ಸುಬ್ರಮಣಿಯನ್ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಡಾ. ಸುಬ್ರಮಣಿಯನ್ ಸ್ವಾಮಿ
ಡಾ. ಸುಬ್ರಮಣಿಯನ್ ಸ್ವಾಮಿ
ವಯಕ್ತಿಕ ಮಾಹಿತಿಗಳು
ಜನನ: 15 ಸೆಪ್ಟೆಂಬರ್, 1939
ಜನಿಸಿದ ಸ್ಥಳ: ಮೈಲಾಪುರ್,ಬ್ರಿಟಿಷ್ ಮದ್ರಾಸ್ ಸಂಸ್ಥಾನ
(ಈಗಿನ ತಮಿಳುನಾಡಿನ ಚೆನ್ನೈ ಬಳಿ)
ರಾಜಕೀಯ ಪಕ್ಷ: ಭಾರತೀಯ ಜನತಾ ಪಕ್ಷ (2013 - ಇಂದಿನ ವರೆಗೆ )
ಜನತಾ ಪಕ್ಷ (1977 - 2013)
ಜನ ಸಂಘ್ (1974 -1976)
ಪತ್ನಿ: ರೋಕ್ಸ್ನಾ ಸ್ವಾಮಿ (ವಿವಾಹ .1966)
ಮಕ್ಕಳು: ಗೀತಾಂಜಲಿ ಶರ್ಮಾ
ಸುಹಾಸಿನಿ ಹೈದರ್
ವಿಧ್ಯಾಭ್ಯಾಸ : ಹಿಂದೂ ಕಾಲೇಜ್, ದೆಹಲಿ ವಿಶ್ವ ವಿದ್ಯಾಲಯ (ಗಣಿತ ಶಾಸ್ತ್ರ ದಲ್ಲಿ ಬಿ ಎಸ್ಸಿ),
ಭಾರತೀಯ ಸಂಖ್ಯಾ ಶಾಸ್ತ್ರ ಸಂಸ್ಥೆ (ಸಂಖ್ಯಾ ಶಾಸ್ತ್ರದಲ್ಲಿ ಎಂ ಎಸ್ಸಿ),
ಹಾರ್ವರ್ಡ್ ವಿಶ್ವ ವಿದ್ಯಾಲಯ (ಪಿ ಹೆಚ್ ಡಿ)
ಧರ್ಮ : ಹಿಂದು
ಜಾಲತಾಣ : swamy39.blogspot.com
ಜನತಾ ಪಾರ್ಟಿ ಅಧ್ಯಕ್ಷರಾಗಿ
1990 – 2013
ರಾಜ್ಯ ಸಭಾ ಸದಸ್ಯರಾಗಿ
ಅಧಿಕಾರ: 26 ಏಪ್ರಿಲ್ 2016ರಿಂದ ಆರಂಭ
ಕ್ಷೇತ್ರ : ಉನ್ನತ ವ್ಯಕ್ತಿತ್ವದ ಆಧಾರದ ಮೇಲೆ ಶಿಫಾರಸು
ಅಧಿಕಾರ : 1988 - 1994
ಕ್ಷೇತ್ರ : ಉತ್ತರ ಪ್ರದೇಶ
ಅಧಿಕಾರ : 1974 - 1976
ಕ್ಷೇತ್ರ : ಉತ್ತರ ಪ್ರದೇಶ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ
ಅಧಿಕಾರ: 10 ನವೆಂಬರ್ 1991 - 21 ಜೂನ್ 1991
ಪ್ರಧಾನ ಮಂತ್ರಿ : ಚಂದ್ರ ಶೇಖರ್ ಸಿಂಗ್
ಕೇಂದ್ರ ಕಾನೂನು ಸಚಿವರಾಗಿ (ಹೆಚ್ಚುವರಿ ಖಾತೆ )
ಅಧಿಕಾರ: 10 ನವೆಂಬರ್ 1991 - 21 ಜೂನ್ 1991
ಪ್ರಧಾನ ಮಂತ್ರಿ : ಚಂದ್ರ ಶೇಖರ್ ಸಿಂಗ್
ಲೋಕ ಸಭಾ ಸದಸ್ಯರಾಗಿ
ಅಧಿಕಾರ: 1998 - 1999
ಕ್ಷೇತ್ರ :ಮದುರೈ, ತಮಿಳುನಾಡು.
ಅಧಿಕಾರ: 1977 - 1984
ಕ್ಷೇತ್ರ : ಮದುರೈ ಈಶಾನ್ಯ ವಿಭಾಗ.

ಡಾII ಸುಬ್ರಮಣಿಯನ್ ಸ್ವಾಮಿ (ತಮಿಳು : சுப்பிரமணியன் சுவாமி) ಭಾರತದ ಜನಪ್ರಿಯ ರಾಜಕಾರಣಿಗಳಲ್ಲೊಬ್ಬರು ಹಾಗೂ ಖ್ಯಾತ ಅರ್ಥಶಾಸ್ತ್ರಜ್ನರು. ಇವರು ತಮಿಳುನಾಡಿನ ಮದ್ರಾಸ್ ನ(ಈಗಿನ ಚೆನ್ನೈ) ಸಮೀಪದ ಮೈಲಾಪುರ್ ಎಂಬಲ್ಲಿ ಸೆಪ್ಟಂಬರ್ ೧೫, ೧೯೩೯ರಂದು ಜನಿಸಿದರು. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ನೋಬೆಲ್ ಪುರಸ್ಕೃತರಿಬ್ಬರ ಜೊತೆ ಮಾಡಿದ ವಿಷಯ ಮಂಡನೆಗಾಗಿ ೧೯೬೪ರಲ್ಲಿ ಡಾಕ್ಟರೇಟ್ ಪದವಿ ಪಡೆದ ಇವರು, ಹಲವು ವರ್ಷಗಳ ಕಾಲ ಹಾರ್ವರ್ಡ್ ವಿವಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತರಾಗುವವರೆಗೆ ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಜಯಪ್ರಕಾಶ್ ನಾರಾಯಣರಿಂದ ಸ್ಥಾಪಿತವಾಗಿದ್ದ ಜನತಾ ಪಕ್ಷದ ಕೊನೆಯ ಅಧ್ಯಕ್ಷರಾಗಿದ್ದ ಇವರು ಆಗಸ್ಟ್ ೧೧,೨೦೧೩ರಂದು ಜನತಾ ಪಕ್ಷವನ್ನು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳಿಸಿದರು.

ಭಾರತದ ಯೋಜನಾ ಆಯೋಗದಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಸ್ವಾಮಿ ಹಿಂದೆ ಕೇಂದ್ರದಲ್ಲಿ ಚಂದ್ರಶೇಖರ್ ಸಿಂಗ್ ರವರ ಸಂಪುಟದಲ್ಲಿ ಒಬ್ಬ ಸಚಿವರಾಗಿದ್ದರು. ಮೂಲತಹ ಅರ್ಥ ಶಾಸ್ತ್ರಜ್ಞ ರಾದ ಸ್ವಾಮಿ ವಿಶ್ವ ಸಂಸ್ಥೆಯ 'ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿ ' ವಿಚಾರದಲ್ಲಿ ವರದಿ ಸಿದ್ಧಪಡಿಸುವ ಸಮಿತಿಯಲ್ಲಿಯೂ ಒಬ್ಬ ಸದಸ್ಯರಾಗಿದ್ದರು. ಹೊಸ ರಫ್ತು ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾಮಿ ಭಾರತೀಯ ವ್ಯಾಪಾರ ವಹಿವಾಟು ಅಭಿವೃದ್ಧಿಯಲ್ಲಿ ಮುಖ್ಯ ಬದಲಾವಣೆ ತಂದಿದ್ದಾರೆ. ಲೇಖಕರೂ ಆಗಿರುವ ಸ್ವಾಮಿ ಯವರು ಭಾರತದೊಂದಿಗೆ ಚೀನಾ, ಪಾಕಿಸ್ತಾನ ಹಾಗು ಇಸ್ರೇಲ್ ದೇಶಗಳ ವಿದೇಶಾಂಗ ನೀತಿಗಳ ಬಗ್ಗೆ ವಿಸ್ಮೃತ ಅಧ್ಯಯನ ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ.

ಸ್ವಾಮಿ ವೈಯಕ್ತಿಕ ಜೀವನ[ಬದಲಾಯಿಸಿ]

ಸ್ವಾಮಿ ಜನಿಸಿದ್ದು ತಮಿಳುನಾಡಿನ ಚೆನ್ನೈ ಬಳಿ ಇರುವ ಮೈಲಾಪುರ ಎಂಬಲ್ಲಿ ಒಂದು ತಮಿಳು ಬ್ರಾಹ್ಮಣ ಕುಟುಂಬದಲ್ಲಿ. ಇವರ ಪೂರ್ವಜರು ಮದುರೈ ಪ್ರದೇಶದಿಂದ ಬಂದು ಇಲ್ಲಿ ನೆಲೆಸಿದ್ದರವರಾಗಿದ್ದರು. ಇವರ ತಂದೆ ಸೀತಾರಾಮನ್ ಸುಬ್ರಮಣಿಯನ್ ಒಬ್ಬ ಸರ್ಕಾರಿ ಅಧಿಕಾರಿ. ನಾಲ್ಕು ಜನ ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ಸ್ವಾಮಿಯ ಅಣ್ಣ ರಾಮ ಸುಬ್ರಮಣಿಯನ್ ಹಾಗು ಇಬ್ಬರು ತಂಗಿಯರು. ಸೀತಾರಾಮನ್ ಸುಬ್ರಮಣಿಯನ್ ಭಾರತೀಯ ಸಂಖ್ಯಾಶಾಸ್ತ್ರ ಸೇವೆಯಲ್ಲಿ ಅಧಿಕಾರಿಯಾಗಿ ಹಾಗು ದೆಹಲಿಯಲ್ಲಿರುವ ಕೇಂದ್ರೀಯ ಸಂಖ್ಯಾ ಶಾಸ್ತ್ರ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಅಂಕಿಅಂಶಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಆರು ತಿಂಗಳ ಮಗುವಾಗಿದ್ದಾಗಲೇ ಅವರ ಕುಟುಂಬದವರು ತಮಿಳುನಾಡಿನಿಂದ ದೆಹಲಿಗೆ ಬಂದು ನೆಲೆಸುತ್ತಾರೆ. ತಮಿಳು ಮೂಲದವರಾಗಿದ್ದ ಕಾರಣ ಆಗಿನ ತಮಿಳುನಾಡಿನ ಘಟಾನುಘಟಿ ಗಳಾದ ಕೆ.ಕಾಮರಾಜ್, ಸಿ.ರಾಜಗೋಪಾಲಾಚಾರಿ ಹಾಗು ಎಸ್.ಸತ್ಯಮೂರ್ತಿ ಇನ್ನು ಮುಂತಾದವರು ಸೀತಾರಾಮನ್ ಸುಬ್ರಮಣಿಯನ್ ಅವರನ್ನು ಭೇಟಿಯಾಗುವುದು ಸರ್ವೇ ಸಾಮಾನ್ಯವಾಗಿತ್ತು.

ಸ್ವಾಮಿ ದೆಹಲಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಹಿಂದೂ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಂಖ್ಯಾ ಶಾಸ್ತ್ರದಲ್ಲೂ ಒಂದು ಸ್ನಾತಕೋತ್ತರ ಪದವಿ ಪಡೆದಿರುವ ಸ್ವಾಮಿ ಅದನ್ನು ಅಭ್ಯಸಿಸಿದ್ದು ಕೊಲ್ಕತ್ತಾದ ಭಾರತೀಯ ಸಂಖ್ಯಾ ಶಾಸ್ತ್ರ ಸಂಸ್ಥೆಯಲ್ಲಿ. ಮುಂದೆ ಜಗತ್ತಿನ ಅತಿ ಶ್ರೇಷ್ಠ ವಿಶ್ವವಿದ್ಯಾಲಯ ಗಳಲ್ಲಿ ಒಂದಾದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ೧೯೬೫ರಲ್ಲಿ ಅರ್ಥ ಶಾಸ್ತ್ರ ವಿಷಯವಾಗಿ ಪ್ರಭಂದ ಮಂಡಿಸಿ ಪಿ ಹೆಚ್ ಡಿ ಪಡೆದರು. ೧೯೬೩ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವಾಗಲೇ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಕಾರ್ಯದರ್ಶಿಗಳ ಒಕ್ಕೂಟದಲ್ಲಿ ಉಪ ಹಣಕಾಸು ವ್ಯವಹಾರದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ವಾಮಿ ಹಾರ್ವರ್ಡ್ ವಿವಿಯಲ್ಲಿ ಲೋವೆಲ್ ಹೌಸ್ ನಲ್ಲಿ ಭೋಧಕ ಸಿಬ್ಬಂದಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಇದರ ನಡುವೆಯೇ ಅದೇ ವಿವಿಯಲ್ಲಿ ಗಣಿತ ಶಾಸ್ತ್ರದಲ್ಲಿ ಸಂಶೋದನಾ ವಿದ್ಯಾರ್ಥಿಯಾಗಿದ್ದ ಭಾರತೀಯ ಪಾರ್ಸಿ ಜನಾಂಗದ ಕುಟುಂಬದ ರೋಕ್ಸ್ನಾ ಎಂಬ ಹುಡುಗಿಯ ಗೆಳೆತನವಾಗುತ್ತದೆ, ಗೆಳೆತನ ಪ್ರೇಮಕ್ಕೆ ತಿರುಗಿ ಮುಂದೆ ಮದುವೆಯಾಗಿ ದಂಪತಿಗಳಾಗುತ್ತಾರೆ.

ಮುಂದೆ ರೊಕ್ಷ್ನಾ ಸ್ವಾಮಿ ಗಣಿತ ಶಾಸ್ತ್ರವನ್ನು ತೊರೆದು ಕಾನೂನು ಅಭ್ಯಸಿಸಿ ಸುಪ್ರೀಂ ಕೋರ್ಟ್ ನಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ವಾಮಿ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳು ಗೀತಾಂಜಲಿ ಶರ್ಮಾ ಮಾಜಿ ಭಾರತ ಸರ್ಕಾರದ ಕಾರ್ಯದರ್ಶಿಗಳು ಹಾಗು ನಿವೃತ್ತ ಐ ಎ ಎಸ ಅಧಿಕಾರಿ E.A.S ಶರ್ಮಾ ಅವರ ಸೊಸೆ. ಇನ್ನು ಚಿಕ್ಕ ಮಗಳು ಸುಹಾಸಿನಿ ಹೈದರ್ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಮುಖ್ಯ ಸಂಪಾದಕಿ ಹಾಗು ಮಾಜಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಹೈದರ್ ಅವರ ಸೊಸೆ.

ಸ್ವಾಮಿ ರಾಜಕೀಯ ಜೀವನ[ಬದಲಾಯಿಸಿ]

ಸ್ವಾಮಿ ಯವರ ನಿಜವಾದ ರಾಜಕೀಯ ಜೀವನ ಆರಂಭವಾಗಿದ್ದು ಭಾರತೀಯ ತಂತ್ರಜ್ಞಾನ ಸಂಸ್ಥೆ(IIT)ಯಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಉಚ್ಚಾಟಿಸಿದ ನಂತರ. ಸ್ವಾಮಿ ಯವರು ಕೊಟ್ಟ ಆರ್ಥಿಕ ಉದಾರೀಕರಣದ ನೀತಿ ನಿಯಮಗಳು ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸಂಪೂರ್ಣ ವಿಫಲವಾದ ಕಾರಣವೇ ಸ್ವಾಮಿ ಯವರನ್ನು IITಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ವೃತ್ತಿಯಿಂದ ಉಚ್ಚಾಟಿಸಲು ಮುಖ್ಯ ಕಾರಣ. ಅರ್ಥಿಕ ಉದಾರೀಕರಣ ನೀತಿಯಲ್ಲಿ ದೇಶ ಬೆಳವಣಿಗೆ ಹೊಂದುವುದು ಸಾಧ್ಯವಿದೆ ಎನ್ನುವುದು ಸ್ವಾಮಿ ಯವರ ನಿಲುವಾದರೆ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಸೊವಿಯಟ್ ಒಕ್ಕೂಟ ಮಾದರಿಯ ಆರ್ಥಿಕ ನೀತಿಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದರು. ಆದರೆ ಅಂತಹ ಆರ್ಥಿಕತೆಯಲ್ಲಿ ಬೆಳವಣಿಗೆ ಅತೀ ಕಡಿಮೆ ಇರುತ್ತದೆ, ಇದು ದೇಶದ ಸರ್ವಾಂಗೀಣ ಬೆಳವಣಿಗೆಯ ಮೇಲೆ ಪ್ರಭಾವ ಬೀರಿ ಸಂಪೂರ್ಣ ಆರ್ಥಿಕತೆಯನ್ನು ಕುಂಠಿತಗೊಳಿಸುತ್ತದೆ ಎಂಬ ವಾದವನ್ನು ಸ್ವಾಮಿ ಮಂಡಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇಂದಿರಾ ಗಾಂಧಿ "ಸ್ವಾಮಿ ಒಬ್ಬ ಸಂತಾ ಕ್ಲಾಸ್ ನಂತೆ ನಿಜವಾಗಿರದ ಯೋಚನೆಗಳನ್ನಷ್ಟೇ ಹೊತ್ತು ತಿರುಗುವ ಮನುಷ್ಯ" ಎಂದು ಜರೆದಿದ್ದರು. ಇನ್ನೂ ಮುಂದುವರೆದು ಸ್ವಾಮಿ ಯವರನ್ನು IITಯಿಂದ ಉಚ್ಚಾಟಿಸುವಂತೆ ಅಧಿಕಾರಿಗಳಿಗೆ ಆಜ್ಞೆ ಮಾಡುತ್ತಾರೆ. ಮುಂದೆ ಅದೇ ಸಂಬಂಧಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಸ್ವಾಮಿ ಸತತ ೨೨ ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ IITಯಿಂದ ತಮ್ಮನ್ನು ಉಚ್ಚಾಟಿಸಿದ್ದು ನಿಯಮಾವಳಿಗಳಿಗೆ ವಿರುದ್ಧವಾಗಿದ್ದು ಎಂದು ಸಾಧಿಸಿದರು[೧]. ಕೊನೆಗೆ ಆ ಸಂಪೂರ್ಣ ೨೨ ವರ್ಷದ ಸ್ವಾಮಿಯವರ ಸಂಬಳ ವನ್ನು IITಯು ಸ್ವಾಮಿ ಯವರಿಗೆ ತಲುಪಿಸಬೇಕು ಎಂದು ಕೋರ್ಟ್ IITಗೆ ನಿರ್ದೇಶನ ನೀಡಿತು. ಆದರೆ ಅಷ್ಟರಲ್ಲಿ ಆ ಉಚ್ಚಾಟನೆಗೆ ಮುಖ್ಯ ಕಾರಣರಾಗಿದ್ದ ಇಂದಿರಾ ಗಾಂಧಿ ಬದುಕಿರಲಿಲ್ಲ.ದೇಶದಲ್ಲಿ ಆಗ್ಗೆ ಮಂಚೂಣಿಯಲ್ಲಿದ್ದ ನಾಯಕಿ ಇಂದಿರಾ ಗಾಂಧಿ ವಿರೋಧ ಕಟ್ಟಿಕೊಂಡು IITಯಿಂದ ಹೊರಬಿದ್ದ ಸ್ವಾಮಿ ಯವರನ್ನು ಸ್ವಾಗತಿಸಿದ್ದು ಬಲ ಪಂಥೀಯ ವಿಚಾರಗಳಿಂದ ಪ್ರಭಾವಿತವಾಗಿದ್ದ ಜನಸಂಘ್ ಪಕ್ಷ.

ಅದೇ ಪಕ್ಷದಿಂದ ಉತ್ತರ ಪ್ರದೇಶ ಕ್ಷೇತ್ರದಿಂದ ಚುನಾಯಿತರಾಗಿ ರಾಜ್ಯಸಭೆಗೂ ಸ್ವಾಮಿ ಪದಾರ್ಪಣೆ ಮಾಡಿದರು. ಇಂದಿರಾಗಾಂಧಿಗೆ ಕೇಂದ್ರದಲ್ಲಿ ಪ್ರಬಲ ಎದುರಾಳಿಗಳ ಕೊರತೆ ಎದುರಿಸುತ್ತಿದ್ದ ಕಾರಣ ಹಾಗು ಸ್ವಾಮಿ ಅದಾಗಲೇ ಇಂದಿರಾ ಗಾಂಧಿ ವಿರೋಧ ಕಟ್ಟಿಕೊಂಡಿದ್ದ ಹಿನ್ನೆಲೆ ಅರಿತು ಸ್ವಾಮಿಯವರೇ ಇಂದಿರಾ ಗಾಂಧಿ ಪ್ರ್ರಬಲ ವಿರೋಧವೊಡ್ಡಬಲ್ಲರು ಎಂದು ಅರಿತು ಜನಸಂಘ್ ಪಕ್ಷ ರಾಜ್ಯಸಭೆಯಲ್ಲಿ ಸ್ವಾಮಿ ಇರುವಂತೆ ನೋಡಿಕೊಂಡಿತು. ೧೯೭೪ ರಿಂದ ೧೯೯೯ ರವರೆವಿಗೂ ಸಂಸತ್ ನಲ್ಲಿ ಒಂದಲ್ಲ ಒಂದು ಹುದ್ದೆಯನ್ನು ಅಲಂಕರಿಸಿಯೇ ಇದ್ದರು ಸ್ವಾಮಿ, ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿ ಉತ್ತರ ಪ್ರದೇಶ ರಾಜ್ಯದಿಂದ ಚುನಾಯಿತರಾದರೆ ಇನ್ನೆರಡು ಬಾರಿ ಲೋಕಸಭಾ ಕ್ಷೇತ್ರಗಳಲ್ಲಿ ನೇರವಾಗಿ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿ ಕೇಂದ್ರ ಮಂತ್ರಿಯ ಪದವಿಯನ್ನು ಅಲಂಕರಿಸಿದ್ದರು. ಇದೀಗ ಮೂರನೇ ಬಾರಿ ರಾಜ್ಯಸಭೆ ಪ್ರವೇಶಿಸಿರುವ ಸ್ವಾಮಿ ಉನ್ನತ ವ್ಯಕ್ತಿತ್ವದ ಆಧಾರದ ಮೇಲೆ ರಾಷ್ಟ್ರ ಪತಿಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಸಂಸತ್ ನಲ್ಲಿ ಸ್ವಾಮಿ ಎರಡು ಬಾರಿ ರಾಜ್ಯಸಭೆಗೆ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದಾರೆ, ಲೋಕಸಭೆಯಲ್ಲಿ ಎರಡು ಬಾರಿ ಮುಂಬಯಿ ಈಶಾನ್ಯ ಭಾಗವನ್ನು ಪ್ರತಿನಿಧಿಸಿದ್ದಾರೆ ಹಾಗು ತಮಿಳುನಾಡಿನ ಮದುರೈ ಅನ್ನು ಪ್ರತಿನಿಧಿಸಿದ್ದಾರೆ.

ಇಂದಿರಾ ಗಾಂಧಿ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ ಸ್ವಾಮಿ ಅಮೇರಿಕಾ ಗೆ ಹೋಗಿ ಮಿಚಿಗನ್ ನಲ್ಲಿ ಉಳಿದರು. ೧೯೭೬ರಲ್ಲಿ ಸ್ವಾಮಿ ಯವರಿಗೆ ಸರ್ಕಾರದಿಂದ ಅರೆಸ್ಟ್ ವಾರಂಟ್ ಹೊರಡಿಸಲಾಯಿತು. ಸ್ವಾಮಿ ಸಂಸತ್ ಕಾರ್ಯ ಕಲಾಪಗಳಲ್ಲಿ ಭಾಗಿ ಯಾಗಲು ಅಮೆರಿಕೆಯಿಂದ ಹೊರಟು ಬಂದರು. ಬಂಧನ ವಾರಂಟ್ ಸುದ್ದಿ ತಿಳಿದು ಸ್ವಾಮಿ ಸಂಸತ್ ಸಭೆಯನ್ನು ಮುಂದೂಡಿದ ಸಂಧರ್ಭದಲ್ಲಿ ಭಾರತದಿಂದ ಹೊರ ಹೊರಟು ಹೋಗಲು ಪ್ರಯತ್ನಿಸಿದರೂ ಎಂಬುದಾಗಿ ಸುದ್ದಿಗಳಿವೆ. ಮುಂದೆ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ ಸ್ವಾಮಿ ೨೦೧೩ ರವರೆಗೂ ಜನತಾ ಪಾರ್ಟಿಯ ಅಧ್ಯಕ್ಷ ರಾಗಿದ್ದರು.

೧೯೯೦ - ೯೧ ಕೇಂದ್ರ ಕಾನೂನು ಹಾಗು ವಾಣಿಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿರುವ ಸ್ವಾಮಿ ಅದೇ ಸಮಯದಲ್ಲಿ ಯೋಜನಾ ಆಯೋಗದ ಸದಸ್ಯರೂ ಆಗಿದ್ದರು. ಚಂದ್ರಶೇಖರ್ ಪ್ರಧಾನ ಮಂತ್ರಿಗಳಾಗಿದ್ದ ಆ ಸಂಧರ್ಬದಲ್ಲಿ ಸ್ವಾಮಿ ಭಾರತದ ಆರ್ಥಿಕ ನವೀಕರಣಕ್ಕಾಗಿ ವಿಸ್ಮೃತ ಅಧ್ಯಯನ ಮಾಡಿ ನೀಲಿ ನಕ್ಷೆಯನ್ನು ಪ್ರಧಾನಿಗೆ ಕೊಟ್ಟು ಅದರ ಅನುಷ್ಠಾನಕ್ಕೆ ಶಿಫಾರಸ್ಸು ಮಾಡಿದ್ದರು. ಆದರೇ ಆ ಶಿಫಾರಸ್ಸು ೧೯೯೧ ರಲ್ಲಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಜಾರಿಗೆ ತಂದರು. ೧೯೯೪ - ೧೯೯೬ ರವರೆಗೂ ಸ್ವಾಮಿ ಅಂತರಾಷ್ಟ್ರೀಯ ವ್ಯಾಪಾರ ಮತ್ತು ಕಾರ್ಮಿಕ ಗುಣಮಟ್ಟದ ಆಯೋಗದ ಛೇರ್ಮನ್ ಆಗಿ ಅಧಿಕಾರದಲ್ಲಿದ್ದರು. ಹೀಗೆ ೨೦೧೩ ರವರೆವಿಗೂ ಜನತಾ ಪಕ್ಷದಲ್ಲಿ ಇದ್ದ ಸ್ವಾಮಿ ೧೧ ಆಗಸ್ಟ್ ೨೦೧೩ ರಲ್ಲಿ ತಾವೂ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮೂಲಕ ಜನತಾ ಪಕ್ಷವನ್ನು ಬಿ ಜೆ ಪಿ ಯೊಂದಿಗೆ ವಿಲೀನಗೊಳಿಸಿದರು. need ref

ಸ್ವಾಮಿಯವರಿಂದ ನ್ಯಾಯಾಲಯದಲ್ಲಿ ದಾಖಲಾದ ಕೇಸುಗಳು[ಬದಲಾಯಿಸಿ]

ಭ್ರಷ್ಟರನ್ನು ಹಾಗು ಜನ ವಿರೋಧಿ ಸರ್ಕಾರದ ನಡೆಗಳ ಹಿಂದಿರುವ ರಹಸ್ಯಗಳನ್ನು ಬಯಲಿಗೆಳೆಯುವಲ್ಲಿ ನಿಷ್ಣಾತರಾಗಿರುವ ಸ್ವಾಮಿ ಯು ಪಿ ಎ ಸರ್ಕಾರದ ಹಗರಣ, ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅಕ್ರಮ ಆಸ್ತಿ ಹಗರಣ, ರಾಮಸೇತು ವಿವಾದ, ಸೋನಿಯಾ ಗಾಂಧಿ ಪದವಿ ವಿಚಾರ, ಕಾಂಗ್ರೇಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ ಹಗರಣ ಮುಂತಾದ ಬಹುಕೋಟಿ ಹಗರಣಗಳನ್ನು ವಿಸ್ಮೃತ ಅಧ್ಯಯನ ಮಾಡಿ ಸೂಕ್ತ ದಾಖಲೆಗಳೊಂದಿಗೆ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.

ಮಾನನಷ್ಟ ಸಂಬಂಧಿ ಕಾನೂನುಗಳನ್ನು ಸಂವಿಧಾನದಿಂದ ಕೈ ಬಿಡುವಂತೆ ಅರ್ಜಿ[ಬದಲಾಯಿಸಿ]

ಅಕ್ಟೋಬರ್ ೨೦೧೪ ರಲ್ಲಿ ಸ್ವಾಮಿ ಸಂವಿಧಾನದಲ್ಲಿರುವ ಭಾರತೀಯ ದಂಡ ಸಂಹಿತೆ ಸೆಕ್ಷನ್ ೪೯೯ ಹಾಗು ೫೦೦ ರಲ್ಲಿರುವ ಕ್ರಿಮಿನಲ್ ಮಾನನಷ್ಟ ವನ್ನು ಅಸಂವಿಧಾನಿಕವೆಂದು ಪರಿಗಣಿಸಿ ಸಂವಿಧಾನದಿಂದ ಕೈ ಬಿಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಜಯಲಲಿತಾ ವಿರುದ್ಧ ದೂರು[ಬದಲಾಯಿಸಿ]

೧೯೯೬ ರಲ್ಲಿ ಜಯಲಲಿತಾ ಬಳಿ ಇರುವ ಅಕ್ರಮ ಆಸ್ತಿಗಳ ಜಾಡು ಹಿಡಿದ ಸ್ವಾಮಿ ಅದೇ ಸಂಬಂಧ ಕೋರ್ಟ್ ನಲ್ಲಿ ಕ್ರಿಮಿನಲ್ ದೂರು ನೀಡಿದರು. ಇದು ತಮಿಳುನಾಡು ಸಂಬಂಧಿ ಕೇಸು ಆಗಿದ್ದ ಕಾರಣ ಅದನ್ನು ಚೆನ್ನೈ ನಲ್ಲಿರುವ ತಮಿಳುನಾಡು ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ತಮಿಳುನಾಡು ಭಾಗದಲ್ಲಿ ಜಯಲಲಿತಾ ಪ್ರಭಾವಿ ರಾಜಕಾರಣಿಯಾಗಿರುವ ಪಾರದರ್ಶಕ ನ್ಯಾಯದಾನ ಪ್ರಕ್ರಿಯೆಗೆ ತೊಡಕಾಗಬಹುದು ಎನ್ನುವ ಮತ್ತೊಂದು ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು. ಅರ್ಜಿಯನ್ನು ಪರಿಗಣಿಸಿ ಕೇಸನ್ನು ಹತ್ತಿರದ ಬೆಂಗಳೂರಿನಲ್ಲಿರುವ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಸುಧೀರ್ಘ ವಿಚಾರಣೆಯ ನಂತರ ಜಯಲಲಿತಾ ಗೆ ನಾಲ್ಕು ವರ್ಷಗಳ ಕಾಲ ಸೆರೆ ವಾಸ ಶಿಕ್ಷೆಯಾಯಿತು. ಮತ್ತೊಮ್ಮೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯದಾಗ ಸಾಕ್ಷಿಗಳ ಕೊರತೆಯಿಂದ ನಾಲ್ಕು ವಾರ್ಷಗಳ ಕಾಲದ ಸೆರೆವಾಸ ಶಿಕ್ಷೆ ರದ್ದಾಗಿ ಜಯಲಲಿತಾರಿಗೆ ಜಾಮೀನು ದೊರೆಯಿತು. ಇದೀಗ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಈಗಾಗಲೇ ಜಯಲಲಿತಾ ಅವರು ಮರಣ ಹೊಂದಿದ್ದಾರೆ.

ದೂರವಾಣಿ ಕದ್ದಾಲಿಕೆ ಪ್ರಕರಣದ ಆರೋಪ[ಬದಲಾಯಿಸಿ]

ಮಾಜಿ ಗುಪ್ತಚರ ಇಲಾಖೆಯ ಮುಖ್ಯಸ್ಥರೊಬ್ಬರು ದೂರ ಸಂಪರ್ಕ ಇಲಾಖೆಗೆ ಕರ್ನಾಟಕದ ಹೆಸರಾಂತ ರಾಜಕಾರಣಿಗಳ ಹಾಗು ಉದ್ಯಮಿಗಳ ದೂರವಾಣಿ ಕರೆಗಳನ್ನು ಕದ್ದಾಲಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಿ ಸ್ವಾಮಿ ಪತ್ರವೊಂದನ್ನು ಬಿಡುಗಡೆ ಮಾಡುತ್ತಾರೆ. ಬಹು ಚರ್ಚಿತ ಹಗರಣವಾಗಿ ತಿರ್ವು ಪಡೆದ ಈ ವಿಚಾರ ಕರ್ನಾಟಕದ ಆಗಿನ ಮುಖ್ಯಮತ್ರಿ ರಾಮಕೃಷ್ಣ ಹೆಗಡೆಯವರನ್ನು ಕುರ್ಚಿಯಿಂದ ಕೆಳಗಿಳಿಸಿತು. ೧೯೮೮ ರಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಬಲಿಯಾಗಿ ರಾಮಕೃಷ್ಣ ಹೆಗಡೆ ರಾಜಿನಾಮೆ ಕೊಡಲೇ ಬೇಕಾಯಿತು. ಅನಂತರ ೧೯೮೯ ಹಾಗು ೧೯೯೦ ರಲ್ಲಿ ರಾಮಕೃಷ್ಣ ಹೆಗಡೆ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಎರಡು ಕೇಸು ದಾಖಲಿಸಿದರು.

2ಜಿ ತರಂಗಾಂತರ ಹಗರಣ ಬಯಲು[ಬದಲಾಯಿಸಿ]

ನವೆಂಬರ್ ೨೦೦೮ರಲ್ಲಿ ಸ್ವಾಮಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಗೆ ಪತ್ರ ಬರೆದು ದೂರ ಸಂಪರ್ಕ ಸಚಿವರಾದ ಎ.ರಾಜಾ ಅವರು ೨ಜಿ ತರಂಗಾಂತರ ಹಗರಣದಲ್ಲಿ ಭಾಗಿಯಾಗಿರುವ ಕಾರಣ ಅವರ ಮೇಲೆ ಕಾನೂನಾತ್ಮಕ ಹೋರಾಟ ಮಾಡಲು ಅನುಮತಿ ಕೋರಿದರು. ಪ್ರಧಾನ ಮಂತ್ರಿ ಕಚೇರಿಯಿಂದ ಆ ಪತ್ರಕ್ಕೆ ಉತ್ತರ ಬಾರದೆ ಇದ್ದಾಗ ಸ್ವಾಮಿ ಖುದ್ದಾಗಿ ತಾವೇ ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣದ ಸಲುವಾಗಿ ಕೇಸು ದಾಖಲಿಸಿದರು. ದೂರಿನ ಅನ್ವಯ ತನಿಖೆಗಾಗಿ ಸುಪ್ರೀಂ ಕೋರ್ಟ್ ಕೇಂದ್ರೀಯ ತನಿಖಾ ದಳ(CBI) ಮುಖಾಂತರ ಸಂಬಂಧ ದಾಖಲೆಗಳ ಸಂಗ್ರಹ ಮಾಡಿತು. 2ಜಿ ತರಂಗಾಂತರ ಹರಾಜು ಪ್ರಕ್ರಿಯೆಯನ್ನು ರದ್ದು ಪಡಿಸಿ, ಸಚಿವ ಕಪಿಲ್ ಸಿಬಲ್ ಅವರನ್ನು ಹರಾಜು ಪ್ರಕ್ರಿಯೆಯಿಂದ ಹೊರಗಿಟ್ಟು ಮರು - ಹರಾಜು ಪ್ರಕ್ರಿಯೆ ನಡೆಸುವಂತೆ ಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.

೧೫ ಏಪ್ರಿಲ್ ೨೦೧೧ ರಂದು ೨೦೬ ಪುಟಗಳ ಸೋನಿಯಾ ಗಾಂಧಿ ಮೇಲಿನ ಆರೋಪಗಳ ಪಟ್ಟಿಯನ್ನು ಪ್ರಧಾನಿ ಸಿಂಗ್ ಗೆ ನೀಡಿ ಸೋನಿಯಾ ಗಾಂಧಿ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಅವಕಾಶ ಕೋರಿದರು. ಇಷ್ಟೇ ಅಲ್ಲದೆ ಸೋನಿಯಾ ಗಾಂಧಿ ಪಡೆದಿರುವ ಭಾರತದ ಪೌರತ್ವದಲ್ಲಿಯೂ ಕಾನೂನಾತ್ಮಕ ತೊಡಕುಗಳಿರುವುದನ್ನು ಪ್ರಶ್ನಿಸಿದರು. ೧೫ ಜನವರಿ ೨೦೦೮ ರಲ್ಲಿ ಆಗಿನ ಕೇಂದ್ರ ಗೃಹ ಮಂತ್ರಿ ಪಿ.ಚಿದಂಬರಂ ಪ್ರಧಾನಿ ಮನಮೋಹನ್ ಸಿಂಗ್ ಗೆ ಬರೆದಿದ್ದರು ಎನ್ನಲಾದ ಪತ್ರವನ್ನು ಒಳಗೊಂಡಂತೆ ಇನ್ನು ಹಲವಾರು ದಾಖಲೆಗಳನ್ನು ಕೋರ್ಟ್ ಗೆ ನೀಡಿ ಚಿದಂಬರಂ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೋರಿದರು. ಆರೋಪಿತರ ವಿರುದ್ಧ ಸ್ವಾಮಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರೂ ಸೂಕ್ತ ಸಾಕ್ಷ್ಯಾಧಾರಗಳನ್ನೂ ಒದಗಿಸಿರಲಿಲ್ಲವಾದ್ದರಿಂದ ಎಲ್ಲ ಆರೋಪಿಗಳಿಗೂ ಜುಲೈ ೨೦೧೨ರಲ್ಲಿ ಜಾಮೀನು ದೊರೆಯಿತು.

೩೧ ಜನವರಿ ೨೦೧೨ ರಂದು ಸ್ವಾಮಿ ಪ್ರಧಾನಿ ಕಾರ್ಯಾಲಯದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದೂರು ನೀಡಿದರು. ಯಾವುದೇ ಸಾರ್ವಜನಿಕ ಸೇವಾ ವಲಯದ ವ್ಯಕ್ತಿಗಳನ್ನು ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಒಳಪಡಿಸಲು ಅಥವಾ ಅವರ ವಿರುದ್ಧ ಕೋರ್ಟ್ ನಲ್ಲಿ ದೂರು ಸಲ್ಲಿಸಲು ಸಂಬಂಧಿತ ಸಾರ್ವಜನಿಕ ಪ್ರಾಧಿಕರಣಗಳು/ಸಂಸ್ಥೆಗಳು ಮೂರು ತಿಂಗಳ ವಾಯಿದೆಯೊಳಗೆ ಅನುಮತಿ ನೀಡಲೇ ಬೇಕು ಎಂದು ನಿರ್ದೇಶಿಸುವಂತೆ ಕೋರ್ಟ್ ನಲ್ಲಿ ಬೇಡಿಕೆ ಸಲ್ಲಿಸಿದರು. ಸ್ವಾಮಿ ಯವರ ಕೋರಿಕೆ ಮನ್ನಿಸಿದ ಅಪೆಕ್ಸ್ ಕೋರ್ಟ್ ಯಾವುದೇ ಸಾರ್ವಜನಿಕ ಸೇವಾ ವಲಯದ ಸಂಸ್ಥೆಯ ಮುಖ್ಯಸ್ಥರಾದವರು ತನ್ನ ಕೆಳಗಿನ ಸಾರ್ವಜನಿಕ ಸೇವಾ ವಲಯದ ವ್ಯಕ್ತಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲು ಯಾರಾದರೂ ಬಯಸಿ ಅನುಮತಿ ಕೇಳಿದರೆ ಅದಕ್ಕೆ ನಾಲ್ಕು ತಿಂಗಳ ವಾಯಿದೆಯೊಳಗೆ ಸೂಕ್ತ ಉತ್ತರ ನೀಡಬೇಕು. ಇಲ್ಲವಾದಲ್ಲಿ ನಾಲ್ಕು ತಿಂಗಳ ವಾಯಿದೆ ಮುಗಿದ ನಂತರ ಬಯಸಿದ ಅನುಮತಿ ಅಧೀಕೃತ ವಾಗಿ ಅನುಮತಿ ದೊರಕಿದೆ ಎಂದು ಮುಂದಿನ ಕಾನೂನು ಹೋರಾಟಗಳನ್ನು ಮುಂದುವರಿಸಬಹುದು ಎಂದು ತನ್ನ ತೀರ್ಪು ನೀಡಿತು. ಸುಪ್ರೀಂ ಕೋರ್ಟ್ ನಲ್ಲಿ ವಾದ ಪ್ರತಿವಾದಗಳು ನಡೆದ ನಂತರ 2ಜಿ ಹಗರಣದ ಪ್ರಮುಖ ಆರೋಪಿಗಳಾದ ದೂರ ಸಂಪರ್ಕ ಸಚಿವ ಎ.ರಾಜಾ ಹಾಗು ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾ ನಿಧಿ ಮಗಳು ಕನಿಮೋಳಿ ಮತ್ತು ಇನ್ನಿತರರಿಗೆ ಜೈಲು ಶಿಕ್ಷೆಯಾದ ಕಾರಣ ಕೆಲವು ದಿನಗಳ ಕಾಲ ಅವರು ತಿಹಾರ್ ಜೈಲಿನಲ್ಲಿ ಇರಬೇಕಾಯಿತು.

ನ್ಯಾಷನಲ್ ಹೆರಾಲ್ಡ್ ಹಗರಣ[ಬದಲಾಯಿಸಿ]

ಕಾಂಗ್ರೆಸ್ ಅಧ್ಯಕ್ಷೀಯ ಮನೆತನದವರಾದ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ 'ಅಸೋಸಿಯೇಟೆಡ್ ಜರ್ನಲ್ಸ್ ಪ್ರೈವೇಟ್ ಲಿಮಿಟೆಡ್' (ಎ ಜೆ ಪಿ ಎಲ್ ) ಎಂಬ ಹೆಸರಿನ ಸಾರ್ವಜನಿಕ ಕಂಪನಿಯೊಂದರ ಆಸ್ತಿಯನ್ನು ತಮ್ಮ ಖಾಸಗಿ ಕಂಪನಿ 'ಯಂಗ್ ಇಂಡಿಯಾ' ಹೆಸರಿನ ಮೂಲಕ ಪರಭಾರೆ ಮಾಡುವ ಮೂಲಕ ಸುಮಾರು ೨೦ ಕೋಟಿ ರುಪಾಯಿ ವಂಚನೆ ಎಸಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ನವೆಂಬರ್ ೧, ೨೦೧೩ ರಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು[೨][೩]. ಎ ಜೆ ಪಿ ಎಲ್ ಅನ್ನು ಯಂಗ್ ಇಂಡಿಯಾ ಕಂಪನಿ ಆಕ್ರಮಿಸಿಕೊಳ್ಳುವ ಮೂಲಕ 'ನ್ಯಾಷನಲ್ ಹೆರಾಲ್ಡ್' ಹಾಗೂ 'ಕ್ವಾಮಿ ಅವಾಜ್' ಎಂಬ ಎರಡು ಪತ್ರಿಕೆಗಳ ಪ್ರಕಟಣೆ ಹಕ್ಕು ಮತ್ತು ಎ ಜೆ ಪಿ ಎಲ್ ದೆಹಲಿ ಹಾಗು ಉತ್ತರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಪಡೆಯಿತು ಎಂದು ದೂರಿನಲ್ಲಿ ನಮೂದಿಸಿದ್ದಾರೆ. ಇನ್ನು ಮುಂದುವರೆದು ಪತ್ರಿಕಾ ವಿಚಾರವಾಗಿ ವಿನಿಮಯವಾದ ಸ್ಥಳದಲ್ಲಿ ಸದ್ಯ ಒಂದು ಪಾಸ್ ಪೋರ್ಟ್ ಕಚೇರಿ ನಡೆಯುತ್ತಿದ್ದು ಅದರಿಂದ ಮಾಸಿಕ ಲಕ್ಷಾಂತರ ರುಪಾಯಿ ಆದಾಯ ಉತ್ಪತ್ತಿಯಾಗುತ್ತಿದೆ ಎನ್ನುವ ಅಂಶವನ್ನು ಸೇರಿಸಲಾಗಿದೆ.

ಪ್ರಕರಣ ಆಳಕ್ಕಿಳಿದಂತೆ ಹೊಸ ಹೊಸ ವಿಷಯಗಳನ್ನು ಸ್ವಾಮಿ ತೆರೆದಿಡುತ್ತಾ ಹೋದರು. ೨೦೧೧ರ ಫೆಬ್ರವರಿ ೨೬ ರಂದು ಎ ಜೆ ಪಿ ಎಲ್ ಯಾವುದೇ ಆಧಾರವಿಲ್ಲದೆ ಹಾಗು ಬಡ್ಡಿ ರಹಿತವಾಗಿ ೯೦೦ ಕೋಟಿ ರುಪಾಯಿಗಳನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ(AICC) ವರ್ಗಾಯಿಸುತ್ತದೆ. ಇದೆ ವಿಚಾರವನ್ನು ಹಿಡಿದು ಸ್ವಾಮಿ ಈ ಹಗರಣ ಆದಾಯ ತೆರಿಗೆ ಅಧಿನಿಯಮದ ೧೯೬೧ರ ಪರಿಚ್ಛೇದ ೨೬೯ಟಿ ಸ್ಪಷ್ಟ ಉಲ್ಲಂಘನೆ, ಆ ಕಾಯಿದೆಯ ಪ್ರಕಾರ ಯಾವ ರಾಜಕೀಯ ಪಕ್ಷಗಳು ಹಣ ಪಡೆಯಬೇಕಾದರೂ ಪಾಲಿಸುವ ಎಲ್ಲ ನಿಯಮಗಳನ್ನು 'ನ್ಯಾಷನಲ್ ಹೆರಾಲ್ಡ್' ವಿಚಾರದಲ್ಲಿ ಗಾಳಿಗೆ ತೂರಲಾಗಿದೆ ಎಂದು ಅಪಾದಿಸುತ್ತಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನವೀಕರಣಕ್ಕಾಗಿ ಅಷ್ಟು ದೊಡ್ಡ ಮೊತ್ತದ ಸಾಲ ಪಡೆದಿರುವುದೇ ಪರಂತು ಅಲ್ಲಿ ಯಾವ ವ್ಯಾವಹಾರಿಕ ಹಿತಾಸಕ್ತಿಗಳು ಇಲ್ಲವೆಂದು ಉತ್ತರ ನೀಡುತ್ತದೆ. ಕೋಟ್ಯಾಂತರ ರುಪಾಯಿ ಹಗರಣದಲ್ಲಿ ಕಾಂಗ್ರೆಸ್ ಪಕ್ಷವೇ ಸಿಲುಕಿದ್ದರಿಂದ ಸ್ವಾಮಿ ಕಾಂಗ್ರೆಸ್ ಪಕ್ಷದ ಮಾನ್ಯತೆ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಕೋರಿಕೊಳ್ಳಲು ತೀರ್ಮಾನಿಸುತ್ತಾರೆ, ಆದರೆ ಚುನಾವಣಾ ಆಯೋಗ ಈ ವಿಚಾರವನ್ನು ತನಿಖೆಗೆ ವಹಿಸುತ್ತದೆ. 'ನ್ಯಾಷನಲ್ ಹೆರಾಲ್ಡ್' ಹಗರಣ ಕುರಿತಾಗಿ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ಹಲವಾರು ಬಾರಿ ನಡೆದಿವೆ, ಆಪಾದಿತರ ವಿರುದ್ಧ ಸಾಕ್ಷಿಗಳು ಪ್ರಬಲವಾಗಿರುವುದರಿಂದ ಪ್ರಕರಣದ ನ್ಯಾಯದಾನ ಪ್ರಕ್ರಿಯೆ ಎಲ್ಲರ ಕುತೂಹಲ ಕೆರಳಿಸಿದೆ.need ref

ಆರ್ಯ ಮತ್ತು ದ್ರಾವಿಡ ಜನಾಂಗಗಳ ಬಗ್ಗೆ ಸ್ವಾಮಿ ನಿಲುವು[ಬದಲಾಯಿಸಿ]

ಆರ್ಯರು ದ್ರಾವಿಡರು ಎಂಬ ವಿಚಾರವನ್ನು ಮೊದಲು ತೆಗೆದಿದ್ದು ಬ್ರಿಟೀಷರು. ೧೮೫೭ ರ ದಂಗೆಯ ವರೆವಿಗೂ ಹಿಂದೂ ಮತ್ತು ಮುಸ್ಲೀಂ ಗಳಿಗೆ ವಿರೋಧ ಉಂಟಾಗುವಂತೆ ಮಾಡಬಹುದು ಎಂಬ ಅರಿವೂ ಕೂಡ ಬ್ರಿಟೀಷರಿಗೆ ಇರಲಿಲ್ಲ. ಅದಕ್ಕಿಂತಲೂ ಮುಂಚೆ ಮೂಲತಹ ಕಪ್ಪು ಹಾಗು ಮಿಶ್ರಿತ ವರ್ಣಗಳಲ್ಲಿದ್ದ ಭಾರತದ ದಕ್ಷಿಣ ಪ್ರಾಂತ್ಯದ ಜನರನ್ನು ದ್ರಾವಿಡರು ಎಂದು ಕರೆದರು. ಅದಕ್ಕೆ ಅವರು ಆರಿಸಿಕೊಂಡ ಪ್ರಬಲ ದಾಖಲೆ ಆದಿ ಶಂಕರಾಚಾರ್ಯರು ತಮ್ಮ ಗ್ರಂಥಗಳಲ್ಲಿ ನಮೂದಿಸಿರುವ 'ದ್ರಾವಿಡ' ಎಂಬ ಪದ. ಹೀಗೆ ದ್ರಾವಿಡರು ಎನಿಸಿಕೊಂಡ ಜನಾಂಗಕ್ಕೂ ಹಾಗು ಉತ್ತರ ಭಾರತದಲ್ಲಿ ಬಹುಶಃ ಶ್ವೇತ ವರ್ಣದವರಾಗಿರುವ ಜನಾಂಗಕ್ಕೂ ಭೇದ ಕಲ್ಪಿಸುವುದನ್ನು ರೂಢಿ ಮಾಡಿಕೊಳ್ಳತೊಡಗಿದರು. ಉತ್ತರ ಭಾರತದ ಜನ ಮೂಲತಹ ಆರ್ಯರೆಂದು ಹಾಗು ಅವರು ಏಷ್ಯಾ ಖಂಡದ ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದವರೆಂದೂ, ಅವರು ಇಲ್ಲಿಗೆ ಬರುವ ಸಮಯದಲ್ಲಿ ಭಾರತ ಪೂರ್ತಿ ದ್ರಾವಿಡರ ಅಧೀನವಾಗಿತ್ತು ಆರ್ಯರು ದ್ರಾವಿಡರ ಮೇಲೆ ನಿರ್ದಾಕ್ಷಿಣ್ಯ ದಾಳಿ ಮಾಡಿ ದಕ್ಷಿಣ ದಿಕ್ಕಿಗೆ ಓಡಿಸಿ ಅಲ್ಲಿನ ಪ್ರದೇಶಗಳಲ್ಲಿ ತಮ್ಮದೇ ಸಾರ್ವಭೌಮತ್ವ ಘೋಷಿಸಿಕೊಂಡು ಬೀಡು ಬಿಟ್ಟರು ಎಂದು ನವಿರಾದ ಹೊಸ ಸುಳ್ಳು ಇತಿಹಾಸವನ್ನು ಸೃಷ್ಟಿ ಮಾಡಿದರು. ಆದರೆ ಸತ್ಯಾಂಶವೇ ಬೇರೆ ಯಾಗಿದ್ದು ಆದಿ ಶಂಕರರು ದಕ್ಷಿಣದಿಂದ ಉತ್ತರದೆಡೆಗೆ ಪ್ರಯಾಣಿಸುವ ಸಂಧರ್ಭದಲ್ಲಿ ತಮ್ಮ ಗುರುತಿನ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರು "ನಾನೊಬ್ಬ ದ್ರಾವಿಡ ಶಿಶು" ಎಂದೇ ಉತ್ತರಿಸುತ್ತಿದ್ದರಂತೆ. ದ್ರಾವಿಡ ಎಂಬ ಪದವು 'ತ್ರ' ಮತ್ತು 'ವಿದ್' ಎಂಬ ಎರಡು ಪದಗಳ ಸಂಯೋಜನೆಯಿಂದ ಉತ್ಪತ್ತಿಯಾಗಿರುವ ಪದವಾಗಿದ್ದು, ಅದರ ಅರ್ಥ 'ಮೂರು ಸಮುದ್ರಗಳು ಕೂಡುವ ಭೂಬಾಗ' ಎಂದಾಗಿದೆ. ಇನ್ನು ದಕ್ಷಿಣ ಭಾರತೀಯರ ವರ್ಣದ ವಿಚಾರವಾಗಿ ಗಮನ ಹರಿಸಿದರೆ ದಕ್ಷಿಣ ಭಾರತ ಭೂಮಧ್ಯ ರೇಖೆಗೆ ಹತ್ತಿರವಿರುವುದರಿಂದ ಸೂರ್ಯನ ಕಿರಣಗಳು ಉತ್ತರ ಭಾರತಕ್ಕಿಂತಲೂ ದಕ್ಷಿಣ ದಲ್ಲಿ ನೇರವಾಗಿರುತ್ತವೆ. ಈ ಕಾರಣದಿಂದ ಕಾಲಾಂತರದಲ್ಲಿ ಇಲ್ಲಿನ ಜನಗಳ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ್ದು ಅದಕ್ಕೆ ವಿಶೇಷ ಗಮನವೇನು ಕೊಡುವ ಅವಶ್ಯಕತೆ ಇಲ್ಲ ಎನ್ನವುದು ಸ್ವಾಮಿ ವೈಜ್ಞಾನಿಕ ಅಭಿಪ್ರಾಯ.(ಉಲ್ಲೇಖದ ಅಗತ್ಯವಿದೆ)

ಉಲ್ಲೇಖಗಳು[ಬದಲಾಯಿಸಿ]

  1. "ಸುಬ್ರಮಣಿಯನ್ ಸ್ವಾಮಿ ಅವರ ದೆಹಲಿ IIT ದಾವೆ ಕುರಿತ ಕಲಾಪಕ್ಕೆ ದೆಹಲಿ ಹೈ ಕೋರ್ಟ್ ಅಸ್ತು: ಜೀ ನ್ಯೂಸ್ ಆಂಗ್ಲ ವರದಿ ತಾಣ".
  2. "ನ್ಯಾಷನಲ್ ಹೆರಾಲ್ಡ್ ಹಗರಣದ ಕುರಿತಾಗಿ ರೆಡ್ಡಿಫ್ ತಾಣದ ಆಂಗ್ಲ ವರದಿ".
  3. "ನ್ಯಾಷನಲ್ ಹೆರಾಲ್ಡ್ ಹಗರಣ ಕುರಿತು ಮೇಲ್ನೋಟ ಮಾಹಿತಿ, 'ದಿ ಇಂಡಿಯನ್ ಎಕ್ಸ್ಪ್ರೆಸ್' ಆಂಗ್ಲ ವೃತ್ತಪತ್ರಿಕೆಯ ವರದಿ".