ಬೀದರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀದರ
city
Entrance to the Bidar Fort
Entrance to the Bidar Fort
CountryIndia
StateKarnataka
RegionBayaluseeme
DistrictBidar
Government
 • Deputy CommissionerDr. PC Jaffer IAS
Area
 • Total೪೩ km (೧೭ sq mi)
Elevation
೬೧೪ m (೨,೦೧೪ ft)
Population
 • Total೧,೭೦,೨೦೪
 • Density೪,೦೦೦/km (೧೦,೦೦೦/sq mi)
Languages
 • OfficialKannada
Time zoneUTC+5:30 (IST)
PIN
585 401
Telephone code91 8482
Vehicle registrationKA38
Websitewww.bidarcity.gov.in

ಬೀದರ ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು ಬೀದರ ಕರ್ನಾಟಕ ರಾಜ್ಯದ ಮುಕುಟ ಎಂದು ಕೂಡ ಕರೆಯಲ್ಪಡುತ್ತದೆ.

ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೀದರ - ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಭಾಲ್ಕಿ, ಹುಮನಾಬಾದ್, ಬೀದರ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, ಬಿಜಾಪುರ, ಗೋಲ್ಕೊಂಡ, ಗುಲ್ಬರ್ಗಾ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು ಬಸವಕಲ್ಯಾಣದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. ಬಸವಕಲ್ಯಾಣದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ.

ಭೌಗೋಲಿಕ ವಿವರಗಳು

ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.

ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ ನಾಂದೇಡ್ ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.

ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ. ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.

ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. ಬಸವಕಲ್ಯಾಣ ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ ಹಳ್ಳಿಖೇಡ ನಾಲಾ ಇವುಗಳು ಸಣ್ಣ ಹೊಳೆಗಳು.

ಚರಿತ್ರೆ

ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು ಬಸವಣ್ಣನವರ ಕಾಲದಲ್ಲಿ ಮತ್ತು ಬಹಮನಿ ಸುಲ್ತಾನರ ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. ರಾಷ್ಟ್ರಕೂಟರು, ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ ಬಸವಕಲ್ಯಾಣವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು ಬಿಜಾಪುರದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.

ಧರ್ಮ

ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.

ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.

ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.

ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.

ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.

ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.

ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ. ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.

ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. ಬಸವಕಲ್ಯಾಣದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.

ಕರಕುಶಲ ಕಲೆ

ಬಿದರಿ ಕಲೆ

ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.

.

ಜಿಲ್ಲೆಯ ಪ್ರಮುಖರು

  • ಡಾ.ಚೆನ್ನಬಸವ ಪಟ್ಟದ್ದೇವರು : ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ
  • ರಾಮಚಂದ್ರ ವೀರಪ್ಪಾ : ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜನಪ್ರಿಯ ನಾಯಕ
  • ಪ್ರೊ. ವೀರೇಂದ್ರ ಸಿಂಪಿ : ಸಾಹಿತಿ
  • ಎಂ. ಜಿ. ಗಂಗನ್ ಪಳ್ಳಿ : ಕವಿ ಹಾಗೂ ಸಾಹಿತಿ
  • ಬಂಡೆಪ್ಪ ಖಾಶೆಮಪುರೇ, ಜನ ಪ್ರಿಯ ನಾಯಕರು
  • ಈಶ್ವರ್ ಖನ್ದ್ರೆ :ಪ್ರಜಾ ನಾಯಕ
  • ಖಾಜಿ ಅರಶದ ಅಲಿ.ಹಿರಿಯ ಸಂಪಾದಕರು,ಶಾಸಕರು.
  • ಜುಲ್ಫೆಕಾರ್ ಹಾಶ್ಮಿ.
  • ನಸಿಮೊದ್ದಿನ್ ಪಟೇಲ್

ಪ್ರವಾಸೋದ್ಯಮ

ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.

ಆಕರ್ಷಣೆಯ ಸ್ಥಳಗಳು

ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ. ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಬೀದರ ಕೋಟೆ ವಿಹಂಗಮ ನೋಟ
  • ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
  • ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
  • ಗುರು ನಾನಕ್ ಝಿರ ಗುರುದ್ವಾರ
  • ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
  • ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
  • ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
  • ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
  • ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
  • ಬಸವೇಶ್ವರ ದೇವಾಲಯ
  • ಬಾರಿದ್ ಶಾಹಿ ಉದ್ಯಾನವನ
  • ಮೊಹಮ್ಮದ್ ಗವಾನ್ ಸಮಾಧಿ
  • ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
  • ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
  • ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
  • ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
  • ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
  • ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
  • ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
  • ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
  • ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
  • ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
  • ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.

ಜನಸಂಖ್ಯೆ

2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.

ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.

ಶೈಕ್ಷಣಿಕ ಸಂಸ್ಥೆಗಳು

  • ರಾಷ್ಟ್ರೀಯ ಶಾಲಾ ಬೀದರ್
  • ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
  • ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
  • ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
  • ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
  • ಕೇಂದ್ರೀಯ ವಿದ್ಯಾಲಯ ಬೀದರ
  • ಏರ್ ಫೋರ್ಸ್ ಸ್ಕೂಲ್
  • ಸರ್ಕಾರಿ ಪಾಲಿಟೆಕ್ನಿಕ್, ಬೀದರ
  • ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
  • ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
  • ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
  • ಬಿ ವಿ ಭೂಮರೆಡ್ಡಿ ಕಾಲೇಜ್
  • ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
  • ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
  • ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
  • ನಾರ್ಮ ಫೆಡ್ರಿಚ್ ಹೈ ಸ್ಕೂಲ್
  • ಎಸ್ಬಿ ಪಾಟೀಲ್ ದಂತ ಕಾಲೇಜು
  • ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
  • ಗುರು ನಾನಕ್ ಪಬ್ಲಿಕ್ ಸ್ಕೂಲ್
  • ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
  • ಗುರಯ್ಯ ಬಾಚಾ ಹೈ ಸ್ಕೂಲ್
  • ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
  • ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
  • ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
  • ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
  • ಪರಿಮಳ ಹೈಸ್ಕೂಲ್ ಬೀದರ
  • ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
  • ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತುತ ಪ್ರೊ. ಸಿದ್ರಾಮಪ್ಪ ಮಸಿಮಡೆ ಅವರ ಅಧ್ಯಕ್ಷತೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಪರಿಷತ್ತು ತಾಲ್ಲೂಕಿನಲ್ಲಿರುವ ಘಟಕಗಳು ಮತ್ತು ವಲಯ ಘಟಕಗಳನ್ನು ಹೊಂದಿದೆ. ಇತರ ಅನೇಕ ಸಂಘ ಸಂಸ್ಥೆಗಳಾದ ಬೀದರ ಜಿಲ್ಲಾ ಲೇಖಕರ ಮತ್ತು ಕಲಾವಿದರ ಸಂಘ ಶಿವಕುಮಾರ್ ಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಮತ್ತು ಧರಿನಾಡು ಕನ್ನಡ ಸಂಘ, ದೇಶಾಂಶ ಹುಡ್ಗಿಯವರ ಅಧ್ಯಕ್ಷತೆಯಲ್ಲಿ, ಸಾಹಿತ್ಯ ಪರಿಷತ್ತಿನ ಜೊತೆ ಸೇರಿಕೊಂಡು ಬೀದರ ಜಿಲ್ಲೆಯ ಕನ್ನಡ ಅಭಿವೃದ್ಧಿಯ ಕೆಲಸ ಮಾಡುತ್ತಿವೆ.

ದಾಸ ಸಾಹಿತ್ಯ ಪರಿಷತ್ತು (ರಿ), ರಾಜ್ಯ ಘಟಕ, ಬೀದರ್

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಘಟ್ಟಗಳು ಬರುವುದುಂಟು. ಬೀದರ್‌ನಲ್ಲಿ ನಡುಗನ್ನಡದ ಭಾಗವಾಗಿರುವ ದಾಸ ಸಾಹಿತ್ಯದ ಪ್ರಸಾರಕ್ಕಾಗಿ ಹುಟ್ಟಿಕೊಂಡಿರುವ ರಾಜ್ಯಮಟ್ಟದ ಸಂಸ್ಥೆ ದಾಸ ಸಾಹಿತ್ಯ ಪರಿಷತ್ತು.

2009ರಲ್ಲಿ ಶಿಕ್ಷಕ, ಸಾಹಿತಿ ಬಿ.ಎಂ ಅಮರವಾಡಿ ಕಲ್ಪನೆಯ ಕೂಸಾಗಿ ಸಂಸ್ಥಾಪಕ ಅಧ್ಯಕ್ಷರಾಗಿ ರಾಜ್ಯಮಟ್ಟದ ದಾಸ ಸಾಹಿತ್ಯ ಪರಿಷತ್ತು ಸಂಸ್ಥೆಯು ರಚಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಜಿಲ್ಲಾ ಘಟಕಗಳು ಹೊಂದಿದೆ.

ಪ್ರೊ. ವಸಂತ ಕುಷ್ಟಗಿ ಸರ್ವಾಧ್ಯಕತೆಯಲ್ಲಿ ರಾಜ್ಯಮಟ್ಟದ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ 2013ರಲ್ಲಿ ಹಾಗೂ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ಸರ್ವಾಧ್ಯಕ್ಷತೆಯಲ್ಲಿ 2014ರಲ್ಲಿ ರಾಜ್ಯಮಟ್ಟದ ದ್ವಿತೀಯ ದಾಸ ಸಾಹಿತ್ಯ ಸಮ್ಮೇಳನಗಳು ಆಯೋಜಿಸಲಾಗಿತ್ತು.

ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಜಿ, ಉಡುಪಿ ಶ್ರೀಮಠದ ಪುತ್ತಿಗೆ ಶ್ರೀಗಳು ಸೇರಿದಂತೆ ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರು ಹಾಗೂ ವಿದ್ವಾಂಸರು ಪರಿಷತ್ತಿನ ಕಾರ್ಯವೈಖರಿಗೆ ಮುಕ್ತ ಕಂಠದಿಂದ ಹೊಗಳಿದ್ದು ಉಂಟು. ಶಾಲಾ ಕಾಲೇಜು ಸೇರಿದಂತೆ ಎಲ್ಲೆಡೆ ದಾಸರ ಕುರಿತು ಉಪನ್ಯಾಸಗಳು, ವಿಚಾರ ಸಂಕಿರಣಗಳು, ದಾಸವಾಣಿ ಅಂತಹ ಕಾರ್ಯಕ್ರಮಗಳು ಮಾಡುತ್ತ ದಾಸರ ಸಂದೇಶಗಳು ಎಲ್ಲೆಡೆ ಪ್ರಸಾರ ಮಾಡುತ್ತ ಸಾಗುತ್ತಿದೆ.

ಬಾಹ್ಯ ಕೊಂಡಿಗಳು‌‌

ಬೀದರ

"https://kn.wikipedia.org/w/index.php?title=ಬೀದರ&oldid=1211245" ಇಂದ ಪಡೆಯಲ್ಪಟ್ಟಿದೆ