ಗುಣರತ್ನಸೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುಣರತ್ನಸೂರಿಯು ಅನೇಕ ಶಾಖೋಪಶಾಖೆಗಳಿಂದೊಡಗೂಡಿ ವಿಪುಲವಾಗಿ ಬೆಳೆದಿರುವ ಭಾರತೀಯ ತತ್ತ್ವಶಾಸ್ತ್ರದ ಎಲ್ಲ ವಿಭಾಗಗಳಲ್ಲಿಯೂ ನೈಪುಣ್ಯ ಪಡೆದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬ. ಕಾಲ ಪ್ರ.ಶ.ಸು. ೧೩೪೩ ರಿಂದ ೧೪೧೮.


ಪಾಂಡಿತ್ಯದ ಪರಿಚಯ[ಬದಲಾಯಿಸಿ]

ತತ್ತ್ವಶಾಸ್ತ್ರದಲ್ಲಿ ಮಾತ್ರವಲ್ಲದೆ ವ್ಯಾಕರಣವೇ ಮುಂತಾದ ಇತರ ಶಾಸ್ತ್ರಗಳಲ್ಲಿಯೂ ಈತನ ಪಾಂಡಿತ್ಯ ಅಗಾಧ. ಈತನ ಸಮಕಾಲೀನವಾದ ಮುನಿಸುಂದರಸೂರಿಯಿಂದ ರಚಿತವಾಗಿರುವ ಗುರ್ವಾವಲಿಯಲ್ಲಿ ಹೇಳಿರುವಂತೆ ವಾದ ವಿದ್ಯೆಯಲ್ಲಿ ಕುಶಲನಾಗಿದ್ದ ಈತ ಅನೇಕ ಪರವಾದಿಗಳನ್ನು ಜಯಿಸಿದ. ತರ್ಕ, ವ್ಯಾಕರಣ, ಸಾಹಿತ್ಯ, ಆಗಮ ಮತ್ತು ಜ್ಯೋತಿಷ್ಯ ವಿದ್ಯೆಗಳಲ್ಲಿ ಈತ ನಿಪುಣ. ಸತತವಾಗಿ ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತನಾಗಿದ್ದು ಶ್ವೇತಾಂಬರ ಜೈನಪಂಥದ ಆಚಾರ್ಯ ಸಂತತಿಯಲ್ಲಿ ಸನ್ಮಾನ್ಯಸ್ಥಾನ ಪಡೆದ ಈತನ ಕಾರ್ಯಕ್ಷೇತ್ರ ಗುಜರಾತ್ ಮತ್ತು ರಾಜಸ್ತಾನಗಳಾಗಿದ್ದುವೆಂದು ತಿಳಿದುಬರುತ್ತದೆ.

ಕೃತಿಗಳು[ಬದಲಾಯಿಸಿ]

ಆಚಾರ್ಯ ಹರಿಭದ್ರಸೂರಿ ವಿರಚಿತ ಷಡ್ದರ್ಶನ ಸಮುಚ್ಚಯಕ್ಕೆ ಈತ ರಚಿಸಿರುವ ತರ್ಕರಹಸ್ಯ ದೀಪಿಕಾ ಎಂಬ ಟೀಕೆ ಭಾರತೀಯ ತತ್ತ್ವಶಾಸ್ತ್ರದಲ್ಲಿ ಈತನಿಗಿದ್ದ ಅಸೀಮ ಪಾಂಡಿತ್ಯವನ್ನು ಸಾಕ್ಷೀಕರಿಸುವುದು. ಕ್ರಿಯಾರತ್ನಸಮುಚ್ಚಯ ಇವನ ವ್ಯಾಕರಣಪಾಂಡಿತ್ಯದ ಸಾಕ್ಷಿಯಾಗಿದೆ. ಕಲಾಂತರ್ವಾಚ್ಯ, ಚತುಃಶರಣಾದಿ ಪ್ರಕೀರ್ಣ ಕಾವಚೂರಿ, ಕರ್ಮಗ್ರಂಥ ಅವಚೂರಿ, ಕ್ಷೇತ್ರಸಮಾಸ ಅವಚೂರ್ಣಿ ಮತ್ತು ವಾಸೋಂತಿಕ ವಿತಂಡಾ ವಿಡಂಬನ ಪ್ರಕರಣಗಳು-ಇವು ಈತನ ಆಗಮ ಜ್ಞಾನಸಂಪತ್ತಿಯ ದ್ಯೋತಕಗಳಾಗಿವೆ.