ಮರವಂತೆ
ಮರವಂತೆ | |
---|---|
ಹಳ್ಳಿ | |
![]() Maravanthe beach | |
ನಿರ್ದೇಶಾಂಕ: Coordinates: 13°42′18″N 74°38′31″E / 13.705°N 74.642°E | |
Country | ![]() |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 576224 |
ಜಾಲತಾಣ | www.maravanthe.in |
ಮರವಂತೆಯು ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ.[೧] ಈ ಹಳ್ಳಿಯ ಮೂಲಕ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದ್ದರೂ, ಊರಿನ ಅಭಿವೃದ್ದಿಗೆ ಅದರಿಂದೇನೂ ಉಪಯೋಗವಾದಂತಿಲ್ಲ.
ಸಮುದ್ರ ತೀರ[ಬದಲಾಯಿಸಿ]
ನದಿ ಮತ್ತು ಸಮುದ್ರ ತೀರ ಹತ್ತಿರ ಬಂದರೂ, ಒಂದಾಗದೇ ದೂರಸಾಗುವ ಅಪರೂಪದ ಭೌಗೋಳಿಕ ಸ್ಥಳ ಇದು. ಮಧ್ಯ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದ್ದು, ಭಾರತದಲ್ಲಿ ಇಂತಹ ಇನ್ನೊಂದು ದೃಶ್ಯ ಇಲ್ಲ ಎನ್ನಲಾಗಿದೆ.
ಮಾರಸ್ವಾಮಿ ದೇವಾಲಯ[ಬದಲಾಯಿಸಿ]
ಇತ್ತ ಸಮುದ್ರ ತೀರ, ಅತ್ತ ಸೌಪರ್ಣಿಕಾ ನದಿ - ಈ ಮಧ್ಯೆ ಇರುವ ಪುಟ್ಟ ಪ್ರದೇಶದಲ್ಲಿ ಆಕರ್ಷಕವಾದ ಮಾರಸ್ವಾಮಿ ದೇವಾಲಯವಿದೆ. ಮರವಂತೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಈ ದೇವಾಲಯದ ಹಿನ್ನೆಲೆ ಕುತೂಹಲಕಾರಿಯಾಗಿದೆ. ಬಹು ಹಿಂದೆ, ವ್ಯಾಪಾರಿ ಹಡಗೊಂದು ಅಲ್ಲಿನ ಸಮುದ್ರತೀರಕ್ಕೆ ಬಂದು ಸೇರಿತು - ನೋಡಿದಾಗ ಮಹಾರಾಜರ ಶವವು ಅದರಲ್ಲಿ ಮೂರು ಚೂರುಗಳಾಗಿ ಬಿದ್ದಿತ್ತು - ಅವುಗಳನ್ನು ಪೂಜಿಸುವ ಹಿನ್ನೆಲೆಯಲ್ಲಿ ಮೂರು ಗರ್ಭಗುಡಿಗಳುಳ್ಳ ದೇವಾಲಯ ಸ್ಥಾಪನೆಗೊಂಡಿತು. ಕ್ರಿ.ಶಕಾರಂಭದಲ್ಲಿ ಆ ಭಾಗಲ್ಲಿದ್ದ ಸಮುದ್ರವ್ಯಾಪಾರದ ನೆನಪುಗಳು ಈ ದೇವಾಲಯದ ಸ್ಥಾಪನೆಯಲ್ಲಿದೆ ಎನ್ನಬಹುದು. ಈಗ ಅಲ್ಲಿ ವರಾಹ, ವಿಷ್ಣು ಮತ್ತು ನರಸಿಂಹನ ಪೂಜೆ ನಡೆಯುತ್ತಿದ್ದು, ಮುರು ಗರ್ಭಗುಡಿಗಳುಳ್ಳ ದೇವಾಲಯವಿದೆ. ಆ ಗರ್ಭಗುಡಿಗಳ ಮುಂಭಾಗದಲ್ಲಿ ಆಮೆ, ಮೀನು ಮತ್ತು ಮೊಸಳೆಗಳ ಶಿಲ್ಪಗಳಿರುವುದು ನಿಜಕ್ಕೂ ಕುತೂಹಲಕಾರಿ - ಇದು ಸಮುದ್ರದ ಜಲಚರಗಳ ಪೂಜೆಗೆ ಮೀಸಲಾಗಿದ್ದ ದೇವಾಲಯವಾಗಿರಬೇಕು - ಕಾಲ ಕ್ರಮೇಣ ಇತರ ದೇವರುಗಳ ಪ್ರತಿಷ್ಟಾಪನೆ ಆಗಿರಬಹುದು. ದೇವಾಲಯದ ಪಕ್ಕದಲ್ಲಿರುವ ನದಿಯಲ್ಲಿದೆ ಎನ್ನಲಾಗಿರುವ ದೊಡ್ಡ ಮೊಸಳೆ ಅಥವಾ ನೆಗಳಕ್ಕೆ ಈಗಲೂ ವರುಷಕ್ಕೊಮ್ಮೆ ಪೂಜೆ ನಡೆಯುತ್ತಿರುವುದೂ ಒಂದು ವಿಶೇಷ.
ಸೌಪರ್ಣಿಕಾ ನದಿ[ಬದಲಾಯಿಸಿ]
ಕೊಲ್ಲೂರಿನ ಮೂಲಕ ಹರಿದು ಬರುವ ಸೌಪರ್ಣಿಕಾ ನದಿಯು ಈ ಊರಿನಲ್ಲಿ ಸುಂದರವಾದ ತಿರುವಿನ ಮೂಲಕ ಹರಿದು ಹೋಗುತ್ತದೆ. ನದಿ ತೀರದಲ್ಲಿ ಬೆಳೆದಿರುವ ತೆಂಗಿನ ಮರಗಳು, ಪುಟ್ಟ ಪುಟ್ಟ ದ್ವೀಪಗಳು, ನೀಲ ನೀರು ಚಂದದ ದೃಶ್ಯ. ಕೊಡಚಾದ್ರಿ ಪರ್ವತವು ಈ ನೀರಿನಲ್ಲಿ ಪ್ರತಿಫಲಿತವಾಗುವ ಅಪರೂಪದ ದೃಶ್ಯವು ಮಾರಸ್ವಾಮಿ ದೇವಾಲಯದ ಬಳಿ ಕಾಣಸಿಗುತ್ತದೆ.[೨]
ನದಿಯಲ್ಲಿರುವ ನೆಗಳ[ಬದಲಾಯಿಸಿ]
ಮರವಂತೆಯಲ್ಲಿರುವ ಮಾರಸ್ವಾಮಿ ದೇವಾಲಯದ ಪಕ್ಕದಲ್ಲಿ ಹರಿಯುತ್ತಿರುವ ಸೌಪರ್ಣಿಕಾ ನದಿಯಲ್ಲಿ ಬಹುಹಿಂದಿನಿಂದ ಮೊಸಳೆಯ ರೀತಿಯ ಒಂದು ಪ್ರಾಣಿ ಇದೆ ಎನ್ನಲಾಗಿದ್ದು, ಅದನ್ನು ನೆಗಳ ಎಂದು ಕರೆಯುತ್ತಾರೆ. ಇದು ಒಂದು ಮಿತ್ ಆಗಿರಬಹುದು ಅಥವಾ ಹಿಂದೆ ಅಲ್ಲಿದ್ದ ಮೊಸಳೆಗಳ ಭಯದಿಂದ ಹುಟ್ಟಿದ ನಂಬಿಕೆಯಾಗಿರಬಹುದು. ಈಗಲೂ ದೇವಾಲಯದ ವತಿಯಿಂದ ವರುಷಕ್ಕೊಮ್ಮೆ ಈ ನೆಗಳಕ್ಕೆ ಪೂಜೆ ಆಗುತ್ತಿರುವುದಂತೂ ನಿಜ. ಈ ನೆಗಳ ವಾಸಿಸುವ ನದಿಯ ಗುಂಡಿಯ ಆಳವನ್ನು ಯಾರೂ ಅಳೆಯಲಾಗಿಲ್ಲ ಎಂಬ ಪ್ರತೀತಿ ಇದೆ.ಇಪ್ಪತ್ತನೆಯ ಶತಮಾನದಲ್ಲಿ ಇಲ್ಲಿಗೆ ಬಂದಿದ್ದ, ಶ್ರೀಧರ ಸ್ವಾಮಿಗಳ ಸಮ್ಮುಖದಲ್ಲಿ ಈ ಗುಂಡಿಗೆ ದಾರ ಬಿಟ್ಟು ಆಳವನ್ನು ಆಳೆಯುವ ಪ್ರಯತ್ನ ನಡೆದಿತ್ತಂತೆ.
ಸಿಗಡಿ ಕೃಷಿ[ಬದಲಾಯಿಸಿ]
ಮರವಂತೆ ಮತ್ತು ಆ ಸುತ್ತಲಿನ ಹಿನ್ನೀರಿನಲ್ಲಿ ಮತ್ತು ನದಿ ನೀರನ್ನು ಬಳಸಿ ಸಿಗಡಿ ಕೃಷಿಯನ್ನು ಮಾಡಲಾಗುತ್ತಿದೆ. ಒಂದೊಮ್ಮೆ ಬತ್ತ ಬೆಳೆಯುತ್ತಿದ್ದ ಗದ್ದೆಗಳನ್ನು ಸಿಗಡಿ ಕೃಷಿ ಮಾಡುವ ಹೊಂಡಗಳನ್ನಾಗಿ ಮಾಡಲಾಗಿದೆ. ಇದರಿಂದ ಕೆಲವು ಉದ್ಯಮಿಗಳ ವ್ಯಾಪಾರವು ಹೆಚ್ಚಾಗಿದ್ದು, ಆ ಪ್ರದೇಶದ ಆರ್ಥಿಕ ಅಭಿವೃದ್ದಿಗೆ ಅನುಕೂಲವಾಗಿದೆ. ಆದರೂ , ಸಿಗಡಿ ಕೃಷಿಗೆ ಬಳಸುವ ಕ್ರಿಮಿನಾಶಕಗಳಿಂದಾಗಿ ಆ ಪ್ರದೇಶದ ಪರಿಸರದ ಸಮತೋಲನದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.[೩]
ಹತ್ತಿರದ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಬೈಂದೂರು (೧೫ ಕಿ.ಮೀ) ಕುಂದಾಪುರ (೨೦ ಕಿ.ಮೀ) ಪಡುಕೋಣೆ (೧ ಕಿ.ಮೀ.) ತ್ರಾಸಿ ಬೀಚ್ (೩ ಕಿ.ಮೀ) ಉಡುಪಿ (೫೦ ಕಿ.ಮೀ.) ಕೊಲ್ಲೂರು (೨೫ ಕಿ.ಮೀ) ಕೊಡಚಾದ್ರಿ (೩೫ ಕಿ.ಮೀ)
ಉಲ್ಲೇಖಗಳು[ಬದಲಾಯಿಸಿ]
- ↑ "Maravanthe Village". www.onefivenine.com. Retrieved 10 January 2020.
- ↑ "Kodachadri (Shimoga) - 2020 All You Need to Know BEFORE You Go (with Photos)". TripAdvisor (in ಇಂಗ್ಲಿಷ್). Retrieved 10 January 2020.
- ↑ "Become a Shrimp Farmer - RDM Shrimp Aquaculture". RDM Shrimp. Archived from the original on 16 ಏಪ್ರಿಲ್ 2019. Retrieved 10 January 2020.