ಬಿ. ವಿ. ಕಾರಂತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬಿ.ವಿ.ಕಾರಂತ ಇಂದ ಪುನರ್ನಿರ್ದೇಶಿತ)
ಬಿ.ವಿ. ಕಾರಂತ

ಬಾಬುಕೋಡಿ ವೆಂಕಟರಮಣ ಕಾರಂತ (ಅಕ್ಟೋಬರ್ ೭, ೧೯೨೮ - ಸೆಪ್ಟಂಬರ್ ೧, ೨೦೦೨) ಅವರು ಚಲನಚಿತ್ರ ನಿರ್ದೇಶಕ, ನಾಟಕಕಾರ, ನಟ, ಚಿತ್ರಕಥೆಗಾರ, ಸಂಯೋಜಕರಾಗಿದ್ದರು. ಪ್ಯಾರಲಲ್ ಸಿನಿಮಾದ ಪ್ರವರ್ತಕರಲ್ಲಿ ಕಾರಂತರು ಕೂಡ ಒಬ್ಬರು. ಕಾರಂತರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ (೧೯೬೨) ಹಳೆಯ ವಿದ್ಯಾರ್ಥಿಯಾಗಿದ್ದರು. ನಂತರ ಅದರ ನಿರ್ದೇಶಕರಾಗಿದ್ದರು. ಅವರಿಗೆ ೧೯೭೬ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಕಲಾ ಕ್ಷೇತ್ರಕ್ಕೆ ಅವರ ಕೊಡುಗೆಗಳಿಗಾಗಿ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಲಭಿಸಿತು.

ಜೀವನಚರಿತ್ರೆ[ಬದಲಾಯಿಸಿ]

ಬಿ.ವಿ. ಕಾರಂತರು ೧೯೨೮ ರಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ ಜನಿಸಿದರು. ಕಾರಂತರು ಮೂರನೇ ತರಗತಿಯಲ್ಲಿರುವಾಗ ಪಿ.ಕೆ. ನಾರಾಯಣ ಅವರು ನಿರ್ದೇಶಿಸಿದ ನನ್ನ ಗೋಪಾಲ ನಾಟಕದಲ್ಲಿ ನಟಿಸಿದರು. ನಂತರ ಅವರು ಗುಬ್ಬಿ ವೀರಣ್ಣ ನಾಟಕ ಕಂಪನಿಗೆ ಸೇರಿದರು. ಅಲ್ಲಿ ಅವರು ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದರು.

ಗುಬ್ಬಿ ವೀರಣ್ಣ ಅವರು ಕಾರಂತರನ್ನು ಬನಾರಸ್‌ಗೆ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಕಲಿಯಲು ಕಳುಹಿಸಿದರು. ಅಲ್ಲಿ ಅವರು ಗುರು ಓಂಕಾರನಾಥ ಠಾಕೂರ್ ಅವರಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿಯನ್ನು ಪಡೆದರು. ನಂತರ ಅವರ ಪತ್ನಿ ಪ್ರೇಮಾ ಕಾರಂತರೊಂದಿಗೆ ಕಾರಂತರು ಬೆಂಗಳೂರಿನಲ್ಲಿ "ಬೆನಕ" ಎಂಬ ನಾಟಕ ತಂಡವನ್ನು ಸ್ಥಾಪಿಸಿದರು. ಪ್ರೇಮಾ ಅವರು ದೆಹಲಿಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಬಿ.ವಿ. ಕಾರಂತರು ೧೯೬೨ ರಲ್ಲಿ ನವದೆಹಲಿಯಲ್ಲಿರುವ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ದಲ್ಲಿ ಪದವಿಯನ್ನು ಪಡೆದರು. ೧೯೬೯ ಮತ್ತು ೧೯೭೨ ರ ನಡುವೆ ಅವರು ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕ ಬೋಧಕರಾಗಿ ಕೆಲಸ ಮಾಡಿದರು. ನಂತರ ದಂಪತಿಗಳು ಬೆಂಗಳೂರಿಗೆ ಮರಳಿದರು. ೧೯೭ ರಲ್ಲಿ ಎನ್‌ಎಸ್‌ಡಿಯ ನಿರ್ದೇಶಕರಾಗಿದ್ದರು. ಅವರು ತಮಿಳುನಾಡಿನ ಮಧುರೈನಂತಹ ದೂರದ ಸ್ಥಳಗಳಲ್ಲಿ ಹಲವಾರು ಕಾರ್ಯಾಗಾರಗಳನ್ನು ನಡೆಸಿದರು. ಅವರು ಎನ್‌ಎಸ್‌ಡಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಂತರ, ೧೯೮೧ ಮತ್ತು ೧೯೮೬ ರ ನಡುವೆ ಮಧ್ಯಪ್ರದೇಶದ ಭಾರತ್ ಭವನದ ಅಧೀನದಲ್ಲಿ ರಂಗಮಂಡಲದ ರೆಪರ್ಟರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ನಂತರ, ಕಾರಂತರು ಕರ್ನಾಟಕಕ್ಕೆ ಮರಳಿದರು.

೧೯೮೯ ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ರಂಗಾಯಣ ಎಂಬ ರೆಪರ್ಟರಿಯನ್ನು ಸ್ಥಾಪಿಸಿದರು. ೧೯೯೫ ರವರೆಗೆ ಕಾರಂತರು ಅದರ ಮುಖ್ಯಸ್ಥರಾಗಿದ್ದರು. ಅವರು ೧೯೯೦ ರ ದಶಕದ ಅಂತ್ಯದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸೆಪ್ಟೆಂಬರ್ ೧ ೨೦೦೨ ರಲ್ಲಿ ರಾತ್ರಿ 8 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅನುವಾದಗಳು[ಬದಲಾಯಿಸಿ]

ಬಿ.ವಿ. ಕಾರಂತರು ಸ್ವಪ್ನ ವಾಸವದತ್ತ, ಉತ್ತರರಾಮ ಚರಿತಾ ಮತ್ತು ಮೃಚ್ಛಕಟಿಕ ಎಂಬ ಕೃತಿಗಳನ್ನು ಸಂಸ್ಕೃತದಿಂದ ಹಿಂದಿಗೆ ಅನುವಾದಿಸಿದರು. ಅವರು ಕನ್ನಡದಿಂದ ಹಿಂದಿಗೆ ಮತ್ತು ಹಿಂದಿಯಿಂದ ಕನ್ನಡಕ್ಕೆ ಹಲವಾರು ನಾಟಕಗಳನ್ನು ಅನುವಾದಿಸಿದ್ದಾರೆ. ಗಿರೀಶ್ ಕಾರ್ನಾಡರ ತುಘಲಕ್ ಎಂಬ ನಾಟಕವನ್ನು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದಿಸಿದರು.

ಸಂಸ್ಥೆಗಳು[ಬದಲಾಯಿಸಿ]

  • ೧೯೭೭-೧೯೮೧: ನ್ಯಾಷನಲ್ ಸ್ಕೂಲ್ ಅಫ್ ಡ್ರಾಮಾದ ನಿರ್ದೇಶಕರಾಗಿದ್ದರು.
  • ೧೯೮೧- ೧೯೮೮: ಭೋಪಾಲ್‌ನ ಭಾರತ್ ಭವನದಲ್ಲಿ ರಂಗಮಂಡಲದ ಸಂಸ್ಥಾಪಕ ನಿರ್ದೇಶಕರಾಗಿದ್ದರು.
  • ೧೯೮೯- ೧೯೯೫: ಮೈಸೂರಿನ ರಂಗಾಯಣದ ‍ಸಂಸ್ಥಾಪಕ ನಿರ್ದೇಶಕರಾಗಿದ್ದರು.

ನಾಟಕಗಳು[ಬದಲಾಯಿಸಿ]

ಬಿ.ವಿ. ಕಾರಂತರು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ತಮಿಳು, ಪಂಜಾಬಿ, ಉರ್ದು, ಸಂಸ್ಕೃತ ಮತ್ತು ಗುಜರಾತಿ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದರು. ಹಯವದನ (ಗಿರೀಶ್ ಕಾರ್ನಾಡರ), ಕತ್ತಲೆ ಬೆಳಕು, ಹುಚ್ಚು ಕುದುರೆ, ಏವಂ ಇಂದ್ರಜಿತ್, ಈಡಿಪಸ್, ಸಂಕ್ರಾಂತಿ, ಜೋಕುಮಾರ ಸ್ವಾಮಿ, ಸತ್ತವರ ನೇರಳು, ಹುಟ್ಟುವ ಬಡಿದರೆ ಮತ್ತು ಗೋಕುಲ ನಿರ್ಗಮನ ಇವು ಕನ್ನಡದ ನಾಟಕಗಳು. ಮ್ಯಾಕ್‌ಬೆತ್, ಕಿಂಗ್ ಲಿಯರ್, ಚಂದ್ರಹಾಸ, ಹಯವದನ, ಘಾಸಿರಾಮ್ ಕೊತ್ವಾಲ್, ಮೃಚ್ಛಾ ಕಟಿಕ, ಮುದ್ರಾ ರಾಕ್ಷಸ ಮತ್ತು ಮಾಳವಿಕಾಗ್ನಿ ಮಿತ್ರ ಎಂಬ ಹಿಂದಿ ಭಾಷೆಯಲ್ಲಿ ನಾಟಕಗಳನ್ನು ರಚಿಸಿದರು. ಪಂಜರ ಶಾಲೆ, ನೀಲಿ ಕುದುರೆ, ಹೆಡ್ಡಯಾನ, ಅಳಿಲು ರಾಮಾಯಣ ಎಂಬ ಮಕ್ಕಳ ನಾಟಕಗಳನ್ನು ರಚಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ನಾಗರಿಕ ಗೌರವಗಳು[ಬದಲಾಯಿಸಿ]

  • ಪದ್ಮಶ್ರೀ - ಭಾರತ ಸರ್ಕಾರ (೧೯೮೧)
  • ಕಾಳಿದಾಸ್ ಸಮ್ಮಾನ್ - ಮಧ್ಯಪ್ರದೇಶ ಸರ್ಕಾರ (೧೯೭೬)
  • ಕಾಳಿದಾಸ್ ಸಮ್ಮಾನ್ - ಮಧ್ಯಪ್ರದೇಶ ಸರ್ಕಾರ (೧೯೭೬)

ರಾಷ್ಟ್ರೀಯ ಗೌರವಗಳು[ಬದಲಾಯಿಸಿ]

  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೭೬)

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

  • ೧೯೭೧- ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಂಶವೃಕ್ಷ
  • ೧೯೭೧- ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಂಶ ವೃಕ್ಷ
  • ೧೯೭೫- ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಚೋಮನ ದುಡಿ
  • ೧೯೭೬- ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ರಿಷ್ಯ ಶೃಂಗ
  • ೧೯೭೭- ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಘಟಶ್ರಾದ್ಧ
  • ೧೯೭೭- ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ತಬ್ಬಲಿಯು ನೀನಾದೆ ಮಗನೇ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

  • ೧೯೭೧- ೧೯೭೨ - ಮೊದಲ ಅತ್ಯುತ್ತಮ ಚಿತ್ರ - ವಂಶ ವೃಕ್ಷ