ದೂರ ಸರಿದರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ದೂರ ಸರಿದರು
ಲೇಖಕರುಎಸ್ ಎಲ್ ಭೈರಪ್ಪ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾದಂಬರಿ
ಪ್ರಕಟವಾದದ್ದು೧೯೬೨
ಪ್ರಕಾಶಕರುಸಾಹಿತ್ಯ ಭಂಡಾರ
ಪುಟಗಳು೨೫೨

ದೂರ ಸರಿದರು ಕನ್ನಡದ ಹೆಸರಾಂತ ಕಾದಂಬರಿಗಾರರಾದ ಎಸ್ ಎಲ್ ಭೈರಪ್ಪನವರು ೧೯೬೨ರಲ್ಲಿ ರಚಿಸಿದ ಒಂದು ಕಾದಂಬರಿ[೧]. ಮೈಸೂರಿನ ಒಂದು ಕಾಲೇಜಿನ ಸಾಹಿತ್ಯ ಹಾಗೂ ತತ್ವಶಾಸ್ತ್ರ ವಿದ್ಯಾರ್ಥಿಗಳ ಪ್ರೇಮಕಥೆಗಳನ್ನು ಒಳಗೊಂಡ ಕಾದಂಬರಿ ಇದಾಗಿದೆ. ಸಂಬಂಧದಲ್ಲಿ ಹೇಗೆ ಹೆಣ್ಣು- ಗಂಡಿನ ಸಮಾನತೆ, ಸಾಹಿತ್ಯ, ತತ್ವ ಮುಂತಾದವು ಪಾತ್ರ ವಹಿಸುತ್ತವೆ ಎಂಬುದು ಈ ಕಾದಂಬರಿಯ ಮುಖ್ಯ ವಸ್ತುವಾಗಿದೆ. ಪ್ರೇಮವನ್ನು ಸಾಹಿತ್ಯ , ತತ್ವದ ವಿದ್ಯಾರ್ಥಿಗಳು ವಿಭಿನ್ನವಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬುದು ಭೈರಪ್ಪಬನವರ ಪ್ರತಿಪಾದನೆಯಾಗಿದೆ. ಸಚ್ಚಿದಾನಂದ, ವಸಂತ, ಉಮಾ, ರಮಾ, ವಿನತಾ ಮುಖ್ಯ ಪಾತ್ರಗಳಾಗಿವೆ.

ಕಥಾ ಸಾರಾಂಶ[ಬದಲಾಯಿಸಿ]

ಮೈಸೂರಿನ ಕಾಲೇಜು ಒಂದರಲ್ಲಿ ಸ್ನಾತಕ ಪದವಿ ಓದುತ್ತಿರುವ ಸಚ್ಚಿದಾನಂದನಿಂದ ಕಥೆ ಶುರುವಾಗುತ್ತದೆ. ಪದವಿಯಲ್ಲಿ ಸಾಹಿತ್ಯವನ್ನು ಆರಿಸಿಕೊಂಡಿರುವ ಸಚ್ಚಿದಾನಂದ, ಆಗಾಗ ಅವನು ತನ್ನ ಕಥೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತಿರುತ್ತಾನೆ. ತರಗತಿಗಳಲ್ಲಿ ಮೊದಲಿಗನಾದ ಸದಾನಂದನಿಗೆ ಕೆಲವು ಗೊಂದಲಗಳ ನಡುವೆ ವಿನತೆಯ ಪರಿಚಯವಾಗುತ್ತದೆ. ವಿನತೆಯೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದು, ತಾನೂ ಕವನ, ಕಥೆಗಳನ್ನು ಬರೆದಿರುತ್ತಾಳೆ. ಆದರೆ ಅವಳ ಲೇಖನಗಳಲ್ಲಿ ಸಾಮಾನ್ಯವಾದ ಭಾವನೆಗಳು, ಆದರ್ಶಪ್ರಾಯ ಪಾತ್ರಗಳು ತುಂಬಿರುತ್ತವೆ. ಹೀಗೆಯೆ ಇಬ್ಬರ ಪರಿಚಯ ಗಾಢವಾಗಿ ಬೆಳೆದು, ಪ್ರೇಮಕ್ಕೆ ತಿರುಗುತ್ತದೆ. ಮತ್ತೊಂದೆಡೆ, ಶಿವಮೊಗ್ಗದಿಂದ ಬಂದಿರುವ ಬೇರೆಲ್ಲಾ ವಿದ್ಯಾರ್ಥಿ ಪಾತ್ರಗಳಿಗಿಂತ ಒಂದು ವರ್ಷಕ್ಕೆ ಹಿರಿಯನಾದ ವಸಂತ ಅದೇ ಕಾಲೇಜಿನಲ್ಲಿ ತತ್ವಶಾಸ್ತ್ರ ಓದುತಿರುತ್ತಾನೆ, ಅವನ ಕಿರಿಯ ತರಗತಿಯ ಉಮಾ ಅವನಿಗೆ ಪರಿಚಯವಾಗುತ್ತಾಳೆ. ವಸಂತನ ಮನೆಯಲ್ಲಿ ಮದುವೆಯ ಒತ್ತಡ ಬಂದಾಗ ಇವನಿಗೆ ಬೌದ್ಧಿಕವಾಗಿ ಸರಿಹೊಂದಬಲ್ಲ ಉಮೆಯನ್ನು ಮದುವೆಯಾಗಲು ಇಚ್ಛೆಪಟ್ಟು, ಇಬ್ಬರ ಮನೆಯವರ ಕಡೆಯಿಂದ ಒಪ್ಪಿಗೆಯಾಗಿ ನಿಶ್ಚಿತಾರ್ಥವಾಗುತ್ತಾರೆ. ಇನ್ನೊಂದೆಡೆ, ಸಚ್ಚಿದಾನಂದನಿಗೆ ತನ್ನ ಇನ್ನೊಬ್ಬ ಸಹಪಾಠಿಯಾದ ರಮೆಯ ಪರಿಚಯವಾಗುತ್ತದೆ. ರಮೆಗೆ ಸಚ್ಚಿದಾನಂದನ ಮೇಲೆ ಪ್ರೇಮಾಂಕುರವಾಗುತ್ತದೆ, ಆದರೆ ಮೊದಲೇ ಸಚ್ಚಿದಾನಂದ ವಿನತೆಯನ್ನು ಪ್ರೀತಿಸುತ್ತಿರುವದರಿಂದ, ರಮೆಯನ್ನು ನಿರಾಕರಿಸುತ್ತಾನೆ. ವಿನತೆಯ ತಾಯಿಗೆ ತಮ್ಮ ಮಗಳನ್ನು ತಮ್ಮದೇ ಅಥವಾ ತಮಗಿಂತ ಹೆಚ್ಚು ಸಾಮಾಜಿಕ ಸ್ಥಾನಮಾನಗಳಿರುವವರಿಗೆ ಕೊಟ್ಟು ಮದುವೆ ಮಾಡುವ ಅಪೇಕ್ಷೆ. ಸಚ್ಚಿದಾನಂದ-ವಿನತೆಯರ ಪ್ರೀತಿಯನ್ನು ವಿನತೆಯ ತಾಯಿ ಪರೋಕ್ಷವಾಗಿಯೇ ವಿರೋಧಿಸುತ್ತಾಳೆ. ವಸಂತ, ಸಚ್ಚಿದಾನಂದ, ಉಮಾ, ರಮಾ ಎಲ್ಲರೂ ಪದವಿ ಮುಗಿಸುತ್ತಾರೆ, ಸ್ನಾತಕೋತ್ತರ ಪದವಿಗೆ ಸೇರುತ್ತಾರೆ. ವಿನತಾ ಪದವಿ ಮುಗಿಸಿ ಟಿ. ನರಸೀಪುರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಳ್ಳುತ್ತಾಳೆ. ಸ್ನಾತಕೋತ್ತರ ಪದವಿ ಓದುತ್ತಾ ಉಮೆಗೆ ತತ್ವಶಾಸ್ತ್ರದ ಮೇಲೆ ಇರುವ ಅನಿಸಿಕೆ ವಸಂತನಿಗೆ ವಿರೋಧವಾಗಿ ಬದಲಾಗುತ್ತದೆ. ಈ ಕಾರಣದಿಂದಾಗಿ, ಇಬ್ಬರ ಅನಿಸಿಕೆಗಳು ವಿರುದ್ಧವಾಗಿರುವ ಕಾರಣದಿಂದಾಗಿ ವಸಂತ ತಮ್ಮ ಮದುವೆ ಮುಂದೂಡುತ್ತಾನೆ. ಇತ್ತ ಸಚ್ಚಿದಾನಂದ-ವಿನತೆಯರ ಭೇಟಿ ಕ್ರಮೇಣ ಕಡಿಮೆಯಾಗುತ್ತದೆ. ವಸಂತ ಮತ್ತು ಸಚ್ಚಿದಾನಂದ ತಮ್ಮ ತಮ್ಮ ಓದು ಮುಗಿದ ಮೇಲೆ ಬೇರೆಡೆಗೆ ಹೋಗಿ ಉಪನ್ಯಾಸಕರಾಗಿ ಸೇರುತ್ತಾರೆ. ವಿನತೆ ತನ್ನ ತಾಯಿಗೆ ತನ್ನ ಪ್ರೀತಿಯ ಬಗ್ಗೆ ಮನವೊಲಿಸುವಲ್ಲಿ ಹಲವಾರು ಬಾರಿ ವಿಫ಼ಲವಾಗುತ್ತಾಳೆ. ಸಚ್ಚಿದಾನಂದ ತನ್ನ ತಾಯಿಯ ಒತ್ತಾಯದ ಮೇರೆಗೆ ಬೇರೆ ಹುಡುಗಿಯನ್ನು ಮದುವೆಯಾಗುತ್ತಾನೆಯಾದರೂ, ಅವನಿಗೆ ವಿನತೆಯ ನೆನಪಾಗುತಿರುತ್ತದೆ. ಇದೇ ಖಿನ್ನತೆಗೊಳಗಾಗಿ, ಒಂದು ದಿನ ವಿನತೆ ಅಸುನೀಗುತ್ತಾಳೆ. ರಮೆ ದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ ವೃತ್ತಿ ಮಾಡುತ್ತಾಳೆ. ಇತ್ತ ವಸಂತ ತನ್ನ ಪ್ರತಿಭೆಯಿಂದಾಗಿ ವಿದೇಶದಲ್ಲಿ ಪ್ರಾಧ್ಯಾಪಕನಾಗುತ್ತಾನೆ.

  1. "ದೂರ ಸರಿದರು". GoodReads. Retrieved 26 March 2018.