ಆದೇಶ ಸಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಧಿಗಳಲ್ಲಿ

  1. ಲೋಪ
  2. ಆಗಮ
  3. ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಸಂಧಿ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂಧಿಗಳು, ಆದೇಶ ಸಂಧಿಯನ್ನು ಕನ್ನಡವ್ಯಂಜನ ಸಂಧಿಯೆಂದು ಕರೆಯುತ್ತಾರೆ.

ಆದೇಶ ಸಂಧಿಕಾರ್ಯ

ಆದೇಶ ಸಂಧಿಯು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮ ಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ'. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ ವಿಸಂಧಿ.

ವ್ಯಂಜನ ಸಂಧಿ ನಿಯಮ

ಎರಡು ವಿಧ :

  1. ಸ್ವರ+ವ್ಯಂಜನ. ಉದಾಹರಣೆಗೆ, ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ
  2. ವ್ಯಂಜನ + ವ್ಯಂಜನ. ಉದಾಹರಣೆಗೆ,ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.yyuuu

ಕನ್ನಡ ವ್ಯಂಜನ ಸಂಧಿ ಲಕ್ಷಣ

ವ್ಯಂಜನ ವರ್ಣಗಳಿಗೆ ಬರುವ ಆದೇಶ ವರ್ಣಗಳ ಕ್ರಿಯೆಯನ್ನು ‘ವ್ಯಂಜನ ಸಂಧಿಕಾರ್ಯ’ವೆನ್ನಬಹುದು.

  1. ವ್ಯಂಜನ ಸಂಧಿ ನಿಯಮ - ಸ್ವರ ಮತ್ತು ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ವ್ಯಂಜನ ಸಂಧಿಯಾಗುತ್ತದೆ. ಅಥವಾ ಎರಡೂ ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿಯಾಗುತ್ತದೆ. ಉದಾ: ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ. ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.
  2. ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರವು ಬರುವುದೇ ‘ಆದೇಶ ಸಂಧಿ’ಯೆನಿಸುವುದು. ಆದೇಶ ಸಂಧಿಯಲ್ಲಿ ಈ ಕೆಳಗಿನ ವಿಭಾಗ ಕ್ರಮ ಮಾಡಬಹುದು.
  3. ಉತ್ತರ ಪದದ ಆದಿಯಲ್ಲಿ ಕ, ತ, ಪ, ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗಿ ಬರುವುವು. ಉದಾ: ಹಳ+ಕನ್ನಡ = ಹಳಗನ್ನಡ = ‘ಕ’ಕಾರಕ್ಕೆ ‘ಗ’ಕಾರ ಆದೇಶ; ಬಾಯ್+ತೆರೆ = ಬಾಯ್ದೆರೆ = ‘ತ’ಕಾರಕ್ಕೆ ‘ದ’ಕಾರ ಆದೇಶ; ಕಣ್+ಪೊಲಂ = ಕಣ್ಬೊಲಂ = ‘ಪ’ಕಾರಕ್ಕೆ ‘ಬ’ಕಾರ ಆದೇಶ; ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಕಳೆಗೂಡಿ, ತಲೆಗಟ್ಟು, ಬೆಸೆಕೋಲ್, ಒಳಕಯ್, ಎಳೆಗರು, ಮೆಗೆಲಸ, ಮೈದೊಳೆ, ಸುಖಬಡು, ಮೆರೆದಪ್ಪು, ಬೆಂಬತ್ತು
  4. ಉತ್ತರಪದ ಆದಿಯಲ್ಲಿರುವ ಪ, ಬ, ಮ ವ್ಯಂಜನಗಳಿಗೆ ‘ವ’ ಕಾರವು ಆದೇಶವಾಗಿ ಬರುವುದು. ಉದಾ: ಕೆನೆ+ಪಾಲು = ಕೆನೆವಾಲು = ‘ಪ’ಕಾರಕ್ಕೆ ‘ವ’ಕಾರ ಆದೇಶ; ತಲೆ+ಬಾಗು = ತಲೆವಾಗು = ‘ಬ’ಕಾರಕ್ಕೆ ‘ವ’ಕಾರ ಆದೇಶ; ಎಲೆ+ಮನೆ = ಎಲೆವನೆ = ‘ಮ’ಕಾರಕ್ಕೆ ‘ವ’ಕಾರ ಆದೇಶ. ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಮೆಲ್ವಾಸು, ಬೆವರ್ವನಿ, ಎಳವಳ್ಳಿ, ನೀರ್ವೊನಲ್, ಎಳವರೆ, ಬೆಮರ್ವನಿ, ಬೇರ್ವೆರಸಿ, ನೆಲೆವನೆ, ಕೆನೆವಾಲ್, ಕೈವಿಡಿ, ಪೊರವೀಡು
  5. ಪೂರ್ವಪದದ ಅಂತ್ಯದಲ್ಲಿ ಯ, ಲ, ಗಳ ಹೊರತು ಬೇರೆ ವ್ಯಂಜನಗಳಿದ್ದಾಗ ಉತ್ತರಪದದ ಆದ್ಯಕ್ಷರವಾದ ‘ಸ’ ಕಾರಕ್ಕೆ ಸಾಮಾನ್ಯವಾಗಿ ಚ, ಛ, ಜ ಗಳು ಆದೇಶ. ಉದಾ: ಇನ್+ಸರ = ಇನ್+ಚರ = ಇಂಚರ; ಮುನ್+ಸೆರಂಗು = ಮುನ್+ಜೆರಂಗು = ಮುಂಜೆರಗು; ಇರ್+ಸಾಸಿರ = ಇರ್+ಛಾಸಿರ = ಇರ್ಛಾಸಿರ. ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಬಾಯ್ಸವಿ, ಬೆಳ್ಸರಿ, ಕಣ್ಜೋಲಂ, ನುಣ್ಚರ, ಮುಂಜೊಡರ್, ತಣ್ಜೊಡರ್, ಮುಂಜೂರ್, ಪೊಂಜುರಿಗೆ


ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿ, ಆಗಮಸಂಧಿ ಆಗುವಂತೆ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯಕ್ಕೆ ಉದಾಹರಣೆಗಳು.

  1. ಮಳೆ + ಕಾಲ = ಮಳೆಗಾಲ (ಮಳೆ + ಗ್ಆಲ)
  2. ಚಳಿ + ಕಾಲ = ಚಳಿಗಾಲ (ಚಳಿ +ಗ್ಆಲ)
  3. ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್ಆವರೆ)
  4. ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್ಎಟ್ಟು)
  5. ಕಣ್ + ಪನಿ = ಕಂಬನಿ (ಕಂ + ಬ್ಅನಿ)

ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ. ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ. ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆ ದ ಕಾರ ಬಂದಿದೆ. [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ] ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ. ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು. ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.

ಉದಾಹರಣೆಗಳು

ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು. ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರವುದು?

ಒಂದು

ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಕ ತ ಪ" ವ್ಯಂಜನಗಳಿಗೆ ಕ್ರಮವಾಗಿ "ಗ ದ ಬ" ವ್ಯಂಜನಗಳು ಆದೇಶವಾಗಿ ಬರುವುವು. ಉದಾಹರಣೆಗೆ :

  1. ಹುಲ್ಲು + ಕಾವಲು = ಹುಲ್ಲು + ಗ್ ಆವಲು = ಹುಲ್ಲುಗಾವಲು (ಕಕಾರಕ್ಕೆ ಗಕಾರಾದೇಶ)
  2. ಹಳ + ಕನ್ನಡ = ಹಳ + ಗ್ ಅನ್ನಡ = ಹಳಗನ್ನಡ (ಕಕಾರಕ್ಕೆ ಗಕಾರಾದೇಶ)
  3. ಕಳೆ + ಕೂಡಿ = ಕಳೆ + ಗ್ ಊಡಿ = ಕಳೆಗೂಡಿ (ಕಕಾರಕ್ಕೆ ಗಕಾರಾದೇಶ)
  4. ಎಳೆ + ಕರು = ಎಳೆ + ಗ್ ಅರು = ಎಳೆಗರು (ಕಕಾರಕ್ಕೆ ಗಕಾರಾದೇಶ)
  5. ಮನೆ + ಕೆಲಸ = ಮನೆ + ಗ್ ಎಲಸ = ಮನೆಗೆಲಸ (ಕಕಾರಕ್ಕೆ ಗಕಾರಾದೇಶ)
  6. ಮೈ + ತೊಳೆ = ಮೈ + ದ್ ಒಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)
  7. ಮೇರೆ + ತಪ್ಪು = ಮೇರೆ + ದ್ ಅಪ್ಪು = ಮೇರೆದಪ್ಪು (ತಕಾರಕ್ಕೆ ದಕಾರಾದೇಶ)
  8. ಕಣ್ + ಪನಿ = ಕಣ್ + ಬ್ ಅನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)
  9. ಬೆನ್ + ಪತ್ತು = ಬೆನ್ + ಬ್ ಅತ್ತು = (ಬೆಂಬತ್ತು) (ಪಕಾರಕ್ಕೆ ಬಕಾರಾದೇಶ)

ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು. ಇಂತಹವುಗಳು ಪ್ರಕೃತಿ ಭಾವಗಳು

  1. ಮನೆ + ಕಟ್ಟು = ಮನೆಕಟ್ಟು
  2. ತಲೆ + ಕಟ್ಟು = ತಲೆಕಟ್ಟು

ಎರಡು

ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಪ ಬ ಮ" ವ್ಯಂಜನಗಳಿಗೆ "ವ" ಕಾರವು ಆದೇಶವಾಗಿ ಬರುವುದು. ಉದಾಹರಣೆಗೆ :

  1. ನೀರ್ + ಪೊನಲ್ = ನೀರ್ + ವ್ ಒನಲ್ = ನೀರ್ವೊನಲ್ (ಪಕಾರಕ್ಕೆ ವಕಾರಾದೇಶ)
  2. ಎಳ + ಪೆರೆ = ಎಳ + ವ್ ಎರೆ = ಎಳವರೆ (ಪಕಾರಕ್ಕೆ ವಕಾರಾದೇಶ)
  3. ಬೆಮರ್ + ಪನಿ = ಬೆಮರ್ + ವ್ ಅನಿ = ಬೆಮರ್ವನಿ (ಪಕಾರಕ್ಕೆ ವಕಾರಾದೇಶ)
  4. ಬೇರ್ + ಬೆರಸಿ = ಬೇರ್ + ವ್ ಎರಸಿ = ಬೇರ್ವೆರಸಿ (ಬಕಾರಕ್ಕೆ ವಕಾರಾದೇಶ)
  5. ಕಡು + ಬೆಳ್ಪು = ಕಡು + ವ್ ಎಳ್ಪು = ಕಡುವೆಳ್ಪು (ಬಕಾರಕ್ಕೆ ವಕಾರಾದೇಶ)
  6. ಎಳ + ಬಳ್ಳಿ = ಎಳ + ವ್ ಅಳ್ಳಿ = ಎಳವಳ್ಳಿ (ಬಕಾರಕ್ಕೆ ವಕಾರಾದೇಶ)
  7. ಮೆಲ್ + ಮಾತು = ಮೆಲ್ + ವ್ ಆತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)
  8. ನೆಲೆ + ಮನೆ = ನೆಲೆ + ವ್ ಅನೆ = ನೆಲೆವನೆ (ಮಕಾರಕ್ಕೆ ವಕಾರಾದೇಶ)

ಇದರ ಹಾಗೆ…….ಕಿಸುವಣ್, ಎಸರ್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ. ಈ ಆದೇಶವು ಕೆಲವು ಕಡೆ ಬರುವುದಿಲ್ಲ. ಅದಕ್ಕೆ ಉದಾಹರಣೆ :

  1. ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
  2. ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
  3. ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)

ಮೂರು

ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಸ"ಕಾರಕ್ಕೆ "ಚ ಜ ಛ" ಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು. ಉದಾಹರಣೆಗೆ :

  1. ಸಕಾರಕ್ಕೆ ಚಕಾರ ಬರುವುದಕ್ಕೆ - ಇನ್ + ಸರ = ಇನ್ + ಚ್ ಅರ = ಇಂಚರ, ನುಣ್ + ಸರ = ನುಣ್ + ಚ್ ಅರ = ನುಣ್ಚರ
  2. ಸಕಾರಕ್ಕೆ ಜಕಾರ ಬರುವುದಕ್ಕೆ - ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು, ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್, ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್
  3. ಸಕಾರಕ್ಕೆ ಛಕಾರ ಬರುವುದಕ್ಕೆ - ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ, ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ, ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ


ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.

  1. ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.

ನಾಲ್ಕು

  1. ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು. ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.
  2. ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.
  3. ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.
  4. ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು. ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು. ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು
  5. ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ. ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ. ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು
  6. ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ. ಆಗ ಸ್ಪಷ್ಟವಾಗಿ ತಿಳಿದುಬರುವುದು. ಈಗ ಸಂಧಿಕಾರ್ಯಗಳನ್ನಷ್ಟು ಗಮನಿಸಿದರೆ ಸಾಕು. ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್ ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು. ಇದರಂತೆ ಉಳಿದವುಗಳನ್ನೂ ತಿಳಿಯಬೇಕು.
  7. ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು. ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ. ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.

ಚರ್ಚೆ

  1. ಸಂಧಿಯಾಗುವಾಗ ಸ್ವರದ ಮುಂದೆ ಕ,ಚ,ಟ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ ವ್ಯಂಜನಗಳು ಅಂದರೆ ಗ,ಜ ,ಡ ದ,ಬ ಗಳು ಆದೇಶವಾಗಿ ಬರುತ್ತವೆ. ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ.
  2. ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ. ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ. ## ಹೆರ್ + ದಾರಿ = ಹೆದ್ದಾರಿ
    1. ಬೆಲೆ + ಪೆಣ್ಣು(ಹೆಣ್ಣು) = ಬೆಲೆವೆಣ್ಣು
    2. ಮುಂದು + ಪರಿ( ಹರಿ ) = ಮುಂದುವರಿ
    3. ಮುಂದು + ಪರೆ( ಹರೆ ) = ಮುಂದುವರೆ
    4. ತಣ್ + ನೀರು = ತಣ್ಣೀರು
    5. ಕಣ್ + ನೀರು = ಕಣ್ಣೀರು
    6. ಭೂ + ತಾಯಿ = ಭೂದಾಯಿ ಅಲ್ಲ ಏಕೆ?
    7. ಒರ್ + ಕೊರಲು = ಒಕ್ಕೊರಲು
    8. ಒರ್ + ಕೂಟ = ಒಕ್ಕೂಟ
    9. ಒರ್ + ಕೂಡು = ಒಗ್ಗೂಡು
    10. ಹೆರ್ + ಪಾವು(ಹಾವು) = ಹೆಬ್ಬಾವು
    11. ಕಿಸು + ಪೊೞಲು(ಹೊಳಲು) = ಕಿಸುವೊಳಲು
    12. ಮೂರ್ + ಕಣ್ಣ = ಮುಕ್ಕಣ
    13. ತಣ್ + ಗಾಳಿ = ತಂಗಾಳಿ; ಇಲ್ಲಿ 'ಣ್' ಕಾರಕ್ಕೆ 'ಞ್' ಕಾರ ಆದೇಶ

ಕನ್ನಡದಲ್ಲಿ ಹೆಚ್ಚು ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು ಆಗುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆಗದು.

ಉಲ್ಲೇಖ