ಯುಕ್ರೇನ್

Coordinates: 49°N 32°E / 49°N 32°E / 49; 32
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯುಕ್ರೇನ್
Україна
ಯುಕ್ರಯಿನ
Flag of ಯುಕ್ರೇನ್
Flag
Coat of arms of ಯುಕ್ರೇನ್
Coat of arms
Anthem: Ще не вмерла України ні слава, ні воля (ಯುಕ್ರೇನಿನ ಭಾಷೆಯಲ್ಲಿ)
Shche ne vmerla Ukrayiny ni slava, ni volya
ಯುಕ್ರೇನಿನ ತೇಜಸ್ಸು ಇನ್ನೂ ಅಳಿದಿಲ್ಲ, ಅದರ ಸ್ವಾತಂತ್ರ್ಯ ಕೂಡ
ಯುರೋಪ್ನ ನಕ್ಷೆಯಲ್ಲಿ ಯುಕ್ರೇನ್
ಯುರೋಪ್ನ ನಕ್ಷೆಯಲ್ಲಿ ಯುಕ್ರೇನ್
Capitalಕಿಯೆವ್
Largest cityರಾಜಧಾನಿ
Official languagesಯುಕ್ರೇನಿನ ಭಾಷೆ
Governmentಅರೆ-ರಾಷ್ಟ್ರಪತಿ ಪದ್ಧತಿ
• ರಾಷ್ಟ್ರಪತಿ
ಪೆಟ್ರೋ ಪೊರೆಷೆಂಕೋ
• ಪ್ರಧಾನ ಮಂತ್ರಿ
ವೋಲೋದಿಮ್ಯ್ರ್ ಹ್ರೋಯ್ಸ್ಮನ್
ಸ್ವಾತಂತ್ರ್ಯ 
• ಘೋಷಿತ
ಆಗಸ್ಟ್ ೨೪, ೧೯೯೧
ಡಿಸೆಂಬರ್ ೧, ೧೯೯೧
• ನಿರ್ಧಾರಿತ
ಡಿಸೆಂಬರ್ ೨೫, ೧೯೯೧
• Water (%)
7%
Population
• 2007 estimate
46,299,874 (27th)
• 2001 census
48,457,102
GDP (PPP)2006 estimate
• Total
$355.8 billion (28th)
• Per capita
$8,000 (86th)
GDP (nominal)2006 estimate
• Total
$81.53 billion (53rd)
• Per capita
$1,760 (108th)
Gini (೨೦೦೩)28.1
low
HDI (೨೦೦೪)0.774
high · 77th
Currencyಹ್ರಿವ್ನಿಯ (UAH)
Time zoneUTC+2 (EET)
• Summer (DST)
UTC+3 (EEST)
Calling code380
Internet TLD.ua

ಯುಕ್ರೇನ್ (Україна / /ukraˈjina/) ಪೂರ್ವ ಯುರೋಪ್ನ ಒಂದು ದೇಶ. ಈಶಾನ್ಯಕ್ಕ ರಷ್ಯಾ, ಉತ್ತರಕ್ಕೆ ಬೆಲಾರಸ್, ಪಶ್ಚಿಮಕ್ಕೆ ಪೋಲೆಂಡ್, ಸ್ಲೊವಾಕಿಯ ಮತ್ತು ಹಂಗೆರಿ, ನೈರುತ್ಯಕ್ಕೆ ರೊಮೇನಿಯ ಮತ್ತು ಮಾಲ್ಡೊವ, ಹಾಗು ದಕ್ಷಿಣಕ್ಕೆ ಕಪ್ಪು ಸಮುದ್ರ ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ ಕೀವ್.

ಉಕ್ರೇನ್- ರಷ್ಯಾ ಗಡಿ ವಿವಾದ ಬಹಳ ವರ್ಷಗಳಿಂದ ಮುಂದುವರೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ

ಚರಿತ್ರೆ[ಬದಲಾಯಿಸಿ]

The Scythian archer by Epiktetos, c. 520 BC.

ಉಕ್ರೇನು ಇತಿಹಾಸದುದ್ದಕ್ಕೂ ಪರಾಕ್ರಮಣಕ್ಕೊಳಪಟ್ಟ ದೇಶ. ಪ್ರಾಚೀನ ಕಾಲದಲ್ಲಿ ಉಕ್ರೇನು ಸಿತಿಯನರು ವಾಸಿಸುತ್ತಿದ್ದ ಪ್ರದೇಶ. ಪ್ರ,ಶ. ಪು. 8-7ನೆಯ ಶತಮಾನಗಳಲ್ಲಿ ಇದು ಗ್ರೀಕರ ವಸಾಹತು. ಮುಂದೆ ಇದನ್ನು ಆಕ್ರಮಿಸಿಕೊಂಡವರು ರೋಮನ್ನರು. ಪ್ರ.ಶ. 4ನೆಯ ಶತಮಾನದಲ್ಲಿ ಗಾಥರೂ ಅನಂತರ ಹೂಣರೂ ಈ ನೆಲೆವನ್ನು ಆಳಿದರು. ಪೂರ್ವ ಮಧ್ಯ ಯುಗದಿಂದ ಇಲ್ಲಿನ ವನಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದವರು ಪೂರ್ವ ಸ್ಲಾವ್ (ರಷ್ಯನ್) ಬುಡಕಟ್ಟಿನ ಜನ. ಮುಂದೆ ಸ್ವಲ್ಪ ಕಾಲ ಇದು ಕಾಝಾರರ ವಶದಲ್ಲಿತ್ತು. 9ನೆಯ ಶತಮಾನದಲ್ಲಿ ಇದು ಕೀಫನ್ ರಷ್ಯದ ಆಡಳಿತದಲ್ಲಿ ಸೇರಿಹೋಯಿತು. ಆಗಲೂ ಇಲ್ಲಿನ ಮೈದಾನ ಪ್ರದೇಶಗಳಲ್ಲಿ ಅನೇಕ ಅಲೆಮಾರಿ ಜನಾಂಗಗಳಿದ್ದುವು. ಕೀಫನ್ ರಷ್ಯದ ಪ್ರಭುತ್ವವೂ ಕ್ಷೀಣದೆಸೆಗೆ ಬಂದಾಗ, 13ನೆಯ ಶತಮಾನದಲ್ಲಿ, ಈ ಸುತ್ತಣ ಪ್ರದೇಶವೆಲ್ಲ ಟಾರ್ಟರರ ವಶವಾಯಿತು. ಆಗ ಆಡಳಿತದ ಶಕ್ತಿಕೇಂದ್ರ ಪಶ್ಚಿಮದತ್ತ ಚಲಿಸಿತು. 15ನೆಯ ಶತಮಾನದಲ್ಲಿ ಉಕ್ರೇನಿನ ಬಹುಭಾಗ ಲಿಥೂವೇನಿಯದ ಅಧೀನಕ್ಕೆ ಬಂದು, ಆಗ್ನೇಯಭಾಗ ಖಾನರ ಆಳ್ವಿಕೆಗೊಳಗಾಯಿತು. ಲಿಥೂವೇನಿಯದ ಅಧೀನದಲ್ಲಿದ್ದ ರಾಜ್ಯ 1569ರಲ್ಲಿ ಪೋಲಿಷ್ ಪ್ರಭುತ್ವದ ಅಡಿಯಲ್ಲಿ ಬಂತು. ಆಗ ಪೋಲಿಷ್ ಕೆಥೊಲಿಕರ ಮತೀಯ ಸಾಂಸ್ಕೃತಿಕ ಸಾಮಾಜಿಕ ಆರ್ಥಿಕ ಪ್ರಭಾವಗಳನ್ನು ಇಲ್ಲಿನ ರಷ್ಯನ್ ಆಚಾರಶೀಲರು ಪ್ರತಿಭಟಿಸಿದರು. ಇವರ ಪೈಕಿ ತುಂಬ ಉಗ್ರವಾಗಿದ್ದವರೆಂದರೆ ಕಾಸ್ಯಾಕರು. ಕೊನೆಗೂ 17ನೆಯ ಶತಮಾನದ ನಡುಗಾಲದಲ್ಲಿ ಮಧ್ಯ ಉಕ್ರೇನು ಪೋಲೆಂಡಿನ ಹಿಡಿತದಿಂದ ತಪ್ಪಿಸಿಕೊಂಡಿತು. ಆಗಲೂ ಇದು ಪ್ರತ್ಯೇಕವಾಗಿ ಉಳಿಯಲಿಲ್ಲ. 1653ರಲ್ಲಿ ಮಸ್ಕವಿಯೊಂದಿಗೆ (ಮಾಸ್ಕೋ ಸಾಮ್ರಾಜ್ಯ) ಕೂಡಿಕೊಂಡಿತು. ನೀಪರ್ ನದಿಯ ಪಶ್ಚಿಮ ಭಾಗ ಮಾತ್ರ 1790ರಲ್ಲಿ ಪೋಲೆಂಡಿನ ವಿಭಜನೆಯಾಗುವವರೆಗೂ ಆ ದೇಶದ ಅಧೀನದಲ್ಲೇ ಮುಂದುವರಿಯಿತು. 18ನೆಯ ಶತಮಾನದಲ್ಲಿ ಕಪ್ಪುಸಮುದ್ರದ ತೀರಪ್ರದೇಶವನ್ನು ತುರ್ಕಿಯಿಂದ ರಷ್ಯನರು ಗೆದ್ದುಕೊಂಡರು.

ಉಕ್ರೇನ್ ಜನ ಮಸ್ಕವಿಯ ರಷ್ಯನ್ನರಿಗಿಂತ ಭಿನ್ನವಾದ ವಿಶಿಷ್ಟ ಜನಾಂಗವಾಗಿ ಬೆಳೆದು ಬಂದದ್ದು 14-16ನೆಯ ಶತಮಾನಗಳಲ್ಲಿ. ತಮ್ಮತನದ ಈ ಅರಿವಿನ ಫಲವೆಂದರೆ 19ನೆಯ ಶತಮಾನದ ಆದಿಕಾಲದಲ್ಲಿ ಬೆಳೆಯಲಾರಂಭವಾದ ಉಕ್ರೇನಿಯನ್ ರಮ್ಯ ಸಾಹಿತ್ಯ. ಟಿ.ಜಿ. ಷೆವ್ಚೆಂಕೊ ಈ ಕಾಲದ ಪ್ರಸಿದ್ಧ ಕವಿ. ಆದರೆ ಉಕ್ರೇನಿಯನ್ನರ ಈ ಚಳವಳಿಯನ್ನು ರಷ್ಯನ್ ಸರ್ಕಾರ ಸಹಿಸಲಿಲ್ಲ. 1863ರಲ್ಲಿ ಪೋಲಿಷ್ ಬಂಡಾಯದ ಅನಂತರ ಉಕ್ರೇನಿಯನ್ ಭಾಷೆಯ ಕೃತಿಗಳನ್ನೂ ನಿಷೇಧಿಸಲಾಯಿತು. ಈ ಅಜ್ಞೆಯನ್ನು ತೆಗೆದುಹಾಕಿದ್ದು 1905ರಲ್ಲಿ ರಷ್ಯದಲ್ಲಿ ಕ್ರಾಂತಿ ಸಂಭವಿಸಿದಾಗಲೇ. ಉಕ್ರೇನಿಗೆ ಸ್ವಯಾಡಳಿತಾಧಿಕಾರ ನೀಡಬೇಕೆಂಬ ಚಳುವಳಿಗೆ ಮನ್ನಣೆ ದೊರಕಿದ್ದು 1917ರ ಫೆಬ್ರವರಿಯ ಕ್ರಾಂತಿಯ ಅನಂತರ. ಆಗ ರಷ್ಯದಲ್ಲಿದ್ದ ತಾತ್ಕಾಲಿಕ ಸರ್ಕಾರ ಉಕ್ರೇನಿಯನ್ ಕೇಂದ್ರೀಯ ಮಂಡಲಿಗೆ ಪುರಸ್ಕಾರ ನೀಡಿತು. ಅಕ್ಟೋಬರ್ ಕ್ರಾಂತಿಯಲ್ಲಿ ಬಾಲ್ಷೆವಿಕರು ಅಧಿಕಾರ ಪಡೆದುಕೊಂಡ ಮೇಲೆ ಉಕ್ರೇನ್ ಸ್ವತಂತ್ರ ಗಣರಾಜ್ಯವೆಂದು ಸಾರಿಕೊಂಡಿತು. ಮುಂದಿನ ಅಂತರ್ಯುದ್ಧದಲ್ಲೂ ಒಂದನೆಯ ಮಹಾಯುದ್ಧ ದಲ್ಲೂ ಉಕ್ರೇನಿಗೆ ಪೆಟ್ಟು ತಪ್ಪಲಿಲ್ಲ.

ಉಕ್ರೇನು 1917ರ ಡಿಸೆಂಬರಿನಲ್ಲಿ ಸೋವಿಯತ್ ಗಣರಾಜ್ಯವೆಂದು ಘೋಷಿಸಿ ಕೊಂಡಿತು. 1922ರಲ್ಲಿ ಸೋವಿಯತ್ ಸಮಾಜವಾದೀ ಗಣರಾಜ್ಯ ಒಕ್ಕೂಟದ ರಚನೆಯಾದಾಗ ಈ ಒಕ್ಕೂಟಕ್ಕೆ ಸೇರಿದ ನಾಲ್ಕು ಅಂಗ ಗಣರಾಜ್ಯಗಳಲ್ಲಿ ಉಕ್ರೇನೂ ಒಂದು. 1939ರಲ್ಲಿ ಉಕ್ರೇನಿನ ಪಶ್ಚಿಮ ಭಾಗವನ್ನು ಪೋಲೆಂಡಿನಿಂದ ಕಸಿದುಕೊಳ್ಳಲಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಉಕ್ರೇನ್ ಜರ್ಮನ್ ಆಕ್ರಮಣಕ್ಕೆ ತುತ್ತಾಗಿತ್ತು.

ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಣರಾಜ್ಯ 1991ರಲ್ಲಿ ಸ್ವತಂತ್ರ ಗಣರಾಜ್ಯವಾಯಿತು. ಪ್ರತ್ಯೇಕ ಸದಸ್ಯತ್ವ ಪಡೆದಿದೆ.

ಮೇಲ್ಮೈ ಲಕ್ಷಣ[ಬದಲಾಯಿಸಿ]

Bay of Laspi
The Bay of Laspi on Crimea's Black Sea coast at sunset
Ai-Petri
The Ai-Petri's peak is 1,234.2 metres (4,049 ft) above mean sea level.[೧]

ಈ ರಾಜ್ಯವನ್ನು ಆರು ಭಾಗಗಳಾಗಿ ವಿಂಗಡಿಸಬಹುದು.

  • ಉತ್ತರ ಹಾಗೂ ಮಧ್ಯ ಭಾಗದ ನೀಪರ್ ನದಿಯ ತಗ್ಗು ನೆಲ.
  • ಇಲ್ಲಿ ನೀಪರ್ ಹಾಗೂ ಅದರ ಉಪನದಿಗಳಾದ ಪ್ರಿಪೆಟ್, ಡಿಸ್ನ ಹರಿಯುತ್ತವೆ.
  • ಈಶಾನ್ಯದ ಎತ್ತರದ ನೆಲ-ಮಧ್ಯ ರಷ್ಯನ್ ಪ್ರಸ್ಥಭೂಮಿಯ ಅಂಚು.ಈ ಬಂಡೆಯಂಚುಗಳನ್ನು ಅಲ್ಲಲ್ಲಿ ಹೊಳೆತೊರೆಗಳು ಕೊರೆದು ಹಾಕಿ ನೀಪರನ್ನು ಸಂಗಮಿಸಲು ಧಾವಿಸುತ್ತವೆ.
  • ಮಧ್ಯನೀಪರ್ ತಗ್ಗುನೆಲದ ದಕ್ಷಿಣಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಸರಪಳಿಯಾಗಿ ಹಬ್ಬಿರುವ ಬೆಟ್ಟಸಮೂಹ ಹಾಗೂ ನೀಪರಿನ ಪೂರ್ವದಲ್ಲಿ ಆಜೋವ್ ಪ್ರಸ್ಥಭೂಮಿ.ಈ ಬೆಟ್ಟಸಮೂಹಕ್ಕೆ ದಕ್ಷಿಣದಲ್ಲಿ ಕಪ್ಪುಸಮುದ್ರ ಹಾಗೂ ಅಜೋವ್ ಸಮುದ್ರಗಳ ಕಡೆಗೆ ತಗ್ಗಿ ಸಾಗುವ ವಿಶಾಲ ಬಯಲು.
  • ನೈಋತ್ಯ ಭಾಗದಲ್ಲಿರುವ ಕಾರ್ಪೇಥಿಯನ್ ಪರ್ವತಶ್ರೇಣಿ.
  • ಕ್ರಿಮಿಯನ್ ಪರ್ವತ ಶ್ರೇಣಿ.

ವಾಯುಗುಣ[ಬದಲಾಯಿಸಿ]

ಉಕ್ರೇನಿನದು ಖಂಡಾಂತರ ವಾಯುಗುಣ. ಆದರೆ ಕಪ್ಪು ಸಮುದ್ರದ ಸನಿಯದಿಂದಾಗಿ ಇದು ತೀವ್ರವಲ್ಲ. ಜನವರಿಯಲ್ಲಿನ ಉಷ್ಣತೆ 7ಲಿ ಸೆಂ.ಗ್ರೇ.-3ಲಿ ಸೆಂ.ಗ್ರೇ. ವರೆಗೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಉತ್ತರದ ಬೀಸುಗಾಳಿಯಿಂದ ಉಷ್ಣತೆ ಥಟ್ಟನೆ ಕೆಳಗೆ ಬೀಳುವುದು ಸಾಮಾನ್ಯ. ಆದರೆ ಚಳಿಗಾಲದಲ್ಲೂ ದಕ್ಷಿಣದ ಸಮುದ್ರದೆಡೆಯ ಬಿಸಿಗಾಳಿಗಳು ಬೀಸಿ ಹಿಮಗಡ್ಡೆಗಳನ್ನು ಕರಗಿಸುತ್ತವೆ. ಮಳೆ ಕಡಿಮೆ, ಕಾರ್ಪೇಥಿಯನ್ ಮತ್ತು ಕ್ರಿಮಿಯನ್ ಪರ್ವತ ಪ್ರದೇಶಗಳಲ್ಲಿ ಮಾತ್ರ ವರ್ಷಕ್ಕೆ 100-116ಸೆಂ.ಮೀ ಮಳೆ ಬೀಳುತ್ತದೆ. ಉಳಿದ ಕಡೆಗಳಲ್ಲಿ ಉತ್ತರದಿಂದ ದಕ್ಷಿಣಕ್ಕೆ ಬಂದಂತೆ ಮಳೆ ಕಡಿಮೆಯಾಗುತ್ತ ಬರುತ್ತದೆ. ಬೇಸಗೆಯ ಮಳೆ ಗುಡುಗು ಮಿಂಚುಗಳಿಂದ ಕೂಡಿರುತ್ತದೆ.

ಸಸ್ಯಸಂಪತ್ತು[ಬದಲಾಯಿಸಿ]

ಪಕ್ಷಿ ಸಂಕುಲ

ಉಕ್ರೇನು ಮುಖ್ಯ ಸಸ್ಯ ವಲಯಗಳ ಕೂಡು ನೆಲ. ಉತ್ತರದ ತಗ್ಗುಭೂಮಿಯಲ್ಲಿ ಓಕ್, ಹಾರ್ನ್‌ಬೀಮ್, ಪೈನುಗಳಿವೆ. ಆಷ್, ಮೇಪಲ್ ಸಾಮಾನ್ಯ, ಮರಳುಮಿಶ್ರಿತ ನೆಲವಿದ್ದಲ್ಲಿ ಪೀತದಾರು ಬೆಳೆಯುತ್ತದೆ. ಜವುಗುನೆಲದಲ್ಲಿ ಆಲ್ಡರ್, ವಿಲೊ ಪ್ರಧಾನ. ಈ ಪ್ರದೇಶದಲ್ಲಿ ಜೊಂಡೂ ಸಾಮಾನ್ಯ. ದಕ್ಷಿಣಕ್ಕೆ ಸಾಗಿದಂತೆ ಓಕ್ ಹಾಗೂ ಇತರ ಪರ್ಣಪಾತೀವೃಕ್ಷಗಳಿಂದ ಕೂಡಿದ ಹುಲ್ಲು ಬಯಲು ಕಾಣಸಿಗುತ್ತದೆ. ಇನ್ನೂ ದಕ್ಷಿಣದಲ್ಲಿ ಹುಲ್ಲು ತೆಳುವಾಗುತ್ತದೆ. ಇಲ್ಲೆಲ್ಲ ಹಿಂದೆ ಇದ್ದ ಸ್ವಾಭಾವಿಕ ಸಸ್ಯಗಳು ಬಹುತೇಕ ಇಂದು ಇಲ್ಲ. ಹುಲ್ಲು ಕೆತ್ತಿ ಮರ ಕಡಿದು ಸಾಗುವಳಿ ಮಾಡುವ ಕ್ರಮಗಳಿಂದ ಭೂನಗ್ನೀಕರಣದ ಅಪಾಯ ಹೆಚ್ಚಾಗಿದೆ. ಪರ್ವತಗಳ ಮೇಲೆ ಅವುಗಳವೇ ಆದ ಸಸ್ಯವಲಯಗಳಿವೆ. ಕಾರ್ಪೇಥಿಯನುಗಳ ಕೆಳಭಾಗ ಬೀಚ್ ಕಾಡುಗಳಿಂದ ಅಚ್ಛಾದಿತವಾಗಿದೆ. ಮೇಲೇರಿದಂತೆ ಶಂಕುಧಾರಿ ಮರಗಳ ಕಾಡು. ಇನ್ನೂ ಮೇಲೆ ಆಲ್ಪ್ಸ್ ನಲ್ಲಿರುವಂಥ ಹುಲ್ಲುಗಾವಲು. ಕಾರ್ಪೇಥಿಯನ್ ಪರ್ವತಗಳಲ್ಲಿನ ವಿವಿಧ ಸಸ್ಯವರ್ಗಗಳನ್ನಲ್ಲದೆ ಮೆಡಿಟರೇನಿಯನ್ ಮಾದರಿಯ ಸಸ್ಯಗಳನ್ನೂ ಇಲ್ಲಿ ಕಾಣಬಹುದು.

ವ್ಯವಸಾಯ; ಕೈಗಾರಿಕೆ[ಬದಲಾಯಿಸಿ]

ಉಕ್ರೇನ್‍ನ ಗೋಧಿ ಹೊಲ

ಉಕ್ರೇನಿನಲ್ಲಿ ಬೇಸಾಯ ಚೆನ್ನಾಗಿ ಅಭಿವೃದ್ಧಿ ಹೊಂದಿದೆ. ಒಟ್ಟು ಪ್ರದೇಶದಲ್ಲಿ ಶೇ.60 ಭಾಗ ವ್ಯವಸಾಯಯೋಗ್ಯ. ಇದರ ಮೂರರಲ್ಲೆರಡು ಪಾಲು ನೆಲದಲ್ಲಿ ಸಾಗುವಳಿಯಾಗುತ್ತಿದೆ. ಮುಖ್ಯಬೆಳೆ ಚಳಿಗಾಲದ ಗೋಧಿ. ಕಪ್ಪು ಸಮುದ್ರದ ತಗ್ಗುನೆಲದಲ್ಲೂ ಉತ್ತರ ಕ್ರಿಮಿಯದಲ್ಲೂ ಇದು ಪ್ರಧಾನ. ಎರಡನೆಯ ಮೆಕ್ಕೆಜೋಳ. ಸೋವಿಯತ್ ರಾಜ್ಯದಲ್ಲಿ ಚೆನ್ನಾಗಿ ಮಾಗಿದ ಮೆಕ್ಕೆಜೋಳ ಬೆಳೆಯುವ ಕೆಲವೇ ಪ್ರದೇಶಗಳಲ್ಲಿ ಉಕ್ರೇನ್ ಒಂದು. ಚಳಿಗಾಲದ ರೈ, ವಸಂತದ ಯವೆ (ಬಾರ್ಲಿ), ಮಿಲೆಟ್, ಕಪ್ಪುಗೋದಿ ಇತರ ಬೆಳೆಗಳು. ಎತ್ತರ ಪ್ರದೇಶಗಳಲ್ಲಿ ಸಕ್ಕರೆ ಬೀಟ್ ಮುಖ್ಯ. ಇದು ಸೋವಿಯತ್ ಒಕ್ಕೂಟ ಪ್ರಧಾನ ಸಕ್ಕರೆ ಉತ್ಪಾದಕ ರಾಜ್ಯ. ಸೂರ್ಯಕಾಂತಿ, ರೇಪ್, ಅಗಸೆ, ಹೊಗೆಸೊಪ್ಪು, ಆಲೂಗೆಡ್ಡೆ, ಕಲ್ಲಂಗಡಿ, ಕರಬೂಜ ಇವೂ ಬೆಳೆಯುತ್ತವೆ. ವ್ಯವಸಾಯದ ಉಪಚಟುವಟಿಕೆಯಾ ಗಿರುವ ಪಶುಪಾಲನೆಯೂ ಮುಖ್ಯ. ದನ, ಹಂದಿ, ಕುರಿ, ಕೋಳಿ ಮುಂತಾದುವನ್ನು ಸಾಕಲಾಗುತ್ತಿದೆ. ಸೋವಿಯತ್ ಒಕ್ಕೂಟದ ಆಹಾರದ ಬುಟ್ಟಿಯೆಂದು ಈ ರಾಜ್ಯ ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಈಚೆಗೆ ಪೂರ್ವ ರಾಜ್ಯಗಳು ವ್ಯವಸಾಯ ಕ್ಷೇತ್ರದಲ್ಲಿ ಪ್ರಾಮುಖ್ಯ ಗಳಿಸುತ್ತಿರುವುದರಿಂದ ಸಾಪೇಕ್ಷವಾಗಿ ಈ ರಾಜ್ಯದ ಪ್ರಾಮುಖ್ಯ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.

ಎರಡನೆಯ ಮಹಾಯುದ್ಧಕ್ಕೆ ಹಿಂದಿನಿಂದಲೂ ಸೋವಿಯತ್ ಒಕ್ಕೂಟದ ಅರ್ಥ ವ್ಯವಸ್ಥೆಯಲ್ಲಿ ಉಕ್ರೇನಿನ ಕೈಗಾರಿಕೆಗಳೂ ವ್ಯವಸಾಯದಂತೆಯೇ ಪ್ರಮುಖವಾಗಿವೆ. ಕಬ್ಬಿಣ, ಮ್ಯಾಂಗನೀಸ್, ಕಲ್ಲಿದ್ದಲು, ಆಂಥ್ರಸೈಟ್, ಸುಣ್ಣಕಲ್ಲು, ಲವಣ, ಫಾಸ್ಫೇಟುಗಳು, ಪಾದರಸ ಇಲ್ಲಿನ ಖನಿಜಗಳು. ಇವುಗಳ ತಳಹದಿಯ ಮೇಲೆ ಕೈಗಾರಿಕೆಗಳು ಬೆಳೆದಿವೆ. ವಿದ್ಯುತ್ ರೈಲು, ಜಲಮಾರ್ಗಗಳೂ ಈ ಬೆಳೆವಣಿಗೆಗೆ ಸಹಾಯಕವಾಗಿವೆ. ಬೃಹತ್ ರಸಾಯನ ಕೈಗಾರಿಗೆ, ಸೂಪರ್ ಫಾಸ್ಫೇಟುಗಳು, ಬಣ್ಣಗಳು, ಹಡಗುನಿರ್ಮಾಣ-ಇವು ಮುಖ್ಯ. ಯುದ್ಧಾನಂತರ ಕಾಲದಲ್ಲಿ ಉಕ್ರೇನಿನ ಅರ್ಥವ್ಯವಸ್ಥೆಯ ಪುನರ್ನಿರ್ಮಾಣವಾಗಿ ಕೈಗಾರಿಕೆಗಳು ಬೆಳೆಯುತ್ತಿದ್ದರೂ ಸೋವಿಯತ್ ಒಕ್ಕೂಟದ ಇತರ ಪ್ರದೇಶಗಳೂ ಅಭಿವೃದ್ಧಿ ಹೊಂದುತ್ತಿರುವುದರಿಂದ ಸಾಪೇಕ್ಷವಾಗಿ ಈ ರಾಜ್ಯದ ಪ್ರಾಮುಖ್ಯ ಹಿಂದಿದ್ದಷ್ಟಿಲ್ಲವೆನ್ನಬಹುದು.

ರೈಲ್ವೆ ವ್ಯವಸ್ಥೆ ತುಂಬ ದಟ್ಟವಾಗಿ ಅಭಿವೃದ್ಧಿ ಹೊಂದಿದೆ. ಒಡೆಸ, ನಿಕಲೈಯಫ್, ಟಗನ್ರಾಕ್, ಮಾರಿಯೂಪಾಲ್ ಈ ರಾಜ್ಯದ ಸುಸಜ್ಜಿತ ಬಂದರುಗಳು. ಪುರಾತನ ನಗರವಾದ ಕೀವ್ ರಾಜ್ಯದ ರಾಜಧಾನಿಯಾದರೂ ಖಾರ್ಕಾಫ್ ಪ್ರಮುಖ ಕೈಗಾರಿಕಾ ಕೇಂದ್ರ. ರಾಜ್ಯದಲ್ಲಿ ನಗರಾಂತರವಾಸಿಗಳ ಪ್ರಮಾಣ ವೇಗವಾಗಿ ಅಧಿಕವಾಗುತ್ತಿದೆ.

ಉಕ್ರೇನಿಯನ್ ಭಾಷೆ, ಸಾಹಿತ್ಬ[ಬದಲಾಯಿಸಿ]

ಉಕ್ರೇನಿಯನ್ ಭಾಷೆ ವಂಶಪರಂಪರಾಗತ ವಾದ ಕೀವನ್ರಸ್ನ ಆಡುನುಡಿ. ಇದು ರಷ್ಯನ್ಗಿಂತ ಬಿಳಿರಷ್ಯನ್ನನ್ನೇ (ಬೈಲೊ ರಷ್ಯನ್) ಹೋಲುತ್ತದೆ. ಬಿಳಿರಷ್ಯನ್ ಭಾಷೆಗೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳೊಡನೆ ಒಳಭೇದಗಳಿರುವುದರಿಂದ ಬಿಳಿರಷ್ಯನ್ ಭಾಷೆ ಇವೆರಡು ಭಾಷೆಗಳಿಗೂ ಸಂಬಂಧ ಕಲ್ಪಿಸುತ್ತದೆ. ಆದರೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳಿಗೆ ಬದಲಾವಣೆಯ ಒಳಭೇದಗಳಿರುವುದಿಲ್ಲ. ಉಕ್ರೇನಿಯನ್ ಉಪಭಾಷೆಯ ಲಕ್ಷಣಗಳು 12ನೆಯ ಶತಮಾನದ ಮಧ್ಯಯುಗದ ಹಸ್ತಪ್ರತಿಗಳಲ್ಲಿದೆ. ಅದರಲ್ಲೂ ಪಶ್ಚಿಮ ಭಾಗದಲ್ಲಿ ಕೀವ್ ನಗರ ನಾಶವಾದಾಗ, ಲಿಥುವೇನಿಯದ ಗ್ರಾಂಡ್ ಡಚಿಯಲ್ಲಿ ಉಕ್ರೇನಿನ ಅಧೀನಪ್ರಾಂತ್ಯದ ಕೆಲವು ಭಾಗಗಳನ್ನು ಕ್ರಮಕ್ರಮವಾಗಿ ವಿಲೀನಗೊಳಿಸಿದ ಅನಂತರ ಮೂಲರೂಪವಿದ್ದೆಡೆಗಳಲ್ಲಿ ಉಕ್ರೇನಿಯನ್ ಭಾಷೆಯ ಒಳಭೇದದ ಲಕ್ಷಣಗಳನ್ನು ಹೆಚ್ಚು ಹೆಚ್ಚಾಗಿ ಗುರುತಿಸಲಾಯಿತು.

ಈ ರಾಜ್ಯದ ಆಡಳಿತ ಭಾಷೆ ಬಿಳಿರಷ್ಯನ್ ಆಗಿತ್ತು. ಅನಂತರ 16ನೆಯ ಶತಮಾನದಲ್ಲಿ ಪೋಲಿಷ್ ಆಡಳಿತ ಭಾಷೆಯಾಯಿತು. ಬಿಳಿರಷ್ಯನ್ ಮತ್ತು ಪೋಲಿಷ್ ಭಾಷೆಗಳನ್ನು ಆ ಕಾಲದಲ್ಲಿ ಕೇವಲ ಕಾನೂನಿನ ದಸ್ತಾವೇಜುಗಳಿಗಷ್ಟೇ ಮೀಸಲಿಡಲಾಗಿತ್ತು. 14ನೆಯ ಶತಮಾನದಿಂದಲೂ ಉಕ್ರೇನಿಯನ್ ಭಾಷೆ ಆಜ್ಞಾಪತ್ರಗಳಲ್ಲಿ ಹಾಗೂ ಖಾಸಗಿ ಬಳಕೆಯಲ್ಲಿ ಇತ್ತು. 16ನೆಯ ಶತಮಾನದಲ್ಲಿನ ಸುಧಾರಣೆಗಳು ಉಕ್ರೇನಿಯನ್, ಬಿಳಿರಷ್ಯನ್ ಹಾಗೂ ಪೋಲಿಷ್ ಧಾರ್ಮಿಕ ಸಾಹಿತ್ಯಕ್ಕೆ ಆಘಾತ ಉಂಟುಮಾಡಿತು. 17ನೆಯ ಶತಮಾನದಲ್ಲಿ ಉಕ್ರೇನಿಯನ್ ರೂಪದ ಚರ್ಚ್ ಸ್ಲವೋನಿಕರನ್ನು ರಾಷ್ಟ್ರೀಯ ಭಾವನೆ ಹೊಂದಿದ್ದ ಉಕ್ರೇನಿನ ಬುದ್ದಿಜೀವಿಗಳು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಸಮಕಾಲೀನವಾಗಿಯೇ ಈ ಭಾಷೆಯ ಆಡುನುಡಿಯ ರೂಪವನ್ನು ವಿದ್ವತ್ಪೂರ್ಣ ಕವನ ಹಾಗೂ ವಿಡಂಬನ ದೃಶ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಇವಾನ್ ಕೋತ್ಲ್ಯಾರೇವ್ಸ್ಕಿಯ ಎನೆಇಡಾದ ಜೊತೆಗೆ 18ನೆಯ ಶತಮಾನದ ಅಂತ್ಯದಲ್ಲಿ ಉಕ್ರೇನಿಯನ್ ಭಾಷೆಯ ನೂತನ ರೂಪ ಈ ಆಡುನುಡಿಯ ವಿನ್ಯಾಸದಿಂದ ಹೊರಹೊಮ್ಮಿತು. ಅಂದಿನಿಂದೇಚೆಗೆ ನೂತನ ರೂಪದ ಬಿಳಿರಷ್ಯನ್ ಭಾಷೆಯನ್ನು ಸಾಹಿತ್ಯ ಮತ್ತು ಇತರ ಶೈಕ್ಷಣಿಕ ಹಾಗೂ ಆಡಳಿತ ವಿಷಯಗಳಲ್ಲೂ ಬಳಸಲಾಗುತ್ತಿದೆ. ಬಿಳಿರಷ್ಯನ್ ಭಾಷೆಯಂತೆಯೇ ಪ್ರಾಥಮಿಕ ಭಾಷಾ ಲಕ್ಷಣಗಳು ಸ್ವತಂತ್ರವಾಗಿ ಅಭಿವೃದ್ಧಿಯಾಗುವಂಥವಾದರೂ ಉಕ್ರೇನಿಯನ್ ಭಾಷೆ ಪೋಲಿಷ್ ಭಾಷೆಯ ಅನೇಕ ಪದಗುಚ್ಛಗಳನ್ನೇ ಅಲ್ಲದೆ ಆಭಿವ್ಯಕ್ತಿಗಳನ್ನೂ ಒಳಗೊಂಡಿದೆ. 11ನೆಯ ಶತಮಾನದಿಂದ ಮಂಗೋಲ್-ಟಾರ್ಟರ್ ಅತಿಕ್ರಮಣವಾದ 13ನೆಯ ಶತಮಾನದವರೆಗಿನ ಕಾಲದಲ್ಲಿ ಉಕ್ರೇನಿಯನ್ ಜನಾಂಗದ ಸಾಹಿತ್ಯ ಪರಂಪರೆ ರಷ್ಯನ್ ಹಾಗೂ ಬಿಳಿರಷ್ಯನ್ ಸಾಹಿತ್ಯ

ಪರಂಪರೆಯಂತೆಯೇ (ಅಂದರೆ, ಕೀವನ್ರಸ್ನ ಸಾಹಿತ್ಯ) ಇತ್ತು. ಕೀವನ್ರಸ್ನ ಪತನದಿಂದಾಗಿ 13-16ನೆಯ ಶತಮಾನದವರೆಗಿನ ಅದರ ಸಾಹಿತ್ಯ ಇಳಿಮುಖಗೊಂಡಿತು. ಅನಂತರ ಸಾಮಾಜಿಕ ಹಾಗೂ ವಿದೇಶೀಯ ದಬ್ಬಾಳಿಕೆಯ ವಿರುದ್ಧ ಹೋರಾಟ ಹಾಗೂ ಶಿಕ್ಷಣ, ಮುದ್ರಣಗಳಲ್ಲಿ ಪ್ರಗತಿ ಸಾಧಿಸಲು ಪಟ್ಟ ಶ್ರಮ-ಇವುಗಳಿಂದ ಸಾಹಿತ್ಯ ಪುನಶ್ಚೇತನಗೊಂಡಿತು. ಅನೇಕ ಹೊಸ ಬರೆಹಗಾರರು ಹುಟ್ಟಿಕೊಂಡರು. ಅವರಲ್ಲಿ ಪ್ರಸಿದ್ಧಿ ಪಡೆದವ ಇವಾನ್ ವಿಶೆನ್ಸ್ಕಿ (ನಿ. 1925). 15- 17ನೆಯ ಶತಮಾನದವರೆಗಿನ ಸಾಹಿತ್ಯದ ಗುಣವಿಶೇಷವೆಂದರೆ ವೀರಗೀತೆಗಳು (ಮಹಾಕಾವ್ಯ). ಚಾರಿತ್ರಿಕ ಹಾಡುಗಳು ಹಾಗೂ ಲಾವಣಿಗಳು. 17ನೆಯ ಮತ್ತು 18ನೆಯ ಶತಮಾನಗಳಲ್ಲಿ ಧರ್ಮೋಪದೇಶ, ಚಾರಿತ್ರಿಕ ಗದ್ಯ, ಶಾಲಾ ನಾಟಕಗಳು, ಭಾವಗೀತೆ ಹಾಗೂ ವಿಡಂಬನ ಕಾವ್ಯಗಳು ಆಭಿವೃದ್ಧಿಹೊಂದಿದವು. ಹ್ರಿಹೋರಿ ಸ್ಕವರದಾ (1722-94)ಎಂಬ ಪ್ರಜಾಪ್ರಭುತ್ವ ಪ್ರಬೋಧಕ ಸಾಮಾಜಿಕ ನ್ಯಾಯದ ವಿಚಾರವನ್ನು ತನ್ನ ವೇದಾಂತ ಪ್ರಕರಣಗ್ರಂಥ, ಕಾಲ್ಪನಿಕ ಕಥೆ ಮತ್ತು ಕವನಗಳ ಮೂಲಕ ಪ್ರತಿಪಾದಿಸಿದ್ದಾನೆ.

ಚರ್ಚ್ಸ್ಲವೋನಿಕ್ ಹಳೆಯ ಕಾಲದ ಸಾಹಿತ್ಯ ಭಾಷೆಯ ಅಡಿಗಲ್ಲಾಗಿತ್ತು. ಹೆಜ್ಜೆ ಹೆಜ್ಜೆಯಾಗಿ ದೇಶೀಯ ಭಾಷೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 18ನೆಯ ಶತಮಾನದ ಅಂತ್ಯದಲ್ಲಿ ಹಾಗೂ 19ನೆಯ ಶತಮಾನದ ಆರಂಭದಲ್ಲಿ ದೇಶೀಯ ಭಾಷೆ ನಿಜವಾಗಿಯೂ ಸುಸ್ಥಿತಿಯಲ್ಲಿತ್ತು. ಈ ಹೋರಾಟದಲ್ಲಿ ಇವಾನ್ ಕೋತ್ಲ್ಯಾರೇವ್ಸ್ಕಿಯ ಪಾತ್ರ ಪ್ರಮುಖವಾಗಿತ್ತು. ಇವನ ಕೃತಿಗಳು ವರ್ಜಿಲನ ಪ್ರಹಸನ ಮತ್ತು ಎನೆಇಡ, ಎನೆಇಡ ದೇಶೀಯ ಭಾಷೆಯಲ್ಲಿನ ಪ್ರಥಮ ಗ್ರಂಥ. ನಿತ್ಯಜೀವನಕ್ಕೆ ಸಂಬಂಧಿಸಿದ ಏಕಾಂತ ಸಂಗೀತ ನಾಟಕ. ನಾಟಲ್ಕ ಪೊಲ್ತಾವ್ಕ ಈತನ ಮತ್ತೊಂದು ಕೃತಿ.

19ನೆಯ ಶತಮಾನದ ಸಾಹಿತ್ಯದಲ್ಲಿ ವಾಸ್ತವಿಕತೆಗೆ ಜಯ ದೊರಕಿತು. ನಿಯತಕಾಲಿಕ ಗಳು, ಇತಿಹಾಸ ಲೇಖನಗಳು, ಉತ್ತಮ ನಾಟಕಗಳು, ಜಾನಪದ ಸಂಗ್ರಹಗಳು ಪ್ರಕಟಗೊಂಡುವು. ಪೆತ್ರೊ ಗುಲಾಕ್ ಅರ್ತೆಮೋವೆಸ್ಕಿ (1790-1865) ಪ್ರಹಸನಗಳನ್ನೂ ರಮ್ಯಸಾಹಿತ್ಯಗಳನ್ನೂ ಅದರಲ್ಲೂ ಕಾಲ್ಪನಿಕ ಕಥೆಗಳನ್ನು ರಚಿಸಿದ. ಇವ್ಗೆನ್ ಗ್ರಿಬಿಂಕ (1812-48) ನೈಜ ಕಥೆಗಳನ್ನು, ಭಾವಗೀತೆಗಳನ್ನು ರಚಿಸಿದ. ಈತ ಲಾಸ್ತಿವ್ಕ ಅಲ್ಮಾನಾಕ್ನ (1841) ಸಂಪಾದಕನಾಗಿದ್ದ. ಗ್ರಿಗೋರಿಕ್ವೀತ್ಕ (1778-1843) ಒಬ್ಬ ಅಸಾಮಾನ್ಯ ಗದ್ಯ ಲೇಖಕ. ಈತ ನಿತ್ಯಜೀವನವನ್ನು ಕುರಿತ ಕಾದಂಬರಿಗಳ ಕರ್ತೃ. ಅವುಗಳಲ್ಲಿ ಮಾರುಸ್ಯ ಹಾಗೂ ಸೆರ್ದೇಚ್ನ ಅಕ್ಸಾನಗಳೂ ಸೇರಿವೆ. ಪಶ್ಚಿಮ ಉಕ್ರೇನಿನಲ್ಲಿ ಮತ್ತು ಅನಂತರ ಆಸ್ಟ್ರಿಯನ್ ಆಳ್ವಿಕೆಯಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಿವರು: ಮಾರ್ಕಿಯಾನ್ ಷಷ್ಕೆವಿಚ್ (1811-43) ಮತ್ತು ಯಾಕಿಫ್ ಗಲೋವಾತ್ಸ್‌ಕಿ (1814-88), ಇವಾನ್ ವಹಿಲೇವಿಚ್ (1811-66). ಗಹನವಾದ ಅನುಭವ ದರ್ಶನಗಳಲ್ಲಿ ಅಲೆಕ್ಸಾಂಡರ್ ದುಕ್ನೊವಿಚ್ ಅಸಾಮಾನ್ಯನಾಗಿದ್ದ. ಆಧುನಿಕ ಉಕ್ರೇನಿಯನ್ ಭಾಷೆಯ ಸಂಸ್ಥಾಪಕನೆಂದರೆ ತರಾಸ್ ಷೆವ್ಚೆಂಕೊ (1814-61). ಈತ ಬುದ್ದಿಜೀವಿ, ಕವಿ, ಗದ್ಯಲೇಖಕ, ನಾಟಕಕಾರ, ದಾರ್ಶನಿಕ. ಕಲೆಗಾರ, ಕ್ರಾಂತಿಕಾರಿ ಪ್ರಜಾಪ್ರಭುತ್ವವಾದಿ, ಸಾಮಾಜಿಕ, ರಾಷ್ಟ್ರೀಯ ದಬ್ಬಾಳಿಕೆಯ ವಿರುದ್ಧ ಹೋರಾಟಗಾರ-ಈ ಎಲ್ಲವೂ ಆಗಿದ್ದ. ಇವನ ಮೊದಲ ಕವನ ಸಂಕಲನ ಕೊಬ್ಜಾರ್ (1840). ಇದು ಉಕ್ರೇನಿಯನ್ ಪ್ರಜೆಗಳ ಆಧ್ಯಾತ್ಮಿಕ ಜೀವನದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಷೆವ್ಚೆಂಕೊವಿನ ಗದ್ಯ ಬರಹದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವಳೆಂದರೆ ಮಾರ್ಯ ವಿಲಿನ್ಸ್ಕಾಯ (1833-1907). ಇವಳು ಓ.ಮಾರ್ಕೊವಿಚ್ನ ಪತ್ನಿ. ಇವಳ ಅತ್ಯುತ್ತಮ ಕೃತಿಯೆಂದರೆ ನರೋದ್ನಿ ಒಪವಿದಾನ್ಯ (ಜಾನಪದ ಕಥೆಗಳು, 1857). ನೈಜಕವನಗಳನ್ನು ಅಭಿವೃದ್ಧಿಪಡಿಸಿದವರೆಂದರೆ ಲಿಯೋನಿಡ್ ಗ್ಲಿಬೋಯ್ (1827-93), ಸ್ಚಿಪಾನ್ ರುದಾನ್ಸ್ಕಿ (1834-73) ಇವಾನ್ ಮನ್ಝೂ ರ (1851-93), ಪಾವ್ಲೊ ಗ್ರಬೊವ್ಸ್ಕಿ (1864-1902) ಹಾಗೂ ಮತ್ತಿತರರು. ಷೆವ್ಚೆಂಕೊ ಹಾಗೂ ಮಾರ್ಕೊವೊವ್ ಚೊಕ್ರ ಗದ್ಯರೀತಿಯ ಅನುಯಾಯಿಗಳೆಂದರೆ ಯೂರಿಫೆಡ್ ಕೊವಿಚ್ (1834-88), ಅನತೋಲ್ ಸ್ವಿದ್ನಿತ್ಸ್ಕಿ (1834-71). ಇವಾನ್ ಲೆವಿತ್ ಸ್ಕಿ (1838-1918). ಇವಾನ್ ಲೆವಿತ್ಸ್ಕಿಯ ಉತ್ತಮ ಕೃತಿಗಳೆಂದರೆ ಮಿಕೋಲ ಜೇರ್ಯ ಹಾಗೂ ಕಯದಾಷವ ಸೀಮ್ಯ. 19ನೆಯ ಶತಮಾನದ ಅಂತ್ಯ ಭಾಗದಲ್ಲಿನ ಅತ್ಯುತ್ತಮವಾದ ನೈಜ ನಾಟಕಕಾರರೆಂದರೆ ಮಿಹೈಲೋಸ್ತರೀಸ್ಕಿ (1840-1904). ಮಾರ್ಕೋ ಕ್ರಪಿವ್ನಿತ್ ಸ್ಕಿ (1840-1910) ಹಾಗೂ ಇವಾನ್ ತೊಬಿಲೆವಿಚ್ (1845-1907). ಇವನ ಕಾವ್ಯನಾಮ ಕರ್ಪೆಂಕಕಾರಿ. ಇವರು ಬಹಳ ಕಾರ್ಯಶೀಲ ಲೇಖಕರಾಗಿದ್ದರು. ಉತ್ತಮ ವಿಮರ್ಶಕ ಹಾಗೂ ಪ್ರಕಾಶಕನಾಗಿದ್ದ ಮಿಹೈಲ ದ್ರಗಮಾನಫ್ (1841-95) ಸಾಮಾಜಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿ ನಿರ್ವಹಿಸಿದ ಪಾತ್ರ ಪ್ರಮುಖವಾದದ್ದು. ಉಕ್ರೇನಿಯನ್ ಸಾಹಿತ್ಯದ ಅಭಿವೃದ್ಧಿಯ ಒಂದು ಹೊಸಮಜಲು ಮತ್ತು ಇವಾನ್ ಫ್ರಾಂಕೋನ (1856-1919) ಹೆಸರು ಎರಡೂ ಅವಿಭಾಜ್ಯವಾಗಿವೆ. ಈತ ಗಾಲ್ ದೇಶದ ಕ್ರಾಂತಿಕಾರಿ ಬರೆಹಗಾರ ಹಾಗೂ ಬುದ್ಧಿಜೀವಿ. ಇವನು ವಿಮರ್ಶಾತ್ಮಕ ವಾಸ್ತವಿಕತೆಯನ್ನು ಉನ್ನತಮಟ್ಟಕೆ ಏರಿಸಿದ. ದುಡಿಮೆಗಾರರ ಬದುಕು, ಹೋರಾಟಗಳನ್ನು ಬೋ-ಕನ್ಸ್ಟ್ರಿಕ್ಟರ್, ಬಾರಿಸ್ಲಾವ್ ಸ್ಮಿಯೇತ್ಸ್ಯಗಳಲ್ಲಿ ಚಿತ್ರಿಸಿದ್ದಾನೆ. 1880ನೆಯ ದಶವರ್ಷ ಮಿಹೈಲೋ ಪಾವ್ಲಿಕ್ (1853-1915), ಸ್ತಿಪಾನ್ ಕವಾಲಿಫ್ (1848-1920), ನತಾಲ್ಯ ಕಬ್ರೀನ್ಸ್ಕ (18512-1920) ಚಿಮಫೈಬರ್ದುಲ್ಯಾಕ್ (1863-1936) ಓಸಿಪ್ಮಕವ್ಯೆ (1867-1925) ಅಗತಾಂಗಿಲ್ಕ್ರಿಮ್ಸ್ಕಿ (1871-1941) ಹಾಗೂ ಇನ್ನಿತರರು ನೀಡಿದ ಸಮೃದ್ಧ ಸಾಹಿತ್ಯದಿಂದ ಮೈತುಂಬಿಕೊಡಿತು.

ಹಿಂದಿನವರು ನಡೆದು ಬಂದ ದಾರಿಯಲ್ಲಿ ಹೆಜ್ಜೆಯಿಟ್ಟವರಲ್ಲಿ ನೈಜ ಗದ್ಯಸಾಹಿತ್ಯ ಪ್ರವೀಣರಾದ ವಸೀಲ್ ಸ್ಟಿಫಾನಿಕ್(1874-1936). ಇವಾನ್ ಸಿಮನ್ಯೂಕ್ (1871-1927), ಲೆಸ್ ಮರ್ತೋವಿಚ್ (1871-1919) ಓಲ್ಗಕಬಿಲ್ಯಾನ್ಸ್ಕ (1865-1942). ಅರ್ಹಿಪ್ ಚಿಸ್ಲೆಂಕ (1882-1911), ಸ್ತಿಪಾನ್ ಪನಾಸೆಂಕ (1871-1932) ಮತ್ತು ಕವಿಗಳಾದ ಓಲೊಜಿಮಿರಿ ಸಮೋಯ್ಲೆಂಕ (1864-1925), ಮಿಕೋಲ ವರೋನಿ (1871-1942), ಅಲೆಸ್ ಇವರು ಮುಖ್ಯರು.

20ನೆಯ ಶತಮಾನದ ಅತ್ಯಂತ ಪ್ರಸಿದ್ಧ ಲೇಖಕರೆಂದರೆ ಲೇಸ್ಕ ಉಕ್ರಾಯಾಕ (1871-1913) ಹಾಗೂ ಮಿಹೈಲೋ ಕುತ್ಸುಉಬಿನ್ಸ್ಕಿ (1864-1913) ಲೇಸ್ಯ ಉಕ್ರಾಯಾಕನ ಕೃತಿಗಳು ಅನೇಕ ಭಾವಗೀತೆಗಳು ಪದ್ಯರೂಪಕಗಳು ಹಾಗೂ ಸಂವಾದಗಳನ್ನೊಳಗೊಳ್ಳುತ್ತವೆ. ಕುತ್ಸುಉಬಿನ್ಸ್ಕಿ ನೈಜ ಗದ್ಯಸಾಹಿತ್ಯದ ಹಾಗೂ ನಾಡಿನ ಸ್ವಾತಂತ್ರ್ಯ ಪ್ರೇಮಿಗಳ ವಕ್ತಾರ ಕವಿಯಾಗಿದ್ದ. 1917ನೆಯ ಇಸವಿಯಲ್ಲಿ ನಡೆದ ಕ್ರಾಂತಿಗೆ ಮುಂಚಿನ ಉಕ್ರೇನಿಯನ್ ಸಾಹಿತ್ಯ ಫ್ರಾಂಕೋ ಹಾಗೂ ಇವರಿಬ್ಬರ ಸಾಹಿತ್ಯ ಕೊಡುಗೆಯಿಂದಾಗಿ ಸಮೃದ್ಧಿಗೊಂಡಿತು.

ಕ್ರಾಂತಿಯಾದನಂತರ ಉಕ್ರೇನಿಯನ್ ಸಾಹಿತ್ಯದ ನವಯುಗ ಆರಂಭವಾಯಿತು. ಜನತೆಯ ಹಿತವನ್ನು ಕಾಯ್ದುಕೊಳ್ಳುವ ಆದರ್ಶ ಹಾಗೂ ಸಮಾಜವಾದದ ನಿರ್ಮಾಣಗಳು ಹೊಸ ಸೌಂದರ್ಯೋಪಾಸನೆಯ ಮೌಲ್ಯಗಳನ್ನು ಎತ್ತಿಹಿಡಿದವು. ಇದು ವಾಸ್ತವಿಕ ಸಮಾಜವಾದದ ವಿಧಾನ. ನವ್ಯಕವಿಗಳು, ಕ್ರಾಂತಿಕಾರಿ ಕವಿಗಳು, ಸಮಷ್ಟಿವಾದಿಗಳು, ಮಾನವತಾವಾದಿಗಳು ಇವರು: ಪಾವ್ಲೊ ತಿಚೀನಾ (1891- ) ವಸೀಲ್ ಎಲಾಂಸ್ಕಿ (1893-1923), ಓಲಜಿಮಿರ್ ಸಸ್ಯೂರ (1898-1965) ಮಿಕೋಲ ಬಷಾನ್ (1904-1969) ಹಾಗೂ ಮಾಕ್ಸಿಮ್ರಿಲ್ಸ್ಕಿ (1895-1964), 1920ರ ಅನಂತರದ ತರುಣದಲ್ಲಿ ಮಹಾಗದ್ಯದ ಕ್ಷೇತ್ರದಲ್ಲಿ ಉನ್ನತ ಬೆಳೆವಣಿಗೆಯುಂಟಾಯಿತು. ಆಂದ್ರೀ ಗಲೋಫ್ಕ (1897- ), ಪೆತ್ರೋ ಪಾಂಚೆಂಕ (1891- ), ಯೂರಿಯನೋಫ್ಸ್ಕಿ (1902-1954) ಹಾಗೂ ಪಾವ್ಲೊ ಗುಬ್ಯೆಂಕೊ (ಕಾವ್ಯನಾಮ ಅಸ್ತಾಪ್ ವೀಷ್ಣ್ಯ). (1889-1956) ಇವರೆಲ್ಲರೂ ಸಾಮಾಜಿಕ ಕಾದಂಬರಿಗಳ ಪ್ರತಿಪಾದಕರಾಗಿ, ರಾಷ್ಟ್ರೀಯ ವಿನೋದ ಹಾಗೂ ವಿಡಂಬನೆಯ ಶಾಲೆಯನ್ನು ನಿರ್ಮಿಸಿ, ಅದಕ್ಕೆ ತಕ್ಕ ಅನುಯಾಯಿಗಳನ್ನು ದೊರಕಿಸಿದರು. ನಾಟಕಗಳು ಜಯಭೇರಿ ಹೊಡೆದು ವೃತ್ತಿನಾಟಕಸಂಸ್ಥೆ ಹಾಗೂ ಹವ್ಯಾಸಿ ನಾಟಕಸಂಸ್ಥೆಗಳು ಉತ್ತಮರೀತಿಯಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದುವು. ಅದರಲ್ಲಿ ಉತ್ತಮವಾದ ನಾಟಕಕರ್ತೃಗಳು: ಯಕೀಫ್ ಮಮಂತೋಫ್ (1888-1940) ಹಾಗೂ ಇವಾನ್ ದ್ವಿಪ್ರೋವ್ಸ್ಕಿ (1895-1934) , ಮಿಕೋಲ ಕೂಲಿಷ್ (1881-1952) ಎಂ.ಇರ್ಚನ್. ಐ. ಮಿಕಿಚ್ಯಂಕ ಹಾಗೂ ಅಲೆಕ್ಸಾಂಡರ್ ಕೋರ್ನೀಚುಕ್ (1905- ) ಮೊದಲಾದವರು. 1939ರವರೆಗೆ ಪೋಲೆಂಡಿನ ಒಂದು ಭಾಗವಾಗಿದ್ದ ಪಶ್ಚಿಮ ಉಕ್ರೇನಿನಲ್ಲಿ ಕ್ರಾಂತಿಕಾರಿ ಸಾಹಿತ್ಯದ ಅಭಿವೃದ್ಧಿಯಾಯಿತು. ಅದಕ್ಕೆ ಮುಖ್ಯ ಕಾರಣಕರ್ತೃಗ ಳೆಂದರೆ ಅಲೆಕ್ಸಾಂಡರ್ ಗವ್ರಿಲ್ಯೂಕ್ (1911-1941), ಸ್ವಿಫಾನ್ ಅಲೆಕ್ಸ್ಯೂಕ್ (1892-1941) ಪೆತ್ರೊ ಕಸ್ಲಾನ್ಯೂಕ್ (1904-1965) ಮತ್ತು ಯರಾಸ್ಲಾಫ್ ಗಲಾನ್ (1902-49).

ಇವಾನ್ ಕೋತ್ಲ್ಯಾರೇವ್ಸ್ಕಿ
(1769–1838)
ತರಾಸ್ ಷೆವ್ಚೆಂಕೊ
(1814–1861)
ಇವಾನ್ ಫ್ರಾಂಕೋ
(1856–1916)
Mykhailo
ಮಿಹೈಲೋ ಕುತ್ಸುಉಬಿನ್ಸ್ಕಿ
(1864–1913)
ಲೇಸ್ಕ ಉಕ್ರೈಂಕ
(1871–1913)

1920ರ ಮತ್ತು 1930ರ ನಡುವಣ ಸಾಹಿತ್ಯದ ಮುಖ್ಯ ಲಕ್ಷಣವೆಂದರೆ ಪ್ರಧಾನಸ್ವರಗತಿಯ ಎಲ್ಲೆಯ ವಿಸ್ತರಣೆ, ಜೀವನದ ಕ್ರಾಂತಿಕಾರಿ ಬದಲಾವಣೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳ ಉದ್ಭವ, ನೂತನ ರೂಪದ ನಾಯಕನ ಅವತಾರ, ಎಲ್ಲ ರೀತಿಯ ಸಾಹಿತ್ಯಶೈಲಿಯ—ಅದರಲ್ಲೂ ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳು, ವಿಜ್ಞಾನ ಕಾಲ್ಪನಿಕ ಮತ್ತು ಸಾಹಸ ಕಾದಂಬರಿಗಳು, ಪುರಾಣ ಕಾವ್ಯಗಳು ಮತ್ತು ಯುವಜನಾಂಗದ ಹಾಗೂ ಎಳೆಯರ ಸಾಹಿತ್ಯ ಶೈಲಿಗಳ—ಅಭಿವೃದ್ಧಿ.

ಎರಡನೆಯ ಮಹಾಯುದ್ಧವಾದ ಅನಂತರ ರಾಷ್ಟ್ರಪ್ರೇಮ, ಸಮರವಿರೋಧಿ ಮತ್ತು ಮಾನವೀಯ ಮೌಲ್ಯಗಳು ಸಾಹಿತ್ಯವನ್ನು ಪ್ರವೇಶಿಸಿದವು. ಅಲೆಕ್ಸಾಂಡರ್ ಗೊಂಚಾರ್ (1918- ) ಪ್ರಪರನೋಸ್ತ್ಸಿಯಲ್ಲಿ ಮತ್ತು ಮಿಹೈಲ ಸ್ತೇಲ್ ಮಹ್ (1912- ) ಅನೇಕ ಕಾದಂಬರಿಗಳ ಸರಣಿಯಲ್ಲಿ ಹಾಗೂ ವೈಲಿಕರಿದ್ನ್ಯದಲ್ಲಿ ರಾಷ್ಟ್ರೀಯ ಜೀವನದ ವಿಶಾಲ ಕಾವ್ಯರೂಪಕವನ್ನು ನೀಡಿದರು. ಯೂರಿಸ್ಮೋಲಿಚ್ (1900- ), ನತಾನ್ ರಿಬಾಕ್ (1913- ), ಸಿವ್ಯೋನ್ ಸ್ಕ್ಲರ್ಯಂಕ (1901-1962) ಹಾಗೂ ಅಲೆಕ್ಸಾಂಡರ್ ಇಲ್ಚಿಂಕ ಇವರು ಐತಿಹಾಸಿಕ ಕಾದಂಬರಿಗಳನ್ನು ಪ್ರಕಟಿಸಿದರು.

ಆಂದ್ರೀ ಮಾಲಿಷ್ಠ (1912- ), ಸ್ಚಿಪಾನ್ ಅಲೀಯ್ ನ್ಯೂಕ್ (1908- ), ಎಲ್. ಪಿರ್ವಮಾಯ್ಸ್ಕೆ (1908- ), ಪಿ.ವೊರಂಕೊ ಮತ್ತು ಡಿ. ಪವ್ಲೀಚ್ಕ ಮೊದಲಾದವರು ಕಾವ್ಯ ಪ್ರಪಂಚಕ್ಕೆ ಗಮನಾರ್ಹವಾದ ಕೊಡುಗೆಗಳನ್ನು ನೀಡಿದವರು.

ಅಲೆಕ್ಸಾಂಡರ್ ದೆದವ್ಷೆಂಕ (1894-1956) ಅಸಾಮಾನ್ಯ ಬುದ್ಧಿಯುಳ್ಳ ವ್ಯಕ್ತಿಯೆಂದು ಹೆಸರುಗಳಿಸಿ, ಕಲೆಗಾರನಾಗಿ ಯಶಸ್ಸುಗಳಿಸಿ, ಚಲನಚಿತ್ರ ನಿರ್ಮಾಪಕನೂ ನಾಟಕಕಾರನೂ ಕಾದಂಬರಿಕಾರನೂ ಪ್ರಕಾಶಕನೂ ಆಗಿದ್ದ. ಒಟ್ಟಿನಲ್ಲಿ ಹೇಳುವುದಾದರೆ ಉಕ್ರೇನಿಯನ್ ಸಾಹಿತ್ಯ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದೊಡನೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಅದಕ್ಕೆ ತಾರಾಸ್ಷೆವ್ ಚೆಂಕೂ ನೀಡಿರುವ ಕೊಡುಗೆ ಅತ್ಯಂತ ಗಮನೀಯವಾದುದಾಗಿಯೂ ಅಗಾಧವಾಗಿಯೂ ಇದೆ. ಇಂದಿಗೂ ರಾಷ್ಟ್ರದ ಅತ್ಯುತ್ತಮ ಬರೆಹಗಾರರು ಹಾಗೂ ಕವಿಗಳಿಗೆ ಈತನ ಹೆಸರಿನಲ್ಲಿ ಬಹುಮಾನ ನೀಡಲಾಗುತ್ತಿದೆ. ಇಂದಿನ ಆಧುನಿಕ ಉಕ್ರೇನಿಯನ್ ಸಾಹಿತಿಗಳು ಹಿಂದಿನವರ ಕೃತಿಘನತೆ ಹಾಗೂ ಉನ್ನತಗುಣ ಮೌಲ್ಯಗಳನ್ನು ಗೌರವಿಸಿ ಅವರ ಪರಂಪರೆಯ ಹಾದಿಯಲ್ಲಿಯೇ ಮುನ್ನಡೆದು ಕೃತಿರಚನೆ ಮಾಡುತ್ತಿರುವರು.

ಯುಕ್ರೇನ್ ರಾಜಕೀಯ ಬಿಕ್ಕಟ್ಟು ಮತ್ತು ಭಾರತದ ಸಮಸ್ಯೆ[ಬದಲಾಯಿಸಿ]

  • ಯುಕ್ರೇನಿನಲ್ಲಿ 2014 ಜನವರಿಯಿಂದ ರಾಜಕೀಯ ಗಲಭೆ ಆರಂಭವಾಗಿದ್ದು ಭಾರತದ ಔಷಧ ರಪ್ತಿನ ಮೇಲೆ ಪರಿಣಾಮ ವಾಗಬಹುದು ಎನ್ನುವ ಭಯವಿದೆ.
  • ಅಲ್ಲಿಯ ಕರೆನ್ಸಿ ಡಾಲರ್ ಲೆಖ್ಖದಲ್ಲಿ ೨೦% ಕುಸಿದಿದೆ. ಇದಿಂದ ಭಾರತಕ್ಕೆ ನಷ್ಟವಾಗುವ ಸಾಧ್ಯತೆ ಇದೆಯೆಂದು ಭಾರತೀಯ ವಾಣಿಜ್ಯೋಗ್ಯಮ ಮಹಾ ಸಂಘಗಳ ಒಕ್ಕೂಟ -'ಫಿಕ್ಕಿ'. ಕಳವಳವ್ಯಕ್ತಪಡಿಸಿದೆ.

ಸ್ವತಂತ್ರ ರಾಷ್ಟ್ರಗಳ ಒಕ್ಕೂಟಗಳಲ್ಲಿ (ಸಿಐಎಸ್)ರಷ್ಯಾನಂತರ ಉಕ್ರೇನ ಅತಿ ದೊಡ್ಡ ಪಾಲುದಾರ ದೇಶ. ೨೦೧೨-೧೩ನೇ ಸಾಲಿನಲ್ಲಿ ೫೧೯೦ಕೋಟಿ ಡಾಲರ್ (ರೂ.೩.೨೧ ಲಕ್ಷ ಕೋಟಿ) ಮೊತ್ತದ ಸರಕು ಅಲ್ಲಿಗೆ ರಫ್ತಾಗಿದೆ. ೨೬೫ ಕೋಟಿ ಡಾಲರ್ (೧೬೪೩೦ಕೋ/ರೂ.)ಅಮದು ಆಗಿದೆ. ಅಮದು ಆಗುವ ವಸ್ತುಗಳ ಬೆಲೆ ಏರಬಹುದೆಂಬ ಭಯವಿದೆ.

  • ೨೦೧೨-೧೩ನೇ ಸಾಲಿನಲ್ಲಿ ೧೫,೪೦೦ ಕೋಟಿ ಡಾಲರ್ (೯.೫೪ ಕೋಟಿ ರೂ.)ಔಷಧ ಅಲ್ಲಿಗೆ ಕಳಿಸಲಾಗಿದೆ. ಭಾರತದ ಶೇ. ೫೬ ರಷ್ಟು ಔಷಧ ಕಂಪನಿಗಳ ಸರಕು ಮಾರಾಟವಾಗುವುದು ಗಲಭೆ ಪೀಡಿತ ಕ್ರಿಮಿಯಾದಲ್ಲಿ ಈಗ ಅವುಗಳ ಬೆಲೆ ತಗ್ಗಿದೆ. ಬಿಕ್ಕಟ್ಟು ಮುಂದುವರೆದರೆ ರಫ್ತು ಕಡಿಮೆ ಆಗಬಹುದು; ಅದರಿಂದ, ಭಾರತದ ವ್ಯಾಪರ/ವಹಿವಾಟುದಾರಿಗೆ ನಷ್ಟವಾಗುವುದೆಂಬ ಭಯವಿದೆ.

ರಾಜಕೀಯ ಸಮಸ್ಯೆ[ಬದಲಾಯಿಸಿ]

ಮಾರ್ಚಿ,2014
ಕ್ರಿಮಿಯಾದಲ್ಲಿ ರಷ್ಯನರು ಮತ್ತು ರಷ್ಯನ್ ಭಾಷೆ ಮಾತನಾಡುವ ಜನರು ಹೆಚ್ಚಿಗೆ ಇದ್ದು ಅವರು ಉಕ್ರೇನಿನಿಂದ ಬೇರ್ಪಟ್ಟು ರಷ್ಯಾ ಒಕ್ಕೂಟಕ್ಕೆ ಸೇರಲು ಬಯಸಿದ್ದಾರೆ . ಉಕ್ರೇನ ಅದನ್ನು ಸೈನ್ಯ, ಪೋಲೀಸ್ ಬಳಸಿ ಹತ್ತಿಕ್ಕಲು ಹವಣಿಸಿದೆ, ಕ್ರಿಮಿಯಾ ಜನರ ರಕ್ಷಣೆಗಾಗಿ ರಷ್ಯಾ ೨೦,೦೦೦ ಸೈನಿಕರನ್ನು ಅಂತರ ರಾಷ್ಟ್ರೀಯ ಗಡಿದಾಟಿ ಕ್ರಿಮಿಯಾದೊಳಗೆ ನುಗ್ಗಿಸಿದೆ.
ದಿಗ್ಬಂಧನ
ಅಮೇರಿಕ ಸಂಯುಕ್ತ ಸಂಸ್ಥಾನ , ನ್ಯಾಟೋ ರಾಷ್ರಗಳು ಗಾಬರಿಯಾಗಿವೆ. ಅಮೇರಿಕಾ (ಒಬಾಮಾ ಅಧ್ಯಕ್ಷ) ಅನೇಕ ಬಗೆಯ ದಿಗ್ಭಂಧನ - ವ್ಯಾಪಾರ - ವಹಿವಾಟು ಸ್ಥಗಿತ,ಮಾಡಿದೆ.ಅಮೇರಿಕಾದ ಎಚ್ಚರಿಕೆ ಮತ್ತು ಮುಂದಿನ ಕ್ರಮಕ್ಕೆ ಅಂಜಿಲ್ಲ. ರಷ್ಯಾ (ಅಧ್ಯಕ್ಷ ಪುತಿನ್) ಅದು ತನ್ನ ಹಕ್ಕೆಂದು ವಾದಿಸಿದೆ . ಜಗತ್ತಿನ ರಾಷ್ಟ್ರಗಳು ಜಗತ್ತು ಎರಡು ಬಣಗಳಾಗಿ , ಪುನಃ ಶೀತಲ ಸಮರ ಆರಂಭವಾಗುವುದೇ ಎಂದು ಭಯಪಟ್ಟಿವೆ. ಭಾರತದ ಹಿತಾಸಕ್ತಿ ಅಲ್ಲಿ ಇರುವುದರಿಂದ ಭಾರತ ತಟಸ್ತ ನೀತಿ (ನೆಹರೂನೀತಿ) ಅನುಸರಿಸಿದೆ. ರಷ್ಯಾವನ್ನು ಖಂಡಿಸಿಲ್ಲ -ಯಾವುದೇ ದಿಗ್ಭಂಧನ ವಿಧಿಸಲು ಒಪ್ಪಿಲ್ಲ. ವಿಶ್ವಸಂಸ್ಥೆ ತಾಳ್ಮೆ ವಹಿಸಲು ಇರಡೂ ಬಣಗಳನ್ನು ಕೋರಿದೆ.

ಮಲೇಷ್ಯಾ ಏರ್‌ಲೈನ್ಸ್ ಬೋಯಿಂಗ್ 777 ವಿಮಾನ[ಬದಲಾಯಿಸಿ]

ಬೋಯಿಂಗ್ 777 ವಿಮಾನದ- ಬಿದ್ದ ಅವಶೇಷಗಳು- NY times
ಯುಕ್ರೇನ್ ಬಂಡುಕೋರರು ಹೊಡೆದು ಉರುಳಿಸಿಸಿದ 295 ಜನರಿದ್ದ ಬೋಯಿಂಗ್ ವಿಮಾನ (ಒನ್ ಇಂಡಿಯಾ)
ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ ->>
ಬೋಯಿಂಗ್ 777 ವಿಮಾನ ಬಿದ್ದ ಜಾಗ- NY times
*ಭಾರತದ ಏರ್ ಇಂಡಿಯಾ ಏರ್ ಲೈನರ್ -ವಿಮಾನವು ಉಕ್ರೇನಿಯನ್ನರು ಹೊಡದು ಉರುಳಸಿದ ಬೋಯಿಂಗ್‘ ವಿಮಾನದ ಸಮೀಪ-ಹಿಂದೆಯೇ ೯೦/90 ಸೆಕೆಂಡುಗಳಷ್ಟು ಪಯಣದ ಅಂತರದಲ್ಲಿ ೨೫/25 ಕಿ.ಮೀ.ದೂರದಲ್ಲಿ ದೆಹಲಿಯಿಂದ ಬರ‍್ಮಿಂಗ್‘ಹ್ಯಾಮಿಗೆ ಹಾರುತ್ತಿತ್ತೆಂದು ತಿಳಿದು ಬಂದಿದೆ. ಅದು ದೆಹಲಿಯಿಂದ ಬರ‍್ಮಿಂಗ್‘ಹ್ಯಾಮಿಗೆ ಹೋಗುವ ನೇರ ಸಮೀಪದ ದಾರಿಯಾಗಿತ್ತು. ಅದರ ಪೈಲೆಟ್ ಗಳಿಗೆ ಹೀಗೆ ತಮ್ಮ ಮುಂದಿರುವ ವಿಮಾನವು ಹೊಡೆದು ಉರುಳಿಸಲ್ಪಟ್ಟಿದೆಯೆಂದು ತಿಳದಾಗ ದಿಗ್ಭ್ರಾಂತರಾದರು . ನಿಮ್ಮ ಪಕ್ಕದವನಿಗೆ ದೂರದಿಂದ ಅಡಗಿಕುಳಿತವನು ಗುಂಡಿಕ್ಕಿದರೆ ಆಗುವ ಅನುಭವ ನಮಗಾಯಿತೆಂದು ಅದರ ಪೈಲೆಟ್‘ಗಳು ಹೇಳಿದರು . ಆದರೆ ದೆಹಲಿಯ ಸಂಪುಟದ ವಕ್ತಾರರು ಇದನ್ನು ಅಲ್ಲಗಳೆದಿದ್ದಾರೆ!!."

timesofindia [೧]]

ಉಕ್ರೇನ ಬಂಡುಕೋರರಿಂದ ಮಲೇಷ್ಯಾದ ವಿಮಾನ ಪತನ[ಬದಲಾಯಿಸಿ]

ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ, ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರ ಕೃತ್ಯ-

ಕೌಲಾಲಂಪುರ/ಕೀವ್: ಮಲೇಷ್ಯಾ ಏರ್‌ಲೈನ್ಸ್ ಬೋಯಿಂಗ್ 777 ವಿಮಾನವು ರಷ್ಯಾ ಗಡಿ ಸಮೀಪದ ಯುದ್ಧಪೀಡಿತ ಪೂರ್ವ ಉಕ್ರೇನ್‌ನಲ್ಲಿ ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 295 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ಒಳಾಡಳಿತ ಸಚಿವಾಲಯ ಹೇಳಿದೆ. ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರು ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ.

ಉಕ್ರೇನ್ ರಾಜಕೀಯ -- ಉಕ್ರೇನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಅದನ್ನು ನಿವಾರಿಸುವ ದಿಸೆಯಲ್ಲಿ ಅಮೆರಿಕ ಮತ್ತು ಇತರ ದೇಶಗಳು ನಡೆಸಿದ ಪ್ರಯತ್ನ ಒಳ್ಳೆಯದೇ ಆಗಿತ್ತು. ಆದರೆ ಅಂಥ ಪ್ರಯತ್ನದಲ್ಲಿ ರಷ್ಯಾವನ್ನೂ ಸೇರಿಸಿಕೊಳ್ಳದಿದ್ದುದು ದೊಡ್ಡ ತಪ್ಪು. ರಷ್ಯಾವನ್ನು ದೂರ ಇಟ್ಟು ಉಕ್ರೇನ್ ದೇಶದ ಮೇಲೆ ಹಿಡಿತ ಸಾಧಿಸಲು ಯೂರೋಪ್ ಮತ್ತು ಅಮೆರಿಕ ಪ್ರಯತ್ನಿಸಿದವು. ನೂರಾರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ಜತೆಯಲ್ಲಿಯೇ ಬೆಳೆದುಕೊಂಡು ಬಂದಿವೆ. ಇಂಥ ಬಾಂಧವ್ಯ ಮುರಿಯುವ ಯತ್ನ ಸಹಜವಾಗಿಯೇ ರಷ್ಯಾಕ್ಕೆ ಅಸಮಾಧಾನ ಉಂಟುಮಾಡಿದೆ. ಇದು ಬೇರೆ ದೇಶಗಳಿಗೆ ತಿಳಿಯದಿರುವುದೇನಲ್ಲ. ರಷ್ಯಾದ ಮಗ್ಗುಲಿಗೇ ಹೋಗಿ ಕುಳಿತುಕೊಳ್ಳುವ ಲೆಕ್ಕಾಚಾರ ಅಮೆರಿಕ ಮತ್ತು ಯೂರೋಪಿನ ಕೆಲವು ದೇಶಗಳಿಗೆ ಇತ್ತು. ಇದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಬಂಡಾಯಕ್ಕೆ ರಷ್ಯಾ ಪ್ರೋತ್ಸಾಹ ನೀಡುತ್ತ ಬಂದಿದೆ. ಹೀಗಾಗಿ ರಷ್ಯಾದ ಜತೆ ಇರಬೇಕೆಂದು ಬಯಸುವವರು ಹೋರಾಡುತ್ತಿದ್ದಾರೆ. ಈ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವುದು ಉಕ್ರೇನ್. ವಿಮಾನ ದುರಂತ ಸಂಭವಿಸಿದ ಪ್ರದೇಶ ಉಕ್ರೇನ್‌ನಲ್ಲಿರುವುದರಿಂದ ಆ ಸಂಬಂಧವಾದ ಎಲ್ಲ ಜವಾಬ್ದಾರಿಯನ್ನು ಉಕ್ರೇನ್ ಹೊರಬೇಕು ಎಂದು ಪುಟಿನ್ ವಾದ ಮಾಡುತ್ತಾರೆ. ಉಕ್ರೇನ್ ವಿಚಾರವನ್ನು ಮುಂದಿಟ್ಟುಕೊಂಡು ಈಗಾಗಲೇ ರಷ್ಯಾದ ಮೇಲೆ ಅಮೆರಿಕ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ.

", ವಿಜಯ ಕರ್ನಾಟಕ.()

ಎಂಎಚ್ 370 ಮಲೇಷ್ಯಾ ವಿಮಾನವು ನಿಗೂಢವಾಗಿ ಕಣ್ಮರೆಯಾದ ನಾಲ್ಕು ತಿಂಗಳ ನಂತರ ಮತ್ತೊಂದು ಮಹಾನ್ ದುರಂತವನ್ನು ಮಲೇಷ್ಯಾ ಕಂಡಂತಾಗಿದೆ. 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು 77 ಸಾವಿರ ಆಡಿ ಎತ್ತರ ಜಿಗಿಯಬಲ್ಲ ಸಾಮರ್ಥ್ಯವಿರುವ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ.

ಅಮ್‌ಸ್ಟರ್‌ಡಮ್‌ನಿಂದ ಕೌಲಾಲಂಪುರಕ್ಕೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 280 ಪ್ರಯಾಣಿಕರು ಮತ್ತು 15 ವಿಮಾನ ಸಿಬ್ಬಂದಿ ಸೇರಿದಂತೆ 295 ಜನ ಪ್ರಯಾಣಿಸುತ್ತಿದ್ದು ಎಲ್ಲರೂ ಸಾವಿಗೀಡಾಗಿದ್ದಾರೆ. ಮೃತ ಶರೀರದ ಚೂರುಗಳು 15 ಕಿಮೀ ವರೆಗೆ ಚೆಲ್ಲಿ ಬಿದ್ದಿದ್ದವು. ರಷ್ಯಾ ಗಡಿಗೆ 40 ಕಿ.ಮೀ ದೂರದ ರಷ್ಯಾ ಪರ ಬಂಡುಕೋರರ ಪ್ರದೇಶವಾದ ಗ್ರಾಬೋವೊ ಗ್ರಾಮದಲ್ಲಿ ವಿಮಾನ ಹೊತ್ತಿಉರಿಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

10 ಸಾವಿರ ಮೀಟರ್ ಎತ್ತರದಲ್ಲಿ ಮೇಲೆ ಹಾರುತ್ತಿದ್ದ ವಿಮಾನ ಇದಕ್ಕಿದ್ದಂತೆ ರಾಡರ್ ಸಂಪರ್ಕ ತಪ್ಪಿದ್ದು, ನಂತರ ಅದು ಉಕ್ರೇನ್ ಬಂಡುಕೋರರ ಡಾನೆಸ್ಕ್ ಪ್ರಾಂತ್ಯದ ಶಾಕ್ಟರ್‌ಸ್ಕ್ ಪಟ್ಟಣದ ಸಮೀಪ ಕೆಳಕ್ಕುರುಳಿದೆ. ತುರ್ತು ಸೇವಾ ಸಿಬ್ಬಂದಿ ತಂಡಗಳು ಸ್ಥಳಕ್ಕೆ ಧಾವಿಸಲು ಮುಂದಾಗಿವೆ. ವಿಮಾನವು ಅಮ್‌ಸ್ಟರ್‌ಡಮ್‌ನಲ್ಲಿ ಕಡೆಯದಾಗಿ ಸಂಪರ್ಕ ಕಳೆದುಕೊಂಡಿತು. ಉಕ್ರೇನ್ ವಾಯು ಗಡಿಯನ್ನು ದಾಟಿದ ವಿಮಾನ, ರಷ್ಯಾ ವೈಮಾನಿಕ ನೆಲೆಯನ್ನು ಪ್ರವೇಶಿಸಿರಬಹುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ರಷ್ಯಾ ವಿರುದ್ಧ ದೂರು: ಉಕ್ರೇನ್ ಸೇನೆಯ ಕೆಲವು ವಿಮಾನಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸಿದ ಘಟನೆಗಳು ಇತ್ತೀಚಿನ ವಾರಗಳಲ್ಲಿ ನಡೆದಿವೆ. ಉಕ್ರೇನ್ ಬಂಡುಕೋರರಿಗೆ ರಷ್ಯಾ ಸೇನೆಯು ಆಧುನಿಕ ಕ್ಷಿಪಣಿಗಳನ್ನು ಸರಬರಾಜು ಮಾಡಿದೆ. ತನ್ನ ವಿಮಾನವೊಂದರ ಮೇಲೆ ರಷ್ಯಾ ವಾಯು ಸೇನೆಯು ದಾಳಿ ನಡೆಸಿದೆ, ಎಂದು ಉಕ್ರೇನ್ ಅಧಿಕಾರಿಗಳು ದೂರಿದ್ದಾರೆ.

ಹಿಂದೆ ಉಕ್ರೇನ್ ಅಧ್ಯಕ್ಷರಾಗಿದ್ದ ಅವಿಕ್ಟರ್ ಯಾನ್‌ಕೋವಿಚ್ ಪದಚ್ಯುತಿಗೆ ದೇಶದಲ್ಲಿ ಆಂತರಿಕ ಸಂಘರ್ಷಗಳು ಹೆಚ್ಚಿ, ಅವರು ಕಳೆದ ಫೆಬ್ರವರಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಆರಂಭವಾಗಿತ್ತು.

ರಷ್ಯಾ ಪರ ಪ್ರತ್ಯೇಕತಾದಿ ಬಂಡುಕೋರರು ಉಕ್ರೇನ್ ಪೂರ್ವದ ಲುಹಾನ್ಸ್ ಮತ್ತು ಡಾಂಟೆಸ್ಕ್ ಪ್ರಾಂತ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬಂಡುಕೋರರ ಮಟ್ಟ ಹಾಕಲು ಉಕ್ರೇನ್ ಸೇನೆಗಳು ಹೋರಾಟ ನಡೆಸಿವೆ. ಬಂಡುಕೋರರಿಗೆ ಟ್ಯಾಂಕರ್‌ಗಳು, ಸೇನಾ ಸಾಧನ ಸಲಕರಣೆ, ಅಸ್ತ್ರಗಳನ್ನು ರಷ್ಯಾ ಸರಬರಾಜು ಮಾಡುತ್ತಿದೆ. ಗಡಿಯನ್ನು ಅಕ್ರಮವಾಗಿ ನುಸುಳಿ ಬಂಡುಕೋರರಿಗೆ ರಷ್ಯಾ ನೆರವಾಗುತ್ತಿದೆ ಎಂದು ಉಕ್ರೇನ್ ದೂರಿದೆ.

ತನಿಖೆಗೆ ಆದೇಶ: ವಿಮಾನವನ್ನು ಕ್ಷಿಪಣಿಯಿಂದ ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಪೊರೊಶೇಂಕೊ ಹೇಳಿದ್ದು, ಉಕ್ರೇನ್ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್ ಅವರು ತನಿಖೆಗೆ ಆದೇಶಿಸಿದ್ದಾರೆ.

ಮಲೇಷ್ಯಾ ವಿಮಾನ ಗುರಿಯಾಗಿದ್ದು ಹೇಗೆ?[ಬದಲಾಯಿಸಿ]

ಉಕ್ರೇನ್ ಮತ್ತು ರಷ್ಯಾ ನಡುವೆ ತಿಕ್ಕಾಟ ಇದ್ದರೂ, ಇಲ್ಲಿ ಮಲೇಷ್ಯಾ ವಿಮಾನ ಬಲಿಯಾಗಿದ್ದು ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉಕ್ರೇನ್ ಮಾರ್ಗವಾಗಿ ಹಾದು ಹೋದ ವಿಮಾನವು ಆಕಸ್ಮಿಕವಾಗಿ ದಾಳಿಗೆ ಗುರಿಯಾಯಿತೇ ಅಥವಾ ಉದ್ದೇಶ ಪೂರ್ವಕವಾಗಿ ದಾಳಿ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಕ್ರೇನ್ ಸರಕಾರದ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ, ಎಂದು ಉಕ್ರೇನ್ ಬಂಡುಕೋರ ನಾಯಕ ಅಲೆಕ್ಸಾಂಡರ್ ಬೋರೊಡೈ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಉಕ್ರೇನ್, ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು. ನಮ್ಮ ದೇಶದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲೆಂದು ಪ್ರತ್ಯೇಕತಾವಾದಿಗಳು ಯತ್ನಿಸಿದ್ದಾರೆ, ಎಂದು ವಾದಿಸುತ್ತಿದೆ. ಈ ಮಧ್ಯೆ, ನಮ್ಮ ಸೇನೆ ಯಾವುದೇ ವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿಲ್ಲ, ಎಂದು ಉಕ್ರೇನ್ ಅಧ್ಯಕ್ಷ ಪೀಟ್ರೊ ಪೊರೊಶೆನ್ಕೊ ಹೇಳಿದ್ದಾರೆ.

ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ[ಬದಲಾಯಿಸಿ]

ಬೋಯಿಂಗ್ 777 ನ್ನು ಹೊಡೆದು ಉರುಳಿಸಿರಬಹುದಾದ ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ -NY times-ಸ್ಪಷ್ಟ ದೊಡ್ಡ ಚಿತ್ರಕ್ಕೆ ಫೋಟೋದ ಮೇಲೆ ಕ್ಲಿಕ್ ಮಾಡಿ

ಯುದ್ಧಪೀಡಿತ ಪ್ರದೇಶದಲ್ಲಿ ರಷ್ಯಾ ಸೇನೆ, ಉಕ್ರೇನ್‌ ಸೇನೆಯಲ್ಲದೆ, ರಷ್ಯಾಪರ ಬಂಡುಕೋರರು ಮೂರು ಪಡೆಗಳು ಕಾರ್ಯನಿರತವಾಗಿವೆ. ಅವುಗಳಲ್ಲೊಂದು ಸಿಡಿಸಿದ ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ವಿಮಾನ ಪತನಕ್ಕೆ ಕಾರಣವಾಗಿರಬಹುದು ಎಂದು ತರ್ಕಿಸಲಾಗಿದೆ.

ಆಗಿನ ರಷ್ಯಾ ಒಕ್ಕೂಟ 1970ರ ದಶಕದಲ್ಲಿ ಮೊದಲಿಗೆ ವಿನ್ಯಾಸಗೊಳಿಸಿದ ಎಸ್-11 ಕ್ಷಿಪಣಿಯ ವಿವಿಧ ಅವತರಣಿಕೆಗಳು ರಷ್ಯಾ ಹಾಗೂ ಉಕ್ರೇನ್‌ ಎರಡೂ ದೇಶಗಳ ಬಳಿ ಇವೆ. ಇದನ್ನು ವಾಹನಗಳ ಮೂಲಕ ಇಲ್ಲವೇ ಸ್ವಯಂ ಚಾಲಿತವಾಗಿ ಯುದ್ಧಭೂಮಿಯಲ್ಲಿ ಮುನ್ನಡೆಸಬಹುದಾಗಿದ್ದು ಅದರ ಜಾಡು ಹುಡುಕುವುದು ಕಷ್ಟ. 18 ಅಡಿ ಉದ್ದವಿರುವ ಎಸ್‌-11ರ ಆಧುನಿಕ ಆವೃತ್ತಿಯ ಕ್ಷಿಪಣಿ ನೆಲದಿಂದ 33 ಸಾವಿರ ಅಡಿ ಎತ್ತರದವರೆಗೂ ನುಗ್ಗಬಲ್ಲ ಕ್ಷಮತೆ ಹೊಂದಿದೆ ಎನ್ನುತ್ತಾರೆ ತಜ್ಞರು. ಇದೇ ಎತ್ತರದಲ್ಲಿ ಮಲೇಷ್ಯಾ ವಿಮಾನ ಸಂಚರಿಸುತ್ತಿತ್ತು. ಅಂದ ಹಾಗೆ ಈ ಕ್ಷಿಪಣಿಗಳ ಅತ್ಯಾಧುನಿಕ ಆವೃತ್ತಿಯ ಕ್ಷಿಪಣಿಗಳು 77 ಸಾವಿರ ಅಡಿವರೆಗೂ ಬೆನ್ನತ್ತಿ ತನ್ನಲ್ಲಿರುವ ಅಸ್ತ್ರಗಳನ್ನು ಸಿಡಿಯಬಲ್ಲ ಶಕ್ತಿ ಹೊಂದಿವೆ. ತನಿಖೆಗೆ ಒಬಾಮ ಒಲವು:

ಉಕ್ರೇನ್‌ನಲ್ಲಿ 298 ಮಂದಿ ಸಾವನ್ನಪ್ಪಲು ಕಾರಣವಾದ ಮಲೇಷ್ಯಾ ವಿಮಾನ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ. 154 ಡಚ್‌ ಪ್ರಯಾಣಿಕರೂ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.

ನೋಡಿ[ಬದಲಾಯಿಸಿ]

ರಷ್ಯಾ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Government
Trade

49°N 32°E / 49°N 32°E / 49; 32

{{

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಆಧಾರ[ಬದಲಾಯಿಸಿ]

೧.ವಿಕಿ ಇಂಗ್ಲಿಷ್ ೨.ಸುದ್ದಿ ಮಾದ್ಯಮ ವಾಣಿಜ್ಯ(ನವದೆಹಲಿ-ಪಿಟಿಐ)-ಪ್ರಜಾವಾಣಿ ೨೦-೩-೨೦೧೪ ಮತ್ತು ವಿಜಯ ವಾಣಿ ೧೯-೭-೨೦೧೪ & NY times & ಒನ್ ಇಂಡಿಯಾ)

  1. "Города и области Украины – Гора Ай-Петри [Cities and regions of Ukraine – Mount Ai-Petri]". Ukrainian.su. Archived from the original on 8 ಏಪ್ರಿಲ್ 2010. Retrieved 26 January 2014.