ಸೋಮೇಶ್ವರ ಶತಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಿ: ಪುಲಿಗೆರೆ ಸೋಮನಾಥ

ಕವಿ - ಕಾಲ[ಬದಲಾಯಿಸಿ]

ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮ ನೆಂದು ನಂಬಲಾಗಿದೆ . ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ , ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ , ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮ ನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಪುಲಿಕೆರೆಯ ಸೋಮ ಕವಿಯ ಕಾಲದ ಬಗ್ಗೆ ನಿಖರತೆ ಇಲ್ಲ. ಸುಮಾರು ಕ್ರಿ. ಶ. ೧೨೦೦ -೧೩೦೦ ರಲ್ಲಿ ಇದ್ದನೆಂದು ಭಾವಿಸಲಾಗಿದೆ. ಶೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಾಗಿವೆ . ಅವು ಮತ್ತೇ«ಭವಿ ಕ್ರೀಡಿತ ವೃತ್ತಗಳಲ್ಲಿ ರಚಿಸಲಾಗಿವೆ. ಸೋಮೇಶ್ವರ ಶತಕ ಕನ್ನಡದಲ್ಲಿ ಬಹಳಜನಪ್ರಿಯವಾದ ಕಾವ್ಯ. ಹೆಸರೇ ಹೇಳುವಂತೆ ಅದು ೧೦೦ ಪದ್ಯಗಳನ್ನು ಹೊಂದಿದೆ. ಉದಾಹರಣೆಗಾಗಿ ಕೆಲವು ಪದ್ಯಗಳನ್ನು ಕೆಳಗ ಕೊಟ್ಟಿದೆ : ಇವನನ್ನು ನಡುಗನ್ನಡವೀರಶೈವ ಕವಿಗಳ ಸಾಲಿಗೆ ಸೇರಿಸಿದೆ .ವೀರಕೇಸರಿ ಎಂದು ಈಗ ಕರೆಯಲಾಗಿದೆ

ಪದ್ಯಗಳು[ಬದಲಾಯಿಸಿ]

ಸರ್ವಜ್ಞನಾಗುವ ಬಗೆ :[ಬದಲಾಯಿಸಿ]

ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ||
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೧||

ಉನ್ನತ ವಸ್ತು :[ಬದಲಾಯಿಸಿ]

ಮುಕುರಂಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ
ಟಕೆ ಗೊಡ್ಡಾಕಳನಾಯ್ವರೇ ಗುಣಯುತರ್ ಪಾಲುಂಡು ಮೇಲುಂಬರೇ
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನತ್ಯಕಂ ಡೊಂಬರೇ
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೨||

ಬಡವ ಶ್ರೀಮಂತನಾಗ ಬಹುದು :[ಬದಲಾಯಿಸಿ]

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋಧ ಬೀಜಂ ಕೆಲಂ-
ಸಿಡಿದುಂ ಪೆರ್ಮರನಾಗದೇ ಎಳೆಗರೇನೆತ್ತಾಗದೇ ಲೋಕದೋಳ್
ಮಿಡಿ ಪಣ್ಣಾಗದೆ ದೈವದೊಲ್ಮೆಯಿರೆ ತಾಂ ಕಾಲಾನುಕಾಲಕ್ಕೆ ಕೇಳ್
ಬಡವಂ ಬಲ್ಲಿದನಾಗನೇ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೩||

ರಾಜನ ಆಸ್ಥಾನದಲ್ಲಿ ಕವಿ ಇದ್ದರೆ ಚಂದ[ಬದಲಾಯಿಸಿ]

ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾಭೂಷಣಂ
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ |
ಹವಿಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೪||

ಸ್ವಪ್ನದಲ್ಲಿ ಕೊಳ ಗಿಳಿ ಇತ್ಯಾದಿ ಕಂಡರೆ ಒಳಿತು[ಬದಲಾಯಿಸಿ]

ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ
ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ವಕ್ಕಿಯಂ ಛತ್ರಮಂ |
ತಳಿರಂ ಪೂರ್ಣ ತಟಾಕಮಂ ಕುಮುದಮಂ ದೇವರ್ಕಳಂ ತುಂಬಿಯಂ
ತಿಳಿಯಲ್ ಸ್ವಪ್ನದಿ ಲೇಸಲೈ ? ಹರಹರಾ ಶ್ರೀ ಚನ್ನ ಸೋಮೇಶ್ವರಾ ||೫||

ಸಂಪತ್ತಿಗೆ ಕಾರಣಗಳು[ಬದಲಾಯಿಸಿ]

ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ -
ಯತಮಂ ನಿಶ್ಚಲ ಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ |
ಅತಿಮಾಧುರ್ಯ ಸುಭಾಷಿತಂಗಳ ಮಹಾಸತ್ಕೀರ್ತಿಯಂ ಬಾಳ್ಕೆಯಂ
ಶತಕಾರ್ಥ ಕೊಡದಿರ್ಪುದೇ ? ಹರಹರಾ ಶ್ರೀ ಚನ್ನ ಸೋಮೇಶ್ವರಾ ||೬||

[೧][೨]

ಶಬ್ದಾರ್ಥ[ಬದಲಾಯಿಸಿ]

  • ಮುಕುರ =ಕನ್ನಡಿ ; ಶುಕ =ಗಿಳಿ ; ಕಾಕ =ಕಾಗೆ ; ರವ =ಸ್ವರ ; ಉಡುರಾಜ ಚಂದ್ರ (ಉಡು=ನಕ್ಷತ್ರ) ; ಪೆರ್ಚದೆ =ಹೆಚ್ಚಾಗದೆ ; ನ್ಯಗ್ರೋಧ = ಆಲದ ಮರ ; ಬಲ್ಲಿದ =ಬಲಶಾಲಿ ; ತೊತ್ತು = ದಾಸಿ ; ರಜನಿ = ಕತ್ತಲೆ ; ಸರಸಿ =ಸರೋವರ ; ಅಂಭೋಜಾತ =ತಾವರೆ ಹೂ ; ತಳಿರ್ತ = ಚಿಗುರಿದ ; ಮರಾಳ = ಹಂಸ ಪಕ್ಷಿ ; ಬೆಳ್ವಕ್ಕಿ = ಬಿಳಿಯ ಹಕ್ಕಿ ಕೊಕ್ಕರೆ ; ಪೂರ್ಣ ತಟಾಕ = ತುಂಬಿದ ಕೆರೆ ; ಕುಮುದ = ಬಿಳಿಯ ನೈದಿಲೆ , ತಾವರೆ ಹೂ ; ಗಮಕ = ಓದುವ ಸೊಬಗು ; ನೀತಿಯಾಯತ = ವಿಸಾರವಾದ ನೀತಿ ; ನೃಪವರಾಸ್ಥಾನೋಚಿತಾರ್ಥ ರಾಜ್ಯ ಶ್ರೇಷ್ಠರ ಸಭೆಗೆ ಯೋಗ್ಯವಾದ ವಿಷಯಗಳ ಜ್ಷಾನ (ನೃಪ +ವರ+ ಆಸ್ಥಾನ+ಉಚಿತ + ಅರ್ಥ) ; ಸುಭಾಷಿತ =ನಲ್ನುಡಿ ; ಬಾಳ್ಕೆ =ಜೀವನ.

ನೋಡಿ;[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಎಡ್ವರ್ಡ್ ಪಿ ರೈಸ್ ರ ಎ ಹಿಸ್ಟರೀ ಆಫ್ ಕ್ಯಾನರೀಸ್ ಲಿಟರೇಚರ್ (೧೯೨೧).
  2. ಕಾವ್ಯ ಪುಷ್ಪ ಮಾಲೆ - ಕನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು.