ಬೀದರ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬೀದರ್ - ಕರ್ನಾಟಕರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ; ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಭಾಲ್ಕಿ, ಹುಮನಾಬಾದ್, ಬೀದರ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, ಬಿಜಾಪುರ, ಗೋಲ್ಕೊಂಡ, ಗುಲ್ಬರ್ಗ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ್ ಜಿಲ್ಲೆಯು ಬಸವಕಲ್ಯಾಣದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. ಬಸವಕಲ್ಯಾಣದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ.


ಪರಿವಿಡಿ

[ಬದಲಾಯಿಸಿ] ಆಕರ್ಷಣೆಗಳು

ಬೀದರ್ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ. ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

[ಬದಲಾಯಿಸಿ] ಚರಿತ್ರೆ

ಚಾರಿತ್ರಿಕವಾಗಿ, ಬೀದರ್ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು ಬಸವಣ್ಣನವರ ಕಾಲದಲ್ಲಿ ಮತ್ತು ಬಹಮನಿ ಸುಲ್ತಾನರ ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. ರಾಷ್ಟ್ರಕೂಟರು, ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ ಬಸವಕಲ್ಯಾಣವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು ಬಿಜಾಪುರದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.

[ಬದಲಾಯಿಸಿ] ಭೌಗೋಳಿಕ

ಭೌಗೋಳಿಕವಾಗಿ ಬೀದರ್ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.

ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.

ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. ಬಸವಕಲ್ಯಾಣ ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ ಹಳ್ಳಿಖೇಡ ನಾಲಾ ಇವುಗಳು ಸಣ್ಣ ಹೊಳೆಗಳು.

[ಬದಲಾಯಿಸಿ] ಧರ್ಮ

ಬೀದರ ಜಿಲ್ಲೆಯಲ್ಲಿ ಲಿಂಗಾಯಿತ, ಕ್ರೈಸ್ತ, ಮುಸಲ್ಮಾನ ಮತ್ತು ನಾನಕ ಎಂಬ ನಾಲ್ಕು ಪ್ರಮುಖ ಧರ್ಮಗಳಿವೆ.

ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.

ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.

ಬೀದರ್ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.

ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.

ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.

ಬೀದರ್ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ್ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. ಬಸವಕಲ್ಯಾಣದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.

[ಬದಲಾಯಿಸಿ] ಕರಕುಶಲ ಕಲೆ

ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ್ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.


Karnataka-icon.jpg
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
"http://kn.wikipedia.org/wiki/%E0%B2%AC%E0%B3%80%E0%B2%A6%E0%B2%B0%E0%B3%8D" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು