ಕನ್ನಡ ಬರಹಗಾರ್ತಿಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


  1. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾವು ಮೊತ್ತಮೊದಲಿಗೆ ಕಾಣುವ ಕವಯಿತ್ರಿ ಅಕ್ಕಮಹಾದೇವಿ. ಹನ್ನೆರಡನೆಯ ಶತಮಾನದಲ್ಲಿ ಅಕ್ಕಮಹಾದೇವಿ ಅನೇಕ ವಚನಗಳನ್ನು ರಚಿಸಿದ್ದಾಳೆ. ಕಾವ್ಯ ಸೌಂದರ್ಯದಲ್ಲಿ ಈಕೆಯ ವಚನಗಳಿಗೆ ಸರಿದೂಗುವ ವಚನಗಳು ಬಹಳವಾಗಿಲ್ಲ. ಚನ್ನಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ‘ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ‘, ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ‘, ‘ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು ಚನ್ನಮಲ್ಲಿಕಾರ್ಜುನ‘ - ಇವು ಅಕ್ಕಮಹಾದೇವಿಯ ಮಾತಿನ ಅಪೂರ್ವ ರೀತಿಗೆ ಕೆಲವು ನಿದರ್ಶನಗಳು.
  2. ಆನಂತರ ಕ್ರಿಸ್ತಶಕ ೧೬೮೦ರಲ್ಲಿ ಕಂಡುಬರುವ ಪ್ರಸಿದ್ಧ ಕವಯಿತ್ರಿ ಹದಿಬದೆಯ ಧರ್ಮ ಎಂಬ ಗ್ರಂಥದ ಕರ್ತೃ ಸಂಚಿ ಹೊನ್ನಮ್ಮ. ಈ ಕಾವ್ಯದಲ್ಲಿ ಪತಿವ್ರತಾ ಸ್ತ್ರೀಯ ಧರ್ಮ ವಿಶದವಾಗಿ ನಿರೂಪಿತವಾಗಿದೆ. ಹೆಣ್ಣನ್ನು ಕಂಡು ಅಸಡ್ಡೆ ಮಾಡುವವರನ್ನು ಕುರಿತು ’ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣುಕಾಣದ ಗಾವಿಲರು’ ಎಂದು ನುಡಿದು ಹೆಣ್ಣಿನ ಸರ್ವಶ್ರೇಷ್ಠತೆಯನ್ನು ಎತ್ತಿಹಿಡಿದಿದ್ದಾಳೆ. ನೀತಿನಿರೂಪಣೆಯೇ ಈ ಕೃತಿಯ ಪರಮೋದ್ದೇಶವಾದರೂ ಕೆಲವು ಸಂದರ್ಭಗಳಲ್ಲಿ ಕಾವ್ಯಾಂಶವನ್ನೂ ಕಾಣಬಹುದು.
  3. ಚೆಲ್ವಾಂಬೆ ಮೈಸೂರುದೊರೆ ಕೃಷ್ಣರಾಜ ಒಡೆಯರ (೧೭೧೩-೧೭೩೨) ಪಟ್ಟಮಹಿಷಿ. ಇವಳು ಬರೆದ ವರನಂದಿ ಕಲ್ಯಾಣದಲ್ಲಿ ೭ ಸಂಧಿಗಳು ಹಾಗು ೮೮೧ ಪದ್ಯಗಳಿವೆ. ದಿಲ್ಲಿಯ ಬಾದಶಹನ ಮಗಳಾದ ವರನಂದಿ ಹಾಗು ಮೇಲುಕೋಟೆಯ ದೈವ ಚೆಲುವರಾಯಸ್ವಾಮಿಯ ವಿವಾಹವು ಈ ಕಾವ್ಯದ ವಸ್ತು.
  4. ತಿರುಮಲಾಂಬ (ಮಾರ್ಚ್ ೨೫, ೧೮೮೭ - ಆಗಸ್ಟ್ ೩೧ ೧೯೮೨) “ಹೊಸಗನ್ನಡದ ಮೊದಲ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ, ಮುದ್ರಕಿ” ಎಂದು ಪ್ರಖ್ಯಾತರಾದವರು.
  5. ಸುಮಾರು ೧೯೧೭ರಲ್ಲಿ ಜನಿಸಿದ ಟಿ.ಸುನಂದಮ್ಮನವರು ಕನ್ನಡ ಸಾಹಿತ್ಯ ಲೋಕದ ಅಪೂರ್ವ ಮಹಿಳಾ ಸಾಹಿತಿ. ಹಾಸ್ಯ ಸಾಹಿತ್ಯ ಬರೆಯುವವರೇ ವಿರಳವಾಗಿದ್ದ ಕಾಲದಲ್ಲಿ, ಈ ಕ್ಷೇತ್ರದಲ್ಲಿ ಬರಹ ಆರಂಭಿಸಿದ ಹಾಗೂ ಆನಂತರದ ಹಲವಾರು ದಶಕಗಳವರೆಗೆ ಏಕೈಕ ಮಹಿಳಾ ಹಾಸ್ಯ ಸಾಹಿತಿಯಾಗಿ ರಾರಾಜಿಸಿದ ವೈಶಿಷ್ಟ್ಯ ಅವರದು.
  6. ೧೯೩೫ರಲ್ಲಿ ಜನಿಸಿದ ಕಮಲಾ ಹಂಪನಾ ಅವರು ಅಧ್ಯಯನ ಕೃತಿಗಳು, ಸಂಪಾದಿತ ಕೃತಿಗಳು, ವೈಚಾರಿಕ ಕೃತಿಗಳು, ಅನುವಾದಗಳು, ಕಥಾ ಸಂಕಲನಗಳು, ಆಧುನಿಕ ವಚನ ಸಂಕಲನಗಳು, ಶಿಶು ಸಾಹಿತ್ಯಕ್ಕೆ ಸಂಬಂಧಿಸಿ ರಚಿಸಿದ ಕೃತಿಗಳು ೪೮ಕ್ಕೂ ಹೆಚ್ಚು. # ಶರಪಂಜರ, ಬೆಕ್ಕಿನಕಣ್ಣು, ದೂರದಬೆಟ್ಟ, ಬೆಳ್ಳಿಮೋಡಗಳ ಖ್ಯಾತಿಯ ತ್ರಿವೇಣಿ (೧೯೨೮-೧೯೬೩) ಅವರು ಕನ್ನಡ ಕಾದಂಬರೀ ಕ್ಷೇತ್ರದಲ್ಲಿ ಒಂದು ಮರೆಯಲಾಗದ ಹೆಸರು. ೪೮ ಸಣ್ಣಕಥೆಗಳನ್ನೂ ಅವರು ಪ್ರಕಟಿಸಿದ್ದಾರೆ.
  7. ಡಾಕ್ಟರ್ ಅನುಪಮಾ ನಿರಂಜನ ಅವರು ೨೫ ಕಾದಂಬರಿಗಳು, ೮ ಕಥಾಸಂಕಲನ, ೨ ಆತ್ಮಚರಿತ್ರೆ ಕಥನ, ೧ ಶಿಶುಸಾಹಿತ್ಯ, ೧೧ ವೈದ್ಯಕೀಯ ಸಾಹಿತ್ಯ, ೨ ಪ್ರವಾಸ ಕವನಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ತಾಯಿಮಗು, ಸ್ತ್ರೀಸ್ವಾಸ್ಥ್ಯ ಸಂಹಿತೆ ಮುಂತಾದವು ಇಪ್ಪತ್ತಕ್ಕೂ ಹೆಚ್ಚು ಮುದ್ರಣ ಕಂಡಿವೆ.
  8. ಗೀತಾ ನಾಗಭೂಷಣ ತುಂಬ ಪರಿಣಾಮಕಾರಿಯಾಗಿ ಹಾಗೂ ಪ್ರಭಾವಯುತವಾಗಿ ದಲಿತ ಮಹಿಳೆಯರ ಶೋಷಣೆ ಕುರಿತು ಕಾದಂಬರಿಗಳನ್ನು ಬರೆದಿರುವ ಮತ್ತು ಬರೆಯುತ್ತಿರುವ ಲೇಖಕಿ. ಗುಲ್ಬರ್ಗಾ ಜಿಲ್ಲೆಯಲ್ಲಿ ೧೯೪೨ರಲ್ಲಿ ಜನಿಸಿದ ಗೀತಾ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೪೩ ವರ್ಷಗಳ ದೀರ್ಘ ಇತಿಹಾಸದಲ್ಲೇ ಅಧ್ಯಕ್ಷ ಗಾದಿಗೆ ನೇಮಕಗೊಂಡ ಮೊದಲ ಮಹಿಳೆ.
  9. ಎಂ.ಕೆ. ಇಂದಿರ ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ. ಎಂ.ಕೆ.ಇಂದಿರಾ ಅವರ ಗೆಜ್ಜೆ ಪೂಜೆ ಫಣಿಯಮ್ಮ ಮತ್ತು ಪೂರ್ವಾಪರ ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯ ಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ ಪ್ರೇಮಾ ಕಾರಂತ್. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. ಎಲ್. ವಿ.ಶಾರದಾ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು.
  10. ಕೊಡಗಿನ ಗೌರಮ್ಮನವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ. ೧೯೩೧ ರಿಂದ ೧೯೩೯ ರವರೆಗೆ ಇವರು ರಚಿಸಿದ ಸಣ್ಣ ಕತೆಗಳು ಕಂಬನಿ, ಚಿಗುರು ಹಾಗು ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ.
  11. ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದ ಶ್ರೀಮತಿ ಅನಸೂಯ ಶಂಕರ್ ರವರು. ಇವರು, ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಮರೆಯಲಾಗದ ಕಾಣಿಕೆ ನೀಡಿದ್ದಾರೆ.
  12. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ ಅನಸೂಯಾ ಸಿದ್ಧರಾಮ ಅವರು ಕನ್ನಡದ ಹೆಸರಾಂತ ಲೇಖಕಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಇವರು ಗಂಭೀರ ಹಾಗು ವಿನೋದ ಈ ಎರಡೂ ಬಗೆಯ ಬರವಣಿಗೆಯಲ್ಲಿ ಇವರು ಸಿದ್ಧಹಸ್ತರು.
  13. ಉಷಾ ಪಿ. ರೈ ಕನ್ನಡ ಸಾಹಿತ್ಯಲೋಕದ ಹಿರಿಯ ಲೇಖಕಿ . ತುಳು ಹಾಗೂ ಇಂಗ್ಲೀಷ್ ನಲ್ಲೂ ಬರೆಯುತ್ತಿದ್ದಾರೆ. ಬರವಣಿಗೆಯ ಜೊತೆ ಕಸೂತಿ, ಸಮಾಜಸೇವೆ, ಚಿತ್ರಕಲೆ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
  14. ಎಂ.ಎಸ್.ವೇದಾ ಕನ್ನಡ ಸಾಹಿತ್ಯದ ಗಂಭೀರ ವಿಚಾರಧಾರೆಯುಳ್ಳ ಸೃಜನಶೀಲ ಲೇಖಕಿ. ಇವರ ಸಾಹಿತ್ಯದ ಹರುಹು ದೊಡ್ಡದು. ಕವಿತೆ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ.
  15. ಅನಸೂಯಾದೇವಿ ಇವರು ಕನ್ನಡದ ಹೊಸ ಪೀಳಿಗೆಯ ಲೇಖಕಿಯರು. ಇವರು ಬೆಂಗಳೂರಿನ ಬಿ.ಎಚ್.ಎಸ್.ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗು ರೀಡರ ಆಗಿದ್ದಾರೆ.ಅಲ್ಲದೆ ಗಾಯನ,ಕಾವ್ಯವಾಚನ ಹಾಗು ವ್ಯಾಖ್ಯಾನದಲ್ಲೂ ಸಹ ಪರಿಣತರಾಗಿದ್ದಾರೆ.
  16. ಅಶ್ವಿನಿ ಕಾವ್ಯನಾಮದಲ್ಲಿ ಬರೆಯುತ್ತಿರುವ ಎಂ.ವಿ.ಕನಕಮ್ಮನವರು ಕನ್ನಡ‍ದ ಖ್ಯಾತ ಲೇಖಕಿ. ಇವರ ಕಾದಂಬರಿಗಳು ಧಾರಾವಾಹಿಯಾಗಿ ಕನ್ನಡ‍ದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಜನನ ಕೋಲಾರ‍ದಲ್ಲಿ ಆಯಿತು. ಎಮ್.ಎಸ್‍ಸಿ ಪದವೀಧರೆಯಾದ ಇವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೨೬ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
  17. ಎಚ್.ಜಿ.ರಾಧಾದೇವಿಯವರು ಕನ್ನಡದ ಜನಪ್ರಿಯ ಲೇಖಕಿಯರಲ್ಲೊಬ್ಬರು. ಇವರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.
  18. ಎಚ್.ವಿ.ಸಾವಿತ್ರಮ್ಮನವರು ರವೀಂದ್ರನಾಥ ಠಾಕೂರರ ಕತೆಗಳನ್ನು ಚಿನ್ನದ ದೋಣಿ ಎಂದು, ಕಾದಂಬರಿಯನ್ನು ನೌಕಾಘಾತ ಎಂದು, ಭವಾನಿ ಭಟ್ಟಾಚಾರ್ಯರ ಕೃತಿಯನ್ನು ಹಸಿವೊ ಹಸಿವು ಎಂದು ಭಾಷಾಂತರಿಸಿದ್ದಾರೆ. ಅದರಂತೆ ಚೆಕಾಫ್‍ನ ನಾಟಕವನ್ನು ಮದುವಣಗಿತ್ತಿ ಎಂದು ಅನುವಾದಿಸಿದ್ದಾರೆ. ಅಲ್ಲದೆ ಮಹಾತ್ಮಾ ಗಾಂಧಿ: ಜಗತ್ತಿಗೆ ಅವರ ಸಂದೇಶ ಸಹ ಇವರ ಒಂದು ಅನುವಾದಗ್ರಂಥ. ಮರುಮದುವೆ, ನಿರಾಶ್ರಿತೆ, ಲಕ್ಷ್ಮೀ ಇವು ಇವರ ಕಥಾಸಂಕಲನಗಳು. ಬಿಸಿಲುಗುದರೆ ಒಂದು ನೀಳ್ಗತೆ. ಎಚ್.ವಿ.ನಂಜುಂಡಯ್ಯ (ಜೀವನ ಮತ್ತು ಕಾರ್ಯ) ಇವರು ಬರೆದ ಜೀವನಚರಿತ್ರೆ. ಸೀತೆ, ರಾಮ,ರಾವಣ ಹಾಗು ವಿರಕ್ತೆ ಇವು ಇವರ ಕಾದಂಬರಿಗಳು.
  19. ಎಸ್.ಅರುಂಧತಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಸಾಹಿತ್ಯರಚನೆಯನ್ನು ಪ್ರಾರಂಭಿಸಿದ ಅರುಂಧತಿಯವರ ಅನೇಕ ಕತೆ, ಮಿನಿಕತೆ, ಕವನ ಇವೆಲ್ಲ ಕರ್ಮವೀರ, ಸಂಯುಕ್ತ ಕರ್ನಾಟಕ, ಲಂಕೇಶ ಪತ್ರಿಕೆ ಹಾಗೂ ಹೊನ್ನಾವರದ ನಾಗರಿಕ, ಲೋಕಧ್ವನಿ, ಕರಾವಳಿ ಮುಂಜಾವು ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ
  20. ಎಸ್.ಮಂಗಳಾಸತ್ಯನ್ ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿ ತಳೆದ ಮಂಗಳಾ ಸತ್ಯನ್ ಅವರು ೧೯೬೮ರ ವರ್ಷದಲ್ಲಿ ಬಿಡುಗಡೆಗೊಂಡ ‘ಹಣದ ಮಗಳು’ ಕೃತಿಯಿಂದ ಮೊದಲ್ಗೊಂಡು ಮೂವತ್ತೈದು ಕಾದಂಬರಿಗಳನ್ನೂ ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ರಚಿಸಿ ಕನ್ನಡದಲ್ಲಿ ತಮ್ಮದೇ ಆದ ಅಪಾರ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರ ಕಾದಂಬರಿಗಳಾದ ಭಾಗ್ಯಜ್ಯೋತಿ, ಮುಗ್ಧ ಮಾನವ, ಕಾನನದ ಕರುಣಾಳು, ವಿಷದ ಒಡಲು, ಪುತ್ರಕಾಮಿ, ನಿನಗಾಗಿ, ನವವಸಂತ, ಬಂಗಾರ ಭೂಷಿತೆ, ಹೂವೆರಡು ಕೊನೆಯೊಂದು, ವಂಚಿತೆ, ಆ ಮುಖ, ಅರಸಿ ಬಂದವ ಳು, ಸ್ವರ್ಗ ಸನ್ನಿಧಿ ಅಮೃತಮಯಿ, ಆಶಾದೀಪ, ಪ್ರಣಯ ತಾಂಡವ, ಒಡೆಯದ ಮುತ್ತು, ಶ್ರೀ ಅನ್ನಪೂರ್ಣೇಶ್ವರಿ, ಸಂಜೀವ ಮುಂತಾದ ಕೃತಿಗಳು ಓದುಗ ಬಳಗವನ್ನು ಅಪಾರವಾಗಿ ಆಕರ್ಷಿಸಿವೆ.
  21. ಡಾ|ಕಮಲಾ ಹೆಮ್ಮಿಗೆಯವರು ಸಂಕ್ರಮಣ, ಅಗ್ನಿ, ಸಕಾಲಿಕ, ಭಾನುವಾರ, ಕರುಣಾ ಸಂಚಿಕೆ ಮುಂತಾದ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ; ಬರೆಯುತ್ತಿದ್ದಾರೆ.
  22. ಕುಮುದಾ ಪುರುಷೋತ್ತಮ ಇವರು ಗಂಭೀರ ಹಾಗು ಹಾಸ್ಯ ಈ ಎರಡೂ ಪ್ರಕಾರದ ಸಾಹಿತ್ಯಸೃಷ್ಟಿಯನ್ನು ಮಾಡಿದ್ದಾರೆ.
  23. ಚಿ. ನ. ಮಂಗಳಾ (ಏಪ್ರಿಲ್ ೧೦, ೧೯೩೮ – ಮೇ ೩೦, ೧೯೯೭) ಶಿಕ್ಷಣ ತಜ್ಞರಾಗಿ, ಸ್ತ್ರೀವಾದಿ ಚಿಂತಕರಾಗಿ, ಬರಹಗಾರರಾಗಿ ಹೆಸರಾಗಿದ್ದಾರೆ.
  24. ಜಯದೇವಿತಾಯಿ ಲಿಗಾಡೆ - ಕನ್ನಡದ ಹಾಗು ಮರಾಠಿ ಭಾಷೆಯ ಸಾಹಿತಿಗಳು, ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ. ಹೆಣ್ಣುಮಕ್ಕಳ ಕುರಿತಾದ ಅವರ ಕಾಳಜಿ ಅವರಿಗೆ ಸಹಜವಾಗಿ ರಕ್ತಗತವಾಗಿತ್ತು. ಜಯದೇವಿತಾಯಿ ಲಿಗಾಡೆ ಅವರೆಂದರೆ ಧವಳವಸ್ತ್ರದ ನಿರಾಡಂಬರ ವೇಷ, ಗಂಭೀರ ವರ್ಚಸ್ಸು, ಅಸ್ಖಲಿತವಾಗಿ ರೂಪುಗೊಂಡ ಒಬ್ಬ ತಪಸ್ವಿನಿಯ ಚಿತ್ರ ಕಣ್ಮುಂದೆ ನಿಂತಂತಾಗುತ್ತದೆ.
  25. 'ಜಯಲಕ್ಷ್ಮಿ ಪಾಟೀಲ್', ಒಬ್ಬ ಸೃಜನಶೀಲ, ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿ.
  26. ಡಾ.ಜ್ಯೋತ್ಸ್ನಾ ಕಾಮತ್ ಒಬ್ಬ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡಿದವರು. ಈ ಪರಿವಾರದವರ ಅಂತರ್ಜಾಲ ತಾಣವೊಂದಿದೆ.[೧]
  27. ಟಿ.ಸುನಂದಮ್ಮ ಲೇಖಕಿಯರೆ ಬೆರಳೆಣಿಕೆಯಷ್ಟು ಇದ್ದ ಕಾಲದಲ್ಲಿ ಟಿ.ಸುನಂದಮ್ಮನವರು ಹಾಸ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. ೧೯೪೨ರಲ್ಲಿ " ರಾಶಿ"ಯವರು ಪ್ರಾರಂಭಿಸಿದ "ಕೊರವಂಜಿ" ಮಾಸಪತ್ರಿಕೆಯಲ್ಲಿ ೨೫ ವರ್ಷಗಳ ಕಾಲ ಇವರ ಅನೇಕ ಹಾಸ್ಯ ಲೇಖನಗಳು ಪ್ರಕಟವಾಗಿವೆ.
  28. ಎಸ್.ಪದ್ಮ ಶ್ರೀನಿವಾಸ್ ಮಂಡ್ಯ ಜಿಲ್ಲೆಯ ಮಹಿಳಾ ಲೇಖಕಿಯರಲ್ಲಿ ಪ್ರಮುಖರು. ಮಂಡ್ಯದ ಲಕ್ಷ್ಮಿಜನಾರ್ಧನ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಬಹುಮುಖ ಪ್ರತಿಭೆಯ ಇವರು ಉತ್ತಮ ಶಿಕ್ಷಕಿ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಕವಿಯತ್ರಿಯೂ ಆದ ಪದ್ಮಾ ಅವರು ತಮ್ಮ ಕವನಗಳ ಮೂಲಕ ರಂಜಿಸಿದ್ದಾರೆ. ಲಂಡನ್ ಪ್ರವಾಸ ಮಾಡಿ ವ್ಯಾಪಕ ಅಧ್ಯಯನ ಮಾಡಿದ್ದಾರೆ. ತಮ್ಮ ವಿಷಿಷ್ಟ ಪಿ.ಹೆಚ್ ಡಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದಾರೆ.
  29. ಡಾ. ನಿರುಪಮಾ (ಸೆಪ್ಟೆಂಬರ್ ೩೦, ೧೯೩೧ - ಜುಲೈ ೧೧, ೨೦೧೩) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು.
  30. ಪದ್ಮಾ ಶೆಣೈ ಕನ್ನಡಸಾಹಿತ್ಯ ಲೋಕದಲ್ಲಿ ಒಬ್ಬ ಮೇರು ಲೇಖಕಿ."ವೇದಿಕ್ ಮ್ಯಾಥೆಮೇಟಿಕ್ಸ್" ಬರೆದ ಪ್ರಸಿದ್ದ ವಿದ್ವಾಂಸ ಡಿ.ಬಿ.ರಾಮಚಂದ್ರ ಬಾಳಿಗ ಪದ್ಮಾ ಶೆಣೈ ಅವರ ತಂದೆ. ಮೊದಮೊದಲು ಸಣ್ಣಕಥೆಗಳನ್ನು ಬರೆಯಲು ಆರಂಭಿಸಿದ ಪದ್ಮಾ, ಮದುವೆಯ ನಂತರ ಕಾದಂಬರಿಗಳನ್ನು ಬರೆಯಲು ಆರಂಭಿಸಿದರು. ಅವರ ಮೊದಲ ಕಾದಂಬರಿ "ರಸ-ವಿರಸ". ಇದಕ್ಕೆ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿ ದೊರೆಯಿತು. ೧೯೪೮ ರಲ್ಲೇ ಬರೆಯಲಿಕ್ಕೆ ಶುರು ಮಾಡಿದ ಪದ್ಮಾ ಶೆಣೈ, ಕಥೆ ಕಾದಂಬರಿಗಳಲ್ಲದೆ ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ಪ್ರವಾಸ ಕಥನ,ವಿಚಾರ ಸಾಹಿತ್ಯ, ಹೀಗೆ ಹಲವಾರು ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡುತ್ತಾ ಬಂದಿದ್ದಾರೆ. ಸಮಾಜದಲ್ಲಿನ ವೈವಿದ್ಯವನ್ನೂ, ವೈಪರಿತ್ಯವನ್ನೂ, ಅತೃಪ್ತಿಗಳನ್ನು ತಮ್ಮ ಕೃತಿಯಲ್ಲಿ ಮೂಡಿಸಿರುವುದಲ್ಲದೆ ಅವುಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಸಾಮಾಜಿಕ ಸಮಾನತೆ, ಕೌಟುಂಬಿಕ ಸಮಸ್ಯೆಗಳು-ಸಂಬಂಧಗಳು, ಮಹಿಳಾ ಉನ್ನತಿ, ಹೀಗೆ ಸಮಾಜದ ಬಗ್ಗೆ ಲೇಖಕಿಯರಿಗೆ ಇರುವ ಕಳಕಳಿಯನ್ನು ನ್ಯಾಯವೂ ಸಂದರ್ಭೋಚಿತವಾಗಿದೆ ಎಂದು ಸಾರಿ ಹೇಳಿರುವಂತಿರುತ್ತದೆ ಅವರ ಸಾಹಿತ್ಯ.
  31. ವೈದೇಹಿ ಕನ್ನಡ ಸಾಹಿತ್ಯಲೋಕದಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣುವ ಹೆಸರು. ಸಣ್ಣಕಥೆ, ಕಾವ್ಯ,ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಲೇಖಕಿ. ಇವರ ನಿಜ ನಾಮಧೇಯ ಜಾನಕಿ ಶ್ರೀನಿವಾಸ ಮೂರ್ತಿ. ತವರು ಮನೆಯಲ್ಲಿ ವಸಂತಿ ಎಂದೂ ಇವರನ್ನು ಕರೆಯುತ್ತಾರೆ. ಇವರಿಗೆ ನಯನಾ ಹಾಗೂ ಪಲ್ಲವಿ ಎಂಬ ಇಬ್ಬರು ಪುತ್ರಿಯರು.
  32. ಡಾ.ಕೆ.ಷರೀಫಾ ಕನ್ನಡ ಕಾವ್ಯ ಲೋಕ ಕಂಡ ಮೊಟ್ಟ ಮೊದಲ ಮುಸ್ಲಿಂ ಸಮುದಾಯದಿಂದ ಬಂದ ಕವಯಿತ್ರಿ.ಇವರು ಬಿಸಿಲ ಬೆಂಗಾಡಾದ ಗುಲ್ಬರ್ಗದವರು.ಇವರು ಕವನಗಳನ್ನು 1975ರಿಂದಲೇ ಬರೆಯಲು ಆರಂಭಸಿದರು. ನಂತರ ಲೇಖನ,ವಿಮರ್ಶೆ,ಕಥೆ,ಅನುವಾದ ,ಸಂಪಾದನೆ ಹೀಗೆ ಹಲವಾರು ಪ್ರಕಾರಗಳಲ್ಲಿ ಸುಮಾರು 25 ಕೃತಿಗಳನ್ನು ರಚಿಸಿದ್ದಾರೆ. ಇವರು ಸಾಹಿತ್ಯಿಕ ಹಿನ್ನೆಲೆಯೇ ಇಲ್ಲದ ಬಡ ಕುಟುಂಬದಿಂದ ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಆರಂಭವಾದ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು,ಅನೇಕ ಮಹಿಳಾ ಹೋರಾಟಗಳನ್ನು ರೂಪಿಸುತ್ತ ಬಂದವರು.ಇವರ ಮುಸ್ಲಿಂ ಮಹಿಳಾ ಸಂವೇದನೆ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ. ಇವರ ಸಾಹಿತ್ಯದ ಬಗ್ಗೆ ವಿವಿಧ ವಿಶ್ವವಿದ್ಯಾಲಯದಿಂದ ಸಂಶೋಧನೆ ಮಾಡಿದ ವಿದ್ಯಾರ್ಥಿಗಳು ಪಿ ಹೆಚ್ ಡಿ ಪದವಿಯನ್ನು ಪಡೆದಿರುತ್ತಾರೆ.ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಕಥೆ, ಕವನ, ಅತ್ಮಕಥನ, ಲೇಖನಗಳು ಬರಹಗಳು ಪಠ್ಯವಾಗಿವೆ.