ಕೆ.ವಿ.ತಿರುಮಲೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ವಿ.ತಿರುಮಲೇಶ್ (೧೨ ಸೆಪ್ಟೆಂಬರ್ ೧೯೪೦ - ೩೦ ಜನವರಿ ೨೦೨೩) ಇವರು ಕನ್ನಡ ಭಾಷೆಯ ಬಹುಮುಖ ಕವಿ , ಭಾಷಾ ವಿಜ್ಞಾನಿ , ವಿದ್ವಾಂಸರು, ವಿಮರ್ಶಕ ಹಾಗೂ ಅನುವಾದಕಾರರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ನಡೆಸಿದ್ದರು. ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಆಳ ನಿರಾಳ ಎಂಬ ಅಂಕಣ ಬರಹ ಬರೆದಿದ್ದಾರೆ.

ಹುಟ್ಟು ಮತ್ತು ಪ್ರಾಥಮಿಕ ಜೀವನ[ಬದಲಾಯಿಸಿ]

ಇವರು ೧೨ ಸೆಪ್ಟೆಂಬರ್ ೧೯೪೦ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ ಜನಿಸಿದರು.

ಗ್ರಾಮಾಂತರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ನಂತರ ಕಾಸರಗೋಡು ಮತ್ತು ತಿರುವಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಅಭ್ಯಾಸ ಮಾಡಿ, 1966ರಿಂದ ಕೆಲವು ಕಾಲ ಕೇರಳದ ಹಲವು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು. 1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು.

ತಿರುಮಲೇಶರು ಇಂಗ್ಲೆಂಡಿನ ರೆಡಿಂಗ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ವ್ಯಾಸಂಗ ಮಾಡಿ ಎಂ.ಎ (ಅನ್ವಯಿಕ ಭಾಷಾವಿಜ್ಞಾನ) ಪದವಿಯನ್ನೂ ಪಡೆದುಕೊಂಡರು.

ವ್ಯಕ್ತಿಚಿತ್ರ[ಬದಲಾಯಿಸಿ]

ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. [೧] ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. [೨] ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ.ತಿರುಮಲೇಶರು ಪ್ರಸ್ತುತ ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. [೩] [೨] ಹೈದರಾಬಾದಿನ ಸಿ.ಐ.ಇ.ಎಫ್.ಎಲ್. (ಈಗ ಇ.ಎಫ್.ಎಲ್.ಯು.) ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದ ಪ್ರೊಫಸರರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿ.ಎಚ್ ಡಿ. ಪ್ರಬಂಧ. ಬೇಂದ್ರೆಯವರ ಶೈಲಿಯ ಬಗ್ಗೆಯೂ ಮತ್ತಿತರ ಭಾಷಾಸಂಬಂಧಿ ವಿಷಯಗಳನ್ನು ಕುರಿತೂ ಹಲವಾರು ಲೇಖನಗಳನ್ನೂ, ಒಂದು ಲೇಖನ ಸಂಗ್ರಹವನ್ನೂ ಪ್ರಕಟಿಸಿದ್ದಾರೆ.[೪] ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅತ್ಯುತ್ತಮವಾದುದ್ದನ್ನೇ ಬರೆದರು. ಕನ್ನಡ ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿದ್ದರು.

ಕೃತಿಮಾಲೆ[೧][ಬದಲಾಯಿಸಿ]

ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ೬೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಕವನ ಸಂಕಲನ[ಬದಲಾಯಿಸಿ]

  • ಅಕ್ಷಯ ಕಾವ್ಯ. ಅಭಿನವ ಪ್ರಕಾಶನ, ಬೆಂಗಳೂರು, ೨೦೧೦
  • ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ, ಅಭಿನವ ಪ್ರಕಾಶನ, ಬೆಂಗಳೂರು, ೨೦೧೧
  • ಅವ್ಯಯ ಕಾವ್ಯ . ಅಭಿನವ ಪ್ರಕಾಶನ, ಬೆಂಗಳೂರು, ೨೦೧೯
  • ಅರಬ್ಬಿ. ಅಭಿನವ, ಬೆಂಗಳೂರು. ೨೦೧೫
  • ಅವಧ. ಅಕ್ಷರ ಪ್ರಕಾಶನ, ೧೯೮೬
  • ಏನೇನ್ ತುಂಬಿ. ಅಭಿನವ, ಬೆಂಗಳೂರು, ೨೦೧೪
  • ಪಾಪಿಯೂ. ಅಕ್ಷರ ಪ್ರಕಾಶನ, ೧೯೯೦
  • ಮಹಾಪ್ರಸ್ಥಾನ. ಅಕ್ಷರ ಪ್ರಕಾಶನ, ೧೯೭೧
  • ಮುಖವಾಡಗಳು. ಅಕ್ಷರ ಪ್ರಕಾಶನ, ಸಾಗರ, ೧೯೬೮
  • ಮುಖಾಮುಖಿ. ನೆಲಮನೆ ಪ್ರಕಾಶನ, ಮೈಸೂರು, ೧೯೭೮
  • ವಠಾರ. ನವ್ಯ ಸಾಹಿತ್ಯ ಸಂಘ, ಕಾಸರಗೋಡು, ೧೯೬೯

ಕಥಾಸಂಕಲನ[ಬದಲಾಯಿಸಿ]

  • ನಾಯಕ ಮತ್ತು ಇತರರು [೫]
  • ಕೆಲವು ಕಥಾನಕಗಳು
  • ಕಳ್ಳಿ ಗಿಡದ ಹೂ
  • ಅಪರೂಪದ ಕತೆಗಳು

ಕಾದಂಬರಿ[ಬದಲಾಯಿಸಿ]

  • ಆರೋಪ
  • ಮುಸುಗು
  • ಅನೇಕ

ವಿಮರ್ಶಾ ಕೃತಿಗಳು[ಬದಲಾಯಿಸಿ]

  • ಬೇಂದ್ರೆಯವರ ಕಾವ್ಯಶೈಲಿ.
  • ಅಸ್ತಿತ್ವವಾದ - ೧೯೮೯ / ೨೦೧೬
  • ಸಮ್ಮುಖ.
  • ಉಲ್ಲೇಖ.
  • ಕಾವ್ಯಕಾರಣ (ಆಧುನಿಕ ಕನ್ನಡ ಕಾವ್ಯದ ಒಂದು ಪಾರ್ಶ್ವನೋಟ)

ಭಾಷಾ ವಿಜ್ಞಾನ ಲೇಖನ ಸಂಗ್ರಹಗಳು[ಬದಲಾಯಿಸಿ]

  • ನಮ್ಮ ಕನ್ನಡ
  • ಸಮೃದ್ಧ ಕನ್ನಡ
  • ಇನ್ನಷ್ಟು ಕನ್ನಡ

ನಾಟಕಗಳು[ಬದಲಾಯಿಸಿ]

  • ಕಲಿಗುಲ
  • ಟೈಬೀರಿಯಸ್

ಅಂಕಣ ಬರಹಗಳು[ಬದಲಾಯಿಸಿ]

  • ವಾಗರ್ಥ ವಿಲಾಸ

ಅನುವಾದಿತ ಕೃತಿಗಳು[ಬದಲಾಯಿಸಿ]

  • ಕಲಾಚೇತನ (ರಾಬರ್ಟ್ ಹೆನ್ರಿ - ದಿ ಆರ್ಟ್ ಸ್ಪಿರಿಟ್)
  • ಡಾನ್ ಕ್ವಿಕ್ಸಾಟನ ಸಾಹಸಗಳು (ಮಿಗುವೆಲ್ ಸರ್ವಾಟಿಸ್ ಕಾದಂಬರಿ)
  • ಗಂಟೆ ಗೋಪುರ (ಹರ್ಮನ್ ಮೆಲ್ವಿಲ್ ಕಥೆಗಳ)
  • ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ
  • ಪೂರ್ವಯಾನ [ಮೂಲ:ಜೆರಾರ್ಡ್ ದ ನೆರ್ವಾಲ್]

ಪ್ರಶಸ್ತಿಗಳು[ಬದಲಾಯಿಸಿ]

  • ಅಕ್ಷಯ ಕಾವ್ಯ ಎಂಬ ಕವನ ಸಂಕಲನಕ್ಕೆ ೨೦೧೫ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.[೬]
  • ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ನಿರಂಜನ ಪ್ರಶಸ್ತಿ
  • ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ
  • ವರ್ಧಮಾನ್ ಪ್ರಶಸ್ತಿ
  • ಗೋವಿಂದ ಪೈ ಪ್ರಶಸ್ತಿ

ನಿಧನ[ಬದಲಾಯಿಸಿ]

ಇವರು ಜನವರಿ ೩೦, ೨೦೨೩ ರಂದು ಹೈದರಾಬಾದಿನಲ್ಲಿ ತಮ್ಮ ೮೨ನೆಯ ವಯಸ್ಸಿನಲ್ಲಿ ನಿಧನರಾದರು.[೭]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "ಓದು ಎಂದೆಂದಿಗೂ ಮುಗಿಯದ ಪಯಣ".[ಶಾಶ್ವತವಾಗಿ ಮಡಿದ ಕೊಂಡಿ]
  2. ೨.೦ ೨.೧ "ಸಮ್ಮೇಳನದ ಮುಖ್ಯ ಅತಿಥಿ ಕೆ. ವಿ. ತಿರುಮಲೇಶ್".
  3. "ನಿರಂಜನ ಪ್ರಶಸ್ತಿಗೆ ಕವಿ ಕೆ.ವಿ.ತಿರುಮಲೇಶ್‌ ಆಯ್ಕೆ".
  4. "ಕೆ.ವಿ.ತಿರುಮಲೇಶ್".[ಶಾಶ್ವತವಾಗಿ ಮಡಿದ ಕೊಂಡಿ]
  5. "Mysore University Main Library Catalog".[ಶಾಶ್ವತವಾಗಿ ಮಡಿದ ಕೊಂಡಿ]
  6. "ಕೆ.ವಿ.ತಿರುಮಲೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ". Retrieved 18 December 2015.
  7. https://www.udayavani.com/homepage-karnataka-edition/breaking-news/hyderabad-renowned-poet-critic-storyteller-kv-tirumalesh-passed-away. {{cite news}}: Missing or empty |title= (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]