ಚೆನ್ನಕೇಶವ ನಾಗೇಶ್ವರ ದೇವಾಲಯ, ಮೊಸಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಸಳೆ
ನಾಗೇಶ್ವರ ಮತ್ತು ಚೆನ್ನಕೇಶವ ದೇವಾಲಯ
ನಾಗೇಶ್ವರ ಮತ್ತು ಚೆನ್ನಕೇಶವ ದೇವಾಲಯ
Countryಭಾರತ
Stateಕರ್ನಾಟಕ
Districtಹಾಸನ ಜಿಲ್ಲೆ

ಪುರಾತತ್ವ ವಲಯಗಳಲ್ಲಿ ಹೆಸರುವಾಸಿಯಾದರೂ, ಮೊಸಳೆ ಗ್ರಾಮವನ್ನು ಸುಲಭವಾಗಿ ಒಂದು ಅಡಗಿದ ಅನರ್ಘ್ಯ ಎಂದು ವಿವರಿಸಬಹುದು. ವಿಶಿಷ್ಟ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿರುವ ನಾಗೇಶ್ವರ ಮತ್ತು ಚೆನ್ನಕೇಶವ ದೇವರ ಅವಳಿ ದೇವಾಲಯಗಳು ಹಾಸನ ಬಳಿಯ ಮೊಸಳೆ ಎಂಬ ಕೃಷಿ ಆಧಾರಿತ ಗ್ರಾಮದ ತುದಿಯಲ್ಲಿ ನಿಂತಿದೆ[೧]. ಹಾಸನ ಜಿಲ್ಲೆಯಿಂದ ಸುಮಾರು ೧೪ ಕಿಲೋಮೀಟರ್ (೯ ಮೈಲಿಗಳು) ದೂರದಲ್ಲಿರುವ ಮೊಸಳೆ ಎಂಬ ಗ್ರಾಮವು, ಅನೇಕ ಪ್ರಾಚೀನ ವೈಶಿಷ್ಟ್ಯತೆಯಿಂದ ಕೂಡಿದೆ. ಆದರೂ ಇಲ್ಲಿ ಸಾರ್ವಜನಿಕ ಸಾರಿಗೆ ಲಭ್ಯತೆ ಕಷ್ಟವಾಗಿರುವುದರಿಂದ ಇನ್ನಿತರ ಹೊಯ್ಸಳರ ದೇವಾಲಯಗಳಂತೆ ಪ್ರಖ್ಯಾತವಾಗಿಲ್ಲ. ಸ್ವಂತ ಖಾಸಗಿ ವಾಹನ ಪ್ರಯಾಣ ಮಾಡುವವರಿಗೆ, ಮೊಸಳೆಯು ಮುಖ್ಯ ರಸ್ತೆಯಿಂದ, ಎಂದರೆ ಮೈಸೂರು ಹಾಸನ ಸಂಪರ್ಕಿಸುವ ರಸ್ತೆಯಿಂದ ಕೇವಲ ೧೦ ನಿಮಿಷಗಳ ದಾರಿ.

ಇತಿಹಾಸ[ಬದಲಾಯಿಸಿ]

೧೧ನೇ ಶತಮಾನದ ಹೊಯ್ಸಳ ವಾಸ್ತುಶಿಲ್ಪಕ್ಕೆ ಉದಾಹರಣೆ ಎಂಬಂತೆ ಇಲ್ಲಿರುವ ನಾಗೇಶ್ವರ-ಚೆನ್ನಕೇಶ್ವರ ದೇವಾಲಯ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಕ್ರಿ. ಶ ೧೨೦೦ರ ಆಸುಪಾಸಿನಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಹೊಯ್ಸಳರ ರಾಜ, ಎರಡನೇ ವೀರ ಬಲ್ಲಾಳ ಇದನ್ನು ನಿರ್ಮಾಣ ಮಾಡಿರುನವನೆಂದು ಇತಿಹಾಸ ಹೇಳುತ್ತದೆ. ಇಲ್ಲಿನ ಅವಳಿ ದೇವಾಲಯಗಳಾದ ನಾಗೇಶ್ವರ ಮತ್ತು ಚೆನ್ನಕೇಶವ ಅತ್ಯದ್ಭುತವಾಗಿ ನಿರ್ಮಿಸಲಾಗಿವೆ. ಕಲಾ ಇತಿಹಾಸಕಾರ ಜೆರಾರ್ಡ್ ಫೋಕೆಮಾ ಪ್ರಕಾರ, ಒಂದು ಸಹಜವಾದ ಗ್ರಾಮೀಣ ವ್ಯವಸ್ಥೆಯಲ್ಲಿ, ಅದೇ ಸಂಕೀರ್ಣದಲ್ಲಿ ನಿರ್ಮಿಸಲಾದ ಎರಡು ದೇವಾಲಯಗಳು ಒಂದು "ಪರಿಪೂರ್ಣ ಅವಳಿ" ರೂಪಿಸುತ್ತವೆ.

ಮೊಸಳೆಯಲ್ಲಿ ಇರುವ ಶಿಲಾಶಾಸನ)

ಚೆನ್ನಕೇಶವ ಮತ್ತು ನಾಗೇಶ್ವರ ದೇವಸ್ಥಾನ[ಬದಲಾಯಿಸಿ]

ಚೆನ್ನಕೇಶವ ದೇವಸ್ಥಾನವು ಗರುಡ (ಹದ್ದು), ಕೇಶವ (ವಿಷ್ಣುವಿನ ಒಂದು ರೂಪ), ಜನಾರ್ಧನ, ವೇಣುಗೋಪಾಲ, ಮಾಧವ (ಕೃಷ್ಣ ಒಂದು ರೂಪ) ಮತ್ತು ಭೂಮಿದೇವಿಯ ಪ್ರತಿಮೆಗಳನ್ನು ಹೊಂದಿದೆ. ಇಲ್ಲಿ ಇತರೆ ವಿಷ್ಣು ಸಂಬಂಧಿಸಿದ ಮೂರ್ತಿಗಳಲ್ಲಿ ಪ್ರಮುಖವಾಗಿ, ವಿಷ್ಣುವಿನ ವಿಗ್ರಹವನ್ನು ಕಾಣಬಹುದು. ಈ ಚಿತ್ರಗಳ ಕೆಳಗೆ ಗೋಡೆಯ ತಳದಲ್ಲಿ ಕಲ್ಲುಗಳನ್ನು ಸಾಲಾಗಿ ಜೋಡಿಸಲಾಗಿದೆ. ನಾಗೇಶ್ವರ ದೇವಸ್ಥಾನದಲ್ಲಿ ಚಾಮುಂಡೇಶ್ವರಿ, ಸಪ್ತಮಾರ್ಥಿಕೆ, ಶಿವ, ದುರ್ಗಾ ದೇವಿಯ 7 ರೂಪಗಳು, ಗಣಪತಿ, ಶಾರದಾ ಮತ್ತು ಇತರ ದೇವತೆ ವಿಗ್ರಹಗಳಲ್ಲಿ ನಾಗೇಶ್ವರ ವಿಗ್ರಹವು ಪ್ರಮುಖ ಆಕರ್ಷಣೆಯಾಗಿದೆ. ಈ ದೇವಸ್ಥಾನಗಳ ಮೇಲೆ ಕಲಶ ಮತ್ತು ಹೊಯ್ಸಳರ ಚಿಹ್ನೆ ಕೂಡಿಡಂತೆ ಒಳಗೆ ಮತ್ತು ಹೊರಗಿನ ಗೋಡೆಗಳನ್ನು ಸಂಕೀರ್ಣ ಕೆತ್ತನೆಗಳಿಂದ ತುಂಬಲಾಗಿದೆ. ಹೊಯ್ಸಳ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಲಾದ, ನಾಗೇಶ್ವರ ಮತ್ತು ಚೆನ್ನಕೇಶವ ಕೇಶವ ದೇವರಿಗೆ ಮೀಸಲಾಗಿರುವ ಅವಳಿ ದೇವಾಲಯಗಳು (ತ್ರಿಕೂಟಚಲ ರೀತಿಯ) ಕ್ರಮವಾಗಿ ಪಕ್ಕ ಪಕ್ಕದಲ್ಲಿ ಕೆಲವು ಅಡಿ ಅಂತರದಲ್ಲಿ, ನಿರ್ಮಿಸಲಾಗಿದೆ.

ವಾಸ್ತುಶಿಲ್ಪ[ಬದಲಾಯಿಸಿ]

  • ಗೋಪುರ:- ಹೊಯ್ಸಳ ವಾಸ್ತುಶಿಲ್ಪದ ಎಲ್ಲಾ ವೈಶಿಷ್ಟ್ಯಗಳ ಜೊತೆ, ಸರಳ ಏಕೈಕ ಗೋಪುರಗಳ ರಚನೆಗಳು. ಪ್ರವೇಶದಲ್ಲಿ, ಚೌಕಾಕಾರದ ಮುಖಮಂಟಪ ಅಥವಾ ನವರಂಗ (ಯಾವುದೇ ಕಿಟಕಿಗಳು ಮತ್ತು ಒಂದು ದಪ್ಪ ಗೋಡೆಯ ಹಾಲ್). ಮೇಲೆ ಬ್ರಹತ್ ಗಾತ್ರದ 'ಶಿಖರ'ವು ದೇವಾಲಯಕ್ಕೆ ಮನೋಹರತೆ ನೀಡುತ್ತದೆ. ಗರ್ಭಗುಡಿಯು ಮುಂದಿನ ಒಂದು ಹಾಲಿಗೆ ಸೇರಿಕೊಂಡಿರುತ್ತದೆ. ದೇವಾಲಯದ ಮೇಲ್‌ಭಾಗವು ಗೋಳಾಕಾರವಾಗಿದ್ದು, ಅವರ ಮೇಲ್ಮೈ ವಿಸ್ತೀರ್ಣವು 2x2 ಮೀಟರ್ ಇರಬಹುದು. ಗುಮ್ಮಟದ ಕೆತ್ತನೆಯ ಅತಿದೊಡ್ಡ ಪಾಲು ಇದಾಗಿದೆ. ಈ ಗೋಳಾಕಾರದ ವಿನ್ಯಾಸವು ದೇವಾಲಯ ಶಿಲ್ಪಕಲೆಯ ದೊಡ್ಡ ತುಣುಕಾಗಿದೆ. ಗೋಪುರದ ತುದಿಯಲ್ಲಿ ಕಲಶವಿದ್ದು, ಇದು ಒಂದು ಅಲಂಕಾರಿಕ ನೀರಿನ ಮಡಕೆ ಎಂತೆ ಬಿಂಬಿಸುತ್ತದೆ. ಈ ಎಲ್ಲಾ ಲಕ್ಷಣಗಳನ್ನು ಎರಡೂ ದೇವಾಲಯಗಳಲ್ಲಿ ಕಂಡುಬರುತ್ತದೆ.
  • ಒಳ ಆವರಣ:- ದೇವಾಲಯದ ಮುಖ್ಯ ದ್ವಾರವು ಪೂರ್ವಕ್ಕೆ ಮುಖ ಮಾಡಿದೆ. ಈ ದೇವಾಲಯವು ಏಕಕೂಟ ದೇವಾಲಯಗಳ ಗುಂಪಿಗೆ ಸೇರುತ್ತದೆ. ದೇವಾಲಯದ ಹೊರ ಗೋಡೆಯ ಮೇಲೆ ಕಂಡುಬರುವ ಅಲಂಕಾರಿಕ ವೈಶಿಷ್ಟ್ಯಗಳು ಪ್ರಾಚೀನ ರೀತಿಯದ್ದಾಗಿದ್ದು, ಈ ರೀತಿಯ ಅಲಂಕಾರಗಳು, ಗೋಪುರದ ಕೆಳಗೆ ಪ್ರಾರಂಭವಾಗಿ, ದೇವಾಲಯದ ಸುತ್ತ ಕಾಣಸಿಗುತ್ತದೆ. ಸೂರಿನ ಕೆಳಗೆ ಗೋಡೆಗಂಬಗಳ ಮೇಲೂ ಅಲಂಕಾರಿಕ ಕೆತ್ತನೆಗಳಿವೆ. ಪ್ರಾಚೀನ ರೀತಿಯ ದೇವಾಲಯಗಳ ಹಾಗೆ, ದೇವತೆಗಳು ಮತ್ತು ಅವರ ಸಹವರ್ತಿಗಳ ದೊಡ್ಡ ಚಿತ್ರಗಳನ್ನು, ಮೂರ್ತಿಗಳನ್ನು ಗೋಪುರದ ಕೆಳಗೆ, ಅಲಂಕಾರಿತ ಗೋಡೆಗನುಗುಣವಾಗಿ ಇರಿಸಲಾಗಿದೆ. ಈ ಚಿತ್ರಗಳಲ್ಲಿ ಕೆಲವು ಹಾನಿಗೊಳಗಾದಂತೆ ಕಂಡುಬರುತ್ತದೆ, ಆದರೆ ಅದರ ಸೊಬಗು ಮತ್ತು ಕಲೆಗೆ ವಿಶೇಷ ಉಲ್ಲೇಖದ ಅಗತ್ಯವಿದೆ. ಅಲ್ಲಿ ಕಂಡುಬರುವ ಕೆಲವು ಚಿತ್ರಗಳಲ್ಲಿ ಪ್ರಮುಖವಾದವುಗಳು, ಶ್ರೀದೇವಿ, ಗೌರಿ, ಮಹೇಶ್ವರಿ( ಪಾರ್ವತಿಯ ಇನ್ನೊಂದು ಹೆಸರು) ಮತ್ತು ಭೂದೇವಿಯ ಚಿತ್ರಗಳು ಸೇರಿದಂತೆ, ಬ್ರಹ್ಮ, ಲಕ್ಷ್ಮೀನಾರಾಯಣ, ಸದಾಶಿವ (ಶಿವನ ರೂಪ) ಚಿತ್ರಗಳಿವೆ.
  • ಗರ್ಭ ಗುಡಿ:- ಚೆನ್ನಕೇಶವ ಕೇಶವ ದೇವಾಲಯದಲ್ಲಿ ಆರು ಅಡಿಗಳ ಸುಂದರವಾಗಿ ಕೆತ್ತನೆ ಮಾಡಿರುವ ಚೆನ್ನಕೇಶವ ಕೇಶವ ಮೂರ್ತಿಯ ಕಂಗೊಳಿಸುತ್ತದೆ. ಚೆನ್ನಕೇಶವ ಕೇಶವ ಮೂರ್ತಿಯ ಎರಡೂ ಬದಿಗಳಲ್ಲಿ ಇರಿಸಿರುವ ಶ್ರೀದೇವಿ ಮತ್ತು ಭೂದೇವಿ ಆಕರ್ಷಕವಾಗಿವೆ. ಗರ್ಭದ್ವಾರವು ಒಂದು ಗಜಲಕ್ಷ್ಮೀಯನ್ನು ಹೊಂದಿದೆ. ಕಮಲದ ಆಕಾರದ ರಂಗಮಂಟಪದಲ್ಲಿ ಇಂದ್ರ, ಅಗ್ನಿ, ವರುಣ, ಮತ್ತು ವಾಯುಯನ್ನು ಕಲಾತ್ಮಕವಾಗಿ ಕೆತ್ತಲಾಗಿದೆ.
ಒಳ ಆವರಣ

ವಿಶೇಷತೆ[ಬದಲಾಯಿಸಿ]

ಸುಣ್ಣದ ಕಲ್ಲಿನಿಂದ ನಿರ್ಮಿಸಲಾಗಿರುವ ಈ ಪವಿತ್ರ ದೇವಾಲಯಗಳಲ್ಲಿ, ಒಂದು ಸುಕಾನಸಿ, ಒಂದು ನವರಂಗ ಮತ್ತು ಎರಡೂ ಬದಿಯಲ್ಲಿ ಜಗತಿ ಒಂದು (ಮುಖಮಂಟಪ) ಒಳಗೊಂಡಿರುತ್ತವೆ. ಚೆನ್ನಕೇಶವ ಮೂರ್ತಿಯ ಹಿಂಬದಿಯಲ್ಲಿ ಪ್ರಬಾವಳಿ ವಿಷ್ಣುವಿನ ಅವತಾರಗಳಾದ ಮತ್ಸ್ಯ, ಕೂರ್ಮ, ಮತ್ತು ವರಾಹ ಪ್ರತಿನಿಧಿಸುತ್ತವೆ. ವಿನ್ಯಾಸಗೊಳಿಸಿರುವ ಗೋಡೆಯ ಮೇಲೆ ಅಷ್ಟದಿಕ್ಪಾಲಕರು ತಮ್ಮ ವಾಹನದ ಮೇಲೆ ಕುಳಿತಿರುವ ಚಿತ್ರಗಳು ಕಾಣಸಿಗುತ್ತದೆ. ನಾಗೇಶ್ವರ ದೇವಸ್ಥಾನವೂ ಕೂಡ, ಒಂದು ಸುಕಾನಸಿ, ನವರಂಗ ಮತ್ತು ಮಂಟಪವನ್ನು ಹೊಂದಿದೆ. ಇಲ್ಲಿ ಸುಂದರವಾಗಿ ಕೆತ್ತನೆ ಮಾಡಲಾಗಿರುವ ನಂದಿ ವಿಗ್ರಹವನ್ನು ನೋಡಬಹುದು. ನಾಗೇಶ್ವರ ಮತ್ತು ಚೆನ್ನಕೇಶವ ಕೇಶವ ದೇವಾಲಯಗಳು ವಿಸ್ತಾರವಾಗಿ ಸಂಕೀರ್ಣವಾದ ಜ್ಯಾಮಿತೀಯ ಮಾದರಿಯನುಸಾರ ನಿರ್ಮಿಸಲಾಗಿದೆ. [೨]

ಪ್ರಾಚೀನ ವಿಶೇಷತೆ[ಬದಲಾಯಿಸಿ]

ಹಳೆಯ ಕಥೆಗಳ ಪ್ರಕಾರ ಪ್ರಾಚೀನ ಕಾಲದಲ್ಲಿ ಜಮದಗ್ನಿ ಮಹರ್ಷಿಗಳು, ಈ ಸ್ಥಳದಲ್ಲಿ ಕುಟೀರವನ್ನು ನಿರ್ಮಿಸಿ, ವಾಸಿಸುತ್ತಿದ್ದರು. ಈ ಗ್ರಾಮದ ಹೆಸರು ಹಿಂದೆ "ಮುಸಲ" ಅಂದರೆ ಕುಟ್ಟಾಣಿ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಎರಡು ದೇವಾಲಯಗಳು ಹೊಯ್ಸಳ ಕಲೆಗೆ ಉತ್ತಮ ಉದಾಹರಣೆಗಳಾಗಿವೆ. ಈ ದೇವಾಲಯಗಳ ಪುರಾತನ ವಸ್ತುಗಳು ಇನ್ನೂ ತಿಳಿಯಲ್ಪಟ್ಟಿಲ್ಲ. ತಮ್ಮ ವಾಸ್ತುಶಿಲ್ಪದ ಗುಣ ಮತ್ತು ಶೈಲಿಯಿಂದ, ಅವು ಹೆಸರುವಾಸಿಯಾಗಿವೆ.

ಮುಖ್ಯ ಆಕರ್ಷಣೆ[ಬದಲಾಯಿಸಿ]

ಮೊಸಳೆ ಗ್ರಾಮ ಅಥವಾ ಮೊಸಳೆಹೊಸಹಳ್ಳಿ, ಹಾಸನ ತಾಲ್ಲೂಕಿನ ಆಕರ್ಷಕ ನೈಸರ್ಗಿಕ ದೃಶ್ಯಾವಳಿ ನಡುವೆ ಇರುವ ಒಂದು ಸಣ್ಣ ಕೊಪ್ಪಲು. ಎರಡು ಅನನ್ಯ ದೇವಾಲಯಗಳು ಅದರ ಶ್ರೀಮಂತ ವಾಸ್ತುಶಿಲ್ಪದ ಮೌಲ್ಯವನ್ನು ಪ್ರವಾಸಿಗರನ್ನು ಸೆಳೆಯುತ್ತಿದೆ.

ಇತರೆ ಆಕರ್ಷಣೆ[ಬದಲಾಯಿಸಿ]

ದೇವಾಲಯದ ಸುತ್ತಲು, ದೇವ ದೇವತೆಗಳ ಚಿತ್ರಗಳನ್ನು ಗೋಡೆಗಳ ಮೇಲೆ ಕಾಣಬಹುದು. ಸರಸ್ವತಿ, ಉಗ್ರ-ನರಸಿಂಹ, ಕಾಳಿಂಗಮರ್ಧನ, ಮದನಿಕ, ಅಪ್ಸರಾ ಮತ್ತು ಗಿರಿಧರ ವಿಗ್ರಹಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಪ್ರವಾಸಿಗರನ್ನು ಗಮನ ಸೆಳೆಯಲು ದೇವಾಲಯದ ಹೊರ ಗೋಡೆಗಳ ಮೇಲೆ ಕೆತ್ತನೆಗಳನ್ನು ಅಂದವಾಗಿ ಜೋಡಿಸಲ್ಪಟ್ಟಿವೆ. ಪ್ರತಿ ಹೊಯ್ಸಳ ದೇವಸ್ಥಾನದ ಹಾಗೆ ಹುಲಿ-ಸಲಾ ಒಳಗೊಂಡ ಲಾಂಛನ ಕೆತ್ತಲಾಗಿದೆ. ಇದರ ಮುಂದೆ ಸೊಗಸಾದ ಗೋಪುರ, ಬಳ್ಳಿ, ತೋರಣಗಳು, ಕಿಟಕಿಗಳು, ಫಲಕಗಳು ಮತ್ತು ಕಂಬಗಳು ಬಹಳ ಆಕರ್ಷಕವಾಗಿ ದೇವಾಲಯದ ಸೊಬಗು ಹೆಚ್ಚಿಸುತ್ತದೆ.

ಸಂರಕ್ಷಣೆ[ಬದಲಾಯಿಸಿ]

ಈ ದೇವಾಲಯಗಳನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸಂರಕ್ಷಿತ ಸ್ಠಳಗಳು ಮತ್ತು ಉಳಿವಿಕೆಗಳ ಕಾಯ್ದೆ ೧೯೫೮ರ ಅಡಿ ಸಂರಕ್ಷಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆ, ಬೆಂಗಳೂರು ವೃತ್ತ, ಕರ್ನಾಟಕ, ಇದರ ನಿರ್ವಹಣೆ ಕೆಲಸವನ್ನು ಮಾಡುತ್ತಿದೆ. ದೇವಾಲಯದ ಒಳಗೆ ಛಾಯಾಗ್ರಹಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಚಿತ್ರಗಳು [೩][ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]