ಮಂಟೇಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಟೇಸ್ವಾಮಿ ಒಬ್ಬ ಆದಿಜಾಂಬವ ಕುಲ ಪುರುಷ. ಕೆಲ ಶತಮಾನಗಳ ಹಿಂದೆ ಧರ್ಮಕ್ರಾಂತಿಯನ್ನೆಸಗಿ ತನ್ನದೆ ಆದ ಪರಂಪರೆಯನ್ನು ನಿರ್ಮಿಸಿದವ. ಕನ್ನಡದ ಧಾರ್ಮಿಕ ಜನಪದ ಕಾವ್ಯವೊಂದರ ಕಥಾನಾಯಕ. ಕರ್ನಾಟಕದ ಧಾರ್ಮಿಕ ವೃತ್ತಿ ಗಾಯಕರಲ್ಲಿ ಪ್ರಮುಖರೆನಿಸುವ ನೀಲಗಾರರ ಮತ್ತು ಆ ಸಂಪ್ರದಾಯವನ್ನು ಒಪ್ಪಿಕೊಂಡು ಇತರರ ಆರಾಧ್ಯದೈವ, ಆದಿಗುರು.

"ಆದಿಗುರು ಅಲ್ಲಮಪ್ರಭು ಧರೆಗೆ ದೊಡ್ಡವರು ಪರಂಜ್ಯೋತಿ ಮಂಟೇದಲಿಂಗಯ್ಯ ಕಾಲಜ್ಞಾನ ಸಾರಿದ ಕಂಡಾಯದೊಡೆಯ".

ಮಂಟೇಸ್ವಾಮಿಯ ಕಾವ್ಯ[ಬದಲಾಯಿಸಿ]

ಮಂಟೇಸ್ವಾಮಿ ಕುರಿತ ಖಚಿತ ಐತಿಹಾಸಿಕ ದಾಖಲೆಗಳು ಲಭ್ಯವಾಗದಿದ್ದರೂ ಮಂಟೇಸ್ವಾಮಿಯ ಕಾವ್ಯ ಎಂಬ ಜನಪದ ಕಾವ್ಯವೊಂದು ಉಳಿದು ಬಂದಿದೆ. ಈ ಕಾವ್ಯದಲ್ಲಿ ಮಂಟೇಸ್ವಾಮಿಯನ್ನು ಧರೆಗೆ ದೊಡ್ಡವರು; (ಅಲ್ಲಮಪ್ರಭು)ಪ್ರಭುದೇವರು ಎಂದು ಕರೆಯಲಾಗಿದೆ. ಆದರೆ 12ನೆಯ ಶತಮಾನದ ಅಲ್ಲಮ ಪ್ರಭುವಿಗೂ ಮಂಟೇಸ್ವಾಮಿಗೂ ಯಾವುದೇ ರೀತಿಯ ಸಂಬಂಧ ಇದ್ದಂತೆ ತೋರುವುದಿಲ್ಲ. ಮಂಟೇಸ್ವಾಮಿ ಕಾವ್ಯನಲ್ಲಿ ಧರೆಗೆ ದೊಡ್ಡವರು ಎಂಬ ಮಾತನ್ನು ಪರಾತ್ಪರ ವಸ್ತು ಪರಂಜ್ಯೋತಿಸ್ವರೂಪ, ಸಾಕ್ಷಾತ್ ಪರಶಿವಮೂರ್ತಿಗೆ ಹೋಲಿಸಲಾಗಿದೆ. ಪರಶಿವ ಕಲ್ಯಾಣದ ಬಸವೇಶ್ವರರ ದೃಢವನ್ನು ಪರೀಕ್ಷಿಸಲೋಸುಗ ಭೂತಲಕ್ಕೆ ಬಂದನೆಂದೂ ಇಲ್ಲಿ ಚಿತ್ರಿಸಲಾಗಿದೆ.

ಪ್ರಭುದೇವರನ್ನು ಕುರಿತು ಕಲ್ಪನೆ ಶಿಷ್ಟ ಕಾವ್ಯಗಳಲ್ಲಿ ಒಬ್ಬೊಬ್ಬ ಕವಿಗೂ ಭಿನ್ನವಾಗಿ ತೋರುತ್ತದೆ. ಹರಿಹರ ನಿರ್ಮಾಯ ಎಂಬಾತ ಸುರಸತಿಯರಲ್ಲಿ ಒಬ್ಬಳನ್ನು ಕಾಮಿಸಿ ನೋಡಿದ್ದರಿಂದ ಭೂಲೋಕದಲ್ಲಿ ಅವರಿಬ್ಬರೂ ಹುಟ್ಟಬೇಕಾಯಿತೆಂದು ಚಿತ್ರಿಸಿದರು, ಎಳಂದೂರು ಹರೀಶ್ವರ ಗಿರಿಜೆಯ ಆಗ್ರಹಕ್ಕೆ ಪಾತ್ರನಾಗಿ ಪ್ರಭುದೇವರು ಭೂಲೇಕಕ್ಕೆ ಬರಬೇಕಾಯಿತೆಂದು ಹೇಳುತ್ತಾನೆ. ಚಾಮರಸ ತನ್ನ ನಿಜದ ಸ್ವರೂಪನಾದ ಅಲ್ಲಮ ಸುe್ಞÁನಿಯೆನಿಸಿ ಮಹಾಮಹಿಮನೆನಿಸಿ ಭೂಲೋಕದಲ್ಲಿ ನಿಜವನ್ನು ಭೋಧಿಸುವನ್ನು ಎಂದು ಪರಶಿವ ಪಾರ್ವತಿಗೆ ಹೇಳಿದಂತೆ ಚಿತ್ರಿಸಿದ್ದಾನೆ. ಮಂಟೇಸ್ವಾಮಿ ಕಾವ್ಯದ ಧರೆಗೆ ದೊಡ್ಡವರ ಕಲ್ಪನೆಗೂ ಚಾಮರಸನ ಪ್ರಭುಲಿಂಗಲೀಲೆಯ ಕಲ್ಪನೆಗೂ ಸ್ವಲ್ಪಮಟ್ಟಿನ ಸಾಮ್ಯ ಗುರುತಿಸಬಹುದಾಗಿದೆ. ಆದರೆ ಈ ಕಾವ್ಯವೂ ಪ್ರಭುವಿನ ಮೂಲವನ್ನಾಗಲೀ ಧರೆಗೆ ದೊಡ್ಡವರ ಮೂಲವನ್ನಾಗಲೀ ಐತಿಹಾಸಿಕವಾಗಿ ಸ್ಥಾಪಿಸಲು ವಿಫುಲವಾಗಿವೆ.

ಕಲ್ಯಾಣದ ಶರಣರ ಪ್ರಸ್ತಾಪ ಮಂಟೇಸ್ವಾಮಿ ಕಾವ್ಯದಲ್ಲಿ ಬರುವುದರಿಂದ ಬಸವೇಶ್ವರರ ಕಾಲಕ್ಕೇ ಮಂಟೇಸ್ವಾಮಿ ಕಾಲವನ್ನೂ ಒಯ್ಯಬಹುದಾಗಿದೆ. ಕಲ್ಯಾಣಸಲ್ಲಿ ಬಸವೇಶ್ವರರ ದೃಢವನ್ನು ಪರೀಕ್ಷಿಸಿ ಮಂಟೇಸ್ವಾಮಿ ಧರೆಗೆ ದೊಡ್ಡವರು ಎಂಬ ಅಂಕಿತದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಕಲ್ಯಾಣದ ಹರಳಯ್ಯನ ಬೂದಿಗುಡ್ಡೆಯ ಮೇಲೆ ವಿಲಕ್ಷಣ ರೂಪಿನಲ್ಲಿ ಕಾಣಿಸಿಕೊಂಡಿರುವ ಪರಿಯನ್ನು ಜನಪದ ಕಾವ್ಯ ವಿಸ್ತಾರವಾಗಿ ಬಣ್ಣಿಸಿದೆ. ಹೀಗೆ ವಿಚಿತ್ರರೂಪಿನಲ್ಲಿ ಕಾಣಿಸಿಕೊಂಡು ಇವರನ್ನು ಬಸವೇಶ್ವರರು ಭಕ್ತಿಗೌರವಗಳಿಂದ ಕರದೊಯ್ದು ಇವರ ಕರುಣೆಗೆ ಪಾತ್ರರಾಗುತ್ತಾರೆ. ಅಲ್ಲಿ ನೆರೆದಿದ್ದ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರ ಆಗ್ರಹಕ್ಕೆ ಗುರಿಯಾದರು ಎಂಬ ಸಂದರ್ಭ ಈ ಕಾವ್ಯದಲ್ಲಿ ಬರುತ್ತದೆ. ಧರೆಗೆ ದೊಡ್ಡವರು ಕಲ್ಯಾಣವನ್ನು ಬಿಟ್ಟು ದಕ್ಷಿಣಾಭಿಮುಖವಾಗಿ ಹೊರಟರು ಎಂದು ಮುಂದೆ ಚಿತ್ರಿಸಲಾಗಿದೆ. ಈ ಕಾವ್ಯದ ಪ್ರಕಾರ ಧರೆಗೆ ದೊಡ್ಡವರು ಮುಂದೆ ಐಕ್ಯವಾದುದು ಮಳವಳ್ಳಿ ತಾಲ್ಲೂಕಿನ ಬೊಪ ಗೌಡನಪುರದಲ್ಲಿ.

ಮಂಟೇಸ್ವಾಮಿ ಕಾವ್ಯದ ಕೆಲವು ಪ್ರಸಂಗಗಳು ಪ್ರಭುದೇವರನ್ನು ಕುರಿತು ಕೆಲವು ಕಾವ್ಯಗಳಲ್ಲಿ ಸಾಮ್ಯ ಪಡೆದಿದೆ. ತುಸು ವ್ಯತ್ಯಾಸದೊಡನೆ ಪ್ರಭುಲಿಂಗ ಲೀಲೆ, ಪ್ರಭುದೇವರ ಪುರಾಣ ಮತ್ತು ನಿರಂಜನಂಶ ರತ್ನಾಕರ ಮೊದಲಾದ ಗ್ರಂಥಗಳಲ್ಲಿ ಇದನ್ನು ಕಾಣಬಹುದು. ಆದರೆ ಪ್ರಭುಐಕ್ಯವಾದ ನೆಲೆ ಶ್ರೀಶೈಲದ ಕದಳಿವನವೆಂದು ಪ್ರೌಢಕಾವ್ಯಗಳು ಸಾರುತ್ತವೆ. ಮಂಟೇಸ್ವಾಮಿಯ ಕಾವ್ಯದಲ್ಲಿ ಈ ಅಂಶ ಸಂಪೂರ್ಣವಾಗಿ ಬದಲಾಗಿದೆ.

ಮೇಲಿನ ಅಂಶಗಳನ್ನು ಗಮನಿಸಿದರೆ ಮಂಟೇಸ್ವಾಮಿಯವರಿಗೂ ಅಲ್ಲಮ ಪ್ರಭುವಿಗೂ ಸಂಬಂಧವನ್ನು ಕಲ್ಪಿಸಲು ಆಧಾರಗಳು ಸಾಲವು ಎಂಬುದು ಸ್ವಷ್ಟವಾಗುತ್ತದೆ. ಮಂಟೇಸ್ವಾಮಿ ವೀರಶೈವ ಸಂಪ್ರದಾಯದ ಶರಣರಾಗಿ ಎಲ್ಲಿಯೂ ತೋರುವುದಿಲ್ಲ. ತಮ್ಮದೇ ಆದ ಜನಪದ ಧರ್ಮವೊಂದನ್ನು ನೆಮ್ಮಿ ತಮ್ಮ ಮಹಿಮೆಯಿಂದ ಪವಾಡಶಕ್ತಿಯಿಂದ ಅನೇಕ ಶಿಷ್ಯರನ್ನು ಪಡೆದುಕೊಂಡು ಮಂಟೇಸ್ವಾಮಿ ಪರಂಪರೆಯನ್ನು ಸ್ಥಾಪಿಸಿದಂತೆ ತೋರುತ್ತದೆ. ಏಕೆಂದರೆ ಮಂಟೇಸ್ವಾಮಿ ಸಂಪ್ರದಾಯದ ಮಠಗಳಿಗೆ ನಡೆದುಕೊಳ್ಳುವವರು ವೀರಶೈವೇತರ ಜನಾಂಗದವರು.

ಮಂಟೇಸ್ವಾಮಿ ಎಂಬ ಹೆಸರಿನ ಬಗೆಗೆ ವಿವರಣೆ ಮಂಟೇಸ್ವಾಮಿ ಕಾವ್ಯದಲ್ಲಿಯೇ ದೊರೆಯುತ್ತದೆ. ತಮ್ಮ ಶಿಷ್ಯರೊಡಗೂಡಿ ದಕ್ಷಿಣಾಭಿಮುಖವಾಗಿ ಹೊರಟ ಮಂಟೇಸ್ವಾಮಿ ಮಳವಳ್ಳಿ ಬಳಿಯ ಆದಿಹೊನ್ನಾಯಕನ ಹಳ್ಳಿಗೆ ಬರುತ್ತಾರೆ. ಅಲ್ಲಿ ತಮ್ಮ ಶಿಷ್ಯರನ್ನೆಲ್ಲ ಒಂದೆಡೆ ಬಿಟ್ಟು ಬಳೆ ಮುದ್ದಮ್ಮ ಎಂಬಾಕೆಯ ಮನೆಯ ಮುಂದೆ ಕೋರಣ್ಯದ ಭಿಕ್ಷಕ್ಕಾಗಿ ಬರುತ್ತಾರೆ. ಮುದ್ದಮ್ಮ ಹಟ್ಟಿಯಲ್ಲಿ ಆಗ ಹಾಲು ಕರೆಯುತ್ತಿರುತ್ತಾಳೆ. ಕಾಲಲ್ಲಿ ಜಂಗು, ಕೈಯಲ್ಲಿ ಕಡಾಯ ಹಿಡಿದು ಝಗ್ ಝಗ್ ಎಂದು ಶಬ್ದ ಮಾಡಿಕೊಂಡು ಬಂದ ಧರೆಗೆ ದೊಡ್ಡವರನ್ನು ನೋಡಿ ಹಸು ಬೆದರಿ ಹಾಲಿನ ತಂಬಿಗೆಯನ್ನು ಒದೆಯುತ್ತದೆ. ಮುದ್ದಮ್ಮ ಸಿಟ್ಟಾಗಿ ಹಾಳಾದ ಮಂಟೇದಯ್ಯ ಮುಂದೆ ಹೋಗು ಎಂದು ನುಡಿಯುತ್ತಾಳೆ. ಮಂಟುಕೊ ಶಬ್ದ ಬಿದ್ದುಹೋಗು ಉರುಳು ಎಂಬ ಅರ್ಥದಲ್ಲಿ ಪ್ರಯೋಗದಲ್ಲಿದೆ. ಧರೆಗೆ ದೊಡ್ಡವರು ಅಲ್ಲಿಂದಾಚೆಗೆ ಮಂಟೇದಯ್ಯ ಎಂಬ ಹೆಸರನ್ನೇ ಸ್ವೀಕರಿಸಿದರು.

ಮಂಟೇಸ್ವಾಮಿಯ ಬಗೆಗೆ ಅನೇಕ ವಿವರಗಳು ನೀಲಗಾರರ ಧಾರ್ಮಿಕ ಕಾವ್ಯವಾದ ಮಂಟೇಸ್ವಾಮಿ ಕಾವ್ಯದಲ್ಲಿ ದೊರೆಯುತ್ತವೆಯಾದರೂ ಮಂಟೇಸ್ವಾಮಿಯ ಮೂಲದ ಬಗ್ಗೆ ಯಾವ ಸುಳಿವೂಗಳೂ ದೊರೆಯುವುದಿಲ್ಲ. ಈ ಕಾವ್ಯದಲ್ಲಿ ಈತ ನೇರವಾಗಿ ಕೈಲಾಸದಿಂದ ಬಂದವ ಎಂಬಂತೆ ಒಂದು ಕಾಲ್ಪನಿಕ ಹಿನ್ನೆಲೆಯನ್ನು ಆರೋಪಿಸಲಾಗಿದೆ. ಒಂದು ವಾದ ಪ್ರಕಾರ ಮಾದೇಶ್ವರ, ಕೊಂಗಳಿ ಮಲ್ಲೇಶ್ವರ ಹಾಗೂ ಮಂಟೇಸ್ವಾಮಿ ಏಕಕಾಲದಲ್ಲಿ ಭೂಲೋಕಕ್ಕೆ ಬಂದವರು ಇಂದು ವರ್ಣಿಸಲಾಗಿದೆ. ಜನಪದ ಕಾವ್ಯಗಳ ಪ್ರಕಾರ ಮಂಟೇಸ್ವಾಮಿ ಧರೆಗೆ ದೊಡ್ಡವರು. ಪರಂಜ್ಯೋತಿ ಎನಿಸಿ ಮೊದಲು ಕಾಣಿಸಿಕೊಳ್ಳುವುದು ಕಲ್ಯಾಣಪಟ್ಟಣದ ಹರಳಯ್ಯನೆ ಬೂದಿಗುಡ್ಡೆಯವೇಲೆ, ಬಸವೇಶ್ವರ ನೀಲಮ್ಮ ಅವರನ್ನು ಹರಸಿ ಕಲ್ಯಾಣದಲ್ಲಿ ರಾಚಪ್ಪಾಜಿ, ಅವರ ತಂಗಿ ಚೆನ್ನಾಜಮ್ಮ ಮತ್ತು ಫಲಾಹಾರದಯ್ಯ ಎಂಬ ಶಿಷ್ಯರನ್ನು ಬಸವೇಶ್ವರರಿಂದ ಸ್ವೀಕರಿಸಿ ತಮ್ಮ ತಪಸ್ಸಿಗೆ ಯೋಗ್ಯವಾದ ನೆಲೆಯನ್ನು ಅರಸಿ ಹೊರಡುತ್ತಾನೆ. ಕಲ್ಯಾಣದ ಬಾಗಿಲಲ್ಲಿ ವೀರಭದ್ರನ ಹಲಗೆಯನ್ನು ಗೇಯುತ್ತಿದ್ದ ಬಾಚಿ ಬಸವಯ್ಯನೂ ಈತನ ಶಿಷ್ಯನಾಗ ಬೇಕೆಂದು ಹರಸಿ ಮುಂದೆ ಹೊರಡುತ್ತಾನೆ. ಮುಂದೆ ಈ ಬಾಚಿಬಸವಯ್ಯನೇ ಬಾಲಕೆಂಪಣ್ಣ ಎಂಬ ಅಭಿದಾನದಲ್ಲಿ ಹುಟ್ಟಿ ಮಂಟೇಸ್ವಾಮಿಯ ಶಿಷ್ಯನಾಗೆ ಸಿದ್ಧಪ್ಪಾಜಿ ಎಂಬ ಹೆಸರನ್ನು ಪಡೆಯುತ್ತಾನೆ.

ಮಂಟೇಸ್ವಾಮಿ ದಕ್ಷಿಣಕ್ಕೆ ಹೊರಟುದು ತಮಗೆ ಯೋಗ್ಯವಾದ ಒಂದು ದಿವ್ಯನೆಲೆಯನ್ನು ಅರಸಿ, ಕಲ್ಯಾಣದಿಂದ ಹೊರಬಿದ್ದ ಈತ ವೀರಶೈವ ಧರ್ಮವನ್ನು ಸ್ವೀಕರಿಸಿದ್ದರೆ ಎಂಬುದರ ಬಗ್ಗೆ ಸಂದೇಹವಿದೆ. ಮುಂದೆ ಇವರು ಸ್ಥಾಪಿಸಿದ ಮಠಗಳು ವೀರಶೈವಧರ್ಮಕ್ಕೆ ಯಾವ ರೀತಿಯಲ್ಲೂ ಸಂಬಂಧಪಡುವುದಿಲ್ಲ. ಇವರ ಶಿಷ್ಯಪರಂಪರೆಯೂ ತನ್ನದೇ ಆದ ಜನಪದ ಧರ್ಮವೊಂದನ್ನು ಒಪ್ಪಿಕೊಂಡಂತೆ ಕಾಣುತ್ತದೆ. ಇದನ್ನು ಗಮನಿಸಿದರೆ ಮಂಟೇಸ್ವಾಮಿ ಸ್ವತಂತ್ರವಾದ ಜನಪದ ಧರ್ಮವೊಂದನ್ನು ಪ್ರತಿಪಾದಿಸಿದ ಒಬ್ಬ ಧಾರ್ಮಿಕ ಪುರುಷ ಎಂದು ತೋರುತ್ತದೆ.

ಮಂಟೇಸ್ವಾಮಿ ಕಲ್ಯಾಣ ಬಿಟ್ಟಾಗ ಮೂರು ಮಂದಿ ಶಿಷ್ಯರು ಮಾತ್ರ ಇದ್ದರು. ಈ ಪುಟ್ಟ ಪರಿವಾರದೊಡನೆ ಹೊರಟ ಈತ ಮೊದಲು ಕೊಡೇಕಲ್ಲಿನ ಸಮೀಪಕ್ಕೆ ಬರುತ್ತಾರೆ. ಇವರ ಹಿರಿಯ ಶಿಷ್ಯ ರಾಚಪ್ಪಾಜಿ ಅಲ್ಲಿಂದ ವಿಜಯನಗರಕ್ಕೆ ಹೋಗಿ ಅಲ್ಲಿಯ ಗಾರುಡಿಗರನ್ನು ಪವಾಡದ ಮೂಲಕ ಸೋಲಿಸುತ್ತಾನೆ. ಅಲ್ಲಿಂದ ಮುಂದೆ ಅವರೆಲ್ಲ ಮಂಟೇಸ್ವಾಮಿಯ ಶಿಷ್ಯರಾಗಿ ಉಳಿಯುತ್ತಾರೆ. ದಾರಿಯುದ್ಧಕ್ಕೂ ಶಿಷ್ಯರನ್ನು ಪಡೆಯುತ್ತ ಹೊರಟ ಮಂಟೇಸ್ವಾಮಿ ಕೊನೆಗೆ ಮಳವಳ್ಳಿಗೆ ಬಂದು ಕುಂದೂರುಬೆಟ್ಟದ ಸಮೀಪದಲ್ಲಿರುವ ಬೊಪ್ಪಗೌಡಪುರವನ್ನು ತಮ್ಮ ತಪೋಭೂಮಿಯಾಗಿ ಆರಿಸಿಕೊಳ್ಳುತ್ತಾರೆ. ಬೊಪ್ಪಗೌಡನಪುರ ಮೊದಲಿಗೆ ಕಾಡಂಕನಹಳ್ಳಿ ಎನಿಸಿತ್ತು. ನೀಲಗಾರರ ಪ್ರಕಾರ ಮಂಟೇಸ್ವಾಮಿ ಆ ಊರನ್ನು ಒಪ್ಪಿಕೊಂಡದ್ದರಿಂದ ಅದು ಒಪ್ಪಿಕೊಂಡ ಪುರವಾಗಿ ಕ್ರಮೇಣ ಬೊಪ್ಪಗೊಂಡನಪುರವೆನಿಸಿತು. ಆದರೆ ಜನಪದ ಐತಿಹ್ಯಗಳ ಪ್ರಕಾರ ಕಾಡಂಕನಹಳ್ಳಿಯ ಕುರುಬ ಬೊಪ್ಪೇಗೌಡ ಆ ಊರಿನ ಗೌಡ. ದೊಡ್ಡ ಸಿರಿವಂತ. ಅವನು ಮಂಟೇಸ್ವಾಮಿಗೆ ಶಿಷ್ಯನಾಗಿ ಮಠಮಾನ್ಯಗಳನ್ನು ಕಟ್ಟಿಸಿಕೊಟ್ಟ. ಅತ್ಯಂತ ಪ್ರಭಾವಶಾಲಿಯಾಗಿ ಬಾಳಿದ ಇವನಿಂದಲೂ ಊರಿಗೆ ಬೊಪ್ಪಗೌಡನಪುರ ಎಂಬ ಹೆಸರು ಬಂದಿರಲು ಸಾಧ್ಯ.

ಮಂಟೇಸ್ವಾಮಿ ಬೊಪ್ಪಗೌಡನಪುರದಲ್ಲಿ ನೆಲಸಿದ ಮೇಲೆ ಕಲ್ಯಾಣದ ಬಾಗಿಲಲಿದ್ದ ಬಾಚಿ ಬಸವಯ್ಯನ ನೆನಪಾಗುತ್ತದೆ. ಆತ ನಿಡುಗಟ್ಟದ ಮುದ್ದೋಜಿ ಮತ್ತು ಲಿಂಗಮ್ಮ ಎಂಬ ಪಾಂಚಾಳ ದಂಪತಿಗಳಿಗೆ ಏಳನೆಯ ಮಗನಾಗಿ ಹುಟ್ಟಿರುತ್ತಾನೆ. ಅಪಾರವಾದ ಸಿರಿಸಂಪತ್ತಿನಲ್ಲಿ ದರ್ಪದಿಂದ ಬಾಳುತ್ತಿದ್ದ ಆ ಮನೆಯಿಂದ ತನ್ನ ಶಿಷ್ಯನನ್ನು ಪಡೆಯಲು ಮಂಟೇಸ್ವಾಮಿ ಅಪಾರ ಸಾಹಸವನ್ನೇ ಮಾಡಬೇಕಾಗುತ್ತದೆ. ಅವರ ಐಶ್ವರ್ಯವನ್ನೆಲ್ಲ ಮಣ್ಣುಗೂಡಿಸಿ ಬಾಲಕೆಂಪಣ್ಣನಿಗೆ (ಸಿದ್ಧಪ್ಪಾಜಿ) ಹುಚ್ಚು ಬೆಪ್ಪು ಬರಿಸಿ ಕುಂದೂರು ಬೆಟ್ಟದ ಕಾಳಿಂಗನ ಗವಿಯಲ್ಲಿ ಹನ್ನೆರಡು ವರ್ಷ ಕೂಡಿಹಾಕುತ್ತಾರೆ. ಮುಂದೆ ಬಾಲಕೆಂಪಣ್ಣ ಸಂಪೂರ್ಣವಾಗೆ ಪರಿವರ್ತಿತನಾಗಿ ಹನ್ನೆರಡು ವರ್ಷದ ದೀರ್ಘ ನಿದ್ದೆಯಿಂದ ಹೊಸವ್ಯಕ್ತಿಯಾಗಿ ಮಹಿಮಾಪುರುಷನಾಗಿ ಕಾಣಿಸಿಕೊಳ್ಳುತ್ತಾನೆ. ಸಿದ್ಧಪ್ಪಾಜಿ ಎಂಬ ಹೆಸರಿನಲ್ಲಿ ಗುರು ಅವನನ್ನು ಕರೆದು ದೀಕ್ಷೆಯನ್ನು ನೀಡುತ್ತಾರೆ. ಸಿದ್ಧಪ್ಪಾಜಿ ಮಂಟೇಸ್ವಾಮಿಯ ದಳವಾಯಿಯಾಗಿ, ಮುಖ್ಯ ಶಿಷ್ಯನಾಗಿ, ಮಂಟೇಸ್ವಾಮಿಯ ಮಹಿಮೆಯನ್ನು ಪ್ರಸಾರ ಮಾಡುವ ಮೊದಲ ನೀಲಗಾರನಾಗಿ ಅಭಿವ್ಯಕ್ತನಾಗುತ್ತಾನೆ. ಮುಂದೆ ಮಂಟೇಸ್ವಾಮಿ ಅನೇಕ ಪವಾಡಗಳನ್ನು ಮೆರೆದು ಕೊನೆಗೆ ಪಾತಾಳಬಾವಿಯೊಂದರಲ್ಲಿ ಪವಡಿಸುತ್ತಾರೆ. ಸಿದ್ಧಪ್ಪಾಜಿ ಪೂರ್ವಘಟ್ಟಗಳಲ್ಲಿಯ ಚಿಕ್ಕಲ್ಲೂರಿಗೆ ಹೋಗಿ ನೆಲಸುತ್ತಾನೆ. ಈಗಲೂ ಮಂಟೇಸ್ವಾಮಿ ಮಠ ಮಳವಳ್ಳಿ ತಾಲ್ಲೂಕಿನ ಬೊಪ್ಪಗೌಡನಪುರದಲ್ಲಿದೆ. ಈ ಸಂಪ್ರದಾಯದ ಮತ್ತೊಂದು ಮಠ ಮಳವಳ್ಳಿಯಲ್ಲಿದೆ. ಕೊಳ್ಳೇಗಾಲದಾಚೆ ಪೂರ್ವಘಟ್ಟಗಳಲ್ಲಿ ಚಿಕ್ಕಲ್ಲೂರು ಕ್ಷೇತ್ರ ಮತ್ತು ಕೃಷ್ಣರಾಜನಗರ ತಾಲ್ಲೂಕಿಗೆ ಸೇರಿದ ಕಪ್ಪಡಿ ಕ್ಷೇತ್ರ ಈ ಸಂಪ್ರದಾಯಕ್ಕೆ ಸಂಬಂಧಪಡುತ್ತವೆ. ಬೊಪ್ಪಗೌಡನಪುರದಲ್ಲಿ ಆದಿಗುರು ಮಂಟೇಸ್ವಾಮಿಯ ಗದ್ದಿಗೆಯೂ ಚಿಕ್ಕಲ್ಲೂರಿನಲ್ಲಿ ಈತನ ದಳವಾಯಿ ಸಿದ್ಧಪ್ಪಾಜಿ ಗದ್ದಿಗೆಯೂ ಕಪ್ಪಡಿಯಲ್ಲಿ ಮಂಟೇಸ್ವಾಮಿಯ ಮತ್ತೊಬ್ಬ ಮುಖ್ಯ ಶಿಷ್ಯ ರಾಚಪ್ಪಾಜಿಯ ಗದ್ದಿಗೆಯೂ ಇವೆ. ಈ ಮೂರು ಕ್ಷೇತ್ರಗಳೂ ಯಾತ್ರಾಸ್ಥಳಗಳಾಗಿ ಪರಿಣಮಿಸಿವೆ.

ಜುಲೈ ತಿಂಗಳಲ್ಲಿ ಮಂಟೇಸ್ವಾಮಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಿದ್ಧಪ್ಪಾಜಿಗೆ ಹೆಚ್ಚಾಗಿ ಸಂಬಂಧಪಡುವ ಹಬ್ಬ ಸಿದ್ಧಪ್ಪಾಜಿಯನ್ನು "ಮಾರೀರ ಮಸಣೇರ ಗಂಡ" ಎಂದು ಕರೆಯಲಾಗಿದೆ. ಅಂಟು ಜಾಡ್ಯಗಳ ಕಾಲದ ಪ್ಲೇಗು ಮುಂತಾದವನ್ನು ಗೆದ್ದುಕೊಳ್ಳುವ ದೇವರು ಎಂದು ಭಾವಿಸಲಾಗಿದೆ.

ಮಂಟೇಸ್ವಾಮಿ ಸಂಪ್ರದಾಯಕ್ಕೆ ಸಂಬಂಧಿಸಿದ ದೇವಾಲಯಗಳು ಅನೇಕ ಊರುಗಳಲ್ಲಿ ಕಂಡುಬರುತ್ತವೆ. ಮಂಟೇಸ್ವಾಮಿಯ ಒಕ್ಕಲುಗಳೂ ಅಪಾರವಾಗಿವೆ. ತಮ್ಮ ದೇವರ, ಕುಲಗುರುವಿನ ಕಾಣಿಕೆಯನ್ನು ಜಾತ್ರೆಗಳಲ್ಲಿ ಉತ್ಸವಗಳಲ್ಲಿ ಜನ ಮಠಗಳಿಗೆ ಅರ್ಪಿಸುತ್ತಾರೆ. ನೀಲಗಾರ ಅಥವಾ ನೀಲಗಾರ್ತಿಯರನ್ನಾಗಿ ದೇವರ ಹೆಸರಿನಲ್ಲಿ ದೀಕ್ಷೆ ಕೊಡಿಸುವವರು ಮಠಗಳಿಗೆ ಬರಬೇಕಾಗುತ್ತದೆ. ಇಲ್ಲದೆ ಜಾತ್ರೆಯ ಸಂದರ್ಭಗಳಲ್ಲಿ ಗುರುವಿನ ಕೈಯಿಂದ ಮಣಿಯನ್ನು ಕಟ್ಟಿಸಿಕೊಳ್ಳಬೇಕಾಗುತ್ತದೆ. ಕಪ್ಪಡಿ ಮತ್ತು ಚಿಕ್ಕಲ್ಲೂರಿನ ಜಾತ್ರೆಗಳು ಈ ದೃಷ್ಟಿಯಿಂದ ಗಮನಾರ್ಹವಾದುವಾಗಿವೆ. ಮಂಟೇಸ್ವಾಮಿಯನ್ನು ಕುರಿತಂತೆ ದೊರೆಯುವ ಜನಪದ ಕಾವ್ಯಗಳನ್ನು ಜೀ. ಶಂ. ಪರಮಶಿವಯ್ಯ ಮತ್ತು ಚೌಡೇಗೌಡ ಬೀಡನಹಳ್ಳಿ ಇವರು ಪ್ರತ್ಯೇಕವಾಗಿ ಸಂಗ್ರಹಿಸಿ ಪ್ರಕಟಿಸಿದ್ದಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: