ಭಾವನಾ ಚಿಖಾಲಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾವನಾಬೆನ್ ದೇವರಾಜಭಾಯ್ ಚಿಖಾಲಿಯಾ

ಮಾಜಿ ರಾಜ್ಯ ಸಚಿವರು
ಅಧಿಕಾರ ಅವಧಿ
೨೦೦೩ - ೨೦೦೪

ಸಂಸತ್ತಿನ ಸದಸ್ಯ
ಅಧಿಕಾರ ಅವಧಿ
೧೯೯೧ - ೨೦೦೪
ಮತಕ್ಷೇತ್ರ ಜುನಾಗಡ್
ವೈಯಕ್ತಿಕ ಮಾಹಿತಿ
ಜನನ (೧೯೫೫-೦೨-೧೪)೧೪ ಫೆಬ್ರವರಿ ೧೯೫೫
ದೇವಲ್ಕಿ, ಸೌರಾಷ್ಟ್ರ, ಭಾರತ
ಮರಣ 28 June 2013(2013-06-28) (aged 58)
ಅಹಮದಾಬಾದ್, ಗುಜರಾತ್, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ದೇವ್‌ರಾಜ್ ಚಿಕಾಲಿಯಾ
ಮಕ್ಕಳು
ವಾಸಸ್ಥಾನ ಜುನಾಗಡ್, ಗುಜರಾತ್
ಅಭ್ಯಸಿಸಿದ ವಿದ್ಯಾಪೀಠ ಗುಜರಾತ್ ವಿಶ್ವವಿದ್ಯಾಲಯ

 

ಭಾವನಾ ಚಿಖಾಲಿಯಾ ( ಗುಜರಾತ್, ೧೪ ಫೆಬ್ರವರಿ ೧೯೫೫-೨೮ ಜೂನ್ ೨೦೧೩) ೨೦೦೩ ರಿಂದ ೨೦೦೪ ರವರೆಗೆ ಭಾರತ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಅವರು ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಗುಜರಾತ್‌ನ ಜುನಾಗಢ್ ಕ್ಷೇತ್ರದಿಂದ (೧೯೯೧ ರಿಂದ ೨೦೦೪ ರವರೆಗೆ) ಸತತ ನಾಲ್ಕು ಬಾರಿ ಲೋಕಸಭೆಗೆ ಗೆದ್ದ ಗುಜರಾತ್‌ನ ಪ್ರಥಮ ಮಹಿಳೆಯಾಗಿದ್ದರು. ಅವರು ೧೯೯೩ ರಿಂದ ೧೯೯೬ ರವರೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದೀಯ ವಿಭಾಗದ ಕಾರ್ಯಕಾರಿ ಕಾರ್ಯದರ್ಶಿ ಮತ್ತು ೧೯೯೮ರಲ್ಲಿ ಪಕ್ಷದ ವಿಪ್ ಮತ್ತು ಪಕ್ಷದ ಉಪಾಧ್ಯಕ್ಷರಾಗಿದ್ದರು. ಅವರು ೧೯೯೯-೨೦೦೨ ರ ಅವಧಿಯಲ್ಲಿ ರೈಲ್ವೆ ಕನ್ವೆನ್ಷನ್ ಸಮಿತಿಯ ಅಧ್ಯಕ್ಷರಾಗಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಭಾವನಾ ಚಿಖಾಲಿಯಾ ಅವರು ಗುಜರಾತ್‌ನ ಜುನಾಗಢ್ ಬಳಿಯ ದೇವಲ್ಕಿ ಎಂಬ ಸಣ್ಣ ಪಟ್ಟಣದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ೧೯೫೫ ರಲ್ಲಿ ಜನಿಸಿದರು. ಅವರ ತಂದೆ ಜಮ್ನಾದಾಸ್ ಪಟೇಲ್ ಅವರು ಕಟ್ಟಡ ನಿರ್ಮಾಣ ವ್ಯವಹಾರದಲ್ಲಿದ್ದರು ಮತ್ತು ಸವಿತಾಬೆನ್ ಪಟೇಲ್ ಅವರು ಧರ್ಮನಿಷ್ಠ ಗೃಹಿಣಿಯಾಗಿದ್ದರು. ಭಾವನಾ ಅವರಿಗೆ ಮೂವರು ಒಡಹುಟ್ಟಿದವರು, ಒಬ್ಬ ಸಹೋದರಿ ಮತ್ತು ಇಬ್ಬರು ಸಹೋದರರು ಇದ್ದಾರೆ. ಸೋದರಿ ಪುಷ್ಷಾ ಪಟೇಲ್ ಅನ್ನನಾಳದ ಕ್ಯಾನ್ಸರ್ ನಿಂದ ನಿಧನರಾದರು. ಸಹೋದರ ಭರತ್ ಪಟೇಲ್ ೧೯೯೬ ರಲ್ಲಿ ಕಾರು ಅಪಘಾತದಲ್ಲಿ ನಿಧನರಾದರು. ಸಹೋದರನ ಮಗ ಡಾ. ವತ್ಸಲ್ ಪಟೇಲ್, ಮಡಿ, ಮಬಿಎ, ಡಿಎಬಿಆರ್, ಯುಎಸ್ಎ, ಯಲ್ಲಿ ಖ್ಯಾತ ವಿಕಿರಣ ಆಂಕೊಲಾಜಿಸ್ಟ್ (ಕ್ಯಾನ್ಸರ್ ಸ್ಪೆಷಾಲಿಟಿ) ಆಗಿದ್ದಾರೆ. ಚಿಖಾಲಿಯಾ ಅವರು ಗುಜರಾತ್‌ನಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಕ ಮತ್ತು ಮೂತ್ರಶಾಸ್ತ್ರಜ್ಞರಾಗಿರುವ ದೇವರಾಜ್ ಚಿಖಾಲಿಯಾ ಅವರನ್ನು ವಿವಾಹವಾದರು.

ರಾಜಕೀಯ ವೃತ್ತಿಜೀವನ[ಬದಲಾಯಿಸಿ]

ಅವರು ವಕೀಲರಾಗಿ (ಬಿಕಾಂ, ಎಲ್‌ಎಲ್‌ಬಿ) ವೃತ್ತಿಯನ್ನು ಪ್ರಾರಂಭಿಸಿದ್ದರು ಮತ್ತು ಅಂದಿನಿಂದ ಸಮಾಜ ಸೇವಕಿಯಾಗಿದ್ದಾರೆ. ಚಿಖಾಲಿಯಾ ಅವರು ೧೯೯೧ ರಲ್ಲಿ ೧೦ ನೇ ಲೋಕಸಭೆಯ ಜುನಾಗಢ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ೧೯೯೩ರಲ್ಲಿ ಅವರು ಬಿಜೆಪಿ ಸಂಸದೀಯ ವಿಭಾಗದ ಕಾರ್ಯಕಾರಿ ಕಾರ್ಯದರ್ಶಿಯಾದರು. ಅವರು ೧೯೯೬ ರಲ್ಲಿ, ೧೧ ನೇ ಲೋಕಸಭೆಯ ಸಂಸತ್ ಸದಸ್ಯರಾಗಿ ಮರು ಆಯ್ಕೆಯಾದರು. ಅವರು ೧೯೯೬ - ೯೭ರಲ್ಲಿ ರೈಲ್ವೆ ಸಚಿವಾಲಯದ ಸರ್ಕಾರಿ ಭರವಸೆಗಳು, ಸಂವಹನ ಮತ್ತು ಸಲಹಾ ಸಮಿತಿಯ ಸಕ್ರಿಯ ಸದಸ್ಯರಾದರು. ೧೯೯೮ ರಲ್ಲಿ ಅವರು ೧೨ ನೇ ಲೋಕಸಭೆಯ ಸಂಸದರಾಗಿ ಮೂರನೇ ಅವಧಿಗೆ ಆಯ್ಕೆಯಾದರು. ಅವರು ೧೯೯೮-೨೦೦೦ರಲ್ಲಿ ರಾಷ್ಟ್ರೀಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿದ್ದರು ಮತ್ತು ೧೯೯೯ - ೨೦೦೨ರಲ್ಲಿ ರೈಲ್ವೆ ಕನ್ವೆನ್ಷನ್ ಸಮಿತಿಯ ಅಧ್ಯಕ್ಷರಾಗಿದ್ದರು.

೧೭ ಏಪ್ರಿಲ್ ೧೯೯೯ ರಂದು, ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸಮ್ಮಿಶ್ರ ಸರ್ಕಾರವು ಲೋಕಸಭೆಯಲ್ಲಿ (ಭಾರತದ ಕೆಳಮನೆ) ವಿಶ್ವಾಸ ಮತವನ್ನು ಗೆಲ್ಲುವಲ್ಲಿ ವಿಫಲವಾಯಿತು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಡಿಎಮ್ ಕೆ) ಸರ್ಕಾರದ ಸಮ್ಮಿಶ್ರ ಪಾಲುದಾರರಲ್ಲಿ ಒಬ್ಬರ ಹಿಂತೆಗೆದುಕೊಳ್ಳುವಿಕೆಯಿಂದಾಗಿ ಒಂದೇ ಒಂದು ಮತವನ್ನು ಕಳೆದುಕೊಂಡಿತು. ಸೋನಿಯಾ ಗಾಂಧಿಯವರು ವಿರೋಧ ಪಕ್ಷದ ನಾಯಕಿಯಾಗಿ ಮತ್ತು ಅತಿದೊಡ್ಡ ವಿರೋಧ ಪಕ್ಷ ( ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ) ಲೋಕಸಭೆಯಲ್ಲಿ ಬಹುಮತವನ್ನು ಪಡೆಯಲು ಸಾಕಷ್ಟು ದೊಡ್ಡ ಪಕ್ಷಗಳ ಒಕ್ಕೂಟವನ್ನು ರಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ನಂತರ ಕೆಲವೇ ದಿನಗಳಲ್ಲಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಕರೆ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯು ಅದೇ ವರ್ಷದ ನಂತರ ನಡೆಯುವವರೆಗೂ ಹಂಗಾಮಿ ಪ್ರಧಾನಿಯಾಗಿದ್ದರು.

೧೯೯೯ ರ ಉಪಚುನಾವಣೆಯಲ್ಲಿ, ೧೯೯೯ ರಲ್ಲಿ ೧೩ ನೇ ಲೋಕಸಭೆಯ ಸತತ ನಾಲ್ಕನೇ ಅವಧಿಗೆ ಚುನಾಯಿತರಾಗುವ ಮೂಲಕ ಚಿಖಾಲಿಯಾ ಅವರು ಸತತವಾಗಿ ನಾಲ್ಕು ಬಾರಿ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾದ ಗುಜರಾತ್‌ನ ಪ್ರಥಮ ಮಹಿಳೆಯಾಗಿದ್ದರು. ಅವರು ೨೦೦೦ ರಲ್ಲಿ ಅಖಿಲ ಭಾರತ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಅವರು ೨೦೦೦ ರಲ್ಲಿ ನ್ಯಾಷನಲ್ ಕೋ-ಆಪರೇಟಿವ್ ಹೌಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದರು. ಅವರು ಐದು ವರ್ಷಗಳ ಕಾಲ ಗುಜರಾತ್ ರಾಜ್ಯ ವಸತಿ ಹಣಕಾಸು ನಿಗಮದ ಅಧ್ಯಕ್ಷರಾಗಿದ್ದರು. ಅವರನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರನ್ನಾಗಿ ಮಾಡಲಾಯಿತು ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರೊಂದಿಗೆ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದರು. ಅವರು ಜನವರಿ ೨೦೦೩ ರಿಂದ ಮೇ ೨೦೦೪ ರವರೆಗೆ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರವು ಚುನಾವಣೆಯಲ್ಲಿ ಸೋತಾಗ ಈ ಹುದ್ದೆಗಳನ್ನು ಹೊಂದಿದ್ದರು.

ಅವರು ೨೦೧೩ ರಲ್ಲಿ ಹೃದಯ ಸ್ತಂಭನದಿಂದ ನಿಧನರಾದರು [೧]

ಪ್ರಮುಖ ರಾಜಕೀಯ ಸ್ಥಾನಗಳು[ಬದಲಾಯಿಸಿ]

  • ೧೯೯೩ - ೧೯೯೬ ಕಾರ್ಯಕಾರಿ ಕಾರ್ಯದರ್ಶಿ, ಬಿಜೆಪಿ (ಸಂಸದೀಯ ವ್ಯವಹಾರಗಳು)
  • ೧೯೯೬ - ೧೯೯೮ ರಾಷ್ಟ್ರೀಯ ಶಿಪ್ಪಿಂಗ್ ಬೋರ್ಡ್ ಸದಸ್ಯ
  • ೧೯೯೬ - ೧೯೯೮ ಉಪಾಧ್ಯಕ್ಷರಾಗಿದ್ದರು, ಗುಜರಾತ್ ಪ್ರದೇಶ ಬಿಜೆಪಿ ಮಹಿಳಾ ಮೋರ್ಚಾ
  • ೧೯೯೬ - ೧೯೯೮ ಉಪಾಧ್ಯಕ್ಷರಾಗಿದ್ದರು, ಅಖಿಲ ಭಾರತ ಬಿಜೆಪಿ ಮಹಿಳಾ ಮೋರ್ಚಾ
  • ೧೯೯೮ - ಲೋಕಸಭೆಯ ಪಕ್ಷ, ಬಿಜೆಪಿ ಸಂಸದೀಯ ಸಚೇತಕ
  • ೧೯೯೮ - ಕಾರ್ಯಕಾರಿ ಸಮಿತಿ ಸದಸ್ಯ, ಬಿಜೆಪಿ ಸಂಸದೀಯ ಪಕ್ಷ
  • ೨೦೦೦ - ಉಪಾಧ್ಯಕ್ಷ, ಅಖಿಲ ಭಾರತ ಬಿಜೆಪಿ
  • ೧೯೯೧ - ೨೦೦೪ ಸಂಸತ್ ಸದಸ್ಯ
  • ೨೦೦೩ - ೨೦೦೪ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]