ಜೇಕಿನ ಗಡ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇಕಿನ ಗಡ್ಡೆ (ಮುಸ್ತಾ, ತುಂಗೆಗಡ್ಡೆ)[ಬದಲಾಯಿಸಿ]

ಹುಲ್ಲು ಜಾತಿಗೆ ಸೇರಿದ ಸಸ್ಯ, ಉದ್ದವಾದ ಮತ್ತು ಚೂಪಾದ ಹಸಿರೆಲೆಗಳಿರುತ್ತದೆ. ಸಸ್ಯವನ್ನು ಭೂಮಿಯಿಂದ ಕಿತ್ತಾಗ ಒಳಗಡೆ ಸಣ್ಣ ಸಣ್ಣ ಕಪ್ಪಾದ ಗಡ್ಡೆಗಳಿರುತ್ತವೆ. ಗಡ್ಡೆಗಳ ಮೇಲೆ ರೋಮಗಳಿರುತ್ತವೆ.ರುಚಿಯಲ್ಲಿ ಒಗರಾಗಿರುತ್ತವೆ. ಸಾಮಾನ್ಯವಾಗಿ ತೋಟ ಹೊಲಗಳಲ್ಲಿ ಬೆಳೆಯುತ್ತದೆ. ರೈತರು ಈ ಸಸ್ಯವನ್ನು ದನಗಳ ಮೇವಿನಲ್ಲಿ ಬೆರೆಸಿ ತಿನ್ನಿಸುತ್ತಾರೆ. ಮತ್ತು ಕಳೆಸೊಪ್ಪೆಂದು ಭಾವಿಸುತ್ತಾರೆ. ಎಲೆಗಳ ಮಧ್ಯೆ ದಪ್ಪವಾದ ಕಾಂಡ ಹೊರಟು ತುದಿಯಲ್ಲಿ ಪುಷ್ಪಗುಚ್ಚವನ್ನು ಪಡೆದಿರುತ್ತದೆ.[೧] ರಾಸಾಯನಿಕ ವಿಭಜನೆಯಂತೆ ಈ ಮೂಲಿಕೆಯಲ್ಲಿ ಕ್ಷಾರ, ಆಲ್ಬುಮಿನ್, ಆವಿಯಾಗುವ ಸುಗಂಧ ದ್ರವ್ಯ ಸಕ್ಕರೆ ಮತ್ತು ಪಿಷ್ಟ ಪದಾರ್ಥಗಳಿರುತ್ತವೆ. ನದಿ ಮತ್ತು ಹಳ್ಳಗಳ ಬದಿಯಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ. ಇವುಗಳಲ್ಲಿ ನಾಗರ ಮುಸ್ತ, ಭದ್ರ ಮುಸ್ತಾ ಮತ್ತು ಕೈವರ್ತ ಎನ್ನುವ ಬಗೆಗಳಿವೆ. ಕೆಲವುದರಲ್ಲಿ ಗಡ್ಡೆಗಳು ಉದ್ದವಾಗಿದ್ದು, ಕಪ್ಪಾಗಿರುತ್ತವೆ, ಮತ್ತು ಕೆಲವಲ್ಲಿ ಗುಂಡಗೆ ಚಿಕ್ಕದಾಗಿರುತ್ತವೆ ಆದರೆ ಗುಣದಲ್ಲಿ ಎಲ್ಲವೂ ಒಂದೇ ಆಗಿರುತ್ತವೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಹೂ-ಕಾಯಿ ಬಿಡುತ್ತದೆ.

ತಾಯಂದಿರ ಹಾಲು ವೃದ್ಧಿಯಾಗಲು[ಬದಲಾಯಿಸಿ]

ಹೊಸದಾಗಿ ಕೊನ್ನಾರಿ ಗಡ್ಡೆಯನ್ನು ಕಿತ್ತು ತಂದು ಚೆನ್ನಾಗಿ ತೊಳೆದು, ಎಲೆಗಳನ್ನು ಬೇರ್ಪಡಿಸಿ, ನುಣ್ಣಗೆ ಅರೆದು ಸ್ಥನಗಳಿಗೆ ಲೇಪಿಸುವುದು ಅಥವಾ ಕೊನ್ನಾರಿ ಗಡ್ಡೆಯ ಗಂಧವನ್ನು ತೇದು ಹಚ್ಚುವುದು. ಗಡ್ಡೆಗಳ ನಯವಾದ ಚೂರ್ಣವನ್ನು ಜೇನು ತುಪ್ಪದೊಂದಿಗೆ ತಾಯಂದಿರು ಸೇವಿಸುವುದು. ಹಾಲು ಶುದ್ಧಿಯಾಗಿ ವೃದ್ಧಿಯಾಗುವುದು. ಪ್ರಮಾಣ ಕಾಲು ಟೀ ಚಮಚ ಒಂದುಹೊತ್ತಿಗೆ.

ಗರ್ಭಿಣಿಯರ ವಾಂತಿಗೆ[ಬದಲಾಯಿಸಿ]

ತುಂಗೆ ಗಡ್ಡೆ, ಶುಂಠಿ, ಕೆಂಪು ಕಲ್ಲು ಸಕ್ಕರೆ, ಸಮನಾಗಿ ಸೇರಿಸಿ, ಇವೆಲ್ಲವನ್ನೂ ನುಣ್ಣಗೆ ಅರೆದು ಕಷಾಯ ಮಾಡಿ ಕುಡಿಸುವುದು. ಒಂದು ವೇಳೆಗೆ ಒಂದು ಟೀ ಚಮಚ. ದಿವಸಕ್ಕೆ 2 ಅಥವಾ 3 ಸಾರಿ ಸೇವಿಸುವುದು.

ಮಕ್ಕಳ ಬೇಧಿಗೆ[ಬದಲಾಯಿಸಿ]

ಕೊನ್ನಾರಿ ಗಡ್ಡೆಯನ್ನು ಶುದ್ಧ ಜೇನಿನಲ್ಲಿ ತೇದು ಸ್ವಲ್ಪ ನೆಕ್ಕಿಸುವುದು. ಎರಡು ಮೂರು ದಿವಸ, ದಿವಸಕ್ಕೆ ಎರಡು ವೇಳೆ ಸಾಕು.

ಆಮಶಂಕೆಗೆ[ಬದಲಾಯಿಸಿ]

ಒಣಗಿದ ಕೊನ್ನಾರಿ ಗಡ್ಡೆಗಳನ್ನು ಜಜ್ಜಿ ಕಷಾಯ ಮಾಡಿ, ಜೇನು ತುಪ್ಪದೊಂದಿಗೆ ಸೇವಿಸುವುದು ಅಥವಾ ಕೊನ್ನಾರಿ ಗಡ್ಡೆಯನ್ನು ಹಸಿ ಶುಂಠಿಯೊಂದಿಗೆ ಸೇರಿಸಿ ಅರೆದು ಸ್ವಲ್ಪ ಶುದ್ಧವಾದ ಜೇನು ಸೇರಿಸಿ ಸೇವಿಸುವುದು.

ಹುಳುಕು ಹಲ್ಲಿನ ಭಾದೆ, ನೋವು[ಬದಲಾಯಿಸಿ]

ಅತಿಮಧುರ, ವಾಯುವಿಳಂಗ, ಕಗ್ಗಲಿ ಮರದ ತಿರುಳು, ಲಕ್ಕಿ ಸೊಪ್ಪು, ಜೈಷ್ಠ ಮಧು, ಮಂಜಿಷ್ಠೆ, ದೇವದಾರು ಚಕ್ಕೆಗಳನ್ನು 10-10ಗ್ರಾಂ ತೆಗೆದುಕೊಂಡು ನುಣ್ಣಗೆ ಪುಡಿ ಮಾಡುವುದು. 200 ಮಿ.ಲೀ, ಎಳ್ಳೆಣ್ಣೆಯಲ್ಲಿ ಮಂದಾಗ್ನಿಯಿಂದ ಕಾಯಿಸುವುದು.ತೈಲವು ತಣ್ಣಗಾದ ಮೇಲೆ ಗಾಜಿನ ಅಥವಾ ಮಣ್ಣಿನ ಭರಣಿಯಲ್ಲಿ ಹಾಕಿಡುವುದು.ಹುಳುಕು ಹಲ್ಲಿನ ನೋವಿರುವ ಸ್ಥಳದಲ್ಲಿ ಸ್ವಲ್ಪ ಹತ್ತಿಯನ್ನು ಎಣ್ಣೆಯಲ್ಲಿ ಅದ್ದಿ ಇಡುವುದು.

ಗಂಟಲು ನೋವು, ಕೆಮ್ಮು, ದಮ್ಮಿಗೆ[ಬದಲಾಯಿಸಿ]

ಅಳಲೆಕಾಯಿ ಸಿಪ್ಪೆ, ಶುಂಠಿ, ಕೊನ್ನಾರಿಗಡ್ಡೆ ಸಮತೂಕ ನಯವಾಗಿ ಚೂರ್ಣಿಸಿ, ಸಮತೂಕ ಹಳೇ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಅರೆದು ಕಡಲೆ ಗಾತ್ರ ಮಾತ್ರೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸಿಟ್ಟುಕೊಳ್ಳುವುದು. ಒಂದೊಂದು ಮಾತ್ರೆಯನ್ನು ಬಾಯಲ್ಲಿ ಹಾಕಿಕೊಂಡು ರಸ ನುಂಗುವುದು.ದಿವಸಕ್ಕೆ 4-5 ಸಾರಿ ಆಗಬಹುದು.

ಜ್ವರದಲ್ಲಿ, ದಾಹಕ್ಕೆ[ಬದಲಾಯಿಸಿ]

ಕೊನ್ನಾರಿಗಡ್ಡೆಯ 10ಗ್ರಾಂ ಚೂರ್ಣವನ್ನು ಒಂದು ಬಟ್ಟಲು ಶುದ್ಧನೀರಿಗೆ ಸೇರಿಸಿ,ಕಾಯಿಸಿ ಮಾಡಿ ದಿವಸಕ್ಕೆ 3-4 ಬಾರಿ ಕುಡಿಯುವುದು.

ಮಸ್ತಕಾರಿಷ್ಠ[ಬದಲಾಯಿಸಿ]

ಗ್ರಂಧಿಗೆ ಅಂಗಡಿಯಲ್ಲಿ ದೊರೆಯುವ ಈ ಅರಿಷ್ಠದ ಸೇವನೆಯಿಂದ ನೀರಿನಂತೆ ಆಗುತ್ತಿರುವ ಬೇಧಿ ನಿಲ್ಲುತ್ತದೆ. ಅಜೀರ್ಣ, ಸಂಗ್ರಹಣೆ, ಹಸಿವು ಆಗದಿರುವಿಕೆ ನಿವಾರಣೆಯಾಗುತ್ತದೆ.

ಬೆವರುಸಲೆ[ಬದಲಾಯಿಸಿ]

ಕೊನ್ನಾರಿ ಗಡ್ಡೆ, ಶ್ರೀಗಂಧದ ಪುಡಿ,ದನಿಯ,ಲಾಮಂಚ ಸಮತೂಕ ಪನ್ನೀರಿನಲ್ಲಿ ಅರೆದು ಮೈಗೆ ಹಚ್ಚುವುದು.

ಕಣ್ಣಿನಲ್ಲಿ ಹೂವು, ನಿಶಾ ಅಂಧತ್ವ[ಬದಲಾಯಿಸಿ]

ತುಂಗೆ ಗಡ್ಡೆಯನ್ನು ಹಸುವಿನ ಗಂಜಳದಲ್ಲಿ ತೇದು ಕಣ್ಣಿನ ಸುತ್ತಾ ಪಟ್ಟಿ ಹಾಕುವುದು ಮತ್ತು ರಾತ್ರಿ ಅರಳೆಗೆ ಹಚ್ಚಿ ಪಟ್ಟಿ ಹಾಕಿ ಮಲಗುವುದು. ಸ್ವಲ್ಪ ಉರಿಯುತ್ತದೆ, ಸಹಿಸಿಕೊಳ್ಳಬೇಕು.

  1. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು