ಮಹಾರಾಜಪುರಂ ಸಂತಾನಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗೀತ ಕಲಾನಿಧಿ ಮಹಾರಾಜಪುರಂ ಸಂತಾನಂ (ಡಿಸೆಂಬರ್ ೩, ೧೯೨೮- ಜೂನ್ ೨೪, ೧೯೯೨) ೨೦ನೆಯ ಶತಮಾನದ ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲಿ ಒಬ್ಬರು. ತಂದೆ ಮಹಾರಾಜಪುರಂ ವಿಶ್ವನಾಥ್ ಅಯ್ಯರ್ ನಂತೆಯೇ ಇವರೂ ಶಾಸ್ತ್ರಿಯ ಗಾಯಕ.

ಜೀವನ[ಬದಲಾಯಿಸಿ]

ಇವರು ತಮಿಳುನಾಡಿನ ಸಿರುನಂಗುರ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರು ಶ್ರೀಲಂಕಾದ ರಾಮನಾಥನ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ನಂತರ ಚೆನ್ನೈನಲ್ಲಿ ನೆಲೆಸಿದರು.

ಸಂಗೀತ[ಬದಲಾಯಿಸಿ]

ತಂದೆಯ ಹತ್ತಿರ ಸಂಗೀತ ಅಭ್ಯಾಸದ ಜೊತೆಗೆ ಇವರು ಮೆಳತ್ತೂರು ಸಾಮ ದೀಕ್ಷಿತರ ಶಿಷ್ಯರಾದರು. ಮಹಾರಾಜಪುರಂ ಸಂತಾನಂ ಗಾಯನದ ಜೊತೆಗೆ ಹಲವು ಕೃತಿಗಳನ್ನು ರಚನೆ ಮಾಡಿದರು. ಅಯ್ಯಪ್ಪ, ಕಂಚಿ ಶಂಕರಾಚಾರ್ಯ, ಶ್ರೀ ಶ್ರೀ ಚಂದ್ರಶೇಖರೇಂದ್ರ ಸ್ವಾಮಿಗಳು (ಮಹಾ ಪೆರಿಯಾವರ್) ಕುರಿತು ಬಹಳಷ್ಟು ಕೃತಿಗಳನ್ನು ರಚಿಸಿದರು. "ಭೋ ಶಂಭೋ" (ರೇವತಿ), "ಮಧುರ ಮಧುರ" (ಬಾಗೇಶ್ರಿ) ಎರಡೂ ಸ್ವಾಮಿ ದಯಾನಂದ ಸರಸ್ವತಿ ವಿರಚಿತ, "ಉನ್ನೈ ಅಲ್ಲಾಲ್"(ಕಲ್ಯಾಣಿ), ಸದಾ ನಿನ್ನ ಪದಮೇ ಗತಿ (ಷಣ್ಮುಖಪ್ರಿಯ), ಶ್ರೀಚಕ್ರ ರಾಜ (ರಾಗಮಾಲಿಕೆ) "ನಳಿನಕಾಂತಿಮತಿಂ" (ರಾಗಮಾಲಿಕೆ), "ಕ್ಷೀರಾಬ್ದಿ ಕನ್ನಿಕೆ" (ರಾಗಮಾಲಿಕೆ) ಮುಂತಾದವು ಮಹಾರಾಜಪುರಂ ಸಂತಾನಂ ಅವರ ಪ್ರಸಿದ್ಧ ಗಾಯನ ಕೃತಿಗಳು. ಇವರ ಇತರೆ ಪ್ರಸಿದ್ಧ ಗಾಯನ ಪುರಂದರ ದಾಸರ ಕೃತಿಗಳಾದ "ನಾರಾಯಣ ನಿನ್ನ" (ಶುದ್ಧ ಧನ್ಯಾಸಿ) ಮತ್ತು "ಗೋವಿಂದ ನಿನ್ನ". ಇವರ ಗಾಯನ ಭಕ್ತಿ ಪೂರಿತವಾಗಿದ್ದವು. ಇವರ ಮಕ್ಕಳಾದ ಮಹಾರಾಜಪುರಂ ಎಸ್ ಶ್ರೀನಿವಾಸನ್, ಮಹಾರಾಜಪುರಂ ಎಸ್ ರಾಮಚಂದ್ರನ್ ಮತ್ತು ಇವರ ಪ್ರಮುಖ ಶಿಷ್ಯ ಡಾ. ಆರ್ ಗಣೇಶ್ ಇವರ ಸಂಗೀತ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಪ್ರತಿ ವರ್ಷ ೩ನೇ ಡಿಸೆಂಬರ್ ಮಹಾರಾಜ ಪುರಂ ಸಂತಾನಂ ದಿನವಾಗಿ ಆಚರಿಸಲಾಗುತ್ತದೆ.

ನಿಧನ[ಬದಲಾಯಿಸಿ]

ಜೂನ್ ೨೪, ೧೯೯೨ರಂದು ಕಾರಿನ ಅಪಘಾತದಲ್ಲಿ ಮಹಾರಾಜಪುರಂ ಸಂತಾನಂ ನಿಧನ ಹೊಂದಿದರು.

ಪ್ರಶಸ್ತಿಗಳು ಮತ್ತು ಬಿರುದು[ಬದಲಾಯಿಸಿ]

  • ಪದ್ಮಶ್ರೀ - ೧೯೯೦
  • "ಸಂಗೀತ ಕಲಾನಿಧಿ" ಮದ್ರಾಸ್ ಸಂಗೀತ ಅಕಾಡೆಮಿ ಅವರಿಂದ - ೧೯೮೯
  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ - ೧೯೮೪
  • ಕಲೈಮಾಮಣಿ ಪ್ರಶಸ್ತಿ - ತಮಿಳುನಾಡು ಸರ್ಕಾರದ ವತಿಯಿಂದ
  • "ಸಂಗೀತ ಸುಧಾಕರ" - ಯೋಗ ವೇದಾಂತ ವಿಶ್ವವಿದ್ಯಾಲಯ, ಋಷಿಕೇಶ್ ವತಿಯಿಂದ
  • "ಗಾನ ಕಲಾನಿಧಿ" - ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು, ಶೃಂಗೇರಿ ಶಾರದಾ ಪೀಠ, ಅವರಿಂದ
  • "ಸಂಗೀತ ಸಾಗರಮೃತ ವರ್ಷಿ" - ಶ್ರೀ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳು, ಕಂಚಿ ಕಾಮಕೋಟಿ ಪೀಠ, ಅವರಿಂದ