ಹೊಸಕೋಟೆ ಕೃಷ್ಣಶಾಸ್ತ್ರಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಶಾಸನ ಲೋಕದ ಬಾಗಿಲು ಮೊಟ್ಟ ಮೊದಲು ತೆರೆದವರು ವಿದೇಶೀಯರು. ಅವರ ಉದ್ದೇಶ ಏನೇ ಇದ್ದರೂ ಮಣ್ಣಿನಲ್ಲಿ ಮರೆಯಾಗಿ ಹೋಗುತಿದ್ದ ಇತಿಹಾಸಕ್ಕೆ ಅವರು ಮರು ಜೀವ ನೀಡಿರುವುದು ಸತ್ಯ. ಇಂಗ್ಲಿಷ್‌ ಶಿಕ್ಷಣ ಎಂದರೆ ಭಾರತೀಯರ ಆಚಾರ ವಿಚಾರದಲ್ಲಿ ಆಂಗ್ಲರನ್ನಾಗಿಸುವ ಗುರಿಇಟ್ಟು ಕೊಂಡ ಮೆಕಾಲೆ ಮಹನೀಯನ ವರದಿಯಂತೆ, ಆ ಕಾಲದ ಶಾಲಾ ಕಾಲೇಜುಗಳು ಆಂಗ್ಲರ ಆಡಳಿತಕ್ಕೆ ಅಗತ್ಯವಿದ್ದ ಗುಮಾಸ್ತರನ್ನು ತಯಾರಿಸುವ ಕಾರ್ಖಾನೆಗಳಾಗಿದ್ದವು. ಇಂಗ್ಲಿಷ್‌ ಶಿಕ್ಷಣ ಪಡೆಯುವುದು ಸರ್ಕಾರದಲ್ಲಿ ನೌಕರಿ ಗಿಟ್ಟಿಸಿಕೊಂಡು ಆಂಗ್ಲರ ಆಡಳಿತ ಯಂತ್ರದ ಒಂದು ಭಾಗವಾಗುವುದೇ ಜೀವನದ ಮಹತ್ಸಾಧನೆ ಎಂಬ ಭಾವನೆ ಸಾರ್ವತ್ರಿಕವಾಗಿತ್ತು. ರಾಷ್ಟ್ರೋದ್ಧಾರಕ್ಕೆ ದೇಶೀಯ ಶಿಕ್ಷಣ ಅಗತ್ಯ ಎಂದು ದೇಶಪ್ರೇಮಿಗಳು ಹಂಬಲಿಸುತಿದ್ದರು. ಇಂಗ್ಲಿಷ್‌ ವಿದ್ಯೆ ಕಲಿತು ಕೈತುಂಬ ಸಂಬಳ ತರುವ ಸರ್ಕಾರಿ ಕೆಲಸ ಬಿಟ್ಟು ದೂರದ ಉದಕಮಂಡಲದಲ್ಲಿ ಶಿಲಾ ಶಾಸನ ಮತ್ತು ತಾಮ್ರದ ಫಲಕಗಳ ಜೊತೆ ಒಡನಾಡುತ್ತಾ ಅದೇ ತಾನೆ ಪ್ರಾರಂಭವಾದ ಪುರಾತತ್ತ್ವ ಇಲಾಖೆಗೆ ಸೇರಿ ಕರ್ನಾಟಕದ ಇತಿಹಾಸದ ಪುಟಗಳನ್ನು ಬೆಳಕಿಗೆ ತರಲು ತನು, ಮನ, ಧನಗಳನ್ನು ಮೀಸಲಿಟ್ಟವರು, ಶೈಶವದಲ್ಲಿದ್ದ ಭಾರತದ ಪುರಾತತ್ತ್ವ ಇಲಾಖೆಯ ಮುಖ್ಯಸ್ಥ ಜರ್ಮನ್‌ ವಿದ್ವಾಂಸ ಡಾ. ಇ. ಹುಲ್ಷ್ ರಿಗೆ ಸಹಾಯಕರಾಗಿ ಎಲೆಯ ಮರೆಯ ಕಾಯಂತೆ ದುಡಿದ ದೇಶೀಯ ವಿದ್ವಾಂಸರಲ್ಲಿ ಹೊಸಕೋಟೆ ಕೃಷ್ಣ ಶಾಸ್ತ್ರಿಗಳು ಪ್ರಮುಖರು. ಈಗ ಬೆಂಗಳೂರು ಗ್ರಾಮಾಂತರದ ಜಿಲ್ಲೆಯಲ್ಲಿ ಚಿಕ್ಕ ಪಟ್ಟಣವಾಗಿರುವ ಹೊಸಕೋಟೆಯಲ್ಲಿ ೧೮೬೯ ರಲ್ಲಿ ಶ್ರೋತ್ರಿಯ ಮನೆತನದಲ್ಲಿ, ಕೃಷ್ಣ ಶಾಸ್ತ್ರಿಗಳು ಜನಿಸಿದರು. ಅವರ ತಾತ ಪುರೋಹಿತರು, ಮತ್ತು ಅಲ್ಲಿನ ದೇವಾಲಯದ ಅರ್ಚಕರು. ಆ ಕಾಲದಲ್ಲಿ ಹೊಸಕೋಟೆ ಒಂದು ಚಿಕ್ಕಗ್ರಾಮ. ಅಲ್ಲಿ ತಮಿಳರ ಸಂಖ್ಯೆಯೂ ಗಣನೀಯವಾಗಿತ್ತು. ಅವರನ್ನು ‘ತಿಗಳರು' ಎಂದು ಸ್ಥಳೀಯವಾಗಿ ಕರೆಯಲಾಗುತಿತ್ತು . ಆ ಸಮುದಾಯದ ಜನಕ್ಕೆ ಇವರ ತಾತನೇ ಗುರುಗಳು. ಅವರು ಆಗಮ, ಶಾಸ್ತ್ರ, ವೇದಾಂತ, ಜ್ಯೋತಿಷ್ಯ, ಸಂಸ್ಕೃತ, ಮತ್ತು ಸಾಹಿತ್ಯಗಳಲ್ಲಿ ಪಾರಂಗತರು. ತಂದೆಯ ಗರಡಿಯಲ್ಲಿ ಪಳಗಿದ ರಾಮಾಶಾಸ್ತ್ರಿಗಳು ಕೂಡಾ ವಿದ್ವಾಂಸರು. ಅವರಿಗೆ ಸಾಹಿತ್ಯ ಮತ್ತು ಸಂಸ್ಕೃತ ಅಪಾರ ಆಸಕ್ತಿ. ಸಂಪ್ರದಾಯಸ್ಥರಾದರೂ ನೌಕರಿ ಮಾಡುವಷ್ಟು ಉದಾರ ಮನೋಭಾವ ಹೊಂದಿದವರು. ಅವರ ಆಳವಾದ ಸಂಸ್ಕೃತ ಜ್ಞಾನ ಮತ್ತು ಸಾಹಿತ್ಯ ಪರಿಣತೆಯನ್ನು ಗಮನಿಸಿ ಅದರ ಸದ್ಬಳಕೆ ಮಾಡಲು ವೆಸ್ಲಿಯನ್‌ ಮಿಶನ್‌ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರ ಹುದ್ದೆ ನೀಡಲಾಯಿತು. ಹೀಗಾಗಿ ಅವರಿಗೆ ಸಾಂಪ್ರದಾಯಿಕ ಸಂಸ್ಕೃತ ಜ್ಞಾನದ ಜೊತೆಗೆ ಆಧುನಿಕ ವಿದ್ಯೆಯ ಪ್ರವೇಶದ ಅವಕಾಶವೂ ದೊರೆಯಿತು.ಅಂಥಹ ವಾತಾವರಣದಲ್ಲಿ ಕೃಷ್ಣಶಾಸ್ತ್ರಿಗಳ ಜನನವಾಯಿತು. ಮನೆಯೆ ಅವರ ಮೊದಲ ಪಾಠಶಾಲೆ. ತಂದೆ ತಾತನಿಂದ ಸಾಂಪ್ರದಾಯಿಕ ವಿದ್ಯೆಯ ಕಲಿಕೆ. ಔಪಚಾರಿಕವಾಗಿ ಪ್ರಾಥಮಿಕ ಶಿಕ್ಷಣವು ಹೊಸಕೋಟೆಯಲ್ಲಿಯೇ ಆಯಿತು. ಅವರ ವಿದ್ಯೆಯು ಸಂಸ್ಕೃತ ಮತ್ತು ಶಾಸ್ತ್ರ ಅಧ್ಯಯನಕ್ಕೆ ಸೀಮಿತವಾಗಲಿಲ್ಲ. ತಂದೆ ಕೆಲಸ ಮಾಡುತಿದ್ದ ಮಿಶನ್‌ ಹೈಸ್ಕೂಲಿನಲ್ಲಿ ಇಂಗ್ಲಿಷ್‌ ಶಿಕ್ಷಣ ಮುಂದುವರಿಸಿದರು. ಹೈಸ್ಕೂಲು ಶಿಕ್ಷಣ ಯಶಸ್ವಿಯಾಗಿ ಮುಗಿಸಿದ ನಂತರ ಪದವಿ ಶಿಕ್ಷಣಕ್ಕಾಗಿ ಸೆಂಟ್ರಲ್‌ ಕಾಲೇಜು ಸೇರಿದರು. ಆ ಕಾಲದಲ್ಲಿ ಸೆಂಟ್ರಲ್‌ ಕಾಲೇಜು ಮದ್ರಾಸ್‌ ವಿಶ್ವ ವಿದ್ಯಾನಿಲಯಕ್ಕೆ ಸೇರಿತ್ತು. ಅಲ್ಲಿ ಬಿ.ಎ. ಪದವಿಗೆಅಧ್ಯಯನ ಮಾಡಲು ದಾಖಲಾದರು. ಹೇಗಿದ್ದರೂ ಅವರಿಗೆ ಸಂಸ್ಕೃತ ಕರಗತವಾಗಿತ್ತು ಜೊತೆಗೆ ಸಾಹಿತ್ಯಾಸಕ್ತಿಯಿಂದ ಕನ್ನಡವನ್ನೂ ಆಯ್ದುಕೊಂಡರು. ತೀಕ್ಷ್ಣ ಮತಿಯಾದ್ದರಿಂದ ಗಣಿತವನ್ನೂ ಒಂದು ವಿಷಯವಾಗಿ ಆಯ್ದುಕೊಂಡರು.ಅವರು ಬಿ.ಎ. ಪದವಿಯನ್ನು ಸಲೀಸಾಗಿ ಮುಗಿಸಿದರು. ಆ ಕಾಲದಲ್ಲಿ ಬಿ.ಎ., ಬಿ.ಎಸ್ಸಿ. , ಬಿ.ಕಾಮ್‌ ಗಳೆಂಬ ವಿವಿಧ ಪದವಿಗಳಿರಲಿಲ್ಲ. ಕಲೆ, ವಿಜ್ಞಾನ, ಗಣಿತ, ಯಾವುದೇ ವಿಷಯವಾದರೂ ಎಲ್ಲರಿಗೂ ನೀಡುತಿದ್ದ ಪದವಿ ಎಂದರೆ ಬಿ.ಎ. ಮಾತ್ರ. ಪದವಿ ಮುಗಿದ ತಕ್ಷಣ ಅವರಿಗೆ ಸರ್ಕಾರಿ ಹುದ್ದೆ ಕಾದಿತ್ತು. ಮೈಸೂರು ಸಂಸ್ಥಾನದ ಉಪನೋಂದಣಿ ಅಧಿಕಾರಿಯಾಗಿ ನೇಮಕವಾದರು. ಒಂದು ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡಿದರೆ ನಂತರ ಖಾಯಂ ಕೆಲಸ. ಕೈತುಂಬ ಸಂಬಳ. ಗೌರವಾನ್ವಿತ ಹುದ್ದೆ. ಅವರ ಕುಟುಂಬದವರಿಗೆ ಅತೀವ ಆನಂದ.ಆದರೆ ಕೃಷ್ಣಶಾಸ್ತ್ರಿಗಳಿಗೆ ಕೆಲಸಕ್ಕೆ ಸೇರಿದ ಕೆಲವೇ ದಿವಸಗಳಲ್ಲಿ ಭ್ರಮನಿರಸನವಾಯಿತು. ಆವರ ಹೃದಯಕ್ಕೆ ಹತ್ತಿರವಾದ ವಿಷಯಗಳ ಅವಲೋಕನಕ್ಕೆ ಅವಕಾಶವೇ ಇರಲಿಲ್ಲ. ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ತಾಕಲಾಟ ಶುರುವಾಯಿತು.ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಸರ್ಕಾರಿ ಕೆಲಸದಲ್ಲಿ ಅವಕಾಶವೇ ಇಲ್ಲವೆಂಬ ಸತ್ಯದ ಅರಿವಾಗಲು ಬಹಳ ಸಮಯ ಹಿಡಿಯಲಿಲ್ಲ.ತಮ್ಮ ಜೀವನವೆಲ್ಲ ಕಾಗದ, ಪತ್ರ ದಸ್ತಾವೇಜುಗಳ ನಡುವೆಯೇ ಮುಗಿದು ಹೋಗುವುದೆಂಬ ಅಳುಕು ಹೆಚ್ಚಾಯಿತು. ಆದಾಯ ಎಷ್ಟೇ ಇದ್ದರೂ ಆಸಕ್ತಿ ಕುದುರಲಿಲ್ಲ.ಅವರ ವಿದ್ವತ್‌ ವ್ಯರ್ಥವಾಗುವುದೆಂಬ ಭಯ ಆವರಿಸಿತು. ಹಿಂದು ಮುಂದು ನೋಡದೆ ಕೆಲಸಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದರು. ಅವರ ಬಂಧುಮಿತ್ರರು ಅವರ ಈ ದುಡುಕಿನ ನಡೆಯನ್ನು ವಿರೋಧಿಸಿದರು, ಬದುಕಿಗೆ ಭದ್ರತೆ ನೀಡುವ ಹುದ್ದೆ ಮತ್ತು ಕೈತುಂಬ ಆದಾಯ, ಸಾಮಾಜಿಕ ಗೌರವ ಅವರ ಗಮನ ಸೆಳೆಯುವಲ್ಲಿ ವಿಫಲವಾದವು. ಅದೇ ತಾನೇ ಚಿಗುರೊಡೆಯುತಿದ್ದ ಪುರಾತತ್ತ್ವಇಲಾಖೆಯು ಅವರ ಮನಸೆಳೆಯಿತು.ಭಾರತ ಸರ್ಕಾರದ ಇತಿಹಾಸ ಮತ್ತು ಪುರಾತತ್ತ್ವಇಲಾಖೆಯು ಅದೇ ತಾನೇ ಹೊಸದಾಗಿ ಪ್ರಾರಂಭಿಸಲಾಗಿತ್ತು ಅದರ ಮುಖ್ಯಾಧಿಕಾರಿಯಾಗಿ ಜರ್ಮನ್‌ ವಿದ್ವಾಂಸ ಡಾ. ಇ. ಹುಲ್ಷ್ ನೇಮಕವಾಗಿದ್ದರು. ಅವರಿಗೆ ಶಾಸನ ಸಂಶೋಧನೆ ಮತ್ತು ಪುರಾತತ್ತ್ವಅಧ್ಯಯನಕ್ಕೆ ದೇಶೀಯ ವಿದ್ವಾಂಸರ ಅಗತ್ಯವಿತ್ತು. ಅವರ ಗಮನಕ್ಕೆ ಯುವ ಕೃಷ್ಣಶಾಸ್ತ್ರಿಗಳು ಬಿದ್ದರು. ತಕ್ಷಣವೇ ಅವರಿಗೆ ಸಹಾಯಕ ಸಂಶೋಧಕನ ಹುದ್ದೆಗೆ ಸೇರಲು ಕರೆ ನೀಡಿದರು.ತಮ್ಮ ಅಧ್ಯಯನ ಶೀಲತೆಗೆ ಅಪಾರ ಅವಕಾಶವಿರುವ ಹುದ್ದೆಯನ್ನು ಕೃಷ್ಣಶಾಸ್ತ್ರಿಗಳು ಸಂಬಳ ಕಡಿಮೆಯಾದರೂ ಎರಡು ಮಾತಿಲ್ಲದೆ ಒಪ್ಪಿಕೊಂಡರು. ಅವರ ಜೊತೆಯಲ್ಲಿಯೇ ಇನ್ನೊಬ್ಬ ವಿದ್ವಾಂಸ ವೆಂಕಯ್ಯನವರ ನೇಮಕವೂ ಆಯಿತು. ಹೀಗೆ ಮೂರು ಜನರಿಂದ ಕೂಡಿದ ಮೊದಲ ತಂಡದಿಂದ ಭಾರತದಲ್ಲಿ ಪ್ರಥಮ ಪುರಾತತ್ತ್ವಇಲಾಖೆಯ ಉದಯವಾಯಿತು. ಅದರ ಮೊದಲ ಕಚೇರಿ ಬೆಂಗಳೂರಿಗೆ ಹತ್ತಿರವಿರುವ ನಂದಿಬೆಟ್ಟದಲ್ಲಿ ಸ್ಥಾಪಿಸಲಾಯಿತು. ಕೆಲವೇ ಸಮಯದ ನಂತರ ಕಚೇರಿಯನ್ನು ನೀಲಗಿರಿ ಬೆಟ್ಟಗಳ ನಡುವೆ ಇರುವ ಉದಕಮಂಡಲಕ್ಕೆ ವರ್ಗಾಯಿಸಲಾಯಿತು. ಅಂದಿನಿಂದ ದಕ್ಷಿಣ ಭಾರತದ ಶಾಸನ ಸಂಬಂಧಿತ ಪುರಾತತ್ತ್ವಚಟುವಟಿಕೆಗಳಿಗೆ ಉದಕಮಂಡಲವೇ ಕೇಂದ್ರವಾಯಿತು. ಇತ್ತೀಚೆಗೆ ಮೈಸೂರಿಗೆ ಬಂದಿದೆ. ಪುರಾತ್ವ ಇಲಾಖೆಯು ಆಗಿನ್ನೂ ಹೊಸ ಪರಿಕಲ್ಪನೆ. ವೈಯಕ್ತಿಕ ನೆಲೆಯಲ್ಲಿ ಶಾಸನ ಸಂಗ್ರಹದ ಕೆಲಸ ಅಲ್ಲಿ ಇಲ್ಲಿ ನಡೆದಿದ್ದರೂ ಅದಕ್ಕೊಂದು ಸಾಂಸ್ಥಿಕ ಸ್ವರೂಪ ಇರಲಿಲ್ಲ.ಪುರಾತತ್ವ, ವಿಜ್ಞಾನ, ಮತ್ತು ಲಿಪಿಶಾಸ್ತ್ರಗಳು, ಇನ್ನೂ ಪ್ರಾರಂಭದ ಹಂತದಲ್ಲಿಯೇ ಇದ್ದವು . ಆ ಶತಮಾನದ ಮೊದಲ ಅವಧಿಯಲ್ಲಿ ಪುರಾತತ್ತ್ವ, ವಿಜ್ಞಾನ, ಮತ್ತು ಲಿಪಿಶಾಸ್ತ್ರಗಳು ಇನ್ನೂ ಶೈಶವವಸ್ಥೆಯಲ್ಲಿಯೇ ಇದ್ದವು ಎಂಬುದು ಗಣನೀಯ. ಡಾ. ಹುಲ್ಷ್‌ ಅವರು ಭಾರತ ಸರ್ಕಾರದ ಪುರಾತತ್ತ್ವಇಲಾಖೆಯ ಮುಖ್ಯಸ್ಥರಾದರು. ಅವರು ಆಂಗ್ಲರಲ್ಲ, ಜರ್ಮನೀಯರು ಎಂಬದು ವಿಶೇಷ. ಅವರ ಮಾರ್ಗದರ್ಶನದಲ್ಲಿ ಶಾಸನ ತಜ್ಞರಾಗಿ ಕೃಷ್ಣಶಾಸ್ತ್ರಿಗಳು ಕೆಲಸ ಪ್ರಾರಂಭಿಸಿದರು. ಆ ಕಾಲದಲ್ಲಿ ಪೂರ್ತಿ ದಕ್ಷಿಣ ಭಾರತವು ಅವರ ವ್ಯಾಪ್ತಿಯಲ್ಲಿ ಬರುತಿತ್ತು. ತಮಿಳುನಾಡು, ಆಂಧ್ರ , ಕರ್ನಾಟಕ ಮತ್ತು ಕೇರಳದಲ್ಲಿ ಎಲ್ಲ ಪುರಾತತ್ತ್ವವಿಷಯಗಳನ್ನೂ ಅವರು ಗಮನಿಸಬೇಕಿತ್ತು . ತಮಿಳು, ಕನ್ನಡ, ತೆಲಗು, ಸಂಸ್ಕೃತ, ಭಾಷೆಗಳಲ್ಲಿನ ಶಾಸನಗಳ ಸಂಗ್ರಹವು ಅವರ ಸಂಸ್ಥೆಗೆ ಬಂದು ಸೇರಿದವು. ಅವನ್ನು ಸಂಗ್ರಹಿಸಿ ನಂತರ ತಮ್ಮಲ್ಲಿರುವ ಶಾಸನಗಳ ಓದಿ ಅಧ್ಯಯನ ಮಾಡಿ ,ದಾಖಲು ಮಾಡುವುದು ಅವರ ಮೊದಲ ಕೆಲಸವಾಗಿತ್ತು . ಈ ದಿಶೆಯಲ್ಲಿ ಶಾಸ್ತ್ರಿಗಳಿಗೆ ಒಂದು ಅನುಕೂಲವಿತ್ತು. ಕನ್ನಡ, ಸಂಸ್ಕೃತ, ಇಂಗ್ಲಿಷ್‌ಗಳಲ್ಲದೆ ಅವರ ಊರಿನ ಹಿನ್ನೆಲೆಯಿಂದಾಗಿ ತೆಲುಗು ಮತ್ತು ತಮಿಳು ಭಾಷೆಯ ಪರಿಚಯವೂ ಚೆನ್ನಾಗಿಯೇ ಇತ್ತು. ಅದರ ಸದುಪಯೋಗಕ್ಕೆ ಈಗ ಅವಕಾಶ ದೊರೆಯಿತು.ಶಾಸನ ಮತ್ತು ಪುರಾತತ್ತ್ವವಸ್ತುಗಳ ಸಂಗ್ರಹಣೆ, ಸಂರಕ್ಷಣೆ ವಿಶ್ಲೇಷಣೆ ಮತ್ತು ಪ್ರಕಟಣೆಯ ಹೊಣೆ ಅವರದಾಯಿತು. ಅವರು ನೆಮ್ಮದಿಯಿಂದ ಕೆಲಸ ಮಾಡಲು ಗೃಹ ಸೌಖ್ಯದ ಅಗತ್ಯವನ್ನು ಅರಿತವರು. ಅದಕ್ಕ ಉದಕಮಂಡಲದಲ್ಲಿಯೇ ತಮ್ಮ ಸಂಸಾರ ಹೂಡಿದರು. ಅವರದು ಹೇಳಿಕೊಳ್ಳುವಂಥಹ ಆದಾಯ ತರುವ ಕೆಲಸವಲ್ಲ ಒಂದು ಪುಟ್ಟ ಮನೆಯಲ್ಲಿಯೇ ಇದ್ದರೂ, ಅವರ ಮನೆಬಾಗಿಲು ಶಾಸನ ಸಂಬಂಧಿ ಕೆಲಸಕ್ಕೆ ಬರುವ ವಿದ್ವಾಂಸರ ಪಾಲಿಗೆ ಸದಾ ತೆರೆದಿರುತಿತ್ತು. ಅಲ್ಲಿ ನೆಲೆಸಿದುದು ಕೃಷ್ಣ ಶಾಸ್ತ್ರಿಗಳಿಗೆ ಬೇಸಿಗೆ ಕಳೆಯಲು ಬರುತಿದ್ದ ವಿದೇಶಿ ವಿದ್ವಾಂಸರೊಡನೆ ವಿಚಾರ ವಿನಿಮಯಕ್ಕೆ ಹೆಚ್ಚಿನ ಅವಕಾಶ ಒದಗಿಸುತಿತ್ತು. ಅವರ ಜ್ಞಾನ ದಿಗಂತದ ವಿಸ್ತರಣೆಗೆ ಬಡತನ ತಡೆಯಾಗಲಿಲ್ಲ. ಶಾಸ್ತ್ರಿಗಳು ತಮ್ಮ ಲಿಪಿಶಾಸ್ತ್ರ ಮತ್ತು ಪುರಾತತ್ತ್ವದ ಅನುಭವದಿಂದ ರಚಿಸಿದ ಕೃತಿ "South Indian Images of Gods and Godesses " ಪುಸ್ತಕವು ದಕ್ಷಿಣಭಾರತದಲ್ಲೇ ಶಿಲ್ಪಶಾಸ್ತ್ರದ ಬಹುಮುಖ್ಯ ಆಧಾರ ಗ್ರಂಥವಾಗಿದೆ. ಅದರಲ್ಲಿ ದಕ್ಷಿಣ ಭಾರತದಲ್ಲಿರುವ ದೇವಾಲಯಗಳ ಮತ್ತು ಮೂರ್ತಿಗಳ ಸೂಕ್ಷ್ಮ ವಿವರಗಳ ಸಮಗ್ರ ವಿವರವಿದೆ. ಅವರು ೧೯೦೮ ರಲ್ಲಿ ಸಹಾಯಕ ಅಧೀಕ್ಷಕರಾದರು. ನಂತರ ಮುಖ್ಯ ಅಧೀಕ್ಷಕರಾಗಿ ೧೯೨೫ ರಲ್ಲಿನಿವೃತ್ತರಾದರು. ಕೃಷ್ಣಶಾಸ್ತ್ರಿಗಳು ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಮತ್ತು ಇಂಗ್ಲಿಷ್‌ಗಳಲ್ಲಿ ಘನವಿದ್ವಾಂಸರು. ಅವರು ಪುರಾತತ್ತ್ವಮತ್ತು ಶಾಸನ ಆಧ್ಯಯನದಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಅವರ ಪ್ರಕಟಿತ ಕೃತಿಗಳೆಲ್ಲ ಬಹುತೇಕ ಕಚೇರಿಯ ಅಧಿಕೃತ ದಸ್ತಾವೇಜುಗಳು ಮತ್ತು ವರದಿಯ ರೂಪದಲ್ಲಿವೆ. ಅವುಗಳನ್ನು ಸ್ವತಂತ್ರ ಕೃತಿಗಳಾಗಿ ಪ್ರಕಟಿಸಿಲ್ಲ.ಅವರ "ಸೌತ್‌ ಇಂಡಿಯನ್‌ ಐಕಾನೊಗ್ರಫಿ " ಪುಸ್ತಕವು ಮಾತ್ರ ಬಹು ಅಮೂಲ್ಯವಾದ ಕೃತಿ. ಶಿಲ್ಪಶಾಸ್ತ್ರ ಕುರಿತಾದ ಆಕರ ಗ್ರಂಥವಾಗಿ ಇಂದಿಗೂ ಪರಿಗಣಿತವಾಗಿದೆ.ಇತ್ತೀಚೆಗೆ ಅದರ ಮರು ಮುದ್ರಣವಾಗಿದೆ. ಅವರು ಅನೇಕ ದಕ್ಷಿಣ ಭಾರತದ ಶಾಸನಗಳ ಕುರಿತಾದ ವಾರ್ಷಿಕ ವರದಿಗಳ ಸಂಪಾದಕರಾಗಿದ್ದರು. ಅವರು ‘ಎಪಿಗ್ರಫಿಯಾ ಇಂಡಿಕಾ'ದ ೧೭, ೧೮, ೧೯ ನೆಯ ಸಂಪುಟಗಳ ಸಂಪಾದಕರಾಗಿದ್ದರು. ಅದರಂತೆ ದಕ್ಷಿಣ ಭಾರತದ ಶಾಸನಗಳು ಮೂರು, ನಾಲ್ಕು ಮತ್ತು ಐದನೆಯ ಸಂಪುಟಗಳ ಸಂಪಾದಕರೂ ಆಗಿದ್ದರು. ಅವರು ಮಸ್ಕಿಯಲ್ಲಿ ದೊರೆತ ಅಶೋಕನ ಶಾಸನ ಮತ್ತು ಮಹಾಬಲಿಪುರದ ಶಿವ ದೇವಾಲಯದಲ್ಲಿನ ಐದು ಶಾಸನಗಳನ್ನು ಕುರಿತಾದ ವಿದ್ವತ್‌ ಪೂರ್ಣ ಲೇಖನ ಬರೆದಿರುವರು. ಶಾಸ್ತ್ರಿಗಳ ಸೇವೆಯ ಮೌಲ್ಯವನ್ನು ಸಾಹಿತ್ಯಲೋಕ ಗುರುತಿಸಿತು. ಅವರು ಕನ್ನಡದಲ್ಲಿ ಯಾವುದೆ ಸ್ವತಂತ್ರ ಕೃತಿಗಳ ಕೊಡುಗೆ ನೀಡದಿದ್ದರೂ ಹಳಗನ್ನಡದ, ಮತ್ತು ಇತಿಹಾಸದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಶಾಸನ ಕ್ಷೇತ್ರ , ಹಸ್ತಪ್ರತಿಗಳ ರಂಗದಲ್ಲಿ ಸಲ್ಲಿಸಿದ ಸೇವೆ ಅಪಾರ. ಅದರಿಂದ ಕೋಲಾರದಲ್ಲಿ ೧೯೨೪ ರಲ್ಲಿ ನಡೆದ ೧೦ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ದೊರಕಿತು. ಅವರಿಗೆ ೧೯೧೨ರಲ್ಲಿ ‘ರಾವ್‌ಸಾಹೇಬ್‌' ಮತ್ತು ೧೯೨೦ ರಲ್ಲಿ ‘ರಾವ್‌ ಬಹದ್ದೂರ್‌' ಪ್ರಶಸ್ತಿ ಪ್ರಾಪ್ತವಾಗಿತ್ತು. ಕೃಷ್ಣಶಾಸ್ತ್ರಿಗಳ ಶೋಧನೆಗಳೆಲ್ಲ ಇಲಾಖೆಯ ಕಾರ್ಯದ ಒಂದು ಭಾಗವಾದ್ದರಿಂದ ಕೊನೆಯ ತನಕ ಎಲೆ ಮರೆಯ ಕಾಯಿಯಾಗಿಯೇ ಉಳಿದರು.ಅವರ ಕುರಿತಾದ ಮಾಹಿತಿ ಕಾಲಗರ್ಭದಲ್ಲಿ ಅಡಗಿ ಹೋಗಿದೆ. ಒಂದು ಸರಿಯಾದ ಛಾಯಾ ಚಿತ್ರವೂ ಲಭ್ಯವಿಲ್ಲ . ಪುರಾತತ್ವ ಶೋಧನ ಕೆಲಸದಲ್ಲಿ ತೊಡಗಿದ ಇಲಾಖೆಯ ಮೊದಲ ಕನ್ನಡಿಗ ಎಂಬುದನ್ನು ಯಾರೂ ಮರೆಯುವ ಹಾಗಿಲ್ಲ.