ಪರ್ವ(ಕಾದಂಬರಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರ್ವ

ಮಹಾಭಾರತದ ಕಥೆ:ವಾಸ್ತವಿಕ ದೃಷ್ಟಿಕೋನದಲ್ಲಿ[ಬದಲಾಯಿಸಿ]

ಪರ್ವ ಎಸ್. ಎಲ್. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಪರ್ವದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ಮೂಡಿಸಿದ್ದಾರೆ.

ವಿಮರ್ಶೆ & ಅಭಿಪ್ರಾಯಗಳು[ಬದಲಾಯಿಸಿ]

  • ಪೃಥ್ವಿ ದತ್ತ ಚಂದ್ರ ಶೋಭಿ;
  • ಆಧುನಿಕಪೂರ್ವ ಸಾಂಪ್ರದಾಯಿಕ ಕಾವ್ಯಮಾದರಿಗಳನ್ನು ಅನುಸರಿಸಲು ಅವಕಾಶವಿದ್ದ ಮಹಾಕಾವ್ಯದಂತಹ ಯಾವ ಸಾಹಿತ್ಯ ಪ್ರಕಾರವನ್ನೂ ಅವರು ಆರಿಸಲಿಲ್ಲ. ಅವರ ಆಯ್ಕೆಯು ಆಧುನಿಕ ಪಶ್ಚಿಮವು ತನ್ನ ಸಾಮಾಜಿಕ ವಾಸ್ತವವನ್ನು ಅರಿಯಲು ಕಟ್ಟಿಕೊಂಡ ಬಹುಮುಖ್ಯ ಸಾಹಿತ್ಯಪ್ರಕಾರವಾದ ಕಾದಂಬರಿಯೇ ಆಗಿತ್ತು. ಅದರೊಳಗೆ ಅವರು ಬಳಸುವ ಸಾಹಿತ್ಯಕ ಸತ್ಯದ ಪರಿಕಲ್ಪನೆಯೂ ವಾಸ್ತವವಾದಿ ಸತ್ಯದ ಪರಿಕಲ್ಪನೆಯೇ ಆಗಿದೆ. ಈ ಎಲ್ಲ ಅಂಶಗಳು ಭೈರಪ್ಪನವರು ಆಯ್ಕೆ ಮಾಡಿಕೊಳ್ಳುವ ವಸ್ತುವು- ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ನಗರದ ಸಮಾಜ ಇಲ್ಲವೆ ಗ್ರಾಮೀಣ ಸಮಾಜ- ಏನೇ ಇದ್ದರೂ ಸಾಮಾನ್ಯವಾಗಿ ಇರುತ್ತವೆ. ಆದುದರಿಂದಲೇ ಭೈರಪ್ಪನವರನ್ನು ವಿವಾದಾತ್ಮಕ ಹೇಳಿಕೆಗಳನ್ನು ಮಾಡುವ ಉತ್ತರ ಭಾರತದ ಸಾಧು- ಮಹಂತನೊಬ್ಬನಂತೆ ನೋಡಲು ಸಾಧ್ಯವಿಲ್ಲ.
  • ವಾಸ್ತವವಾದಿ ಕಾದಂಬರಿಯ ಬಹುಮುಖ್ಯ ಲಕ್ಷಣವೆಂದರೆ ಸಂಭವನೀಯತೆ (ಪ್ರಾಬಬಲಿಟಿ). ಭೈರಪ್ಪನವರ ಕಾದಂಬರಿಗಳಲ್ಲಿ (ಅದರಲ್ಲೂ ಐತಿಹಾಸಿಕ ಮತ್ತು ಪೌರಾಣಿಕ ಕೃತಿಗಳಲ್ಲಿ) ಓದುಗನನ್ನು ಆಕರ್ಷಿಸುವ ಬಹುದೊಡ್ಡ ಗುಣವಿದು. ಉದಾಹರಣೆಗೆ ‘ಪರ್ವ’ ಕಾದಂಬರಿಯಲ್ಲಿ ಭೈರಪ್ಪನವರು ಮಹಾಭಾರತದ ಮಾನವಶಾಸ್ತ್ರೀಯ ಅನ್ವೇಷಣೆಯ ಮೂಲಕ ಓದುಗನಿಗೆ ಕೇವಲ ಹೊಸ ಕಥನವನ್ನು ನೀಡುತ್ತಿಲ್ಲ. ಅದಕ್ಕಿಂತ ಮಿಗಿಲಾಗಿ ಆಧುನಿಕ ಓದುಗ ತನ್ನ ನಿಜ ಬದುಕಿನ ಅನುಭವಗಳ ಮೂಲಕ ಕಲ್ಪಿಸಿಕೊಳ್ಳಬಹುದಾದ ಮಹಾಭಾರತದ ಸಂಭವನೀಯ ಆವೃತ್ತಿಯನ್ನು ಕೊಡುತ್ತಾರೆ.
  • ಮೂರು ಸಾವಿರ ವರ್ಷಗಳ ಹಿಂದಿನ ಭೌತಿಕ ಬದುಕು, ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಹೇಗಿದ್ದಿರಬಹುದು ಎನ್ನುವ ಮಾನವಶಾಸ್ತ್ರಜ್ಞನ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾರೆ. ಭೈರಪ್ಪನವರ ಸಾಹಿತ್ಯಕ ಕಲ್ಪನೆಯಲ್ಲಿ (ಇಮ್ಯಾಜಿನೇಶನ್) ಕಲ್ಪಿತ ಅದ್ಭುತಗಳಿಗೆ ಇರುವ ಸ್ಥಳ ಬಹಳ ಕಡಿಮೆ. ಇಂತಹ ಕಲ್ಪಿತ ಅದ್ಭುತಗಳನ್ನು ಕಿತ್ತುಹಾಕಿ, ವಾಸ್ತವಕ್ಕೆ ಎಷ್ಟು ಹತ್ತಿರಕ್ಕೆ ಬರಲು ಸಾಧ್ಯ ಎನ್ನುವುದು ಅವರ ಪ್ರಯತ್ನ. ಹಾಗಾಗಿಯೆ ಪೌರಾಣಿಕ ಪಾತ್ರಗಳು ಮನುಷ್ಯ ಸಹಜವಾದ ಮಿತಿಗಳಿಂದ ಬಳಲುತ್ತವೆ. ‘ಪರ್ವ’ದ ಭೀಷ್ಮ ಮತ್ತು ದ್ರೋಣರು, ಕೌರವ ಸೇನಾಪತಿಯಾದರೂ, ರೊಟ್ಟಿ ತಿನ್ನಲಾಗದ, ನಡೆಯಲು ಕಷ್ಟಪಡುವ ಮುದುಕರು. ಓದುಗನಿಗೆ ವಿನೂತನವೆನಿಸುವ ಇಂತಹ ವಾಸ್ತವವಾದಿ ಕಲ್ಪನೆ ಭೈರಪ್ಪನವರ ಸಾಹಿತ್ಯಿಕ ಕಲ್ಪನೆಯ ಆಕರ್ಷಣೆ ಮತ್ತು ಅತ್ಯಂತ ದೊಡ್ಡಮಿತಿ ಸಹ.[೧]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಪೃಥ್ವಿ ದತ್ತ ಚಂದ್ರ ಶೋಭಿ:ಭೈರಪ್ಪ ಕಥನಶೈಲಿ ಮತ್ತು ವಾಸ್ತವಿಕ ನೆಲೆಗಟ್ಟು;10 Mar, 2017". Archived from the original on 2017-03-13. Retrieved 2017-03-12.