ಕೂಡ್ಲು ತೀರ್ಥ
ಕೂಡ್ಲು ತೀರ್ಥ ಜಲಪಾತ ಹೆಬ್ರಿಯಿ೦ದ ೨೦ ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ಸೀತಾ ನದಿಯ ಉಗಮ ಸ್ಥಳವಾಗಿದ್ದು, ರಸ್ತೆ ಸ೦ಪರ್ಕದಿ೦ದ ೪ ಕಿ.ಮೀ. ದೂರದಲ್ಲಿದೆ. ೪ ಕಿ.ಮೀ. ಚಾರಣದ ನಂತರ ರಮ್ಯ ಮನೋಹರ ಜಲಪಾತವು ಎದುರುಗೊಳ್ಳುವುದು. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ಮುದ ನೀಡುವುದು.
ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಪಡೆದಿರುವ ಆಗುಂಬೆಯ ದಟ್ಟ ಕಾನನದ ಕಾಲುದಾರಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಇರುವ ಕೂಡ್ಲು ತೀರ್ಥವು ಬಳವಳಿದು ಅರಸಿ ಬಂದ ಮನಕೆ ಚೆಲುವಿನಿಂದ ಮನಸೂರೆಗೊಳ್ಳುವಂತೆ ಮಾಡಿಬಿಡುತ್ತದೆ.
ದಟ್ಟ ಕಾನನದ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ರಮಣೀಯತೆಯ ಅಪರಾವತಾರದಂತಹ ಕಂಪ ಸೂಸುತ್ತ ಭೋರ್ಗರೆಯುತ್ತ ಬೀಳುವ ದೃಶ್ಯ ನಿಜಕ್ಕೂ ನಡೆದು ಬಂದ ದಣಿವೆಲ್ಲವನ್ನೂ ಇಂಗಿಸಿಬಿಡುತ್ತದೆ. ನಿತ್ಯ ಹರಿದ್ವರ್ಣದ ಕಾನನವನ್ನು ನೆನಪಿಸುವ ದಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಗಂಟೆಯ ನಡಿಗೆಯ ಪಯಣ ಚೇತೋಹಾರಿಯಾದದ್ದು. ಎತ್ತ ನೋಡಿದರೂ ಮುಗಿಲೆತ್ತರಕ್ಕೆ ಬೆಳೆದು ನಿಂತ, ಮುಂದಿನ ಹಾದಿಯೇ ಕಾಣಿಸದಷ್ಟು ಒತ್ತಾಗಿ ಬೆಳೆದು ನಿಂತ ವೃಕ್ಷ ರಾಶಿ, ಅಲ್ಲಲ್ಲಿ ಕಂಡೂ ಕಾಣದೆ ಸರಸರ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳ ಸಪ್ಪಳ, ಕಾಡು ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ, ದೂರದ ಸೀತಾ ನದಿಯ ಜಲಪಾತದ ಝಳು ಝಳು ಸದ್ದು ಹೀಗೆ ಎಲ್ಲವೂ ಪ್ರವಾಸಿಗರ ಪಯಣವನ್ನು ಆವಿಸ್ಮರಣೀಯಗೊಳಿಸುತ್ತದೆ.
ಗಗನದಿಂದ ಭುವಿಯತ್ತ ಒಮ್ಮೆಲೆಯೇ ಹೆಬ್ಬಂಡೆಗಳನ್ನು ಸೀಳಿಕೊಂಡು ದೊಪ್ಪೆಂದು ಧುಮ್ಮಿಕ್ಕುವ ಸೀತಾ ನದಿಯ ಕೂಡ್ಲು ತೀರ್ಥದ ಪರಿಸರ ನೋಡುಗರನ್ನು ಯಾವುದೇ ಒಂದು ಕಿನ್ನರ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ. ಜಲಪಾತದ ಒಂದು ಪಾರ್ಶ್ವದಲ್ಲಿ ಎಚ್ಚರಿಕೆಯಿಂದ ಝಳಕ ಮಾಡಲು ಅಡ್ಡಿಯಿಲ್ಲ. ನೆನಪಿರಲಿ, ಮಳೆಗಾಲದಲ್ಲಿ ಜಿಗಣೆಗಳ ಕಾಟ.
ವಾಹನ ಸೌಕರ್ಯ[ಬದಲಾಯಿಸಿ]
ಈ ಜಲಪಾತವನ್ನು ನೋಡಬಯಸುವವರು ಉಡುಪಿ ಆಥವಾ ಶಿವಮೊಗ್ಗದಿ೦ದ ಮಿನಿಬಸ್ಸಿನಲ್ಲಿ ಪ್ರಯಾಣ ಬೆಳಸಬಹುದು. ಉಡುಪಿಯಿಂದ, ಶಿವಮೊಗ್ಗದಿಂದ ಹೆಬ್ರಿಯವರೆಗೂ ವಾಹನ ಸೌಕರ್ಯಗಳಿರುತ್ತವೆ. ಇಲ್ಲಿಂದ ಮಾತ್ರ ಹೆಬ್ರಿಯಲ್ಲಿರುವ ಸ್ಥಳೀಯ ಆಟೋಗಳಲ್ಲೇ ಹೋಗಿ ಬರಬೇಕು. ಸ್ಥಳ ಪರಿಚಯವಿರುವ ವಾಹನ ಚಾಲಕರ ಜತೆಗೇ ಹೋಗಿಬರುವುದು ಒಳಿತು. ಏಕೆಂದರೆ ಕೂಡ್ಲು ತೀರ್ಥ ಪರಿಸರದಲ್ಲಿ ಸುಂದರ ಜಲಧಾರೆ, ಸ್ವಚ್ಛಂದ ಪರಿಸರ ಬಿಟ್ಟರೆ ಮತ್ತೇನೂ ಸಿಗುವುದಿಲ್ಲ.
ಕೂಡ್ಲು ತೀರ್ಥ ಜಲಪಾತ