ಔರಾದ
| ಔರಾದ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬೀದರ್ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 542 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
16,189 - /ಚದರ ಕಿ.ಮಿ. |
ಔರಾದ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಔರಾದ್ ಬೀದರ್ ಜಿಲ್ಲಾ ಕೇಂದ್ರದಿಂದ ಸು.೪೨ ಕಿ.ಮಿ.ದೂರದಲ್ಲಿದ್ದು, ರಾಜಧಾನಿ ಬೆಂಗಳೂರಿನಿಂದ ಸು.೭೧೨ ಕಿ.ಮಿ.ದೂರದಲ್ಲಿದೆ. ಔರಾದ ಪಟ್ಟಣದ ಮಧ್ಯಭಾಗದಲ್ಲಿ ಪುರಾತನ ಅಮರೇಶ್ವರ ದೇವಾಲಯವಿದ್ದು ಅದು ಸರಿಸುಮಾರು ೧೦ನೇ ಶತಮಾನದ ದೇವಾಲಯವೆಂದು ಹೇಳಲಾಗಿದೆ. ಔರಾದದ ಅಮರೇಶ್ಫರ ದೇವಾಲಯದಲ್ಲಿ ದೊರೆತ ತುಂಡು ಶಾಸನ ಹಾಗೂ ಅಮರೇಶ್ಫರ ಕನ್ಯಾ ಶಾಲೆಯಲ್ಲಿ ದೊರೆತ ಇನ್ನೊಂದು ಶಾಸನದ ಪ್ರಕಾರ ಹಿಂದಿನ ಅವರವಾಡಿಯೇ ಅಮರೇಶ್ವರವಾಡಿ,ಅಮರವಾಡಿ,ಅವರವಾಡಿ, ಅವರಾದಿ, ಅವರಾದ, ಔರಾದ ಎಂದು ಬದಲಾಗಿದೆ.
ಪ್ರಾಚೀನ ನಾಗರೀಕತೆ : ಹಳೆಯ ಮತ್ತು ಹೊಸ ಶಿಲಾಯುಗದಲ್ಲಿ ಈ ಭಾಗ ಜನರಿಂದ ವಾಸಿಸಲ್ಪಡುತ್ತಿತ್ತು ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಔರಾದ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಹಳೆಯ ಶಿಲಾಯುಗದ ಕಲ್ಲಿನ ಆಯುಧಗಳು, ಮಡಿಕೆಗಳು ದೊರೆತಿವೆ. ಆಹಾರದ ಬೇಟೆಗಾಗಿ ಆಗ ಮನುಷ್ಯ ಆಯುಧಗಳನ್ನು ಉಪಯೋಗಿಸುತ್ತಿದ್ದುದು ಹಾಗೂ ಅವುಗಳ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಮಡಿಕೆಗಳನ್ನು ಬಳಸಿರುತ್ತಾನೆ. ಹೀಗಾಗಿ ಈ ಭಾಗದಲ್ಲಿ ದೊರೆತ ಮಡಿಕೆಗಳ ತುಂಡುಗಳು ಆ ಶಿಲಾಯುಗದ ಅವಶೇಷಗಳೆಂದು ಸಂಶೋಧಕರು ಧೃಢಪಡಿಸಿರುತ್ತಾರೆ. ( ಡಾ.ಎಲ್.ಆರ್.ಕುಲಕರ್ಣಿ) ಮಧ್ಯ ಶಿಲಾಯುಗದ ಉಪಕರಣಗಳಾದ ಬೋರರ್ (ತೂತು ಮಾಡುವ ಆಯುಧ), ಬೈರಿಗೆ, ಸ್ಕೇಪರ್, ಪ್ಲೇಕ್ಗಳು (ಗಡಗಂಚಿ) ಮುಂತಾದವುಗಳು ಈ ಭಾಗದ ಔರಾದ, ಕಮಲನಗರ, ಸಂಗಮ, ಕೌಡಗಾಂವ್, ಮುಂಗನಾಳ, ವನಮಾರಪಳ್ಳಿ, ಮಮದಾಪುರ,ತೇಗಂಪೂರ, ಎಕಲಾರ, ಶೆಂಬೆಳ್ಳಿ, ನಾಗೂರು, ಬೆಳಕುಣಿ ಮುಂತಾದ ಪ್ರದೇಶಗಳಲ್ಲಿ ಸಿಕ್ಕಿವೆ. ( ಪುರಾತತ್ವ ಇಲಾಖೆಯ ಸಂಶೋಧನೆ)
ಔರಾದ ಹೆಸರಿನ ಉಗಮ : ಔರಾದದ ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನ ಹಾಗೂ ಅಮರೇಶ್ವರ ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿರುವ ಪಾಶ್ರ್ವನಾಥ ತೀರ್ಥಂಕರರ ಒಡೆದ ಶಾಸನದ ಪೀಠದ ಕೆಳಗಿರುವ ಎರಡು ಸಾಲಿನ ಶಿಲಾಶಾಸನದಲ್ಲಿ “ವಿಖ್ಯಾತನಗರವರವಾಡಿ” ಎನ್ನುವ ಸಾಲು, ಔರಾದನ್ನು ‘ಅವರವಾಡಿ’ ಅಥವಾ "ಅಮರವಾಡಿ" ಎನ್ನುತ್ತಿದ್ದರೆಂದು ಔರಾದ ತಾಲೂಕು ದರ್ಶನದ ಲೇಖಕ ಶಿವಕುಮಾರ ಕಟ್ಟೆ ಯವರು ತಮ್ಮ ಪುಸ್ತಕದಲ್ಲಿ ಸ್ಪ್ಪಷ್ಟಪಡಿಸಿರುತ್ತಾರೆ. ಸುಮಾರು 10ನೇ ಶತಮಾನದ್ದೆನ್ನಬಹುದಾದ ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನದಲ್ಲೂ “ಅವರವಾಡಿ ನೂರರ ಗ್ರಾಮದ ಸಮಸ್ತ ಪ್ರಭುಗಾವುಂಡರು ಅವರವಾಡಿಯ ಶ್ರೀ ಅಮರೇಶ್ವರ ದೇವರಿಗೆ ಖಂಡಸ್ಪುಟಿತ ಜೀರ್ಣೋದ್ಧಾರಕ್ಕಾಗಿ ತನಾರ್ಥಂ ಧಾರಾಪೂರ್ವಕ ……………”
ಎನ್ನುವ ಸಾಲು ಉಲ್ಲೇಖಿಸಲಾಗಿದ್ದು, ಅಮರೇಶ್ವರ ದೇವರ ಅಸ್ತಿತ್ವ ಮಾತ್ರದಿಂದಲೇ ಇಂದಿನ ಔರಾದ ಎನ್ನುವ ಹೆಸರು ಈ ಹಿಂದೆ ಅಮರೇಶ್ವರವಾಡಿ, ಅಮರವಾಡಿ, ಅವರವಾಡಿ, ಅವರಾಡಿ, ಅವರಾದ, ಔರಾದ ಎಂದು ಬದಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಹಾಗೂ ಭಿಮ್ರಾ ಶಾಸನಗಳಲ್ಲೂ ‘ ಸಂತವೆನಿಪ್ಪ ಅವರವಾಡಿಯೊಳೆನ್ನ’ ಎನ್ನುವ ಸಾಲು ಬರೆಯಲಾಗಿದ್ದು, ಇದು ಇಲ್ಲಿಯ ಅಮರೇಶ್ವರ ದೇವರನ್ನು ‘ಸಂತ’ನೆಂದು ಬಣ್ಣಿಸಿದ ಹಾಗಿದೆ.
ಒಟ್ಟು ಔರಾದನಲ್ಲಿ 3 ಶಾಸನಗಳು ದೊರೆತಿವೆ.
1. ಅಮರೇಶ್ವರ ದೇವಸ್ಥಾನದಲ್ಲಿ ಒಂದು ಶಾಸನ. 2. ಅಮರೇಶ್ವರ ಕನ್ಯಾ ಪ್ರೌಢ ಶಾಲೆಯಲ್ಲಿ ಒಂದು ಶಾಸನ. 3. ಮುರ್ಕಿಯಲ್ಲಿ ಒಂದು ಶಾಸನ.
ಅವರವಾಡಿ ಎನ್ನುವ ಹೆಸರು ನಮಗೆ ಪ್ರಥಮವಾಗಿ ಸಿಕ್ಕಿದ್ದೆ, ವಿಕ್ರಮಾದಿತ್ಯನ ಕಾಲದ ಶಾಸನಗಳಲ್ಲಿ. ಕ್ರಿ.ಶ.1079ರಲ್ಲಿ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ಆಡಳಿತಾಧಿಕಾರಿ ಯಾಗಿದ್ದ ಮಹಾಮಂಡಳೇಶ್ವರ ಕರ್ಕರಸ ಕರಡಿಕಲ್ಲು ( ದೆಗಲೂರಿನ ಕರಡಖೇಢ) ಅಧಿಪತಿಯಾಗಿದ್ದ. ಕರಡಿಕಲ್ಲು ಸಹಸ್ರಮಂಡಲ ಪ್ರಾಂತ್ಯದ ಪ್ರಮುಖ ಕೇಂದ್ರವಾಗಿತ್ತು. ಅವರವಾಡಿ ಕೂಡ ಸಹಸ್ರಮಂಡಲದ ಪ್ರಾಂತ್ಯವಾಗಿತ್ತು ಎಂದು ಭಿಮ್ರಾ ಶಾಸನದಲ್ಲಿ ಉಲ್ಲೇಖವಾಗಿದೆ. ಈ ಕರ್ಕರಸನ ಕಾಲದಲ್ಲಿ ಸೋಮನಾಥ, ಧೋರೇಶ್ವರ, ಮತ್ತು ಕಾಳಿಚೋರೇಶ್ವರ ಹಾಗೂ ಪ್ರಸನ್ನ ಭೈರವದೇವ ಮಂದಿರಗಳನ್ನು ಕಟ್ಟಿಸಲಾಗಿತ್ತು. ಇವೆಲ್ಲ ದೆಗಲೂರು ಆಸುಪಾಸಿನ ದೇವಾಲಯಗಳು. ಇವುಗಳ ಮೇಲ್ವಿಚಾರಣೆಯನ್ನು ಚಂದ್ರಶೇಖರ ಪಂಡಿತ ಎನ್ನುವವರು ನೋಡಿಕೊಳ್ಳುತ್ತಿದ್ದರು. ಆಗ ಅವರವಾಡಿಯ ಕವಾಲಿಗಾಂವೆ, ಆಲೂರು, ಬೋರಿಗಾಂವೆ, ದಯಾಸವಲಿಗೆ, ಗೌಂಡಗಾಂವೆ, ಗುಕ್ಕಾವೆ, ಹಿಪ್ಪಳಗಾಂವೆ, ಭಾಯಿಗಾಂವೆ, ಎಕ್ಕಲಗಾಂವೆ, ತಡಕಲ್ಲು, ನೇರಿಲಿಗೆ ಮುಂತಾದ ಪ್ರದೇಶಗಳನ್ನು ಈ ದೇವಸ್ಥಾನಗಳ ಅಂಗಭೋಗ, ರಂಗಭೋಗ, ಅನ್ನದಾನ, ವಿದ್ಯಾದಾನಕ್ಕಾಗಿ ನೀಡಲಾಗಿತ್ತು.
(ಹೆಚ್ಚಿನ ಮಾಹಿತಿಗಾಗಿ ಓದಿ : ಔರಾದ ತಾಲೂಕು ದರ್ಶನ : ಶಿವಕುಮಾರ ಕಟ್ಟೆ)
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |