ರಗಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದಲ್ಲಿ ರಗಳೆ ಸಾಹಿತ್ಯ :-- ನಡುಗನ್ನಡ ಕಾವ್ಯದ ಛಂದಸ್ಸಿನ, ದೇಸಿಯ ಕಾವ್ಯ ಪದ್ಧತಿಯ ಬಹುಮುಖ್ಯ ಪ್ರಕಾರ. ಇದು ಮಾತ್ರಾಗಣ ಘಟಿತವಾದ ಪದ್ಯಜಾತಿ. ಹರಿಹರನ ರಗಳೆಯ ಆದಿ ಮತ್ತು ಅಂತ್ಯದಲ್ಲಿ ವಿರೂಪಾಕ್ಷ ಮುದ್ರಿಕೆಯ ಕಂದಪದ್ಯ ಇರುತ್ತದೆ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾಡಿದ್ದಾರೆ. ರಗಳೆಯನ್ನು ಹರಿಹರ ಜನಸಾಮಾನ್ಯರ ಚಂಪೂ ಎಂದು ಕರೆದಿದ್ದಾನೆ.[೧]

ಮೂಲ[ಬದಲಾಯಿಸಿ]

೯ನೇ ಶತಮಾನದಿಂದ ಅಪಭ್ರಂಶದಲ್ಲಿ ಕಥನಕಾವ್ಯ ರಚನೆಗೆ ಬಳಸುತ್ತಿರುವ ಚತುಷ್ಪದಿ ವರ್ಗದ ಪ್ರಮುಖ ವೃತ್ತವೇ ರಗಳೆ. ಸಂಸ್ಕೃತದಿಂದ ವೃತ್ತಗಳು, ಬೇರೆ ಪ್ರಾಕೃತ ಭಾಷೆಗಳಿಂದ ಕಂದಪದ್ಯ ಕನ್ನಡಕ್ಕೆ ಬಂದಂತೆ ಪ್ರಾಯಶಃ ಅಪಭ್ರಂಶದಿಂದ ರಗಳೆ ಪ್ರಭೇದಗಳು ಕನ್ನಡಕ್ಕೆ ಬಂದಿವೆ (ಕನ್ನಡವೂ ಪ್ರಾಕೃತ ಭಾಷೆಗಳಲ್ಲಿ ಒಂದು). ರಘಟ> ರಘಡ> ರಗಳ> ರಗಳೆ ಯಾಗಿದೆ. ರಘಟಾ ಎಂದರೆ ಪಾದ ಸಂಖ್ಯಾ ನಿಯಮವಿಲ್ಲದ ಒಂದು ಪದ್ಯಗುಚ್ಛ. ತೆಲಗು ಭಾಷೆಯಲ್ಲಿ ರಗಳೆ ಎಂಬುದಕ್ಕೆ 'ರಗಡ' ಎಂಬ ಪದದ ಬಳಕೆ ಇದೆ. ಆ ಭಾಷೆಯಲ್ಲಿ ರಗಡ ಎಂಬುದು ಒಂದು ಪದ್ಯ ಜಾತಿ.

ರಗಳೆಯ ವಿಧಗಳು[ಬದಲಾಯಿಸಿ]

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಅನಿಯಮಿತ ಪಾದಸಂಖ್ಯೆಗಳೂ ಆದಿ ಅಥವಾ ಅಂತ್ಯ ಪ್ರಾಸಗಳೂ ಎಲ್ಲಾ ರಗಳೆಗಳಿಗೂ ಸಾಮಾನ್ಯ ಅಂಶಗಳು.
ಇದರಲ್ಲಿ ಮೂರು ಮುಖ್ಯ ವಿಧಗಳನ್ನು ಕಾಣಬಹುದು
೧.ಉತ್ಸಾಹ ರಗಳೆ
೨.ಮಂದಾನಿಲ ರಗಳೆ
೩.ಲಲಿತ ರಗಳೆ

೧.ಉತ್ಸಾಹ ರಗಳೆ - ೧೨[ಬದಲಾಯಿಸಿ]

ಇದರಲ್ಲಿ ಮುಖ್ಯವಾಗಿ ಮೂರು ಮಾತ್ರೆಗಳಂತೆ ಗಣ ವಿಂಗಡನೆಯಾಗುತ್ತದೆ.
ಇದರಲ್ಲಿಯೂ ಹಲವು ಪ್ರಕಾರಗಳಿವೆ.
ಒಂದು ಪ್ರಕಾರದಲ್ಲಿ "೩+೩+೩+೩" ಮಾತ್ರೆಗಳಂತೆ ಗಣವಿಂಗಡನೆಯಾಗುವುದು
ಇನ್ನೊಂದು ಪ್ರಕಾರದಲ್ಲಿ "೩+೩+೩+ಗುರು" ಮಾತ್ರೆಗಳಂತೆ ಗಣವಿಂಗಡನೆಯಾಗುವುದು
ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.
ಸಾಮಾನ್ಯನಿಯಮದಂತೆ ಯಾವಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ.

೨. ಮಂದಾನಿಲ ರಗಳೆ - ೧೬[ಬದಲಾಯಿಸಿ]

ಇದರಲ್ಲಿಯೂ ಹಲವು ಪ್ರಕಾರಗಳಿವೆ.
ಮೊದಲನೆಯ ಪ್ರಕಾರದಲ್ಲಿ ಆದ್ಯಂತ ಪ್ರಾಸನಿಯಮಗಳ ಜೊತೆಯಲ್ಲಿ ಪ್ರತಿಪಾದದಲ್ಲಿಯೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿರುತ್ತವೆ.
ಅಂದರೆ ಗಣವಿಭಾಗದಲ್ಲಿ "೪+೪+೪+೪" ಎಂಬ ವಿನ್ಯಾಸವಿರುತ್ತದೆ.
ಇನ್ನೊಂದು ಪ್ರಕಾರದಲ್ಲಿ ಮೂರು ಮತ್ತು ಐದು ಮಾತ್ರೆಗಳ ಗಣಗಳು ಎರಡು ಬಾರಿ ಪುನರಾವರ್ತನೆಯಾಗುತ್ತವೆ.
ಅಂದರೆ ಗಣವಿಭಾಗದಲ್ಲಿ "೩+೫+೩+೫" ಎಂಬ ವಿನ್ಯಾಸವಿರುತ್ತದೆ.
ಈ ವಿಧಗಳಲ್ಲಿಯೂ ಕೂಡ ಮೊದಲು ಲಘು, ಅನಂತರ ಗುರು ಇರುವ ಗಣವಿನ್ಯಾಸ ಬರಬಾರದು.
ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.

೩.ಲಲಿತರಗಳೆ - ೨೦[ಬದಲಾಯಿಸಿ]

ಇದರಲ್ಲಿಯೂ ಬೇರೆ ಬೇರೆ ವಿಧಗಳಿದ್ದರೂ ಮುಖ್ಯವಾಗಿ ನಾಲ್ಕು ಪಂಚಮಾತ್ರಾಗಣಗಳಿಂದ ಕೂಡಿರುತ್ತದೆ.
ಎಲ್ಲ ರಗಳೆಗಳ ನಿಯಮದಂತೆ ಇದರಲ್ಲಿಯೂ ಯಾವಗಣದಲ್ಲಿಯೂ ಮೊದಲು ಲಘು, ಅನಂತರ ಗುರು ಇರುವಂತಹ (U _ UU ಅಥವಾ U _ _)ವಿನ್ಯಾಸವಿರಬಾರದು
ಆದ್ಯಂತಪ್ರಾಸಗಳಿರುವ ಉದಾಹರಣೆ:-
ಏನವ್ವ ಸಂಪಗೆಯೆ ಶಿವನ ಸಿರಿಮುಡಿಗಿಂದು
ನೀನೀವ ಪೊಸ ಪೂಗಳಂ ನೀಡು ನೀಡೆಂದಂ||
(ಹರಿಹರನ ಪುಷ್ಪರಗಳೆ)

ಧವನವೇ ಶಿವನ ಪರಿಮಳದ ಹಬ್ಬವೆ ಭಾರ
ಭುವನದೊಳ್ ನಿನಗೆ ಸರಿಯಿಲ್ಲ ಸೌರಭಸಾರ||
(ಹರಿಹರನ ಪುಷ್ಪರಗಳೆ)

ಅಂತ್ಯಪ್ರಾಸ ಮಾತ್ರವಿರುವ ಉದಾಹರಣೆ:-
ಗಂಧರ್ವನಗರಲೇಖೆಯ ತೆರದೆ ಕಂಡಂತೆ
ಕಾಣಲ್ಕೆ ಮಾರನಿರ್ದಾಯೆಡೆಯೊಳಿರ್ದಂತೆ
ವಿಷಯವಿಷವಲ್ಲಿಯಂ ಪೆರ್ಚಿಸುವ ಜಲಧಾರೆ
ಸಾಧುತ್ವಮಂ ಕಿಡಿಸಿ ನಡೆಸುವ ದುರಾಚಾರೆ
ಕಪಟನಾಟಕತತಿಗೆ ತಾನೆ ನೆಲೆಯೆನಿಸುವಳ್
ಕೋಪಗ್ರಹಾವೇಶ ಜನ್ಮನಿಧಿಯೆನಿಸುವಳ್||
(ನಾಗವರ್ಮನ ಕರ್ಣಾಟ ಕಾದಂಬರಿ)

ವಿವಿಧ ಕವಿಗಳ ದೃಷ್ಠಿಯಲ್ಲಿ ರಗಳೆ[ಬದಲಾಯಿಸಿ]

  • ಎಂ.ಎಂ ಕಲಬುರ್ಗಿಯವರು ಹರಿಹರನ ರಗಳೆಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ.
  1. ಪುರಾತನರ ರಗಳೆಗಳು = ೬೩
  2. ಶರಣರ/ನೂತನರ/ಅಸಂಖ್ಯಾತರ ರಗಳೆಗಳು =೨೮
  3. ಸಂಕೀರ್ಣ ರಗಳೆಗಳು = ೨೬
  • ೨ನೇ ನಾಗವರ್ಮನ 'ಛಂದೋಬುಧಿ'ಯಲ್ಲಿರುವ ಪದ್ಯದಲ್ಲಿ ರಗಳೆಯ ಪ್ರಸ್ತಾಪವಿದೆ.

ಗಣ ನಿಯಮ ವಿಪರ್ಯಾಸದೊ
ಳೆಣೆ ಪದದೊಳ್ ಕೂಡಿ ಮಾತ್ರೆ ಸಮನಾಗೆ ಗುಣಾ
ಗ್ರಣಿಯ ಮತದಿಂದೆ ತಾಳವ
ಗಣನೆಗೊಡಂಬಟ್ಟುದದುವೆ ರಘಟಾ ಬಂಧಂ||

  • ಜಯಕೀರ್ತಿ ಹೇಳುವ ರಗಳೆಯ ಲಕ್ಷಣಗಳೆಂದರೆ-

ಸ್ವಚ್ಛಂದ ಸಂಜ್ಞಾ ರಘಟಾ ಮಾತ್ರಾಕ್ಷರ ಸಮೋದಿತ
ಪಾದದ್ವಂದ್ವ ಸಮಾಕೀರ್ಣಾ ಸುಶ್ರಾವ್ಯ ಸೈವ ಪದ್ದತಿಃ

  • ಕೇಶಿರಾಜನ 'ಶಬ್ದಮಣಿದರ್ಪಣ'ದ ಅಪಭ್ರಂಶ ಪ್ರಕರಣದಲ್ಲಿ 'ರಘಟಾ' ಎಂಬುದರ ತದ್ಭವ ರಗಳೆ ಎಂದಿದ್ದಾನೆ.
  • ಪಂಪಭಾರತದಲ್ಲಿ ಈ ರಗಳೆಯನ್ನು 'ತೋಮ ರಗಳೆ' ಎನ್ನಲಾಗಿದೆ.

ರಗಳೆಯ ಲಕ್ಷಣಗಳು[ಬದಲಾಯಿಸಿ]

  1. ಪ್ರತಿಪಾದದಲ್ಲೂ ಮಾತ್ರೆಗಳು ಸಮನಾಗಿರಬೇಕು.
  2. ಪಾದಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ.
  3. ಗಣಗಳ ಯೋಜನೆಯಲ್ಲಿ ಲಯಕ್ಕೆ ಹೊಂದುವ ವೈವಿಧ್ಯ ಇರಬೇಕು.
  4. ಎರಡೆರಡು ಪಾದಗಳ ಅಂತ್ಯದಲ್ಲಿ ಪ್ರಾಸವಿರಬೇಕು.
  5. ಸುಶ್ರಾವ್ಯವಾಗಿ, ತಾಳಬದ್ಧವಾಗಿರಬೇಕು.
  • ಕನ್ನಡದ 'ಲಲಿತ ರಗಳೆ' ಆಂಗ್ಲಭಾಷೆಯ 'ಬ್ಲಾನ್ಕ್ ವರ್ಸಸ್' ಎಂಬ ಛಂದಪ್ರಕಾರದ ಕೆಲವು ಸೌಲಬ್ಯಗಳನ್ನು ಅಳವದಿಸಿಕೊಂಡು 'ಸರಳ ರಗಳೆ', 'ಮಹಾಛಂದಸ್ಸು'ಗಳೆಂಬ ಹೆಸರುಗಳಿಂದ ಆಧುನಿಕ ಸಾಹಿತ್ಯದಲ್ಲಿ ವಿಕಾಸಗೊಂಡಿದೆ. ಸರಳ ರಗಳೆಯನ್ನು ಮಾಸ್ತಿಯವರು 'ಬಿಡಿವೃತ್ತ' ಎಂದು ಕರೆದರು. ಮಹಾಕವಿ ಕುವೆಂಪು ಈ ಛಂದಸ್ಸಿನಲ್ಲೇ 'ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ'ವನ್ನು ಬರೆದಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Prof. T. V. Venkatachala Shastri, Kannada Chandaswaroopa, DVK Murthy Publication, Mysore 3rd Edition 2008 p.267-315
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಗಳೆ&oldid=1198759" ಇಂದ ಪಡೆಯಲ್ಪಟ್ಟಿದೆ