿದ್ದು ಆಗಸ್ಟ್ ೨೮,೧೯೫೩ ರಂದು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ.ತಂದೆ ಎನ್.ನರಸಿಂಹಯ್ಯ,ತಾಯಿ ತಿಮ್ಮಮ್ಮ.. ಚಂದ್ರು ಮೂಲ ಹೆಸರು ಚಂದ್ರಶೇಖರ್. ರಂಗಭೂಮಿ, ಕಿರುತೆರೆ ಮಾತ್ರವಲ್ಲದೆ ರಾಜಕೀಯದಲ್ಲೂ ಮಿಂಚಿದ ಚಂದ್ರು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ ಆಗಸ್ಟ್ ೨೮, ೧೯೫೩ರಂದು ಜನಿಸಿದರು. ಮನೆಯಲ್ಲಿ ಬಡತನ ಜೊತೆಗೆ ಮಗ ತುಂಬಾ ತುಂಟ. ಹೀಗಾಗಿ ತಂದೆ ತಾಯಂದಿರು ಮಗನನ್ನು ಸಿದ್ಧಗಂಗಾ ಮಠಕ್ಕೆ ಸೇರಿಸಿದರು. ಮುಂದೆ ಅವರು ಬಿಎಸ್ಸಿ ಓದಿದರು.

ರಂಗಭೂಮಿಯಲ್ಲಿ[ಬದಲಾಯಿಸಿ]

ಒಮ್ಮೆ ‘ಹುತ್ತವ ಬಡಿದರೆ’ ನಾಟಕದಲ್ಲಿ, ಅಭಿನಯಿಸಬೇಕಿದ್ದ ಒಬ್ಬ ಪಾತ್ರಧಾರಿ ಬರಲಿಲ್ಲದ ಕಾರಣ ನಿರ್ದೇಶಕ ಪ್ರಸನ್ನರು ಚಂದ್ರಶೇಖರ್ ಅವರಿಂದ ಒಂದು ಪಾತ್ರ ಮಾಡಿಸಿದರು. ಹೀಗೆ ರಂಗಭೂಮಿಗೆ ಬಂದರು ಚಂದ್ರು. ಹೀಗೆಯೇ ರಂಗಭೂಮಿಯಲ್ಲಿ ಅಲ್ಲಲ್ಲಿ ಅಭಿನಯಿಸುತ್ತಿದ್ದ ಅವರಿಗೆ ಮುಖ್ಯಮಂತ್ರಿ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಲೋಹಿತಾಶ್ವ ಅನಾರೋಗ್ಯಕ್ಕೆ ಒಳಗಾದದ್ದರಿಂದ ಮುಖ್ಯಮಂತ್ರಿ ಪಾತ್ರ ಮಾಡಬೇಕಾಗಿಬಂದು ಅದರಲ್ಲಿ ಅವರು ತುಂಬಾ ಜನಪ್ರಿಯತೆ ಪಡೆದರು. ಹೀಗೆ ರಂಗಭೂಮಿಗೆ ಒಗ್ಗಿಕೊಂಡ ಚಂದ್ರಶೇಖರ್ ನಾಟಕದ ಡಿಪ್ಲೋಮಾ ಪಡೆದರು. ಕೆಲಕಾಲ ಅವರು ಬೆಂಗಳೂರು ವಿಶ್ವವಿದ್ಯಾಲಯಲದಲ್ಲಿ ಉದ್ಯೋಗಿಯಾಗಿದ್ದರು. 'ಮುಖ್ಯಮಂತ್ರಿ' ನಾಟಕದ ಪಾತ್ರಕ್ಕೆ ಅವರು ಜೀವ ತುಂಬಿ ಪ್ರಖ್ಯಾತಿ ಪಡೆದ ಹಿನ್ನಲೆಯಲ್ಲಿ ಚಂದ್ರಶೇಖರ್ ‘ಮುಖ್ಯಮಂತ್ರಿ ಚಂದ್ರು’ ಎಂದೆನಿಸಿದರು.

ರಂಗಭೂಮಿಯ ಸ್ನೇಹಿತರಿಂದ ಉತ್ತೇಜಿತರಾಗಿ 1975ರಲ್ಲಿ ‘ತಾಯಿ’ ನಾಟಕದಲ್ಲಿ ಸಮುದಾಯದ ಪ್ರಸನ್ನರು ನೀಡಿದ ಪಾತ್ರದಿಂದ ಚಂದ್ರು ಅಪಾರ ಯಶಸ್ಸು ಪಡೆದರು. ಮುಖ್ಯಮಂತ್ರಿ ನಾಟಕದಲ್ಲಿ ಅಭಿನಯದಿಂದ ಬಂದ ಪ್ರಸಿದ್ಧಿ ಜೊತೆಗೆ ‘ಮುಖ್ಯಮಂತ್ರಿ ಚಂದ್ರು’ ಎಂಬ ಖಾಯಂ ಹೆಸರು ಬಂದದ್ದು ಈಗ ಇತಿಹಾಸ. ಅವರು ಬಿ.ವಿ. ರಾಜಾರಾಂ ಜೊತೆ ಸೇರಿ ನಿರ್ದೇಶಿಸಿದ ನಾಟಕ ಅಚಲಾಯತನ. ನಂತರ ಹಲವಾರು ನಾಟಕಗಳ ನಿರ್ದೇಶನ ಮಾಡಿದ ಚಂದ್ರು ಅವರ ಮೋಡಗಳು, ಮೂಕಿ ಟಾಕಿ, ಎಲ್ಲಾರು ಮಾಡುವುದು. ಗರ್ಭಗುಡಿ, ಕತ್ತಲೆ ದಾರಿದೂರ, ಕಾಲಿಗುಲ, ಭರತಪ್ಪನ ಸೊಂಟಕ್ಕೆ ಗಂಟೆ, ಕೇಳು ಜನಮೇಜಯ, ಕಂಬಳಿಸೇವೆ, ಹೋಂ ರೂಲು ಮುಂತಾದುವು ಜನಪ್ರಿಯವೆನಿಸಿದವು. ಮುಖ್ಯಮಂತ್ರಿ, ತಾಯಿ, ಕತ್ತಲೆ ದಾರಿದೂರ, ಘಾಸಿರಾಂ ಕೊತ್ವಾಲ್‌, ಕಾಲಿಗುಲ, ನಮ್ಮೊಳಗೊಬ್ಬ ನಾಜೂಕಯ್ಯ, ಆಸ್ಫೋಟ ಮುಂತಾದ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿದ್ದ ಚಂದ್ರು ಅವರನ್ನು ಮುಂದೆ ಚಿತ್ರರಂಗ ತನ್ನವರನ್ನಾಗಿಸಿಕೊಂಡಿತು.

ಚಿತ್ರರಂಗದಲ್ಲಿ[ಬದಲಾಯಿಸಿ]

ಚಂದ್ರಶೇಖರ್ ಅವರು ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಾಗ ಆ ವೇಳೆಯಲ್ಲಿ ಮತ್ತೊಬ್ಬ ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ) ಇದ್ದರು. ಹಾಗಾಗಿ ಚಲನಚಿತ್ರ ರಂಗದಲ್ಲೂ ಇವರ ಹೆಸರು 'ಮುಖ್ಯಮಂತ್ರಿ ಚಂದ್ರು' ಎಂದು ಖಾಯಂ ಆಯಿತು.

ಮುಖ್ಯಮಂತ್ರಿ ಚಂದ್ರು ಅವರದ್ದು ಮೂಕಾಭಿನಯದಲ್ಲಿ ಅನನ್ಯ ಪ್ರತಿಭೆ. ಕೋಲ್ಕತ್ತಾದ ಮೈಮ್‌ ಇನ್‌ಸ್ಟಿಟ್ಯೂಟ್‌ನ ಜೋಗೇಶ್‌ ದತ್ತಾ, ಅಮೆರಿಕದ ಅಡಂ ಅಬ್ರಹಾಂ, ವಿ. ರಾಮಮೂರ್ತಿ ಮುಂತಾದ ಮಹನೀಯರುಗಳ ಮಾರ್ಗದರ್ಶನ. ಅವರಿಗೆ ದೊರಕಿತು. ಲಂಡನ್‌, ಪ್ಯಾರಿಸ್‌, ರೋಂ, ಸ್ವಿಜರ್‌ಲ್ಯಾಂಡ್‌, ಆಮ್‌ಸ್ಟರ್‌ಡಾಂ, ಬೆಲ್ಜಿಯಂ, ಸಿಂಗಪೂರ್, ಹಾಂಗಾಕಾಂಗ್‌ ಮುಂತಾದ ವಿಶ್ವದೆಲ್ಲೆಡೆಯ ಪ್ರಮುಖ ನಗರಗಳಲ್ಲಿ ಅವರ ಮೂಕಾಭಿನಯ ಪ್ರದರ್ಶನ ಜನಪ್ರಿಯಗೊಂಡಿದೆ.

ಮುಖ್ಯಮಂತ್ರಿ ಚಂದ್ರು ಅವರು ಇತ್ತೀಚಿನವರೆಗೆ ನಟಿಸಿರುವ ಚಿತ್ರಗಳ ಸಂಖ್ಯೆ ನಾನೂರಕ್ಕೂ ಹೆಚ್ಚಿನದು. 'ಹೊಸ ಮೇಡಂ', 'ಫಣಿಯಮ್ಮ' ಚಿತ್ರಗಳಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿ ಚಂದ್ರು ಅವರ ಅಭಿನಯ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿದ ಚಿತ್ರ 'ಮುಯ್ಯಿ'. ಹೊಸ ಬಗೆಯ ಸಂಭಾಷಣೆ ಶೈಲಿಯಿಂದ ಪ್ರೇಕ್ಷಕರ ಗಮನಸೆಳೆದ ಚಂದ್ರು ಚಿತ್ರರಂಗದ ಹಾಸ್ಯ ಕಲಾವಿದರಾಗಿ, ಖಳ ಪಾತ್ರಧಾರಿಯಾಗಿ, ಪೋಷಕ ಪಾತ್ರಧಾರಿಯಾಗಿ ಗಳಿಸಿದ ಜನಪ್ರಿಯತೆ ಅಪಾರವಾದದ್ದು. ಚಕ್ರವ್ಯೂಹ, ಮಾಲಾಶ್ರೀ ಮಾಮಾಶ್ರೀ, ಗುಂಡನ ಮದುವೆ, ಎದುರುಮನೆ ಗಂಡ ಪಕ್ಕದಮನೆ ಹೆಂಡತಿ, ಗಣೇಶನ ಮದುವೆ, ಗೌರಿ ಗಣೇಶ, ಸೂರ್ಯವಂಶ, ಗೋಲ್ ಮಾಲ್ ರಾಧಾಕೃಷ್ಣ ಮುಂತಾದ ಅನೇಕ ಚಿತ್ರಗಳಲ್ಲಿ ಚಂದ್ರು ಅವರ ಅಭಿನಯ ಜನಪ್ರಿಯ.

ಮುಖ್ಯಮಂತ್ರಿ ಚಂದ್ರು ಅವರು ಕಿರುತೆರೆಯಲ್ಲಿಯೂ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದಾರೆ.

ರಾಜಕಾರಣದಲ್ಲಿ[ಬದಲಾಯಿಸಿ]

ರಾಮಕೃಷ್ಣ ಹೆಗ್ಗಡೆ ಅವರ ಒತ್ತಾಯದ ಮೇರೆಗೆ ಗೌರಿಬಿದನೂರಿನಿಂದ ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ಚಂದ್ರು ಮುಂದಿನ ದಿನಗಳಲ್ಲಿ ಭಾಜಪದ ಸಕ್ರಿಯ ಕಾರ್ಯಕರ್ತರಾಗಿ ಮುಂದುವರೆದವರು. ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಶರಾಗಿ ಸಹಾ ಸೇವೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಉಳಿದ ಅಕಾಡೆಮಿಗಳಿಗೆಲ್ಲ ಅಧ್ಯಕ್ಷರು ಬದಲಾದರೂ ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಂದುವರೆದಿದ್ದಾರೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ನಾಟಕ ಆಕಾಡೆಮಿ ಪ್ರಶಸ್ತಿ, ರಂಗಭೂಮಿ ಮತ್ತು ಚಲನಚಿತ್ರ ಪ್ರಶಸ್ತಿಗಳೇ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಮುಖ್ಯಮಂತ್ರಿ ಅವರಿಗೆ ಸಂದಿವೆ. ಗುಲ್ಬರ್ಗಾ ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವವನ್ನು ಪ್ರಧಾನಿಸಿದೆ. ಮುಖ್ಯಮಂತ್ರಿ ಚಂದ್ರು ಅವರಿಂದ ಕಲಾರಂಗಕ್ಕೆ, ಕನ್ನಡ ಭಾಷೆಗೆ ಮತ್ತು ಸಮಾಜಕ್ಕೆ ಉತ್ತಮ ಸೇವೆ ಲಭ್ಯವಾಗುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಸಲ್ಲಿಸೋಣ.

ಇವರು ನಿರ್ದೇಶಿಸಿದ ಕೆಲವು ನಾಟಕಗಳು[ಬದಲಾಯಿಸಿ]

  • ಮೋಡಗಳು
  • ಮೂಕಿ-ಟಾಕಿ
  • ಎಲ್ಲಾರೂ ಮಾಡುವುದು
  • ಗರ್ಭಗುಡಿ
  • ಕತ್ತಲೆ ದಾರಿ ದೂರ
  • ಭರತಪ್ಪನ ಸೊಂಟಕ್ಕೆ ಗಂಟೆ
  • ಕೇಳು ಜನಮೇಜಯ
  • ಕಂಬಳಿ ಸೇವೆ (ಹಾಸ್ಯ ನಾಟಕ)
  • ಹೋಂ ರೂಲು

ಸಿನಿಮಾ ರಂಗದಲ್ಲಿ[ಬದಲಾಯಿಸಿ]

ಕನ್ನಡ ಸಿನಿಮಾಗಳಲ್ಲಿ,ಹಾಸ್ಯ,ಖಳ,ಪೋಷಕ ನಟ..- ಹೀಗೆ ಹಲಬಗೆಯ ಪಾತ್ರ್ಗಗಳನ್ನು ಅಭಿನಯಿಸಿ,ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ.ಅಸಂಖ್ಯಾತ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟವಾದ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇವರ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

ಪ್ರಶಸ್ತಿ / ಪುರಸ್ಕಾರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]