ಶತಾವಧಾನಿ ಆರ್. ಗಣೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶತಾವಧಾನಿ ಗಣೇಶ್ ಇಂದ ಪುನರ್ನಿರ್ದೇಶಿತ)
ಶತಾವಧಾನಿ ಡಾ.ಆರ್.ಗಣೇಶ್
ಚಿತ್ರ:Shatavadhani-R-Ganesh.jpg
ಶತಾವಧಾನಿ ಆರ್.ಗಣೇಶ್
ಜನನ
ಗಣೇಶ

೦೪, ಡಿಸೆಂಬರ್, ೧೯೬೨
ಕೋಲಾರ, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ,
ಉದ್ಯೋಗಸಂಸ್ಕೃತ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಕಾಂಡ ಪಂಡಿತರು.ಒಟ್ಟಾರೆ ೧೮ ಭಾಷೆಗಳನ್ನು ಅಭ್ಯಾಸಮಾಡಿದ್ದಾರೆ. ಬಹು ಮಹತ್ವದ ಉಪನ್ಯಾಸಕಾರರು.
ಇದಕ್ಕೆ ಖ್ಯಾತರುಅವಧಾನ ಕಲೆಯಲ್ಲಿ ಪ್ರವೀಣರು.
ಜಾಲತಾಣಪದ್ಯಪಾನ.ಕಾಮ್,ಶತಾವಧಾನಿ ಆರ್.ಗಣೇಶ್

ಡಾ.ಆರ್.ಗಣೇಶ್, ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.

ಜನನ, ವಿದ್ಯಾಭ್ಯಾಸ, ವೃತ್ತಿಜೀವನ[ಬದಲಾಯಿಸಿ]

ಗಣೇಶರು,[೧] ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಗಳ ಮಗನಾಗಿ ೧೯೬೨ ರ, ಡಿಸೆಂಬರ್ ೪ ರಂದು ಕೋಲಾರದಲ್ಲಿ ಜನಿಸಿದರು. . ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಯಾಂತ್ರಿಕ ಅಭಿಯಂತರ ವಿಷಯದಲ್ಲಿ ಪದವಿ ಪಡೆದರು. ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ ಗಳಿಸಿದರು. ಅಲ್ಲಿಂದ ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಗಣೇಶರ ಪೂರ್ವಜರು 'ದೇವರಾಯ ಸಮುದ್ರಂ' ದಿಂದ ಬಂದು ಕೋಲಾರದಲ್ಲಿ ನೆಲಸಿದವರು. ಮನೆಯಲ್ಲಿ ತಮಿಳು ಭಾಷೆಯನ್ನು ಆಡುತ್ತಿದ್ದರು. ಕೋಲಾರದ ಪರಿಸರದಲ್ಲಿ ತೆಲುಗು ಬಹಳವಾಗಿ ಬಳಕೆಯಲ್ಲಿರುವ ಭಾಷೆಯಾದ್ದರಿಂದ ಅದನ್ನೂ ಕಲಿಯುವ ಆಶೆಯಾಯಿತು. ಕನ್ನಡ ಅವರ ಪ್ರಿಯವಾದ ಭಾಷೆ ಗಳಲ್ಲೊಂದು. ಅದರಲ್ಲಿ ಅವರು ಕೃತಿ ರಚನೆಯನ್ನು ಮಾಡಬಲ್ಲವರಾಗಿದ್ದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಜರುಗಿತು. ಪಕ್ಕದ 'ಗೌರಿಬಿದನೂರಿ'ನಲ್ಲಿ ಪ್ರೌಢ ಶಾಲಾಭ್ಯಾಸವಾಯಿತು.

ವ್ಯಕ್ತಿತ್ವ[ಬದಲಾಯಿಸಿ]

ಎಂಜಿನಿಯರಿಂಗ್‌ನಿಂದ ಹಿಡಿದು ತತ್ವಶಾಸ್ತ್ರದವರೆಗೆ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿರುವ 'ಗಣೇಶ್,[೨] ಕನ್ನಡದ/ಕರ್ನಾಟಕ, ಭಾರತದ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣವ್ಯಕ್ತಿಯಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಅವರಿಗೆ ಒಬ್ಬ ಕನ್ನಡದ ಹೆಸರಾಂತ ಕವಿಯಾಗಬೇಕೆನ್ನುವ ತುಡಿತವಿತ್ತು. ಆದರೆ ತಂದೆ-ತಾಯಂದಿರ ಆಶೆಗೆ ಮನ್ನಣೆ ಇತ್ತು. ಯಂತ್ರಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಪದವಿ, ಲೋಹಶಾಸ್ತ್ರ ಹಾಗೂ ವಸ್ತುವಿಜ್ಞಾನದಲ್ಲಿ ತಮ್ಮ ಪಿ.ಎಚ್ ಡಿ. ಪದವಿಯನ್ನು ಪಡೆದು ವೃತ್ತಿಯಿಂದ ಅಧ್ಯಾಪಕರಾಗಿದ್ದವರು. ಇದ್ದಕ್ಕಿದ್ದಂತೆಯೇ ಅವಕಾಶ ದೊರೆತಾಗ, ಅವಧಾನ ಕಲೆಯತ್ತ ತಮ್ಮ ಪೂರ್ಣ ಗಮನವನ್ನು ನೀಡಿ, ಅದನ್ನು ಸಂಪೂರ್ಣವಾಗಿ ಅರಗಿಸಿಕೊಂಡು, ಅದರ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದಾರೆ. 'ಸಹಸ್ರಾವಧಾನ',

ಅವಧಾನ ಕಲೆಯಲ್ಲಿ ಸಾಧನೆಗಳು[ಬದಲಾಯಿಸಿ]

ಹಿರಿಯ ಕವಿಶ್ರೇಷ್ಠರಾಗಿದ್ದ ಬೆಳ್ಳಾವೆ ನರಹರಿಶಾಸ್ತ್ರಿ ಗಳು, ೧೯೩೩-೩೬ ರ ಸಮಯದಲ್ಲಿ ಅವಧಾನವೊಂದನ್ನು ಮಾಡಿ ತೋರಿಸಿದರು. ಅವರಿಗೆ ಪ್ರೇರಣೆಯೆಂದರೆ, ತೆಲುಗಿನ ಪಿಸುಪಾಟಿ ಚಿದಂಬರ ಶಾಸ್ತ್ರಿಗಳು. ಕನ್ನಡದ ಇತಿಹಾಸದಲ್ಲಿಯೇ ಅವಧಾನ ಕಲೆಯ ಬಗ್ಗೆ ಮೊದಲ ಉಲ್ಲೇಖ ಸಿಗುವುದಾದರೂ ಅವಧಾನ ಮಾಡುವ ಪ್ರತಿಭೆಯುಳ್ಳವರು ಯಾರೂ ಇರಲಿಲ್ಲ.[೩] ಲೇಪಾಕ್ಷಿ ಮೆದಾವರಂ ಮಲ್ಲಿಕಾರ್ಜುನ ಶರ್ಮರನ್ನು ಕಂಡು, ಗಣೇಶರು, ತಾವೂ ಪ್ರಭಾವಿತರಾಗಿ ತಮ್ಮ ಗೆಳೆಯರ ಮುಂದೆ ೧೯೮೧ ರಿಂದ ೮೭ ರ ತನಕ ಆಗಾಗ ಮಾಡಿ ತೋರಿಸಿದ್ದರು. ಒಟ್ಟು ೧೩ ಬಾರಿ. ೧೯೮೧ ರಲ್ಲಿ ಗಣೇಶರು ಅವಧಾನಕಲೆಯನ್ನು ಪ್ರಸಿದ್ಧಿಪಡಿಸಿದರು. ಹೀಗೆ ಆರಂಭವಾದ ಅವರ ಆಸಕ್ತಿ, ೧೯೮೭ ರಲ್ಲಿ ಕೋಲಾರದಲ್ಲಿ ಮೊಟ್ಟ ಮೊದಲು ಮೊಳಕೆಯೊಡೆಯಿತು. ಅದು 'ಡಾ. ಡಿ.ವಿ.ಜಿ'ಯವರ ನೂರನೆಯ ವರ್ಧಂತ್ಯುತ್ಸವ' ದ ಸುಸಂದರ್ಭದಲ್ಲಿ. ಸಾವಿರಾರು ಜನ ನೆರೆದಿದ್ದ ಸಭಾಂಗಣದಲ್ಲಿ ೧೦೦ ನೆಯ ಮತ್ತು ನಂತರ ತಮ್ಮ ೨೦೦ ನೆಯ 'ಅಷ್ಟಾವಧಾನ' ಗಳನ್ನೂ ತಮ್ಮ ತವರೂರಾದ ಕೋಲಾರದಲ್ಲಿಯೇ ನೆರವೇರಿಸಿದರು. ಮಳೆಯನ್ನೂ ಲೆಕ್ಕಿಸದೆ ಬಂದ ಜನಗಳು ಸಾವಿರಾರು. ೮ ಭಾಷೆಗಳಲ್ಲಿ ಸಂಸ್ಕೃತ, ಕನ್ನಡ, ತೆಲುಗುಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದರು. 'ಚಿತ್ರಕಾವ್ಯ' ಗಣೇಶ್ ರವರ ವಿಶೇಷತೆಗಳಲ್ಲೊಂದು. ಅವರು, ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಒಮ್ಮೆ ಭೆಟ್ಟಿ ಕೊಟ್ಟ ಸಮಯದಲ್ಲಿ ೨೦ ಪ್ರದರ್ಶನಗಳನ್ನು ನೀಡಿದರು. ೧೯೯೧ ರ ಡಿಸೆಂಬರ್, ೧೫ ರಂದು ಮೊದಲ ಶತಾವಧಾನ ಪ್ರದರ್ಶನವನ್ನು ಅವರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಪ್ರಾಂಗಣದಲ್ಲಿ ಇಟ್ಟುಕೊಂಡಿದ್ದರು. ಇದಾದ ಕೇವಲ ೧೫ ದಿನಗಳಲ್ಲೇ ಮತ್ತೊಂದು ೧೯೯೨ ರಲ್ಲಿ, ಮತ್ತು ೧೯೯೩ ರಲ್ಲಿ ಹಾಗೆಯೇ ೨೦೧೨ ರಲ್ಲಿ, ಸಂಪೂರ್ಣ ಕನ್ನಡದಲ್ಲಿ ನಡೆಸಿಕೊಟ್ಟರು. ಎಳೆಯರಿಗೆ ಅನುಕೂಲವಾಗುವಂತೆ ೨ ಪುಸ್ತಕಗಳ ರಚನೆಮಾಡಿದರು.

  • ಶತಾವಧಾನ ಶಾರದೆ,
  • ಶತಾವಧಾನ ಶ್ರೀವಿದ್ಯೆ,

ಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ. ಡಾ. ಗಣೇಶ್ ಬಹು ಭಾಷಾ ಪಂಡಿತರು :

  1. ಕಾವ್ಯಮೀಮಾಂಸೆ,
  2. ಛಂದಶ್ಯಾಸ್ತ್ರ,
  3. ವೇದಾಂತ
  4. ಉಪನಿಷತ್,
  5. ಧರ್ಮಶಾಸ್ತ್ರ,
  6. ಇತಿಹಾಸ,
  7. ಸಂಸ್ಕೃತಿ,
  8. ಕಲೆ,
  9. ಭಾರತೀಯ ತತ್ವಶಾಸ್ತ್ರ,
  10. ವ್ಯಾಕರಣ,
  11. ಅಲಂಕಾರ ಶಾಸ್ತ್ರ

ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದಾರೆ. ಅಲ್ಲದೆ ಲಲಿತ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮುಂತಾದುವುಗಳಲ್ಲಿಯೂ ಸಹಾ ಪ್ರಾವೀಣ್ಯವನ್ನು ಪಡೆದಿದ್ದಾರೆ. ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಶೌರಸೇನಿ, ಮರಾಠೀ, ಬಂಗಾಲೀ, ಮುಂತಾದುವುಗಳಲ್ಲದೇ ವಿದೇಶೀಯ ಭಾಷೆಗಳಾದ ಇಂಗ್ಲೀಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ಮುಂತಾದ ಒಟ್ಟು ೧೮ ಭಾಷೆಗಳಲ್ಲಿಯೂ ಸಹಾ ಅಪಾರ ಪರಿಣತಿಯನ್ನು ಹೊಂದಿದ್ದಾರೆ. ೨೨ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿರುವ ಡಾ. ಗೋವಿಂದ ಪೈ ರವರ ಮಹತ್ಸಾದನೆಯನ್ನು ಅವರು ತಮ್ಮ ಆದರ್ಶವನ್ನಾಗಿಟ್ಟು ಕೊಂಡಿದ್ದಾರೆ.

ಕವಿ, ಚಿಂತಕ, ಉಪನ್ಯಾಸಕಾರ[ಬದಲಾಯಿಸಿ]

ಸ್ವತಃ ಉತ್ತಮ ಕವಿಯೂ, ಉಪನ್ಯಾಸಕರೂ, ಚಿಂತಕರೂ ಆಗಿರುವ ಡಾ. ಗಣೇಶ್ ಇದುವರೆವಿಗೂ ನೂರಕ್ಕೂ ಮಿಕ್ಕಿದಂತೆ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕನ್ನಡ, ಸಂಸ್ಕೃತ ಹಾಗೂ ತೆಲುಗು ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ,ಯಕ್ಶಗಾನ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಅಪೂರ್ವವಾದ ಹಾಗೂ ಆಸಕ್ತಿದಾಯಕವಾದ ವಿಚಾರಗಳನ್ನು ಚರ್ಚಿಸಿದ್ದಾರೆ. ಉತ್ತಮ ಸಂಶೋಧಕರೂ ಆಗಿರುವ ಇವರು ಪ್ರಾಚೀನ ಭಾರತದ ವಾಸ್ತುಶಾಸ್ತ್ರ ಹಾಗೂ ತಂತ್ರಜ್ಞಾನವೂ ಸೇರಿದಂತೆ ವೇದಗಳ ಇತಿಹಾಸ ಮುಂತಾದ ವಿರಳ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಸಂಸ್ಕೃತದಲ್ಲಿ ಹನ್ನೆರಡಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು ಹದಿನಾರು ಕಾವ್ಯಗಳನ್ನೂ ರಚಿಸಿರುವ ಇವರು ಕನ್ನಡದಲ್ಲಿ ಎಂಟು ಕಾವ್ಯಗಳನ್ನು, ಮೂರು ಕಾದಂಬರಿಗಳನ್ನು ಹಾಗೂ ಆರು ಅನುವಾದಗಳನ್ನು ಪೂರೈಸಿದ್ದಾರೆ.

ಕನ್ನಡ ಭಾಷೆಯ ಪುನರುತ್ಥಾನಕ್ಕಾಗಿ ದುಡಿಯುತ್ತಿದ್ದಾರೆ[ಬದಲಾಯಿಸಿ]

`ಕೃತಿ ಭುವನದ ಭಾಗ್ಯದಿಂದಮಕ್ಕುಂ’ ಎಂಬ ಕವಿ, ನೇಮಿಚಂದ್ರನ ನುಡಿಯಂತೆ ಸಮಸ್ತ ಕನ್ನಡಿಗರ ಪುಣ್ಯದ ಫಲವಾಗಿ ಗಣೇಶ್‌ರಂಥ ಅವಧಾನಿಗಳು ಹಾಗೂ ಅವಧಾನಗಳು ಲಭ್ಯ. ಜನರಲ್ಲಿ ದಿನೇ ದಿನೇ ಕುಸಿಯುತ್ತಿರುವ ಭಾಷೆ, ಸಾಹಿತ್ಯಗಳ ಆಸಕ್ತಿಯ ನಡುವೆ ಅವುಗಳ ಪುನರುಜ್ಜೀವನ ಕ್ಕಾಗಿ ದುಡಿಯುತ್ತಿರುವ ಕನ್ನಡದ ಸೇವಕರಿಗೆ, ಗಣೇಶ್‌ರಂಥ ಅವಧಾನಿಗಳ ಇರುವಿಕೆ ಹಾಗೂ ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸಂದಿರುವ, ಸಂದಲಿರುವ ಕಾಣಿಕೆಗಳು ಅನನ್ಯ.

ಉಲ್ಲೇಖಗಳು[ಬದಲಾಯಿಸಿ]

  1. ಪರಿಚಯ - ಶತಾವಧಾನಿ ಡಾ||ರಾ ಗಣೇಶ್
  2. "ಆರ್ಕೈವ್ ನಕಲು". Archived from the original on 2014-12-16. Retrieved 2014-03-28.
  3. 'ಕಥಾಕಾಲ', 'ಅವಧಾನ'-ಒಂದು ಅದ್ಭುತ ಕಲೆ'

ಬಾಹ್ಯ ಸಂಪರ್ಕ[ಬದಲಾಯಿಸಿ]