ಕರ್ನಾಟಕ ಸಂಗೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಪುರಂದರದಾಸರು-ಕರ್ನಾಟಕ ಸಂಗೀತದ ಪಿತಾಮಹ
ಮುತ್ತುಸ್ವಾಮಿ ದೀಕ್ಷಿತ್, ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿ-ಕರ್ನಾಟಕ ಸಂಗೀತದ ತ್ರಿಮೂರ್ತಿಗಳು

ಕರ್ನಾಟಕ ಸಂಗೀತ (ಸಂಸ್ಕೃತ: कर्णाटक संगीतम्) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು. ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು ತಾಳ(ಸಂಗೀತ) (ಲಯಕ್ಕೆ ಸಂಬಂಧಪಟ್ಟದ್ದು).

ಚರಿತ್ರೆ[ಬದಲಾಯಿಸಿ]

  • ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತದೊಂದಿಗೆ ಪ್ರಾಚೀನ ಹಿಂದೂ ಧರ್ಮದ ಅಧ್ಯಾತ್ಮಿಕ ಸಂಗೀತವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಉತ್ತರ ಭಾರತದಲ್ಲಿ ಭಾರತೀಯ ಸಂಗೀತ ಅರಾಬಿಕ್ ಸಂಗೀತದ ಪ್ರಭಾವಕ್ಕೆ ಒಳಗಾಗಿ ಹಿಂದುಸ್ತಾನಿ ಸಂಗೀತ ಪದ್ಧತಿಗೆ ದಾರಿ ಮಾಡಿಕೊಟ್ಟಿತು.
  • ಕರ್ನಾಟಕ ಸಂಗೀತ ಎಂಬ ಪದದ ವ್ಯುತ್ಪತ್ತಿಯ ಬಗ್ಗೆ ವಿವಿಧ ಊಹೆಗಳಿವೆ. ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಉಗಮಗೊಂಡಿದ್ದರಿಂದ ಈ ಹೆಸರು ಬಂದಿರಬಹುದು. ಇತರ ವ್ಯುತ್ಪತ್ತಿಗಳೂ ಸಹ ಪ್ರತಿಪಾದಿಸಲ್ಪಟ್ಟಿವೆ. "ಕರ್ಣೇ ಅಟತಿ ಇತಿ ಕರ್ಣಾಟಕಮ್" ಇವುಗಳಲ್ಲಿ ಒಂದು - ಕಿವಿಗೆ ಇಂಪಾಗಿ ಕೇಳುವ ಸಂಗೀತ ಎಂದರ್ಥ.ಪುರಂದರದಾಸರ ಸಮಕಾಲೀನನಾದ ಪುಂಡರೀಕ ವಿಠಲ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕಾಚಾರ್ಯನಾದ ಕನ್ನಡಿಗನು.
  • ಶ್ರೀ ಪುರಂದರದಾಸರು (೧೪೯೪ – ೧೫೬೪) 'ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ' ಎಂದು ಹೆಸರಾದವರು. ಪುರಂದರದಾಸರು ಕರ್ನಾಟಕದವರು ಹಾಗು ದಾಸಪದ್ಧತಿಯ ಪ್ರಮುಖರು. ಮುಖ್ಯವಾಗಿ ಪುಂಡರೀಕ ವಿಠಲ, ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನ ಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.

ಶಾಸ್ತ್ರ[ಬದಲಾಯಿಸಿ]

ಮೈಸೂರು ದೊರೆಸ್ವಾಮಿ ಅಯ್ಯಂಗಾರ್ - ಕರ್ನಾಟಕ ಶೈಲಿಯ ವೀಣಾ ವಾದಕರು
ಎಮ್ ಎಸ್ ಸುಬ್ಬುಲಕ್ಷ್ಮಿ - ಕರ್ನಾಟಕ ಸಂಗೀತ ಪದ್ಧತಿಯ ಸುಪ್ರಸಿದ್ಧ ಗಾಯಕಿ

ಸಪ್ತ ಸ್ವರಗಳು[ಬದಲಾಯಿಸಿ]

ಕರ್ನಾಟಕ ಸಂಗೀತದಲ್ಲಿ ಏಳು ಮೂಲ ಸ್ವರಗಳಿವೆ: ಸ-ರಿ-ಗ-ಮ-ಪ-ದ-ನಿ. ಈ ಏಳು ಸ್ವರಗಳ ದೀರ್ಘ ಹೆಸರುಗಳು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ. ಸ ಮತ್ತು ಪ ಸ್ವರಗಳನ್ನು ಬಿಟ್ಟರೆ ಉಳಿದವು ಮೂರು ಬೇರೆ ಬೇರೆ ರೂಪಗಳಲ್ಲಿ ಉಂಟಾಗಬಹುದು. ಬದಲಾಗದ ಸ ಮತ್ತು ಪ ಸ್ವರಗಳನ್ನು ಪ್ರಕೃತಿ ಸ್ವರಗಳೆಂದು ಹಾಗೂ ರಿ, ಗ, ಮ, ದ ಮತ್ತು ನಿ ಸ್ವರಗಳನ್ನು ವಿಕೃತಿ ಸ್ವರಗಳೆಂದು ಕರೆಯಲಾಗುತ್ತದೆ. ಸ್ವರ ಸ್ಥಾನಗಳ ಪಟ್ಟಿ ಹೀಗಿದೆ.

ಷಡ್ಜ - ಸ

ಶುದ್ಧ ಋಷಭ - ರಿ೧
ಚತುಶ್ರುತಿ ಋಷಭ - ರಿ೨
ಷಟ್ಶ್ರುತಿ ಋಷಭ - ರಿ೩

ಶುದ್ಧ ಗಾಂಧಾರ - ಗ೧
ಸಾಧಾರಣ ಗಾಂಧಾರ - ಗ೨
ಅಂತರ ಗಾಂಧಾರ - ಗ೩

ಶುದ್ಧ ಮಧ್ಯಮ - ಮ೧
ಪ್ರತಿ ಮಧ್ಯಮ - ಮ೨

ಪಂಚಮ - ಪ

ಶುದ್ಧ ಧೈವತ - ದ೧
ಚತುಶ್ರುತಿ ಧೈವತ - ದ೨
ಷಟ್ಶ್ರುತಿ ಧೈವತ - ದ೩

ಶುದ್ಧ ನಿಷಾದ - ನಿ೧
ಕೈಶಿಕಿ ನಿಷಾದ - ನಿ೨
ಕಾಕಳಿ ನಿಷಾದ - ನಿ೩

ಷಟ್ಶ್ರುತಿ ಋಷಭ ಮತ್ತು ಸಾಧರಣ ಗಾಂಧಾರ ಎರಡು ಸಮನಾದ ಸ್ವರಗಳು ಹಾಗೆಯೆ ಚತುಶ್ರುತಿ ಧೈವತ ಮತ್ತು ಶುದ್ಧ ನಿಷಾದ ಸಮನಾದ ಸ್ವರಗಳು.

ಯಾವುದೇ ಒಂದು ರಾಗದಲ್ಲಿ ಒಂದು ಸ್ವರದ ಒಂದು ರೂಪ ಮಾತ್ರ ಉಂಟಾಗಬಹುದು. ಕೆಲವು "ಹಗುರ" ರಾಗಗಳಲ್ಲಿ (ಉದಾ: ಬೇಹಾಗ್)ಕೆಲವು ಸ್ವರಗಳು ಎರಡು ರೂಪಗಳಲ್ಲಿ ಕಾಣಿಸಿಕೊಳ್ಳಬಹುದು (ಆರೋಹಣದಲ್ಲಿ ಒಂದು ಮತ್ತು ಅವರೋಹಣದಲ್ಲಿ ಒಂದು). ಒಂದು ರಾಗದ ಆರೋಹಣ ಮತ್ತು ಅವರೋಹಣದಲ್ಲಿ ಐದು, ಆರು ಇಲ್ಲವೇ ಏಳು ಸ್ವರಗಳು ಇರಬಹುದು.

ಕದ್ರಿ ಗೋಪಾಲನಾಥ್ - ಸ್ಯಾಕ್ಸೋಫೋನ್ ವಾದಕರು

ರಾಗ[ಬದಲಾಯಿಸಿ]

ರಾಗ ಎಂಬುದು ಶ್ರುತಿಬದ್ಧವಾದ ರಚನೆಯನ್ನು ಸೃಷ್ಟಿಸಲು ಇರುವ ನಿಯಮಗಳ ವ್ಯವಸ್ಥೆ. ಪ್ರತಿ ರಾಗವೂ ಈ ಕೆಳಗಿನ ಅಂಶಗಳನ್ನು ಹೊಂದಿರುತ್ತದೆ.

  • ಮೇಲಕ್ಕೇರುವ ಸ್ವರಗಳ ಕ್ರಮ (ಆರೋಹಣ)
  • ಕೆಳಗಿಳಿಯುವ ಸ್ವರಗಳ ಕ್ರಮ (ಅವರೋಹಣ)
  • ಮುಖ್ಯ ಮತ್ತು ಅಮುಖ್ಯ ಸ್ವರಗಳು
  • ಸ್ವರಗಳನ್ನು ಅಲಂಕೃತವಾಗಿರಿಸುವ ಕ್ರಮಗಳು (ಗಮಕ)

..ಇತ್ಯಾದಿ.

ಮೇಳಕರ್ತ ವ್ಯವಸ್ಥೆ[ಬದಲಾಯಿಸಿ]

  • ಆರೋಹಣ ಮತ್ತು ಅವರೋಹಣಗಳಲ್ಲಿ ಏಳೂ ಸ್ವರಗಳನ್ನು ಹೊಂದಿರುವ ರಾಗಗಳನ್ನು ಸಂಪೂರ್ಣ ರಾಗಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಗಗಳನ್ನು ಮೇಳಕರ್ತ ವ್ಯವಸ್ಥೆಯಲ್ಲಿ ವರ್ಗೀಕರಿಸಲಾಗಿದೆ. ಒಟ್ಟು ೭೨ ಮೇಳಕರ್ತ ರಾಗಗಳಿದ್ದು, ಇವುಗಳಲ್ಲಿ ೩೬ ರಾಗಗಳಲ್ಲಿ ನಾಲ್ಕನೆಯ ಸ್ವರ "ಮ" ಶುದ್ದ ಮಧ್ಯಮವಾಗಿದ್ದು, ಇನ್ನುಳಿದ ೩೬ ಮೇಳಕರ್ತ ರಾಗಗಳಲ್ಲಿ ನಾಲ್ಕನೆಯ ಸ್ವರ "ಮ" ಪ್ರತಿ ಮಧ್ಯಮವಾಗಿರುವುದು(ಮ ಸ್ವರದ ಎರಡನೆಯ ರೂಪ). ಈ ರಾಗಗಳನ್ನು ಆರರ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಈ ಗುಂಪುಗಳಿಗೆ ಚಕ್ರಗಳೆಂದು ಹೆಸರು. ಹೀಗೆ ಮೇಳಕರ್ತರಾಗಗಳ ೧೨ ಚಕ್ರಗಳಿವೆ.
  • ಮೇಳಕರ್ತರಾಗಗಳ ಆರೋಹಣ ಮತ್ತು ಅವರೋಹಣಗಳಲ್ಲಿ ಪ್ರತಿ ಸ್ವರವೂ ಒಂದು ಮತ್ತು ಒಂದೇ ಒಂದು ಬಾರಿ ಕಂಡು ಬರುತ್ತದೆ. ಕೆಲವು ಸ್ವರಗಳು ಇಲ್ಲದೆ ಇರುವ ರಾಗಗಳಿಗೆ ವರ್ಜ್ಯ ರಾಗಗಳೆಂದು ಹೆಸರು. ಮೇಳಕರ್ತ ರಾಗದ ಕೆಲವು ಸ್ವರಗಳನ್ನು ಬಳಸಿಕೊಂಡು, ಕೆಲವನ್ನು ಬಿಟ್ಟು ಇರುವ ರಾಗಗಳಿಗೆ ಜನ್ಯ ರಾಗಗಳು ಎಂದು ಹೆಸರು.
  • ಆರೋಹಣ ಮತ್ತು ಅವರೋಹಣಗಳು ವಕ್ರವಾಗಿರುವ ರಾಗಗಳು ಪೂರ್ಣ ರಾಗಗಳಾಗಿದ್ದರೆ ಅವುಗಳಿಗೆ "ವಕ್ರ ಸಂಪೂರ್ಣ" ಎಂದು ಹೆಸರು.

ಮೇಳಕರ್ತ ರಾಗಗಳ ಪಟ್ಟಿ ಇಲ್ಲಿದೆ

ತಾಳ[ಬದಲಾಯಿಸಿ]

ತಾಳ ಎಂಬುದು ಸಂಗೀತ ರಚನೆಗಳ ಲಯವಿನ್ಯಾಸವನ್ನು ನಿರ್ದೇಶಿಸುತ್ತದೆ. ಸಂಗೀತದಲ್ಲಿ ಸಮಯದ ಮೂಲಮಾನಕ್ಕೆ ಮಾತ್ರೆ ಎಂದು ಹೆಸರು. ಸಂಗೀತಗಾರರು ತಮ್ಮ ಕೈಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ತಟ್ಟುವುದರ ಮೂಲಕ (ತಾಳ ಹಾಕುವುದು) ಈ ಲಯದ ಲೆಕ್ಕವಿಟ್ಟು ಕೊಳ್ಳುತ್ತಾರೆ. ತಾಳ ಸಮಯದ ಲೆಕ್ಕವನ್ನೂ ಇಟ್ಟುಕೊಳ್ಳಲು ಉಪಯೋಗವಾಗುತ್ತದೆ. ತಾಳಗಳನ್ನು ಏಳು ಗುಂಪುಗಳಾಗಿ ವರ್ಗೀಕರಿಸಲಾಗಿದೆ: ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ. ಕರ್ನಾಟಕ ಸಂಗೀತದಲ್ಲಿ ತಾಳವನ್ನು ತೋರಿಸಲು ಸಾಮಾನ್ಯವಾಗಿ ಉಪಯೋಗಿಸುವ ವಾದ್ಯ ಮೃದಂಗ.

ಕೃತಿಗಳು[ಬದಲಾಯಿಸಿ]

ಕರ್ನಾಟಕ ಸಂಗೀತದ ಬಹುಪಾಲು ಕೃತಿಗಳು ಕನ್ನಡ ಅಥವಾ ಸಂಸ್ಕೃತ ಭಾಷೆಯಲ್ಲಿವೆ. ತೆಲುಗು ಮತ್ತು ತಮಿಳು ಸಹ ಕೃತಿಗಳ ರಚನೆಯಲ್ಲಿ ಉಪಯೋಗಿಸಲ್ಪಟ್ಟ ಭಾಷೆಗಳು. ಕರ್ನಾಟಕ ಸಂಗೀತದ ಕೃತಿಗಳಲ್ಲಿ ಪ್ರಸಿದ್ಧವಾದ ಕೆಲವೆಂದರೆ-

ಕೀರ್ತನೆ[ಬದಲಾಯಿಸಿ]

ಕೀರ್ತನೆಗಳು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತವೆ:

  • ಪಲ್ಲವಿ - ಸಾಮಾನ್ಯವಾಗಿ ಎರಡು ಸಾಲುಗಳು
  • ಅನುಪಲ್ಲವಿ - ಸಾಮಾನ್ಯವಾಗಿ ಎರಡು ಸಾಲುಗಳು
  • ಚರಣ - ಪಲ್ಲವಿ ಮತ್ತು ಅನುಪಲ್ಲವಿಗಿಂತ ದೀರ್ಘವಾಗಿರುತ್ತದೆ

ಕೆಲವು ಕೀರ್ತನೆಗಳಲ್ಲಿ ಅನುಪಲ್ಲವಿ ಮತ್ತು ಚರಣದ ನಡುವೆ ಚಿಟ್ಟೆಸ್ವರ ಎಂಬ ಭಾಗವಿರುತ್ತದೆ (ಉದಾ: "ಸಾರಸಮುಖಿ ಸಕಲ ಭಾಗ್ಯದೆ..."). ಚಿಟ್ಟೆಸ್ವರದಲ್ಲಿ ಪದಗಳಿಲ್ಲದೆ ಕೇವಲ ಸ್ವರಗಳು ಮಾತ್ರ ಇರುತ್ತವೆ. ಕೆಲವು ಬಾರಿ ಕೃತಿಯನ್ನು ರಚಿಸಿರುವ ವಾಗ್ಗೇಯಕಾರರೇ ಚಿಟ್ಟೆ ಸ್ವರವನ್ನೂ ರಚಿಸಿದ್ದರೆ, ಇನ್ನು ಕೆಲವೆಡೆ ನಂತರ ಬಂದ ಇತರ ಸಂಗೀತ ವಿದ್ವಾಂಸರು ಚಿಟ್ಟೆಸ್ವರವನ್ನು ಸೇರಿಸಿರುವುದೂ ಉಂಟು. ಇನ್ನು ಕೆಲವು ಕೀರ್ತನೆಗಳಲ್ಲಿ ಚರಣದ ನಂತರ ಮಧ್ಯಮ ಕಾಲ ಎಂಬ ಭಾಗವಿರುತ್ತದೆ. ಮಧ್ಯಮ ಕಾಲವನ್ನು ಸಾಮಾನ್ಯವಾಗಿ ದ್ವಿಗುಣ ವೇಗದಲ್ಲಿ ಹಾಡಲಾಗುತ್ತದೆ.

ವರ್ಣ[ಬದಲಾಯಿಸಿ]

  • ವರ್ಣ ಎಂಬುದು ಒಂದು ರಾಗದ ಸಂಪೂರ್ಣ ವರ್ಣನೆಯುಳ್ಳ ವಿಶೇಷ ಕೃತಿ. ಆರೋಹಣ ಮತ್ತು ಅವರೋಹಣ, ಮುಖ್ಯ ಸ್ವರಗಳು, ಸಾಮಾನ್ಯ ಪದಪುಂಜಗಳು ಮೊದಲಾದ ಒಂದು ರಾಗದ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಕೃತಿ. ವರ್ಣದಲ್ಲಿ ಇರುವ ಭಾಗಗಳೆಂದರೆ ಪಲ್ಲವಿ, ಅನುಪಲ್ಲವಿ, ಮುಕ್ತಾಯಿ ಸ್ವರ (ಕೀರ್ತನೆಯ ಚಿತ್ತಸ್ವರದಂತೆ), ಚರಣ ಮತ್ತು ಚಿಟ್ಟೆಸ್ವರ. ಸಾಹಿತ್ಯವು ಶೃಂಗಾರವಾಗಿರಬಹುದು ಅಥವಾ ಭಕ್ತಿಪ್ರಧಾನವಾಗಿರಬಹುದು.
  • ಪೂರ್ವಾ೦ಗ ಮತ್ತು ಉತ್ತರಾಂಗಗಳು ಪ್ರತ್ಯೇಕವಾಗಿದ್ದು, ಪೂರ್ವಾ೦ಗದಲ್ಲಿ ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಾಗಳನ್ನು ನಿರೂಪಿಸಿ, ನಂತರ ಪಲ್ಲವಿಯ ಒಂದು ಆವರ್ತವನ್ನು ಹಾಡಿ ಪೂರ್ವಾ೦ಗವನ್ನು ಮುಗಿಸಬೇಕು. ಉತ್ತರಾಂಗದಲ್ಲಿ ಚರಣವನ್ನು ಒಂದಾವರ್ತಿ ನಿರೂಪಿಸಿ, ಎತ್ತುಗಡೆ ಸ್ವರಗಳನ್ನು ಹಾಡಬೇಕು.
  • ಪ್ರತಿಯೊಂದು ಎತ್ತುಗಡೆಸ್ವರವನ್ನು ನಿರೂಪಿಸಿದ ನಂತರ ಚರಣ ವನ್ನು ಎತ್ತಿಕೊಳ್ಳಬೇಕು.
  • ಕರ್ನಾಟಕ ಸಂಗೀತದಲ್ಲಿ ಉಪಯೋಗಗೊಳ್ಳುವ ಕೃತಿಗಳ ಇತರ ರೂಪಗಳಲ್ಲಿ ಸ್ವರಜತಿ ಮತ್ತು ಗೀತೆಗಳನ್ನು ಹೆಸರಿಸಬಹುದು.

ಮನೋಧರ್ಮ ಸಂಗೀತ[ಬದಲಾಯಿಸಿ]

ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ಪೂರ್ವ ತಯಾರಿಯಿಲ್ಲದೆ ಸಂಗೀತಗಾರರ ಮನೋಧರ್ಮಕ್ಕನುಗುಣವಾಗಿ ಪರಿಚಯಿಸಲ್ಪಡುವ ಅಂಶಗಳಿರುತ್ತವೆ. ಸರಾಸರಿ ಒಂದು ಕಛೇರಿಯ ಶೇ.೮೦ ಭಾಗ ಈ ರೀತಿಯ ಮನೋಧರ್ಮ ಸಂಗೀತವನ್ನು ಒಳಗೊಂಡಿರುತ್ತದೆ. ನಾಲ್ಕು ಪ್ರಮುಖ ರೀತಿಯ ಮನೋಧರ್ಮ ಸಂಗೀತವನ್ನು ಗುರುತಿಸಲಾಗಿದೆ:

ರಾಗ ಆಲಾಪನೆ[ಬದಲಾಯಿಸಿ]

ಇದು ಸಾಮಾನ್ಯವಾಗಿ ಒಂದು ಕೃತಿಯ ಆರಂಭದಲ್ಲಿ ಹಾಡಲಾಗುತ್ತದೆ (ವಾದ್ಯಗಳ ಸಂದರ್ಭದಲ್ಲಿ ನುಡಿಸಲಾಗುತ್ತದೆ). ಇದು ಕೇಳುಗರಲ್ಲಿ ಆ ಕೃತಿಯನ್ನು ಹಾಡಲ್ಪಡುವ ರಾಗದ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುತ್ತದೆ. ನಿಧಾನವಾಗಿ ಮುಂದೆ ಸಾಗುವ ಈ ಹಂತ, ತಾಳದ ಬದ್ಧತೆಯಿಲ್ಲದೆ ರಾಗದ ವಿವಿಧ ಗುಣಗಳನ್ನು ಪ್ರದರ್ಶಿಸುತ್ತದೆ. ಆ ರಾಗದ ಜೀವ ಸ್ವರಗಳನ್ನು ಆಧಾರವಾಗಿಟ್ಟುಕೊಂಡು, ವಿವಿಧ ಹಂತಗಳಲ್ಲಿ ವಿಸ್ತರಿಸಲ್ಪಡುತ್ತದೆ. ಸಾಮಾನ್ಯವಾಗಿ ಮಂದ್ರಸ್ಥಾಯಿಯಿಂದ ಆರಂಭವಾಗುವ ಈ ರಾಗ ಪರಿಚಯದ ಪದ್ಧತಿ ಕೆಲಕಾಲ ಅಲ್ಲಿಯೇ ನೆಲೆಸಿ ಅಲ್ಲಿಂದ ಮಧ್ಯಮಸ್ಥಾಯಿಗೆ ಬಂದು ಅಲ್ಲಿ ಪ್ರಕೃತಿ ಸ್ವರವಿದ್ದರೆ ಅದರ ಆಧಾರದ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೆ ತಾರಸ್ಥಾಯಿಗೆ ಯಾವ ಅಡಚಣೆಯೂ ಇಲ್ಲದೆ ಸುಲಭವಾಗಿ ತೇಲಿದಂತೆ ಮೇಲೇರುತ್ತದೆ. ತಾರಸ್ಥಾಯಿಯಲ್ಲಿ ರಾಗದ ಎಲ್ಲಾ ಗುಣಗಳನ್ನೂ, ರೂಪಗಳನ್ನೂ ಅನಾವರಣಗೊಳಿಸಿ ನಂತರ ಮತ್ತೆ ಮಧ್ಯಮಸ್ಥಾಯಿಗೆ ಬಂದು ಅಲ್ಲಿಂದ ಜಾರಿದಂತೆ ಮಂದ್ರಕ್ಕೆ ಇಳಿಸು ಒಂದು ದೀರ್ಘ ನಿಲುಗಡೆಯೊಡನೆ ನಿಲ್ಲುತ್ತದೆ.

ನೆರವಲ್[ಬದಲಾಯಿಸಿ]

ಈ ಹಂತವನ್ನು ಹೆಚ್ಚು ಅನುಭವವುಳ್ಳ ಸಂಗೀತಗಾರರು ಮಾತ್ರ ಉಪಯೋಗಿಸುತ್ತಾರೆ. ಕೃತಿಯ ಯಾವುದಾದರೂ ಒಂದೆರಡು ಸಾಲುಗಳನ್ನು ವಿಧ ವಿಧವಾಗಿ ಪುನಃ ಪುನಃ ಆವರ್ತಿಸಿ ರಾಗ ಮತ್ತು ತಾಳದ ಗುಣಗಳನ್ನು ಮತ್ತು ವಿವಿಧ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಪೂರ್ಣ ವಾಗಿ ಸಂಗೀತಗಾರನ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

ಕಲ್ಪನಾ ಸ್ವರ[ಬದಲಾಯಿಸಿ]

ಎಲ್ಲಕ್ಕಿಂತ ಸರಳ ರೀತಿಯ ಮನೋಧರ್ಮ ಸಂಗೀತ; ಈ ಹಂತದಲ್ಲಿ ಅನೇಕ ಕಲ್ಪನಾ ಸ್ವರಗಳ ಪುಂಜಗಳನ್ನು ಹಾಡಲಾಗುತ್ತದೆ. ಈ ಪುಂಜಗಳಲ್ಲಿ ಸ್ವರಗಳು ಜೋಡಣೆಗೊಳ್ಳುವ ಕ್ರಮ ಆ ರಾಗದ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ರಾಗಕ್ಕೂ ಅದರದೇ ಆದ ಒಂದು ಓಟ ಮತ್ತು ವಿಧ ಇದೆ. ಯಾವುದೇ ರಾಗದ ವಿಸ್ತರಣೆಯಾದರೂ ಸರಿ, ಕಲ್ಪನಾ ಸ್ವರರಚನೆಯಾದರೂ ಸರಿ ಅದು ನಿರ್ಬಂಧಿಸಿದ ಆ ಚೌಕಟ್ಟಿನ ಒಳಗೇ ಇರಬೇಕು.

ತಾನ[ಬದಲಾಯಿಸಿ]

ಈ ಹಂತವನ್ನು ಮೊಟ್ಟ ಮೊದಲು ವೀಣೆಯ ಮೇಲೆ ನುಡಿಸಲಿಕ್ಕಾಗಿ ಬೆಳೆಸಲಾಯಿತು. "ಅನಂತಮ್" ಎಂಬ ಪದವನ್ನು ಪುನಃ ಪುನಃ ವಿಶೇಷ ಅಲಂಕಾರಗಳೊಂದಿಗೆ ಆವರ್ತಿಸಲಾಗುತ್ತದೆ. "ಅನಂತಮಾನಂತಮಾನಂತ...." ಎಂಬುದು "ತಾನಮ್ತಾನಮ್ತಾನಮ್..." ಎಂದು ಪದಾಂತರವಾಗಿದೆ.

ರಾಗ ತಾನ ಪಲ್ಲವಿ[ಬದಲಾಯಿಸಿ]

ಇದು ರಾಗ ಆಲಾಪನೆ, ತಾನ ಮತ್ತು ನೆರವಲ್ ಗಳನ್ನು ಒಳಗೊಂಡ ಸಂಯುಕ್ತ ಹಂತ. ನೆರವಲ್ ಹಂತದ ನಂತರ ಪಲ್ಲವಿಯನ್ನು ಎರಡು ಬಾರಿ ಪುನರಾವರ್ತಿಸಿ, ನಂತರ ಅರ್ಧ ವೇಗದಲ್ಲಿ ಆವರ್ತಿಸಿ, ಮತ್ತೆ ದ್ವಿಗುಣ ವೇಗದಲ್ಲಿ ಮತ್ತು ನಾಲ್ಕರಷ್ಟು ವೇಗದಲ್ಲಿ ಪುನರಾವರ್ತಿಸಲಾಗುತ್ತದೆ.

ಕರ್ನಾಟಕ ಸಂಗೀತ ಕಛೇರಿ[ಬದಲಾಯಿಸಿ]

  • ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿ ಇರುವ ಸಂಗೀತಗಾರರೆಂದರೆ: ಒಬ್ಬ ಹಾಡುಗಾರರು (ಇಲ್ಲವೇ ಪ್ರಧಾನ ವಾದ್ಯವನ್ನು ನುಡಿಸುವವರು), ಒಂದು ಪಕ್ಕವಾದ್ಯ (ಸಾಮಾನ್ಯವಾಗಿ ಪಿಟೀಲು), ಮತ್ತು ತಾಳಕ್ಕಾಗಿ ಒಂದು ವಾದ್ಯ (ಸಾಮಾನ್ಯವಾಗಿ ಮೃದಂಗ) ಸಾಮಾನ್ಯ.
  • ಕಛೇರಿಗಳು ಸಾಮಾನ್ಯವಾಗಿ ಗಣಪತಿ ಸ್ತೋತ್ರದೊಂದಿಗೆ ಆರಂಭವಾಗುತ್ತವೆ. ನಂತರ ಬೇರೆ ಬೇರೆ ರಾಗಗಳಲ್ಲಿ ಅನೇಕ ಕೃತಿಗಳನ್ನು ಹಾಡಲಾಗುತ್ತದೆ. ಕಛೇರಿಯ ಅಂತ್ಯದಲ್ಲಿ ಹಗುರವಾದ ಕೃತಿಗಳು (ತಿಲ್ಲಾನ) ಅಥವಾ ಮಂಗಳವನ್ನು ಹಾಡಲಾಗುತ್ತದೆ.

ವಾದ್ಯಗಳು[ಬದಲಾಯಿಸಿ]

ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ಪಿಟೀಲುಗಳು (ವಯೊಲಿನ್)
  • ಶ್ರುತಿಗಾಗಿ ತಂಬೂರಿ ಉಪಯೋಗವಾಗುತ್ತದೆ. ಪ್ರಧಾನ ವಾದ್ಯ ಅಥವಾ ಪಕ್ಕವಾದ್ಯಗಳಿಗೆ ಸಾಮಾನ್ಯವಾಗಿ ಉಪಯೋಗಗೊಳ್ಳುವ ವಾದ್ಯಗಳು ವೀಣೆ, ವಯೊಲಿನ್ (ಪಿಟೀಲು). ಕೆಲವೊಮ್ಮೆ ಕೊಳಲು ಉಪಯೋಗಗೊಳ್ಳುತ್ತದೆ. ತಾಳಕ್ಕಾಗಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಪ್ರಮುಖವಾದವು ಮೃದಂಗ ಮತ್ತು ಘಟ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೊಲಿನ್, ವಿಚಿತ್ರವೀಣೆ, ಸ್ಯಾಕ್ಸೋಫೋನ್ ಮೊದಲಾದ ವಾದ್ಯಗಳು ಜನಪ್ರಿಯಗೊಳಿಸಲ್ಪಟ್ಟಿವೆ.
  • ಕರ್ನಾಟಕ ಸಂಗೀತದಲ್ಲಿ ಹಾಡುಗಾರಿಕೆಯ ಪ್ರಾಧಾನ್ಯ ಹೆಚ್ಚು. ವಾದ್ಯಗಳು ಸಹ ಹಾಡುಗಾರಿಕೆಯನ್ನೇ ಅನುಕರಿಸುತ್ತವೆ. ಇತ್ತೀಚೆಗೆ ಶುದ್ಧ ವಾದ್ಯ ಸಂಗೀತವೂ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ.

ವ್ಯವಸ್ಥೆ[ಬದಲಾಯಿಸಿ]

ಬಹುಪಾಲು ಕರ್ನಾಟಕ ಸಂಗೀತದ ಕಛೇರಿಗಳು ಈ ಕೆಳಗಿನ ವ್ಯವಸ್ಥೆಯನ್ನು ಅನುಸರಿಸುತ್ತವೆ.

  • ವರ್ಣ - ಕಛೇರಿ ಯಾವುದಾದರೂ ವರ್ಣದ ಹಾಡುಗಾರಿಕೆಯಿಂದ (ವಾದ್ಯಗಳ ಸಂದರ್ಭದಲ್ಲಿ ನುಡಿಸುವಿಕೆಯಿಂದ) ಅರಂಭವಾಗುತ್ತದೆ. ಸಾಮಾನ್ಯವಾಗಿ ಯಾವುದಾದರೂ ಸಂಪೂರ್ಣ ರಾಗದ ವರ್ಣವನ್ನು ಆರಿಸಲಾಗುತ್ತದೆ. ಕಛೇರಿಯ ಆರಂಭವಾದದ್ದರಿಂದ ಕಲ್ಯಾಣಿ, ಧೀರ ಶಂಕರಾಭರಣ ಮೊದಲಾದ ರಾಗಗಳು ಇಲ್ಲಿ ಸಾಮಾನ್ಯ. ವರ್ಣ ಸುಮಾರು ೬-೧೨ ನಿಮಿಷಗಳಷ್ಟು ಕಾಲ ನಡೆಯುತ್ತದೆ.
  • ಕೀರ್ತನೆಗಳು - ವರ್ಣದ ನಂತರ ವಿವಿಧ ರಾಗಗಳಲ್ಲಿ ಕೀರ್ತನೆಗಳನ್ನು ಹಾಡಲಾಗುತ್ತದೆ. ಕೆಲವೊಮ್ಮೆ ಕೀರ್ತನೆಯ ಮೊದಲು ರಾಗ ಆಲಾಪನೆ ಮತ್ತು ಕೊನೆಯಲ್ಲಿ ಕಲ್ಪನಾ ಸ್ವರ ಬರುವುದುಂಟು.
  • ತನಿ - ಇಂದಿನ ಬಹುಪಾಲು ಕಛೇರಿಗಳಲ್ಲಿ ಒಂದು "ತನಿ ಆವರ್ತನೆ" ನಡೆಯುತ್ತದೆ. ಹಾಡುಗಾರರು ಮತ್ತು ವಯೊಲಿನ್ ನಡುವೆ ಸ್ವರ ಕಲ್ಪನೆ, ನಿರವಲ್ ಮೊದಲಾದ ಹಂತಗಳ ನಂತರ ತಾಳ ವಾದ್ಯಗಳಾದ ಮೃದಂಗ, ಘಟ ಅಥವ ಖಂಜಿರ ಮೊದಲು ಬೆರೆ ಬೆರೆಯಾಗಿ ನಂತರ ಒಟ್ಟುಗೂಡಿ ನುಡಿಸುವ ಹಂತ ತನಿ ಆವರ್ತನೆ.
  • ರಾಗ ತಾನ ಪಲ್ಲವಿ - ಅನುಭವಿ ಸಂಗೀತಗಾರರು ಅನೇಕ ಕೀರ್ತನೆಗಳ ಬದಲು ರಾಗ ತಾನ ಪಲ್ಲವಿಯನ್ನು ನಡೆಸಬಹುದು.
  • ದೇವರ ನಾಮಗಳು - ಹಾಡುವ ಪದ್ದತಿ ಇದೆ.
  • ತಿಲ್ಲಾನ - ಕೆಲವೊಮ್ಮೆ ಕೊನೆಯಭಾಗದಲ್ಲಿ ತಿಲ್ಲಾನ ಹಾಡುತ್ತಾರೆ.
  • ಮಂಗಳ - ಕಛೇರಿಯ ಕೊನೆಯಲ್ಲಿ ಹಾಡಲಾಗುವ (ಅಥವಾ ನುಡಿಸಲಾಗುವ) ಮಂಗಳ ಸಾಮಾನ್ಯವಾಗಿ ಸೌರಾಷ್ಟ್ರ ಅಥವಾ ಮಧ್ಯಮಾವತಿ ರಾಗದಲ್ಲಿರುತ್ತದೆ.

ಪ್ರಸಿದ್ಧ ಸಂಗೀತಗಾರರು[ಬದಲಾಯಿಸಿ]

ಪಿತಾಮಹ

ಶ್ರೀ ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರು. ಮುಂದೆ ತ್ಯಾಗರಾಜರಂಥ ಸಂಗೀತಗಾರರಿಗೆ ಸ್ಫೂರ್ತಿ ತಂದ ಪುರಂದರದಾಸರು ತಾಳ ವ್ಯವಸ್ಥೆಯ ಮೂಲಭೂತ ಸಿದ್ಧಾಂತವನ್ನೂ ಪ್ರತಿಪಾದಿಸಿದರು.

ತ್ರಿಮೂರ್ತಿ

ಶ್ರೀ ತ್ಯಾಗರಾಜರು (೧೭೫೯-೧೮೪೭), ಮುತ್ತುಸ್ವಾಮಿ ದೀಕ್ಷಿತರು (೧೭೭೬-೧೮೨೭) ಮತ್ತು ಶ್ಯಾಮಾ ಶಾಸ್ತ್ರಿಗಳು(೧೭೬೨-೧೮೨೭) - ಈ ಮೂವರು ವಾಗ್ಗೇಯಕಾರರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದು ಪರಿಗಣಿಸಲಾಗುತ್ತದೆ.

ಆಧುನಿಕ ಹಾಡುಗಾರರು

ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದ ಕೆಲವರೆಂದರೆ ಎಂ.ಎಸ್.ಸುಬ್ಬುಲಕ್ಷ್ಮಿ, ಡಾ.ಬಾಲಮುರಳಿಕೃಷ್ಣ, ಡಿ.ಕೆ ಪಟ್ಟಮ್ಮಾಳ್, ಕೆ.ಜೆ.ಯೇಸುದಾಸ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮೊದಲಾದವರು. ಇನ್ನೂ ಇತ್ತೀಚಿನ ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದವರು ಅರುಣಾ ಸಾಯಿರಾಮ್,ಸುಧಾ ರಘುನಾಥನ್,ಬಾಂಬೆ ಜಯಶ್ರೀ, ಸಂಜಯ್ ಮೊದಲಾದವರು.

ವಾದ್ಯ

ವಾದ್ಯಗಳಲ್ಲಿ ಪರಿಣತಿ ಪಡೆದ ಆಧುನಿಕ ಸಂಗೀತಗಾರರಲ್ಲಿ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ (ವೀಣೆ), ಟಿ. ಚೌಡಯ್ಯ, ಲಾಲ್‍ಗುಡಿ ಜಯರಾಮನ್, ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ (ವಯೊಲಿನ್), ಕದ್ರಿ ಗೋಪಾಲನಾಥ್ (ಸ್ಯಾಕ್ಸೊಫೋನ್) ಮೊದಲಾದವರು ಪ್ರಸಿದ್ಧರು. ಇನ್ನೂ ಇತ್ತೀಚೆಗೆ ರವಿಕಿರಣ್ (ಚಿತ್ರವೀಣೆ), ಯು ಶ್ರೀನಿವಾಸ್ (ಮ್ಯಾಂಡೊಲಿನ್) ಮೊದಲಾದವರು ಹೆಸರು ಪಡೆದಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]