ಗೋವಿಂದ III (ರಾಷ್ಟ್ರಕೂಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Poetic old Kannada inscription (left-800AD, right-797 AD) of Rashtrakuta King Govinda III at Mavali, Dharwad district

ಗೋವಿಂದ III (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.793-814). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಶ್ರೀ ವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ.

ದಿಗ್ವಿಜಯ[ಬದಲಾಯಿಸಿ]

ತನ್ನ ತಂದೆ ಧ್ರುವನ ಇಚ್ಛೆಯಂತೆ ಅವನ ಅನಂತರ ರಾಷ್ಟ್ರಕೂಟ ಸಿಂಹಾಸನವನ್ನೇರಿದ. ಇವನು ರಾಜನಾದ ಮೇಲೆ ಇವನ ಅಣ್ಣ ರಣಾವಲೋಕ ಸ್ತಂಭ ಸ್ವಲ್ಪಕಾಲ ತೆಪ್ಪಗಿದ್ದರೂ ತಮ್ಮನ ಏಳಿಗೆಯನ್ನು ಸಹಿಸಲಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ತಂದೆ ಪಟ್ಟಗಟ್ಟಿದುದರಿಂದ ಮೊಳೆತ ಅಸೂಯೆ ಹೆಮ್ಮರವಾಗಿ ಬೆಳೆಯತೊಡಗಿತು. ತಮ್ಮನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಂಚಿಯವರೆಗಿನ ಹನ್ನೆರಡು ಮಂದಿ ಸಾಮಂತರನ್ನು ಒಂದುಗೂಡಿಸಿ ಗೋವಿಂದನ ವಿರೋಧವಾಗಿ ಒಂದು ಮಹತ್ತರ ಕೂಟವನ್ನು ರಚಿಸಿದ. ಅವರಲ್ಲಿ ಕಂಚಿಯ ದಂತಿಗ, ನೊಳಂಬವಾಡಿಯ ಚಾರುಪೊನ್ನೇರ ಮತ್ತು ಬನವಾಸಿಯ ಕತ್ತಿಯರ ಮುಖ್ಯರು. ಅಲ್ಲದೆ ಗೋವಿಂದನ ಕೆಲವರು ಮಂತ್ರಿಗಳೂ ಸ್ತಂಭನ ಪರವಾಗಿದ್ದರು. 788ರಲ್ಲಿ ಗಂಗರಾಜ ಶ್ರೀಪುರುಷ ಮರಣಹೊಂದಿದಾಗ ಅವನ ಅನಂತರ ಪಟ್ಟಕ್ಕೆ ಬರಬೇಕಾಗಿದ್ದ ಶಿವಮಾರ ರಾಷ್ಟ್ರಕೂಟ ಕಾರಾಗೃಹದಲ್ಲಿ ಬಂದಿಯಾಗಿದ್ದ. ಗೋವಿಂದ ರಣಾವಲೋಕನನ್ನು ಸದೆಬಡಿಯುವುದಕ್ಕೆ ಅನುಕೂಲವಾಗಲೆಂದು ಶಿವಮಾರನನ್ನು ಬಿಡುಗಡೆಮಾಡಿ ಅವನ ರಾಜ್ಯಕ್ಕೆ ಕಳುಹಿಸಿಕೊಟ್ಟ. ಆದರೆ ಶಿವಮಾರ ರಣಾವಲೋಕ ಸ್ತಂಭನ ಪಕ್ಷಕ್ಕೆ ಸೇರಿಕೊಂಡ. ಗೋವಿಂದ ಸ್ತಂಭನ ದಂಗೆಯನ್ನಡಗಿಸಲು ನಿರತನಾದ. ಸ್ತಂಭನಿಗೆ ಮಿತ್ರರಾಜರಿಂದ ಸಹಾಯ ಬರುವುದಕ್ಕೆ ಮೊದಲೇ ಅವನನ್ನು ಸೆರೆಹಿಡಿದ. ಆದರೆ ಅವನ ತಪ್ಪನ್ನು ಕ್ಷಮಿಸಿ ಪುನಃ ಗಂಗವಾಡಿಯ ಮಾಂಡಲಿಕನನ್ನಾಗಿ ನೇಮಿಸಿದ. ಶಿವಮಾರನನ್ನು ಪುನಃ ಕಾರಾಗೃಹಕ್ಕೆ ತಳ್ಳಿದ. ಅನಂತರ ಗೋವಿಂದ ಕಂಚಿಯ ದಂತಿಗನ ಮೇಲೆ ದಂಡೆತ್ತಿಹೋಗಿ ಅವನನ್ನು ಸೋಲಿಸಿದ; ನೊಳಂಬವಾಡಿಯ ಚಾರುಪೊನ್ನೇರ ಶರಣಾಗತನಾದ. 796ರ ಹೊತ್ತಿಗೆ ಗೋವಿಂದ ಇವೆಲ್ಲ ದಿಗ್ವಿಜಯಗಳನ್ನು ನಿರ್ವಹಿಸಿ ದಕ್ಷಿಣಾಪಥದ ಏಕೈಕ ಪ್ರಭುವಾದ.

ಉತ್ತರದ ದಂಡಯಾತ್ರೆ[ಬದಲಾಯಿಸಿ]

ಇತ್ತ ತನ್ನ ಅಧಿಕಾರ ನಿರ್ಬಾಧಿತವಾದ ಮೇಲೆ ಗೋವಿಂದ ತನ್ನ ದೃಷ್ಟಿಯನ್ನು ಉತ್ತರ ಭಾರತಕ್ಕೆ ಹರಿಸಿದ (ಸು.798-800). ಗೋವಿಂದನ ತಂದೆ ಧ್ರುವ ಉತ್ತರ ಭಾರತದ ದಂಡಯಾತ್ರೆಯಿಂದ ಹಿಂತಿರುಗಿ ಬಂದಮೇಲೆ ಬಂಗಾಲದ ಧರ್ಮಪಾಲ ಕನೂಜನ್ನು ಗೆದ್ದುಕೊಂಡು ಚಕ್ರಾಯುಧನನ್ನು ಕನೂಜಿನ ರಾಜನನ್ನಾಗಿ ಮಾಡಿ ತಾನು ಉಚ್ಛ್ರಾಯಸ್ಥಿತಿಗೆ ಏರಿದ್ದ. ಆದರೆ ಸ್ವಲ್ಪಕಾಲದಲ್ಲಿಯೇ ಗೂರ್ಜರ ಪ್ರತೀಹಾರ ರಾಜ ಇಮ್ಮಡಿ ನಾಗಭಟ ಪುನಃ ಕನೂಜನ್ನು ಗೆದ್ದುಕೊಂಡು ಚಕ್ರಾಯುಧನನ್ನು ಓಡಿಸಿದನಲ್ಲದೆ, ಆತನ ಸಹಾಯಕ್ಕೆ ಬಂದ ಧರ್ಮಪಾಲನನ್ನೂ ಹಿಮ್ಮೆಟ್ಟಿಸಿದ್ದ. ಈ ಸಮಯದಲ್ಲಿ ಗೋವಿಂದ ಕನೂಜಿನ ಮೇಲೆ ದಂಡೆತ್ತಿಹೋದ. ನಾಗಭಟನಿಗೂ ಮತ್ತು ಗೋವಿಂದನಿಗೂ ಪ್ರಾಯಶಃ ಝಾನ್ಸಿ, ಗ್ವಾಲಿಯರ್ ಪ್ರಾಂತಗಳ ನಡುವೆ ಯುದ್ಧವಾಯಿತು. ಚಕ್ರಾಯುಧ, ಧರ್ಮಪಾಲ ಇಬ್ಬರೂ ಗೋವಿಂದನಿಗೆ ಶರಣಾದರು. ಅನಂತರ ಗೋವಿಂದನ ಸೈನ್ಯ ಹಿಮಾಲಯದ ತಪ್ಪಲಿನವರೆಗೂ ದಂಡೆತ್ತಿ ಹೋಗಿ ನಾನಾ ರಾಜವಂಶಗಳ ರಾಜರನ್ನು ಸದೆಬಡಿದು, ಕರ್ನಾಟಕದ ಕೀರ್ತಿ ಪ್ರತಾಪಗಳನ್ನು ಹಿಮಾಲಯಪರ್ಯಂತ ಹರಡಿತು. ಗೋವಿಂದ ಕೈಗೊಂಡ ಉತ್ತರ ಭಾರತದ ದಂಡಯಾತ್ರೆ ಕೇವಲ ದಿಗ್ವಿಜಯ ರೂಪವಾಗಿತ್ತು. ಕೀರ್ತಿ ಮತ್ತು ಕೋಶವೃದ್ಧಿಯಾಯಿತೆ ವಿನಾ ರಾಜ್ಯವಿಸ್ತಾರವೇನೂ ಆದಂತೆ ತೋರುವುದಿಲ್ಲ. ಈ ಹಿಂದಿನಿಂದಲೂ ರಾಷ್ಟ್ರಕೂಟಾಧೀನದಲ್ಲಿದ್ದ ಮಾಳವ ಗುಜರಾತ್ ಪ್ರದೇಶಗಳನ್ನು ಭದ್ರಪಡಿಸಿಕೊಳ್ಳಲೋಸುಗ ಸಮರ್ಥ ಯೋಧನಾಗಿದ್ದ ತನ್ನ ತಮ್ಮ ಇಂದ್ರನಿಗೆ ಆ ಪ್ರಾಂತಗಳ ಅಧಿಕಾರವನ್ನು ವಹಿಸಿದ. ಈ ದಂಡಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಮಾಳವದೇಶದ ಶ್ರೀಭವನ ಎಂಬಲ್ಲಿ ತಂಗಿದ್ದ. ಆಗ ಮಗ ಅಮೋಘವರ್ಷ (ನೃಪತುಂಗ) ಜನಿಸಿದ.

ದಕ್ಷಿಣದ ದಂಡಯಾತ್ರೆ[ಬದಲಾಯಿಸಿ]

Fragmentary Old Kannada inscription (800 AD) from Didgur, Dharwad district, Karnataka, during rule of Rashtrakuta king Govinda III

ಗೋವಿಂದ ದೀರ್ಘಕಾಲ ರಾಜಧಾನಿಯಿಂದ ಹೊರಗೆ ಇದ್ದ ಅವಕಾಶವನ್ನು ಉಪಯೋಗಿಸಿಕೊಂಡು ದಕ್ಷಿಣದ ಪಲ್ಲವ, ಪಾಂಡ್ಯ, ಕೇರಳ, ಗಂಗರಾಜರು ಗೋವಿಂದನ ಪ್ರಭುತ್ವವನ್ನು ಮುರಿಯಲು ಸಿದ್ಧತೆ ಮಾಡತೊಡಗಿ ರಾಷ್ಟ್ರಕೂಟರ ಕೆಲವು ಪ್ರಾಂತಗಳನ್ನು ಆಕ್ರಮಿಸಿದರು. ಈ ವಾರ್ತೆಯನ್ನು ಕೇಳಿದೊಡನೆಯೇ ಈತ ತುಂಗಭದ್ರಾ ತಟಕ್ಕೆ ಧಾವಿಸಿ (ಸು.802) ಅಲ್ಲಿ ಬೀಡುಬಿಟ್ಟಿದ್ದ ದಕ್ಷಿಣ ರಾಜರ ಸೈನ್ಯಗಳನ್ನು ಪರಾಭವಗೊಳಿಸಿದ. ಅನೇಕ ಗಂಗಸೇನಾಧಿಕಾರಿಗಳನ್ನು ಮರುಕ ತೋರಿಸದೆ ಬಲಿ ತೆಗೆದುಕೊಂಡ. ಈ ವಿಜಯದ ಅನಂತರ ಪಲ್ಲವರ ರಾಜಧಾನಿಯಾದ ಕಂಚಿಯನ್ನು ಸೂರೆಮಾಡಿ ಸ್ವಾಧೀನಪಡಿಸಿಕೊಂಡ. ಅನಂತರ ಪಾಂಡ್ಯ, ಕೇರಳ ರಾಜರುಗಳನ್ನು ಸೋಲಿಸಿದ. ಗೋವಿಂದ ಕಂಚಿಯ ರಾಜ್ಯವನ್ನು ಜಯಿಸಿದನೆಂಬ ಸುದ್ದಿಯನ್ನು ಕೇಳಿದೊಡನೆಯೆ ಸಿಂಹಳದ ರಾಜ ತಾನಾಗಿಯೇ ವಿನಮ್ರನಾಗಿ ಬಂದು ಗೋವಿಂದನಿಗೆ ತನ್ನ ಹಾಗೂ ತನ್ನ ಅಮಾತ್ಯನ ಪ್ರತಿಮೆಗಳನ್ನು ಕಪ್ಪವಾಗಿ ಸಲ್ಲಿಸಿದ.

ನಾಲ್ವಡಿ ವಿಷ್ಣುವರ್ಧನ ಜೀವಿಸಿರುವವರೆಗೂ ಪೂರ್ವ ಚಾಳುಕ್ಯ ಮತ್ತು ರಾಷ್ಟ್ರಕೂಟರ ಸಂಬಂಧ ಸ್ನೇಹದಿಂದ ಕೂಡಿತ್ತು. ಅವನ ಅನಂತರ ಪಟ್ಟಕ್ಕೆ ಬಂದ ಇಮ್ಮಡಿ ವಿಜಯಾದಿತ್ಯ ಸಾಮಂತನಾಗಿರಲು ಒಪ್ಪದೆ ಪ್ರತ್ಯಕ್ಷವಾಗಿ ಗೋವಿಂದನನ್ನು ವಿರೋಧಿಸತೊಡಗಿದ. ಈ ನಡುವೆ ವಿಜಯಾದಿತ್ಯನಿಗೂ ಅವನ ತಮ್ಮ ಭೀಮನಿಗೂ ಪಟ್ಟಕ್ಕಾಗಿ ಹೋರಾಟ ಪ್ರಾರಂಭವಾಯಿತು. ಭೀಮ ಗೋವಿಂದನ ಮೊರೆಹೊಕ್ಕ. ಗೋವಿಂದ ಸೇನಾಸಮೇತನಾಗಿ ವೆಂಗಿಗೆ ನಡೆದು ವಿಜಯಾದಿತ್ಯನನ್ನು ಸೋಲಿಸಿ ವೆಂಗಿ ರಾಜ್ಯವನ್ನು ಗಳಿಸಿಕೊಟ್ಟ.

ಸು.810ರಲ್ಲಿ ಗಂಗರಾಜ್ಯದ ಮಾಂಡಲಿಕನಾಗಿದ್ದ ರಣಾವಲೋಕಸ್ತಂಭ ಸತ್ತ. ಗೋವಿಂದ ತನ್ನ ತಮ್ಮ ಇಂದ್ರನ ಜ್ಯೇಷ್ಠ ಪುತ್ರನಾದ ದಂತಿವರ್ಮನನ್ನು ಗಂಗರಾಜ್ಯದ ಮಾಂಡಲಿಕನಾಗಿ ನೇಮಿಸಿದ. ಆದರೆ ದಂತಿವರ್ಮ ಅಕಾಲ ಮರಣಕ್ಕೆ ತುತ್ತಾದ್ದರಿಂದ ಕೊನೆಗೆ ಗೋವಿಂದ ಅದುವರೆಗೆ ಸೆರೆಯಲ್ಲಿದ್ದ ಶಿವಮಾರನನ್ನು ಬಿಡುಗಡೆಮಾಡಿ ಗಂಗರಾಜ್ಯವನ್ನು ಅವನಿಗೇ ಮರಳಿ ನೀಡಿದ.

ರಾಜ್ಯ ಭಾರ[ಬದಲಾಯಿಸಿ]

ಭಾರತದ ಇತಿಹಾಸದ ಪುಟಗಳಲ್ಲಿ ಗಣ್ಯಸ್ಥಾನ ಪಡೆದಿರುವ ರಾಜರುಗಳಲ್ಲಿ ಗೋವಿಂದನೂ ಒಬ್ಬ. ಇವನ ರಾಜಕೀಯ ಪ್ರಭಾವ ಕನೂಜಿನಿಂದ ಕನ್ಯಾಕುಮಾರಿಯ ವರೆಗೂ ವ್ಯಾಪಿಸಿದ್ದಿತು. ಇವನ ಕೊನೆಗಾಲ ಶಾಂತಿ, ಸಮೃದ್ಧಿಯ ಕಾಲ. ಆ ದಿನಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಪ್ರಾಬಲ್ಯ, ಘನತೆ, ಗೌರವಗಳ ಉತ್ತುಂಗ ಶಿಖರವನ್ನು ಮುಟ್ಟಿತ್ತು.

ನಿಧನ[ಬದಲಾಯಿಸಿ]

ಸು.814ರಲ್ಲಿ ಇವನ ಅವಸಾನವಾಯಿತು. ಗಾಮುಂಡಬ್ಬೆ ಈತನ ಪತ್ನಿ. ಅಮೋಘವರ್ಷ ನೃಪತುಂಗ ಈತನ ಮಗ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: