ಜಯತೀರ್ಥರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಜಯತೀರ್ಥರು- ದ್ವೈತವೇದಾಂತದಲ್ಲಿ ಶ್ರೀಮಧ್ವಾಚಾರ್ಯರ ಅನಂತರ ಅತ್ಯಂತ ಪ್ರಭಾವಶಾಲೀ ವ್ಯಕ್ತಿತ್ವವನ್ನು ಪ್ರದರ್ಶಿಸಿದ ವಿದ್ವಾಂಸರು, ವೇದಾಂತಿಗಳು. ಇವರು ಟೀಕಾಚಾರ್ಯರು ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದಾರೆ. ಹೈದಾರಾಬಾದು ಹಾಗೂ ಮಹಾರಾಷ್ಟ್ರ ವಿಭಾಗಗಳಲ್ಲಿ ದ್ವೈತಮತ ಹಾಗೂ ಭಕ್ತಿಮಾರ್ಗ ಪ್ರಚಾರಕ್ಕೆ ಹೆಚ್ಚಾಗಿ ಕಾರಣರಾದವರು ಜಯತೀರ್ಥರು. ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಕಾಗಿಣೀನದಿಯ ತೀರದಲ್ಲಿ ಇದ್ದ ಮಳಖೇಡ (ರಾಷ್ಟ್ರಕೂಟರ ಕಾಲದ ಮಾನ್ಯಖೇಟ) ಇವರ ಕಾರ್ಯಕೇಂದ್ರವಾಗಿತ್ತು.

ವಿದ್ವತ್ತು[ಬದಲಾಯಿಸಿ]

ಬ್ರಹ್ಮಸೂತ್ರಗಳಿಗೆ ಮಧ್ವಾಚಾರ್ಯರು ಬರೆದ ಮಹಾಭಾಷ್ಯವನ್ನು ಸಮಂಜಸವಾಗಿ ಅರ್ಥಮಾಡಿಕೊಳ್ಳಲು ಇವರು ಬರೆದ ತತ್ತ್ವಪ್ರಕಾಶಿಕಾದಿ ವ್ಯಾಖ್ಯಾನಗಳಿಗೇ ಮೊರೆ ಹೋಗಬೇಕು. ಮದ್ವವೇದಾಂತದಲ್ಲಿ ಪ್ರವೇಶ ಪಡೆಯುವುದಕ್ಕೆ ಮಹಾದ್ವಾರವಿದ್ದಂತಿದೆ ಇವರ ವಾದಾವಳಿ ಎಂಬ ಗ್ರಂಥ ಸಹಾಯಕವಾಗಿದೆ. ಶ್ರೀಮನ್ ನ್ಯಾಯಸುಧಾ ಇವರ ಬೃಹದ್ ಗ್ರಂಥ. ಮಾಧ್ವದ್ವೈತ ವೇದಾಂತದ ಪರಮ ಸಮರ್ಥನಾತ್ಮಕವಾದ ವ್ಯಾಖ್ಯಾನ ಗ್ರಂಥವಿದು. ತಾನು ಶಬ್ದಾಬ್ಧಿಯ ಗಾಡತೆಯನ್ನೂ ನಿಗಮಚರ್ಚಾ ಚಾತುರ್ಯವನ್ನೂ ನ್ಯಾಯ ಪ್ರೌಢಿಮೆಯನ್ನೂ ಹೆಚ್ಚಾಗಿ ಸಂಪಾದಿಸಿದವನಲ್ಲವೆಂದು ಜಯತೀರ್ಥರು ಹೇಳಿಕೊಂಡಿರುವರಾದರೂ ಇವರ ಗ್ರಂಥ ಇವೆಲ್ಲದರಲ್ಲಿಯೂ ಇವರಿಗಿದ್ದ ಪ್ರಕಾಂಡ ಪಾಂಡಿತ್ಯ, ಸಾಮಥ್ರ್ಯಗಳನ್ನು ಪ್ರಸ್ತಾಪಿಸುತ್ತದೆ. ಅದಕ್ಕೆಂದೇ ಸುಧಾ ವಾ ಪಠಾನೀಯಾ, ವಸುಧಾ ವಾ ಪಾಲನೀಯಾ- ಸುಧಾ ಓದಬೇಕು. ಪ್ರಪಂಚವನ್ನಾಳಬೇಕು ಎಂಬುದು ಆಗಿನ ಆದರ್ಶವಾಗಿತ್ತು. ವೇದಾಂತ ಪ್ರಪಂಚದಲ್ಲಿ ಈ ಗ್ರಂಥಕ್ಕೆ ಅಂಥ ಮನ್ನಣೆಯಿದೆ. ಇದರಂತೆಯೇ ಅನೇಕ ಉಪನಿಷತ್ತುಗಳಿಗೂ ಇವರ ಟೀಕೆಗಳೇ ಆಧಿಕೃತ ವ್ಯಾಖ್ಯಾನ ಒದಗಿಸುತ್ತವೆ.

ಬದುಕು[ಬದಲಾಯಿಸಿ]

ಜಯತೀರ್ಥರ ಕಾಲ 14ನೆಯ ಶತಮಾನ. ಮಹಾರಾಷ್ಟ್ರದ ಅಂಚಿನಲ್ಲಿ ಇರುವ ಮಂಗಳವೇಡೆ ಗ್ರಾಮದ ದೇಶಪಾಂಡೆ ಮನೆತನದಲ್ಲಿ ಇವರು ಜನಿಸಿದರು. ಇವರ ಬಾಲ್ಯನಾಮ ಧೋಂಡೂ ಪಂತ ಎಂದು. ತಂದೆ ರಘುನಾಥರಾಯ. ಶ್ರೀಮಂತಿಕೆ ಮತ್ತು ರಾಜಕೀಯ ಅಧಿಕಾರಗಳು ಹೇರಳವಾಗಿದ್ದ ಮನೆಯಲ್ಲಿ ಬೆಳೆದನಾಗಿ ಜಯತೀರ್ಥರು ಸ್ವೇಚ್ಛೆಯಾಗಿ ಉಂಡು ತಿಂದು, ಕುದುರೆ ಸವಾರಿ, ಓಡಾಟಗಳಲ್ಲಿ ಕಾಲಕಳೆಯುತ್ತ ದೊಡ್ಡವರಾದರು.

ಒಮ್ಮೆ, ಮದುವೆಯಾದ ಹೊಸದರಲ್ಲಿಯೇ, ಕುದುರೆ ಸವಾರಿ ಹೊರಟ ಕುಮಾರ ದೇಶಪಾಂಡೆ ಭೀಮಾ ನದಿಯನ್ನು ತಲಪುವ ಹೊತ್ತಿಗೆ ಮಧ್ಯಾಹ್ನವಾಗಿ ಬಾಯಾರಿಕೆಯಾಯಿತಂತೆ. ಭೀಮಾನದಿಯಲ್ಲಿ ಕುದುರೆಯನ್ನು ಈಜುಬಿಟ್ಟು ಕುದುರೆ ಮುಳುಗುವಷ್ಟು ಬಂದ ನದೀ ಪ್ರವಾಹಕ್ಕೆ ಬಾಯಿ ಹಚ್ಚಿ ನೀರು ಕುಡಿಯಲಾರಂಭಿಸಿದರಂತೆ. ಎದುರಿನ ದಡದಲ್ಲಿ ಕುಳಿತು ಇದನ್ನೆಲ್ಲ ನೋಡುತ್ತಿದ್ದ ವೃದ್ಧ ತಾಪಸ ಯತಿ ಅಕ್ಷೋಭ್ಯತೀರ್ಥರು ಈ ತರುಣರನ್ನು ಕೂಗಿ ಕರೆದು ಕಿಂ ಪಶುಃ ಪೂರ್ವದೇಹೇ-ಹಿಂದಿನ ಜನ್ಮದಲ್ಲಿ ನೀನು ಪಶುವೇನಾದರೂ ಆಗಿದ್ದೆಯಾ-ಎಂದು ಕೇಳಿದರಂತೆ. ಈ ಪ್ರಶ್ನೆ ದೇಶಪಾಂಡೆಯವರ ಜಾಗ್ರತಿಗೆ ಕಾರಣವಾಯಿತು ; ಹಿಂದಿನ ಜನ್ಮದಲ್ಲಿ ತಾವು ಮಧ್ವಾಚಾರ್ಯರ ಗ್ರಂಥಭಾರವನ್ನು ಹೊತ್ತ ಎತ್ತೆಂಬ ಭಾವ ಸ್ಫುರಿಸಿ ತನ್ನ ಮೇಲೆ ದ್ವೈತ ವೇದಾಂತ ಜ್ಞಾನಸಂಪಾದನೆ ಹಾಗೂ ಸಮರ್ಥನೆಗಳ ಭಾರವಿದೆಯೆಂಬ ಪ್ರಜ್ಞೆ ಇವರಲ್ಲಿ ಉದಯವಾಯಿತು. ಯುವಕ ದೇಶಪಾಂಡೆಯವರು ಆಚೆಯ ದಡತಲಪಿ ಅಕ್ಷೋಬ್ಯತೀರ್ಥರ ಅಡಿಗೆರಗಿದರು. ಈ ತೇಜಸ್ವೀ ಯುವಕನ ಭವಿಷ್ಯ ಅಕ್ಷೋಭ್ಯತೀರ್ಥರ ಕಣ್ಣೆದುರಿಗೆ ಸ್ವಷ್ಟವಾಗಿ ಕಂಡಿತು. ಯತಿಗಳ ಸಾನ್ನಿಧ್ಯ ತರುಣ ದೇಶಪಾಂಡೆಯವರನ್ನು ಪೂರ್ಣ ಪರಿವರ್ತಿಸಿತು. ಗೃಹಸ್ಥ ಜೀವನವನ್ನು ತ್ಯಜಿಸಿ ಅಕ್ಷೋಭ್ಯ ತೀರ್ಥರಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸಿ ಜಯತೀರ್ಥಯತಿಗಳಾದರು; ಅಕ್ಷೋಭ್ಯತೀರ್ಥರಲ್ಲಿಯೇ ಅಧ್ಯಯನ ಮಾಡಲು ತೊಡಗಿದರು.

ಅಕ್ಷೋಭ್ಯತೀರ್ಥರು ಮಧ್ವಾಚಾರ್ಯರ ನಾಲ್ಕು ಜನ ಪ್ರಮುಖ ಶಿಷ್ಯರಲ್ಲಿ ಒಬ್ಬರು, ಮಹಾತಪಸ್ವಿಗಳು, ವಿದ್ವಾಂಸರು. ಅವರ ಗರಡಿಯಲ್ಲಿ ತಯಾರದ ಜಯತೀರ್ಥರು ಅವರಿಗಿಂತ ಒಂದು ದೃಷ್ಟಿಯಲ್ಲಿ ಪ್ರಬಲ. ಇವರಿಬ್ಬರೂ ಪ್ರಖ್ಯಾತ ಅದ್ವೈತ ಯತಿಗಳಾದ ವಿದ್ಯಾರಣ್ಯರ ಸಮಕಾಲೀನರು. ಇಬ್ಬರೂ ವಿದ್ಯಾರಣ್ಯರೊಂದಿಗೆ ಶಾಸ್ತ್ರಾರ್ಥ ವಿಚಾರಗಳನ್ನು ಚರ್ಚಿಸಿದಂತೆ ಉಲ್ಲೇಖಗಳೂ ಅಖ್ಯಾಯಿಕೆಗಳೂ ಇವೆ.

ಮಳಖೇಡ ಮತ್ತು ಜಯತೀರ್ಥರು[ಬದಲಾಯಿಸಿ]

ರಾಷ್ಟ್ರಕೂಟರ ಕಾಲದಲ್ಲಿ ಪ್ರಸಿದ್ಧಿ ಪಡೆದ ಮಾನ್ಯಖೇಟ, ಮಳಖೇಡವಾಗಿ ಮತ್ತೊಮ್ಮೆ ಪ್ರಸಿದ್ಧಿ ಪಡೆದುದು ಜಯತೀರ್ಥರಿಂದ. ಅವರು ಕುಳಿತು ಗ್ರಂಥರಚನೆ ಮಾಡುತ್ತಿದ್ದ ಗುಹೆಯೊಂದು ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಯರಗೊಳವೆಂಬ ಗ್ರಾಮದ ಹತ್ತಿರದ ಮರಡಿಯ ಮೇಲೆ ಇದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: