ಕಡೇ ಶಿವಾಲಯ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಡೇ ಶಿವಾಲಯ ದೇವಸ್ಥಾನ[ಬದಲಾಯಿಸಿ]

ಸ್ಥಳ ಪರಿಚಯ[ಬದಲಾಯಿಸಿ]

ಶ್ರೀ ಕಡೇ ಶಿವಾಲಯ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ‘ಕಡೇಶ್ವಾಲ್ಯ’ ಗ್ರಾಮದಲ್ಲಿದೆ. ಮೊಗರ್ನಾಡು ಮಾಗಣೆಗೆ ಸೇರಿದ ಈ ಸ್ಥಳವು ‘ನರಸಿಂಹ ಕ್ಷೇತ್ರ’ವೆಂದು ಪ್ರಸಿದ್ಧಿಯಾಗಿದೆ. ದಕ್ಷಿಣ ಕನ್ನಡದ ಉಪ್ಪಿನಂಗಡಿಯನ್ನು ‘ದಕ್ಷಿಣ ಕಾಶಿ’ಯೆಂದೂ ‘ಗಯಾಪದ ಕ್ಷೇತ್ರ’ವೆಂದೂ ಕರೆಯುತ್ತಾರೆ. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಸಹಸ್ರ ಲಿಂಗೇಶ್ವರನೂ ನರಸಿಂಹ ಸ್ವಾಮಿಯೂ ಜೊತೆಯಾಗಿರುವರು ಎಂದು ‘ಗಯಾಪದ ಕ್ಷೇತ್ರ ಮಹಾತೆ’್ಮ ಯಲ್ಲಿ ಬರೆದಿದೆ. ಕಡೇ ಶಿವಾಲಯದ ಬಳಿ ಶಿವಲಿಂಗವೂ ನರಸಿಂಹ ಲಿಂಗವೂ ಜೊತೆಯಾಗಿರುವುದು ಇದಕ್ಕೆ ಆಧಾರವಾಗಿದೆ. ಈ ನರಸಿಂಹ ಕ್ಷೇತ್ರದ ಆದಿಸ್ಥಳ ಉಪ್ಪಿನಂಗಡಿ, ಕೊನೆಯು ಈ ನರಸಿಂಹ ದೇವಾಲಯ. ಶಿವ ಕ್ಷೇತ್ರದ ವಿಸ್ತೀರ್ಣವು ಹೀಗೆ ಉಪ್ಪಿನಂಗಡಿಯಿಂದ ಈ ದೇವಾಲಯದವರೆಗೆ ಹಬ್ಬಿದೆ. ಆದ ಕಾರಣ ಈ ಕ್ಷೇತ್ರವನನ್ನು ಕಡೇಶಿವಾಲಯವೆಂದು ತಿಳಿಯುವರು’ ಎಂಬುದಾಗಿ ನರಸಿಂಹ ಸ್ವಾಮಿಯು ಪರಶಿವನೊಡನೆ ಹೇಳಿದ ಮಾತು ‘ಗಯಾಪದ' ಕ್ಷೇತ್ರದಲ್ಲಿ ಕಂಡು ಬರುತ್ತದೆ.[೧]

ಇತಿಹಾಸ[ಬದಲಾಯಿಸಿ]

ಈ ಕಡೇಶಿವಾಲಯದ ಸ್ಥಳ ಪುರಾಣವನ್ನು ತಿಳಿಸುವ ‘ಕಡೇ ಶಿವಾಲಯ ಮಹಾತ್ಮೆ’ ಯೆಂಬುದು ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಸನತ್ಕುಮಾರ ಸಂಹಿತೆಯಲ್ಲಿರುವ ಒಂದು ಭಾಗ. ‘ನರಸಿಂಹ ಕ್ಷೇತ್ರ ಮಹಿಮೆ’ ಎಂದು ಕರೆಯಲ್ಪಡುವ ಈ ಪುರಾನ ಭಾಗವು ಆ ಸ್ಥಳವು ಹೇಗೆ ‘ಕಡೇ ಶಿವಾಲಯ’ ಅಥವಾ ‘ಅಂತ್ಯ ಶಿವಾಲಯ’ ಎಂಬ ಹೆಸರನ್ನು ಪಡೆಯಿತು ಎಂಬುವುದನ್ನು ತಿಳಿಸುತ್ತದೆ. ‘ಕಡೇ ಶಿವಾಲಯ ಮಹಾತ್ಮೆ’ಯಲ್ಲಿ ಬರುವಂತೆ ನರಸಿಂಹ ದೇವಾಲಯವನ್ನು ಕಟ್ಟಿಸಿದವನು ಪಶ್ಚಿಮ ಸಮುದ್ರ ತೀರದಲ್ಲಿರುವ ಮಂಗಳಾಪುರವನ್ನು ಆಳುತ್ತಿದ್ದ ಲೋಕಾದಿತ್ಯನ ಮಗನಾದ ವೀರಬಾಹು ಎಂಬ ರಾಜನು. ತಾನು ಮಾಡಿದ ಪಾತಕದ ಪ್ರಾಯಶ್ಚಿತ್ತವಾಗಿ ತನ್ನ ತೋಳನ್ನು ಕತ್ತರಿಸಿಕೊಂಡು ಬಂಗಾರದ ತೋಳನ್ನು ಹೊಂದಿದ್ದ ಆತನು ಮುಂದೆ ದೇವಾಲಯವನ್ನು ಕಟ್ಟಿಸಿ ಬಾಹುವನ್ನು ಪಡೆದು ‘ಸುಬಾಹು’ ಎನಿಸಿದನು. ಅಲ್ಲದೆ ಅನಂತಾಡಿಯಲ್ಲಿ ಶಾಂಡಲ್ಯ ಎಂಬ ಮಹಾಯೋಗಿಯು ಬ್ರಹ್ಮನಿಂದ ಅನುಗ್ರಹಿಸಲ್ಪಟ್ಟ ಲಕ್ಷ್ಮೀನರಸಿಂಹ ಸಾಲಿಗ್ರಾಮವನ್ನು ಪೂಜಿಸಿ ಈ ದೇವಾಲದ ಬಳಿಯೇ ನರಸಿಂಹ ಸ್ವಾಮಿಯನ್ನು ಪ್ರತ್ಯಕ್ಷ ಮಾಡಿಕೊಂಡುದು. ಅದೂ ಅಲ್ಲದೆ ಹುಲಿ, ಮೊದಲಾದ ಅನೇಕ ಪ್ರಾಣಿಗಳ ರೂಪಗಳನ್ನು ಧರಿಸಿದ ಅರುವತ್ತು ಸಾವಿರ ಖಲಯೋಗಿನಿಯರು ಶಿವನನ್ನೇ ಪತಿಯಾಗಿ ಪಡೆಯಬೇಕೆಂದು ತಪಸ್ಸಾನ್ನಾಚರಿಸಿ ಅವನನ್ನು ಪೀಡಿಸಲು ನರಸಿಂಹನು ಉಪಾಯಾಂತರವಾಗಿ ರಕ್ಷಿಸಿ ಶಿವಲಿಂಗದಲ್ಲಿ ಒಂದಾದುದು ಇವೆಲ್ಲ ಆ ಮಹಾತ್ಮೆಯಿಂದ ತಿಳಿದುಬರುತ್ತದೆ.

ನರಸಿಂಹ ಕ್ಷೇತ್ರ ಮಹಿಮೆ[ಬದಲಾಯಿಸಿ]

ಸೂತ ಪುರಾಣಿಕರು ನೈಮಿಷಾರಣ್ಯದಲ್ಲಿ ಶೌನಕಾದಿ ಋಷಿಗಳಿಗೆ ಅನೇಕ ಪುರಾಣ ಇತಿಹಾಸಗಳ ಕಥೆಗಳನ್ನು ಹೇಳುತ್ತಾರೆ. ಆ ಋಷಿಗಳಾದರೋ ಅವುಗಳಲ್ಲಿ ಜಿನುಗುತ್ತಿರುವ ಹರಿಕಥಾಮೃತವನ್ನು ಸವಿದು ಸವಿದು ಮತ್ತೂ ತೃಪ್ತಿ ಹೊಂದದಾದರು. ಒಮ್ಮೆ ಆ ಋಷಿಗಳು ಸೂತ ಪುರಾಣಿಕರೊಡನೆ ‘ವೇದಾಂತ ಪುರಾಣ ಇತಿಹಾಸ ಎಲ್ಲವನ್ನೂ ಬಲ್ಲ ತಾವುಗಳು ಬಹು ವಿಶೇಷವೂ ಪುಣ್ಯದಾಯಕವೂ ಆದ ಪರಶುರಾಮ ಸೃಷ್ಟಿಯ ಚರಿತ್ರೆಯನ್ನು ನಮಗೆ ತಿಳಿಸಿಕೊಡುವ ಕೃಪೆ ಮಾಡಬೇಕು. ಅಲ್ಲಿರುವ ಪುಣ್ಯಕ್ಷೇತ್ರ ಹಾಗೂ ತೀರ್ಥಗಳ ಮಹಿಮಾ ವಿಶೇಷಗಳನ್ನು ನಮಗೆ ತಿಳಿಸಿಕೊಡಬೇಕು’ ಎಂದು ಪ್ರಾರ್ಥಿಸುತ್ತಾರೆ. ಆ ಸಂದರ್ಭ ಸ್ಕಂದಪುರಾಣಂತರ್ಗತವಾದ ಈ ಕಡೇಶಿವಾಲಯದ ಮಹಾತ್ಮೆಯನ್ನು ಹೀಗೆ ತಿಳಿಯಪಡಿಸುತ್ತಾನೆ. “ಬಹು ಪುಣ್ಯಪ್ರಮಾವದುದು ಪರಶುರಾಮ ಸೃಷ್ಟಿ, ಇದು ಪಶ್ಚಿಮ ಘಟ್ಟದಿಂದ ಅರಬೀ ಸಮುದ್ರದವರೆಗೆ ವ್ಯಾಪಿಸಿದೆ. ಇದರಲ್ಲಿ ನೇತ್ರಾವತಿ ಎಂಬ ಹೆಸರಿನ ಪುನ್ಯ ನದಿಯೊಂದು ಹರಿಯುತ್ತಿದೆ. ಇದರ ಚರಿತತ್ರೆಯನ್ನು ಕೇಳಿದವರ ಪಾತಕವೆಲ್ಲ ನಾಶವಾಗುವುದರಲ್ಲಿ ಸಂದೇಹವಿಲ್ಲ. ಈ ನೇತ್ರಾವತಿ ನದಿಯ ಮನೋಹರವಾದ ದಡದಲ್ಲಿ ಶ್ರೀಮನ್ನಾರಾಯಣನು ವಾಸಿಸುತ್ತಿದ್ದಾನೆ. ಉಪ್ಪಿನಂಗಡಿಗೆ ‘ಗಯಾಪದ’ವೆಂಬ ಹೆಸರಿದೆ. ಅಲ್ಲಿಂದ ತೊಡಗಿ ಮುಂದೆ ನೇತ್ರಾವತಿಯು ಸಮುದ್ರವನ್ನು ಸೇರುವವರೆಗಿನ ಸ್ಥಳವೆಲ್ಲ ಪುಣ್ಯಕರವಾಗಿದ್ದು ದೇವತೆಗಳಿಂದಲೂ ಋಷಿಗಳಿಂದಲೂ ಸೇವಿಸಲ್ಪಡುತ್ತಿದೆ. ಅದರಲ್ಲೂ ಮುಖ್ಯವಾಗಿ ನರಸಿಂಹ ಕ್ಷೇತ್ರವೆಂಬ ಪುಣ್ಯಸ್ಥಳವು ಸರ್ವಜನಸಾಮಾನ್ಯವಾಗಿ ಸ್ತುತ್ಯವಾಗಿದೆ. ಹಿರಣ್ಯಕಶಿಪು ಎಂಬ ದುಷ್ಟ ರಾಕ್ಷಸನನ್ನು ಕೊಂದ ನರಸಿಂಹ ಸ್ವಾಮಿಯ ಮಹಿಮೆ ಅದ್ಭುತವಾದದ್ದು’ ಎಂದು ಹೇಳಲು ಋಷಿಗಳು ತಡೆದು ಹೀಗೆಂದರು-‘ ಉಪ್ಪಿನಂಗಡಿಯಿಂದ ನರಸಿಂಹ ಸ್ವಾಮಿಯ ಕ್ಷೇತ್ರ ಇರುವಲ್ಲಿವರೆಗಿನ ನೇತ್ರಾವತಿ ನದಿಯ ದಡಭಾಗವೆಲ್ಲ ಪೂರ್ಣವಾಗಿ ಶಿವ ಕ್ಷೇತ್ರವೆಂದು ನೀವು ಹೇಳಿದ್ದೀರಿ, ನರಸಿಂಹ ಸ್ವಾಮಿ ಕ್ಷೇತ್ರಕ್ಕೆ ಶಿವಾಲಯ ಎಂಬ ಹೆಸರು ಹೇಗೆ ಬಂತು? ಶ್ರೀ ಹರಿಗೆ ಶಿವ ಎಂಬ ಹೆಸರು ಬರಲು ಕಾರಣವಾದರೂ ಏನು? ಅದನ್ನೀಗ ಸವಿಸ್ತಾರವಾಗಿ ನನಗೆ ತಿಳಿಸಿಕೊಡುವ ಕೃಪೆ ಮಾಡಬೇಕು. “ ಅದನ್ನು ಕೇಳಿದ ಸೂತನು ಪ್ರಸನ್ನನ್ನಾಗಿ ಹಿಂದೆ ಶಿವಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯಿಂದ ಸನತ್ಕುಮಾರ ಋಷಿಗೆ ಹೇಳಲ್ಪಟ್ಟಂತೆಯೆ ಆ ನರಸಿಂಹ ಸ್ವಾಮಿಯ ಕಥೆಯನ್ನು ಶೌನಕಾದಿ ಋಷಿಗಳಿಗೆ ಹೀಗೆಂದು ಹೇಳಿದನು. “ ಸನತ್ಕುಮಾರನು ಸುಬ್ರಹ್ಮಣ್ಯ ಸ್ವಾಮಿಯೊಡನೆ ‘ ನರಸಿಂಹ ಸ್ವಾಮಿ ಕ್ಷೇತ್ರಕ್ಕೆ ಶಿವಾಲಯವೆಂಬ ಹೆಸರು ಬಂದ ರಹಸ್ಯವೇನು? ಎಂದು ಪ್ರಶ್ನಿಸಲು ಸುಬ್ರಹ್ಮಣ್ಯ ಹೀಗೆಂದು ಆ ಕಥೆಯನ್ನು ಹೇಳುತ್ತಾನೆ. ಬಹುಕಾಲದ ಹಿಂದೆ ಎಂದರೆ ರಥಂತರ ಕಲ್ಪದಲ್ಲಿ ಯುಗಾವೃತ್ತಿಯಾಯಿತು. ಆ ತ್ರೇತಾಯುಗದಲ್ಲಿ ನರಸಿಂಹ ಸ್ವಾಮಿಯು ಪಾತಾಳದಿಂದ ಭೂವಿಗೆ ಬಂದು ಪರಶಿವನ ಮನೋಬೀಷ್ಟವನ್ನು ಪೂರೈಸಿ ಅವನನ್ನು ಯೋಗಿನಿಯರ ಪೀಡೆಯಿಂದ ಪಾರುಗೊಳಿಸಿದನು. ಸಕಲ ಲೋಕಗಳ ಹಿತದೃಷ್ಟಿಯಿಂದ ನಾನು ಹೇಳುತ್ತಿರುವ ಕಥೆಯನ್ನು ನೀನೀಗ ಚಿತ್ತವಿಟ್ಟು ಕೇಳು ಸುರಸಿದ್ದರೇ ಮೊದಲಾದ ಪುಣ್ಯಪುರುಷರಿಂದ ಸೇವಿಸಲ್ಪಡುವ ಸುಂದರ ಸಹ್ಯಾದ್ರಿ ಶಿಖರ ಅದು ಸರ್ವ ಪುಣ್ಯ ತೀರ್ಥಗಳ ಆಕರ , ಬಗೆ, ಬಗೆಯ ತರುಲತೆಗಳಿಂದ ಕೂಡಿ ಅದು ಮನೋಹರವಾಗಿತ್ತು. ಹಿಂದೆ ಅಲ್ಲಿ ಸಿಂಹಾನನೆ ವ್ಯಾಘ್ರನನೆ ಮೊದಲಾದ ಅರವತ್ತ ನಾಲ್ಕು ಸಾವಿರ ಮಂದಿ ಯೋಗಿನಿಯರು ಪರಶಿವನ್ನು ಕುರಿತು ಬಹುಕಾಲದವರೆಗೆ ಕಠಿಣವಾದ ತಪಸ್ಸನ್ನು ಮಾಡಿದರು. ಆಗ ಶಿವ ಭೃತ್ಯರಾದ ಪ್ರಮಥ ಗಣಗಳು ಅವರನ್ನು ಬಗೆಬಗೆಯಾಗಿ ಪೀಡಿಸಿ ಅವರ ತಪಸ್ಸಿಗೆ ವಿಘ್ನವುಂಟು ಮಾಡಿದರು. ಆಗ ಅವರು ತಡೆಯಲಾರದೆ ಬೇರೊಂದು ಶಿಖರವನ್ನೇರಿ ಮತ್ತೂ ತೀವ್ರವಾದ ತಪಸ್ಸನ್ನು ಮಾಡಿದರು. ತಮಗೆ ತೊಂದರೆಯನ್ನುಂಟು ಮಾಡಿದ ಪ್ರಮಥರ ಮೇಲೆ ಸಿಟ್ಟುಗೊಳ್ಳುತ್ತ ಶಿವನನ್ನೇ ಪತಿಯನ್ನಾಗಿ ಪಡೆಯಬೇಕೆಂಬ ದೃಢ ಸಂಕಲ್ಪ ಮಾಡಿಕೊಂಡವರಾಗಿ ಯಾವ ಆತಂಕವೂ ಇಲ್ಲದೆ ನೂರು ವರ್ಷಗಳ ಕಾಲ ತಪಸ್ಸನ್ನು ಮಾಡಿದರು. ತಮ್ಮ ದೇಹದೊಳಗಿನ ವಾಯು ನಾಡಿಗಳನ್ನು ನಿಗ್ರಹಿಸಿ ನಾಸಿಕಾಗ್ರದಲ್ಲಿ ದೃಷ್ಟಿ ನೆಟ್ಟವರಾಗಿ ಆಹರ ಪಾನೀಯಾಗಳನ್ನು ತ್ಯಜಿಸಿ, ದಿವಸದಲ್ಲೊಮ್ಮೆ ಬೆಂಕಿಯ ಕಣಗಳನ್ನು ಉಣ್ಣುತ್ತ ಹಟಯೋಗದಲ್ಲಿ ಮುಂದುವರೆಯುತ್ತಾ ತಪಸ್ಸು ಮಾಡಿದರು. ಯೋಗನಿಶ್ಚಲರಾಗಿ ತಮ್ಮ ಹೃದಯ ಕಮಲದಲ್ಲಿ ಪರಶಿವನನ್ನು ಪ್ರತಿಷ್ಠಾಪಿಸಿ ಮಾನಸ ಪೂಜೆಯನ್ನು ಮಾಡಿ ಕೃತಾರ್ಥರಾದರು. ಪರಮಾನಂದಗೊಂಡು ತುಂಬಿದ ಮನಸ್ಸಿನಿಂದ ಸ್ತುತಿಸಿ ಹಾಡಿ ಕುಣಿದರು ಆಗ ಆಶರೀರವಾಣಿಯೊಂದು ಗುಡುಗಿನ ಧ್ವನಿಯಂತೆ ಗಂಭೀರವಾಗಿ ಕೇಳಿಸಿತು-“ ಯೋಗಿನಿಯರು ಶಿವನ ಅಭಯ ವಾಕ್ಯವನ್ನು ಕೇಳಿಯೂ ಕೇಳಿಸದವರಂತೆ ವರ್ತಿಸಿ ಮತ್ತಷ್ಟು ಕಠಿಣವಾದ ತಪಸ್ಸನ್ನು ಮಾಡಿದರು. ಯೋಗ ಆರಾಧನೆಗಳು ಸಮಾಪ್ತಿಯಾಯಿತು. ಅವರು ಬಿಡದೆ ವೀಣೆ, ಕೊಳಲು, ಮೃದಂಗ, ಮೊದಲಾದವುಗಳನ್ನು ಬಾರಿಸಿಯೋ, ಕೈ ಚಪ್ಪಾಳೆ ತಟ್ಟಿಯೋ ಅಟ್ಟಹಾಸ ಕೊಟ್ಟೋ ಭಯಂಕರ ಧ್ವನಿಯನ್ನೆಬ್ಬಿಸಿದರು. ಹೀಗೆ ಬಹುಕಾಲ ಕಳೆಯಲು ಶಂಕರನು ಪ್ರಸನ್ನನ್ನಾಗಿ ಅವರ ಮುಂದೆ ಪ್ರತ್ಯಕ್ಷನಾದನು. “ ಪರಮ ಭಕ್ತೆಯರಾದ ಯೋಗಿನಿಯರೇ ನಿಮಗೆ ಮಂಗಳವಾಗಲಿ ನಿಮ್ಮ ನಿಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ಕೇಳಿಕೊಳ್ಳಿರಿ ಕರುಣಿಸುತ್ತೇನೆ” ಎಂದನು. ಆಗ ಯೋಗಿನಿಯರು “ ಎಲೆ ದೇವ ನಮಗೆ ಇಷ್ಟವಾದುದನ್ನು ಕರುಣಿಸುವೆ ಎಂದೆಯಲ್ಲಾ? ಹಾಗಾದರೆ ಕೇಳು ಒಂದನೆಯದಾಗಿ ಎಲ್ಲಿ ಯಾರಿಂದಲೇ ಆಗಲಿ ನಮ್ಮ ಒಗ್ಗಟ್ಟು ಮುರಿದುಹೋಗದಂತಹ ವರವನ್ನು ದಯಪಾಲಿಸು, ಎರಡನೆಯದಾಗಿ ಲೋಕೇಶ್ವರನಾದ ನಿನ್ನನ್ನೇ ಪತಿಯನ್ನಾಗಿ ವರಿಸಬೇಕೆಂದು ಸಂಕಲ್ಪಿಸಿದ ನಮಗೆ ಪತಿಬಿಕ್ಷೆಯನ್ನು ಕೊಡು” ಎಂದು ಹೇಳಿದರು. ಶಂಭುವು ಅವರ ಮನದಿಂಗಿತವನ್ನು ತಿಳಿದು ಬೇರೆ ದಾರಿಯಿಲ್ಲದೆ ಗಂಭೀರವಾದ ಸ್ವರದಿಂದ ‘ತಥಾಸ್ತು’ ಎಂದು ಹೇಳಿ ಅದೃಶ್ಯನಾಗಿ ಸ್ವಸ್ಥಾನವನ್ನು ಸೇರಿಕೊಂಡನು.

ಉಲ್ಲೇಖ[ಬದಲಾಯಿಸಿ]

ಶ್ರೀ ಲಕ್ಮೀ ನರಸಿಂಹ ಸುಪ್ರಭಾತ ಸ್ತೋತ್ರಂ

  1. https://www.shridharmasthala.org/holy-river-nethravathi/