ಸದಸ್ಯ:Vinisha ujire/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾನುಲಿ ನಾಟಕಗಳು(ರೇಡಿಯೋ ನಾಟಕ)[ಬದಲಾಯಿಸಿ]

ಜಗತ್ತಿನಲ್ಲಿ ರಂಗಭೂಮಿಗೆ ಒಂದು ಮಹತ್ವವಿದೆ. ರಂಗಭೂಮಿಯ ನಾಟಕಗಳು ಇರುವುದು ನಾಟಕ ನೋಡುವ ಪ್ರೇಕ್ಷಕರಿಗಾಗಿ. ಅದೊಂದು ದೃಶ್ಯಕಾವ್ಯ. ಬಾನುಲಿ ನಾಟಕಗಳು ಇರುವುದು ಪ್ರೇಕ್ಷಕನಲ್ಲದ ಶ್ರೋತೃಗಳಿಗಾಗಿ. ಇಲ್ಲಿ ದೃಶ್ಯವನ್ನೆಲ್ಲಾ ಶ್ರಾವ್ಯವಾಗಿ ಪರಿವರ್ತಿಸಬೆಕಾಗುತ್ತದೆ. ಒಂದರ್ಥದಲ್ಲಿ ಬಾನುಲಿ ನಾಟಕಗಳನ್ನು ಅಲಂಕಾರಿಕವಾಗಿ ಹೇಳುವುದಾದರೆ ಕುರುಡರ ರಂಗಭೂಮಿ ಎಂದೇ ಹೇಳಬಹುದು. ಯಾವಾಗ ಬಾನುಲಿ ನಾಟಕಗಳು ತಯಾರಾಗುತ್ತದೆ ಆ ಸಮಯಕ್ಕೆ ದೃಶ್ಯ ಧ್ವನಿಯಾಗಿ ಪರಿವರ್ತನೆ ಹೊಂದುವಾಗ ಸಾಕಷ್ಟು ಗಮನಿಸಬೇಕಾಗುತ್ತದೆ. ಶ್ರೋತೃಗಳು ಪಾತ್ರಗಳನ್ನು ಧ್ವನಿಯ ಮೂಲಕ ವಿಭಿನ್ನವಾಗಿ ಗುರುತಿಸಬೇಕಾಗುತ್ತದೆ.ಆ ಸಂದರ್ಭದಲ್ಲಿ ಕ್ಲಿಷ್ಟವಾದ ರೀತಿಯಲ್ಲಿ ಸಮಸ್ತ ವಾಕ್ಯ ರಚನೆ ಹಾಗೂ ತೀರ ಕಾವ್ಯಮಯವಾಗಿದರೆ ಶ್ರೋತೃ ಗೊಂದಲಕ್ಕೀಡಾಗುವ ಸಂಭವ ಹೆಚ್ಚು.ಸಂಭಾಷಣೆಯಲ್ಲಿ ಸಣ್ಣ ಸಣ್ಣ ವಾಕ್ಯಗಳಿರುವುದು ಬಾನುಲಿ ನಾಟಕದ ಮೊದಲ ಲಕ್ಷಣ.ರಂಗಭೂಮಿಯ ಮೇಲೆ ಉಪವನದ ದೃಶ್ಯವನ್ನು ಕಾಣಿಸಲು ಅಸಾಧ್ಯವಾದ್ದರಿಂದ ಪಕ್ಷಿಗಳ ಕಲಕಲ, ಕೋಗಿಲೆ ಕಲರವ ವೀಣಾಗಾನ ಮುಂತಾದವುಗಳಿಂದ ಆ ಭಾವವನ್ನು ಮೂಡಿಸಬೇಕಾಗುವುದು.

ರೇಡಿಯೋದಲ್ಲಿ ಬಾನುಲಿ ನಾಟಕಗಳ ಇತಿಹಾಸ[ಬದಲಾಯಿಸಿ]

ಬಾನುಲಿ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ತೀರ ಹೊಸದು. ಗ್ರಂಥಸ್ಥ ಬಾನುಲಿ ನಾಟಕಗಳು ಕನ್ನಡದಲ್ಲಿ ಅತ್ಯಂತ ಕಡಿಮೆ. ನಮ್ಮ ದೇಶದಲ್ಲಿ ಆಕಾಶವಾಣಿ ಪ್ರಾರಂಭವಾದ ಸಂದರ್ಭದಲ್ಲಿ ಇತರ ಭಾಷೆಗಳಿಗೆ ಹೋಲಿಸಿ ನೋಡಿದಾಗ ಕನ್ನಡದಲ್ಲಿ ಬಾನುಲಿ ನಾಟಕಗಳ ಪ್ರಸಾರ ತೀರ ವಿರಳ. ತತ್ಪೂರ್ವದಲ್ಲಿ ಮೈಸೂರು ಆಕಾಶವಾಣಿ ಸ್ವತಂತ್ರವಾಗಿ ಪ್ರಸಾರ ಮಾಡುತ್ತಿತ್ತು. ಪಾಶ್ಚಾತ್ಯ ಬಾನುಲಿ ನಾಟಕದ ಇತಿಹಾಸವನ್ನು ವಿವೇಚಿಸುವಾಗ ನಾವು ಮುಖ್ಯವಾಗಿ ವಾಯ್ಸ್ ಆಫ್ ಅಮೆರಿಕಾ ಹಾಗೂ ಬಿ.ಬಿ.ಸಿ ಪ್ರಸಾರಗಳನ್ನು ಗುರಿಯಾಗಿಟ್ಟು ಅವಲೋಕನ ಮಾಡಬಹುದಾಗಿದೆ. ಅರ್ಬೆಬರ್ಡ್ ಮ್ಯಾಕ್‍ಲೀಷ್‍ನ ಫಾಲ್ ಆಫ್ ದಿ ಸಿಟಿ ಎಂಬ ನಾಟಕದಿಂದ ಬಾನುಲಿ ನಾಟಕ ರೂಪ ತಾಳಿತು ಎಂದು ಹೇಳುತ್ತಾರೆ.ಈ ನಾಟಕ ಪ್ರಸಾರವಾದುದು 1937ರಲ್ಲಿ. ಈ ಬಾನುಲಿ ನಾಟಕ ತನ್ನ ವಿಶಿಷ್ಟತೆಯಿಂದ ಪ್ರಸಾರ ನಾಟಕ ಬೆಳೆಯಲು ಹೊಸ ಮಾರ್ಗವಾಯಿತು. ಅಲ್ಲದೇ ಪ್ರಸಾರ ನಾಟಕಕ್ಕೂ ರಂಗನಾಟಕಕ್ಕೂ ಇರುವ ಭೇದವನ್ನು ನಿಚ್ಚಳವಾಗಿ ತೋರಿಸಿಕೊಟ್ಟಿತು.ಬಿ.ಬಿ.ಸಿ ಯಿಂದ ಪ್ರಸಾರವಾದ ಟಾಯರಾನ್ ಗಥ್ರೀ ಅವರ 'ದಿ ಫ್ಲವರ್ಸ್ ಆರ್ ನಾಟ್ ಫಾರ್ ಯು ಟು ಪಿಕ್' ಎಂಬ ನಾಟಕದ ತಂತ್ರ ಚುರುಕಾದದ್ದು.. ಆರ್ಸನ್ ವೆಲ್ಸ್, ಫೆಲಿಕ್ಸಸ ಫೆಲ್‍ತನ್ , ನಾಲ್‍ಗೀಲ್ ಗುಡ್ ಮೊದಲಾದ ಶ್ರೇಷ್ಠ ದರ್ಜೆಯ ನಿರ್ದೇಶಕರನ್ನು ಇಲ್ಲಿ ಹೆಸರಿಸಬಹುದಾಗಿದೆ. ಸಾತ್ರ್ರ್, ಓನೀಲ್ , ಮಾಮ್, ಆಸ್ಬರ್ನ್ ಮೊದಲಾದ ಹೆಸರಾಂತ ರಂಗಭೂಮಿಯ ನಾಟಕಕಾರರ ಕೃತಿಗಳನ್ನು ಈ ನಿರ್ದೇಶಕರು ಪ್ರಸಾರಕ್ಕೆ ಸೂಕ್ತವಾಗುವ ರೀತಿ ಅಳವಡಿಸಿ ಬಿತ್ತರಿಸಿದ್ದಾರೆ.

ರೇಡಿಯೋ ನಾಟಕಗಳ ಲಕ್ಷಣ[ಬದಲಾಯಿಸಿ]

ಸಂಗೀತರೂಪಕಗಳು, ಗೇಯನಾಟಕಗಳು ಬಾನುಲಿ ನಾಟಕಗಳಂತೆ ರೇಡಿಯೋದ ಪ್ರಕಾರದ ಮುಖ್ಯ ಅಂಗಗಳಾಗಿವೆ.ಭಾರತೀಯ ಹಬ್ಬಗಳನ್ನು ಕುರಿತು ಲೋಕಗೀತೆಗಳನ್ನು, ಲೋಕಕತೆಗಳನ್ನು ಸಂಗ್ರಹಿಸಿ ಇವುಗಳ ಮಹತ್ವಗಳನ್ನು ತಿಳಿಸಿ ಹೇಳುವ ಸಂಗೀತ ರೂಪಕಗಳು ಒಂದು ಪ್ರಕಾರವಾದರೆ ಯಾವ ವಾಚ್ಯಶಬ್ಧವೂ ಇಲ್ಲದೇ ಕೇವಲ ಗೀತಗಳ ಮೂಲಕವೆ ಹೆಣೆಯಲ್ಪಟ್ಟ ವಿಶೇಷ ಶುದ್ಧ ಸಂಗೀತ ನಾಟಕ ಗೇಯನಾಟಕವೆಂದು ಕರೆಯಲ್ಪಡುತ್ತದೆ. ಗೇಯನಾಟಕದ ಮೊದಲ ಪ್ರಯೋಗ ನಡೆದುದು ಕನ್ನಡದ ಮಟ್ಟಿಗಾದರೂ ಶಿವರಾಮ ಕಾರಂತರಿಂದ. ರಂಗಭೂಮಿಯ ಮೇಲೆ ಮೊದಲು ಯಶಸ್ವಿಯಾಗಿ ಪ್ರಯೋಗಿಸಿ ಆಮೇಲೆ ರೇಡಿಯೋದಲ್ಲಿ ಅದನ್ನು ಸಾದರಪಡಿಸಲಾಯಿತು. ಕಿಸಾಗೌತಮಿ, ಸೋಮಿಯ ಭಾಗ್ಯ, ಮದುವೆಗಿಂತ ಮಸಣವೇ ಲೇಸು ಯಶಸ್ವಿಯಾದುವು.ಕಾರಂತರ 'ನದೀ ದರ್ಶನ ಮಾತ್ರ' ಶಬ್ದ-ವಾದ್ಯಗಳಲ್ಲದೇ ಕೇವಲ ವಾದ್ಯ ಸಂಗೀತದಿಂದ ನಿರೂಪಿಸಲ್ಪಟ್ಟ ಸಾಂಕೇತಿಕ ಗೇಯನಾಟಕ.

ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಕಗಳು[ಬದಲಾಯಿಸಿ]

ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ಮೊದಲ ಬಾನುಲಿ ನಾಟಕ ನೀರಗಂಟಿ ಮಾರ ಎಂದು ಹೇಳಬಹುದು ಎಂಬುದಾಗಿ ಎಚ್.ಕೆ ರಂಗನಾಥ್ ಅವರು ತಮ್ಮ ಪ್ರಸಾರ ನಾಟಕ ಪ್ರಬಂಧದಲ್ಲಿ ಅಭಿಪ್ರಾಯಪಟ್ಟಿದ್ದಾರೆ.ಈ ನಾಟಕವು ಆರ್.ಕೆ ನಾರಾಯಣ ಅವರ ವಾಚ್‍ಮನ್ ಆಫ್ ದಿ ಲೇಕ್ ಎಂಬ ನಾಟಕದ ಅನುವಾದ.ಅನುವಾದಿಸಿದವರುವಿ.ಕೆ ಶ್ರೀನಿವಾಸನ್.ಶ್ರೋತೃಗಳಿಗೆ ತಲುಪುವ ನಿಟ್ಟಿನಲ್ಲಿ ಯಶಸ್ವಿ ನಾಟಕಕಾರಲ್ಲಿ ಶ್ರೀರಂಗ, ಶಿವರಾಮ ಕಾರಂತ,ಚದುರಂಗ,ಎಚ್.ಕೆ ರಂಗನಾತಥ್, ಸಮೇತನಹಳ್ಳಿ ರಾಮರಾವ್, ನಾ.ಕಸ್ತೂರಿ, ಶಿವಸ್ವಾಮಿ, ಬೀಚಿ, ಎ.ಕೆ ರಾಮಾನುಜನ್, ಬಿ.ಸಿ. ರಾಮಚಂದ್ರ ಶರ್ಮ , ಪರ್ವತವಾಣಿ ಮೊದಲಾದವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಂಗಳೂರು ಆಕಾಶವಾಣಿ[ಬದಲಾಯಿಸಿ]

ಮಂಗಳೂರು ಆಕಾಶವಾಣಿ ಡಿಸೆಂಬರ್ 11 1976ರಲ್ಲಿ ಪ್ರಾರಂಭವಾಯಿತು. ಇಲ್ಲಿ ಮೂರು ವಿಷಯಗಳುಳ್ಳ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಲಾಗುವುದು.ಅವುಗಳೆಂದರೆ ಮಾಹಿತಿ,ಶಿಕ್ಷಣ,ಮನೋರಂಜನೆ.ಮಂಗಳೂರು ಆಕಾಶವಾಣಿ ಯಲ್ಲಿ ಬೆಳಗ್ಗೆ 6.00 ರಿಂದ 3.5ರ ತನಕ ಹಾಗೂ ಸಂಜೆ 5.30ಯಿಂದ 11.5ರ ತನಕ ಕಾರ್ಯಕ್ರಮಗಳು ಪ್ರಸಾರವಾಗುವುದು.ಮಂಗಳೂರು ಆಕಾಶವಾಣಿ ಕೇಂದ್ರವೂ ದಕ್ಷಿಣ ಕನ್ನಡ ಜಿಲ್ಲೆ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳವರೆಗೂ ವಿಸ್ತರಿಸಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ರೇಡಿಯೋ ಕಾರ್ಯಕ್ರಮಗಳತ್ತ ಆಕರ್ಷಿಸಲು ಮತ್ತು ರೇಡಿಯೋ ಶ್ರೋತೃಗಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಮಂಗಳೂರು ಆಕಾಶವಾಣಿಯಲ್ಲಿ ವಂದನ,ಯುವವಾಣಿ, ರೈತರಿಗೆ ಸಲಹೆ ಹೀಗೆ ಅನೇಕ ಕಾರ್ಯಕ್ರಮಗಳು ರೇಡಿಯೋ ಶ್ರೋತೃಗಳಿಗೆ ನೀಡುತ್ತಾ ಬಂದಿದೆ.

ಮಂಗಳೂರು ಆಕಾಶವಾಣಿಬಾನುಲಿ ನಾಟಕಗಳು[ಬದಲಾಯಿಸಿ]

ಮಂಗಳೂರು ಆಕಾಶವಾಣಿ ಪ್ರಾರಂಭವಾದ ಹೊಸದರಲಿ ಪ್ರಸಾರವಾಗುತ್ತಿತ್ತು. ವಿಶಿಷ್ಟ ಶೈಲಿಗಳಿಂದ ಶ್ರೋತೃಗಳ ಮನಗೆಲುವಲ್ಲಿ ಮುಖ್ಯ ಪಾತ್ರವಹಿಸಿದೆ. ಹಲವಾರು ದೃಷ್ಟಿಕೋನವುಳ್ಳ ಬಾನುಲಿ ನಾಟಕಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.ಕಾದಂಬರಿ ಕಥೆಗಳು ಬಾನುಲಿನಾಟಕಗಳಾಗಿ ರೂಪಾಂತರವಾದುದು ಇಲ್ಲಿ ಕಾಣಬಹುದಾಗಿದೆ. ಸಾರಾ ಅಬೂಬಕರ್ ಅವರ ಕೃತಿಗಳು ಬಾನುಲಿ ನಾಟಕಗಳಾಗಿ ಹೊರಹೊಮ್ಮಿವೆ. ಪ್ರಭಾಕರ್ ಶಿಶಿಲ, ಗಂಗಾ ಪಾದೆಕಲ್ಲು, ರಾಮದಾಸ್, ಡಾ.ಕೆ.ಟಿ.ಗಟ್ಟಿ, ಹೆಚ್.ದುಂಡಿರಾಜ್, ಯಮುನಾ, ಡಾ.ಮಹಾಲಿಂಗಯ್ಯ ಭಟ್ ಇವರುಗಳು ಮಂಗಳೂರು ಆಕಾಶವಾಣಿಯಲ್ಲಿ ಕಂಡುಬಂದ ಯಶಸ್ವಿ ಬಾನುಲಿ ನಾಟಕ ರಚನಾಕಾರರು. ಮಂಗಳೂರು ಆಕಾಶವಾಣಿ ಸಾಮಾಜಿಕ ಸಂದೇಶ ಸಾರುವ ಬಾನುಲಿ ನಾಟಕಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ.ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯನ್ನು ಚೋಮನ ಎತ್ತುಗಳು ಎಂದು ಬಾನುಲಿ ನಾಟಕವನ್ನಾಗಿ ರೂಪಾಂತರ ಮಾಡಿ ಪ್ರಸಾರ ಮಾಡಿದೆ.ಗಂಗಾ ಪಾದೆಕಲ್ಲು ಅವರ ಒಂದು ಹಣತೆಯಿಂದ,ಕುವೆಂಪುರವರ ಶೂದ್ರ ತಪಸ್ವಿ, ಸಾರ ಅಬೂಬ್‍ಕರ್‍ರವರ ಬಿಕ್ರಿಯ ಮಾಲುಗಳು,ಭುವನೇಶ್ವರ ಹೆಗ್ಡೆರವರ ಯಂತ್ರ ಅತಂತ್ರ, ಶಶಿರಾಜ್ ಕಾವೂರುರ ನೆಮ್ಮದಿ ಅಪಾರ್ಟ್‍ಮೆಂಟ್ ,ಕೆ.ಟಿ.ಗಟ್ಟಿಯವರ ಅದಲು ಬದಲು, ರಾಮದಾಸ್‍ರ ಜೀವದ ರೊಟ್ಟಿ, ಪ್ರಭಾಕರ್ ಶಿಶಿಲರ ರಾವೋ ರಾವು ಕೊರಂಗು ಬಾನುಲಿ ನಾಟಕಗಳು ರೇಡಿಯೋದಲ್ಲಿ ಪ್ರಸಾರವಾಗಿವೆ.

ಉಲ್ಲೇಖ[ಬದಲಾಯಿಸಿ]

ಕನ್ನಡ ವಿಶ್ವಕೋಶ ಭಾಗ-೧೦

ಕರ್ನಾಟಕ ರಂಗಭೂಮಿ-ಕೆ.ಎಚ್ ರಂಗನಾಥ್