ಸದಸ್ಯ:Avin Anthony SJ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರಿಹರ[ಬದಲಾಯಿಸಿ]

ಕಾಲ: ಸುಮಾರು ಕ್ರಿ.ಶ. ಹನ್ನೆರಡರಿಂದರಿಂದ ಹದಿಮೂರನೆಯ ಶತಮಾನ (ಕ್ರಿ.ಶ. 1150-1250) ಸ್ಥಳ: ಬಳ್ಳಾರಿ ಜಿಲ್ಲೆಯ ಹಂಪಿ ಮತ್ತು ಹಾಸನ ಜಿಲ್ಲೆಯ ದ್ವಾರಸಮುದ್ರ. ಮತ-ಧರ್ಮ: ಶೈವ (ವೀರಶೈವ) ರಾಜಾಶ್ರಯ: ಹೊಯ್ಸಳ ರಾಜನಾದ ನರಸಿಂಹ ಬಲ್ಲಾಳ (ಕೆಲವು ವರ್ಷಗಳು) ಬಿರುದುಗಳು: ರಗಳೆಯ ಕವಿ. ಕೃತಿಗಳು ಗಿರಿಜಾಕಲ್ಯಾಣ ಮಹಾಪ್ರಬಂಧಂ, ಪಂಪಾಶತಕಂ, ರಕ್ಷಾಶತಕಂ ಇತ್ಯಾದಿ. ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಹರಿಹರನು ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬ. ತನ್ನ ಕಾವ್ಯವಸ್ತುವಿಗಾಗಿ, ಸಂಸ್ಕೃತ ಮತ್ತು ಪ್ರಾಕೃತ ಮೂಲಗಳನ್ನು ಬಿಟ್ಟು ತಮಿಳು ಮೂಲವನ್ನು ಆರಿಸಿಕೊಂಡವರಲ್ಲಿ ಹರಿಹರನೇ ಮೊದಲಿಗ. ಹನ್ನೊಂದನೆಯ ಶತಮಾನದಲ್ಲಿ ಶೆಕ್ಕಿಯಾರ್ ಎನ್ನುವವರು ರಚಿಸಿದ ‘ಪೆರಿಯಪುರಾಣ’ವು ಹರಿಹರನಿಗೆ ಪುರಾತನ ಶಿವಗಣದ ರಗಳೆಗಳನ್ನು ಬರೆಯಲು ಆಕರವಾಯಿತು. ಪೆರಿಯ ಪುರಾಣ ಎಂದರೆ ದೊಡ್ಡ ಕಥೆ ಎಂದು ಅರ್ಥ. ‘ತಿರುತ್ತೊಂಡರ್ ಪುರಾಣಂ‘ ಎನ್ನುವುದು ಅದರ ಇನ್ನೊಂದು ಹೆಸರು. ಅದು ಚೋಳದೇಶದ ಹಿರಿಯ ಶೈವ ಸಂತರಾದ ನಾಯನಾರರುಗಳ ಜೀವನಚಿತ್ರಗಳನ್ನು ಕೊಡುತ್ತದೆ. ಅದು ಪಶ್ಚಿಮ ಏಷಿಯಾದ ದೇಶಗಳೊಂದಿಗೆ ನಮಗಿದ್ದ ವಾಣಿಜ್ಯ ಸಂಬಂಧಗಳಿಗೆ ಪುರಾವೆ ನೀಡುತ್ತದೆ. ಮಧ್ಯ ಕರ್ನಾಟಕದಲ್ಲಿದ್ದ ಹರಿಹರನಿಗೆ ಈ ಕಾವ್ಯವು ಅದು ಪ್ಕಟವಾದ ಹೊಸತರಲ್ಲಿಯೇ ಸಿಕ್ಕಿತ್ತೆನ್ನುವುದು ಕುತೂಹಲಕಾರಿಯಾದ ಸಂಗತಿ. ಹರಿಹರನ ಈ ತೀರ್ಮಾನದ ಪರಿಣಾಮವಾಗಿ, ಅವನ ರಗಳೆಗಳ ಸ್ಥಳ, ಜೀವನ ವಿವರಗಳು ಮತ್ತು ನಿರೂಪಣ ವಿಧಾನಗಳು ಸಂಪೂರ್ಣವಾಗಿ ಬದಲಾಗುತ್ತವೆ. ಅವು ದ್ರಾವಿಡ ಜೀವನಶೈಲಿಗೆ ನಿಕಟವಾಗುತ್ತವೆ. ಪುರಾತನರ ರಗಳೆಗಳ ವಿಚಾರದಲ್ಲಂತೂ ಈ ಮಾತು ಇನ್ನಷ್ಟು ನಿಜ. ಬದಲಾಗಿ ನೂತನರ ರಗಳೆಗಳು ಮಧ್ಯಕಾಲೀನ ಕರ್ನಾಟಕದ ಜೀವನಕ್ರಮಕ್ಕೆ ಕನ್ನಡಿ ಹಿಡಿಯುತ್ತವೆ. ಅಲ್ಲಿನ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸಿ,ಸಂವೇದನಶೀಲವಾಗಿ ಚಿತ್ರಿಸಲಾಗಿದೆ. ಹರಿಹರನು ತನ್ನ ‘ಗಿರಿಜಾಕಲ್ಯಾಣ’ದಲ್ಲಿ ಚಂಪೂ ಶೈಲಿಗೆ ಮತ್ತು ಹಳಗನ್ನಡಕ್ಕೆ ವಿದಾಯ ಹೇಳುತ್ತಾನೆ. ಅವನ ರಗಳೆಗಳು ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡದಲ್ಲಿ ಪರಿಣಾಮಕಾರಿಯಾಗಿ ರಚಿತವಾಗಿವೆ. ಅವನ ಶೈಲಿಯು ವಾತಾವರಣ ಸೃಷ್ಟಿಗೆ ಸಹಾಯಕವಾಗಿದ್ದು, ಸಂಸ್ಕೃತ ಪದಗಳ ಬಳಕೆಯು ಬಹಳ ಕಡಿಮೆಯಾಗಿದೆ. ತನ್ನ ಕಾವ್ಯಗಳ ವಸ್ತು ಮತ್ತು ಆಕೃತಿಗಳೆರಡನ್ನೂ ಬದಲಿಸುವುದರಲ್ಲಿ ಅವನು ತೋರಿಸಿರುವ ಧೈರ್ಯವು ಮೆಚ್ಚುವಂತಹುದು. ಅವನ ಮೇಲೆ ಹನ್ನೆರಡನೆಯ ಶತಮಾನದ ಶಿವಶರಣರ ಹಾಗೂ ವಚನ ಸಾಹಿತ್ಯದ ದಟ್ಟವಾದ ಪ್ರಭಾವವಿದೆ. ಈ ರಗಳೆಗಳಲ್ಲಿ, ಪ್ರಾಯಶಃ ಕನ್ನಡ ಸಾಹಿತ್ಯದಲ್ಲಿಯೇ ಮೊದಲ ಬಾರಿಗೆ, ಶ್ರೀ ಸಾಮಾನ್ಯನ ಬದುಕು ಕೇಂದ್ರಸ್ಥಾನವನ್ನು ಪಡೆಯುತ್ತದೆ. ಕುಂಬಾರ, ಕೃಷಿಕ, ಬೇಟೆಗಾರ, ಚಮ್ಮಾರ, ಅಗಸ ಮತ್ತು ಬೆಸ್ತರು ಹರಿಹರನ ಪ್ರಸಿದ್ಧವಾದ ರಗಳೆಗಳ ಕೇಂದ್ರ ಪಾತ್ರಗಳು. ಶಿವಭಕ್ತಿಯೆನ್ನುವುದು ಅವರೆಲ್ಲರನ್ನೂ ಒಗ್ಗೂಡಿಸುವ ಸೂತ್ರ. ಅವರೆಲ್ಲರೂ ಯಾವುದೇ ಪುರೋಹಿತರ ಮಧ್ಯಪ್ರವೇಶವಿಲ್ಲದೆ ಶಿವನ ಅನುಗ್ರಹವನ್ನು ಪಡೆಯಬಲ್ಲರೆನ್ನುವುದು ಮಹತ್ವದ ಸಂಗತಿ. ಹರಿಹರನ ಈ ದಿಟ್ಟತನವನ್ನು ಅವನ ನಂತರ ಬಂದ ಕವಿಗಳು ಮುಂದುವರಿಸಲಿಲ್ಲವೆನ್ನುವುದು ದುರದೃಷ್ಟದ ಸಂಗತಿ. ಹರಿಹರನ ಮತ್ತೊಂದು ಮಹತ್ವದ ಸಾಧನೆಯೆಂದರೆ, ತನ್ನ ಪಾತ್ರಗಳ ಬಹಳ ವಾಸ್ತವಿಕವಾದ ಚಿತ್ರಣ ಮತ್ತು ಅವುಗಳನ್ನು ದೈವೀಕರಣಗೊಳಿಸುವ ಹಂಬಲಗಳ ನಡುವೆ ಅವನು ತಂದುಕೊಂಡಿರುವ ಸಮತೋಲನ.ಅವನ ಮಹತ್ವದ ಕೃತಿಗಳಾದ ‘ಬಸವರಾಜದೇವರ ರಗಳೆ ಮತ್ತು ‘ನಂಬಿಯಣ್ಣನ ರಗಳೆ’ಗಳು ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿವೆ.ತಮ್ಮ ಕಥನಾಯಕರನ್ನು ನೂರಕ್ಕೆ ನೂರರಷ್ಟು ದೈವೀಕರಿಸಿದ ಅವನ ಉತ್ತರಾಧಿಕಾರಿಗಳಿಗೆ ಹೋಲಿಸಿದಾಗ ಅವನ ಮಹತ್ವವು ನಿಚ್ಚಳವಾಗುತ್ತದೆ.ಹರಿಹರನು ಗದ್ಯ ಮತ್ತು ಪದ್ಯಗಳೆರಡರ ಬಳಕೆಯಲ್ಲಿಯೂ ಸಮರ್ಥನಾಗಿದ್ದನು. ಬಸವಣ್ಣ ಮತ್ತು ನಂಬಿಯಣ್ಣರನ್ನು ಕುರಿತ ರಗಳೆಗಳಲ್ಲಿ ಅವನು ಬೇರೆ ಬೇರೆ ಅಧ್ಯಾಯಗಳಲ್ಲಿ ಗದ್ಯ ಪದ್ಯಗಳನ್ನು ಬಳಸುತ್ತಾನೆ.ಹೀಗೆ ಕನ್ನಡ ಕವಿಗಳ ಸಾಲಿನಲ್ಲಿ ಹರಿಹರನು ಬಹಳ ಮಹತ್ವದ ಸ್ಥಾನವನ್ನು ಪಡೆದಿದ್ದಾನೆ.